ಅನನ್ಯ ಅಲ್ಲಮ (೬)
ಚಾಮರಸನ ಅಲ್ಲಮನು ,ಸ್ವಯಂ ಸಿದ್ದನಾದವನು ; ಲೋಕದ ಲೀಲೆಗಳಿಂದ ಅತೀತನಾದವನು . ಮಾಯೆ ಅವನಿಗೆ ಒಂದು ಸಮಸ್ಯೆಯೇ ಅಲ್ಲ; ತಮೋಹಾರಿಯಾದ ಅವನಿಗೆ , ತಮದ ಮಾಯೆ ಕೇವಲ ಒಂದು ಲೀಲೆ . ಮಮಕಾರ, ಮೋಹಿನಿಯರ ಮಗಳು ಮಾಯೆ ಹಾಗಲ್ಲ , ಅವಳು ಪಾರ್ವತಿಯ ತಾಮಸ ಕಳೆ .ಅವಳು ಹುಟ್ಟಿದ ಕೂಡಲೇ ಸಾಧಕರ ಸಾಧನೆಗಳು ನೀರಲ್ಲಿ ಮಾಡಿದ ಹೋಮದಂತೆ ಅವರ ಚಿತ್ತದಲ್ಲಿ ವಿಕಾರಗಳು ಮೊಳೆದೋರಿದವೆನ್ನುತ್ತಾನೆ ಚಾಮರಸ . ಅವಳು ಹುಟ್ಟಿದ್ದೇ ಅಲ್ಲಮನನ್ನು ಪ್ರಕೃತಿಯ ಪಾರವಶ್ಯದಲ್ಲಿ ಬಂಧಿಸಲು . ಇಲ್ಲಿ ಒಂದು ಸ್ವಯಂಪ್ರಭೆಯಾದರೆ ,ಇನ್ನೊಂದು ತಮದ ಹೊರಳಿ . ಒಂದು ಇರುವ ನೆಲೆಯಲ್ಲಿ ಇನ್ನೊಂದು ಇರುವುದು ಸಾಧ್ಯವೇ ಇಲ್ಲ .
ಹರಿಹರನ ಅಲ್ಲಮನ ರೀತಿಯೇ ಬೇರೆ ,ಅಲ್ಲಿ ಅವನು ಸ್ವಯಂ ಸಿದ್ದನಲ್ಲ , ಸಾಮಾನ್ಯ ನೆಲೆಗಟ್ಟಿನಿಂದಲೇ , ಅಸಾಮಾನ್ಯತೆಯೆಡೆಗೆ ಪಯಣ ತೊಡಗಿದ ನಿರಂತರ ಸಾಧಕ . ಎಲ್ಲರಂತೆಯೇ ಜನ್ಮ ತಳೆದ ಅಲ್ಲಮ , ಪ್ರಕೃತಿಯ ಎಲ್ಲಗುಣ ದೋಷಗಳ ಸಮ್ಮಿಶ್ರವಾಗಿಯೇ ಜನಿಸಿ , ಜೀವನದಲ್ಲಿ ಸಂಘಟಿಸುತ್ತಿದ್ದ ಘಟನೆಗಳೊಡನೆ ಸೆಣಸುತ್ತಲೇ ; ಸುಖ,ದುಃಖಗಳ ಸಮುದ್ರದಲ್ಲಿ ಬೆಂದು ಬಸವಳಿಯುತ್ತಲೇ ತನ್ನ ಸಾಧನಾ ಮಾರ್ಗವನ್ನು ;ಶಾಶ್ವತ ತತ್ವದ ಅರಿವನ್ನು ಖಚಿತಪಡಿಸಿಕೊಳ್ಳುತ್ತಾ , ಇತರರಿಗೆ ಮಾರ್ಗದರ್ಶಿಯಾದವನು .
ಚಾಮರಸನ ಅಲ್ಲಮನು ಮಾಯೆ ಯನ್ನು ಸಂಧಿಸಿದುದು ಬನವಸೆಯ ಮಧುಕೇಶ್ವರನ ಮಂದಿರದಲ್ಲಿ , ಏಕೆಂದರೆ ಅವಳು ಅಲ್ಲಿನ ಅರಸನಾದ ಮಮಕಾರನ ಮಗಳು . ಹರಿಹರನ ಅಲ್ಲಮ ಕಾಮಲತೆಯನ್ನು ಸಂಧಿಸುವುದು ,ತನ್ನ ಹುಟ್ಟೂರಾದ ಬಳ್ಳಿಗಾವೆಯ ಗೊಗ್ಗೇಶ್ವರ ಮಂದಿರದಲ್ಲಿ . ಅವಳು ಅಲ್ಲಿನ ಪ್ರಸಿದ್ದ ವರ್ತಕ ಧನಪಾಲನ ಮಗಳು . ಎರಡು ಕಡೆಗಳಲ್ಲಿಯೂ ಸಾಮ್ಯವಿರುವ ಒಂದು ವಿಷಯವೆಂದರೆ ,ಅವನು ತರುಣ , ಸುಂದರ, ಕಲಾವಿದ , ಅವನು ಅಪ್ರತಿಮ ಮದ್ದಲಿಗ.
ಅಲ್ಲಮನು ಪ್ರತಿ ದಿನ ಇಬ್ಬರು ಸಹಚರರೊಡನೆ , ಗೊಗ್ಗೇಶ್ವರನ ಮಂದಿರದಲ್ಲಿ ಶಿವನಿಗೆ ಮದ್ದಳೆಯ ಸೇವೆಯನ್ನು ಸಮರ್ಪಿಸುತ್ತಿದ್ದನು . ಅಲ್ಲಿಗೆ ಒಂದು ದಿನ ಆಗಮಿಸಿದ ಕಾಮಲತೆ ಅಲ್ಲಮನನ್ನು ಕಂಡು ಪ್ರಥಮ ನೋಟದಲ್ಲಿಯೇ ಮೋಹ ಪರವಶಳಾಗುತ್ತಾಳೆ . ಸ್ತ್ರೀ ಸಹಜವಾದ ಲಜ್ಜೆಯಿಂದ ಮುಕ್ತಳಾಗಿ , ನೆಟ್ಟ ನೋಟದಿಂದ ಅವನನ್ನೇ ನೋಡುತ್ತಾ , ಸುತ್ತಣ ಜನರ ಪರಿವೆಯೂ ಇಲ್ಲದೆ ಮೈ ಮರೆಯುತ್ತಾಳೆ . ಇಲ್ಲಿ ಅಲ್ಲಮನೂ ಚಾಮರಸನ ಅಲ್ಲಮನಂತೆ ಒಲಿದು ಬಂದ ನಾರಿಯನ್ನು , ನಿರಾಶಳನ್ನಾಗಿ ಮಾಡುವುದಿಲ್ಲ . ಕಾಮಲತೆಯ ಸುಮ ಕೋಮಲ ತನುವಿನಿಂದ ಆಕರ್ಷಿತನಾದ ಅಲ್ಲಮನು ,ಅವಳು ಅವನನ್ನು ಕಂಡು ಮರವಟ್ಟು ನಿಂತಂತೆಯೇ ್; ಆ ಮನ ಮೋಹಕ ರೂಪದ ಲಾವಣ್ಯ ರಾಶಿಗೆ ಮನವನ್ನು ಮಾರಿ ಮೂರ್ಛಿತನಾಗುತ್ತಾನೆ .
ಹರಿಹರನ ಅಲ್ಲಮ , ಲೋಕದ ಎಲ್ಲ ಸಾಮನ್ಯರಂತೆಯೇ , ಕಾಮಲತೆಯನ್ನು ಕಾಮಿಸಿ , ಪ್ರೇಮಿಸಿ ,ಅವಳೊಡನೆ ಅನುರೂಪನಾಗಿ ಸಂಸಾರ ನಡೆಸುತ್ತಾ ಲೌಕಿಕ ಬಂಧನದಲ್ಲಿ ಸ್ವರ್ಗವನ್ನು ಕಾಣುತ್ತಿರುವಾಗಲೇ ಅವಳ ಅಕಾಲ ಮರಣವಾಗುತ್ತದೆ .
ಹೃದಯ ಕಮಲದೊಳಗೊಂದು
ಮರಿದುಂಬಿ ಹುಟ್ಟಿತ್ತು !
ಹಾರಿ ಹೋಗಿ ಆಕಾಶವ ನುಂಗಿತ್ತು
ಆ ತುಂಬಿಯ
ಗರಿಯ ಗಾಳಿಯಲಿ
ಮೂಲೋಕವೆಲ್ಲವೂ ತಲೆ ಕೆಳಗಾಯಿತ್ತು !
ಕಾಮಲತೆಯ ಮರಣದಿಂದ ವಿಚಲಿತನಾದ ಅಲ್ಲಮನು ,ಮರುಳನಾಗಿ ಅವಳಿಗಾಗಿ ಹಂಬಲಿಸಿ , ಮನದ ತುಂಬ ತುಂಬಿದ ಕಾಮಲತೆ ವಿಸ್ತಾರದ ಹೊರಗೆಲ್ಲಿಯೂ ಕಾಣದೆ ,ಭ್ರಮೆ ಹಿಡಿದು ಅವಳನ್ನು ಅರಸುತ್ತಾ ತಿರುಗುತ್ತಾನೆ . ಆಗ ಅವನಿಗೆ ಸಂಸಾರದ ಅನಿತ್ಯತೆ ಮನವರಿಕೆಯಾಯಿತೋ? ಕಾಲ ವಿಸ್ತಾರದ ಅಗಾಧದಲ್ಲಿ , ಬಾಳಿನ ಕ್ಷಣ ಭಂಗುರತೆ ಅರಿವಾಯಿತೋ ?ಅದಲ್ಲಕ್ಕೆ ಪೂರಕವಾದಂತೆ , ಅನಿಮಿಷನ ದುರ್ಲಭ ದರ್ಶನ ಸಂಘಟಿಸಿತೋ? ಅಲ್ಲಿಂದ ಮುಂದಣ ಅಲ್ಲಮ ಸಾಮಾನ್ಯ ಅಲ್ಲಮನಲ್ಲ ; ಸಾಮಾನ್ಯ ನಿಲುಕಿಗೆ ದೊರಕುವವನೂ ಅಲ್ಲ .
ಆಯಿತ್ತೇ ಉದಯಮಾನ
ಹೋಯಿತ್ತೇ ಅಸ್ತಮಾನ
ಅಳಿದವಲಾ ನೀರಲಾದ ನಿರ್ಮಿತಂಗಳೆಲ್ಲವೂ
ಕತ್ತಲೆಗವಿಯಿತ್ತು
ಮೂರು ಲೋಕದೋಳಗೆ
ಇದರಚ್ಚುಗವೇನು ಹೇಳಾ ಗುಹೇಶ್ವರಾ ?
ಅಲ್ಲಮನ ಯವ್ವನ ಕಾಲದ ಘಟನೆಗಳನ್ನು ಸವಿಸ್ತಾರವಾಗಿ ನಿರೂಪಿಸುವ ಮಹಾ ಕವಿಗಳು ಅವನ ಇಪ್ಪತ್ತು ವರ್ಷಗಳ ಹಿಂದಣ ಬಾಲ್ಯವನ್ನು ನಿರ್ಲಕ್ಷಿಸಿದ್ದಾರೆ , ಚಾಮರಸನಿಗಂತೂ ಅವನು ಕಾರಣ ಶಿಶುವಾದುದರಿಂದ ಬಾಲ್ಯದ ಶಿಶು ಲೀಲೆಯ ಅಗತ್ಯವೇ ಕಾಣದೆಯೇ ಹೋಗಿರಬಹುದು . ಸ್ವತಃ ಅಲ್ಲಮನ ವಚನಗಳಲ್ಲಿಯೂ ಬಾಲ್ಯದ ನೇರ ನೆನಪುಗಳಿಲ್ಲ . ಅವನ ಭಾವ ಪ್ರಪಂಚದ ಹಿನ್ನೆಲೆಯಲ್ಲಿ ಅವನ ಮಸುಕಾದ ಬಾಲ್ಯದ ಜಾಡನ್ನು ಕಲ್ಪಿಸಬಹುದು .
ಬದುಕಿನಲ್ಲಿ ಬಾಲ್ಯ ಅತ್ಯಂತ ಗಣನೀಯವಾದ ಕಾಲ .ಮನದ ಮೇಲೆ ಅಲ್ಲಿ ಮೂಡುವ ಭಾವ ಮುದ್ರಿಕೆಗಳು ,ಜನ್ಮಾಂತದವರೆಗೆ ಬೆಂಬಿಡದೆ ತಮ್ಮ ಪ್ರಭಾವಲಯವನ್ನು ವಿಸ್ತರಿಸುತ್ತಲೇ ಇರುತ್ತವೆ . ಅಂದು ಕಲಿತ ಮೊದಲ ತೊದಲ ನುಡಿ ,ತಾಯಿಯೆಂಬ ಸ್ಥಾಯಿ ಭಾವವಾಗಿ , ಇಡಿಯ ಜನ್ಮದುದ್ದಕ್ಕೂ , ವಿಚಾರ ಪ್ರಪಂಚದ ಹರವಿನೊಡನೆ ವಿಸ್ತಾರಗೊಳ್ಳುತ್ತಲೇ ಆಲೋಚನೆಗಳ ಮೂಲ ನೆಲೆಯಾಗಿ , ಸಂವಹನ ಸಿದ್ದವಾಗುತ್ತಿರುತ್ತದೆ .
ಅಂದು ಪರಿಭಾವಿಸಿದ ಪ್ರೇಮ ,ಲೋಕವನ್ನು ಪ್ರೇಮಮಯ ದೃಷ್ಟಿಯಿಂದ ;ಅಂದು ಸಹಿಸಿದ ಹೀಂಸೆ , ಕ್ರೌರ್ಯಗಳು ಲೋಕವನ್ನು ಹಿಂಸೆ ಕ್ರೌರ್ಯದ ದೃಷ್ಟಿಯಿಂದ ; ಅಂದು ಅನುಭವಿಸಿದ ನೇರ , ವಕ್ರ ಮಾರ್ಗಗಳು ,ಬಾಳಿನ ಉದ್ದದ ನೇರ ವಕ್ರ ಮಾರ್ಗಗಳಾಗಿ , ನಿಡುಗಾಲದ ಜೀವನದಲ್ಲಿ ವ್ಯಕ್ತಿತ್ವದ ಪ್ರೇರೇಪಣೆಯ ಮೂಲ ತಂತುಗಳಾಗುತ್ತವೆ . ಅಂದು ಕಲಿತ ವಿದ್ಯೆ ,ಮುಂದೆ ಬಾಳಿನಲ್ಲಿ ಕಲಿಯುವ ಎಲ್ಲ ವಿದ್ಯೆಗಳ ಪೂರ್ವ ವೇದಿಕೆಯಾಗಿ , ಸ್ಥಿರ ನೆಲೆಗಟ್ಟಾಗಿ ಮನೋಮುದ್ರಣವಾಗುತ್ತದೆ .
ತಾರುಣ್ಯದ ಘಟನೆಗಳ ಹೊರತಾಗಿ ತನ್ನ ಸುದೀರ್ಘ ಪಯಣದಲ್ಲಿ, ಸಾಧಕನಾಗಿ , ಸಿದ್ದನಾಗಿ , ಯೋಗಿಯಾಗಿ ,ಮಾಯಾನಿರಸನದ ಹಾದಿಯಲ್ಲಿ ತನ್ನದೇ ಪಥದಲ್ಲಿ ಚಲಿಸುತ್ತಾ , ತಾನರಿತ ಮಾರ್ಗದ ಸ್ಪಷ್ಟ ಪಯಣಿಗನಾಗಿ , ಹಿಂಬಾಲಿಸಿದ ಹಿಂಬಾಲಕರ ಗುರುವಾಗಿ ಚಲಿಸಿದ ಅಲ್ಲಮನ ಬಾಲ್ಯ ಎಂಥದಿರಬಹುದು ?

- Login or register to post comments
- 256 hits
- Email this page





RSS:
ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ (೬)
ಸೋಮಶೇಖರಯ್ಯನವರೆ, ಎಷ್ಟು ಚೆನ್ನಾಗಿ ಬರೆಯುತ್ತೀರಿ!! ನಿಮ್ಮ ಲೇಖನ ಓದಿದರೆ ಬೆಳದಿಂಗಳಲ್ಲಿ ತಾರಸಿಯ ಮೇಲೆ ಕೂತು ಚಂದ್ರನನ್ನು ನೋಡುತ್ತ ಸುತ್ತಲ ಶಾಂತ ಲೋಕ ಕಂಡಂತಾಗುತ್ತದೆ. ತುಂಬಾ ಸಂತೋಷ. ಬರೆಯುತ್ತ ಹೋಗಿ.
ಉ: ಅನನ್ಯ ಅಲ್ಲಮ (೬)
ರಮೇಶ್ ರವರಿಗೆ ನಿಮ್ಮ ಮನಸ್ಸಿಗಾದ ಸಂತೋಷವನ್ನು ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು . ಇದು ನನಗೂ ಸಂತಸದ ಸಂಗತಿ .
ಉ: ಅನನ್ಯ ಅಲ್ಲಮ (೬)
ಸೋಮಶೇಖರಯ್ಯನವರೇ ... ಹೌದು ತುಂಬ ಚೆನ್ನಾಗಿ ಬರಿತಿರಾ ನೀವು... ಆದಸ್ಟು ಸರಳ ಆಡು-ನುಡಿಯ ಪದಗಳನ್ನೇ ಬಳಸಲು ನೋಡಿ.. ಅಲ್ಲಮನ ಯವ್ವನದ ಲವ್ ಅಫೇರ್ ಬಗ್ಗೆ ಗೊತ್ತೇ ಇರಲಿಲ್ಲ... thanks..
ಉ: ಅನನ್ಯ ಅಲ್ಲಮ (೬)
ಸಂಗನ ಗೌಡರೆ ನೀವು ಚಾಮರಸನನ್ನು ಓದಬೇಕು , ಎಷ್ಟೊಂದು ಚೇತೋಹಾರಿಯಾದ ಬರವಣಿಗೆ , ಹಾಗೆಯೇ ಹರಿಹರನದೂ ಸಹ ,ನಾನು ಕಾಣಿಸಿರುವುದು ಸರಸ್ಸಿನ ಕೆಲವು ಹನಿಗಳನ್ನು ಮಾತ್ರ.ಮೂಲ ಕಾವ್ಯಗಳನ್ನು ಓದಿದರೆ ಕನ್ನಡದ ಓಜಸ್ಸು ಬೆರಗಾಗುವಂತಿದೆ .
ಉ: ಅನನ್ಯ ಅಲ್ಲಮ (೬)
ನಿಮ್ಮ ಮಾತು ಅಪ್ಪಟ ನಿಜ ಸೋಮಶೇಖರಯ್ಯನವರೆ,
ನಿಮ್ಮ ಲೇಖನ ಮತ್ತು ಈ ಪ್ರತಿಕ್ರಿಯೆಯ ಮಹಿಮೆ ನೋಡಿ!! ನಾನು ಎಸ್. ಎಸ್.ಎಲ್. ಸಿ ಓದುತ್ತಿದ್ದ ಕಾಲದಲ್ಲಿ ಸಂಸ್ಕೃತ ಮೇಷ್ಟ್ರು ರಜೆ ಹಾಕಿದ್ದರೆ ಕನ್ನಡ ತರಗತಿಯಲ್ಲ್ಯಿ ಕೂತು ಹೆಚ್ಚು ಅರ್ಥವಾಗದಿದ್ದರೂ ಸ್ವಾರಸ್ಯವಿರುವಂತೆ ಕೇಳಿಸಿಕೊಳ್ಳುತ್ತಿದ್ದೆ. ಆಗಿನ ಪ್ರಭುಲಿಂಗ ಲೀಲೆಯಲ್ಲಿನ ಪದ್ಯಗಳು ಅವು ನನಗೆ ಪಠ್ಯವಲ್ಲದಿದ್ದರೂ- ಬಹುಶ: ಅದರ ನಾದಮಾಧುರ್ಯಕ್ಕಿರಬೇಕು- ತಟ್ಟನೆ ನೆನಪಿಗೆ ಬಂತು
ಆರು ನಮ್ಮನು ಜರೆದವರು ಜಂಭಾರಿಯೋ ದನುಜಾರಿಯೋ ಕಾಮಾರಿಯೋ
ತೋರವನ ಹೆಡೆತಲೆಗುಗಿವೆ ನಾಲಿಗೆಯ ಬೇರುಸಹಿತವೆ ಕೀಳುವೆನು
ಕೈವಾರವೇಕೆನುತೆದ್ದು ಬಂದನು ಧೀರತನದಲಿ ಸಿದ್ಧರಾಮನು ಗಜರಿ ಗರ್ಜಿಸುತ.
ಲೇಸು ಲೇಸೈ ಸಿದ್ಧರಾಮನೆ ವಾಸಿ . . . . . . . . .( ನೆನಪಿಲ್ಲ ಕ್ಷಮಿಸಿ)
ಸಾಸಿರಕೆ ವೆಗ್ಗಳಿಸಿತಲ್ಲಾ ಸುಡು ಯತಿತ್ವವನು
ಈಸು ಕೋಪಾಟೋಪ ರೋಷಾವೇಶವೇತಕೆ ಯೋಗಿಯಾದ
ನಿರಾಸೆವಂತಂಗೆನುತಲಿದ್ದನು ನಗುತ ಪ್ರಭುರಾಯ.