~
ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಇದೊಂದು ನಾಚಿಕೆಗೇಡಿತನದ ಘಟನೆ.
ದೆಹಲಿಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆರುಷಿ ತಲ್ವಾರ್ ಕೊಲೆ ಪ್ರಕರಣವನ್ನು ಮಾಧ್ಯಮಗಳು ಬಿಂಬಿಸಿದ ರೀತಿ, ತಾವೇ ತನಿಖೆದಾರರಂತೆ ವರ್ತಿಸಿದ್ದು, ತಂದೆಯನ್ನೇ ಕೊಲೆಗಾರ ಹಾಗೂ ವ್ಯಭೀಚಾರಿ ಸ್ಥಾನದಲ್ಲಿ ನಿಲ್ಲಿಸಿದ್ದು, ದಿನ ನಿತ್ಯ ಘಟನೆಯನ್ನು ಚ್ಯೂಯಿಂಗ್ಗಮ್ನಂತೆ ಅಗೆದಿದ್ದು ಎಲ್ಲವೂ ರಾಜೇಶ್ ತಲ್ವಾರ್ ಜಾಮೀನಿನೊಂದಿಗೆ ಅಂತ್ಯ ಕಂಡಿವೆ. ಮಾಧ್ಯಮವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿವೆ.
ಸಂಪದದಲ್ಲಿ ಮಾಧ್ಯಮದ ದುಂಡಾವರ್ತನೆ ಬಗ್ಗೆ ಚರ್ಚೆಯಾಗಿದ್ದನ್ನು ಸ್ಮರಿಸಬಹುದು. ಅದಕ್ಕೆ ಜ್ವಲಂತ ಉದಾಹರಣೆ ಈಗ ರಾಜೇಶ್ ತಲ್ವಾರ್ ಜಾಮೀನಿನ ಮೂಲಕ ದೊರಕಿದೆ.
ಆರುಷಿ ಕೊಲೆ ಪ್ರಕರಣದ ಮುಖ್ಯ ಘಟನಾವಳಿಯನ್ನು ಬಿಂಬಿಸುವ ಮೂಲಕ ಮಾಧ್ಯಮದ ಹೊಣೆಗೇಡಿತನವನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತೇನೆ.
೧. ದೆಹಲಿ ಪಕ್ಕದ ನೊಯ್ಡಾದ ತಮ್ಮ ನಿವಾಸದಲ್ಲಿ ಮೇ ೧೬ರಂದು ಅರುಶಿ ಸತ್ತುಬಿದ್ದಿರುವುದು ಪತ್ತೆಯಾಗಿತ್ತು. ಆಕೆಯ ಹಣೆ, ಭುಜ ಮತ್ತು ಎದೆಗೆ ತಿವಿತದ ಗಾಯಗಳಾಗಿದ್ದವು. ಅರುಶಿ ಕೊಲೆಯ ಬಗ್ಗೆ ಪೊಲೀಸರು ಆಕೆಯ ಮನೆಯ ಕೆಲಸಗಾರ ಹೇಮರಾಜ್ನನ್ನು ತಕ್ಷಣಕ್ಕೆ ಶಂಕಿಸಿದರೂ, ತಲ್ವಾರ್ ಮನೆಯ ಮೇಲ್ಛಾವಣಿಯಲ್ಲಿ ಹೇಮರಾಜ್ ಶವ ಕೂಡ ಪತ್ತೆಯಾಗಿದ್ದು, ಪೊಲೀಸರಿಗೆ ಒಗಟಾಗಿತ್ತು.
೨. ಎರಡು ದಿನಗಳ ನಂತರ ಅರುಶಿ ಮತ್ತು ಮನೆಸೇವಕ ಹೇಮರಾಜ್ ಹತ್ಯೆ ಪ್ರಕರಣದಲ್ಲಿ ಅರುಶಿಯ ತಂದೆ ಡಾ.ರಾಜೇಶ್ ತಲ್ವಾರ್ ಅವರನ್ನು ನೊಯ್ಡಾ ಪೊಲೀಸರು ಬಂಧಿಸಿದರು. ವಿಚಾರಣೆ ವೇಳೆ ತಲ್ವಾರ್ ಅನೇಕ ವೈರುದ್ಧ್ಯದ ಹೇಳಿಕೆಗಳನ್ನು ನೀಡಿದ್ದರೆಂದು ಹೇಳಲಾಯಿತು. ಡಾ. ತಲ್ವಾರ್ ಜತೆ ಕೆಲಸ ಮಾಡುತ್ತಿದ್ದು ಅವರ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರೆಂದು ಶಂಕಿಸಲಾಗಿರುವ ಡಾ.ಅನಿತಾ ದುರಾನಿ ಅವರನ್ನು ಕೂಡ ಬಂಧಿಸಿ, ಸಹಆರೋಪಿಯೆಂದು ಹೆಸರಿಸಲಾಯಿತು.
ಅರುಶಿ ಕೊಲೆಗೆ ಗೌರವ ಹತ್ಯೆ ಅಥವಾ ಅತಿಯಾದ ವಾಂಛೆ ಪ್ರೇರೇಪಣೆಯೆಂದು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದರು. ತಮ್ಮ ಅಕ್ರಮ ಸಂಬಂಧದ ಬಗ್ಗೆ ಅರುಶಿ ತಿಳಿದಿದ್ದ ಸಂಗತಿಯು ತಲ್ವಾರ್ಗೆ ಸಹ್ಯವಾಗದೇ ಹತ್ಯೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಲಾಯಿತು.
೩. ಒಂದು ವಾರದ ನಂತರ ರಾಕೇಶ್ ತಲ್ವಾರ್ ಮೊದಲ ಬಾರಿಗೆ ಮಾಧ್ಯಮದೆದುರು ಮಾತಾಡಿ, ಮಗಳ ಕೊಲೆಗೆ ಸಂಬಂಧಿಸಿದಂತೆ ತನಗೇನು ತಿಳಿದಿಲ್ಲ ಎಂದು ಹೇಳಿದರು. ಆದರೆ, ಇದಕ್ಕೂ ಮುಂಚೆ ರಾಕೇಶ್ ದಂಪತಿಗಳು ನೋಯ್ಡಾ ಪೊಲೀಸರಿಗೆ ನೀಡುತ್ತಿದ್ದ ವಿಭಿನ್ನ ಹೇಳಿಕೆಗಳು ಅವರ ಮೇಲೆಯೇ ಸಂಶಯ ಹುಟ್ಟಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿದವು.
೪. ತನ್ನ ಪುತ್ರಿ ಅರುಷಿ ಕೊಲೆಯ ಅರೋಪ ಹೊತ್ತಿರುವ ರಾಕೇಶ್ ತಲ್ವಾರ್ ತಮ್ಮೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂಬ ಆರೋಪವನ್ನು ಅವರ ಸಹವೈದ್ಯೆ ಅನಿತಾ ದುರ್ರಾನಿ ತಳ್ಳಿಹಾಕಿದರು. "ಪೊಲೀಸರು ಹೇಳಿರುವ ವಿಚಾರ ಅತ್ಯಂತ ಆಘಾತಕಾರಿಯಾದುದು. ಎಲ್ಲವೂ ಸುಳ್ಳು. ಯಾವುದೂ ಸರಿಯಿಲ್ಲ. ಎಲ್ಲವಿಚಾರಗಳು ಆಧಾರರಹಿತವಾದದ್ದು" ಎಂದು ದುರಾನಿ ಹೇಳಿದರು.
೫. ಮಗಳು ಅರುಷಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಡಾ|ರಾಜೇಶ್ ತಲ್ವಾರ್ ಬೆಂಬಲಕ್ಕೆ ಅವರ ಪತ್ನಿ ಹಾಗೂ ಅವರು ಸಂಬಂಧವಿರಿಸಿಕೊಂಡಿದ್ದಾರೆ ಎನ್ನಲಾದ ಡಾ|ಅನಿತಾ ದುರಾನಿ ನಿಂತಿದ್ದಾರೆ ಎಂದು ವರದಿಯಾಯಿತು.
ರಾಜ್ಯ ಪೊಲೀಸ್ ಇಲಾಖೆ ಅರುಶಿ ಹತ್ಯೆ ಪ್ರಕರಣವನ್ನು ಸಮರ್ಥವಾಗಿ ಕಂಡುಹಿಡಿಯಲು ಅಸಮರ್ಥವಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಅರುಶಿ ತಲ್ವಾರ್ ಹತ್ಯೆ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿತು.
ಕೊಲೆಯಲ್ಲಿ ಪ್ರಮುಖ ಆರೋಪಿಗಳಾಗಿರುವ ಆರುಶಿಯ ತಂದೆತಾಯಿಯರ ಹೇಳಿಕೆಗಳಲ್ಲಿ ಧ್ವಂಧ್ವಗಳಿರುವುದನ್ನು ಸಿಬಿಐ ಗುರುತಿಸಿತು. ಆರುಶಿಯ ಕೊಲೆಯಾದ ದಿನ ಬಾಗಿಲು ಮುಚ್ಚಿತ್ತು. ಹಾಗೂ ಏರ್ಕಂಡೀಷನರ್ನ ಸದ್ದು ಇತ್ತು. ಇದರಿಂದಾಗಿ ಆರುಶಿಯ ಕಿರಿಚಾಟ ತಮಗೆ ಕೇಳಿಸಿರಲಿಲ್ಲ ಎಂದು ಆರುಶಿಯ ತಂದೆ ರಾಜೇಶ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಸಿಬಿಐ ಎದುರು ಹೇಳಿಕೆ ನೀಡಿದ್ದರು. ಆದರೆ, ಕೊಲೆ ಸಂಭವಿಸಿದ ಸ್ಥಳವಾದ ರೂಮಿನ ಬಾಗಿಲು ಆ ದಿನ ತೆರೆದಂತೇ ಇತ್ತು ಎಂಬ ವಿಷಯ ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿತು.
ರಾಜೇಶ್ ತಲ್ವಾರ್ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೂ ಗುರಿಮಾಡಿದರೂ ನಿರೀಕ್ಷಿಸಿದ ವಿಷಯಗಳು ಹೊರಬರಲಿಲ್ಲ. ಕೊಲೆಗೆ ಬಳಸಲಾಗಿದ್ದ ಆಯುಧವನ್ನು ಹುಡುಕುವ ಪ್ರಯತ್ನವೂ ವಿಫಲವಾಯಿತು.
೬. ಅರುಷಿ ತಂದೆ ಡಾ| ರಾಜೇಶ್ ತಲ್ವಾರ್ ಕಂಪೌಂಡರ್ ಆಗಿದ್ದ ಕೃಷ್ಣನನ್ನು ಬುಧವಾರ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಆತನ ಹೇಳಿಕೆಯ ಮೇಲೆ ಸಿಬಿಐ ಅಧಿಕಾರಿಗಳು ರಾಜೇಶ್ ತಲ್ವಾರ್ ನಿವಾಸಕ್ಕೆ ತೆರಳಿದ್ದು ಮರು ಶೋಧ ನಡೆಸಿದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೃಷ್ಣನನ್ನು ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆಗೆ ಒಳಪಡಿಸಿದರು.
೭. ನೂತನ ಬೆಳವಣಿಗೆ ಎಂಬಂತೆ ಡಾ.ರಾಜೇಶ್ ತಲ್ವಾರ್ ಅವರ ಮನೆಯ ಮಾಜಿ ಕೆಲಸಗಾರ 24 ವರ್ಷ ಪ್ರಾಯದ ವಿಜಯ್ ಮಂಡಲ್ ಎಂಬಾತನನ್ನು ಸಿಬಿಐ ಬಂಧಿಸಿತು. ತಲ್ವಾರ್ ಅವರ ಪತ್ನಿಯನ್ನು ಮೂರನೇ ಬಾರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಿ, ಬಂಧಿಸುವ ಸಾಧ್ಯತೆ ಇರುವುದಾಗಿ ಸಿಬಿಐ ಹೇಳಿತ್ತು.
೮. ಜೂನ್ ಕೊನೆಯ ವಾರದಲ್ಲಿ ಡಾ|ರಾಜೇಶ್ ತಲ್ವಾರ್ ಅವರ ಗೆಳತಿ ಡಾ|ಅನಿತಾ ದುರಾನಿ ಬಳಿ ಕೆಲಸ ಮಾಡುತ್ತಿದ್ದ ರಾಜಕುಮಾರ್ ಎಂಬುವನನ್ನು ಸಿಪಿಐ ಪೊಲೀಸರು ಬಂಧಿಸಿದರು. ಕೃಷ್ಣ ತಾನೇ ಕೊಲೆ ಮಾಡಿದ್ದಾಗಿಯೂ, ಅದಕ್ಕೆ ರಾಜಕುಮಾರ್ ಹಾಗೂ ಮತ್ತೊಬ್ಬನ ಸಹಾಯ ಪಡೆದಿದ್ದಾಗಿಯೂ ಹೇಳಲಾಯಿತು.
ಕೊನೆಗೆ, ರಾಜ್ಕುಮಾರ್ ತಪ್ಪಿಪ್ಪಿಕೊಂಡಿರುವುದಾಗಿ ಸಿಬಿಐ ಗಾಜಿಯಾಬಾದ್ ನ್ಯಾಯಾಲಯಕ್ಕೆ ತಿಳಿಸಿತು. ಅರುಶಿ ಹತ್ಯೆ ಪ್ರಕರಣದಲ್ಲಿ ಭಾಗಿ ಎಂಬುದಾಗಿ ಒಪ್ಪಿಕೊಂಡಿರುವ ರಾಜ್ಕುಮಾರ್, ಅರುಶಿಯ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ , ಅದನ್ನು ನಾಶ ಪಡಿಸಿರುವುದಾಗಿ ಒಪ್ಪಿಕೊಂಡ.
ಅರುಷಿ ಕೊಲೆ ಪ್ರಕರಣಕ್ಕೆ ದ್ವೇಷ ಸಾಧನೆ ಕಾರಣ ಎಂಬ ಅಂಶ ರಾಜ್ಕುಮಾರ್ ಮೇಲೆ ನಡೆಸಲಾದ ಮಂಪರು ಪರೀಕ್ಷೆಯಲ್ಲಿ ದೃಢಪಟ್ಟಿತು. ಡಾ.ತಲ್ವಾರ್ ಅವರ ಕ್ಲಿನಿಕ್ನಲ್ಲಿ ಕಂಪೌಡರ್ ಆಗಿದ್ದ ಕೃಷ್ಣ, ತನ್ನ ಯಜಮಾನನ ಬಗ್ಗೆ ಅಸಮಧಾನಗೊಂಡಿದ್ದ ಮತ್ತು ಅದಕ್ಕಾಗಿ ಅರುಷಿಯನ್ನು ಕೊಲೆ ಮಾಡಲು ಬಯಸಿದ್ದ ಎಂಬ ವಿಚಾರ ಬಹಿರಂಗ ಪಡಿಸಿದ.
೯. ಕೊಲೆಗೆ ಕಾರಣ
ಕೊಲೆ ನಡೆದ ರಾತ್ರಿ ಹೇಮ್ರಾಜ್, ತನ್ನನ್ನು, ಕೃಷ್ಣ ಮತ್ತು ಶಂಭು ಎಂಬ ವ್ಯಕ್ತಿಯನ್ನು ಡಾ.ತಲ್ವಾರ್ ಅವರ ಮನೆಯಲ್ಲಿರುವ ತನ್ನ ಕೊಠಡಿಗೆ ಆಹ್ವಾನಿಸಿದ್ದ. ಜೊತೆಯಾಗಿ ಬಿಯರ್ ಕುಡಿಯುತ್ತಿರುವಾಗ ಕೃಷ್ಣ, ಡಾ.ತಲ್ವಾರ್ ಅವರು ತಾನು ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಪೇಶಂಟ್ಗಳ ಎದುರಿನಲ್ಲೆ ತನ್ನನ್ನು ಅವಮಾನಿಸಿದರು ಎಂದು ತಿಳಿಸಿದ. ತನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟು ವರ್ಷಗಳಿಂದ ದುಡಿಯುತ್ತಿದ್ದೇನೆ, ಅವರು ನನಗೆ ಹೀಗೆ ಮಾಡಬಹುದೇ? ನಾನು ಈ ಅವಮಾನಕ್ಕೆ ಸೇಡು ತೀರೀಸಿಕೊಳ್ಳಬೇಕು ಎಂದು ಕೃಷ್ಣ ಹೇಳಿದ್ದಾಗಿ ವರದಿಯಾಯಿತು.
ಅವರ ಈ ಮಾತುಕತೆಯನ್ನು ಬಯಲಿಗೆಳೆಯುವುದಾಗಿ ಆರುಷಿ ಬೆದರಿಸಿದ್ದರಿಂದ ಕೃಷ್ಣ ಅವಳ ಗಂಟಲನ್ನು ಕುಕ್ರಿಯಿಂದ ಸೀಳಿದ. ಆದರೆ ಭಯಭೀತ ಹೇಮ್ರಾಜ್ ವಿಷಯವನ್ನು ತಲ್ವಾರ್ ಅವರಿಗೆ ತಿಳಿಸುವುದಾಗಿ ಹೆದರಿಸಿದ. ಅಪಾಯದ ಜಾಡು ಹಿಡಿದು, ಕೃಷ್ಣ ಮತ್ತು ರಾಜ್ಕುಮಾರ್ ಅವರಿಬ್ಬರು ಅವನನ್ನು ಟೆರೇಸ್ ಮೇಲೆ ಎಳೆದೊಯ್ದು ಕೊಲೆ ಮಾಡಿದರು. ಈ ಕೊಲೆಗಳಲ್ಲಿ ಡಾ.ತಲ್ವಾರ್ ಯಾವುದೇ ಪಾತ್ರ ವಹಿಸಿಲ್ಲ ಎಂಬುದು ಬಯಲಿಗೆ ಬಂದಿತು.
೧೦. ಕೊನೆಗೆ ಜುಲೈ ೧೧ರಂದು ಅರುಷಿ ತಂದೆ ರಾಜೇಶ್ ತಲ್ವಾರ್ ಅವರನ್ನು 10 ಲಕ್ಷ ರೂಪಾಯಿ ಮುಚ್ಚಳಿಕೆಯೊಂದಿಗೆ ಜಾಮೀನು ಮೇಲೆ ಬಿಡುಗಡೆಗೊಳಿಸಲಾಯಿತು. ಇವರ ವಿರುದ್ಧ ಯಾವುದೇ ಪುರಾವೆಗಳನ್ನು ಕಂಡು ಹಿಡಿಯಲು ಸಿಬಿಐ ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಯಿತು.
ಘಟನೆಯ ಮುಖ್ಯ ಅಂಶಗಳಿವು.
ಆದರೆ, ಮಾಧ್ಯಮ ಎಷ್ಟೊಂದು ಹೊಣೆಗೇಡಿತನದಿಂದ ವರ್ತಿಸಿತೆಂದರೆ, ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭೀತಿಯಿಂದಾಗಿ ಡಾ. ತಲ್ವಾರ್ ಮಗಳ ಕೊಲೆ ಮಾಡಿದರು. ಆಕೆಯ ಕುತ್ತಿಗೆ ಸೀಳಿದ್ದು ಅತ್ಯಂತ ಸೂಕ್ಷ್ಮ ಆಯುಧದಿಂದ. ಅದನ್ನು ಪರಿಣಿತ ವೈದ್ಯ ಮಾತ್ರ ಬಳಸಬಲ್ಲ ಎಂದು ವರದಿಯಾಯಿತು. ಇಡೀ ಪ್ರಕ್ರಿಯೆಯಲ್ಲಿ ಡಾ. ತಲ್ವಾರ್ ದಂತ ವೈದ್ಯರು, ಅಂತಹ ಶಸ್ತ್ರ ಬಳಸುವ ಪರಿಣಿತಿ ಅವರಿಗೆ ಇರುವುದಿಲ್ಲ ಎಂಬುದನ್ನೇ ಮರೆಮಾಚಲಾಯಿತು.
ಅಷ್ಟೇ ಅಲ್ಲ, ಅಕ್ರಮ ಸಂಬಂಧದ ಜಾಡು ಹಿಡಿದು ಸಹ ವೈದ್ಯೆಯಾದ ಡಾ. ದುರಾನಿ ಅವರ ನಡತೆಯನ್ನು ಶಂಕಿಸಲಾಯಿತು. ತಲ್ವಾರ್ ಪತ್ನಿ ಕೂಡ ಎರಡು ತಿಂಗಳುಗಳ ಕಾಲ ತೀವ್ರ ಆಘಾತ ಅನುಭವಿಸಬೇಕಾಯಿತು. ಇಡೀ ಘಟನೆಗೆ ತಾವು ಕಾರಣರಲ್ಲ ಎಂಬುದನ್ನು ಇವರೆಲ್ಲ ಪದೆ ಪದೆ ಹೇಳಿದರೂ, ಅದಕ್ಕೆ ಆದ್ಯತೆ ನೀಡದೇ ಅವರನ್ನು ವಿಲನ್ಗಳಂತೆ ಚಿತ್ರಿಸಲಾಯಿತು.
ಎಲ್ಲಕ್ಕಿಂತ ಮುಖ್ಯ, ಕೊಲೆಯೊಂದನ್ನು ರಾಷ್ಟ್ರೀಯ ಘಟನೆಯಂತೆ ಬಿಂಬಿಸಿದ್ದು ಮೊದಲ ಅಕ್ಷರ ಅಪರಾಧ. ಆರುಷಿ ಕೊಲೆಯಾಗಿದ್ದು ನಿಜಕ್ಕೂ ಅತ್ಯಂತ ಹೇಯ ಘಟನೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಅದಕ್ಕಿಂತ ಮಹತ್ವದ ಅಪರಾಧಗಳು, ಘಟನೆಗಳು ಇದರಿಂದಾಗಿ ಮಹತ್ವ ಕಳೆದುಕೊಂಡವು. ದೆಹಲಿಯ ಪಕ್ಕದ ಪ್ರದೇಶದಲ್ಲಿ ನಡೆದ ಘಟನೆಯನ್ನು ರಾಷ್ಟ್ರೀಯ ದುರಂತವೆಂಬಂತೆ ಗಂಟೆಗಟ್ಟಲೇ ಪ್ರಸಾರ ಮಾಡಲಾಯಿತು. ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರು, ಏರಿದ ಹಣದುಬ್ಬರ, ಹೆಚ್ಚಿದ ಬೆಲೆ, ಅಧಃಪತನಕ್ಕಿಳಿದ ರಾಜಕೀಯ, ಬಾರದ ಮುಂಗಾರು- ಮುಂತಾದವೆಲ್ಲ ಮರೆಯಾಗಿ ಹೋದವು.
ಈಗ ಡಾ. ತಲ್ವಾರ್ಗೆ ಜಾಮೀನು ದೊರೆತಿದೆ. ಮಾಧ್ಯಮವೀರರು ಕನಿಷ್ಠಪಕ್ಷ ನಾಚಿಕೆ ಕೂಡ ಪಟ್ಟುಕೊಳ್ಳದೆ ಬೇರೆ ಸುದ್ದಿಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. ಯಾರಲ್ಲಿಯೂ ಒಂದು ಪ್ರಾಮಾಣಿಕ ಪಶ್ಚಾತ್ತಾಪ, ತಾವು ಎಡವಿದ್ದನ್ನು ಒಪ್ಪಿಕೊಳ್ಳುವ, ಕ್ಷಮೆ ಯಾಚಿಸುವ ಸೌಜನ್ಯ ಕಾಣಬರುತ್ತಿಲ್ಲ.
ನಿಜವಾದ ದುರಂತವೆಂದರೆ ಇದು.
- ಚಾಮರಾಜ ಸವಡಿ

- Login or register to post comments
- 399 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಇಂತಹ ಚಿಲ್ಲರೆ ಕೆಲ್ಸಗಳನ್ನು ಮಾಡೋದು ಆಜ್ ತಕ್ ಮತ್ತು ಸ್ಟಾರ್ ನ್ಯೂಸ್ ...
ದುರಂತ ಎಂದರೆ, ಕಳೆದ ವರ್ಷದ ಮಾಧ್ಯಮ ಸಮೀಕ್ಷೆ ಪ್ರಕಾರ, ಈ ಎರಡು ನ್ಯೂಸ್(ಗಾಸಿಪ್) ಚಾನಲ್ಗಳೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಚಾನೆಲ್ಗಳು..
-ವರುಣ ಭಟ್
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಅವಷ್ಟೇ ಏಕೆ, ಕನ್ನಡದಲ್ಲೇ ಬೇಕಾದಷ್ಟು ಚಾನೆಲ್ಗಳು ಮತ್ತು ಪತ್ರಿಕೆಗಳು ನಿಯಮಿತವಾಗಿ ಇಂತಹ ಕೆಲಸ ಮಾಡುತ್ತಿವೆ. ಇದೊಂಥರಾ ಕೆಟ್ಟ ಚಟದಂತೆ ಅಂಟಿಕೊಂಡಿದೆ.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಚಾಮರಾಜ್ ಸರ್,
ಇದು ಪೀತ ಪತ್ರಿಕೋದ್ಯಮದ ಮುಂದುವರೆದ ಭಾಗ. ಹೆಸರು ಹೀಗಿಡಬಹುದೆ? ‘ಪಾತಕ ಪತ್ರಿಕೋದ್ಯಮ!’. ನೀವು ಚೆನ್ನಾಗಿಯೇ ವಿಶ್ಲೇಸಿದ್ದೀರಿ. ಈ ಪ್ರಕರಣದೊಂದಿಗೆ ‘ಪದ್ಮಪ್ರಿಯಾ’ ಹಾಗು ಶಾಸಕ ರಘುಪತಿ ಭಟ್ ಮತ್ತು ಅತುಲ್ ರಾವ್ ಪ್ರಕರಣ ಸಹ ಹೋಲಿಕೆಯಾಗುತ್ತದೆ. ಟಿಆರ್ ಪಿ ಬೆನ್ನಟ್ಟುವ ವಿದ್ಯುನ್ಮಾನ ಮಾಧ್ಯಮಗಳು ಬೇಕಿದ್ದರೆ ‘ಅವರ್ಲಿ ಡೆಡ್ ಲೈನ್’ ಹೆಸರಿನಲ್ಲಿ ಮಣ್ಣುಮುಕ್ಕಲಿ. ಈ ೧೨ ತಾಸು ಡೆಡ್ ಲೈನ್ ಅನುಭವಿಸುವ ಮುದ್ರಣ ಮಾಧ್ಯಮಕ್ಕೆ ಅದ್ಯಾವ ಅವಸರ ಹಾಳು ಮಾಡುತ್ತಿದೆ ಅರ್ಥವಾಗುತ್ತಿಲ್ಲ. ಆ ಮಾಧ್ಯಮಕ್ಕೆ ಆಧಾರವಾಗಿ, ಪೂರಕವಾಗಿ, ಸಹಕಾರಿಯಾಗಿ ಸಾಧ್ಯವಾದಷ್ಟು ಅವೇ ಮಾಹಿತಿ ಒಳಗೊಂಡು ಸುದ್ದಿ ಹೆಣೆಯುವ ಅನಿವಾರ್ಯತೆ ಏನಿದೆ?
ಮಾಧ್ಯಮ ಶ್ರೀಸಾಮಾನ್ಯನ ವಿಶ್ವವಿದ್ಯಾಲಯವಿದ್ದಂತೆ. ಓದುಗ/ನೋಡುಗ/ ಕೇಳುಗ ದೊರೆ ಆ ವಿದ್ಯಾನಿಲಯದ ಕುಲಪತಿ. ಪತ್ರಕರ್ತ ಕೇವಲ ಕುಲಸಚಿವ. ಈ ಧೋರಣೆ ನೋಡಿದರೆ ಪತ್ರಕರ್ತನೇ ಕುಲಪತಿ, ಓದುಗ ಕುಲಸಚಿವ ಎಂಬಂತಿದೆ!
ಬಹುಶ: ನಾಗರಿಕ ಪತ್ರಿಕೋದ್ಯಮ ಇದಕ್ಕೆ ಉತ್ತರ ನೀಡಬಲ್ಲುದು. ಮಾಧ್ಯಮ ಗಿರಾಕಿಯ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಇದಕ್ಕೆ ರಾಮಬಾಣ. ಇಲ್ಲದಿದ್ದರೆ ಮಾಧ್ಯಮಗಳು ಸಮುದಾಯದ ಹಿತ ನಿರ್ಲಕ್ಷಿಸುತ್ತಿರುವುದು ವಿದಿತವಾದರೆ ಇದು ಕೂಡ್ ಬಹಿಷ್ಕೃತ ವಲಯವಾಗುವ ದಿನಗಳು ದೂರವಿಲ್ಲ.
ತಮ್ಮದು ಸಮಂಜಸವಾದ ಲೇಖನ. ಆದರೆ ಈ ಅಂತರ್ಜಾಲ ಮಾಧ್ಯಮ ಇನ್ನೂ ನಮ್ಮ ಬದುಕಿನಲ್ಲಿ ಹಾಸು-ಹೊಕ್ಕಾಗಲು ಸಮಯ ಹಿಡಿಯುವುದರಿಂದ ಕಾಲವೇ ಉತ್ತರಿಸಲಿದೆ.
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ನಿಜ ಹರ್ಷ. ಸ್ವಲ್ಪ ಪ್ರಮಾಣದಲ್ಲಿದ್ದ ಪೀತ ಪತ್ರಿಕೋದ್ಯಮ ಈಗ ಪೂರ್ತಿಯಾಗಿ ಪಾತಕ ಪತ್ರಿಕೋದ್ಯಮವಾಗಿ ಬದಲಾಗಿದೆ. ಇದಕ್ಕೆ ಬೇಕಾದಷ್ಟು ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯ, ಸಮಾಜ ಅದನ್ನು ಆಸ್ವಾದಿಸಲು ಪ್ರಾರಂಭಿಸಿದ್ದು. ಇದು ತೀರಾ ಅಪಾಯಕಾರಿ ಬೆಳವಣಿಗೆ. ಪ್ರಚಾರದ ಹುಚ್ಚಿಗೆ ಸಿಲುಕಿದ ಜನ ಮಾಧ್ಯಮದವರನ್ನು ಅತಿಯಾಗಿ ಆರಾಧಿಸುತ್ತಿದ್ದಾರೇನೋ ಅನಿಸುತ್ತದೆ. ಟಿವಿ, ಪತ್ರಿಕೆಗಳಲ್ಲಿ ಮುಖ, ಹೆಸರು ಬರಲು ಜನ ಏನು ಬೇಕಾದರೂ ಮಾಡಲು ತಯಾರಾಗಿದ್ದಾರೆ. ಹೀಗಾಗಿ ಮಾಧ್ಯಮಕ್ಕೆ ಕೊಂಬು ಬಂದಿವೆ ಅನ್ನಿಸುತ್ತದೆ.
ಇದು ತಕ್ಷಣ ಬದಲಾಗದಿದ್ದರೂ, ಸ್ಪಂದನೆ ಇರುವ ಕೆಲ ಜನರ ನಿರಂತರ ಪ್ರಯತ್ನದಿಂದಾಗಿ ಒಂಚೂರು ವಿವೇಕ ಮೂಡಬಲ್ಲುದು. ಮಾಧ್ಯಮದ ಆಯಕಟ್ಟಿನ ಜಾಗದಲ್ಲಿ ಕೂತಿರುವ ಕೆಲವೇ ಕೆಲವು ಜನ ಭಿನ್ನವಾಗಿ ಯೋಚಿಸಲು ಪ್ರಾರಂಭಿಸಿದರೆ ಈ ಸಮಸ್ಯೆ ಖಂಡಿತ ನಿಯಂತ್ರಣಕ್ಕೆ ಬರುತ್ತದೆ.
ಪ್ರಾಧ್ಯಾಪಕರಾಗಿ ನೀವು ಅಂತಹ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತೀರಿ ಎಂದು ಆಶಿಸುತ್ತೇನೆ.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಈ ವೈಯಕ್ತಿಕ ತೇಜೋವಧೆ ಮಾಡುವ ಪತ್ರಿಕೆಗಳಿಗೆ ತುಂಬಾ ಹೆಚ್ಚಿನ ದಂಡವನ್ನೆ ಹಾಕಬೇಕು. ಅಥವಾ ಪತ್ರಿಕೆಯ ಮಾಲಿಕರ ಜೀವನ ಪರ್ಯಂತ ಮಾನಾಂಶವನ್ನು ಕೊಡುವಂತೆ ನ್ಯಾಯಾಲಯದಲ್ಲಿ ಕೇಳಬೇಕು. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ ಎಂಬ ಸತ್ಯ ಈ ಮಾನಹರಣ ಮಾಡಿದ ಮಾಧ್ಯಮಗಳು ತಿಳಿದುಕೊಳ್ಳಬೇಕು. ಅಂತೆಯೇ ಆಗ ಒಂದು ತೆಱನಾದ ಹೊಣೆಯಱಿವು ಈ ಮಾಧ್ಯಮಗಳಿಗಾಗುತ್ತದೆ.
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಪಿಐಎಲ್ನಲ್ಲಿ ಈ ವಿಷಯವನ್ನೂ ಪ್ರಮುಖವಾಗಿ ಪ್ರಸ್ತಾಪಿಸಬಹುದು.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಮಾಧ್ಯಮಗಳಲ್ಲಿ ಇರುವವರು ರಾಜಕೀಯವದವರ ತರ..ಅಲ್ಲಿ ಅವರಿಗೆ ಹೇಳಿಕೊಳ್ಳುವ ಅರ್ಹತೆ ಇರಬೇಕು ಅನ್ನುವಂತಿಲ್ಲ. ಇಂತಾ ವಿಶಯಗಳನ್ನು ತಂದು ಅದಕ್ಕೆ ಬಣ್ಣ ಹಚ್ಚಿ ಹೇಳಲು ಬಂದರೆ ಮುಗಿಯಿತು.. ನಮ್ಮ ಪ್ರಿಂಟ್ ಮಾಧ್ಯಮದವರೇನು ಸುಬಗರೇ?...ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂತ ಆಗಿದೆ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಹೆಚ್ಚು ಖರ್ಚಿಲ್ಲದಿದ್ದರೆ ನಾವೇ ಇದನ್ನು ನ್ಯಾಯಾಲಯಕ್ಕೆ ಒಯ್ಯಬಹುದೇನೋ? Public Litigation Issue.
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಖಂಡಿತ ಉತ್ತಮ. ಅಂತಹ ವಕೀಲರಿದ್ದರೆ, ಅವರನ್ನೂ ಸೇರಿಸಿಕೊಂಡು ಮಾಧ್ಯಮಕ್ಕೆ ನಿರ್ದೇಶನ ಕೊರೀ ಪಿಐಎಲ್ ಹಾಕುವುದು ಒಳ್ಳೆಯ ವಿಚಾರ. ಈ ಕುರಿತು ಇರುವ ವಕೀಲರ ಮಾಹಿತಿ ಸಂಗ್ರಹಿಸುತ್ತೇನೆ. ಸ್ವಲ್ಪ ಸಮಯಾವಕಾಶ ಕೊಡಿ.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಪ್ರಕರಣವಿನ್ನೂ ಸರಿಯಾಗಿ ಬಗೆ ಹರಿದಿಲ್ಲವಷ್ಟೇ? ತುಸು ಕಾದು ನೋಡುವುದು ಒಳಿತು.
*ಅಶೋಕ್
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಪ್ರಕರಣ ಪೂರ್ತಿಯಾಗಿ ಬಗೆಹರಿದಿಲ್ಲ ನಿಜ. ಆದರೆ, ವರದಿಗಾರಿಕೆ/ತನಿಖೆ ನೆಪದಲ್ಲಿ ವ್ಯಕ್ತಿಯ ಬದುಕನ್ನು ಸಾರ್ವತ್ರಿಕಗೊಳಿಸಿ ತೇಜೋವಧೆ ಮಾಡುವುದು ಎಷ್ಟು ಸರಿ ಎನ್ನುವುದೇ ಇಲ್ಲಿಯ ಪ್ರಶ್ನೆ.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಪ್ರಿಂಟೋ, ದೃಶ್ಯವೋ, ಒಟ್ಟಿನಲ್ಲಿ ಮಾಧ್ಯಮ ಪೂರ್ತಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರಂತೆ ವರ್ತಿಸತೊಡಗಿದೆ. ಬೆಕ್ಕೇ ಇರಲಿ ಹುಲಿಯೇ ಇರಲಿ, ದುಂಡಾವರ್ತನೆ ಸಹಿಸಲು ಆಗದು. ಗಂಟೆ ಜೊತೆಗೆ, ಮೂಗುದಾರವನ್ನೂ ಕಟ್ಟುವ ಸಂದರ್ಭ ಬಂದಿದೆ.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
Center for media studies ಪ್ರಕಾರ ಒ೦ದು ವಾರದಲ್ಲಿ 90 ಘ೦ಟೆಗಳಲ್ಲಿ ಸುಮಾರು 48 ಘ೦ಟೆಗಳು ಆರುಷಿ ಪ್ರಕರಣಕ್ಕಾಗಿ ಕವರೆಜ್ ಮಾಡಿದ್ದರು.
ಈ ಸ೦ಗತಿಯನ್ನು ಓದಿದರೆ ಮೀಡಿಯಾ ಶಕ್ತಿಯ ಮತ್ತು ಪ್ರಭಾವ ಗಾಬರಿ ಹುಟ್ಟಿಸುತ್ತದೆ.
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ನಿಜ ಮುರಳಿ, ಮಾಧ್ಯಮದ ಶಕ್ತಿಯಿಂದಾಗಿಯೇ ಅದರ ದುರ್ಬಳಕೆ ಆತಂಕ ಹುಟ್ಟಿಸುತ್ತಿದೆ. ಹೀಗಾಗಿ, ಅದಕ್ಕೆ ಸ್ವಯಂ ಸಂಯಮ ಅಥವಾ ಹೊರಗಿನ ಲಗಾಮಿನ ಅವಶ್ಯಕತೆ ತಲೆದೋರಿದೆ. ತಮಗೆ ತಿಳಿದಂತೆ ಸುದ್ದಿಯನ್ನು ಬಿಂಬಿಸುವ ಹಕ್ಕು ಮಾಧ್ಯಮಕ್ಕಿಲ್ಲ. ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸುವುದಂತೂ ಮೂಲಭೂತ ಹಕ್ಕಿನ ಮೇಲೆ ಆಕ್ರಮಣ ಮಾಡಿದಂತೆ.
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಚಾಮರಾಜರೆ,
ಇದು ಇಲ್ಲಿ ನಡೆದ Jon Benet ಎಂಬ ಹುಡುಗಿಯ ಕೊಲೆ ಪ್ರಕರಣ ನೆನಪಿಸಿತು. ೧೯೯೬ ರಲ್ಲಿ ನಡೆದ ಕೊಲೆಯ ಬಗ್ಗೆ, ಇದೀಗ ೨೦೦೮ರಲ್ಲಿ ತಂದೆ-ತಾಯಿಯರು ನಿರ್ದೋಷಿಗಳೆಂದು ಕಂಡು ಹಿಡಿದಿದ್ದಾರೆ!(http://www.wfaa.com/sharedcontent/dws/wfaa/latestnews/stories/wfaa080709...)
ಹಾಗೆ ನೋಡಿದರೆ, ಭಾರತದಲ್ಲಿ ಬೇಗ ಕೊಲೆಗಾರರನ್ನು ಪತ್ತೆ ಮಾಡಿದ್ದಾರೆ.
~ಕಲ್ಪನ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಕಲ್ಪನಾ ಅವರೇ, ಕೊಲೆಗಾರರನ್ನು ಬೇಗ ಪತ್ತೆ ಮಾಡಿದ್ದು ಉತ್ತಮ ಬೆಳವಣಿಗೆ. ಆದರೆ, ತಲ್ವಾರ್ ಕುಟುಂಬ ಎರಡು ತಿಂಗಳುಗಳ ಕಾಲ ಅನುಭವಿಸಿದ ವೇದನೆಗೆ ಪರಿಹಾರವೆಲ್ಲಿ? ತಂದೆತಾಯಿಯನ್ನೇ ಅಪರಾಧಿಗಳಂತೆ ಬಿಂಬಿಸಿದ ವ್ಯವಸ್ಥೆಗೆ ಶಿಕ್ಷೆ ನೀಡುವವರು ಯಾರು?
- ಚಾಮರಾಜ ಸವಡಿ
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
NDTV,CNN-IBN,AAJ TAK ,TV9 Kannada ಮತ್ತಿತರ ಚಾನಲ್ಲುಗಳು ತೋಳಗಳಂತೆ ವರ್ತಿಸಿದರು. ಇದು ಮಾದ್ಯಮಗಳ ಬೇಜವಬ್ದಾರಿತನದ ಒಂದು ನಿದರ್ಶನ , ಈಗಲಾದರು ಮಾಧ್ಯಮಗಳು ವೈಯಕ್ತಿಕ ವಿಷಯಗಳ ಬಗ್ಗೆ ಅನಗತ್ಯವಾಗಿ ತಲೆಕೆಡಸಿಕೊಳ್ಳದೆ "WATCH DOG OF DEMOCRACY" ಎಂಬ ಸೂಕ್ತಿಯನ್ನು ನಿಜ ಮಾಡಲಿ.
ಪದ್ಮ ಪ್ರಿಯ ಸಾವಿಗೂ TV9 ಕನ್ನಡ ಚಾನೆಲ್ಲೇ ಕಾರಣ.
ಜಾಹಿರಾತು ಹಾಗು ಜನಪ್ರಿಯತೆಗೋಸ್ಕರ ಸುದ್ದಿಗಳನ್ನು fabricate ಮಾಡುವುದನ್ನು ನಿಲ್ಲಿಸಲಿ.
ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
ಡಾ. ರಾಜೇಶ ತಲ್ವಾರ್ಗೆ ಸಿಕ್ಕ ಕೂಡಲೇ ಮಾಧ್ಯಮಗಳು ಬಾಯಿ ಮುಚ್ಚಿಕೊಂಡಿವೆ. ಈಗ ಅವುಗಳ ಗಮನ ಕೇಂದ್ರ ಸರ್ಕಾರದತ್ತ ಹರಿದಿದೆ. ಒಂಚೂರು ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದರೆ ಮಾಧ್ಯಮಗಳು ವಾಚ್ಡಾಗ್ ಆಗದೇ, ಬೇಟೆ ನಾಯಿಗಳಾಗುತ್ತವೆ. ಆಗ ಜನಸಾಮಾನ್ಯರದು ನಾಯಿಪಾಡಾಗುತ್ತದೆ.
ಹಾಗಾಗದಂತೆ ವಾಚ್ ಮಾಡಬೇಕಾದ ಜವಾಬ್ದಾರಿ ಎಲ್ಲರದೂ. ಎಲ್ಲರೂ ಕೈ ಜೋಡಿಸಿ ಮಾಧ್ಯಮದ ಅತಿರೇಕಕ್ಕೆ ಮೂಗುದಾರ ಹಾಕಬೇಕಿದೆ.
- ಚಾಮರಾಜ ಸವಡಿ