ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು
ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ
ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳವರ ಶ್ರೀ ಶಾರದಾಮಂದಿರ
ವಿದ್ಯಾಸಂಸ್ಥೆಯ ಮೂಲಕ ಮೊದಲಬಾರಿಗೆ ಲೋಕದ ಬೆಳಕು ಕಂಡಿದೆ.
ಅಲ್ಲಿ ಸಾಬ್ ಮಲ್ಲಪ್ಪನ ಹಳ್ಳಿ ಎಂಬಲ್ಲಿ ಎಂಟುರೂಪಾಯಿ ಸಂಬಳದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ನಿವೃತ್ತರಾಗುವ ವೇಳೆಗೆ ಇಪ್ಪತ್ತೈದು ರೂ ಸಂಬಳ ಪಡೆದಿರಬಹುದು. ಅವರು ಕೇವಲ ತಮ್ಮ ಸಾಹಿತ್ಯ ಪರಿಚಯದ ಆಧಾರದ ಮೇಲೆ ಸುಮಾರು ಇಪ್ಪತ್ತು ಸಾವಿರ ಪದಗಳ ಈ ನಿಘಂಟನ್ನು ಐದುನೂರು ಪುಟಗಳ ನೋಟುಬುಕ್ಕಿನಲ್ಲಿ ಬರೆದು ಸಿದ್ಧಪಡಿಸಿದ್ದರಂತೆ. ಬಿಡುವಾದಾಗ ಅಷ್ಟಿಷ್ಟು ಬರೆದೆ ಎಂದು ಬೆಳಗೆರೆಯವರಿಗೆ ತಿಳಿಸಿದ್ದು, ಅವರು ಆ ಹಸ್ತಪ್ರತಿಯಲ್ಲಿ ಒಂದೇ ಚಿತ್ತು ಕಾಟು ಕೂಡ ಇಲ್ಲದ್ದು ಕಂಡು ಆಶ್ಚರ್ಯ ಚಕಿತರಾದದ್ದು ಇವನ್ನೆಲ್ಲ ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಅವರು ಈ ನಿಘಂಟನ್ನು ರಚಿಸುವ ಕಾಲಕ್ಕೆ ಕೇವಲ ಶ್ರೀ ಗಂಗಾಧರ ಮಡಿವಾಳೇಶ್ವರ ತೂರಮರಿಯವರ "ಕರ್ಣಾಟಕ ಶಬ್ದಮಂಜರೀ ಕೋಶ" ಮತ್ತು ಕಿಟೆಲ್ರ ಕನ್ನಡ ಕನ್ನಡ ನಿಘಂಟು ಮಾತ್ರ ಉಪಲಬ್ಧವಿದ್ದವು. ಹಾಗೆ ನೋಡಿದರೆ ಅಲ್ಲಿ ಸಾಬ್ ಅವರದ್ದು ಹೊಸಗನ್ನಡದ ಮೂರನೆಯ ನಿಘಂಟು! ಮುಖ್ಯವಾಗಿ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಶಬ್ದಗಳನ್ನೂ ಅವುಗಳ ಅರ್ಥವನ್ನೂ ಅಲ್ಲೀ ಸಾಬ್ ನೀಡಿದ್ದಾರೆ. ಅನೇಕ ಪದಗಳಿಗೆ ಈಗ ಬಳಕೆ ತಪ್ಪಿ ಹೋಗಿರುವ ಅರ್ಥಗಳೂ ಇಲ್ಲಿ ಕಾಣುತ್ತವೆ. ಸಂಕೇತಾಕ್ಷರಗಳು, ಗಾದೆ ನುಡಿಗಟ್ಟುಗಳು, ಮತ್ತು ಜನಬಳಕೆಯ ನ್ಯಾಯ (ಕಾಕತಾಲೀಯ ನ್ಯಾಯ ಇತ್ಯಾದಿ) ಇವುಗಳ ವಿವರಣೆ ಈ ನಿಘಂಟಿನಲ್ಲಿದೆ. ಶ್ರೀ ಜಿ. ವೆಂಕಟಸುಬ್ಬಯ್ಯನವರು "ಶಬ್ದದ ಮೂಲವನ್ನು ನಿರ್ಧರಿಸುವಲ್ಲಿ ಸಂಸಕೃತದ ಗಾಢವಾದ ಪರಿಚಯ ಇರುವುದು ತಿಳಿಯುತ್ತದೆ. ಶಬ್ದ ಸಂಗ್ರಹ ವಿಪುಲವಾಗಿದೆ. ಈಗ ಇರುವ ಹಾಗೆ ಇದು ಕನ್ನಡ ವಿದ್ವಾಂಸನೊಬ್ಬನು ನಿಘಂಟು ರಚನೆಯಲ್ಲಿ ಆಸಕ್ತನಾಗಿ ಸಿದ್ಧಪಡಿಸಿದ ಪ್ರಥಮ ಹಸ್ತಪ್ರತಿ ಎಂದು ತಿಳಿಯಬೇಕು. ಚಾರಿತ್ರಿಕ ದೃಷ್ಟಿಯಿಂದ ಈ ನಿಘಂಟಿಗೆ ಮಹತ್ವವಿದೆ" ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ.
ಬೆಳಗೆರೆ ಕೃಷ್ಣಶಾಸ್ತ್ರಿಯವರು ೨೦ನೆಯ ಶತಮಾನದ ನಾಲ್ಕನೆಯ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ ಆರ್ ಶ್ರೀ ಯವರನ್ನೂ, ಆನಂತರ ಕನ್ನಡ ಪುಸ್ತಕ ಪ್ರಾಧಿಕಾರವನ್ನೂ ಈ ನಿಘಂಟಿನ ಪ್ರಕಟಣೆಗಾಗಿ ಕೋರಿ, ಯಶ ದೊರೆಯದೆ ತಾವೇ ಸ್ವತಃ ಪ್ರಕಟಿಸಿದ್ದಾರೆ. ನಾವು ಕಟ್ಟಿಕೊಂಡಿರುವ ಕನ್ನಡ ಸೇವೆಯ ಅಧಿಕೃತ ಸಂಸ್ಥೆಗಳು ಮಾಡಲಾರದ ಕೆಲಸವನ್ನು ಬೆಳಗೆರೆಯವರು ಮಾಡಿದ್ದಾರೆ.
ಒಬ್ಬ, ನಮ್ಮ ಈಗಿನ ದೃಷ್ಟಿಯಿಂದ ಅನಾಮಧೇಯನಾದ, ಮುಸ್ಲಿಂ ಶಿಕ್ಷಕ ಕನ್ನಡದ ನಿಘಂಟನ್ನು ಸಿದ್ಧಪಡಿಸಿದ್ದು ಇನ್ನು ಕೆಲವು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸೀತು. ಇಪ್ಪತ್ತನೆಯ ಶತಮಾನದ ಮೂರು ನಾಲ್ಕನೆಯ ದಶಕದವರೆಗೆ ಹಳ್ಳಿಗಾಡಿನ ಪ್ರಾಥಮಿಕ ಶಾಲಾ ಶಿಕ್ಷಕರೂ ನಿಘಂಟು ರಚನೆಯಲ್ಲಿ ಆಸಕ್ತಿ ತೋರುವಂತಿದ್ದ ವಾತಾವರಣ ಈಗ ಏನಾಗಿದೆಯಲ್ಲ ಎಂಬ ಪ್ರಶ್ನೆ ಒಂದು. ಇನ್ನೊಂದು ಮುಸ್ಲಿಮರನ್ನು ಕನ್ನಡ ವಿರೋಧಿಗಳೆಂದು ತಿಳಿಯುವ ಒಂದು ಮನಸ್ಥಿತಿ ಕೆಲವರಲ್ಲಾದರೂ ಇದೆಯಲ್ಲ ಅದು ಎಷ್ಟು ಅನಾರೋಗ್ಯಕರವಾದ್ದು ಎಂಬುದು ಇನ್ನೊಂದು. ಕನ್ನಡ ಕಟ್ಟುವ ಕೆಲಸ ಕೇವಲ ಖ್ಯಾತನಾಮರದ್ದಲ್ಲ, ಅನಾಮಧೇಯರಾದ ಸಹಸ್ರಾರು ಜನರ ಪರಿಶ್ರಮದಫಲವಾಗಿ ಕನ್ನಡ ರೂಪುಗೊಂಡಿದ್ದನ್ನು ನಾವು ಮರೆಯುತ್ತಿದ್ದೇವಲ್ಲ ಎಂಬುದು ಇನ್ನೊಂದು. ಕುತೂಹಲಿಗಳು ದಯವಿಟ್ಟು ಈ ನಿಘಂಟನ್ನು ಒಮ್ಮೆ ನೋಡಿ.

- Login or register to post comments
- 1079 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ನಲ್ನುಡಿ.
ನಲ್ನುಡಿ ನಿಘಂಟು ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯನ್ನೂ ಒದಗಿಸಿದ್ದರೆ ಚೆನ್ನಾಗಿತ್ತು.
ಬುಕ್ ಶೆಲ್ಫಿನಲ್ಲಿರುವ 'ದಪ್ಪನೆಯ' ಕಿಟ್ಟೆಲ್ ಕೋಶವನ್ನ ನೋಡಿ ಮಿತ್ರರು 'ಯಾವುದೋ ಅದು, ಅಷ್ಟು ದಪ್ಪ ಪುಸ್ತಕ' ಅಂದಾಗ ರೆ. ಕಿಟ್ಟೆಲ್ ರ ಬಗ್ಗೆ, ಅವರು ಕನ್ನಡಕ್ಕೆ ನೀಡಿರುವ ಬಳುವಳಿಯ ಬಗ್ಗೆ ಹೇಳುವಾಗ ಮನಸ್ಸು ತುಂಬಿ ಬರುತ್ತದೆ.
ಕನ್ನಡ ಮತ್ತು ಮುಸ್ಲಿಮರು
ಅಲ್ಲಿ ಸಾಬ್ ಅವರ ನಿಘಂಟಿನ ಬಗ್ಗೆ ಅಗ್ರಹಾರ ಕೃಷ್ಣಮೂರ್ತಿ ಉದಯವಾಣಿಗೆ ಬರೆಯುವ ಬಹುವಚನ ಅಂಕಣದಲ್ಲಿ ಬರೆದಿದ್ದರು. ಆಮೇಲೆ ನಾನದನ್ನು ಹುಡುಕಿಕೊಂಡು ಹೋಗಿ ಖರೀದಿಸಿದೆ.
ಈ ನಿಘಂಟನ್ನು ಸಾಹಿತ್ಯ ಪರಿಷತ್ತಿನಿಂದ ತೊಡಗಿ ಕನ್ನಡ ಪುಸ್ತಕ ಪ್ರಾಧಿಕಾರದವರೆಗೆ ಯಾರೂ ಪ್ರಕಟಿಸಲು ಮುಂದಾಗದೇ ಇದ್ದ ಕಾರಣಗಳ ಬಗ್ಗೆ ನನಗೆ ಕುತೂಹಲವಿದೆ. ಇದಕ್ಕೆ ಅಲ್ಲಿ ಸಾಬ್ ಎಂಬ ಮುಸ್ಲಿಂ ವ್ಯಕ್ತಿ ಈ ನಿಘಂಟನ್ನು ಸಿದ್ಧ ಪಡಿಸಿದ್ದು ಒಂದು ಕಾರಣವಾಗಿತ್ತೇ?
ನನ್ನ ಹೆಸರು ಇಸ್ಮಾಯಿಲ್ ಆಗಿರುವುದರಿಂದ ನಾನು ಎತ್ತಿರುವ ಪ್ರಶ್ನೆ ಇನ್ನೂ ಕೆಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ ಎಂಬುದು ನನಗೆ ತಿಳಿದಿದೆ. ಈ ಪ್ರಶ್ನೆ ಹುಟ್ಟುವುದಕ್ಕೆ ನನ್ನ ಅನುಭವವೇ ಕಾರಣ.
ಮಲೆನಾಡಿನ ಹಳ್ಳಿಗಳ ಎಲ್ಲರಂತೆ ನಾನೂ ಕನ್ನಡ ಮಾಧ್ಯಮದಲ್ಲಿಯೇ ಕಲಿತವನು. ಪಿಯುಸಿಗೆ ಸೇರಿದಾಗ ನನ್ನ ಜತೆಯವರಂತೆ ಕನ್ನಡವನ್ನೇ ಭಾಷಾ ವಿಷಯವಾಗಿ ಆರಿಸಿಕೊಂಡೆ. ಆದರೆ ನನ್ನ ತರಗತಿಯಲ್ಲೇ ಇದ್ದ ಇತರ 'ಸಾಬರ ಹುಡುಗರು' ಉರ್ದು, ಹಿಂದಿಗಳನ್ನು ಆರಿಸಿಕೊಂಡದ್ದರಿಂದ ನಾನು ಕನ್ನಡ ಉಪನ್ಯಾಸಕರ ಮಟ್ಟಿಗೆ ಆಶ್ಚರ್ಯ ಹುಟ್ಟಿಸುವ ವಸ್ತುವಾಗಿದ್ದೆ.
ತರಗತಿಯಲ್ಲಿ ಇರುವ ಇತರ 'ಸಾಬರ ಹುಡುಗರು'ಆಡುವ ಭಾಷೆ ನನಗೆ ತಿಳಿಯದೇ ಇರುವ ಸಾಧ್ಯತೆ ಇದೆಯೆಂಬುದು ಆ ಉಪನ್ಯಾಸಕರ ಊಹೆಗೂ ನಿಲುಕದ ವಿಷಯವಾಗಿತ್ತು. ತರಗತಿಗಳು ಆರಂಭವಾದ ಮೊದಲ ಮೂರು ದಿನಗಳ ಕಾಲ ಹಾಜರಿ ಹಾಕುವಾಗ ನನ್ನ ಹೆಸರು ಬಂದಾಗ 'ನಿಮ್ಮದು ಕನ್ನಡ ತಾನೇ?'ಎಂದು ಪ್ರಶ್ನಿಸಿ ಖಚಿತ ಪಡಿಸಿಕೊಳ್ಳುತ್ತಿದ್ದರು.
ನಾಲ್ಕನೆಯ ದಿನ ನಾನು ಸಹನೆ ಕಳೆದುಕೊಂಡು ಮರು ಪ್ರಶ್ನೆ ಎಸೆದೆ 'ನಾನು ಕನ್ನಡ ಕಲಿಯಬಾರದೇ?'
ಇಷ್ಟಾದ ಮೇಲೂ ಅವರಿಗೆ ನಾನು ಕನ್ನಡ ಆರಿಸಿಕೊಂಡದ್ದಕ್ಕೆ ಒಂದು ತರ್ಕ ದೊರೆಯಲೇ ಇಲ್ಲ.
ನನ್ನ ಅನಿಸಿಕೆ
ಇಸ್ಮಾಯಿಲ್ ರ ಕೋಪಕ್ಕೆ ನನ್ನ ಸಹಾನುಭೂತಿ ಇದೆ. ಆದರೆ ನಿಮ್ಮ ಪ್ರಶ್ನೆಯಲ್ಲಿಯೇ ಉತ್ತರವಿದೆ ಎಂದು ಅನ್ನಿಸುತ್ತದೆ. 'ಇತರ ಸಾಬರ' ಹುಡುಗರು ಹಿಂದಿ ಅಥವಾ ಉರ್ದುವನ್ನು ಆರಿಸಿಕೊಳ್ಳದೆ ಕನ್ನಡವನ್ನು ಅಭ್ಯಾಸ ಮಾಡುತ್ತಿದ್ದರೆ ನೀವು ಆಶ್ಚರ್ಯ ಹುಟ್ಟಿಸುವ ವಸ್ತುವಾಗುತ್ತಿರಲಿಲ್ಲವೇನೋ. ಉಪನ್ಯಾಸಕರಿಗೆ ಸೂಕ್ತ ತರ್ಕ ದೊರೆತು 'ನಿಮ್ಮದು ಕನ್ನಡ ತಾನೇ?' ಎಂದು ಖಚಿತಪಡಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ ಎನ್ನಿಸುತ್ತದೆ. ಐಡೆಂಟಿಟಿ ಹಾಗು ಲೇಬಲ್ ಗಳಿಂದ ತಪ್ಪಿಸಿಕೊಂಡು ಹೊರಬರಲೆತ್ನಿಸುವ ಎಲ್ಲರಿಗೂ ಇಂತಹ ಅಗ್ನಿಪರೀಕ್ಷೆ ಎದುರಿಸಲೇಬೇಕಾಗುತ್ತೆ. ನಾನು ಬ್ರಾಹ್ಮಣ, ಆತ ಶೂದ್ರ, ಇವ ಸಾಬರವನು ಎಂಬ ಐಡೆಂಟಿಟಿಯೇ ಇನ್ನೂ ಪೂರ್ತಿ ನಾಶವಾಗದಿರುವಾಗ ಇಂತಹ ಘಟನೆಗಳು ಮರುಕಳಿಸುತ್ತಿರುತ್ತವೆ. ಇದು ನಮ್ಮ ಸಮಾಜದ ದುರಂತ.
ಅಲ್ಲಿಸಾಬರ ನಿಘಂಟನ್ನು ಯಾರೂ ಪ್ರಕಟಿಸಲು ಮುಂದೆ ಬಾರದಿದ್ದಕ್ಕೆ ಕಾರಣಗಳೇನೋ ತಿಳಿಯದು. ಆದರೆ ನೀವದನ್ನು ತೀರಾ ಸರಳೀಕರಿಸಿ ನೋಡಲೆತ್ನಿಸುತ್ತಿರುವಂತೆ ತೋರುತ್ತದೆ. ಬಹುಶಃ ನಿಮ್ಮ ಯಾವುದೋ ಕಹಿ ಅನುಭವದ ಹಿನ್ನೆಲೆಯಲ್ಲಿ ಇಂತಹ ನಿರ್ಣಯಕ್ಕೆ ನೀವು ಬಂದಿರಬಹುದು. ಶಿಶುನಾಳ ಷರೀಫ್, ಎಸ್. ಕೆ. ಕರೀಂಖಾನ್, ಕೆ. ಎಸ್. ನಿಸಾರ್ ಅಹಮದ್, ಅಬ್ದುಲ್ ರಶೀದ್, ಸಾರಾ ಅಬೂಬಕರ್ ... ಇನ್ನೂ ಅದೆಷ್ಟೋ ಸೃಜನಶೀಲ ಬರಹಗಾರರನ್ನು ಕಂಡ ಕನ್ನಡನಾಡಿನಲ್ಲಿ 'ಮುಸ್ಲಿಂ' ಬರಹಗಾರ (ಬರಹಗಾರನಿಗೂ ಒಂದು ಲೇಬಲ್!) ಎಂಬ ಕಾರಣಕ್ಕೆ ಅವರ ಬರಹವನ್ನು ಪ್ರಕಟಿಸದೇ ಹೋದ ಉದಾಹರಣೆ ನನಗಂತೂ ತಿಳಿಯದು. ಅಲ್ಲಿಸಾಬರ ನಿಘಂಟಿನ ವಿಷಯದಲ್ಲಿ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತುಗಳು (ಇವು ಸಾಹಿತ್ಯ, ಸಂಸ್ಕೃತಿಗಿಂತ ರಾಜಕೀಯದಲ್ಲೇ ಹೆಚ್ಚು ಆಸಕ್ತಿಯುಳ್ಳ ಪಟ್ಟಭದ್ರರ ತಾಣ ಎಂಬುದು ಜಗಜ್ಜಾಹೀರಾದ ವಿಷಯ) ಆಸಕ್ತಿತಳೆಯದೇ ಮೂಲೆಗುಂಪು ಮಾಡಿದ್ದರೆ ಅದಕ್ಕೆ 'ಅವರು ಮುಸ್ಲಿಂ' ಎಂಬುದೇ ಕಾರಣ ಎಂದು ನನಗನ್ನಿಸುವುದಿಲ್ಲ.
ಇಂತಹ ವಿಷಗಳಲ್ಲಿ emotional ಆಗಿ ಪ್ರತಿಕ್ರಿಯಿಸಿದರೆ ನೀವು ಮಾಡಿದಂತೆ generalised conclusion ಗೆ ಬರಬೇಕಾಗುತ್ತದೆ. ಇಂತಹ ನಿರ್ಣಯಗಳು ಮುಂದಿನ ದುರಂತಗಳಿಗೆ ನಾಂದಿಯಾಗುತ್ತವೆ. ನಿಮ್ಮ ಪ್ರತಿಕ್ರಿಯೆಗೆ ನನಗನ್ನಿಸಿದ್ದು ಇಷ್ಟು. ನಿಮ್ಮನ್ನು ನೋಯಿಸುವ ಅಥವಾ ಲೇವಡಿ ಮಾಡುವ ಉದ್ದೇಶ ನನ್ನದಲ್ಲ.
ಸಂವೇದನೆಗಳ ಜಾತಿ
ನಾನು ಭಾವುಕವಾಗಿ ಪ್ರತಿಕ್ರಿಯಿಸಿದೆ ಎಂಬುದೇನೋ ನಿಜ. ನನ್ನ ಸಮಸ್ಯೆ ಇರುವುದು ತಥಾಕಥಿತ ಶಿಕ್ಷಿತ ವರ್ಗ ಮಾಡುವ ಜನರಲೈಸೇಶನ್ ನ ಬಗ್ಗೆ. ಸಾಬರ ಹುಡುಗರೆಲ್ಲಾ ಉರ್ದು ಕಲಿಯಬೇಕು ಎಂಬುದು ಶಿಕ್ಷಣ ಪಡೆದು 'ತಿಳಿವಳಿಕೆ'ಉಳ್ಳವರು ಸೃಷ್ಟಿಸಿದ ಸ್ಟೀರಿಯೋ ಟೈಪ್ ಅಥವಾ ಸಿದ್ಧಮಾದರಿ. ಇವುಗಳನ್ನು ಮೀರಿ ಗ್ರಹಿಸುವುದಕ್ದೆ ಸಾಧ್ಯವಾಗದೇ ಇರುವುದೂ ಅವರಿಗೇ.
ಕರ್ನಾಟಕದಲ್ಲಿ ಕನ್ನಡವೇ ಮಾತೃಭಾಷೆಯಾಗಿರುವ ಮುಸ್ಲಿಮರ ದೊಡ್ಡ ವಿಭಾಗವೇ ಇದೆ. ನೀವೇ ಸೂಚಿಸಿರುವ ಸಾರಾ, ರಶೀದ್ ಅವರ ಮಾತೃಭಾಷೆಯೂ ಉರ್ದು ಅಲ್ಲ. ಇವರೆಲ್ಲಾ ತುಳುವಿನ ಉಪಭಾಷೆಯಾದ ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ. ಈ ಭಾಷೆಯನ್ನು ಬರೆಯುವುದಕ್ಕೆ ಕನ್ನಡ ಲಿಪಿಯನ್ನು ಬಳಸುತ್ತಾರೆ.
ಇಂಥ ವೈವಿಧ್ಯವನ್ನು ಗ್ರಹಿಸದೇ ಇರುವ ಶಿಕ್ಷಿತ ವರ್ಗದ ಬಗ್ಗೆ ನನಗೆ ಕೋಪವಿದೆ. ಇನ್ನು 'ಅಲ್ಲಿ ಸಾಬರು ಮುಸ್ಲಿಮರಾಗಿದ್ದರಿಂದ....' ಎಂಬ ಮಾತಿಗೂ ಕಾರಣವಿದೆ. ಅದನ್ನೂ ನೀವೇ ಬರೆದಿದ್ದೀರಿ. ಮುಸ್ಲಿಂ ಒಬ್ಬ ಕತೆ, ಕವಿತೆ ಬರೆದರೆ ಅದು ಮುಸ್ಲಿಂ ಸಂವೇದನೆಯಾಗುತ್ತದೆ. ದಲಿತ ಬರೆದಾಗ ಅಲ್ಲಿ ದಲಿತ ಸಂವೇದನೆಯ ಹುಡುಕಾಟ ಆರಂಭವಾಗುತ್ತದೆ.
ತಮಾಷೆ ಎಂದರೆ ಕುವೆಂಪು ಅವರು ಬರೆದದ್ದರಲ್ಲಿ ಒಕ್ಕಲಿಗರ ಸಂವೇದನೆಯನ್ನು ಯಾರೂ ಹುಡುಕುವುದಿಲ್ಲ. ಮಾಸ್ತಿಯವರ ಬರೆಹ ಬ್ರಾಹ್ಮಣ ಸಂವೇದನೆಯಾಗುವುದಿಲ್ಲ. ಕಾರಂತರ ಬರೆಹಗಳೂ ಕೋಟ ಬ್ರಾಹ್ಮಣರ ಸಂವೇದನೆಯಲ್ಲ.
ಅಂದರೆ ಜಾತೀಯ, ಧಾರ್ಮಿಕ ಸಂವೇದನೆಗಳು ಕೆಲವೇ ಜಾತಿ ಮತ್ತು, ಧರ್ಮಗಳಿಗೆ ಸೀಮಿತವೇ?
ಬದಲಾವಣೆ ಅಗತ್ಯ
ನಮ್ಮೆಲ್ಲರ ನಿಲುವಿನಲ್ಲಿ ಬದಲಾವಣೆ ಅಗತ್ಯವಾಗಿದೆ ಇಸ್ಮಾಯಿಲ್ ಅವರೇ.
ಯಾವ ಮಗುವಿಗೂ ಹುಟ್ಟಿನಿಂದ ಜಾತಿ ಧರ್ಮ ಲಿಂಗಭೇದದ ಬಗ್ಗೆ ನಿರ್ಧರಿಸಲು ಸಾಧ್ಯತೆ ಇಲ್ಲ. ಹೀಗಿದ್ದಾಗ ಎಲ್ಲರೂ ಒಂದೇ ಅಲ್ಲವೇ? ನಾವೆಲ್ಲರೂ ಅಣ್ಣ ತಮ್ಮಂದಿರು. ಕುವೆಂಪುರವರ ವಿಶ್ವಮಾನವ - ಒಂದೇ ಕುಟುಂಬ ಒಂದೇ ಕುಲದ ಬಗ್ಗೆ ತಿಳುವಳಿಕೆಯ ಅಗತ್ಯ ೧೦೦% ಇದೆ.
ನಾನಂತೂ ಯಾರನ್ನೂ ಜಾತಿ ಧರ್ಮದಿಂದ ಅಳೆಯುವುದಿಲ್ಲ ಹಾಗೆಯೇ ಎಲ್ಲರಿಗೂ ನಾನು ಅದನ್ನೇ ಹೇಳುತ್ತಿರುತ್ತೇನೆ.
ಬರಹ ಕಲಿತು ಬುದ್ಧಿ ಇರುವವರೂ ಇದೇ ರೀತಿಯ ಭೇದಭಾವ ಮಾಡುವುದು ಸರಿಯಲ್ಲ.
ಶಿಶುನಾಳ ಶರೀಫರು, ಸಂತ ಕಬೀರರು, ಇಂದಿನ ನಿಸಾರ್ ಅಹಮದ್ ಅವರೆಲ್ಲರ ಮುಂದೆ ನಾವುಗಳು ತೃಣ ಮಾತ್ರರು.
ನೀವು ಪತ್ರಿಕೋದ್ಯಮದಲ್ಲಿದ್ದೀರಿ. ನಿಮ್ಮ ಬರವಣಿಗೆಯ ಮೂಲಕ ಈ ಲೋಕದ ವಿರುದ್ಧ ಸಮರ ಸಾರಿರಿ. ನಾನು ಎಂದಿಗೂ ನಿಮ್ಮ ಹಿಂದೆ ಇರುವೆ.
ಮಿತ್ರರೇ ಇಂತಹ ಸಮಾಜ ಕಾರ್ಯ ಮಾಡೋಣ. ಅದಲ್ಲದೇ ಪೊಳ್ಳು ಜಗಳ, ವೈಮನಸ್ಯ, ಜಾತಿಭೇದ ಇದನ್ನೆಲ್ಲಾ ಬಿಟ್ಟುಬಿಡೋಣ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಹೌದಲ್ಲ
ಇಸ್ಮಾಯಿಲ್ರವರೆ, ನೀವು ಹೇಳುವಂತೆ ಸಂವೇದನೆಗಳಿಗೆ ಜಾತಿಯಿಲ್ಲ. ಆದರೆ ಏನು ಮಾಡುತ್ತೀರಿ, ನಮ್ಮ ವಿಮರ್ಶಕರುಗಳಿಗೆ ಜಾತಿಯಿದೆಯಲ್ಲ! ಕುವೆಂಪುರವರು ಬರೆದದ್ದನ್ನೂ 'ಶೂದ್ರ ಸಾಹಿತ್ಯ' ಎಂದು ವಿಮರ್ಶಿಸಿದವರೂ ಇದ್ದಾರೆ.
ಗೊರೂರರ ಮಾತು ನೆನಪಿಗೆ ಬರುತ್ತದೆ
ಅವರ ಹಳ್ಳಿಯಲ್ಲಿ ಒಬ್ಬ ಮುಸ್ಲಿಮ - ಕಾಸಿಂ ಎಂದೋ ಏನೋ, ಹೆಸರು ಮರೆತೆ - ಇದ್ದನಂತೆ. ಆತ, ಬೇರೆ ಮುಸ್ಲಿಮರೂ ಸಹ, ಎಲ್ಲರಂತೆಯೆ ಕನ್ನಡದಲ್ಲಿಯೆ ಮಾತು ಕತೆ ಆಡಿಕೊಂಡಿದ್ದನಂತೆ; ಬೆಂಗಳೂರಿನಲ್ಲಿ ಗಣಪತಿ ಗಲಾಟೆಗಳಾದ ಮೇಲೆ (೧೯೦೫ರ ಸುಮಾರಿಗೆ) ಅವರಲ್ಲಿ "ನಾವು ಬೇರೆ" ಎಂಬ ಭಾವನೆ ಬೆಳೆಯತೊಡಗಿತಂತೆ; ಅಲ್ಲಿಯವರೆಗೆ ಕನ್ನಡವಲ್ಲದೆ ಬೇರೆ ಭಾಷೆಯನ್ನು ಆಡದ ಜನ ಉರ್ದು ಕಲಿಯಲಾರಂಭಿಸಿದರಂತೆ. ಅಲ್ಲಿಯವರೆಗೆ ಇಲ್ಲದಿದ್ದ "ಬೇರೆತನ" ಆಗ ಹುಟ್ಟಿ ಒಂದೆರಡು ತಲೆಮಾರುಗಳ ಒಳಗಾಗಿ ಸಹಜವೆನಿಸುವಷ್ಟು ಬೇರೂರಿತು ಎಂದಾಯಿತು.