ಲೇಖಕರು ಹಾಗೂ ಅವರ ‘ಚರಿತ್ರೆ’ಗಳು
ಆತ್ಮಕಥೆಗಳು ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡತೊಡಗಿವೆ. ನಮ್ಮದೇ ನಾಡಿನಲ್ಲಿ ಈ ಆತ್ಮಕಥೆಗಳು ಬೇರೆಲ್ಲಾ ಸಾಹಿತ್ಯಕ್ಕಿಂತ ಹೆಚ್ಚಿನ ಪ್ರಚಾರ ಪಡೆದದ್ದನ್ನು ಕಂಡಿದ್ದೇವೆ. ಎಚ್.ವಿಶ್ವನಾಥ್ರ ಆತ್ಮಕತೆ ‘ಹಳ್ಳಿ ಹಕ್ಕಿ ಹಾಡು’ ಅವರ ‘ಆತ್ಮಕಥನ’ಕ್ಕಿಂತ ಹೆಚ್ಚಾಗಿ ಬೇರೆ ವಿಷಯಕ್ಕೆ ಸುದ್ದಿಯಾದದ್ದನ್ನು ಕಂಡು ನಾವು ಅಸಹ್ಯಪಟ್ಟುಕೊಂಡಿದ್ದೇವೆ. ಭಾರತ ಮೂಲದ ಆಂಗ್ಲ ಲೇಖಕ ವಿ.ಎಸ್.ನೈಪಾಲ್ರ ಜೀವನ ಚರಿತ್ರೆ ಬಿಡುಗಡೆಯಾದಾಗಲೂ ಭಾರೀ ಸುದ್ದಿಯಾಗಿತ್ತು. ಆತ ತನ್ನ ಹೆಂಡತಿಯನ್ನು ಹಿಂಸಿಸುತ್ತಿದ್ದ, ಆತನೊಬ್ಬ ಸ್ಯಾಡಿಸ್ಟ್ ಆಗಿದ್ದ ಎಂಬುದಾಗಿ ಪತ್ರಿಕೆಗಳು ಹೊತ್ತುತಂದ ಸುದ್ದಿಯನ್ನು ಓದಿ ಗಂಟಲು ಒಣಗುವವರೆಗೆ ಚರ್ಚಿಸಿ, ಘರ್ಜಿಸಿ ತಣ್ಣಗೆ ನೀರು ಕುಡಿದು ನಿರಾಳವಾಗಿದ್ದೇವೆ. ಇತ್ತೀಚೆಗೆ ಪ್ರಕಟವಾದ ಬ್ರೆಜಿಲ್ನ ಲೇಖಕ ಪಾಲೋ ಕೋಯ್ಲೊನ ಜೀವನ ಚರಿತ್ರೆ ಮೆಲ್ಲಗೆ ಅಲೆಗಳನ್ನೆಬ್ಬಿಸುತ್ತಿದೆ.
‘ದಿ ಆಲ್ಕೆಮಿಸ್ಟ್’ ಎಂಬ ಒಂದೇ ಪುಸ್ತಕದಿಂದ ಜಗತ್ಪ್ರಸಿದ್ಧನಾದ ಕೋಯ್ಲೊ ಬರೆದದ್ದೆಲ್ಲಾ ತನ್ನ ಮಾತೃಭಾಷೆ ಬ್ರೆಜಿಲ್ಲಿಯನ್ನಲ್ಲಿಯೇ. ಆತನ ಪುಸ್ತಕಗಳು ಜಗತ್ತಿನ ನಲವತ್ತು ಭಾಷೆಗಳಿಗೆ ತರ್ಜುಮೆಯಾಗಿ ಸುಮಾರು ನೂರೈವತ್ತು ದೇಶಗಳಲ್ಲಿ ಮಾರಾಟವಾಗುತ್ತಿವೆ ಎಂದರೆ ಆತನ ಪ್ರಸಿದ್ಧಿಯನ್ನು ಊಹಿಸಿ. ‘ವೆರೋನಿಕಾ ಡಿಸೈಡ್ಸ್ ಟು ಡೈ’ (ವೆರೋನಿಕಾ ಸಾಯಲು ನಿರ್ಧರಿಸಿದಳು) ಕೃತಿಯೇ ಮುನ್ನೂರು ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆಯಂತೆ! ಇಂಥ ಲೇಖಕ ಚಿಕ್ಕಂದಿನಲ್ಲಿ ಹುಚ್ಚಾಸ್ಪತ್ರೆಯಲ್ಲಿದ್ದ, ವಿಪರೀತದ ಲೈಂಗಿಕ ಪ್ರಯೋಗಗಳನ್ನು ಮಾಡಿದ್ದ, ಸಲಿಂಗಕಾಮಿಯಾಗಿದ್ದ, ಅನಾರ್ಕಿಸ್ಟ್ ಆಗಿದ್ದ ಎಂಬ ಸಂಗತಿಗಳು ಮೊರಾಯಿಸ್ ಎಂಬ ಬ್ರೆಜಿಲ್ ಲೇಖಕ ಬರೆಯುತ್ತಿರುವ ಆತನ ಜೀವನಚರಿತ್ರೆಯಲ್ಲಿ ದಾಖಲಾಗಿವೆಯಂತೆ! ಜಗತ್ತಿನ ಪ್ರಸಿದ್ಧ ಲೇಖಕನಾಗಬೇಕು ಎಂಬ ಏಕೈಕ ಆಸೆಯನ್ನು ಹೊಂದಿದ್ದ ಕೋಯ್ಲೊ ಅದಕ್ಕಾಗಿ ಮಾಟವನ್ನೂ ಮಾಡಿಸಿದ್ದ ಎನ್ನಲಾಗಿದೆ. ಮೊರಾಯಿಸ್ಗೆ ನೀಡಿರುವ ಸುಮಾರು ಇನ್ನೂರು ಖಾಸಗಿ ಡೈರಿ ಹಾಗೂ ಟೇಪುಗಳಲ್ಲಿ ಆತನ ವರ್ಣರಂಜಿತ ಇತಿಹಾಸದ ವಿವರಣೆಯಿದೆಯಂತೆ. ಅವುಗಳನ್ನು ಆಧರಿಸಿ ಮೊರಾಯಿಸ್ ಸುಮಾರು ಆರುನೂರು ಚಿಲ್ಲರೆ ಪುಟಗಳ "O Mago" ("The Wizard") ಎಂಬ ಹೆಸರಿನ ಜೀವನಚರಿತ್ರೆಯನ್ನು ಬರೆದಿದ್ದಾನಂತೆ.
ಬ್ರಿಜಿಲ್ಲಿನಲ್ಲಿ ಮಿಲಿಟರಿ ಸರ್ವಾಧಿಕಾರವಿರುವಾಗ ಅನಾರ್ಕಿಸ್ಟ್ ಚಿಂತನೆಯ ಬೆನ್ನು ಹತ್ತಿ ಅದನ್ನು ಪ್ರಚುರಪಡಿಸುವುದಕ್ಕಾಗಿ ಒಂದು ರಹಸ್ಯ ಸಂಸ್ಥೆಯನ್ನು ಹುಟ್ಟು ಹಾಕುವ ಪ್ರಯತ್ನದಲ್ಲಿ ಮಿಲಿಟರಿ ಆಡಳಿತದ ಕೆಂಗಣ್ಣಿಗೆ ಗುರಿಯಾದ ಕೋಯ್ಲೊ ಸೆರೆಮನೆವಾಸವನ್ನೂ ಕಾಣಬೇಕಾಯಿತು. ಸೆರೆಮನೆವಾಸದ ಸಮಯದಲ್ಲಿ ಆತನಿಗೆ ಚಿತ್ರ ಹಿಂಸೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ನಿಜಕ್ಕೂ ಲೇಖಕರ ವಯಕ್ತಿಕ ಬದುಕು ಅಷ್ಟು ವರ್ಣರಂಜಿತವಾಗಿರುತ್ತದೆಯೋ ಅಥವಾ ಜೀವನಚರಿತ್ರೆಯೂ ಅವರ ಪುಸ್ತಕಗಳ ಹಾಗೆಯೇ ಬಿಕರಿಯಾಗಲಿ ಎಂದು ಸತ್ಯಕ್ಕೆ ದೂರಾದ ಮಸಾಲೆ ಮಾಹಿತಿಗಳನ್ನು ಸೇರಿಸುತ್ತಾರೋ?

- Login or register to post comments
- 415 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಲೇಖಕರು ಹಾಗೂ ಅವರ ‘ಚರಿತ್ರೆ’ಗಳು
ಗುಱುಱಾಜ
www.kannadaguru.blogspot.com
ನಿಜ ಸುಪ್ರೀತ್ ,ನನಗೂ ಕೆಲವೊಮ್ಮೆ ಈ ಸ೦ದೇಹ ಬ೦ದಿದೆ.ಆತ್ಮಚರಿತ್ರೆಯ ಪುಸ್ತಕಗಳೂ ಕೆಲವೊಮ್ಮೆ ಈ ತರಹದ ಸ೦ಶಯಗಳನ್ನು ಉ೦ಟುಮಾಡುತ್ತವೆ.ತಾವು ಪ್ರೋತಿಮಾ ಬೇಡಿಯ ಜೀವನ ಚರಿತ್ರೆ "ಟೈ೦ ಪಾಸ್ "ಓದಿದರೆ ಗೊತ್ತಾಗುತ್ತದೆ.ನನಗೇ ತು೦ಬಾ ಇಷ್ಟವಾದ ಆತ್ಮಚರಿತ್ರೆಯೆ೦ದರೇ ಸಿದ್ದಲಿ೦ಗಯ್ಯನವರ "ಊರು ಕೇರಿ ".ಮೇಲ್ನೋಟಕ್ಕೆ ಹಾಸ್ಯ ಎನಿಸಿದರೂ, ನಗಿಸುತ್ತಲೇ ದಲಿತರ ಆಗಿನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸುವ ಅವರ ಶೈಲಿ ತು೦ಬಾ ಇಷ್ಟವಾಗುತ್ತದೆ.ಸ್ವತ: ದಲಿತರ ಕಷ್ಟಗಳ ಬಗ್ಗೆ ಒತ್ತಿ ಹೇಳಿರದಿದ್ದರೂ ಒದುಗರಿಗೆ ತಾನಾಗಿಯೇ ಅರ್ಥವಾಗುವ ಸಿದ್ದಲಿ೦ಗಯ್ಯನವರ ಶೈಲಿ ಮೆಚ್ಚುವ೦ತಹುದು.
ಉ: ಲೇಖಕರು ಹಾಗೂ ಅವರ ‘ಚರಿತ್ರೆ’ಗಳು
ಹೂಂ, ನನ್ನ ಬಳಿಯೂ ಸಿದ್ಧಲಿಂಗಯ್ಯನವರ ಊರು ಕೇರಿ ಪುಸ್ತಕವಿದೆ. ಓದಲು ಸಾಧ್ಯವಾಗಿರಲಿಲ್ಲ. ನೀವು ಈಗ ಹೇಳಿದ್ದು ಕೇಳಿದರೆ ಅದನ್ನು ಈಗಲೇ ಕುಳಿತು ಓದಿ ಮುಗಿಸಬೇಕು ಅನ್ನಿಸುತ್ತಿದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com