ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.
ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕುಮಾರ ಸಂಭವವನ್ನು ಅವನು ಪೂರ್ತಿ ಮುಗಿಸಲೇ ಇಲ್ಲವಂತೆ. ಋತು ಸಂಹಾರ ಮತ್ತೆ ಮೇಘದೂತ ಎಂಬ ಎರಡು ಖಂಡಕಾವ್ಯಗಳು. ಮತ್ತೆ ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಮತ್ತು ಅಭಿಜ್ಞಾನ ಶಾಕುಂತಲ ಎಂಬ ಮೂರು ನಾಟಕಗಳು. ಕಾಳಿದಾಸನ ಅತ್ಯುತ್ತಮ ಕೃತಿಯೆಂದೇ ಪರಿಗಣಿಸಿರುವ ಶಾಕುಂತಲ ನಾಟಕದಿಂದ, ವ್ಯಾಸರ ಮಹಾಭಾರತದಲ್ಲೊಂದು ಸಣ್ಣ ಕಥೆಯಾಗಿದ್ದ ದುಷ್ಯಂತ ಶಕುಂತಲೆಯ ಕಥೆ ಜನಜನಿತವಾಗಿಹೋಯಿತು!
೧೯೮೦ರ ಶತಕದಲ್ಲಿ ಬಂದ ಕನ್ನಡ ಚಲನಚಿತ್ರ ಕವಿರತ್ನ ಕಾಳಿದಾಸದಿಂದ ಕನ್ನಡಿಗರೆಲ್ಲ ಕವಿರತ್ನ ಕಾಳಿದಾಸ ಯಾರು ಅಂದರೆ, ಡಾ.ರಾಜ್ ಕುಮಾರ್ ಅಂತಲೇ ಉತ್ತರಿಸುವ ಹಾಗಾಯಿತು. ಅಷ್ಟು ಸೊಗಸಾಗಿ, ಕವಿ ಕಾಳಿದಾಸನ, ಮತ್ತೆ ಅವನ ನಾಟಕದ ನಾಯಕ ದುಷ್ಯಂತನಾಗಿ ಕನ್ನಡಿಗರ ಮನದಲ್ಲಿ ಅವರು ನಿಂತುಬಿಟ್ಟಿದ್ದಾರೆ ಅಂದರೆ ತಪ್ಪೇನಿಲ್ಲ; ಮೊದಮೊದಲು ಕಣ್ವಾಶ್ರಮಕ್ಕೆ ಬಂದ ದುಷ್ಯಂತ ಅಲ್ಲಿ ಸಖಿಯರಾದ ಪ್ರಿಯಂವದೆ, ಮತ್ತು ಅನಸೂಯೆಯರ ಜೊತೆ ಸುಳಿದಾಡುತ್ತಿದ್ದ ಶಕುಂತಲೆಯನ್ನು ಕಾಣುತ್ತಾನೆ. ಅವಳ ಚೆಲುವಿಗೆ ಮಾರುಹೋಗಿ ಮರೆಯಲ್ಲೇ ನೋಡುತ್ತ ನಿಂತಿರುತ್ತಾನೆ. ಆ ವೇಳೆಗೆ, ಜೇನುದುಂಬಿಯೊಂದು ಶಕುಂತಲೆಯ ಬೆನ್ನು ಹತ್ತಬೇಕೇ? ಕಾಪಾಡಿ, ಕಾಪಾಡಿ ಎಂದು ಶಕುಂತಲೆ ಕೂಗಲು, ಪ್ರಜೆಗಳನ್ನೆಲ್ಲ ರಕ್ಷಿಸಬೇಕಾದವನು ತಾನೇ ಅಲ್ಲವೇ ಎಂದು ದುಷ್ಯಂತ ಮುನ್ನುಗ್ಗುತ್ತಾನೆ. ಇನ್ನು ಮುಂದೆ ಆದದ್ದು ಸರ್ವವಿದಿತ.
ಸರಿ, ಇವೆಲ್ಲ ನಮಗೆ ಗೊತ್ತಿರುವ ಕಥೆಯೇ - ಮತ್ತೆ ಮತ್ತೆ ಯಾಕೆ ತಲೆ ಕೊರೀತಿದೀಯಾ ಅಂದಿರಾ? ಈ ಬಾರಿಯ ಪದ್ಯಪಾನದಲ್ಲಿ ಒಂದು ಕುತೂಹಲಕಾರಿಯಾದ ಪ್ರಶ್ನೆ ಇತ್ತು - ಏನಪ್ಪಾ ಅಂದರೆ - ಶಕುಂತಲೆ ದುಷ್ಯಂತರ ಮೊದಲ ಭೇಟಿಯ ಬಗ್ಗೆ ಒಂದು ಪದ್ಯ ಬರೆಯಿರಿ ಅಂತ - ಆದರೆ ಈ ನಾಲ್ಕು ಪದಗಳನ್ನು ಬಳಸಲೇ ಬೇಕಂತೆ - ವಿಷ, ಶೂಲ, ಗಲ್ಲು, ಗನ್ನು! ಎಲ್ಲಾವೂ ಸಾವಿನ ದಾರಿಗಳೇ!
ಇದಕ್ಕೆ ಉತ್ತರವಾಗಿ, ಸಾವಿನಿಂದ ಪ್ರೇಮದ ಕಡೆಗೆ ಬದಲಾಯಿಸುವಂತಹ ಒಂದು ಭಾಮಿನಿ, ನಾನು ಬರೆದದ್ದು ಹೀಗೆ:
ಗಲ್ಲು ಗೆಲ್ಲೆನುತಿರುವ ಹೆಜ್ಜೆಯ
ಹುಲ್ಲೆ ನಡಿಗೆಯ ಚೆಲುವೆ ತುರುಬಿನ
ಮಲ್ಲೆ ಹೂವಲೆ ಹುಡುಕಿ ಸವಿ ಷಟ್ಪದಿಯು ಬೆಂಬತ್ತೆ
ಬಲ್ಲಿದನು ದುಷ್ಯಂತ ತಾ ಭರ-
ದಲ್ಲಿ ನುಗ್ಗುತ ಹಿರಿದು ಶೂಲವ
“ನಿಲ್ಲು ನೀ, ಹಿಗ್ಗನ್ನು ಕಳೆವರ ನಾನುಳಿಸೆ”ನೆಂದ !
-ಹಂಸಾನಂದಿ
ಕೊ: ಷಟ್ಪದಿ - ಆರುಕಾಲಿನ ಯಾವ ಕೀಟವಾದರೂ ಆಗಬಹುದಾದರೂ, ಸಾಧಾರಣವಾಗಿ ಜೇನುನೊಣವನ್ನೇ ಸೂಚಿಸುತ್ತೆ.
ಚಿತ್ರ ಕೃಪೆ: ರಾಜಾ ರವಿ ವರ್ಮ ಬರೆದ ಚಿತ್ರ, ದುಷ್ಯಂತನನ್ನು ಮತ್ತೆ ಮತ್ತೆ ಹಿಂದೆ ತಿರುಗೆ ನೋಡುತ್ತಿರುವ ಶಕುಂತಲೆ, ವಿಕಿಪಿಡಿಯಾದಿಂದ.










ಪ್ರತಿಕ್ರಿಯೆಗಳು
ಉ: ಕವಿರತ್ನ ಕಾಳಿದಾಸನಿಗೊಂದು ಭಾಮಿನಿ@ ಹಂಸಾ ನಂದಿ ಅವ್ರೆ..
ಹಂಸಾ ನಂದಿ ಅವ್ರೆ..
ಸಖತ್ ಪಯತ್ನ.... ಬಹು ಮೆಚ್ಹ್ಹುಗೆಯಾಯ್ತು...
ರಾಜ್ ಕುಮಾರ್ ಅವರ ಕವಿರತ್ನ ಕಾಳಿದಾಸ ಬಗ್ಗೆ ಹೇಳಿದ್ದು ನಿಜ....
ಈಗಲೂ ರಾಜನ ಚ್ಹಿತ್ರ ಅಂದ ಕೂಡಲೇ ಅವರೇ ರಾಜನ ದಿರಿಸಲಿ ಕಾಣಿಸುವರು...
>>ಜೊತೆಗೆ ಸೇರಿಸಿದ ಶಕುಂತಲೆ ಚ್ಹಿತ್ರ ಸೂಪರ್...
\|/
ಉ: ಕವಿರತ್ನ ಕಾಳಿದಾಸನಿಗೊಂದು ಭಾಮಿನಿ
ಹಿಮ್ಮಡಿಯ ಹಿಡಿದು ಮರೆತೆನೇ ನಾನಿ೦ದು
ನಡೆದಾಗಲೆಲ್ಲಾ ಘಲ್ಲೆನ್ನುವ ಗೆಜ್ಜೆಯ
ವಿಷಯಾಸಕ್ತಿಯನೇ ಕೆರಳಿಸುವ ಚೆಲುವೆ ಶಕು೦ತಲೆ
ತಿರುತಿರುಗಿ ಬೆ೦ಬತ್ತಿದ ಜೇನ್ನೊಣವನು ಕ೦ಡು
ಅದರ ಶೂಲದ೦ತೆ ತಿವಿಯುವ ಮೀಸೆಗಳಿ೦ದ
ಕಾಯುವವನಾರೆ೦ದು ಎಣಿಸುತ್ತಿರುವಾಗಲೇ
ಕ೦ಡದ್ದು ಎದು ರು ದುಷ್ಯ೦ತ!
ಇದು ಷಟ್ಪದಿಯಲ್ಲ.. ಒಟ್ಟೂ ಚಿತ್ರ ಹಾಗೂ ನಿಮ್ಮ ಕಾವ್ಯದ ಸೊಗಸನ್ನು ಉ೦ಡು, ಬ೦ದ ಸಾಲುಗಳು..
ಆದರೂ ಹ೦ಸನಾದದ ಸೊಗಸೇ ಹಾಗೆ! ಉಳಿದೆಲ್ಲವನ್ನೂ ನಿವಾಳಿಸಿ ಒಗೆದು ಬಿಡುತ್ತದೆ!!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಕವಿರತ್ನ ಕಾಳಿದಾಸನಿಗೊಂದು ಭಾಮಿನಿ
ನಿಮ್ಮ ಒಳ್ಳೇ ಮಾತುಗಳಿಗೆ ನಾನು ಆಭಾರಿ, ಸಪ್ತಗಿರಿವಾಸಿ ಮತ್ತು ನಾವಡ ಅವರೆ :)