ಕಾರಂತರ ಜೀವಂತ ಪಾತ್ರಗಳು ೬ (೨)
ಕೇವಲ ಮನುಷ್ಯರು ಬರೆಯುವುದಕ್ಕಿಂತ ಮೂರು ವರ್ಷ ಮುಂಚೆಯೇ ಬರೆದ ಬರಹ ’ಮೂಕಜ್ಜಿಯ ಕನಸುಗಳು’ . ಮನುಷ್ಯನ ಬಾಳಿನ ಹಿನ್ನೆಲೆಯಲ್ಲಿ , ಮನುಷ್ಯನ ಇತಿಹಾಸವನ್ನೇ ತೆರೆದಿಡುವ ಒಂದು ದೊಡ್ಡ ಪ್ರಯತ್ನ . ಮೂಕಜ್ಜಿಯ ತರದ ಒಂದು ಅಜ್ಜಿ ಇದ್ದಳೇ ? ಎಂಬುದಕ್ಕೆ ನಮ್ಮ ನಿಮ್ಮ ಮನಸ್ಸುಗಳಲ್ಲಿರುವ ಸಂಶಯ ಪಿಶಾಚಿಯೇ ಮೂಕಜ್ಜಿ ಎನ್ನುತ್ತಾರೆ ಕಾರಂತರು . ಇತಿಹಾಸ ಪೂರ್ವ ಕಾಲದ ಕಾಲಘಟ್ಟಗಳನ್ನೂ ;ಇತಿಹಾಸವೆಂಬುದು ಸಾಗಿ ಬಂದ ಬಗೆಯನ್ನೂ ಮೂಕಜ್ಜಿಯು ವಸ್ತುಗಳನ್ನು ಕೈಯ್ಯಲ್ಲಿ ಹಿಡಿದೇ ಅದರ ಪೂರ್ವಾಪರಗಳನ್ನು ಅರಿತುಕೊಳ್ಳುವ ತಂತ್ರದ ಮೂಲಕ ಯಶಶ್ವಿಯಾಗಿ ಮಂಡಿಸುವ ಕಾರಂತರ ಶೈಲಿ ಬಲವಂತವಾಗಿ ಸಾಧಿಸ ಹೊರಟ ಶೈಲಿಯಲ್ಲ .ಸಹಜವಾಗಿ ತನ್ನಿಂದ ತಾನೇ ಮೂಡುತ್ತಾ ಹೋಗುವಂತಹ ಅಪೂರ್ವ ಶೈಲಿ .
ಬದುಕು ಎಷ್ಟು ದೊಡ್ಡದಾದರೂ ಅದು ನಿಂತಿರುವುದು ಚಿಕ್ಕದಾದ ಕೌಟುಂಬಿಕ ನೆಲೆಗಳ ಮೇಲೆ . ಆದರೆ ಮನುಷ್ಯನ ವಿಧಿ ,ಈ ಕುಟುಂಬಗಳನ್ನು ಚೂರು ಮಾಡಲು ತುದಿಗಾಲ ಮೇಲೆ ನಿಂತಿರುತ್ತದೇನೋ ಎನಿಸುವಂತೆ ಘಟನಾವಳಿಗಳು ಜರುಗುತ್ತವೆ .ಮನುಷ್ಯನ ಸಣ್ಣ ಸಂತೋಷಗಳೂ ಸಹ ಅವನ ವಿಧಿಗೆ ಸಹ್ಯವಾಗುವುದಿಲ್ಲವೇನೋ ,ಎನಿಸುವಂತೆ ಅದರ ಆಟ ನಡೆದಿರುತ್ತದೆ .ನಾಗಿ ಮತ್ತು ರಾಮಣ್ಣನ ಜೀವನದಲ್ಲಿಯೂ ನಡೆದದ್ದು ವಿಧಿಯದೇ ಆಟ . ಇಲ್ಲಿ ವಿಧಿ ಎಂದರೆ ಬೇರಾರೂ ಅಲ್ಲ ; ನಾಗಿಯ ತವರು ಮನೆಯವರು .ಏಕೆ ಅವಳ ಬಾಳಿನಲ್ಲಿ ಅವರು ಪ್ರವೇಶ ಮಾಡಿದರೋ ? ಹಣಕ್ಕೋ ; ಅಸೂಯೆಗೋ ? ಅಂತೂ ಅವಳ ಬಾಳು ಮೂರಾಬಟ್ಟೆಯಾಯಿತು .ಮುಗ್ಧ ವಯಸ್ಸಿನಲ್ಲಿ ಅವಳನ್ನು ಕೈ ಹಿಡಿದು ಹೊಲಸು ತುಳಿಸಿದರು . ಅವಳ ಯವ್ವನಕ್ಕೋ ; ರೂಪಕ್ಕೋ ಮರುಳಾಗಿ ಅವಳ ಬಾಳನ್ನು ಹಾಳುಗೆಡವಿದ ಮನುಷ್ಯ , ಅವಳ ಕೈಗೆ ಮಕ್ಕಳನ್ನು ಕೊಟ್ಟು , ಬೀದಿ ಪಾಲು ಮಾಡಿದ .ಅವಳ ಗಂಡ ರಾಮಣ್ಣ ಕೇವಲ ಅಸಹಾಯಕನಾಗಿದ್ದ .ಇತಿಹಾಸದ ಉದ್ದಕ್ಕೂ ನಡೆದಿರುವ ಇಂಥವನ್ನು ಮೂಕಜ್ಜಿ ಗುರುತಿಸುತ್ತಾಳೆ .
ಕಾಲ ಯಾವುದಾದರೂ ಆಗಲಿ , ದೇಶ ಯಾವುದಾದರೂ ಆಗಲಿ; ಮಾನವ ಸಮಾಜ ಇತಿಹಾಸ ಪೂರ್ವದ್ದಾಗಲಿ ಅಥವಾ ಇವತ್ತಿನದಾಗಲಿ , ಅಲ್ಲಿ ಯಾವ ನಂಬಿಕೆಗಳು ; ಶ್ರದ್ದೆಗಳು ರೂಢಿಯಲ್ಲಿರಲಿ . ಕತೆ ಮಾತ್ರ ಒಂದೇ , ಹೆಣ್ಣು ಗಂಡುಗಳ ಅನುರಕ್ತಿ ವಿರಕ್ತಿಗಳಿಗೆ ಸಂಬಂಧಿಸಿದುದು .
ಸಾಂಪ್ರದಾಯಿಕವಾಗಿ ಬಂದ ಎಲ್ಲ ಶ್ರದ್ದೆಗಳನ್ನು ಮೂಕಜ್ಜಿಯ ಮನಸ್ಸಿನ ನಿಕಷ ಒರೆಗೆ ಹಚ್ಚುತ್ತಲೇ ಇರುತ್ತದೆ. ಅನೇಕ ನಂಬಿಕೆಗಳ ಬುಡ , ಈ ಅಜ್ಜಿಯ ಪ್ರಖರ ಪ್ರಜ್ಞೆಯ ಕೊಡಲಿ ಏಟಿಗೆ ತತ್ತರಿಸಿ ಉರುಳುತ್ತವೆ .ದೇವರು , ಅವತಾರಗಳು , ದೇವ ಮಾನವರು ಎಲ್ಲರೂ ಪ್ರಶ್ನಾರ್ಹರಾಗುತ್ತಾರೆ . ಒಂದು ಸಣ್ಣ ಜೀವವನ್ನು ತೆಗೆಯಲು , ದೇವರು ಅವತಾರ ಎತ್ತಬೇಕೆ ? ಒಂದು ಎಲೆಯನ್ನು ಉದುರಿಸಲು ಇಡೀ ಮರ ಎದ್ದು ಕುಣಿಯ ಬೇಕೆ ? ಒಂದು ಸಿಡಿಲಿನ ಸೋಂಕಿಗೆ ನಾಶವಾಗಬಲ್ಲ ಜೀವವನ್ನು , ದೇವರೇ ಬಂದು ನಾಶ ಮಾಡಬೇಕೆ? ದೇವರು ಎಂಬುದು ಅಷ್ಟು ಸಣ್ಣ ವಸ್ತುವೇ ? ಇಂತಹ ತಾರ್ಕಿಕ ಪ್ರಶ್ನೆಗಳೇ ಮೂಕಜ್ಜಿಯ ವೈಚಾರಿಕ ನಿಲುವುಗಳು .
ಸೋಗಿನ ವೈರಾಗ್ಯ , ತಾರ್ಕಿಕವಲ್ಲದ ನೀತಿ ಇವೆಲ್ಲಾ ಅಜ್ಜಿಯ ಸರಳ , ಸಹಜ ನಡೆಯೆದುರು ಪಲಾಯನ ಪಠಿಸುತ್ತವೆ . ಅನಂತರಾಯನ ಸಾಮಾನ್ಯರಿಗಿಂತ ನಾನು ಭಿನ್ನ, ವಿರಾಗಿ ಎಂಬ ಅಹಂಕಾರದ ಅಥವಾ ತಪ್ಪು ತಿಳುವಳಿಕೆಗೆ , ಮೂಕಜ್ಜಿ ಎಲ್ಲರಂತೆ ನಿನ್ನ ಮನಸ್ಸಿನಲ್ಲೂ ಹೆಣ್ಣಿನ ರೂಪ ಸುಳಿಯುತ್ತಿರುವಾಗ ನೀನೂ ಸಹ ನಾಲ್ಕು ಜನರಲ್ಲಿ ಒಬ್ಬ ಅಷ್ಟೇ . ನಿನ್ನದು ಎಂಬ ದೊಡ್ಡಸ್ತಿಕೆ ಯಾವುದೂ ಇಲ್ಲ .ಎನ್ನುವ ಮಾತು ಹುಲು ಮಾನವನ ಅವಾಸ್ತವಿಕ ತಿಳುವಳಿಕೆಯ ಬುಡಕ್ಕೆ ಬಿಡುವ ಕುದಿ ನೀರಾಗುತ್ತದೆ .
ಮೊಮ್ಮಗ ಸುಬ್ರಾಯ ತಪಸ್ಸಿನ ವಿಷಯವಾಗಿ ಕೇಳುವ ಪ್ರಶ್ನೆಗೆ ಉತ್ತರವಾಗಿ " ಇಷ್ಟೊಂದು ವರ್ಷ ನಾನು ಇಲ್ಲಿ ಕುಳಿತು ಮಾಡಿದ್ದಾದರೂ ಏನು.... ? ಎನ್ನುತ್ತಾಳೆ . ಹಾಗಾದರೆ ಮುನಿಗಳು ಗುಹೆಗಳಲ್ಲಿ , ಕಾಡಿನಲ್ಲಿ ಮಾಡಿದ್ದು ತಪಸ್ಸಲ್ಲವೇ? ,, ಎಂದರೆ "ಕಾಡೇ ಯಾಕೆ ಬೇಕು ? ಕಾಡಿನ ಪರ್ಣಶಾಲೆ , ಊರಿನ ಜೋಪಡಿಗೆ ಹೇಗೆ ಭಿನ್ನ ?,,ಎನ್ನುತ್ತಾಳೆ . " ಗುಹೆಗಳು ಮನುಷ್ಯನ ಪಲಾಯನ ವಾದಕ್ಕೆ ಸಾಕ್ಷ್ಯಗಳು ಅಷ್ಟೆ, ಜಗತ್ತನ್ನು ಎದುರಿಸಲಾರದವನು ತಾಯ ಗರ್ಭದಲ್ಲಿ ಸುರಕ್ಷಿತವಾಗಿರುವಂತೆ , ಗುಹೆಯಲ್ಲಿ ಸುರಕ್ಷಿತವಾಗಿರಲು ಬಯಸುತ್ತಾನೆ ; ಮರಳಿ ತಾಯ ಉದರವನ್ನು ಸೇರಲಾರನಲ್ಲ, ಅದಕ್ಕಾಗಿ ಗುಹೆ ಸೇರುತ್ತಾನೆ ,, ಎನ್ನುವುದು ಅವಳ ತರ್ಕ .
ದೇವರು ಹೆಣ್ಣು ಗಂಡುಗಳನ್ನು ಸೃಷ್ಟಿಸಿರುವುದು ನಿಜವಾದರೆ , ವೈರಾಗ್ಯ ಅವನ ಉದ್ದೇಶವಾಗಿರಲಿಕ್ಕಿಲ್ಲ . ಅದೇ ಉದ್ದೇಶವಾಗಿದ್ದರೆ ಸೃಷ್ಟಿಯಲ್ಲಿ ಹೆಣ್ಣು ಗಂಡುಗಳು ಇರುತ್ತಲೇ ಇರಲಿಲ್ಲ . ಹುಟ್ಟಿದ ಪ್ರತಿಯೊಬ್ಬನೂ ; ಪ್ರತೊಯೊಂದು ಜೀವವೂ ಹುಟ್ಟುವ ರೀತಿ ಗಂಡೂ ಹೆಣ್ಣುಗಳ ಮಿಲನವೇ ಆಗಿರುವಾಗ , ಅದು ಸರಿಯಾದ ಕ್ರಮವಲ್ಲವೆನ್ನುವ ಎದೆಗಾರಿಕೆ , ದೇವರ ಉದ್ದೇಶವನ್ನೇ ಪ್ರಶ್ನಿಸಿದಂತಲ್ಲವೇ ? ಅದು ಅಸಹ್ಯವಾಗಿದ್ದರೆ ಅಂತಹ ಸೃಷ್ಟಿಯನ್ನು ಮಾಡಿದ ದೇವರೇ ಅಸಹ್ಯದ ಮೂಲ ಕಾರಣನಾಗುತ್ತಾನೆ .ಈ ರೀತಿಯ ತತ್ವ ಮೂಕಜ್ಜಿಯ ಪಾತ್ರದ ಮೂಲಕ ಇಡೀ ಕಾದಂಬರಿಯಲ್ಲಿ ಮೂರ್ತಗೊಳ್ಳುತ್ತಾ ಹೋಗುತ್ತದೆ .
ಯಾವ ಸಣ್ಣ ಜೀವವೂ ಸಹ ಕಡೆಗಣಿಸುವಂತಹದಲ್ಲ , ರಾಮಣ್ಣ ನಾಗಿಯರಂತಹ ಸಾಮಾನ್ಯ ಜೀವನ ಸಹ , ಅದು ಚುಗುರಬೇಕಾದದ್ದೇ , ಆದ ತಪ್ಪುಗಳನ್ನು ಮರೆತು ಅವರ ಸಂಸಾರ ಪುನಃ ನಿಂತಲ್ಲಿಂದ ಮುಂದಕ್ಕೆ ಹರಿಯಬೇಕಾದದ್ದೇ . ತಿಪ್ಪಜ್ಜಿಯಂತಹ ಮುಗ್ಧ ಹೆಣ್ಣುಮಗಳು ತನ್ನ ಅವಸಾನ ಕಾಲದಲ್ಲಿ ಬೇಗುದಿ ಇಲ್ಲದೆ ಶಾಂತಿಯನ್ನು ಹೊಂದತಕ್ಕದ್ದೇ . ಇದು ಎಲ್ಲ ಜೀವಗಳ ಹಕ್ಕಲ್ಲವೇ ? ಈ ರೀತಿಯಾಗಿ ಜೀವನ ಮತ್ತು ಆಧ್ಯಾತ್ಮವನ್ನು ಬೆಸೆಯುತ್ತಾ ಹೋಗುವ ’ ಮೂಕಜ್ಜಿಯ ಕನಸುಗಳು ’ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಕೊಡುಗೆ .

- Login or register to post comments
- 141 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: