ನಾನು- ನೀನು
ನಿನಗೆ,
ನನ್ನೊಳಗಿನ ಪ್ರೀತಿ ಕಾಣುವುದಿಲ್ಲ
ಭೂತ ಕನ್ನಡಿ ಹಿಡಿದು
ಹುಡುಕಿದಾಗಲೂ
ನನ್ನ ದನಿ ಕೇಳುವುದಿಲ್ಲ
ಗಂಟಲು ಬಿರಿದು
ನಾನೆಷ್ಟು ಕರೆದರೂ
ಮೌನ ಆವರಿಸಿದೆ ಸುತ್ತ
ಬರಡು ಜೀವನವೆಂಬ ವ್ಯಥೆಯಲಿ
ಕ(ವಿ)ತೆಗಳಿಗೆ ಬರಗಾಲ
ಬಂದಿದೆ, ಕೈ ಬಂಧಿ ತೊಡಿಸಿದಾಗ
ಮನದಲ್ಲಿ ಬೆಂಕಿ ಉರಿದು
ಉಕ್ಕುವವು ಕಣ್ಣ ಹನಿ
ಕೊರಗಿ ಕರಗುವ ಚಿತ್ತದಲಿ
ಜ್ವಾಲಾಮುಖಿಗಳಂತೆ!
ಮತ್ತೊಮ್ಮೆ
ಭರವಸೆಯ ಆಗಸದಿ
ಭವಿಷ್ಯದ ಹೊಂಗನಸ ಬಿಳಿ ಮೇಘ
ವರ್ಷಧಾರೆಯೆರೆದಾಗ
ಕನಸ ದೋಣಿಯಲಿ ಸಾಗುವ
ಈ ಬಾಳ ಪಯಣ
ಪ್ರಕ್ಷುಬ್ದ ಬದುಕಿನಲಿ
ನಿನ್ನ ನೆರಳಾಗಿ, ಇನಿಯಾ
ಕನಸ ಮಗ್ಗುಲ ಸರಿಸಿ
ಕವಲೊಡೆದ ಓಣಿಯಲಿ
ಮೆಲ್ಲ ಹೆಜ್ಜೆಯನ್ನಿಡುವಾಗ...
ಗಜ್ಜೆ ದನಿಗಳ ಕಂಪು
ನಿನ್ನೊಡಲ ಸೇರಿ
ದುಗುಡಗಳ ದನಿಯಾಗಿ
ಮಾರ್ದನಿಸುವುದೇಕೆ?

- Login or register to post comments
- 146 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: