ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ನಿರಕ್ಷರಿ ಕವಿಯ ಅಕ್ಷರಗಾಥೆ

July 3, 2008 - 6:13am — Chamaraj
ಪ್ರಕಟಿಸಿದ ಕವಿತಾ ಸಂಕಲನಗಳೊಂದಿಗೆ ನಿರಕ್ಷರಿ ಸಿದ್ದಪ್ಪ

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.

ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.

ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್‌ಬುಕ್‌ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.

ಕ್ರಮೇಣ ನೋಟ್‌ಬುಕ್‌ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ.

ಅಲ್ಲಿಂದ ಹೊಳೆ ಸಾಲಿನ ಈ ಕವಿತಾ ಹೋರಿ ನಮ್ಮ ಷೇರುಮಾರುಕಟ್ಟೆಯ ಗೂಳಿಗಿಂತ ಜೋರಾಗಿ, ಹಳಿ ತಪ್ಪದಂತೆ ಓಡುತ್ತಲೇ ಇದೆ. ಕಳೆದ ೧೭ ವರ್ಷಗಳಲ್ಲಿ ೧೬ ಪುಸ್ತಕಗಳನ್ನು ಪ್ರಕಟಿಸಿದ್ದಾನೆ ಈತ. ಇವುಗಳಲ್ಲಿ ಕವನ ಸಂಕಲನಗಳೇ ಹೆಚ್ಚು. ಈಗ ತಾನೆ ೧೭ನೇ ಕೃತಿ ’ಕೂಸಿನ ಕನಸು’ ಅಚ್ಚಿನಲ್ಲಿದೆ.

ಕವಿತೆಗಳನ್ನು ನೆನಪಿಟ್ಟಷ್ಟು ಸುಲಭವಾಗಿ ಅಚ್ಚಾದ ತನ್ನ ಎಲ್ಲ ಕವನ ಸಂಕಲನಗಳ ಶೀರ್ಷಿಕೆಗಳು ಸಿದ್ದಪ್ಪನಿಗೆ ನೆನಪಿಲ್ಲ. ’ಪುಸ್ತಕಾನ ಬಂದ ಮ್ಯಾಲ ಅದರ ಹೆಸರು ತಗೊಂಡು ಏನು ಆಗಬೇಕಾಗೈತಿ?’ ಎಂಬ ನಿರ್ಲಕ್ಷ್ಯ ಆತನದು. ಆದರೆ, ಯಾವುದಾದರೂ ವಿಷಯ ಹೇಳಿ, ’ಇದರ ಮ್ಯಾಗ ಕವಿತಾ ಬರ್ದೀಯೆನು?’ ಎಂದು ಕೇಳಿದರೆ, ಥಟ್ಟಂತ ಪೂರ್ತಿ ಕವಿತೆ ಹಾಡುತ್ತಾನೆ.

’ಕವಿತಾ ಹ್ಯಾಂಗಿರಬೇಕು ಸಿದ್ದಪ್ಪ?’ ಎಂದು ಕೇಳಿ ನೋಡಿ?

ಕವಿ ಅಂದರ ಇರಬೇಕ ಹೆಂಗೋ
ಕೈಕಾಲು ಬಿಚ್ಚಿ ಕೂಸ ಆಡಿದಂಗೋ
ಕಟ್ಟಿದ ಕವಿತಾ ಹ್ಯಾಂಗಿರಬೇಕೋ
ಬೆಳಗ ಸೂರ್ಯನ ಹೊಳಪಿರಬೇಕೋ

ತಾಯಿ ಮಾರಿ ನೋಡಿ ಕೂಸ ನಕ್ಕಂಗ
ತೋರಿ ಆಕಳಗಿ ಕರಾ ಬಿಟ್ಟಾಂಗ
ತಿಪ್ಪಿ ಕೆದರಿ ಮೇದಂಗ ಕೋಳಿ
ಖುಷಿ ಆಗಬೇಕು ಕವಿತಾ ಕೇಳಿ

ಹಸದ ಹೊಟ್ಟೀಗಿ ಹಾಕಿದಂಗ ಅನ್ನ
ಹರದ ತಿಂದಂಗ ಮಾಗೀದ ಹಣ್ಣ
ಮಗ್ಗಿ ಅರಳಿದಂಗ ಗಿಡದಾನ ಹೂವಾ
ಕವಿತಾ ಕೇಳಿ ಕರಗಬೇಕೋ ಜೀವಾ

ಹೂಡಿ ಹೊಡದಂಗ ಜೋಡೆತ್ತಿನ ಗಾಡಿ
ಹಾಡೀಗಿ ಕೊಡಬೇಕ ಶಬ್ದದ ಜೋಡಿ
ಕವಿತಾಕ ಒಂದು ಇರಬೇಕೋ ಅರ್ಥ
ಮನಸಿನ ಹಸಿಯಾ ಹೆಜ್ಜೇಯ ಗುರ್ತಾ

(ಕವಿ ಹೆಜ್ಜೆ)

ಎಂದು ಪೂರ್ತಿ ಕವಿತೆ ಹಾಡಿಬಿಡುತ್ತಾನೆ.

ಸಿದ್ದಪ್ಪ ತನ್ನ ಕವಿತೆಗಳನ್ನು ಎಂದೂ ಓದುವುದಿಲ್ಲ. ಏಕೆಂದರೆ ಆತನಿಗೆ ಓದಲು ಬರುವುದಿಲ್ಲ. ಆದರೆ, ಹಾಡುತ್ತಾನೆ. ಅಚ್ಚ ಕಂಚಿನ ಕಂಠದಲ್ಲಿ, ಬಿಗಿ ಎಳೆಯುವ ಧ್ವನಿಯಲ್ಲಿ ದೊಡ್ಡದಾಗಿ ಹಾಡುತ್ತಾನೆ. ಹಾಡುತ್ತ, ಹಾಡುತ್ತ ಕಣ್ಣರಳಿಸಿ ಖುಷಿಯಾಗುತ್ತಾನೆ. ’ಸಿದ್ಧೇಶ್ವರ ಸ್ವಾಮ್ಯಾರು ಈ ಕವಿತಾ ಕೇಳಿ ಖುಷಿಪಟ್ರು’ ಎಂದು ಆನಂದ ಪಡುತ್ತಾನೆ. ತನ್ನ ಕವಿತೆಯಲ್ಲಿ ತಾನೇ ಲೀನವಾಗುತ್ತಾನೆ.

ಸಿದ್ದಪ್ಪ ಬಿದರಿಯ ಕವಿತೆಗಳನ್ನು ಹೆಂಗರುಳಿನ ಕವಿ ಚೆನ್ನವೀರ ಕಣವಿ ಕೇಳಿ ಮೆಚ್ಚಿದ್ದಾರೆ. ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಚಂದ್ರಶೇಖ ಕಂಬಾರ ಅವರಿಗಂತೂ ಸಿದ್ದಪ್ಪ ಜಾನಪದದ ಅಪ್ಪಟ ಅವತಾರ. ಯು.ಆರ್‌. ಅನಂತಮೂರ್ತಿ, ಸಾ.ಶಿ. ಮರುಳಯ್ಯ ಮುಂತಾದವರು ಈತನ ಕವಿತೆಗಳನ್ನು ಮೆಚ್ಚಿದ್ದಾರೆ. ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯಂತೂ, ’ಓದು ಬರಹಗಳಿಲ್ಲ, ಸಿರಿಯ ಬಲುಹುಗಳಿಲ್ಲ, ಛಂದೋ ವಿಧಾನಗಳನರಹುವ ಸ್ನೇಹಿಗಳಿಲ್ಲ, ಹಳ್ಳಿಯ ಪರಿಸರ, ನೆಲವ ನಂಬಿ ದುಡಿವ ಜನರ ಸಂಗ, ಕಥೆ ಗೀತೆಗಳನರಿಯದ ಗ್ರಾಮೀಣರ ಒಡನಾಟ, ಆದರೇನು? ಜಾನಪದ ಕವಿ ಸಿದ್ದಪ್ಪ ಬಿದರಿ ಅವರಿಗೆ ಶಾರದೆಯ ಒಲುಮೆ!’ ಎಂದು ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ.

ಒಮ್ಮೆ ಮನೆಗೆ ಬಂದಿದ್ದ ಧೋತರಧಾರಿ ಸಿದ್ದಪ್ಪನನ್ನು ಕಂಡು ಬಾಗಿಲಾಚೆಯೇ ನಿಲ್ಲಿಸಿ ಮಾತನಾಡಿಸಿದ್ದ ಕವಿ ನಿಸಾರ್‌ ಅಹ್ಮದ್‌ ಅವರಿಗೆ, ’ನಾನೂ ಕವಿ ಅದೀನ್ರೀ ಯಪ್ಪಾ’ ಎಂದವನೇ,

ಎಷ್ಟೋ ಜನ್ಮ ಹುಟ್ಟಿದರ ಕನ್ನಡ ಮಣ್ಣಾಗ ಇರತೀನಿ
ಸತ್ಯುಳ್ಳ ಶರಣರ ಮಾತಿನ ಸವಿ ಜೇನಾಗಿರತೀನಿ

ಕನ್ನಡಿಗರ ಮಸ್ತಕದೊಳಗ ಪುಸ್ತಕಾಗಿರತೀನಿ
ಕನ್ನಡಿಗರ ದೀಪದ ಬತ್ತಿ ಎಣ್ಯಾಗ ಪಣತ್ಯಾಗಿರತೀನಿ

ಕನ್ನಡಿಗರು ಹರಿದು ತಿನ್ನು ಗಿಡದ ಹಣ್ಣಾಗಿರತೀನಿ
ಕನ್ನಡಿಗರ ಎದಿಯಾಗ ಅರಳಿದ ಮಲ್ಲಿಗಿ ಹೂವಾಗಿರತೀನಿ

ಎಂದು ಪೂರ್ತಿ ಹಾಡು ಹೇಳಿಯೇಬಿಟ್ಟ. ಅವಾಕ್ಕಾದ ನಿಸಾರ ಅಹ್ಮದ ಈತನ ಕೈಹಿಡಿದು ಒಳಗೆ ಕರೆದುಕೊಂಡು ಹೋಗಿ, ತಾವೇ ಬಾಳೆಹಣ್ಣು ಸುಲಿದು ತಿನ್ನಲು ಕೊಟ್ಟು, ಗಂಟೆಗಟ್ಟಲೇ ಮಾತಾಡಿ, ಆತನ ಹಾಡು ಕೇಳಿ ಸಂತಸಪಟ್ಟರಂತೆ. ಅವರ ಕಡೆಯಿಂದಲೂ ತನ್ನದೊಂದು ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಸಿಕೊಂಡಿದ್ದಾನೆ ಸಿದ್ದಪ್ಪ.

ಇಂತಹ ಆಶು ಕವಿ ಸಿದ್ದಪ್ಪ ದಸರಾ ಕವಿಗೋಷ್ಠಿಗಳೂ ಸೇರಿದಂತೆ ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಚಾಲುಕ್ಯೋತ್ಸವ, ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವಿತೆ ಹಾಡಿದ್ದಾನೆ. ಧಾರವಾಡ ಮತ್ತು ಮೈಸೂರು ಆಕಾಶವಾಣಿಗಳು ಈತನ ಸಂದರ್ಶನ ಪ್ರಸಾರ ಮಾಡಿವೆ. ಉದಯ ಟಿವಿ ಪರಿಚಯ ಸಂದರ್ಶನ ಪ್ರಸಾರ ಮಾಡಿದೆ. ರಾಜ್ಯದ ಹದಿಮೂರು ಕಡೆ ಈತನನ್ನು ಕರೆಸಿ ಸನ್ಮಾನಿಸಲಾಗಿದೆ. ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ, ೨೦೦೩ರಲ್ಲಿ ಬಾಗಲಕೋಟೆ ಜಿಲ್ಲೆಯ ೯ನೇ ತರಗತಿಯ ವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ, ಸಿದ್ದಪ್ಪನ ಕುರಿತು ಗದ್ಯಭಾಗದ ಪ್ರಶ್ನೆ ಕೇಳಲಾಗಿದೆ.

ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳ ತಂದೆಯಾಗಿರುವ ಸಿದ್ದಪ್ಪ, ಎಲ್ಲ ಮಕ್ಕಳಿಗೆ ಸಾಧ್ಯವಾದಷ್ಟೂ ವಿದ್ಯಾಭ್ಯಾಸ ಮಾಡಿಸಿದ್ದಾನೆ. ಈಗ ಆತನ ಕವಿತೆಗಳಿಗೆ ಮಕ್ಕಳೇ ಲಿಪಿಕಾರರು. ಹಾಡು ಹೇಳುತ್ತ, ಹೊಲದಲ್ಲಿ ದುಡಿಯುತ್ತ ಈ ಹಾಡುಹಕ್ಕಿ ಬೆಳೆಯುತ್ತಲೇ ಇದೆ. ಅದಕ್ಕೆ ತಕ್ಕಂತೆ ಕವನ ಸಂಕಲನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ಸಿದ್ದಪ್ಪನ ಹಾಡು ಕೇಳಬೇಕೆಂದರೆ, ಬಾಗಲಕೋಟೆ ಜಿಲ್ಲೆ ಬಿಳಗಿಯ ಜನತಾ ಪ್ಲಾಟ್‌ಗೆ ಹೋಗಿ. ದೂರದಿಂದಲೇ ಹಾರೈಸಬೇಕೆಂದರೆ, ದೂರವಾಣಿ (ಪಿಪಿ) ೦೮೫೩೪-೪೭೬ ೦೧೪ಗೆ ಕರೆ ಮಾಡಿ.

- ಚಾಮರಾಜ ಸವಡಿ

  • ಸುದ್ದಿ ಸ್ವಾರಸ್ಯ
~.~
  • Login or register to post comments
  • 134 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿರಕ್ಷರಿ ಕವಿಯ ಅಕ್ಷರಗಾಥೆ
  • ಪ್ರಕಟಿಸಿದ ಕವಿತಾ ಸಂಕಲನಗಳೊಂದಿಗೆ ನಿರಕ್ಷರಿ ಸಿದ್ದಪ್ಪ
  • ಪ್ರಕಟಿಸಿದ ಕವಿತಾ ಸಂಕಲನಗಳೊಂದಿಗೆ ನಿರಕ್ಷರಿ ಸಿದ್ದಪ್ಪ
  • ಕೋಷ್ಟಕ ಕವಿತೆ - ಒಂದು ಪ್ರಯೋಗ
  • ನದೀ ತೀರದಲ್ಲಿ- ಬರೆದವರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ನ್ಯೂಸ್‌ ಎಡಿಟರ್‍. ಬರವಣಿಗೆ ಇಷ್ಟದ ಕೆಲಸ.
See my blog: http://chamarajsavadi@blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 92 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator