ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಮಾಧ್ಯಮ ಎತ್ತ ಹೋಗುತ್ತಿದೆ?
ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಹಲವಾರು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಉದ್ಭವವಾಗುತ್ತಲೇ ಇದೆ. ನಾಲ್ಕು ಗೋಡೆಗಳ ಬೆಚ್ಚನೆಯ ವಾತಾವರಣದಲ್ಲಿ ಏನೋ ಕಂಪನವಾಗುತ್ತದೆ. ಅದು ಪಕ್ಕದ ಮನೆಯವರಿಗೆ ಗೊತ್ತಾಗುವುದಕ್ಕೂ ಮುನ್ನ ಮಾಧ್ಯಮದ ಕಿವಿಗೆ ಬಿದ್ದಿರುತ್ತದೆ. ಇದ್ದಕ್ಕಿದ್ದಂತೆ ಕ್ಯಾಮೆರಾಗಳು, ಮೈಕ್ಗಳು, ಲೋಗೋಗಳು, ಪೆನ್, ಪ್ಯಾಡ್ಗಳು ಬಂದಿಳಿಯುತ್ತವೆ. ಅದುವರೆಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ನಮ್ಮ ಖಾಸಗಿ ಬದುಕು ಮನೆಮನೆಗಳ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬೆತ್ತಲಾಗಿ ಬಿದ್ದುಬಿಡುತ್ತದೆ.
ಮಾಧ್ಯಮಕ್ಕೆ ಈ ಹಕ್ಕು ಕೊಟ್ಟವರು ಯಾರು? ಇನ್ನೊಬ್ಬರ ಖಾಸಗಿ ಬದುಕನ್ನು ಸಾರ್ವತ್ರಿಕಗೊಳಿಸುವ ಜರೂರತ್ತು ಏನಿದೆ?
ಇಲ್ಲಿ ನನಗೆ ಹಳೆಯ ಮಾತೊಂದು ನೆನಪಾಗುತ್ತದೆ: ’ಸಾರ್ವಜನಿಕ ವ್ಯಕ್ತಿಗೆ ಖಾಸಗಿ ಬದುಕು ಇರಲಾರದು’.
ಆದರೆ, ಖಾಸಗಿ ಎನ್ನುವ ಶಬ್ದ ಹುಟ್ಟಿದ್ದೇ ಸಾರ್ವಜನಿಕ ಶಬ್ದಕ್ಕೆ ಎದುರಾಗಿ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಾ ಕ್ಷಣಗಳಿರುತ್ತವೆ. ಅವು ಹಾಗಿದ್ದರೇ ಚೆನ್ನ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗೆ ಖಾಸಗಿ ಬದುಕಿರಬಾರದೆ? ಗಂಡ-ಹೆಂಡತಿಯ ನಡುವೆ ಮುನಿಸಿನ ಕ್ಷಣಗಳು ಸಾವಿರ ಇರುತ್ತವೆ. ಅವು ಅವರವರ ನಡುವೆಯೇ ಬಗೆ ಹರಿಯಬೇಕು. ನಮ್ಮ ಮನೆಯಲ್ಲಿಯೂ ಸಂದರ್ಭ ಬಂದಾಗ ಅಪ್ಪ-ಅವ್ವ ಜಗಳ ಮಾಡುತ್ತಾರೆ. ಮುನಿಸಿಕೊಂಡು ದಿನಗಟ್ಟಲೇ ಮಾತು ಬಿಡುತ್ತಾರೆ. ಮತ್ತೆ ಅದೆಲ್ಲವನ್ನೂ ಮರೆತು ನಗುತ್ತಾರೆ. ಇದು ಎಲ್ಲ ಕುಟುಂಬಗಳಲ್ಲಿ ಇದ್ದದ್ದೇ. ಇದನ್ನು ಸಾರ್ವತ್ರಿಕ ಮಾಡುವ ಅನಿವಾರ್ಯತೆಯಾದರೂ ಏನಿದೆ?
ಮಾಧ್ಯಮ ಇಷ್ಟೊಂದು ನಿರ್ಭಾವುಕವಾಗಿದ್ದು ಏಕೆ? ಅಂಥ ಜರೂರತ್ತು ಏನಿದೆ? ಕೈಮುಗಿದು ಅಂಗಲಾಚುತ್ತಿದ್ದರೂ ಬಿಡದೇ ಅವರನ್ನು ಪ್ರಶ್ನಿಸುವ ಮೂಲಕ, ಅವರು ಆಗಲೇ ಅನುಭವಿಸುತ್ತಿರುವ ನೋವನ್ನು ಇನ್ನಷ್ಟು ಹೆಚ್ಚಿಸುವ ಹಕ್ಕು ಮಾಧ್ಯಮಕ್ಕೆ ಇಲ್ಲ. ಯಾರಿಗೂ ಆ ಹಕ್ಕಿಲ್ಲ. ಪ್ರತಿಯೊಬ್ಬರೂ ತಂತಮ್ಮ ವಿವೇಚನೆ ಬಳಸಿಕೊಂಡು ಸಂದರ್ಭವನ್ನು ನಿಭಾಯಿಸಬೇಕು. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಇನ್ನೊಬ್ಬರ ಬದುಕನ್ನು ಬೀದಿಗೆಳೆಯುವುದು ಬೇಡ.
ಹಾವೇರಿ ಘಟನೆಯಾಗಿರಬಹುದು, ಧಾರವಾಡದ ಹಿಂಸಾಚಾರ ಆಗಿರಬಹುದು, ಉಡುಪಿ ಶಾಸಕರ ಪತ್ನಿ ಪದ್ಮಪ್ರಿಯ ಪ್ಕಕರಣವಾಗಿರಬಹುದು. ಮಾಧ್ಯಮ ಸಂಯಮ ವಹಿಸಬೇಕು. ಅಂಥ ಸುದ್ದಿಗಳನ್ನು ನೋಡದಿರುವ, ಪ್ರತಿಕ್ರಿಯೆ ನೀಡದಿರುವ, ಬಾಯಿ ಚಪ್ಪರಿಸದಿರುವ ಮಾನವೀಯತೆಯನ್ನು ನಾವು ಕೂಡ ತೋರಬೇಕು.
ಇಲ್ಲದಿದ್ದರೆ ನಮಗೆ ಖಾಸಗಿ ಜೀವನ ಎಂಬುದೇ ಉಳಿಯುವುದಿಲ್ಲ.
- ಪಲ್ಲವಿ ಎಸ್.

- Login or register to post comments
- 935 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಪಲ್ಲವಿ,
ಮಾಧ್ಯಮಗಳು ಇತ್ತೀಚೆಗೆ ಮಿತಿಮೀರಿ ವರ್ತಿಸುತ್ತಿವೆ, ಮತ್ತು ಅದು ಪ್ರಜ್ಞಾವಂತ ಜನತೆಯ ಅರಿವಿಗೆ ಬರುತ್ತಿದೆ ಎಂಬ ಅಂಶವನ್ನು ನಿಮ್ಮ ಬರಹದಲ್ಲಿ ವಸ್ತುನಿಷ್ಠವಾಗಿ ಮಂಡಿಸಿದ್ದೀರಿ. ಕೆಲ ದಿನಗಳ ಹಿಂದೆ ’ಪರಾಗಸ್ಪರ್ಶ’ ಅಂಕಣದಲ್ಲಿ ಈ ಕುರಿತು ನಾನೂ ಒಮ್ಮೆ ಬರೆದಿದ್ದೆ.
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ನಿಮ್ಮ ಅಂಕಣ ಓದಿದ್ದೇನೆ.
ಆದರೆ, ಪದ್ಮಪ್ರಿಯ ಅಥವಾ ಅಂಥ ವಿಷಯಗಳು ಬಂದಾಗ, ಮತ್ತೆ ಮತ್ತೆ ನೀವು ಬರೆದಂಥ ಬರಹಗಳನ್ನು ಬರೆಯುತ್ತ ಹೋಗಬೇಕಾಗುತ್ತದೆ. ಇದು ದುರಂತ.
ಈ ಕುರಿತು ಸಮಾನ ಮನಸ್ಕರು ನಿರಂತರವಾಗಿ ಜಾಗೃತಿ ಮೂಡಿಸಲು ಯತ್ನಿಸಬೇಕು. ಮೊದಲು ನಾವು-ನಾವೇ ಜಾಗೃತರಾಗಬೇಕು. ಕೆಲವು ನೂರು ಜನರಷ್ಟಿರುವ ಮಾಧ್ಯಮದವರಲ್ಲಿ, ತಾವು ಮಾಡುತ್ತಿರುವುದು ನಿರ್ಲಜ್ಜ ಸಂಗತಿ. ಒಂದು ಹಂತದಲ್ಲಿ, ಅದು ನೀಚತನ ಎಂಬುದನ್ನು ಮನದಟ್ಟು ಮಾಡಲು ಯತ್ನಿಸಬೇಕು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಪಲ್ಲವಿ
ನನಗೆ ರಕ್ತ ಕುದ್ದು ಹೋಗಿದೆ.
ಈ ಮಾಧ್ಯಮದವರು ತಮ್ಮಿಂದಲೇ ಈ ಸಮಾಜ ಉತ್ತಮಗೊಳ್ಳಲು ಸಾಧ್ಯ ಎಂದು ಭಾವಿಸಿದ್ದಾರೆ
ಮಾಧ್ಯಮದವರಿಗೆ ಒಂದು ನೀತಿ ಸಂಹಿತೆ ಇರಬೇಕು.
ಉಡುಪಿ ಶಾಸಕರದ್ದೂ ಒಂದು ಸಂಸಾರವೆ ಅವರೂ ನಮ್ಮಂತೆ ಮನುಷ್ಯರೇ
ಎಲ್ಲರ ಮನೆಯೂ ತೂತೆ ಎಂಬ ಸತ್ಯ ಇವರಿಗೆ ಏಕೆ ಅರಿವಾಗಿಲ್ಲ.
ಸುಮ್ಮನೆ ಅವರ ಬಾಳನ್ನು ಬಟಾಬಯಲಾಗಿಸುವ ಸ್ವಾತಂತ್ರವನ್ನು ಇವರಿಗೆ ಕೊಟ್ಟವರಾರು?
http://thereda-mana.blogspot.com/
ರೂಪ
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
"ಸುಮ್ಮನೆ ಅವರ ಬಾಳನ್ನು ಬಟಾಬಯಲಾಗಿಸುವ ಸ್ವಾತಂತ್ರವನ್ನು ಇವರಿಗೆ ಕೊಟ್ಟವರಾರು?"
ಸ್ವಾತಂತ್ರ ಗೊತ್ತಿಲ್ಲ, ಆದರೆ ಇದಕ್ಕೆ ಪ್ರೆರಣೆ ಸಾಮಾನ್ಯ ಜನತೆಯಾದ ನಾವೆ. ಒಂದು sensational ಸುದ್ದಿಗೆ ಹೆಚ್ಚು viewership, TRP ratings, popularity ಇರುವುದರಿಂದಲೇ ಮಾಧ್ಯಮದವರು ಇದರಿಂದ ಹೆಚ್ಚು ಆದಾಯ ಬರುತ್ತೆಂದು ಜಾಸ್ತಿ ಹಾಕುವುದು. ಒಬ್ಬರಿಗಿಂತಲೂ ಒಬ್ಬರು ಹೆಚ್ಚು ವಿವಾದಾತ್ಮಕ, ವೈಯಕ್ತಿಕ ಸುದ್ದಿಗಳನ್ನು ಬಿತ್ತರಿಸುವುದು. ಮನುಷ್ಯನಿಗೆ ಬೇರೆಯವರ ಬಗ್ಗೆ ತಿಳಿಯುವ ಈ ಚಪಲ, ಕುತೂಹಲ ಎಂದು ಕೊನೆಗೊಳ್ಳುತ್ತೆ ನೀವೇ ಹೇಳಿ? ಇಂತಹ ಸುದ್ದಿಗಳನ್ನು ಛೀ!ಥೂ! ಎಂದು ಲೊಚಗುಟ್ಟುತ್ತಲೇ ನೋಡುತ್ತೇವೆ, ಕೇಳುತ್ತೇವೆ. ಇದೊಂದು ಕೊನೆಗೊಳ್ಳದ vicious cycle. ಜನರು ನೋಡುತ್ತಾರೆಂದು ಚಾನೆಲ್ಗಳು ಪ್ರಸಾರ ಮಾಡುತ್ತವೆ. ಅವರು ಪ್ರಸಾರ ಮಾಡುತ್ತವೆಯೆಂದು ನಾವು ನೋಡುತ್ತೇವೆ. ಟಿ.ವಿ.ಯಂತೂ ಬಿಸಾಡುವುದಿಲ್ಲ, ಪೇಪರ್ನಂತೂ ಹರಿದು ಹಾಕುವುದಿಲ್ಲ
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಕಲ್ಪನಾ
ಎಲ್ಲೋ ಒಂದೆಡೆ ಒಂದು ನೂರು ಜನ ಕುಳಿತು ಮಾಡುವ ಈ TRP Ratings ಕೋಟ್ಯಾಂತರ ಜನರನ್ನ ಪ್ರತಿನಿಧಿಸುವುದಿಲ್ಲ.
ನನಗಂತೂ ಗಣ್ಯರಿರಲಿ ನಮ್ಮ ನೆಂಟರ ವೈಯುಕ್ತಿಕ ಬದುಕಿನ ಬಗ್ಗೆಯೇ ಆಸಕ್ತಿ ಇಲ್ಲ .
ಮಾಧ್ಯಮಗಳು ಬೇರೊಬ್ಬರ ಖಾಸಗಿ ವಿಷಯಗಳನ್ನು ತೋರಿಸುವಾಗ ನಾವುಗಳು ಅಂದರೆ ವೀಕ್ಶಕರು ವಿರೋಧಿಸಬೇಕು. ಇಂತಹವಕ್ಕೆಲ್ಲಾ ನಾವು ಬೆಲೆ ಕೊಡುವುದಿಲ್ಲ ಎಂದು ತೋರಿಸಿದಾಗಷ್ಟೆ ಈ ವರ್ತನೆ ದೂರಾಗುತ್ತದೆ
http://thereda-mana.blogspot.com/
ರೂಪ
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ನೀವು ಹೇಳಿದ್ದು ಸರಿ ಕಲ್ಪನಾ, ಅವರಿಗೆ ಸ್ವಾತಂತ್ರ ಕೊಟ್ಟಿದ್ದು ’ನಾವೇ’. ನಾವೆಲ್ಲ ಬಾಯಿ ಚಪ್ಪರಿಸಿಕೊಂಡು ಇನ್ನೊಬ್ಬರ ಜೀವನ ನೋಡುತ್ತೇವೆ ಎಂಬುದು ಅವರಿಗೆ ಗೊತ್ತಿದೆ. ಅದಕ್ಕೆಂದೇ ಪರಿಸ್ಥಿತಿ ಈ ಹಂತ ತಲುಪಿರುವುದು.
ಇನ್ನೊಂದು ಮುಖ್ಯ ಸಂಗತಿ ಎಂದರೆ, ಒಬ್ಬರು ಸುದ್ದಿ ಹಾಕುತ್ತಾರೆ ಎಂದು ಇಷ್ಟವಿಲ್ಲದಿದ್ದರೂ ಇನ್ನೊಬ್ಬರೂ ಅದೇ ಕೆಲಸ ಮಾಡುತ್ತಾರೆ. ಇದು ಒಂದು ಚಟದಂತೆ, ರೂಟಿನ್ನಂತೆ ಆಗಿಬಿಟ್ಟಿದೆ.
ನಾವು ಮಾಡಬಹುದಾದದ್ದು ಎಂದರೆ, ಇಂತಹ ಸುದ್ದಿ ಬಂದ ಕೂಡಲೇ ಚಾನೆಲ್ ಬದಲಿಸುವುದು. ಅದೊಂದೇ ಈ ಎಲ್ಲ ಅನಾಚಾರವನ್ನು ನಿಯಂತ್ರಿಸಬಲ್ಲುದು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ನಿಜ ರೂಪಾ,
ಮಾಧ್ಯಮಗಳು ತಮಗೆ ವಿಶೇಷ ಶಕ್ತಿಯಿದೆ ಎಂದು ಭಾವಿಸಿಕೊಂಡಿವೆ. ಅದು ಭ್ರಮೆ ಎಂಬುದನ್ನು ತೋರಿಸಿಕೊಡುವುದು ಸರ್ಕಾರದ ಕರ್ತವ್ಯವಷ್ಟೇ ಅಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಹೌದು.
ಆದರೆ, ಮಾಧ್ಯಮಗಳನ್ನು ನೇರವಾಗಿ ಹತೋಟಿಯಲ್ಲಿಡುವುದು ಕಷ್ಟ. ಜನರ ಅಭಿರುಚಿಯ ಮೇಲೆಯೇ ಅವು ಆಟವಾಡೋದು. ಅದಕ್ಕಾಗಿ ನಾವು ನಮ್ಮ ಹವ್ಯಾಸವನ್ನು ಬದಲಿಸಿಕೊಳ್ಳಬೇಕಿದೆ. ನಿಮಗೆ ನೆನಪಿರಬಹುದು: ಮೊದಮೊದಲು ಕ್ರೈಂ ಧಾರಾವಾಹಿಗಳು ಅದೆಷ್ಟು ಜನಪ್ರಿಯವಾಗಿದ್ದವು. ಬರಬರುತ್ತ ಜನಕ್ಕೆ ಅದು ಬೇಸರ ತರಿಸಿತು. ಈಗ ಅವು ತಮ್ಮ ವರ್ಚಸ್ಸು ಕಳೆದುಕೊಂಡಿವೆ. ಜನಕ್ಕೆ ಬೇಡವಾಗಿದ್ದನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ?
ಆದ್ದರಿಂದ ಖಾಸಗಿ ಬದುಕಿಗೆ ಕೈ ಹಾಕಿದ ಸುದ್ದಿಗಳನ್ನು ಚಪ್ಪರಿಸುವ ಹವ್ಯಾಸವನ್ನು ನಾವು ತ್ಯಜಿಸಬೇಕು. ಆಗ ಮಾತ್ರ ನಿಜವಾದ ಬದಲಾವಣೆ ಪ್ರಾರಂಭವಾದೀತು.
ಉಡುಪಿ ಶಾಸಕರ ಪತ್ನಿಯನ್ನು ಅರ್ಧ ಕೊಂದಿದ್ದು ಮಾಧ್ಯಮವೇ. ಇದನ್ನು ಎಲ್ಲರಿಗೂ ಮನದಟ್ಟು ಮಾಡಬೇಕಿದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಈ ಪ್ರಶ್ನೆ ನನಗು ಬಹಳ ಕಾಡಿದೆ, ಮಾಧ್ಯಮದವರು ತಮ್ಮ ಜನಪ್ರಿಯತೆ ಗಳಿಸುವ ಹಾದಿಯಲ್ಲಿ ತಮಗಿಷ್ಟ ಬಂದಂತೆ ಹೇಳಿಕ ನೀಡುತ್ತಾರೆ. ಆಸ್ಪತ್ರೆಯಲ್ಲಿ ರೋಗಿಯನ್ನು, ತೊಂದರೆಗೀಡಾದವರನ್ನು, ಸತ್ತವರ ಸಂಬಂದಿಗಳನ್ನು, ಸತ್ತವರ ಮನೆಗೆ ಹೋಗಿ ಎಲ್ಲಾ ವಿಷಯಗಳನ್ನು ಸಂಗ್ರಹಿಸುವುದು, ಅಲ್ಲಿ ಪ್ರಶ್ನೆಗಳನ್ನು ಕೇಳಿ ತಾವು latest ವಾರ್ತೆಯನ್ನು ತಿಳಿಸುತ್ತಿದ್ದೇವೆ, ಎಂದು ಜನರಿಗೆ ತಿಳಿಸುವ ತವಕ. ಇವರ ಕುತೂಹಲ ಎಷ್ಟಿರುತ್ತೆ ಅಂದ್ರೆ ಅಂತ್ಯ ಸಂಸ್ಕಾರದವರೆಗೂ ಹೋಗುತ್ತದೆ. ಅಲ್ಲಿ ಯಾರಾದರೂ ಸಿಕ್ಕರೆ ಅಲ್ಲೂ ಅವರನ್ನು ಇಂಟರ್ವ್ಯೂ ಮಾಡ್ತಾರೆ. ಯಾರಾದರೂ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರೆ ಅದನ್ನೆ ದೊಡ್ಡ ವಿಷ್ಯವನ್ನಾಗಿ ಮಾಡ್ತಾರೆ. ಈ ಹಕ್ಕು ಅವರಿಗೆ ಯಾರು ಕೊಟ್ರೊ ಏನೊ ನಾ ಕಾಣೆ, ಮತ್ತೊಂದು ರೀತಿಯಲ್ಲಿ ನೋಡಿದ್ರೆ ಜನರು ತಮ್ಮ ನೋವು, ಸಂಕಟಗಳ ಮಧ್ಯದಲ್ಲೂ ಈ ಮೀಡಿಯಾದವರಿಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಾರೆ.ಈ ರೀತಿ ಜನ ಪ್ರತಿಕ್ರಿಯೆ ನೀಡುವವರೆಗೂ ಇಂತಹ ಮಾಧ್ಯಮದವರು ಖಾಸಗಿ ಬದುಕನ್ನು ಬಿಡುವುದಿಲ್ಲ.
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಖಾಸಗಿ ಬದುಕು, ಅವುಗಳ ಬಗೆಗೆ ನಾನು ಒಮ್ಮೆ ಓದಿದ ಬ್ಲಾಗ್ ಬರಹ.
http://fyngyrz.wordpress.com/2008/06/16/on-privacy/
ನಮ್ಮ ದೇಶದಲ್ಲಿ ಸದ್ಯಕ್ಕೆ ಇನ್ನೂ ಖಾಸಗಿ ವಿಷಯಗಳನ್ನು ಹೇಗೆ ನಿಭಾಯಿಸುವುದು ಅಂತ ಗೊತ್ತಿಲ್ಲ ಅನ್ನಿಸುತ್ತದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಜನಕ್ಕೆ ಬೇಡವಾಗಿದ್ದನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ?
ಆದ್ದರಿಂದ ಖಾಸಗಿ ಬದುಕಿಗೆ ಕೈ ಹಾಕಿದ ಸುದ್ದಿಗಳನ್ನು ಚಪ್ಪರಿಸುವ ಹವ್ಯಾಸವನ್ನು ನಾವು ತ್ಯಜಿಸಬೇಕು. ಆಗ ಮಾತ್ರ ನಿಜವಾದ ಬದಲಾವಣೆ ಪ್ರಾರಂಭವಾದೀತು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ನಾವು ದೂರವಿಟ್ಟವರನ್ನು ಮಾಧ್ಯಮ ಕೂಡ ದೂರ ಇಡುತ್ತದೆ.
ಸಿನಿಮಾದವರು ಎಂದರೆ ನಾವು ಅನಗತ್ಯ ಕುತೂಹಲ ತೋರಿಸುತ್ತೇವೆ. ಅದನ್ನೇ ಮಾಧ್ಯಮಗಳು ಬಂಡವಾಳ ಮಾಡಿಕೊಳ್ಳೋದು. ಖ್ಯಾತನಾಮರ ಬದುಕಿನ ಬಗ್ಗೆ ನಾವು ಕೆಟ್ಟ ಕುತೂಹಲ ಹೊಂದಿದ್ದೇವೆ. ಮಾಧ್ಯಮಕ್ಕೆ ಇದೇ ಆಹಾರ. ನಾವು ಬದಲಾಗದೆ ಮಾಧ್ಯಮ ಬದಲಾಗದು. ಸ್ವಯಂ ನಿಯಂತ್ರಣವನ್ನು ಅವರು ಹಾಕಿಕೊಳ್ಳಲಾರರು. ಸ್ಪರ್ಧೆ, ಟಿಆರ್ಪಿ ಅನಿವಾರ್ಯತೆ, ಇತರ ಸುದ್ದಿ ಸಂಸ್ಥೆಗಳು ಈ ಸುದ್ದಿ ಹಾಕಿದರೆ? ಎಂಬ ಒತ್ತಡ- ಎಲ್ಲ ಸೇರಿ ಕೆಟ್ಟ ಪರಿಸ್ಥಿತಿ ನಿರ್ಮಿಸಿವೆ. ಸ್ವಯಂ ನಿಯಂತ್ರಣ ಸಾಧ್ಯವಾಗದಿದ್ದರೆ, ಕಾನೂನಿನ ನಿಯಂತ್ರಣವಾದರೂ ಬರಬೇಕು. ಇಲ್ಲದಿದ್ದರೆ, ಇದು ತೀರಾ ಅತಿರೇಕಕ್ಕೆ ಹೋಗುತ್ತದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
"ನಿರ್ಭಯವಾಗಿ ನಿಷ್ಠುರ ಸತ್ಯವನ್ನು ಹೊರಗೆಡುವ ಧೈರ್ಯ" ಯಾವತ್ತೂ ಇನ್ನೊಬ್ಬರ ಖಾಸಗೀ ಬದುಕನ್ನು ಹರಾಜಿಗಿಡುವ "ಕ್ರೌರ್ಯ" ಆಗಬಾರದು ಎಂಬುದು ಖಂಡಿತ ನಿಜ. ಗಾಂಧಿಗೊಬ್ಬಳು ಪ್ರೇಯಸಿ ಇದ್ದಳು ಎನ್ನುವುದನ್ನು, ಡಯಾನಾಗೆ ಬಾಣಸಿಗನೊಬ್ಬನೊಂದಿಗೂ ಸಂಬಂಧ ಇತ್ತಂತೆ ಎನ್ನುವುದನ್ನು ಅಹಹ ಎಂಬಂತೆ ದೊಡ್ಡದಾಗಿ ಪ್ರಕಟಿಸಿ ಸಂಭ್ರಮಿಸಿದ ಪತ್ರಿಕೆ ಕೂಡ ಇಂಥವೇ ಮಾತುಗಳನ್ನು ಆಡಿತು ಎಂಬುದು ಕೂಡ ಅಷ್ಟೇ ಸತ್ಯವಾದ ಚೋದ್ಯ! ಮಾಡುವುದು ಒಂದು ಆಡುವುದು ಇನ್ನೊಂದು ಅಥವಾ ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದೇ ನ್ಯಾಯ ಎನ್ನುವಂಥ ವರ್ತನೆ ಮೈ ಉರಿಸುತ್ತದೆ. ಯಾರೋ ಒಬ್ಬರು ಇನ್ಯಾರೋ ಒಬ್ಬರನ್ನು ಕಾದಂಬರಿಕಾರರೇ ಅಲ್ಲ ಎಂದದ್ದಕ್ಕೇ ಎಸ್.ಎಂ.ಎಸ್. ಅಭಿಯಾನ ನಡೆಸಿ ಪುಟಗಟ್ಟಲೆ ಜನಾಭಿಪ್ರಾಯ ಪ್ರಕಟಿಸಿ ಅದೊಂದು ಸಾಮಾಜಿಕ ಸಮಸ್ಯೆ ಎಂಬಂತೆ "ಪ್ರಜ್ಞಾಪೂರ್ವಕ" ಸ್ಪಂದಿಸಿದ ಮಾಧ್ಯಮಕ್ಕೆ ತಾನು ಮಾಡುತ್ತಿರುವುದು ಏನು ಎಂಬುದರ ಅರಿವಿರಲಿಲ್ಲವೆ?
ಮಾಧ್ಯಮಗಳ ಈ ಇಬ್ಬಗೆಯ ನೀತಿ ಬಿಡಿ, ನಾವು ನೀವು ಕೂಡ ಎಲ್ಲೋ ಯಾರಿಗೋ ಅನ್ಯಾಯ ಆಗುತ್ತಿದೆ ಎನಿಸುವಾಗ, ಯೇ ಬಿಡಯ್ಯಾ ಅದೆಲ್ಲ ಅವರ ವೈಯಕ್ತಿಕ ವಿಚಾರ, ಆ ಬಗ್ಗೆ ನಮಗೇನೂ ಸಂಬಂಧವಿಲ್ಲ ಎಂದು ಸುಮ್ಮನಿರುತ್ತೇವೆಯೆ? ಅಥವಾ ಹಾಗೆ ಸುಮ್ಮನಿರುವುದು ಸರಿಯಾಗುತ್ತದೆಯೆ? ಹಾವೇರಿಯಲ್ಲಿ ಒಬ್ಬ ರೈತನಿಗೆ ಗುಂಡು ಹೊಡೆದ ವೀಡಿಯೋ ಚಿತ್ರವನ್ನು ಕಂಡವರಿಗೆ ಆ ಕ್ಷಣದಲ್ಲಿ ಈ ಪೋಲೀಸರಿಗೆ ಏನಾಗಿತ್ತೋ ಅನಿಸದೇ ಇರುವುದಿಲ್ಲ. ಅದೇ ಕ್ಷಣಕ್ಕೆ ನಾವು ಈ ಪೋಲೀಸರೂ, ಆ ರೈತರೂ ನಮ್ಮ ನಿಮ್ಮಂತೆಯೇ ಮನುಷ್ಯರು ಎನ್ನುವುದನ್ನೂ ಬಲ್ಲೆವು. ಪ್ರಜಾಪ್ರಭುತ್ವದಲ್ಲಿ ಇಂಥ ಘಟನೆಗಳಿಂದಲೇ ಜನ ಒಂದು ನಿಲುವು ರೂಪಿಸಿಕೊಳ್ಳುತ್ತ ಹೋಗುವುದು ಒಂದು ಅನಿವಾರ್ಯವಾದ ಪ್ರಕ್ರಿಯೆಯಲ್ಲವೆ? ಮಾಧ್ಯಮ ತನ್ನ ಅತಿಯಿಂದಲೂ ಮಿತಿಯಿಂದಲೂ ಇದನ್ನು ಸಾಧ್ಯವಾಗಿಸುವಾಗಲೇ ಪ್ರಜ್ಞಾವಂತ ಮಂದಿ ಮಾಧ್ಯಮದ ಕುತಂತ್ರಗಳನ್ನೂ ಗಮನಿಸುತ್ತಲೇ ಇರುತ್ತಾರೆ. ಇದೇನೂ ಕೆಲವೇ ಬುದ್ಧಿವಂತರಿಗೆ ಮಾತ್ರ ಹೊಳೆಯುವ ಸಂಗತಿಯಾಗಿ ಉಳಿದಿಲ್ಲ ಇವತ್ತು. ಯಾರನ್ನೂ ಮತ್ತೆ ಮತ್ತೆ ಮೂರ್ಖರನ್ನಾಗಿಸುವುದು ಕೂಡ ಸಾಧ್ಯವಿಲ್ಲ ಅಲ್ಲವೆ? ಸಂಪದದಲ್ಲಿ ನಡೆಯುತ್ತಿರುವ ಈ ಚರ್ಚೆಯೇ ಇದಕ್ಕೆ ಸಾಕ್ಷಿ.
ಅಲ್ಲದೆ, ಜನ ನ್ಯಾಯವಾಗಿ ತಿಳಿಯಬೇಕಾಗಿರುವ ಸುದ್ದಿಯನ್ನು ಯಾರ ಕಣ್ಣಿಗೂ ಬೀಳದಂತೆ ಮೂಲದಲ್ಲೇ ಮುಚ್ಚಿ ಹಾಕುವ ಕೆಲವು ಮಾಧ್ಯಮಗಳಿಗಿಂತ ಇಂಥವು ಲೇಸು ಅನಿಸುವುದಿಲ್ಲವೆ? ಮಾಧ್ಯಮದ ಮೇಲೆ ಅತಿಯಾಗಿ ಗೂಬೆ ಕೂರಿಸುವುದು ಕೂಡ ತಪ್ಪೆನಿಸುವುದರ ಹೊತ್ತಿನಲ್ಲೇ ತಮ್ಮ "ಕೆಲಸ" ಆಗುತ್ತಲೇ ದಿವ್ಯ ಮೌನಕ್ಕೆ ಶರಣಾಗುವ ಇವೇ ಮಾಧ್ಯಮಗಳ "ಅರ್ಥ"ಪೂರ್ಣ ವರ್ತನೆಗೆ ಸಮರ್ಥನೆಯನ್ನೂ ನೀಡಿದಂತಾಗದೆ?
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ನಿಜ ನರೇಂದ್ರ ಅವರೇ,
ನಮ್ಮ ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್ಖಾನ್ ಹಾಗೈ ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.
ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ.
ಮಾಧ್ಯಮದಲ್ಲಿ ನನ್ನ ಗೆಳತಿಯರು ಹಾಗೂ ಗೆಳೆಯರು ತುಂಬ ಜನ ಇದ್ದಾರೆ. ಅವರೊಂದಿಗೆ ಅನೇಕ ಸಾರಿ ಈ ಬಗ್ಗೆ ಚರ್ಚಿಸಿದ್ದೇನೆ. ವಾದಿಸಿದ್ದೇನೆ. ಮುನಿಸಿಕೊಂಡಿದ್ದೇನೆ. ಆದರೂ, ನನ್ನ ಅಭಿಪ್ರಾಯ ಬದಲಾಗಿಲ್ಲ. ಇಷ್ಟು ದಿನದ ಬೆಳವಣಿಗೆಗಳನ್ನು ನೋಡಿದ ನಂತರ ಅವು ಬದಲಾಗುವ ಸಾಧ್ಯತೆಗಳೂ ಕಾಣುತ್ತಿಲ್ಲ.
ಖಾಸಗಿ ಬದುಕೆಂಬುದು ಪ್ರತಿಯೊಬ್ಬನ ವೈಯಕ್ತಿಕ ಸ್ವತ್ತು. ಅದರಲ್ಲಿ ಕೈ ಹಾಕಲು ಸರ್ಕಾರಕ್ಕೇ ಅಧಿಕಾರವಿಲ್ಲ. ಇನ್ನು ಮಾಧ್ಯಮಕ್ಕಂತೂ ಅವಕಾಶವೇ ಇಲ್ಲ. ಆದರೂ ಕೈ ಹಾಕುತ್ತಾರೆ. ನಾವು ನೋಡಿಕೊಂಡು ಸುಮ್ಮನೇ ಕೂಡುತ್ತೇವೆ. ಕ್ರೈಂ ವರದಿಗಳು, ಕಾರ್ಯಕ್ರಮಗಳು ಬರತೊಡಗಿದನಂತರ, ಖಾಸಗಿ ಬದುಕೆಂಬುದು ಜನಸಾಮಾನ್ಯರ ಪಾಲಿಗೂ ಇಲ್ಲವಾಗಿದೆ.
ಇದಕ್ಕೆ ಸ್ವಯಂ ನೀತಿ ಸಂಹಿತೆ ಬೇಕು. ಮಾಧ್ಯಮಮಿತ್ರರು ಈ ಬಗ್ಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಲಿ. ಆಯಾ ಪತ್ರಿಕೆಗಳು ಹಾಗೂ ಚಾನೆಲ್ಗಳ ಸಂಪಾದಕರೂ ಇತ್ತ ಯೋಚಿಸಬೇಕು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...