ಶ್ರಾವಣದ ಪಂಚಮಿ ಊರ ಹೊರ ಬಯಲು
ಹಳೆಯ ಹುಳಿ ಮಾವು ಮರ
ಸರಿದ ಕಾಲದ ಸಾಕ್ಷಿ
ಕಟ್ಟಿದೆ ಉಯ್ಯಾಲೆ ಕಬಂಧ ರೆಂಬೆಗೆ
ಶ್ರಾವಣಕೊಮ್ಮೆ ಬರುವ ಉಯ್ಯಾಲೆ
ತೂಗಲು ಸಿದ್ಧವಿದೆ ಭವದಿಂದ ಭುವಿಗೆ
ಚಂಚಲೆ ರಾಗಿಣಿ ಏರಿಹಳು ಉಯ್ಯಾಲೆ
ನೆಟ್ಟಿಹಳು ನೋಟ ನಕ್ಷತ್ರ ಲೋಕದೆಡೆಗೆ
ಎಷ್ಟು ಸುಂದರ ಕನಸು ತಾರೆ ಲೋಕದ ಪಯಣ
ಗ್ರಹ ತಾರೆ ನಿಹಾರಿಕೆ ಹಾಲುಪಥಗಳ ದಾಟಿ
ಎಷ್ಟು ಸಂಚರಿಸಿದರೂ
ಎಲ್ಲಿಯೂ ಕಾಣದು ಗಗನದಂಚು
ಒಂದೊಂದು ನಕ್ಷತ್ರ ವಿಸ್ತಾರ ಪರಿಧಿ ಕೋಟಿ
ಕೋಟಿ ನಕ್ಷತ್ರಗಳು ಹೋಗುವುದು ಎಲ್ಲಿ ?
ಸಾಗಬೇಕಿದೆ ಪಯಣ
ಜ್ಯೋತಿರ್ವರ್ಷಗಳ ದೂರ
ಕೋಟಿ ಅಬ್ಜ ನಿಖರ್ವ ! ಸಂಖ್ಯಾ ಶಾಸ್ತ್ರ
ಸೋತು ಮಲಗಿಹುದಿಲ್ಲಿ
ನಕ್ಷತ್ರ ಲೋಕದ ಕನಸು ಬೇಕು
ಕನಸಲಿ ವಿಹರಿಸುವ ಮನಸು ಬೇಕು
ಮತ್ತೇರಿ ಬರುತಲಿವೆ ದಟ್ಟ ಕರಿ ಮೋಡಗಳು
ಮೊಳಗುತಿದೆ ಸಿಡಿಲು ಗುಡುಗುಗಳ ರಣಭೇರಿ
ಕಣ್ಣು ಕೋರೈಸುವ ಕಾಂತಿಯ ಮಿಂಚುಗಳು
ಕರಿಯ ಗರ್ಭದಲಿ ಮಿಂಚು ಬೆಳಕಿನ ಸೆಳಕು
ಬಿಳಿ ಬಂಜೆ ಕರಿ ಜೀವ ಜೀವ ಸೆಲೆಯುಗಮ
ಹೆದರದಿರು ತರಳೆ ಏರು ' ಉಯ್ಯಾಲೆ '
ಎದೆಯ ಗೂಡನು ಬಿಚ್ಚಿ ಕನಸುಗಳ
ಹೊರ ತೆಗೆದು ನೀರು ಗೊಬ್ಬರವುಣಿಸಿ
ಹೃದಯ ಗರ್ಭದಿ ಆಳ ಬೇರುಗಳ ಇಳಿಸು
ಕನಸು ನನಸಾಗಿಸಲು ಜೋಕಾಲಿಯನು
ಜೀಕು ಮೇಲು ಮೇಲಕೆ ಸಾಗು
ತೆರೆದು ಕೊಳ್ಳುವುದು ನವ ನವೀನ ಲೋಕ
ಆದಿ ಅಂತ್ಯಗಳಿಲ್ಲ ದ್ವೇಷಾಸೂಯೆಗಳ ಹಂಗಿಲ್ಲ
ಸಂಕುಚಿತ ಲೋಕದ ಕಟ್ಟು ಪಾಡುಗಳಿಲ್ಲ
ನಿನ್ನೊಲುಮೆಯ ನಲ್ಲ ಸಿಕ್ಕರೂ ಸಿಗಬಹುದು
ಪಯಣಿಸು ಎಲ್ಲ ಅಡೆತಡೆಯ ನೀಗಿ
ಕುಗ್ಗದಿರು ಹೆಣ್ಣೆ ಮುಂದೆ ಕಾದಿದೆ ಸಗ್ಗ
ನಕ್ಷತ್ರ ಪುಂಜಗಳ ಸ್ವರ್ಗಲೋಕ ವಿಹರಿಸು
ಮನದಣಿಯೆ ಇಚ್ಛೆ ತೀರುವ ವರೆಗೆ
ಯಾರಂಕುಶ ವಿಲ್ಲದ ' ನಿರ್ಭೀತ ಲೋಕ '
ಬರಿಯ ಕನಸೊಂದೆ ನಿಜವಲ್ಲ ಹುಡುಗಿ
ವಾಸ್ತವದ ಮಣ್ಣೆ ನಿತ್ಯ ಸತ್ಯ ವಾಸ್ತವದಿಳೆ
ಕನಸಿನಾಕಾಶ ಕನಸು ವಾಸ್ತವ ನಡುವೆ
ಉಯ್ಯಾಲೆಯಾಟ ಯುಗದಿಂದ ಯುಗಕೆ
ಸಾಗಿ ಬಂದಿದೆ ಬದುಕು ನಶ್ವರ ಬದುಕಿನ
ಉಯ್ಯಾಲೆಯಾಟ ಶ್ರಾವಣ ಬಂದು
ಮತ್ತೆ ಶ್ರಾವಣ ತೆರಳಿ ನವ ಮನ್ವಂತರಕೆ
ಸಾಗಿದೆ ' ಜೀವನದುಯ್ಯಾಲೆಯಾಟ '
***









ಪ್ರತಿಕ್ರಿಯೆಗಳು
ಉ: ' ಉಯ್ಯಾಲೆ': ಹಿರಿಯರೆ
"ಹೆದರದಿರು ತರಳೆ ಏರು ' ಉಯ್ಯಾಲೆ '
ಎದೆಯ ಗೂಡನು ಬಿಚ್ಚಿ ಕನಸುಗಳ
ಹೊರ ತೆಗೆದು ನೀರು ಗೊಬ್ಬರವುಣಿಸಿ
ಹೃದಯ ಗರ್ಭದಿ ಆಳ ಬೇರುಗಳ ಇಳಿಸು
ಕನಸು ನನಸಾಗಿಸಲು ಜೋಕಾಲಿಯನು
ಜೀಕು ಮೇಲು ಮೇಲಕೆ ಸಾಗು
ತೆರೆದು ಕೊಳ್ಳುವುದು ನವ ನವೀನ ಲೋಕ"
ಸಖತ್...
ಸರಿದ ಕಾಲದ ಸಾಕ್ಷಿ
ಕಟ್ಟಿದೆ ಉಯ್ಯಾಲೆ ಕಬಂಧ ರೆಂಬೆಗೆ >>>ಅದು ಕ0ಬದ ರೆ0ಬೆಗೆ ಆಗಬೆಕಿತ್ತೆ? ಅಥವ ??
ಹಿರಿಯರೆ
ನಾಗರ ಪ00ಛಮಿ ಸನ್ದರ್ಭದಲ್ಲಿ ಉಯ್ಯಾಲೆ ಆಡುವ ಸಮ್ಪ್ರದಾಯ ಇದೆ.. ಅನ್ತ ಗೊತ್ತಾಗಿದ್ದು ತೀರ ಇತ್ತೀಛೆಗೆ
ಆ ಬಗ್ಗೆ ಬಹು ಅರ್ಥಪೂರ್ಣವಾಗಿ ಕವನ ಬರೆದಿರುವಿರಿ...
ಮೇಲೆ ಹಾಕಿದ ನಿಮ್ಮ ಕವನದ ಸಾಲುಗಳು ಇಸ್ತ ಆದವು...
ಸ್ಹುಭವಾಗಲಿ.
\|/
ಉ: ' ಉಯ್ಯಾಲೆ': ಹಿರಿಯರೆ
ಸಪ್ತಗಿರಿಯವರಿಗೆ ವಂದನೆಗಳು
" ಉಯ್ಯಾಲೆ " ಕವನ ಕುರಿತು ನೀವು ಬರೆದ ಪ್ರತಿಕ್ರಿಯೆ ಓದಿದೆ. ಕಬಂಧ ರೆಂಬೆಗೆ ಎಂಬ ಪದ ಪ್ರಯೋಗವನ್ನು ನಾನು ಈ ಕವನದಲ್ಲಿ ಮಾಡಿದ್ದದನ್ನು " ಕಂಬದ ರೆಂಬೆಗೆ ಎಂದು ಆಗ ಬೇಕಿತ್ತೆ " ಎಂದಿದ್ದೀರಿ. ಕಬಂಧ ರೆಂಬೆಗೆ ಎನ್ನುವ ಪದ ಪ್ರಯೋಗವೆ ಸರಿ. ಕಂಬದ ರೆಂಬೆಗೆ ಎನ್ನುವುದು ಒಂದು ಒಂದು ಸೀಮಿತ ಪದ ಪ್ರಯೋಗವಾಗುತ್ತದೆ. ಕಬಂಧ ಎಂಬ ರಾಕ್ಷಸ ರಾಮಾಯಣ ಕಾಲದ ಸಂಧರ್ಭದಲ್ಲಿ ಇದ್ದ, ಕಬಂಧ ಎಂದರೆ ಬಲಿಷ್ಟ ಬಾಹುಗಳುಳ್ಳವನು ಎಂದು ಅರ್ಥ, ಮುಂದೆ ಅವನಿಗೆ ರಾಮನಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹೀಗಾಗಿ ಗಟ್ಟಿ ಎನ್ನುವುದರ ದ್ಯೋತಕವಾಗಿ ಆ ಪದ ಬಳಕೆ ಮಾಡಿದ್ದೇನೆ. ಧನ್ಯವಾದಗಳು
ಉ: ' ಉಯ್ಯಾಲೆ'
ಹನುಮಂತ ಪಾಟೀಲರಿಗೆ ವಂದನೆಗಳು.
ಪುಟ್ಟಣ್ಣನವರು ತಮ್ಮ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ
ಉಯ್ಯಾಲೆ ಆಡೋಣ ಬನ್ನಿರೋ.....
ವಿಶ್ವವೇ ದೇವನಾಡುವ....ಉಯ್ಯಾಲೆ ಎಂದು
ಉಯ್ಯಾಲೆಯನ್ನು ಆಧ್ಯಾತ್ಮಿಕತೆಯ ಮಜಲಿನಲ್ಲಿ ತೂಗಿಸಿದರೆ ನೀವು ಇನ್ನೊಂದು ಕೋನದಿಂದ ಉಯ್ಯಾಲೆಯನ್ನು ತೂಗ ಬಯಸಿದ್ದೀರಿ. ಒಳ್ಳೆಯ ವಿಚಾರ ಲಹರಿ ಹರಿಸಿರುವ ನಿಮ್ಮ ಕವನಕ್ಕೆ ಅಭಿನಂದನೆಗಳು.
ಉ: ' ಉಯ್ಯಾಲೆ'
ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು
" ಉಯ್ಯಾಲೆ " ಕವನ ಕುರಿತು ಬರೆದ ಪ್ರತಿಕ್ರಿಯೆ ಓದಿದೆ, ಉತ್ತರ ಕರ್ನಾಟಕ ನಾಗರ ಪಂಚಮಿ ಒಂದು ವಿಶೇಷವಾದ ಮಳೆಗಾಲದ ಹಬ್ಬ, ಮನೆ ಮನೆಗಳಲ್ಲಿ ಜೋಕಾಲಿ ಜೀಕಿನ ಸಂಭ್ರಮ, ಹಾಗಯೆ ಊರ ಹೊರಗೆ ದೊಡ್ಡ ಮರದ ರೆಂಬೆಗೆ ಜೋಕಾಲಿ ಕಟ್ಟಿ ಜೋಕಾಲಿಯಾಡುತ್ತಿದ್ದ ಆ ಗತಕಾಲದ ಸಂಭ್ರಮದ ನೆನಪಿಗೆ ಈ ಕವನ ಬರೆಯ ಬೇಕೆನಿಸಿತು ಬರೆದೆ, ವಿಮರ್ಶಾತ್ಮಕ ಮೆಚ್ಚುಗೆಗೆ ಧನ್ಯವಾದಗಳು
ಉ: ' ಉಯ್ಯಾಲೆ'
ಶ್ರಾವಣದಿಂದ ಶ್ರಾವಣಕ್ಕೆ ತೂಗುತ್ತಿರುವ ಕಾಲವೆಂಬ ಉಯ್ಯಾಲೆಯ ಚಿತ್ರವನ್ನು ಚೆನ್ನಾಗಿ ನೀಡಿದ್ದೀರಿ.
ಅಭಿನಂದನೆಗಳು
ಪಾರ್ಥಸಾರಥಿ
ಉ: ' ಉಯ್ಯಾಲೆ'
ತುಂಬಾ ಚೆನ್ನಾಗಿದೆ.
ಉ: ' ಉಯ್ಯಾಲೆ'
ಮೇಡಂ ವಂದನೆಗಳು, ಕವನದ ಮೆಚ್ಚುಗೆಗೆ ಧನ್ಯವಾದಗಳು.
ಉ: ' ಉಯ್ಯಾಲೆ'
ಪಾರ್ಥ ಸಾರಥಿ ಯವರೆ ವಂದನೆಗಳು
' ಉಯ್ಯಾಲೆ ' ಕವನಕ್ಕೆ ನೀವು ಬರೆದ ಪ್ರತಿಕ್ರಿಯೆ ಓದಿದೆ, ಮೆಚ್ಚುಗೆಗೆ ಧನ್ಯವಾದಗಳು.
ಉ: ' ಉಯ್ಯಾಲೆ'
ಪಾಟೀಲರೆ ವಂದನೆಗಳು
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬ ಮಹಿಳೆಯರು ಆಚರಿಸುವ ಒಂದು ವಿಶೇಷ ಹಬ್ಬ.ಕರ್ನಾಟಕದ ಒಂದೊಂದು ಭಾಗದ ಜನ ಒಂದೊಂದು ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ.ಉತ್ತರ ಕರ್ನಾಟಕ ದಲ್ಲಿ ಹಬ್ಬದಾಚರಣೆಯ ದಿನ ಉಯ್ಯಾಲೆ ಕಟ್ಟಿ ಆಡುತ್ತಾ ಸಂತೋಷ ಪಡುವ ರೀತಿಯನ್ನು ತಾವು ಕವನದ ರೂಪ ಕೊಟ್ಟು ನಮ್ಮನ್ನು ಹರ್ಷಿಸಿದ್ದೀರಿ.
ಉ: ' ಉಯ್ಯಾಲೆ'
ಎನ್ ರಮೇಶ ಕಾಮತರಿಗೆ ವಂದನೆಗಳು
' ಉಯ್ಯಾಲೆ ' ಕವನ ಕುರಿತು ತಾವು ಬರೆದ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ' ಉಯ್ಯಾಲೆ'
ಪಾಟೀಲರೆ ವಂದನೆಗಳು
ನಾವು ಸಂಪದಿಗರೆಲ್ಲರು ಓದಿ ಸಂತಸಪಟ್ಟ ಕವನ ' ಉಯ್ಯಾಲೆ ' ಈ ತಿಂಗಳ 23 ನೇ ತಾರೀಕಿನ " ಹಾಯ್ ಬೆಂಗಳೂರು " ವಾರ ಪತ್ರಿಕೆಯಲ್ಲಿ ಎಚ್.ಎ.ಪಾಟೀಲ್ ನಾಮಾಂಕದಲ್ಲಿ ಪ್ರಕಟಗೊಂಡಿದ್ದು ನಮಗೆಲ್ಲ ಬಹಳ ಸಂತಸ ತಂದಿದೆ, ಈ ಕವನವು ಪತ್ರಿಕೆಯ 22 ನೇ ಪುಟದಲ್ಲಿ ಸುಂದರವಾದ ಉಯ್ಯಾಲೆ ತೂಗುವ ಸ್ತ್ರೀಯ ಚಿತ್ರದೊಂದಿಗೆ ಪ್ರಕಟಗೊಂಡಿದ್ದು ಬಹಳ ಹರುಷ ತಂದಿದೆ,
ಇದೇ ರೀತಿ ತಮ್ಮ ಇನ್ನಷ್ಟು ಕವನ ಮತ್ತು ಲೇಖನಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಲಿ ಎಂದು ಶುಭ ಹಾರೈಕೆ ಬಯಸುತ್ತೇನೆ.
ಉ: ' ಉಯ್ಯಾಲೆ'
-ಎನ್ ರಮೇಶ ಕಾಮತರು, ಸಪ್ತಗಿರಿಯವರು ಮತ್ತು ಶ್ರೀಧರ ಬಂಡ್ರಿಯವರಿಗೆ ವಂದನೆಗಳು,
ಈ ಕವನ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದಕ್ಕೆ ತಾವೆಲ್ಲ ಸಂತಸ ಪಟ್ಟು ಪ್ರತಿಕ್ರಿಯಿಸಿದ್ದೀರಿ, ನಿಮ್ಮಲ್ಲರ ಈ ಅಭಿಮಾನದ ಮೆಚ್ಚುಗೆಗೆ ಅನಂತ ಧನ್ಯವಾದಗಳು.
ಉ: ' ಉಯ್ಯಾಲೆ' @ ಹಿರಿಯರೇ
ಹಿರಿಯರೆ
ನಿಮ್ಮ ಈ ಬರಹವು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಗೊಂಡ ಸವಿ ಸುದ್ಧಿಯನ್ನ ಇನ್ನೊಬ್ಬ ಹಿರಿಯರಾದ ಕಾಮತ್ ಅವರು ತಿಳಿಸಿರುವರು .... ಕೇಳಿ ಖುಶಿ ಆಯ್ತು...
ಒಳಿತಾಗ್ಲಿ...
\|/
ಉ: ' ಉಯ್ಯಾಲೆ'
ಹನುಮಂತ ಪಾಟೀಲರಿಗೆ ವಂದನೆಗಳು. ನಿಮ್ಮ ಉಯ್ಯಾಲೆ ಕವನ "ಹಾಯ್! ಬೆಂಗಳೂರು" ಪತ್ರಿಕೆಯಲ್ಲಿ ಪ್ರಕಟವಾಗಿರುವುದಕ್ಕೆ ಅಭಿನಂದನೆಗಳು.
ಉ: ' ಉಯ್ಯಾಲೆ'
ಉಯ್ಯಾಲೆ ಕವನ ಪತಿಕೆಯಲ್ಲಿ ಪ್ರಕಟವಾಗಿರುವ ವಿಷಯ ತಿಳಿದು ಖುಷಿಯಾಯಿತು. ಅಭಿನಂದನೆಗಳು.
ಉ: ' ಉಯ್ಯಾಲೆ'
ಮೇಡಂ ವಂದನೆಗಳು,
ಈ ಕವನ ಹಾಯ್ ನಲ್ಲಿ ಪ್ರಕಟಗೊಂಡದ್ದಕ್ಕೆ ಹರ್ಷ ವ್ಯಕ್ತ ಪಡಿಸಿದ್ದೀರಿ, ತಮ್ಮ ಅಭಿಮಾನ ಪೂರ್ವಕ ಮೆಚ್ಚುಗೆಗೆ ಧನ್ಯವಾದಗಳು.