ಮುಂಗಾರು ಮಳೆಯೇ...
"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ಬಿದ್ದಾಗ ಹರಡುವ ಮಣ್ಣಿನ ಪರಿಮಳ....ಆಕಾಶದಲ್ಲಿ ಮೋಡ ಕವಿಯುತ್ತಿದ್ದಂತೆ ದುಂಬಿಗಳು ಹಾರಾಡುತ್ತವೆ..ದನಕರುಗಳು 'ಅಂಬಾ' ಎಂದು ಕೂಗುತ್ತಾ ಕೊಟ್ಟಿಗೆ ಸೇರುತ್ತವೆ..ಹೊರಗಿದ್ದ ಬಟ್ಟೆ ಬರೆ, ಕಟ್ಟಿಗೆ ಎಲ್ಲಾ ದಿಢೀರನೆ ಮನೆಯೊಳಗೆ ತಂದು ಹಾಕುವುದು, ಕೋಳಿ ಮರಿಗಳನ್ನು ಬೆಚ್ಚನೆಯ ಗೂಡಿನೊಳಗೆ ನೂಕುವುದು...ಇಂತದೆಲ್ಲಾ ನಮ್ಮ ಹಳ್ಳಿಯಲ್ಲಿ ಸರ್ವೇ ಸಾಮಾನ್ಯ. ಅಲ್ಲಿನ ಮುಂಗಾರು ಮಳೆಯ ಶೃಂಗಾರವೇ ಬೇರೆ. ದಿನವಿಡೀ ಹನಿ ಬಿಡದೆ ಸುರಿಯುವ ಮಳೆ, ಸುತ್ತಲೂ ಜಲಮಯ. ರಾತ್ರಿಯಾದರೇನೋ ಗುಡುಗು ಮಿಂಚುಗಳ ಆರ್ಭಟ. ಗಾಜಿನ ಕಿಟಕಿಗೆ ಮಿಂಚು ಬಡಿಯುವಾಗ, ಗುಡುಗಿಗೆ ಹೆದರಿ, ಕರೆಂಟು ಇಲ್ಲದ ರಾತ್ರಿಯಲ್ಲಿ ಬೆಚ್ಚನೆ ಕಂಬಳಿ ಹೊದ್ದು ಮಲಗಿದ್ದು ಎಲ್ಲವೂ ನೆನಪಿನ ಪುಟದಲ್ಲಿ ಅಳಿಯಲಾರದ ಬರಹಗಳು.
ಪ್ರಸ್ತುತ ನನ್ನ ಪುಟ್ಟ ಹಳ್ಳಿಯ ಪ್ರತೀ ಮಳೆಯನ್ನು ಚೆನ್ನೈಯಲ್ಲಿ ಮಿಸ್ ಮಾಡುತ್ತಿದ್ದೇನೆ. ನಮ್ಮೂರಲ್ಲಿ ಇದೀಗ ಮಳೆ ಹನಿ ಲಾಸ್ಯವಾಡುತ್ತಿರುವ ಈ ವೇಳೆಯಲ್ಲಿ ಇಲ್ಲಿನ ಉರಿ ಬಿಸಿಲಿಗೆ ಬೆವರು ಹರಿಯುತ್ತದೆ. ಸೆಖೆ ಸೆಖೆ ಎಂದು ನಿದ್ದೆ ಮಾಡಲಾಗದ ಸ್ಥಿತಿ, ಕರೆಂಟು ಕೈ ಕೊಟ್ಟರಂತೂ ಹೇಳತೀರದು. ಅಂತೂ ರಾತ್ರಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ. ಉರಿ ಬಿಸಿಲಿನಲ್ಲಿ ನೀರಿನ ಅಭಾವ ಬೇರೆ, ಪ್ಯಾಕೇಜ್ಡ್ ವಾಟರ್ ಕುಡಿದು ಕುಡಿದು "ದೇವದಾಸನ ದಾರು ಬಾಟಲ್"ಗಳಂತೆ ನೀರಿನ ಬಾಟಲಿ ಹತ್ತಿರ ಇಟ್ಟು ಕೊಳ್ಳಲೇ ಬೇಕಾಗಿದೆ. (ಇಲ್ಲಿ ಕುಡಿ ನೀರಿಗೆ ಪ್ಯಾಕೇಜ್ಡ್ ವಾಟರ್ ಮಾತ್ರ ಗತಿ!). ಸ್ನಾನಕ್ಕೆ ಉಪ್ಪು ನೀರು. ಮೆಟ್ರೋ ನಗರದ ಜೀವನ ನರಕಮಯ ಎಂದೇ ಹೇಳಬಹುದು. ಆದ್ರೆ ಚೆನ್ನೈ ನಗರಕ್ಕೆ ಬಿಸಿಲೇ ಸೂಕ್ತ ಅಂತ ಅನಿಸುತ್ತದೆ. ಮಳೆ ಬಂದರಂತೂ ಈ ನಗರ ನರಕವಾಗುತ್ತದೆ. ಚರಂಡಿ ನೀರು ರೋಡಿನಲ್ಲಿ ಹರಿಯುತ್ತದೆ. ವಾಹನಗಳ ಟ್ರಾಫಿಕ್, ಕೆಸರೆರೆಚಾಟ ಇವುಗಳನ್ನೆಲ್ಲಾ ಸಹಿಸಿ ಆಫೀಸಿಗೆ ತಲುಪುವಾಗ ಹೈರಾಣಗಿ ಬಿಡುತ್ತೇವೆ.
ಇದನ್ನೆಲ್ಲಾ ಅನುಭವಿಸುವಾಗ ನಮ್ಮೂರಿನ ಮಳೆಯ ಮೇಲಿನ ಪ್ರೀತಿ ಮತ್ತೂ ಹೆಚ್ಚಾಗುತ್ತದೆ ಹಾಗೂ ಅಲ್ಲಿನ ನೆನಪು ಕಾಡುತ್ತದೆ. ಅಲ್ಲಿನ ಒಂದೊಂದು ಹನಿಯೂ ಪ್ರೇಮ ಕಾವ್ಯ ಬರೆಯುತ್ತದೆ ಎಂದೇ ಹೇಳಬಹುದು. ತೆರೆದ ಆಗಸದ ಹಾದರದ ಮೇಲೆ ಬೆಳ್ಮುಗಿಲನ್ನು ಕಾರ್ಮುಗಿಲು ತನ್ನ ತೆಕ್ಕೆಗೆಳೆದು ಕೊಂಡಾಗ ತಂಪಾದ ಗಾಳಿ ಪ್ರೀತಿಯ ಕಾವ್ಯಕ್ಕೆ ಮುನ್ನುಡಿ ಬರೆಯುತ್ತದೆ. ಗಿಡ ಮರಗಳು ಇದರೊಂದಿಗೆ ತಲೆದೂಗಿದಾಗ, ಪಕ್ಷಿಸಂಕುಲಗಳು ತನ್ನವರೊಂದಿಗೆ ಗೂಡು ಸೇರುವ ತವಕದಲ್ಲಿ ಚಿಲಿ ಪಿಲಿಗುಟ್ಟುತ್ತಾ ತಾಳ ಹಾಕುತ್ತವೆ. ಮಳೆಯನ್ನು ಆಹ್ವಾನಿಸುವ ಕಪ್ಪೆ ತನ್ನ ನಾದವನ್ನು ಹೊರಡಿಸುವಾಗ, ದುಂಬಿಗಳು ಚಿತ್ತಾರ ಬಿಡಿಸುತ್ತವೆ. ಇದಾದನಂತರ 'ಧೋ' ಎಂದು ಮಳೆಸುರಿದು ಇಳೆ ತಂಪಾಗಿಸುತ್ತದೆ. ಮನೆ ಮುಂದೆ ಉಕ್ಕಿ ಹರಿಯುವ ತೋಡು ಹಳ್ಳಗಳು..ನೀರಿನ ಜುಳು ಜುಳು ನಿನಾದದೊಂದಿಗೆ ತೋಡಿನಲ್ಲಿ ಏಳು ಬೀಳುತ್ತಾ ನೀರಿನೊಂದಿಗೆ ಸಾಗುವ ತೆಂಗಿನ ಕಾಯಿ, ಹಲಸು,ಅಡಿಕೆ, ಮಾವುಗಳು. ಹಳ್ಳದಲ್ಲಿ ಜಿಗಿಯುವ ತುಂಡು ಬಾಲದ ಕಪ್ಪೆಗಳು, ಅಂತಹಾ ಮಳೆಗೆ ಹೊರಗೆ ಕಾಲಿಡಲೂ ಕೂಡಾ ಅಸಾಧ್ಯ!!, ಚಳಿ ಎಂದೆನಿಸುವಾಗ ಜಗಿಯಲು ಸಾಂತಾಣಿ, ಹಪ್ಪಳ... ಇವುಗಳೆಲ್ಲದರ ಅನುಭವ ಅವರ್ಣನೀಯ.
ಮಳೆ ಸುರಿದಾದ ನಂತರ ಹಿತವಾದ ನೆಲ, ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದರೆ ಚಿಕ್ಕ ಧಾರೆಯಾಗಿ ತೋಡಿನಲ್ಲಿ ನೀರು ಹರಿಯುತ್ತಿರುತ್ತದೆ. ಮರದೆಲೆಯಿಂದ ಟಿಪ್ ಟಿಪ್ ಎಂದು ಬೀಳುವ ಹನಿಮುತ್ತುಗಳು. ಅದಾಗಲೇ ಸ್ನಾನ ಮಾಡಿ ಬಂದಂತೆ ಕಂಗೊಳಿಸುವ ಸ್ವಚ್ಛ ಸುಂದರವಾದ ಭೂಮಿ. ಆ ಸಂಜೆಗಳಲ್ಲಿ ಸೂರ್ಯ ಎಳೆ ಬಿಸಿಲು ಬೀರಿ ನಗುವಾಗ, ಬಯ್ಯ ಮಲ್ಲಿಗೆ ಬಿರಿದು ಕಂಪು ಸೂಸುವುದು ಇಲ್ಲಿನ ಸೌಂದರ್ಯಗಳಲ್ಲೊಂದು. ಮಳೆಗಾಲದ ಮಳೆಇಲ್ಲದ ರಾತ್ರಿಯಲ್ಲಂತೂ ಹುಳಕ್ಕೆ ರೆಕ್ಕೆ ಬಂದು ಹಾರುವ ಹಾತೆಗಳ ಉಪದ್ರವವೂ ಸಹಿಸಬೇಕು. ದೀಪದ ಬೆಳಕಿಗೆ ಹಾರುತ್ತಾ ಮನೆತುಂಬಿಕೊಳ್ಳುವ ಈ ಹಾತೆಗಳಿಂದ ಮುಕ್ತಿ ಪಡೆಯಲು ಮನೆಹೊರಗಿನ ಬಲ್ಬು ಮಾತ್ರ ಉರಿಸಿ, ಒಳಗೆ ಕತ್ತಲು ಮಾಡಿ, ಅಲ್ಪ ಹೊತ್ತಿಗೆ ಬಾಗಿಲು ಕಿಟಕಿ ಮುಚ್ಚಿ ಕುಳಿತು ಕೊಳ್ಳುವುದೂ ಒಂದು ಅನುಭವ. ಕರೆಂಟಿಲ್ಲದ ರಾತ್ರಿಯಲ್ಲಿ ಚಿಮಿಣಿ ದೀಪವನ್ನು ನೀರು ತುಂಬಿದ ಬಟ್ಟಲ ನಡುವೆ ಇಟ್ಟು ಓದಲು ಕುಳಿತಾಗಲೆಲ್ಲಾ ಬೆಳಕಿನ ಸುತ್ತ ಹಾರಿ ತನ್ನನ್ನೇ ಕಳೆದು ಕೊಳ್ಳುವ ಹಾತೆಯನ್ನೇ ಕಣ್ಬಿಟ್ಟು ನೋಡುವ ತವಕ. ಮಳೆಯ ಬಿರುಸಿನಿಂದಾಗಿ ಮೀನು ಹಿಡಿಯುವ ದೋಣಿಯನ್ನು ಮೀನುಗಾರರು ಕಡಲಿಗೆ ಇಳಿಸದೇ ಇದ್ದಾಗ, ಒಣ ಮೀನು ಸಾರಿನೊಂದಿಗೆ ಮಾಡಿದ ರಾತ್ರಿಯೂಟ. ಮಿಂಚು ಬರುತ್ತದೆಂದು ಟಿವಿ ಆಫ್ ಮಾಡಿದುದರ ಬೇಸರ. ಈ ಎಲ್ಲಾ ನೆನಪುಗಳು ಮನಸ್ಸನ್ನು ಕೆದಕುತ್ತಾ ಇವೆ. ಆದರೂ ಮುಂಗಾರು ಮಳೆಯ ಪ್ರೀತಿ ಎಲ್ಲಾ ನೆನಪುಗಳನ್ನು ಸಿಹಿಯಾಗಿರಿಸಿದೆ. ನೆನಪುಗಳ ಮಾತು ಮಧುರ ಅಲ್ಲವೇ?

- Login or register to post comments
- 793 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮುಂಗಾರು ಮಳೆಯೇ...
ಖಂಡಿತ. ಬೆಂಗಳೂರು ಅಥವ ಚೆನ್ನೈನಲ್ಲಿ ಕುಳಿತು ಅದನ್ನು ನೆನೆಸಿಕೊಳ್ಳೋದೂ ಕಷ್ಟ.
ಸುಂದರ ಪರಿಸರದ ಆ ನೆನಪು ಇದ್ದರೆ ಒಂದಷ್ಟು ಹೊತ್ತು ಅಲ್ಲಿಗೆ teleport ಆಗಿಬಿಟ್ಟಿರುತ್ತೇವೆ. ಬಹುಶಃ ಇಂತಹ ಸನ್ನಿವೇಶಗಳು ಹೀಗೆ ಮಳೆ ಬಂದು ಸುತ್ತಲು ತಣ್ಣಗಿನ ವಾತಾವರಣ ಕೂಡಿದಾಗ.
ಊರ ಆಚೆ ಇರುವ ಮನೆಗೆ ಬಂದ ಮೇಲಂತೂ ನನಗೆ ಸುತ್ತ ಮುತ್ತಲೂ ಗುಬ್ಬಚ್ಚಿಯಿಂದ ಹಿಡಿದು ಕೊಕ್ಕರೆ, ನಾಗರಹಾವು(!), ಚೇಳುಗಳಿಂದ ಹಿಡಿದು ರಾತ್ರಿ ಹೊರಬರುವ ಗೂಬೆ - ಇವುಗಳನ್ನೆಲ್ಲ ನಿತ್ಯ ಕಾಣುವಾಗ ಶಿವಮೊಗ್ಗದಲ್ಲಿ ನಾವಿದ್ದ ಹೊಸ ಬಡಾವಣೆಯ ನೆನಪಾಗುತ್ತೆ. ಕಂಪ್ಯೂಟರಿನ ಮುಂದೆ ಕೂತು ಬೇಸರವಾದಾಗ ಒಂದಷ್ಟು ಹೊತ್ತು ಹೊರಹೋಗಿ ತಣ್ಣನೆ ಗಾಳಿಯಲ್ಲಿ ನಿಂತು ಹಕ್ಕಿಗಳ ಚಿಲಿಪಿಲಿ ಕೇಳಿ ಬಂದರೆ ಎಲ್ಲ anxiety ದೂರ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮುಂಗಾರು ಮಳೆಯೇ...
ಇದನ್ನೆಲ್ಲಾ ಅನುಭವಿಸುವಾಗ ನಮ್ಮೂರಿನ ಮಳೆಯ ....
ಈ ಪ್ಯಾರಾ ತುಂಬಾ ಸೊಗಸಾಗಿದೆ. ಇಲ್ಲಿನ ಚಿತ್ರಣವನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ಸುರತ್ಕಲ್ಲಿನಲ್ಲಿ ನಾಕು ವರುಷ ಇದ್ದಾಗ ಆ ಕಡೆಯ ಮಳೆಯನ್ನು ಅನುಭವಿಸಿದ್ದೇನೆ. ಆದರೆ ನಮಗೆ ಚಳಿಗೆ ಹಿತವಾಗಿ ಜಗಿಯಲು ಬಿಸಿಬಿಸಿ ಹಪ್ಪಳ, ಸಂಡಿಗೆ ಇರುತ್ತಿರಲಿಲ್ಲ
ಮಳೆಯಲ್ಲೇ ಹಾಸ್ಟಲ್ಲಿನ ಮೆಸ್ ಗೆ ಓಡುವ ಬವಣೆ. ಕೆಲವು ಬಾರಿ ಭೀಕರವಾಗಿ ಮಳೆ ಹುಯ್ಯುವಾಗ ಬೀಚ್ ಗೆ ನಡೆದುಕೊಂಡು ಹೋಗಿ ಗಾಳಿಯ ಮತ್ತು ಅಲೆಗಳ ರಭಸವನ್ನು ಎದುರಿಸಿ ಹೇಗೋ ಜೀವ ಉಳಿಸಿಕೊಂಡು ವಾಪಸ್ಸಾಗುತ್ತಿದ್ದೆವು. ಇಂತಹ ಮೂರ್ಖತನದ ಹೊಣೆಗೇಡೀ ದಿನಗಳನ್ನೂ ಈ ಲೇಖನ ನೆನಪಿಸಿತು!
’ಬಯ್ಯ ಮಲ್ಲಿಗೆ’, ’ಸಾಂತಾಣಿ’ ಮತ್ತು ’ಹಾತೆ’ ಈ ಪದಗಳನ್ನು ಇಲ್ಲೇ ಮೊದಲಸಲ ಓದಿದ್ದು. ನಿಘಂಟನ್ನು ತೆಗೆದು ನೋಡಿದೆ; ’ಬಯ್ಯ’ ಮತ್ತು ’ಸಾಂತಾಣಿ’ ಸಿಗಲಿಲ್ಲ. ಅದರ ಪ್ರಕಾರ 'ಹಾತೆ' ಅಂದರೆ ಜಿರುಳೆ, cockroach ಎನ್ನಿಸುತ್ತದೆ. ’ಸಾಂತಾಣಿ’ ಎಂದರೆ ಸಂಡಿಗೆ ಇರಬಹುದು. ’ತೋಡು’ ಇದನ್ನು ಕಾಲುವೆ ಎನ್ನುವ ಅರ್ಥದ ನಾಮಪದವಾಗಿ ಬಳಸುವುದೂ ತಿಳಿಯಿತು. ನಿಮ್ಮ ಕಡೆಯ ಪದಗಳನ್ನು ಆದಷ್ಟೂ ತಪ್ಪದೇ ಬಳಸಿ ನನ್ನಂತಹ ನಗರದಲ್ಲಿ ಹುಟ್ಟಿಬೆಳೆದವರಿಗೆ ಪರಿಚಯ ಮಾಡಿಕೊಡಿ.
ತೆರೆದ ಆಗಸದ ...
ಈ ಸಾಲು ’ತೆರೆದ ಆಗಸದ ಚಾದರದ ಮೇಲೆ...’ ಎಂದು ಇರಬೇಕು ಎನ್ನಿಸಿತು.
ಪ್ರಭು ಮೂರ್ತಿ
ಉ: ಮುಂಗಾರು ಮಳೆಯೇ...
ಬರಹ ಚೆನ್ನಾಗಿದೆ
ನಮ್ಮೂರಿನ ಮಳೆ ಅಷ್ಟು ಜೋರಲ್ಲದಿದ್ದರೂ, ಮನೆಯಮುಂದೆ ಹರಿಯುವ ಮಳೆನೀರಿನಲ್ಲಿ ಕಾಗದದ ದೋಣಿಗಳನ್ನು ಹರಿಯಬಿಟ್ಟದ್ದೂ, ಮತ್ತೆ, ನೀರಿನ ಅಭಾವವಿರುವಾಗ, ಸೂರುನೀರನ್ನೆಲ್ಲ ಸಂಗ್ರಹಿಸಿ ತೊಟ್ಟಿಗೆ ತುಂಬುತ್ತಿದ್ದುದ್ದೂ ನೆನಪಿಗೆ ಬಂತು!
ಹಾತೆ ಎಂದರೆ ದೀಪದಹುಳು, ಅಥವಾ ಮಿಡತೆ ಅಂತ ತೋರುತ್ತೆ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಮುಂಗಾರು ಮಳೆಯೇ...
ಬಯ್ಯ ಎಂದರೆ ತುಳುವಿನಲ್ಲಿ ಸಂಜೆ ಎಂದು ಅರ್ಥ. ಸಂಜೆ ಅರಳುವ ಮಲ್ಲಿಗೆಯ ಜಾತಿಯೊಂದಕ್ಕೆ ಬಯ್ಯ ಮಲ್ಲಿಗೆ ಎನ್ನುತ್ತಾರೆ.
ಸಾಂತಾಣಿ ಎಂದರೆ ಹಲಸಿನ ಬೀಜವನ್ನು ಕೆಂಡದಲ್ಲಿ ಸುಟ್ಟು ಮಾಡುವ ಒಂದು ತಿನಿಸು.
ಲೇಖನ ಸೊಗಸಾಗಿದೆ.
ಉ: ಮುಂಗಾರು ಮಳೆಯೇ...
ಈ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು...
ಪ್ರಸ್ತುತ ಈ ಲೇಖನದಲ್ಲಿ ಕಣ್ತಪ್ಪಿನಿಂದ "ಚಾದರ" ಹಾದರ ಇಗಿ ಬಿಟ್ಟಿದೆ..ಕ್ಷಮೆಯಿರಲಿ.. ಹಿಂದಿಯಲ್ಲಿನ "ಚಾದರ್ " ನೆನಪಿಗೆ ಬಂದುದೇ ಈ ರೀತಿ ತಪ್ಪು ಬರಲು ಕಾರಣ ಎಂಬುದನ್ನು ಓದುಗರಿಗೆ ತಿಳಿಸುತ್ತಿದ್ದೇನೆ.
ಮತ್ತು ಇಲ್ಲಿ ಹೇಳಿದಂತಹಾ ಹಾತೆ ಅಂದರೆ ಮಿಡತೆಯೇ."ಹಾತೆ" ಕಾಸರಗೋಡು ಕನ್ನಡದಲ್ಲಿ ಬಳಕೆಯಲ್ಲಿದೆ. ತುಳುವಿನಲ್ಲಿ "ಪಾತೆ" ಅಂತ ಹೇಳ್ತಾರೆ.
ಬಯ್ಯ ಮಲ್ಲಿಗೆ ಅಂದರೆ ಸಂಜೆಯ ಹೊತ್ತಿನಲ್ಲಿ ಅರಳುವಂತಹ ಒಂದು ರೀತಿಯ ಹೂ. ಇಂದು ಹಳದಿ ಅಥವಾ ಪಿಂಕ್ ಬಣ್ಣಗಳಲ್ಲಿಯೂ ಇತರ ಮಿಶ್ರಬಣ್ಣದಲ್ಲಿಯೂ ಕಂಡು ಬರುತ್ತದೆ. (ತುಳುವಿನಲ್ಲಿ ಬಯ್ಯ = ಸಂಜೆ ) ಬಯ್ಯಮಲ್ಲಿಗೆ=ಸಂಜೆ ಮಲ್ಲಿಗೆ;
ಸಾಂತಾಣಿ ಅಂತ ಹೇಳಿದ್ರೆ ಹಲಸಿನ ಹಣ್ಣಿನ ಬೀಜವನ್ನು ಉಪ್ಪುಹಾಕಿ ಹದವಾಗಿ ಬೇಯಿಸಿದ ನಂತರ ಒಣಗಿಸಿಡುತ್ತಾರೆ. ಹೀಗೆ ಒಣಗಿಸಿದ ಹಲಸಿನ ಹಣ್ಣಿನ ಬೀಜ ತುಂಬಾ ಗಟ್ಟಿಯಾಗಿರುತ್ತದೆ. ಮಳೆಗಾಲಕ್ಕಾಗಿ ಇದನ್ನು ತಯಾರಿಸುವುದು ತುಳುನಾಡಿನಲ್ಲಿ ಸರ್ವೇ ಸಾಮಾನ್ಯ.
ಉ: ಮುಂಗಾರು ಮಳೆಯೇ...
’ಮಿಡತೆ’ಗೆ ಕನ್ನಡದಲ್ಲಿ ’ಪಾತರಗಿತ್ತಿ’ ಅಂತಾನೂ ಅಂತಾರೆ. ಕನ್ನಡದಲ್ಲಿ ’ಪ => ಹ’ ತಾನಪಲ್ಲಟ ನಡೆದಿರುವದರಿಂದ ಪಾತೆ=>ಹಾತೆ ಆಗಿದೆ.
ಉ: ಮುಂಗಾರು ಮಳೆಯೇ...
ಪಾತರಗಿತ್ತಿ ಅ೦ದ್ರೆ ಚಿಟ್ಟೆ ಅಲ್ವ ಸ೦ಗನಗೌಡ್ರೇ?
ಉ: ಮುಂಗಾರು ಮಳೆಯೇ...
ರಶ್ಮಿ’ಯವರೆ!! ನೀವು ಬರೆದ ಲೇಖನ ನೋಡಿದ ತಕ್ಷಣ ನನಗೆ ಮೈಸೊರಿನ ಹತ್ತಿರದ ನನ್ನ ಹಳ್ಳಿಯ ತೋಟದ ಮನೆ ನೆನಪಾಗುತ್ತೆ. ಏನೇನ್ ಹುಳ ಹುಪ್ಪಟಿಗಳಿವೆಯೋ ಮಳೆ ಸಮಯದಲ್ಲ೦ತೂ ಮನೆಯೊಳಗೆ ಹೊಕ್ಕ್ತಾ ಇದ್ದವು. ಒ೦ದು ಸಮಯದಲ್ಲಿ ನೋಡೋಕೆ ಖುಷಿ ಆದ್ರೂ, ಎಲ್ಲಿ ಕಚ್ಚುತ್ವೋ ಅ೦ತ ಭಯ ಬೇರೇ. ನಾನಿದ್ದಹಳ್ಳೀಲಿ ಆಸ್ಪತ್ರೆ ಇದ್ದ್ರು ವೈದ್ಯರು ಬೇರೇ ಇರ್ಲಿಲ್ಲ. ಮಳೆ ಯಾವದಿಕ್ಕಿನಿ೦ದ ಬರ್ತಾ ಇತ್ತು, ಬರೋದನ್ನೆ ಕಾಯ್ಥ ಇದ್ದ್ವು. ನಗರದಲ್ಲಿದ್ದೋರ್ಗೆ(city slickers) ಇದೆಲ್ಲ ಹೊಸತು ಬೇರೇ. ಈಗ ಮತ್ತೆ ಕೆಟ್ಟ ಪಟ್ಟಣ ಸೇರಿಕೊ೦ಡಿದೇವೆ ಣೊಡಿದ್ದೇವೆ.
ಉ: ಮುಂಗಾರು ಮಳೆಯೇ...
"ತೆರೆದ ಆಗಸದ ಹಾದರದ ಮೇಲೆ ಬೆಳ್ಮುಗಿಲನ್ನು ಕಾರ್ಮುಗಿಲು ತನ್ನ ತೆಕ್ಕೆಗೆಳೆದು ಕೊಂಡಾಗ ತಂಪಾದ ಗಾಳಿ ಪ್ರೀತಿಯ ಕಾವ್ಯಕ್ಕೆ ಮುನ್ನುಡಿ ಬರೆಯುತ್ತದೆ"
ಅಬ್ಬ.. ಎಂತಹ ಸಾಲು.. ಕಾರ್ಮುಗಿಲು ಗುಡುಗಿ, ಸಿಡಿಲಿಂದ ಆರ್ಬಟಿಸಿ ಬೆಳ್ಮುಗಿಲೊಟ್ಟಿಗೆ ಆಡಿದ ಕ್ರೀಡೆಯ ಬೆವರು ಹನಿಯೇ!!
ತುಂಬಾ ಚಂದವಾಗಿ ಬರೆದದ್ದೀರಿ ಎಂದು ನನಗೆ ಅನ್ನಿಸಿತು.
ಅಳಿಕೆಯಲ್ಲಿದ್ದಾಗ ಇದೇ ಅನುಬವ.. ಆ ಮಳೆ!! ಮೋಡಗಳ ಪಡೆ ದಾಳಿಟ್ಟು ’ಹೋ ಭೋ’ ಎಂದು ಬಿಡ್ಡುವಿಲ್ಲ ಬವರಗಯ್ದಂತೆ, ಆ ಅಬ್ಬರಕ್ಕೆ ಹದರಿ ಕೋಣೆಯಲ್ಲಿ ಅವಿತವರು, ಕೊಡೆಯೆಂಬ ’ರಕ್ಷೆ’ ಹಿಡಿದರೂ ಕೂಡ ಹೊರಗೆ ಇಟ್ಟ ಕಾಲನ್ನು ಮತ್ತೆ ಒಳಕ್ಕೆ ಎಳೆದುಕೊಳ್ಳವುದಂತೆ ಮಾಡುವ ಮಳೆ.
ಬೆಟ್ಟಗಾಡಿನ ಮಳೆಯೇ ಮಳೆ... ನಮ್ಮ ಬಯಲಲ್ಲಿ ಮಳೆಗಿಂತ, ಗಾಳಿಗಾಲ, ಚಳಿಗಾಲ ಸೊಗಸು!!
=====================================
ಮಾಯ್ಸ!
ಉ: ಮುಂಗಾರು ಮಳೆಯೇ...
ಮಾಯ್ಸ
ನೀವು ಅಳಿಕೆ ಯಲ್ಲಿ ಕಲಿತದ್ದೋ?
ಉ: ಮುಂಗಾರು ಮಳೆಯೇ...
ಹು ರೀ..
ನೀವು ನನಗೆ ವಾರ್ಡನ್ ಆಗಿದ್ರೆ?
ನನ್ನ ವಾರ್ಡನ್ ಒಬ್ಬರ ಹೆಸರು ಹೀಗೆ ಪ್ರಭು ಅಂತ ಇತ್ತು.. ೯ ವರ್ಶಆದವು ಮಱೆತು ಹೋಗಿದೆ.
=====================================
ಮಾಯ್ಸ!
ಉ: ಮುಂಗಾರು ಮಳೆಯೇ...
ಇಲ್ಲ ಮಾಯ್ಸ... ನನಗೆ ಆ ಶಾಲೆಯ ಬಗ್ಗೆ ಕೇಳಿ ಗೊತ್ತು... ನಮ್ ಕಡೆ ಅಳಿಕೆ ಶಾಲೆಯಲ್ಲಿ ಕಲಿತಿರುವ/ಕಲಿಯುತ್ತಿರುವ ಹುಡುಗರ ಬಗ್ಗೆ ಒ೦ದು ಅಭಿಪ್ರಾಯವಿದೆ..
ಹುಡುಗ ತು೦ಬಾ ಪೋಕ್ರಿಯಾಗಿದ್ರೆ.. ಕೆಟ್ಟ ಅಭ್ಯಾಸಗಳಿದ್ರೆ.. ಕಲಿಯೋ ಕಡೆ ಗಮನ ಕೊಡದಿದ್ರೆ.. ತು೦ಬಾ ಆಲಸಿಯಾಗಿದ್ರೆ..
ಅಳಿಕೆ ಶಾಲೆಗೆ ಕಳಿಸಿದ್ರೆ, ಬೆ೦ಡೆತ್ತಿ ಸರಿ ಮಾಡ್ತಾರೆ ಅನ್ನೊ ನ೦ಬಿಕೆ...
ನೀವೇನಾದ್ರು ಮೇಲೆ ಹೇಳಿರೋ ಗುಣಗಳನ್ನು ಹೊ೦ದಿದ್ರಾ
ಅನ೦ತ
ಉ: ಮುಂಗಾರು ಮಳೆಯೇ...
ರೀ ನಮ್ ಶಾಲೆ ಬಗ್ಗೆ ಹಂಗೆಲ್ಲ ಅನ್ನಬೇಡಿ..
ನಾವು ಸೀಯಿಟಿ ರ್ಯಾಂಕು ಪಡೆಯೋದರಲ್ಲಿ ಮೊದಲು.. ಒಮ್ಮೆ ಕಳೆದ ಎಂಟು ವರ್ಶದ ರ್ಯಾಂಕು ಪಟ್ಟಿ ನೋಡಿ...
ಮಿಕ್ಕ ಸಂಗತಿ ಬಗ್ಗೆ ನಾನು ಹೇಳಲ್ಲ.!
=====================================
ಮಾಯ್ಸ!
ಉ: ಮುಂಗಾರು ಮಳೆಯೇ...
ಮಾಯ್ಸ..
ನೀವ್ ಯಾಕ್ರಿ ಮ೦ಡ್ಯ ಬಿಟ್ಟು ಅಳಿಕೆಗೆ ಶಾಲೆಗೆ ಬ೦ದ್ರಿ?
ಅನ೦ತ
ಉ: ಮುಂಗಾರು ಮಳೆಯೇ...
ಮಾಡಕ್ಕೆ ಕೆಲಸ ಇರಲಿಲ್ಲ...
ಇರಲಿ ಬಿಡಿ.. ಅದೆಲ್ಲ ಹೞೇ ಕತೆ..
’ಒಳಗೊಳಗೆ ಹರಿಯುವವಳು ಸದಾ ಗುಪ್ತಗಾಮಿನಿ, ನನ್ನ ಶಾಲ್ಮಲಾ"
=====================================
ಮಾಯ್ಸ!