July 27, 2012 - 8:22pm
ನನ್ನ ಅದೃಷ್ಟವೋ ಅವಕಾಶವೋ ನಾನರಿಯೆ. ತುಂಬಾ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭ್ಯವಾಗುತ್ತಿರುತ್ತದೆ. ಇಂದು ಅಂತಹ ಒಂದು ಉತ್ತಮ ಅನುಕರಣೀಯ ಕಾರ್ಯಕ್ರಮ ಮುಗಿಸಿ ಈಗ ತಾನೇ ಬಂದೆ. ನನ್ನ ಭಾವನೆಯನ್ನು ಹಂಚಿಕೊಳ್ಳೋಣ ವೆನಿಸಿ ಈ ಬರಹ ಆರಂಭಿಸಿದೆ. ಹಾಸನದಲ್ಲಿ ವಾಸವಿ ವಿದ್ಯಾಸಂಸ್ಥೆಯ ಹೆಸರಿನ ಒಂದು ಶಾಲೆ.ಆಧುನಿಕವಾದ ಕಂಪ್ಯೂಟರ್ ಸಹಿತ ಎಲ್ಲಾ ಸೌಲಭ್ಯಗಳಿವೆ.ಅಷ್ಟು ಮಾತ್ರ ವಾಗಿದ್ದರೆ ಈ ಲೇಖನ ಬರೆಯ ಬೇಕಾಗಿರಲಿಲ್ಲ. ಅಲ್ಲಿನ ವಿಶೇಷ ಏನೆಂದರೆ ಕಳೆದ ಮೂರು ವರ್ಷಗಳಿಂದ ವರ್ಷಾರಂಭದಲ್ಲಿ ಒಂದು ಕಾರ್ಯಕ್ರಮ ಮಾಡುತ್ತಾರೆ. ಶಾಲೆಗೆ ಎಲ್.ಕೆ.ಜಿ/ಯು.ಕೆ.ಜಿ ಗೆ ಹೊಸದಾಗಿ ಸೇರಿದ ಮಕ್ಕಳೊಡನೆ ಅವರ ಪೋಷಕರನ್ನೂ ಕರೆಸುತ್ತಾರೆ. ಶಾರದೆಯ ಪೂಜೆ ಆರಂಭವಾಗುತ್ತೆ. ಎಲ್ಲ ಮಕ್ಕಳೊಡನೆ ಅವರ ಪೋಷಕರು, ಶಾಲೆಯ ವ್ಯವಸ್ಥಾಪಕ ವೃಂದ, ಟೀಚರ್ ಗಳು ಎಲ್ಲರೂ ಉಪಸ್ಥಿತರಿರುತ್ತಾರೆ. ಅರ್ಚಕರು ವಿಧಿವತ್ತಾಗಿ ಪೂಜೆ ಮಾಡುತ್ತಾರೆ. ಎಲ್ಲಾ ಮಕ್ಕಳನ್ನೂ ಅವರ ಪೋಷಕರು ತೊಡೆಯ ಮೆಲೆ ಕುಳ್ಳಿರಿಸಿಕೊಳ್ಳುತ್ತಾರೆ. ಒಂದು ತಟ್ಟೆಯಲ್ಲಿ ಅಕ್ಕಿ ಮತ್ತು ಒಂದು ಅರಿಶಿನದ ಕೊನೆಯನ್ನು ಇರಿಸಿ ಪೋಷಕರಿಗೆಕೊಡುತ್ತಾರೆ. ಆಚಾರ್ಯರು ಎಲ್ಲರಿಂದ ಸಂಕಲ್ಪ ಮಾಡಿಸುತ್ತಾರೆ.ನಂತರ ಓಂಕಾರ ತಿದ್ದಿಸುವ ಮೂಲಕ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಹಿಂದಿನ ಗುರುಕುಲವನ್ನು ಹೋಲುವ ಈ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಪೋಷಕರಿಗೆ ಹಿತನುಡಿಗಳನ್ನು ಹೇಳಲಾಗುತ್ತದೆ. ಪೋಷಕರಿಗೆ ನಾಲ್ಕು ಮಾತುಗಳನ್ನು ಹೇಳಿ, ಎಂದು ನನಗೆ ಸೂಚಿಸಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನನಗೂ ಸಂತಸದ ಸಂಗತಿಯೇ ಹೌದು.ಭಗವತ್ ಪ್ರೇರಣೆಯಿಂದ ಆಡಿಸಿದ ನಾಲ್ಕು ಮಾತುಗಳ ಕ್ಲಿಪ್ ಇಲ್ಲಿದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:














