ತಾಯಿ ಮತ್ತು ಮಗಳಿಗೆ.
ಸೀತೆ ನಿನ್ನ ಮಗಳೆ?
ನಿಜ ಹೇಳೆ ಭೂಮಿ
ಹೌದೆ! ಹಾಗಾದರೆ
ನೀನೇಕೆ ಕಲಿಸಲಿಲ್ಲ
ಅವಳಿಗೆ
ತಪ್ಪಿಲ್ಲದಾಗ ಸಿಡಿಯುವುದನ್ನು
ಎದೆಯ ಮೇಲೆ ನಿಂತು
ನೋಯಿಸುವವರ ಎದೆ
ನಡುಗಿಸುವುದನ್ನು
ಇಡೀ ಜೀವಮಾನದಲಿ
ಎಂದಾದರೂ ವರ್ತಿಸಿದಳೆ
ಆಕೆ ನಿನ್ನಂತೆ
ಇಲ್ಲಾ ನಿನ್ನುದರದಲ್ಲಿ
ಜನಿಸಿದ ದುರ್ಬಲ
ಶಿಶುವೆ
ಸೀತೆ;ನಿನ್ನ ಮಗಳೆ?
*
ಜಗತ್ತು ಬಲ್ಲ
ನಿನ್ನ ಕತೆಯನ್ನು
ಹೇಳಲು ನಾನಿಲ್ಲಿ
ಕುಳಿತಿಲ್ಲ ಸೀತೆ
ನಿನ್ನನ್ನೆ ಕೇಳಬೇಕಿದೆ
ಪ್ರಶ್ನೆಗಳು ಹಲವಾರು
ಎಲ್ಲ ಬೇಡ
ಉತ್ತರಿಸು ಈ ಕೆಲವಕ್ಕಾದರೂ
ಹೆಣ್ಣುಗಳೆಲ್ಲ ಇರಬೇಕು
ಸೀತೆಯಂತೆ ಎಂದಾಗಲೆಲ್ಲ
ಕೈ ಕಾಲು
ಕಟ್ಟಿ ಹಾಕಿದ ಅನುಭವ
ಹೇಗಿದ್ದೆ ಸೀತೆ ನೀನು?
..............
ಭಾವನೆಗಳಿಲ್ಲದ ಕಲ್ಲಿನಂತೆ?
ಎಲ್ಲದಕ್ಕೂ ಕತ್ತಾಡಿಸುವ
ಕೋಲೆ ಬಸವನಂತೆ?
ಹೆಚ್ಚು ನಕ್ಕರೆ
ಮಾತಾಡಬೇಕಾದೀತು
ಮಾತಾಡಿದರೆ ಪ್ರಶ್ನೆಗಳೆದ್ದಾವು
ಎಂಬ ಹೆದರು ಪುಕ್ಕಿಯಂತೆ?
ಅಥವಾ
ನಿನ್ನದೆಂಬ ಆಸೆಗಳ
ಕೊಂದುಕೊಂಡು...
ಯಾಕೆ ಹಾಗಿದ್ದೆ ಸೀತೆ?
ಹೇಗಿದ್ದೆ ನೀನು??....

- Login or register to post comments
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ತಾಯಿ ಮತ್ತು ಮಗಳಿಗೆ.
ನಾನು ಕೆಲವು ಹೆಂಗಸರಿಗೆ (ಅಥವಾ ಹುಡುಗಿಯರು ಅಂದರೆ ಸರಿ) ಕೇಳಿದ್ದೀನಿ. ಅವರಿಗೆ ರಾಮನನ್ನು ಕಂಡರೆ ಸಿಟ್ಟು, ಸೀತೆಯನ್ನು ಕಾಡಿಗಟ್ಟಿದ್ದಕ್ಕಾಗಿ. ಅದರಲ್ಲೂ, ರಾಮ ಸೀತೆಯನ್ನು ಅಗ್ನಿಪರೀಕ್ಷೆಗೆ ಈಡುಮಾಡಿದ್ದರ ಬಗ್ಗೆಯಂತೂ ಸಿಕ್ಕಾಪಟ್ಟೆ ಸಿಟ್ಟು. ಸೀತೆಯ ಮೇಲೂ ಸ್ವಲ್ಪ ಸಿಟ್ಟಿದೆ, ಅವಳು ಯಾವುದಕ್ಕೂ ಸಿಡಿದೇಳುತ್ತಿರಲಿಲ್ಲ ಎಂಬುದಾಗಿ, ಆದರೆ ಎಷ್ಟಾದರೂ ಹೆಣ್ಣಾದ್ದರಿಂದ ಸಿಟ್ಟಿಗಿಂತ ಕನಿಕರ ಜಾಸ್ತಿ ಎನ್ನಬಹುದು.
ನೀವು ನೀಡಿದ ಪ್ರಶ್ನೆಗಳಿಗೆ ಮತ್ತೊಬ್ಬಳು ಹೆಣ್ಣೇ ಉತ್ತರ ಹೇಳಬೇಕು.
ಉ: ತಾಯಿ ಮತ್ತು ಮಗಳಿಗೆ.
ನಿಮ್ಮಗಳ ಉತ್ತರವೂ ಬೇಕು ಈ ಎಲ್ಲೆ ಪ್ರಶ್ನೆಗಳನ್ನು ಹೊತ್ತ ಹೆಣ್ಣು ಮನಸುಗಳಿಗೆ ಸುನೀಲ್. ಬರೀ ಹೆಂಗಸರಿಗೆ ಮಾತ್ರ ಅಲ್ಲ ಸರಿ ತಪ್ಪುಗಳನ್ನು ಹಾಗ್ಹಾಗಿಯೇ ನೋಡುವ ಪ್ರತಿಯೊಬ್ಬರಿಗೂ ಹಾಗೇ ಅನಿಸೋದು.ಅಲ್ಲವೆ?
ಜಯಲಕ್ಷ್ಮೀ.ಪಾಟೀಲ್.
ಉ: ತಾಯಿ ಮತ್ತು ಮಗಳಿಗೆ.
ಭೂಮಿಯೂ ಕ್ಷಮಾಗುಣಕ್ಕೆ ಹೆಸರಾದವಳೇ ಅಲ್ಲವೇ? ಸೀತೆಗೂ ಅದೇ ಗುಣ ಬಂದಿರುವುದು ಸಹಜವಲ್ಲವೇ?
*ಅಶೋಕ್
ಉ: ತಾಯಿ ಮತ್ತು ಮಗಳಿಗೆ.
ಗೊತ್ತಿಲ್ಲ...ನನ್ನ ಪ್ರಕಾರ ಎಲ್ಲ ಸ೦ಬ೦ಧಗಳ ಬುನಾದಿಯೇ ನ೦ಬಿಕೆ. ರಾಮ ತನ್ನ ಸೀತೆಯಲ್ಲೇ ಅದನ್ನು ಕಳೆದುಕೊ೦ಡ ಮೇಲೆ ಬಹುಶಃ ಸೀತೆಗೆ ಎಲ್ಲದರ ಮೇಲೆ ನ೦ಬಿಕೆ ಹೊರಟು ಹೋಗಿ ನಿರ್ಲಿಪ್ತಳಾಗಿಬಿಟ್ಟಳೇನೋ. ನಿರ್ಲಿಪ್ತಿ ಕೋಪ, ತಾಪ ನೋವಿಗಿ೦ತಲೂ ಭಯ೦ಕರವಾದುದು. ಸಿಡಿದೇಳಬೇಕಾದ ಒತ್ತಡವೂ ಇರುವುದಿಲ್ಲ ನಿರ್ಲಿಪ್ತಿಯಲ್ಲಿ. ಆ ಸ್ಥಿತಿಗೆ ಯಾರೇ ಯಾರನ್ನೇ ದೂಡಿದರೂ ಅದು ಅಕ್ಷಮ್ಯ. ರಾಮನಿಗೆ ನನ್ನ ಧಿಕ್ಕಾರ.
ಉ: ತಾಯಿ ಮತ್ತು ಮಗಳಿಗೆ.
ಬಹುಶಃ ಹಾಗೇ ಆಗಿರಬೇಕು ದೀಪಾ. ಅವಳ ನಿರ್ಲಿಪ್ತತೆಯನ್ನು ಅನುಕೂಲ ಮಾಡಿಕೊಂಡ ಪುರುಷ ಪ್ರಧಾನ ಸಮಾಜ ಅವಳನ್ನು ಎತ್ತರದ ಪೀಠದಲ್ಲಿಟ್ಟು ಹೆಣ್ಣು ಜೀವಗಳೆಲ್ಲ ಅವಳಂತಿರಬೇಕು ಎಂಬ ಲಕ್ಷ್ಮಣ ರೇಖೆ ಎಳೆದರು! ನಗರದಲ್ಲಿ ಉಸಿರುಗಟ್ಟಿಸುವ ವಾತಾವರಣ ಇಲ್ಲದಿರಬಹುದು ಹೆಣ್ಣುಮಕ್ಕಳ ಪಾಲಿಗೆ, ಆದರೆ ಒಮ್ಮೆ ಹಳ್ಳಿ(ಯಾವುದೇ ಹಳ್ಳಿಯಾಗಬಹುದು)ಗೆ ಹೋಗಿ ನೋಡಿ ಅಲ್ಲಿಯ ಹೆಣ್ಣುಮಕ್ಕಳ ಭಾವನೆ, ವಿಚಾರಗಳಿಗೆ ಕಿಮ್ಮತ್ತೇ ಇಲ್ಲ! ಹೆಣ್ಣು ಸಹನಶೀಲೆಯಾಗಿರತಕ್ಕದ್ದು!!
ಜಯಲಕ್ಷ್ಮೀ.ಪಾಟೀಲ್.
ಉ: ತಾಯಿ ಮತ್ತು ಮಗಳಿಗೆ.
ರಾಮ ಕಾಡಿಗೆ ಬಾ ಎಂದು ಸೀತೆಯನ್ನು ಗೋಗರೆದಿರಲಿಲ್ಲ.
ಚಿನ್ನದ ಜಿಂಕೆ ಬೇಕೇ ಬೇಕೆಂದು ಹಠ ಮಾಡಿದ್ದು ಸೀತೆ.
ಈ ಸೀತೆಯ ' ರಾಮಾಯಣ' ಇಲ್ಲದಿರುತ್ತಿದ್ದರೆ, ರಾಮ ೧೪ ವರ್ಷ ಕಾಡಲ್ಲಿ ಹಾಯಾಗಿದ್ದು ಬರುತ್ತಿದ್ದ.
-ಗಣೇಶ.
ಉ: ತಾಯಿ ಮತ್ತು ಮಗಳಿಗೆ.
ನನಗೂ ನಿಮ್ಮ ಹಾಗೆ ಒಮ್ಮೊಮ್ಮೆ ಅನಿಸುತ್ತೆ ಗಣೇಶ್, ಬೇಕಿತ್ತಾ ಈ ಸೀತೆಗೆ ರಾಮನ ಹಿಂದೆ ಅವನ ನೆರಳಾಗಿ ನಡೆದೂ ಅವನಿಂದ ಅವಮಾನಗೊಳ್ಳುವುದು? ಆರಾಮಾಗಿ ಅಯೋದ್ಯೆಯಲ್ಲಿದ್ದು ರಾಜ್ಯವಾಳಿದ್ದಲ್ಲಿ ಏನಾದರು ಸಾಧಿಸಿದ ತೃಪ್ತಿಯಾದರೂ ಇರುತ್ತಿತ್ತು!! ;೦)
ಜಯಲಕ್ಷ್ಮೀ.ಪಾಟೀಲ್.