ಕಾರಂತರ ಜೀವಂತ ಪಾತ್ರಗಳು ೬ (೩)
ಕಾರಂತರ ’ಮರಳಿ ಮಣ್ಣಿಗೆ’ ತೊಂಭತ್ತು ವರ್ಷಗಳ ಸುದೀರ್ಘ ಕಥಾನಕವನ್ನು ಹೊಂದಿರುವ ಒಂದು ಬೃಹತ್ ಕಾದಂಬರಿ ೧೮೫೦ ರಿಂದ ೧೯೪೦ ರ ವರೆಗಿನ ಸಾಮಾಜಿಕ ಜೀವನದ ಬದಲಾವಣೆಗಳನ್ನು ಸಮಗ್ರವಾಗಿ ಬಿಡಿಸಿಡುವ ಒಂದು ದೊಡ್ಡ ಪ್ರಯತ್ನ .
ಇಂತಹ ಒಂದು ಬರಹವನ್ನು ಯಾವುದೇ ಚೌಕಟ್ಟಿನಡಿಯಲ್ಲಿ ಕೂಡಿಸಿಡುವುದು ಕಷ್ಟದ ಕೆಲಸ . ಏಕೆಂದರೆ ಈ ಕಾಲಾವಧಿಯು ಇಡೀ ಪ್ರಪಂಚದ ಜನ ಸಮೂಹಗಳ ಜೀವನ ಕ್ರಮದಲ್ಲಿ ಅಗಾಧವಾದ ಬದಲಾವಣೆಗಳನ್ನು ಮೂಡಿಸುತ್ತಿದ್ದ ಸಂಕ್ರಮಣ ಸಮಯ . ಸಾಮಾಜಿಕ ಜೀವನದಲ್ಲಿ , ಆರ್ಥಿಕ ವಲಯಗಳಲ್ಲಿ , ರಾಜಕೀಯ ವಾತಾವರಣದಲ್ಲಿ , ಧಾರ್ಮಿಕ ಪ್ರಭಾವಗಳಲ್ಲಿ ಹಿಂದೆ ಕಂಡರಿಯದ ರೀತಿಯ ಮಾರ್ಪಾಡುಗಳು ಜರುಗುತ್ತಿದ್ದವು . ವೈಜ್ಞಾನಿಕ ಅನ್ವೇಷಣೆಗಳ ಫಲವಾಗಿ , ಹೊಸ ರೀತಿಯ ವಿಚಾರಗಳು , ಭಾವನೆಗಳು ಜನ ಮಾನಸದಲ್ಲಿ ರೂಪು ತಳೆದು , ಹೊಸ ದಿಗಂತಗಳು ತೆರೆದಿದ್ದವು . ಆದರೆ ಸಾಮಾನ್ಯರ ಬಾಳಿನಲ್ಲಿ ಸಂಕಷ್ಟಗಳ ಸರಮಾಲೆಗಳೇ ಸೃಷ್ಟಿಯಾಗಿದ್ದುದರಿಂದ ಜನರು ಬದುಕನ್ನು ಅರಸಿ , ಅತಂತ್ರ ರೀತಿಯಲ್ಲಿ ತಿರುಗಾಡುವ ಅನಿವಾರ್ಯತೆಗೂ ಪಕ್ಕಾಗಿದ್ದರು . ಅಮಾನವೀಯವಾದ ಪ್ರಪಂಚ ಯುದ್ದಗಳು ಮಾನವ ಪ್ರಾಣಗಳನ್ನು ತೃಣ ಸಮಾನವಾಗಿಸಿದ್ದವು .
ಅದೇ ಸಮಯದಲ್ಲಿ ಮನುಷ್ಯರ ಸ್ವಾತಂತ್ರ್ಯದ ಹಕ್ಕುಗಳನ್ನು ದಮನಗೊಳಿಸುವ ವಿದ್ಯಮಾನಗಳೂ ; ಅಂತಹ ದಮನಗಳ ವಿರುದ್ದ ಮಾನವೀಯ ಹೋರಾಟಗಳೂ ಎಲ್ಲೆಡೆ ಸಾಮಾನ್ಯವಾಗಿದ್ದ ಕಾಲ ಘಟ್ಟವದು . ಈ ವಿದ್ಯಮಾನಗಳು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ಇಡೀ ಮನುಷ್ಯ ಕುಲ ವಾಸಿಸುತ್ತಿದ್ದ ಭೂಖಂಡಗಳನ್ನೆಲ್ಲಾ ವ್ಯಾಪಿಸಿದ್ದವು . ಭಾರತದಲ್ಲಂತೂ ಪರಕೀಯರ ಆಡಳಿತದ ವಿರುದ್ದವಾಗಿ ಸ್ವಾತಂತ್ರ್ಯ ಸಮರ , ಅಹಿಂಸಾ ಮಾರ್ಗದಲ್ಲಿ ಜಗತ್ತು ಕಂಡರಿಯದ ಹೊಸ ಬಗೆಯ ಹೋರಾಟವಾಗಿ ರೂಹು ತಳೆಯುತ್ತಿತ್ತು .
ಇಂತಹ ಸಮಯದಲ್ಲಿನ ಕನ್ನಡ ಕರಾವಳಿಯ ಕುಗ್ರಾಮವೊಂದರಲ್ಲಿ ಘಟಿಸುತ್ತಿದ್ದ ಮನೆತನವೊಂದರ ಜೀವನ ಕ್ರಮವನ್ನು ಅನಾವರಣಗೊಳಿಸುತ್ತಾ , ಮೂರು ತಲೆಮಾರಿನ ಜೀವನ ಚಿತ್ರಣಗಳನ್ನು ಕಾರಂತರು ಚಿತ್ರಿಸಿರುವ ರೀತಿಯೇ ಅಸಾಧಾರಣವಾದದ್ದು . ಕಾದಂಬರಿಯಲ್ಲಿ ಚಿತ್ರಿತವಾಗುವ ಇತರ ವಿಷಯಗಳ ಕಡೆಗೆ , ಬೇರೊಂದು ಬರಹದಲ್ಲಿ ವಿಶ್ಲೇಷಿಸಬಹುದಾದುದರಿಂದ ಸದ್ಯಕ್ಕೆ ಅಲ್ಲಿನ ಮಾನವೀಯ ಸಂಬಂಧಗಳ ಬಗ್ಗೆ ಮಾತ್ರವೇ ಈ ಲೇಖನದ ಮಿತಿಯಲ್ಲಿ ಚರ್ಚಿಸಬಹುದು .
ರಾಮ ಐತಾಳರ ಜೀವನ ಕಾಲವೆಂಬುದು , ಊಳಿಗ ಮಾನ್ಯ ಪದ್ದತಿಯ ಕೊನೆಯ ಕಾಲಘಟ್ಟವಾಗಿತ್ತು . ಅವರ ತಂಗಿ ವಿಧವೆ ಸರಸೋತಿ , ಮನೆತನದ ವಿದ್ಯಮಾನಗಳಲ್ಲಿ ಹೆಣ್ಣನ್ನು ಕಡೆಗಣಿಸುತ್ತಿದ್ದ ಪದ್ದತಿಯ ವಿರುದ್ದ ಆಕ್ರೋಶ ತೋರಿಸುತ್ತಿದ್ದಳು . ಹಗಲು ರಾತ್ರಿಯೆನ್ನದೆ ಮನೆತನದ ಹಿತಕ್ಕಾಗಿ ದುಡಿಯುತ್ತಿದ್ದ ಹೆಣ್ಣುಮಕ್ಕಳಿಗೆ , ಕುಟುಂಬದ ಅತಿ ಮುಖ್ಯವಿಷಯಗಳಲ್ಲಿ ಸಹ , ಚರ್ಚೆಗೆ ಅವಕಾಶವಿರುವುದಿರಲಿ , ವಿಷಯವನ್ನೇ ಅವರಿಗೆ ತಿಳಿಸಬೇಕಾದ ಅಗತ್ಯವಿಲ್ಲವೆನ್ನುವಂತೆ ವರ್ತಿಸುತ್ತಿದ್ದ ಗಂಡಿನ ರೀತಿ , ಹೆಣ್ಣು ಮಕ್ಕಳು ಕೆರಳಲು ಕಾರಣವಾಗಿತ್ತು . ರಾಮ ಐತಾಳರ ಎರಡನೆ ಮದುವೆ ಎಂಬುದು ಅವರ ಹೆಂಡತಿ ಪಾರೋತಿಗೆ ಮನೆಯ ಮುಂದೆ ಮದುವೆಯ ಚಪ್ಪರ ಎದ್ದಾಗಲೂ ಗೊತ್ತಿರಲಿಲ್ಲ .
ಕಾದಂಬರಿಯ ಆರಂಭಕ್ಕೇನೇ ಪಾರ್ವತಿ ರಾಮ ಐತಾಳರ ಮಳೆಗಾಲದ ಮದುವೆಯ ಗ್ರಾಮೀಣ ಸಂಭ್ರಮದ ಚಿತ್ರಣದೊಡನೆ , ಸಹಜವಾಗಿ ಜೀವಂತವಾಗತೊಡಗುವ ಕತೆ , ಮುಂದುವರಿಯುವುದು ಸರಸೋತಿ, ಪಾರೋತಿಯರ ಮುಗ್ಧ ಬದುಕಿನ ಸಜೀವ ಚಿತ್ರಣದೊಡನೆ . ಮಳೆಗಾಲವನ್ನು ಎದುರಿಸಲು ಕರಾವಳಿಯ ಮನೆಗಳಲ್ಲಿ ನಡೆಯುವ ಪೂರ್ವ ಸಿದ್ದತಾಕ್ರಮಗಳನ್ನು ಈ ಎರಡು ಹೆಣ್ಣು ಜೀವಗಳ ಚಟುವಟಿಕೆಗಳೊಡನೆ ಸಮೀಕರಿಸುತ್ತ , ದಿನ ದಿನದ ಕರಾವಳಿಯ ಮನೆ ಮನೆಯ ಬದುಕನ್ನು , ಸರಸೋತಿ ಪಾರೋತಿಯರು , ಮನೆಯ ಹಪ್ಪಳ ಒಣಗಿಸುವುದರಿಂದ ಹಿಡಿದು . ಮನೆಗೆ ಬೇಕಾದ ಎಣ್ಣೆಯನ್ನು ಒದಗಿಸಿಕೊಳ್ಳುವ ಕ್ರಮಗಳಿಂದ , ದನ ಕರುಗಳನ್ನು ನೋಡಿಕೊಳ್ಳುವ , ಹಿತ್ತಲಲ್ಲಿ ಕಾಯಿ ಪಲ್ಲೆ ಬೆಳೆಯುವ , ಬದುಕಿನ ಎಲ್ಲ ವಿಧಾನಗಳನ್ನು ಓದುಗನ ಕಣ್ಣೆದುರು ನಡೆಯುವ ವಿದ್ಯಮಾನಗಳಂತೆ ಚಿತ್ರಿಸುವ ರೀತಿಯೇ ಸಹಜ ಸೊಗಸಿನಿಂದ ಕೂಡಿದುದು .
ಮಕ್ಕಳಿಲ್ಲವೆಂಬ ಕಾರಣಕ್ಕೆ ಸತ್ಯಭಾಮೆಯನ್ನು ಎರಡನೆಯ ಮದುವೆಯಾದ ರಾಮ ಐತಾಳರ ಆಸೆಗೆ ತಕ್ಕಂತೆ ಲಚ್ಚ ಹುಟ್ಟುತ್ತಾನೆ . ಆದರೆ ಆ ಲಚ್ಚ ಮಾತ್ರ ಮನುಷ್ಯತ್ವಕ್ಕೆ ವಿರುದ್ದವಾದ ಗುಣ ಧರ್ಮಗಳಿಂದ ಐತಾಳರ ಮನೆತನವನ್ನು, ಅದರಲ್ಲಿ ಆಶ್ರಯ ಪಡೆದ ಜೀವಗಳನ್ನು , ಹಿಂಸೆಯ ಕೂಪಕ್ಕೆ ತಳ್ಳುತ್ತಾನೆ . ಇಲ್ಲಿ ಒಂದು ವಿಶೇಷವನ್ನು ಕಾರಂತರ ಬರಹದಲ್ಲಿ ಗುರುತಿಸಬೇಕಾದದ್ದು ನಿಸರ್ಗದೊಡನೆ ಒಡನಾಟವಿರುವ ಮನುಷ್ಯ , ಅವನ ಸ್ವಭಾವ ಯಾವ ತೆರದ್ದೇ ಆಗಿದ್ದರೂ ಒಂದಿಷ್ಟಾದರೂ ಸಹ್ಯವೆನಿಸುವ ರೀತಿಯಲ್ಲಿ ಬಾಳುತ್ತಾನೆ . ನಿಸರ್ಗ ವಿದೂರವಾದವನು ಎಲ್ಲ ಬಗೆಯ ಮನುಷ್ಯತ್ವವಿದೂರವಾದ ನರಕದ ಕಡೆಗೆ ಹೆಜ್ಜೆ ಹಾಕುತ್ತನೆ ಎಂಬುದು .
ರಾಮ ಐತಾಳರು ಯಜಮಾನಿಕೆಯ ಸಂಸ್ಕೃತಿಯವರೇ ಆದರೂ , ಮನೆತನವನ್ನು ನಿಕೃಷ್ಟವಾಗಿ ಕಾಣುವುದಿಲ್ಲ . ಅದಕ್ಕೆ ಅನಿವಾರ್ಯ ವಾಗಿ ಪ್ರಕೃತಿಯೊಡನೆ ಬದುಕಬೇಕಾಗಿ ಬಂದ ಅವರ ಜೀವನ ವಿಧಾನವೂ ಕಾರಣವಾಗುತ್ತದೆ . ಕಡಲಿನ ದಂಡೆಯಲ್ಲಿಯೇ ಇರುವ ಅವರ ಮನೆ , ಅದರ ಆರ್ಭಟದಿಂದಾಗಿ , ಹೊರ ಜಗತ್ತಿಗೆ ಅಲ್ಲಿನ ವಿದ್ಯಮಾನಗಳೇ ಅರಿವಾಗದಂತಹ ಪರಿಸ್ಥಿತಿಯನ್ನೇ ನಿರ್ಮಾಣ ಮಾಡಿದ್ದರೂ ಸಹ , ಅಲ್ಲಿನ ಕರುಳ ಬೆಸುಗೆಗಳು ಪರಸ್ಪರ ಸ್ಪಂದಿಸುತ್ತಲೇ ಇರುತ್ತವೆ . ಆದರೆ ಅದೇ ಮನೆತನದ ಕುಡಿ ಲಚ್ಚ , ತನ್ನ ಮನೆಗೆ ಸಮೀಪವೇ ಹರಿದು ಕಡಲು ಸೇರುವ ನದಿಯನ್ನೂ ಕಾಣ ; ಸಮುದ್ರವಂತೂ ಅವನ ಲೆಕ್ಕದ ಪುಸ್ತಕದಲ್ಲಿಯೇ ಇಲ್ಲದ ವಿಚಾರ . ವಯಸ್ಸಿಗೆ ಬಂದ ಕೂಡಲೇ ಕಂಡದ್ದು , ಗಲ್ಲಿಗಳ ಕಮಟು ಹಿಡಿದ ರೂಮುಗಳಲ್ಲಿ ಇಸ್ಪೀಟಿನ ಸಹವಾಸ , ಜೊತೆಗೆ ಬೆಲೆವೆಣ್ಣುಗಳ ಬಲೆಯಲ್ಲಿ ಮತ್ತೇರಿದ ಬದುಕು . ಅದೇ ಅವನ ಮಗ ರಾಮನಿಗೆ ಸಮುದ್ರವೆಂದರೆ ಪ್ರಾಣ .ಕಾಡು ನದಿ ಝರಿ ಇವೆಲ್ಲ ಪ್ರಿಯ . ಈ ಬಗೆಯ ಮೂರು ರೀತಿಯ ಮನಸ್ಸುಗಳು ರೂಪುಗೊಳ್ಳುವುದು ಪ್ರಕೃತಿಯ ನಡುವಣ ರಕ್ತಿ ವಿರಕ್ತಿಗಳ ಪರಿಣಾಮವಾಗಿ.
ಲಚ್ಚನಂತಹ ಗಂಡನನ್ನು ಪಡೆದ ಅಭಾಗಿನಿ ನಾಗವೇಣಿಯದು ಅಸಹಾಯಕತೆಯ ಪರಮಾವಧಿಯ ಬದುಕು .ಮನುಷ್ಯರ ರೀತಿ ನೀತಿಗಳನ್ನು ಕಿಂಚಿತ್ತಾದರೂ ರೂಢಿಸಿಕೊಳ್ಳದ , ಯಾವತ್ತಾದರೂ
ಪ್ರವಾಸಿಯಂತೆ ಬಂದು , ಮನೆತನವನ್ನೇ ವಿನಾಶದ ಅಂಚಿಗೆ ದೂಡುವ ಸನ್ನಾಹಗಳಿಂದಲೇ ಸಜ್ಜಾಗಿರುತ್ತಿದ್ದ ಮನುಷ್ಯನನ್ನು , ಸಹಿಸಬೇಕಾದ ಅನಿವಾರ್ಯತೆ ಅವಳದು . ತನ್ನ ಸ್ವಾರ್ಥ ಮತ್ತು ವಿಷಯ ಲೊಲುಪ್ತಿಗೆ ಮನೆತನದ ಆಸ್ತಿಯನ್ನು ಮೋಸದಿಂದ ಪರಭಾರೆ ಮಾಡಿ , ಹೆಂಡತಿ ಮಕ್ಕಳ ಬಾಳನ್ನು ಬೀದಿಗೆ ತಂದು ನಿಲ್ಲಿಸಿ , ಅದಕ್ಕಾಗಿ ಸ್ವಲ್ಪವಾದರೂ ಪಾಶ್ಚಾತ್ತಾಪವಿಲ್ಲದ ಪರಮ ಬೇಜವಾಬ್ದಾರಿಯ ಬದುಕು ಅವನದು .
ತನ್ನ ಕರುಳ ದುಃಖವನ್ನು ಮರೆಯಲು , ನಾಗವೇಣಿ ಮರೆ ಹೊಗುವುದು ಸಂಗೀತವನ್ನು . ಪಿಟೀಲಿನ ಟುಂಯ್ ಸದ್ದಿನಲ್ಲಿ , ಮನದಲ್ಲಿ ಮಡುಗಟ್ಟಿದ ದುಃಖವನ್ನು ತೋಡೀಕೊಳ್ಳಲು ಆಶ್ರ್ತಯಿಸುವುದು , ತೋಡಿರಾಗವನ್ನು .ಸಮುದ್ರದೆದುರಿನಲ್ಲಿ, ಸಮುದ್ರದಂತಹ ಸಮುದ್ರವೇ ಭೋರ್ಗರೆದು ಗೋಳಿಡುವಂತೆ , ಸಮುದ್ರದ ಮೊರೆತವನ್ನು ತನ್ನ ಸಂಗೀತದ ಲಯಗಳಲ್ಲಿ ಹಿಡಿದಿಟ್ಟು ಮನಸ್ಸನ್ನು ಸ್ತಿಮಿತಕ್ಕೆ ತರಲು ಹೆಣಗುತ್ತಿದ್ದ , ಆ ಜೀವಕ್ಕೆ ತಂಪೆರೆಯುವಂತೆ ಮಗ ರಾಮ ಅದೇ ಪಿಟೀಲಿನ ತನ್ನ ಪ್ರೌಢಿಮೆಯನ್ನು ತಾಯಿಯೆದುರು ತೋರಿಸಿ , ಆ ನೊಂದ ಜೀವಕ್ಕೆ ಸಾಂತ್ವನ ನೀಡುತ್ತಾನೆ .
ರಾಮನಿಗೆ ತನ್ನ ತಂದೆ ಎಂತಹವನು ಎಂಬುದು ಗೊತ್ತಾಗುವ ಅವಕಾಶಗಳೇ ಇರಲಿಲ್ಲ . ಅವನು ಹುಟ್ಟಿದಾಗಿನಿಂದ ಯವ್ವನದ ವರೆಗೆ ತಂದೆಯನ್ನು ಕಂಡವನೇ ಅಲ್ಲ .ಅವನಿಗೆ ಇಪ್ಪತ್ತು ವರ್ಷವಾಗುವಾಗ ಮೈಸೂರಿನಲ್ಲೊಮ್ಮೆ ಶ್ರೀರಾಂಪೇಟೆಯ ಕವಲೊಡೆಯುವ ಒಂದು ಸಂದಿಯಲ್ಲಿ ತನ್ನ ತಂದೆಯನ್ನು ಕಾಣಲು ಹೋಗುತ್ತಾನೆ .ತಾನೆಂದೂ ನೋಡದ , ದೊಡ್ಡವನಾಗಿ ತನ್ನೆದುರು ನಿಂತ ಮಗನನ್ನು ಕಾಣುವ ಯಾವ ಕಾತರವನ್ನೂ ತೋರದೆ , ತನ್ನ ಇಸ್ಪೀಟಿನ ಆಟದಲ್ಲೇ ಲೀನನಾದ ತಂದೆಯನ್ನು ಕಂಡು , ಉಂಟಾದ ಅಸಹ್ಯಭಾವವನ್ನು ತಡೆದುಕೊಂಡು , ತನ್ನ ತಾಯಿಯೊಡನೆ , " ಅಮ್ಮ ಎಂದೂ ನಾನು ಅಪ್ಪನಂತಾಗಲಾರೆ ,, ಎನ್ನುವ ಮಾತೇ ನಾಗವೇಣಿಯ ಪಾಲಿಗೆ ಭರವಸೆಯ ಮಾತಾಗಿ ಕೇಳಿಸುತ್ತದೆ .
ಇದು ಮೂರು ತಲೆಮಾರುಗಳ ರಾಮ ಐತಾಳರ ,ಅವರ ಮಗ ಲಚ್ಚನ ಮತ್ತು ಅವನ ಮಗ ರಾಮನ ಕತೆ ಮಾತ್ರವಲ್ಲ ; ಮನುಷ್ಯನ ಮೂರ್ಖತನದೆದುರು ಬಳಲಿದ ಜೀವಗಳ ಆರ್ತನಾದದ ಕತೆ ; ಹಾಗೆಯೇ ಜಗತ್ತಿನ ಮೂರ್ಖತನದಿಂದಾಗಿ ಮನುಷ್ಯ ಕುಲ ತೊಳಲಾಡುವ ಇತಿಹಾಸದ ಕತೆ .

- Login or register to post comments
- 198 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: