ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಈ ಹಿಂದೆ 'ನಯಸೇನನ ಸಲೀಸಾದ ಸಾಲುಗಳು' ಎಂಬ ಬರಹಗಳನ್ನು ಕಂತುಗಳಾಗಿ ಸಂಪದದಲ್ಲಿ ಹಾಕಿದ್ದೆ. ಮತ್ತೆ ಹಿರಿಗನ್ನಡದ ಹುಚ್ಚು ಹೆಚ್ಚಾಗಿ ಬೇರೆ ಯಾವುದಾದರೂ ಹಿರಿಗನ್ನಡ ಕಬ್ಬವನ್ನು ಹುಡುಕುತ್ತಾ ಇದ್ದೆ. ನಾನು ಯಾವುದೆ ಹಳೆಗನ್ನಡ ಕಬ್ಬ ಓದುವಾಗ ಎಲ್ಲಾದರೂ ಅಚ್ಚಗನ್ನಡದ ಒರೆಗಳ ಬಳಕೆ ಯಾವ ತೆರ ಆಗಿದೆ ಅಂತ ನೋಡ್ತಾ ಇರ್ತೀನಿ. ಈ ರಾಮಾಯಣ, ಮಾಬಾರತ ಎಶ್ಟು ಮಂದಿ ಬರೆದಿದರೊ ಗೊತ್ತಿಲ್ಲ. ಇವನ್ನು ನೆಪ ಮಾಡಿಕೊಂಡು ಆಯ ಕಬ್ಬಿಗರು ಆವೊತ್ತಿನ ಕತೆಯನ್ನು ಹೇಳಿದ್ದಾರೆ ಅಂತ ಎಲ್ಲೊ ಕೇಳಿದ್ದೆ. ಹಾಗೆ ನೋಡುತ್ತಿದ್ದಾಗ ನಾಗಚಂದ್ರ ಕಬ್ಬಿಗ ನೆಗೞ್ದ 'ಪಂಪರಾಮಾಯಣಂ' / ಶ್ರೀರಾಮಚಂದ್ರಚರಿತಪುರಾಣಂ' ಕಣ್ಣಿಗೆ ಬಿತ್ತು. ನಾಗಚಂದ್ರ ಕನ್ನಡದ 'ಮೊದಲ್ಗಬ್ಬಿಗ'ಎಂದೇ ಹೆಸರಾಗಿರುವ ಪಂಪನ ಹೆಸರಿನಲ್ಲಿ ಕ್ರಿ.ಶ.1053ರಲ್ಲಿ ರಾಮಾಯಣ ಬರೆದಿರೋದು ತುಂಬಾ ಹುರುಪು ತುಂಬುವ ವಿಶ್ಯವೆ ಅಂತ ಅದನ್ನು ಹೊಕ್ಕು ಇನ್ನು ಕಣ್ಣಾಡಿಸಿದೆ. ನಾಗಚಂದ್ರನ ಒರೆವೆಡಗಿಗೆ(ಒರೆ+ಬೆಡಗು) ಮಾರುಹೋಗಿ ಇದನ್ನೆ ಒಂದು ಹಲವಿಡಿ(ಹಲ+ಬಿಡಿ)/ ಸರಣಿ ಮಾಡಬಾರದೇಕೆಂದು ಉಂಕಿಸಿ...
ಬಡಿಕೊಳೆ ಕಾಯುಂ ಪಣ್ಣುಂ
ತೊಡಂಬೆಪಱಿದುದಿರ್ವ ಮಾಳ್ಕೆಯಿಂ ಕಿಱಿವಿರಿಯ
ರ್ಮಡಿವರನುಕ್ರಮದಿಂ ಸಾ
ವೊಡರಿಸದೊಡರಿಸುವುದಲ್ತೆ ಕದಳೀಘಾತಂ
ಬಿಡಿಸಿದರೆ,
ಬಡಿಕೊಡೆ ಕಾಯುಂ ಪಣ್ಣುಂ ತೊಡಮ್ ಬೆಪಱಿದುದು ಇರ್ವ ಮಾಳ್ಕೆಯಿಂ ಕಿಱಿ ಹಿರಿಯರ್ ಮಡಿವರ್ ಅನುಕ್ರಮದಿಂ ಸಾವು ಒಡರಿಸದೊಡರಿಸುವುದು ಅಲ್ತೆ ಕದಳೀಘಾತಂ
ಹಣ್ಣು, ಕಾಯಿ ಬಿಟ್ಟಿರುವ ಸಸಿ/ಮರವನ್ನು ಬಡಿದರೆ ಹಣ್ಣು,ಕಾಯಿ ಎರಡೂ ತೊಡೆವುದು(ಕೆಳಗೆ ಬೀಳುವುದು/ಬೇರ್ಪಡುವುದು) ಹಾಗೆಯೆ ಗುಂಪುಸಾವಾದಾಗ ಮಾಳ್ಕೆಯಿಂದ ಹಿರಿಯ-ಕಿರಿಯರೆನ್ನದೆ ಎಲ್ಲರೂ ಒಬ್ಬೊಬ್ಬರಾಗಿ ಸಾವನ್ನಪ್ಪದೆ/ಸಾವನ್ನು ಕೂಡದೆ ಇರುವರೆ?
ಕದಳೀಘಾತ = ಸಾಮೂಹಿಕ ಸಾವು/ನಾಶ
ತೊಡಮ್ = ತೊಡೆ
ಒಡರಿಸು = ಹೊಂದು,ಕೂಡು
ಬೆಪಱಿ = ??
ಗಮನಿಕೆಗಳು:
೧) ಇಲ್ಲಿ 'ಬಡಿಕೊಳೆ' ಒರೆಯಲ್ಲಿ ಶರತ್ತಿನ ಪದಬಳಕೆಯಲ್ಲಿ 'ಬಡಿಕೊಡೆ' ಬದಲು 'ಬಡಿಕೊಳೆ' ಬಳಸಿರುವುದು ಕನ್ನಡದಲ್ಲಿ ಈಗಿರುವ ಹಲವು ಪದಗಳಲ್ಲಿ 'ಡ'ಕಾರವು ಹಿರಿಗನ್ನಡದಲ್ಲಿ 'ಳ'ಕಾರವಾಗಿತ್ತು ಅಂತ ತಿಳಿಯಬಹುದು.
ಮಾದರಿ : ಅ) ಹೊಸಗನ್ನಡದಲ್ಲಿ ಇನ್ನು 'ಕಾಳ್ಗಿಚ್ಚು'ಅಂತ ಹೇಳುವುದುಂಟು. ಕಾಡ್+ಕಿಚ್ಚು= ಕಾಡ್ಗಿಚ್ಚು ಆಗಬೇಕಿತ್ತು ಆದರೆ ಅದು 'ಕಾಳ್ಗಿಚ್ಚು' ಅಂತ ಉಳಿದಿರುವುದು ಹಿರಿಗನ್ನಡದ ಕುರುಹು ಅಂತ ಶಂಕರಬಟ್ಟರು ಒಂದು ಕಡೆ ಹೇಳಿದ್ದಾರೆ.
ಬ) ೧೨ ನೆ ನೂರೇಡಿನಲ್ಲಿ ಅಕ್ಕನವರು ಕೂಡ 'ಹಸಿವಾದೊಡೆ ಬಿಕ್ಶಾನ್ನಗಳುಂಟು' ಅಂತ ಬಳಸಿರುವುದುಂಟು. ಅಂದರೆ ೧೧ನೇ ನೂರೇಡಿನಿಂದ ೧೨ನೇ ನೂರೇಡಿಗೆ ಬರುವು ಹೊತ್ತಿಗೆ 'ಳ'ಕಾರವು 'ಡ'ಕಾರವಾಗಿತ್ತು ಅಂತ ಎಣಿಸಬಹುದು.
೨) ಸಾವು ಎನ್ನುವುದು ಯಾರಿಗೂ ಬೇದಬಾವ ಮಾಡಲ್ಲ ಅನ್ನುವುದನ್ನು ನಾಗಚಂದ್ರ ಕಾಯಿ,ಹಣ್ಣಿನ ಮೂಲಕ ಸಕ್ಕತ್ತಾಗಿ ಹೇಳಿದ್ದಾನೆ ಅನ್ನಿಸಿತು.

- Login or register to post comments
- 690 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಕದಳೀ = ಬಾಳೆ
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಡಳಯೋರಭೇದಃ ಅನ್ನೋ ಸೂತ್ರವೇ ಇದೆ (ಎಲ್ಲೀದು? ನೆನಪಾಗುತ್ತಿಲ್ಲ) - ರಮೇಶ್ ಬಳಗಂಚಿಯವರು ಹೇಳಬಹುದು. ಕನ್ನಡದಲ್ಲಿ ಳ ಇದ್ದದ್ದು ಸಂಸ್ಕೃತಕ್ಕೆ, ಪ್ರಾಕೃತಕ್ಕೆ ಹೋದಾಗ ಡ ಆಗುವುದೂ, ಮತ್ತು ಅಲ್ಲಿಂದ ಬಂದಾಗ ಡ ವು ಳ ಆಗುವುದೂ ಸಿದ್ದವಾದ ಬದಲಾವಣೆಗಳು.
ಹಾಗೇ ಕನ್ನಡದಲ್ಲಿ ಲಳಯೋರಭೇಧ: ಅನ್ನೋದೂ ಇತ್ತು. ಇದು ಸರಿಸುಮಾರಾಗಿ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳಲ್ಲಿರುವ ಲಕಾರಕ್ಕೆ ಹೊಂದುವಂತಹದ್ದು. ಉದಾ: ಮಂಜುಲ -> ಮಂಜುಳ
ಈ ಎರಡನ್ನೂ ಸೇರಿಸಿ ಕಾಳಿದಾಸ(?) ಎಲ್ಲೋ ಭುಜಲತಾಂ ಜಲತಾಂ ಎಂದು ಹೇಳಿದ್ದಾನೆ ಅಂತ ಓದಿದ್ದ ನೆನಪು ( ಜಡತಾಂ = ಜಳತಾಂ = ಜಲತಾಂ)
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಮತ್ತೆ ಕದಳೀಘಾತ ಅನ್ನುವುದು ಬಹುಶಃ ಹೀಗಿರಬಹುದೆ? ಬಾಳೆಯ ಗೊನೆಯೆ ಬಡಿದರೆ, ಎಲ್ಲ ಹಣ್ಣುಗಳೂ ಹಾಳಾಗುವುದಿಲ್ಲವೇ? ಆ ರೀತಿ ಎಂದಿರಬಹುದು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
'ಕದಳಿ' ಮತ್ತು 'ಕದಳೀ'ಗೆ ಬೇರೆ ಬೇರೆತನ ಇದಿಯ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
'ಲಳಯೋರಭೇಧ' ಇದು ಕನ್ನಡದಲ್ಲಿ ಸಲ್ಲದು..
ಕರಾಮಾ ಇದರ ಕುರಿತು ತಿಳಿ ಹೇಳಿದೆ ಅಂತ ನನ್ನ ನೆನೆಪು..
ಕುಳ, ಕ್ಷುಳ ಅಂತೇನೋ ಹೇಳೋ ಒಂದು ವಿಬಾಗ ಇದೆ..
ಹಾಗೆ ಪ್ರಾಸದ ಬಗ್ಗೆ ಮಾತಾಡ್ತಾ ಅಲ್ಲಿ ಅವನು ತಿಳಿಯಾಗಿ ’ಲ’ಕ್ಕೆ ’ಳ’ಪ್ರಾಸವಲ್ಲ.. ಎಂದು ಹೇಳಿದ್ದಾರೆ.
ಇನ್ನು ’ಡಳಯೋರಭೇಧ’ ಇಲ್ಲ ಯಾವಾಗಲೂ ಕನ್ನಡದಲ್ಲಿ ಡ => ೞ ಆಗುವುದು(ಳ ಆಗಲ್ಲ ಅಂತ ಓದಿರಬೋದು) ಹೊರತು, ಳ => ಡ ಆಗಲ್ಲ...
ಮಾಡ್ => ಮಾೞ್ಪುತು
ಕಾಡ್ + ಗಿಚ್ಚು => ಕಾೞ್ಗಿಚ್ಚು
ಆದ್ರೆ ಪೇಳ್ ಎಂದೂ ಪೇಡ್ ಆಗಲ್ಲ!
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಡ => ೞ ಇದು ಬರೀ ಕನ್ನಡದ ಒರೆಗಳಿಗೆ ಆಗುವುದು ಹೊರತು ಸಕ್ಕದ ಎರವಲುಗಳಿಗಲ್ಲ ಅಂತನೂ ಇದೆ( ಶಂಕರ ಭಟ್ಟ)
ಕನ್ನಡದ ಯಾವ ಒರೆಯಲ್ಲೂ ಳ/ೞ => ಲ ಎಂದು ಉಲಿಯೋದು ತಪ್ಪು.. ಅದು ಎಂದೂ ಆಗಲ್ಲ. ಒಂದು ಕಾಲದಲ್ಲಿ ೞ != ಳ
ಕೋಳ != ಕೋಲ
ಹೇಳು != ಹೇಲು
ಹಲವು ಸರತಿ ಱ => ೞ ಕೂಡ ಇತ್ತೇ?
ಆದ್ರೆ ಸಕ್ಕದದ ಒರೆಗಳು ಕನ್ನಡಕ್ಕೆ ಬರುವಾಗ ಲ => ಳ ಆಗಿದೆ( ಎಂದೂ ಅದು ಲ => ೞ ಆಗಲ್ಲ )..
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಹೌದು ಱಳ. ಕುಳ, ಕ್ಷಳ ಅಂತ ಇದೆ.
ಱಳ -> ಹಳೆಗನ್ನಡದಲ್ಲಿದ್ದ ೞ, ಲಿಪಿಯಲ್ಲಿ ಱ ಕಾರಕ್ಕೆ ಹತ್ತಿರವಾಗಿದ್ದ ಅಕ್ಷರ - ಈಗ ಇದು ಕೇಶಿರಾಜನ ಕಾಲಕ್ಕೇ ಅದು ಳ ಆಗಿಹೋಗಿತ್ತು
ಕುಳ -> ಕನ್ನಡದ ಮೂಲದ ಪದಗಳಲ್ಲಿ ಬರುವ ಳ ಕಾರ (ಉದಾ: ಹವಳ)
ಕ್ಷಳ -> ಸಂಸ್ಕೃತಮೂಲದ ಪದಗ್ಳಿಂದ ಬದಲಾವಣೆ ಹೊಂದಿ ಳ ಕಾರವಾಗಿರುವುದು (ಉದಾ: ಮಂಜುಳ)
ಎಂದು ಸೇಡಿಯಾಪು ಕೃಷ್ಣಭಟ್ಟರು ಬರೆದಿರುವುದನ್ನು ಓದಿದ್ದೇನೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಹು..
ಆ ಬಗ್ಗೆ ಕರಾಮಾದಲ್ಲಿ ಪ್ರಾಸದ ಬಗ್ಗೆ ಹೇಳ್ತಾ... ಲ ಮತ್ತು ಳ ನಡುವೆ ಕನ್ನಡದಲ್ಲಿ ಭೇದ ಇದ್ದೇ ಇದೆ ಎಂದಿರುವುದು ನನ್ನ ನೆನೆಪು...
ನನ್ನಿ ಹಂಸಾನಂದಿಗಳೇ!
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಸಕ್ಕದದಿಂದ ಕನ್ನಡಕ್ಕೆ ಬರುವ ಎಲ್ಲ ಪದಗಳಲ್ಲಿ 'ಲ'ಕಾರ 'ಳ'ಕಾರವಾಗುತ್ತವೆಯೆ? ನನಗೆ ಅಯ್ಬು
ಮಾದರಿ : ಕವಿರಾಜಮಾರ್ಗದ "ಕಾವೇರಿಯಿಂದಂ..."ನಲ್ಲಿ 'ವಸುಧಾವಲಯವಿಲೀನವಿಶದವಿಶಯವಿಶೇಶಂ' ಅಂತ ಬರುತ್ತೆ.
ಅತವ ಇದು 'ವಸುಧಾವಳಯವಿಳೀನವಿಶದವಿಶಯವಿಶೇಶಂ' ಅಂತ ಇರ್ಬೇಕಿತ್ತಾ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ನಾಗವರ್ಮನ ಕಾದಂಬರಿಯ ಒಂದೆರಡು ಪುಟಗಳನ್ನು ಓದಿದ್ದೆ - ಅದರಲ್ಲಿ ಹೀಗೆಯೇ ಸುಮಾರಾಗಿ ನಾವೀಗ ಯಾವುದನ್ನು ಸಮಸಂಸ್ಕೃತವಾಗಿ ’ಲ’ ಕಾರವನ್ನೇ ಉಚ್ಚರಿಸುತ್ತೇವೋ, ( ಉದಾಹರಣೆಗೆ ವಲಯ, ವರ್ತುಲ, ಜಲ, ನೀಲ) ಅವುಗಳಿಗೆಲ್ಲ ’ಳ’ ಕಾರವನ್ನು (ಜಳ, ನೀಳ, ವರ್ತುಳ, ವಳಯ ಇತ್ಯಾದಿ) ಉಪಯೋಗಿಸಿದೆ. ಆಗ ಅದೇ ರೀತಿ ಕಟ್ಟುಪಾಡು ಇತ್ತೋ ಏನೋ ತಿಳಿಯದು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಕೊಳಂಬೆಯವರ ನುಡಿಗಂಟಿನಲ್ಲಿ....ಕದಳಿ= ಗುಂಪು, ಸಮೂಹ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಆದರೆ ಅಲ್ಲಿ ಕದಳೀಘಾತ ಇಲ್ಲಿ ನೋಡಿ.. ಘಾತ ಸಕ್ಕದ...! ನನಗೆ ಅಲ್ಲಿ ಅರಿ ಸಮಾಸ( ಸಕ್ಕದ ಕನ್ನಡ ಸೇರಿಕೆ ) ನಡೆದಿಲ್ಲ ಅಂತ ಅನ್ನಿಸ್ತದೆ..
ಆದರೂ ಕದಳೀಘಾತ = ಬಾಳೆಗೆ ಹೊಡೆತ, ಗುಂಪಿಗೆ ಹೊಡೆತ ಎರಡೂ ಒಪ್ಪಬೋದು...
’ಕದಳೀ’ ಉದ್ದು ಈ ಇದೆಯಲ್ಲ.
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಕಾಳ್ಗಿಚ್ಚು ಅಲ್ಲ ಅದು ಕಾೞ್ಗಿಚ್ಚು ತೊಡಂ ಅಲ್ಲ ತೊಡಂಬೆ ಕೂಡಿ ಒಂದೇ ಪದ. ಮಾಳ್ಕೆ ಅಲ್ಲ ಮಾೞ್ಕೆ ಸರಿಯಾದ ಶಬ್ದ.
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಹ್ಯಾಗೆ? ಹಿರಿಗನ್ನಡದಿಂದ ಹಳೆಗನ್ನಡಕ್ಕೆ 'ಳ' --> 'ಡ' ಮಾರ್ಪು ಆಗಿರುವುದು 'ೞ್'--> 'ಡ' ಆಗಿದಿಯ? ಅಯ್ಬು ನನಗೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಹಿರಿಗನ್ನಡದಿಂದ ಹೊಸಗನ್ನಡಕ್ಕೆ ಅಂತ ಓದಿಕೊಳ್ಳಿ
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
^^^^ ಸರಿ...
ಡ => ೞ ಆಗುವುದು ಹೊರತು ಳ ಅಲ್ಲ..
ಕನ್ನಡದ ಕಂದ ನನ್ನಿ!
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ನಾನು ಓದುತ್ತಿರುವ ಹೊತ್ತಿಗೆಯಲ್ಲಿ(University of Madras, BA Degree Examination SELECTIONS, Kanarese,1917) 'ಮಾಳ್ಕೆ' ಯಂತಲೆ ಇದೆ. ಅಲ್ಲಿ ಅಚ್ಚು ತಪ್ಪಾಗಿರಬಹುದು ಅನ್ಸುತ್ತೆ
ಮಾಡು --> ಮಾೞ್ಕೆ
ಆದರೆ ಕ.ರಾ.ಮ ಪದ್ಯ ನೋಡಿ
ಸೂಡುವೆನೆಂಬುದಲ್ಲದಣಮಾಗದು ಸೂೞ್ಪನಮೋಘಮೆಂಬುದಂ
ಕೂಡುವೆನೆಂಬುದಲ್ಲದಿನಿಸಾವುದುಮಾಗದು ಕೂೞ್ಪನೆಂಬುದಂ
ಕಾಡುವೆನೆಂಬುದಲ್ಲದೆ ಸುಮಾರ್ಗದೊಳಾಗದು ಕಾೞ್ಪನೆಂಬುದಂ
ತೋಡುವನೆಂಬುದಲ್ಲದಿಡಲಾಗದು ನಿಕ್ಕುವ ತೋೞ್ಪೆನೆಂಬುದಂ
ಡ್->ೞ್ ಗೆ 'ಹೊರತು'ಗಳನ್ನು ಮೇಲೆ ಕೊಡಲಾಗಿದೆ ಅಂತ ನನ್ನ ಅರಿಮೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ವ್ಯಾಕರಣ ಕುರಿತು ಎಷ್ಟೊಂದು ಚರ್ಚೆಗಳು , ಹಂಸಾನಂದಿ , ಮಹೇಶ್ ಇಬ್ಬರೂ ಕಲೆತರೆ ಸಂಪದ ಓದುಗರಿಗೆ ವ್ಯಾಕರಣದ ಸುಗ್ಗಿ. ಪ್ರೀತಿಯ ಮಹೇಶ್ , ಏನು ಸ್ವಾಮಿ , ವೀರ ರಾಜಕುಮಾರ್ ಆಗಿಬಿಟ್ಟಿದ್ದೀರಲ್ಲಾ ಇಲ್ಲಿ ತಮಾಷೆ ಚಿನ್ಹೆ ಹಾಕಲು ನನಗೆ ಬರುತ್ತಿಲ್ಲ. ನನ್ನಿ
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಮೊನ್ನೆ ರಾಜಕುಮಾರರ ಹುಟ್ಟಿದ ಹಬ್ಬ ಅದಕ್ಕೆ ಆ ಪೋಟೊ ಹಾಕಿಕೊಂಡೆ.. ಚನ್ನಾಗಿದೆಯಲ್ಲ!
ವ್ಯಾಕರಣದಿಂದ ಮೋಕ್ಷ ಹೇಗೆ ಪಡೀಬೋದು ಅಂತ ಶಬ್ದಮಣಿದರ್ಪಣದ ಮೊದಲ ಪದ್ಯಗಳಲ್ಲಿ ಇದೆ...
ನಾನು ಅದನ್ನ ಇಲ್ಲಿ ಎಲ್ಲೋ ಹಾಕಿದ್ದೀನಿ... ಹುಡುಕಿ ಓದಿ,ಮೋಕ್ಷಕ್ಕೆ ಹತ್ತಿರ ಆಗ್ತೀರಿ
=====================================
ಮಾಯ್ಸ!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಪಂಪ ಭಾರತ ಕೇಳಿದ್ದೆ, ಪಂಪ ರಾಮಾಯಣ ನಿಜಕ್ಕೂ ಕೇಳಿರಲಿಲ್ಲ!!!!!
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ನಾಗಚಂದ್ರ ವೀರಬಲ್ಲಾಳನ ಆಸ್ಥಾನದಲ್ಲಿದ್ದ ಕವಿ. ಪಂಪನಷ್ಟೇ ಇವನು ಪ್ರತಿಭಾಶಾಲಿಯೆಂದಾಗಿ, ಇವನಿಗೆ ಅಭಿನವಪಂಪ ಅನ್ನುವ ಹೆಸರೇ ನಿಂತಿತಂತೆ. ಹಾಗಾಗಿ. ಇವನ ರಾಮಚಂದ್ರಚರಿತ ಪುರಾಣವನ್ನು ಪಂಪರಾಮಾಯಣ ಅನ್ನುವ ರೂಡ್ಜಿಯಿದೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಇನ್ನೊಂದು ಸೋಜಿಗ ಗೊತ್ತಾ
ಇದು ಜಿನಿಗ ಪರಂಪರೆಯನ್ನು ಊರುಗೋಲಾಗಿಟ್ಟುಕೊಂಡು ಬರೆದಿರುವ ರಾಮಾಯಣವಂತೆ.
ಈ ಪಂಪರಾಮಾಯಣದಲ್ಲಿ ರಾವಣನನ್ನು ಕೊಲ್ಲುವವನು ಲಕುಮಣ, ರಾಮ ಅಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು