ವಾಸ್ತವ
ಮುಂಜಾನೆ ಮಿಂದು
ದೇವರಿಗೆ ನಮಿಸುವಾಗ
ಅಮ್ಮ ಹೇಳುತ್ತಿದ್ದಳಾಗ,
ಕೈ ಮುಗಿದು ಕಣ್ಮುಚ್ಚಿ ಬೇಡಿದರೆ
ಈಶ ಒಲಿವನೆಂದು..
ಸಂಧ್ಯಾವಂದನೆ ವೇಳೆ
ದೀಪ ಉರಿಸಿ ನನ್ನ ಅಜ್ಜಿ
ರಾಮನಾಮ ಜಪಿಸುತಿರಲು
ಕಣ್ಣೆರಡು ಮುಚ್ಚಿ ನಾನೂ
ದನಿಗೂಡಿಸುತ್ತಿದ್ದೆ..
ಇರುಳ ಬಾನಂಗಳದಲ್ಲಿ
ಕೋಟಿ ತಾರೆಗಳು ಮಿನುಗುವಾಗ
ನಿದ್ದೆ ಬರುತ್ತಿಲ್ಲ ತಾತ,
ಕತೆ ಹೇಳೆಂದು ಸತಾಯಿಸಿದಾಗ
ಸುಮ್ಮನೆ ಕಣ್ಣು ಮುಚ್ಚಿರು
ನಿದ್ದೆ ತಂತಾನೆ ಬರುವುದು
ಎಂದು ಅಪ್ಪ ಗದರಿಸಿದಾಗ
ಕಣ್ಣೆರಡು ಮುಚ್ಚಿ ಮಗ್ಗಲೆಳೆದು
ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ
ಬಾಲ್ಯವೆಷ್ಟು ಮಧುರವಾಗಿತ್ತು!
ಕಣ್ತೆರೆದರೆ ಸುಂದರ ಲೋಕ
ಮುಚ್ಚಿದರೆ ಸ್ವಪ್ನ ಲೋಕಕ್ಕೆ
ಪಯಣ ಬೆಳೆಸುತಲಿದ್ದೆ
ಕಾಲ ಚಕ್ರವು ತಿರುಗುತಿರಲು
ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು,
ಸುತ್ತ ಕಣ್ಣು ಹಾಯಿಸಿದರೆ...
ಹಗೆ ಹೊಗೆಯಾಡುವ ಜಗದಲ್ಲಿ
ನಗೆ ಮಾಸಿದ ಜೋಲು ಮುಖ!
ಜೀವ ತೆಗೆಯಲು ಕತ್ತಿ ಮಸೆಯುವ ಜನ,
ಇನ್ನೊಂದೆಡೆ,
ಜೀವಕ್ಕಾಗಿ ಬೇಡುವ ಮನ
ಹಣದಾಸೆಗಾಗಿ ಜೀವ ಹಿಂಡುವವರು,
ಬೇಡುವವರು, ಮುಂದೆ ಕೈ ಚಾಚಿ
ಜಗದಳುವಿನ ಮುಂದೆ
ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು
ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ
ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ
ದನಿಯೆತ್ತಲು ಚಡಪಡಿಸಿ ಸೋತಾಗ
ಎರಡು ಹನಿ ಕಣ್ಣೀರೆರೆದು
ಮತ್ತೆ,
ನನಗಿದರ ಅರಿವೇ ಇಲ್ಲದವನಂತೆ
ಕಣ್ಣು ಮುಚ್ಚಿಕೊಳ್ಳುತ್ತೇನೆ!

- Login or register to post comments
- 233 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ವಾಸ್ತವ
ಹ್ಮ್..ರಶ್ಮಿಯವರೇ, ನಗು ನಗುತ್ತ ಉತ್ಸಾಹದಿಂದಿದ್ದ "ಚಿಕ್ಕಂದು", ಅಸಹಾಯಕದೆಡೆಗೆ ನೂಕಿರುವ "ದೊಡ್ಡಿಂದು" ನಡುವಿನ ದ್ವಂದ್ವವನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ. ಆದರೆ ಅಲ್ಲೇ ನಿಲ್ಲದೆ ಹೊರಬನ್ನಿ. "ಅಸಹಾಯಕತೆಯನ್ನು ನಾನು ಮೀರಬಲ್ಲೆ" ಎಂಬುದನ್ನು ನಿರೂಪಿಸಿ.
"ಅರಿವಿಗೆ ಮೀರಿದ ನಿಲುವಿನೊಳಿಹುದು ನಮ್ಮಯ ಗೆಲುವು". ಕನ್ನಡದ ಕವಿರಾಜಮಾರ್ಗಕಾರನೇ ಹೇಳಿರುವ ಹಾಗೆ, ವಿಷಾದವೇ ನಮ್ಮ ಶತ್ರು.
ನಗೆ ಮಾಸಿದ ಜೋಲು ಮೊಗದಲ್ಲಿ ಮಂದಹಾಸವನ್ನು ಬೀರುವಂತಹ ಶಕ್ತಿ ನೀವಾಗಿ. ಕತ್ತಿಮಸೆಯುತ್ತಿರುವ ಜನ ಮೇಣ್ ಕೈಚಾಚಿರುವ ಜನರನ್ನು ನೋಡುವಾಗ ಅಸಹಾಯಕ ದಿಟ್ಟಿನಲ್ಲಿ ನೋಡದೆ, ಅದನ್ನು ಒಪ್ಪಿಕೊಂಡು ಅದನ್ನು ಮೀರಿನಿಲ್ಲಲು ನಾನು ಏನು ಮಾಡಬಹುದು ಎಂಬುದನ್ನು ಯೋಚಿಸಿ. ಕಟ್ಟುಪಾಡುಗಳ ಸೆರೆಮನೆಯಲ್ಲಿ, ಚಡಪಡಿಸದೆ, ನಿಮ್ಮ ಅನಿಸಿಕೆಗಳನ್ನು, "ನಿಮ್ಮತನವನ್ನು ಮನದಟ್ಟು ಮಾಡುವ" ನಿಟ್ಟಿನಲ್ಲಿ ಹಂಚಿಕೊಳ್ಳಿರಿ. ಹೇಗೆ ಇದನ್ನೆಲ್ಲ ಮಾಡೋದು ? ಯೋಚಿಸಿ, ಇದರ ಬಗ್ಗೆಯೂ ಒಂದು ಕವನ ಬರೆದು ಹಾಕಿ. ಓದಿ ಸಂತೋಷಪಡ್ತೀವಿ.
ಚಿಕ್ಕಂದೂ ಚೆನ್ನಾಗಿತ್ತು, ದೊಡ್ಡಿಂದೂ ಚೆನ್ನಾಗಿದೆ, ಹೆಮ್ಮುಂದೂ ಚೆನ್ನಾಗಿರತ್ತೆ ಅಂತ ಯಾವಾಗಲೂ ಅಂದುಕೊಳ್ತಾ ಇರಿ. ಸದ್ಯಕ್ಕೆ, ನಿಮಗೆ "ದೊಡ್ಡಿಂದು ಚೆನ್ನಾಗಿಲ್ಲ" ಅನ್ನೋದೇ ವಾಸ್ತವವಾಗಿ (ಕವನದ ಹೆಸರು) ಕಾಣ್ತಾ ಇದೆ. ಆದರೆ "ನೀವಂದುಕೊಂಡಿರುವ ವಾಸ್ತವ", ನಿಜವಾದ ವಾಸ್ತವಕ್ಕೆ ಮಸುಕು ಹಾಕಿರಬಹುದು, ಅಲ್ವಾ !!!!!
ಉ: ವಾಸ್ತವ
ಹಾಯ್ ಸುನಿಲ್ ಅವರೇ,
ನಿಮ್ಮ ಒಲವಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಸ್ತುತ ನನ್ನ ಭಾವನೆಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದೀರಿ. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನಾನು ಎಂದೂ ಋಣಿಯಾಗಿರುವೆ.ಹಾಗಯೇ ನೀವು ಹೇಳಿದಂತೆ ಜೋಲು ಮುಖಗಳಲ್ಲಿ ನಗು ತುಂಬಲು ಪ್ರಯತ್ನಿಸುವೆ.
ಇತೀ,
ರಶ್ಮಿ.ಪೈ