ಶ್ರೀಬಸವೇಶ್ವರರ ವಚನಗಳು
ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!
ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ !!
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ?
ಈ ಮಾಯೆಯ ಕಳವೊಡೆ ಎನ್ನಳವಲ್ಲ;
ನೀವೇ ಬಲ್ಲಿರಿ ಕೂಡಲಸಂಗಮದೇವಾ!!
ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ
ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ
ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ
ವಿಚಾರವುಂಟೆ ಕೂಡಲಸಂಗಮದೇವಾ!!
ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ!!
ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ
ಕೂಡಲಸಂಗಮದೇವಾ
ಹಾಲಲ್ಲದ್ದು ನೀರಲ್ಲದ್ದು ನಿಮ್ಮ ಧರ್ಮ!!

- Login or register to post comments
- 168 hits
- Email this page





RSS:
ಪ್ರತಿಕ್ರಿಯೆಗಳು
ಉ: ಶ್ರೀಬಸವೇಶ್ವರರ ವಚನಗಳು
ನಿಮ್ಮ ಹತ್ತಿರಾ ಸಮಗ್ರ ವಚನಗಳು ಉ೦ಟೋ ?? ನ೦ಗೇ ಒ೦ದು ವಚನ ಬೇಕಾಗಿತ್ತು.
ಉ: ಶ್ರೀಬಸವೇಶ್ವರರ ವಚನಗಳು
ಮುರಳೀಧರ್ ಯಾವ ವಚನ ಎಂದು ಹೇಳಿ ಪ್ರಯತ್ನಿಸೋಣ
ಉ: ಶ್ರೀಬಸವೇಶ್ವರರ ವಚನಗಳು
ಬೀದಿ ನಾಯಿಯ ಕಣ್ಣ ಮೂಲಕ ಜಗವ ನೋಡು ಅ೦ತಾ ಒ೦ದು ವಚನವಿದೆಯ೦ತೆ .. ಯಾರೋ ಬಸವಣ್ಣನವರು ಬರೆದದ್ದು ಅ೦ತಾ ಹೇಳಿದ್ದರು.
ಅದಕ್ಕೆ ಚೆಕ್ ಮಾಡ್ ಬೇಕಿತ್ತು...
ಉ: ಶ್ರೀಬಸವೇಶ್ವರರ ವಚನಗಳು
ನೀವು ತಿಳಿಸಿದ ರೀತಿಯ ವಚನ ನನ್ನ ಕಣ್ಣಿಗೆ ಬಿದ್ದಿಲ್ಲ , ಆಸಕ್ತಿದಾಯಕವಾಗಿದೆ , ಹುಡುಕುತ್ತೇನೆ , ನನಗೆ ಮೊದಲು ಸಿಕ್ಕರೆ ನಿಮಗೆ ತಿಳಿಸುತ್ತೇನೆ . ನಿಮಗೆ ಸಿಕ್ಕರೆ ತಿಳಿಸಿ .