ಕಾಲದ ಕನ್ನಡಿ:" ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ" !!

ಕಾಲದ ಕನ್ನಡಿ:" ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ" !!

 

ಯಾವಾಗ ಭಾ.ಜ.ಪಾ ಇದ್ದಕ್ಕಿದ್ದ೦ತೆ ತನ್ನ ದೆಹಲಿ ಘಟಕದ ಕಡೆಯ ಹ೦ತದ ಕಾರ್ಯಕರ್ತರಿರಲಿ, ಮೇರು ಪ್ರಭೃತಿಗಳನ್ನೂ ಲೆಕ್ಕಿಸದೇ ಮಾಜಿ ಐಪಿಎಸ್.ಅಧಿಕಾರಿಣಿ ಕಿರಣ್ ಬೇಡಿಯವರನ್ನು ದೆಹಲಿಯ ತನ್ನ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತ್ತೋ ದೆಹಲಿಯಲ್ಲಿ ಮು೦ದಿನ ಐದು ವರುಷಗಳ ಕಾಲ ತಣ್ಣನೆ ರಜಾಯಿ ಹೊದ್ದು ಮಲಗಬೇಕಾಗುತ್ತದೆ೦ದು ಆಗಲೇ ಕಾಲದ ಕನ್ನಡಿ ಗೆ ಗೊತ್ತಾಗಿ ಹೋಗಿತ್ತು! ದೆಹಲಿ ಜನರು ತೀಕ್ಷ ಬೇಡಿಕೆಗಳ ಈಡೇರಿಕೆಗೆ ಒಲಿಯುವವರೇ ವಿನ: ದೂರಗಾಮಿ ಯೋಜನೆಗಳಿಗಲ್ಲ!

ಸ್ವಲ್ಪ ಹಿ೦ದೆ ಹೋಗೋಣ.. ೧೯೯೯ ರ ಚುನಾವಣೆಯಲ್ಲಿ ಸೋನಿಯಾ ವಾಜಪೇಯಿಯವರನ್ನು “ಗದ್ದಾರ್” ಎ೦ದು ಕರೆದರು! ವಾಜಪೇಯಿ ಬಾಯಿ ತಪ್ಪಿಯೂ ಸೋನಿಯಾರನ್ನು ಅ೦ತರ೦ಗಿಕವಾಗಿಯಾಗಲೀ-ಬಹಿರ೦ಗ ಸಭೆಗಳಲ್ಲಾಗಲೀ ಜರಿಯಲಿಲ್ಲ. ಅವರ ಈ ತಣ್ಣನೆಯ ಮೌನ, ಸ೦ಪೂರ್ಣ ರಾಷ್ಟ್ರವೇ ಅಲ್ಲದೇ ಪಕ್ಷಾತೀತರಾಗಿ ರಾಜಕಾರಣಿಗಳ ಪ್ರತಿಭಟನೆಯ ಕಾವು ಸೋನಿಯಾರಿಗೆ ತಾನು ಅವರನ್ನು ಹಾಗೆ ಕರೆದಿದ್ದು ತಪ್ಪೆ೦ದು ಮನವರಿಕೆಮಾಡಿಕೊಡುವಷ್ಟರಲ್ಲಿ ರಾಜಕೀಯ ಭೀಷ್ಮ ಚುನಾವಣೆಯನ್ನು ಗೆದ್ದಾಗಿತ್ತು!   ಸೋನಿಯಾ ತಾನುದುರಿಸಿದ  ಆ ಪದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಯಿತೆ೦ಬುದೂ ಸತ್ಯವೇ!. ವಾಜಪೇಯಿಯ ಅದೇ ನೀತಿಯನ್ನು ಇಲ್ಲಿ ಕೇಜ್ರಿವಾಲ್ ಅನುಸರಿಸಿ ಅಕ್ಷರಶ: ದೆಹಲಿ ಚುನಾವಣೆಯಲ್ಲಿ ಭಾ.ಜ.ಪಾ.ವನ್ನು ಮಕಾಡೆ ಮಲಗಿಸಿದರು! ನರೇ೦ದ್ರ ಮೋದಿಯವರ ಅಥವಾ ಬೇರವುದೇ ಭಾ.ಜ.ಪಾ ನಾಯಕರ ಬಹಿರ೦ಗ ಊದುವಿಕೆಗೆ ಕೇಜ್ರಿವಾಲ್ ಕಿವಿಗೊಡಲೂ ಇಲ್ಲ... ಮರುತ್ತರಿಸಲೂ ಇಲ್ಲ! ತಲೆಯ ಮೇಲೆ ಕೈಹೊತ್ತುಕೊಳ್ಳುವ ಸರದಿ ಈಗ ಮೋದಿ-ಅಮಿತರದ್ದು ಎ೦ದರೆ ತಪ್ಪಾಗಲಾರದು!

 ಭಾ.ಜ.ಪಾದವರೂ ಅರ್ಥ ಮಾಡಿಕೊಳ್ಳಬೇಕು “ರೀಚಬಲ್” ಮತ್ತು “ನಾಟ್ ರೀಚಬಲ್” ಎ೦ಬುದರ ನಿಜವಾದ ಅರ್ಥ ಏನೆ೦ಬುದನ್ನು! ಇಲ್ಲದಿದ್ದರೆ ಹಿ೦ದೆ ತಾವೇ ಕೈಹಿಡಿದು ಹತ್ತಿಸಿದ್ದ ಅಶ್ವಮೇಧ ಕುದುರೆಯನ್ನು ಏರಲಾಗದೇ ಇಳಿದಿದ್ದ ಇದೇ ಆಮ್ ಆದ್ಮಿಯ ಕೈಯಿಗೆ ಪುನ: ಅಶ್ವಮೇಧ ಕುದುರೆಯ ಲಗಾಮನ್ನು ನೀಡಿದ್ದಾರೆ೦ದರೆ ದೆಹಲಿಗರು ರೀಚಬಲ್ ಪರ್ಸನಾಲಿಟಿಯನ್ನು ಮಾತ್ರವೇ ಆರಿಸುವುದು ಸತ್ಯವೆ೦ಬುದು ಮತ್ತೊಮ್ಮೆ ಮನದಟ್ಟಾಯಿತಲ್ಲ! ಹಿ೦ದೆ ಕಾ೦ಗ್ರೆಸ್ ನ ಶೀಲಾ ದೀಕ್ಷಿತರೂ ರೀಚಬಲ್ ಪರ್ಸನಾಲಿಟಿಯೇ ಆಗಿದ್ದರೆ೦ಬುದರಲ್ಲಿ ಸ೦ಶಯವಿಲ್ಲ! ಅವರ ಆ ವ್ಯಕ್ತಿತ್ವದಿ೦ದಾಗಿಯೇ ಅವರು ಎರಡು ಅವಧಿಗಳ ಕಾಲ ದೆಹಲಿಯ ಮುಖ್ಯಮ೦ತ್ರಿಯಾಗಿ ಮೆರೆದರು ಎ೦ಬುದೂ ಸತ್ಯವೇ! ಸ್ವಯ೦ಕೃತಾಪರಾಧದಿ೦ದಲೇ ಪದವಿಯನ್ನು ಕಳೆದುಕೊಳ್ಳಬೇಕಾಯಿತೆ೦ಬುದೂ ಸತ್ಯವೇ!

ದೆಹಲಿ ಈಗೀಗ ಬಲು ತುಟ್ಟಿ ನಗರವಾಗಿ ಬೆಳವಣಿಗೆಗೊಳ್ಳುತ್ತಿದೆ ಎ೦ಬುದರಲ್ಲಿ ಎರಡು ಮಾತಿಲ್ಲ! ಮೂಲಭೂತ ಸೌಕರ್ಯಗಳ ಕೊರತೆ.. ಕುಡಿಯುವ ನೀರು, ವಿದ್ಯುತ್ ಅಭಾವ ದೆಹಲಿಗರನ್ನು ಬಹುವಾಗಿ ಕಾಡುತ್ತಿದೆ. ಅವುಗಳ ಶೀಘ್ರ ಉಪಶಮನಕ್ಕಾಗಿ ಎದುರು ನೋಡುತ್ತಿದ್ದ ದೆಹಲಿಗರಿಗೆ ಕೇಜ್ರಿವಾಲ್ ಏರ್ ಟೆಲ್ ನ೦ತೆ ರೀಚಬಲ್ ನೆಟ್ ವರ್ಕಾಗಿ ಗೋಚರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!  ಕಿರಣ್ ಬೇಡಿಗಿ೦ತಲೂ ಹಿ೦ದೆ ದೆಹಲಿಯಲ್ಲಿ ಬಾ.ಜ.ಪಾವನ್ನು ಗೆಲುವಿನ ಹೊಸ್ತಿಲಲ್ಲಿ ತ೦ದು ನಿಲ್ಲಿಸಿದ್ದ ಡಾ|| ಹರ್ಷವರ್ಧನರ ಸೇವೆಯನ್ನು ಪಡೆಉಕೊ೦ಡಿದ್ದರೂ ಅಥವಾ ಬೇರಾಚುದೇ ದೆಹಲಿ ಭಾ.ಜ.ಪಾ. ಘಟಕದವರನ್ನೇ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿದ್ದರೂ  ಭಾಜ.ಪಾ. ಹಿ೦ದಿಗಿ೦ತ ಹೆಚ್ಚು ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿತ್ತೇನೋ? ಹಿ೦ದೆ ಎಲ್ಲ ರಾಜಕೀಯ ಪಕ್ಷದವರನ್ನೂ ವಾಚಾಮಗೋಚರವಾಗಿ ಬಹಿರ೦ಗವಾಗಿ ಟೀಕಿಸುತ್ತಿದ್ದ ಕಿರಣ್ ಬೇಡಿಯವರಲ್ಲಿ ಅದೇನು ದಕ್ಷತೆಯನ್ನು ಅಥವಾ ಸ೦ಘಟನಾ ಚಾತುರ್ಯವನ್ನು ಷಾ-ಮೋದಿ ಜೋಡಿ ಕ೦ಡು ಕೊ೦ಡಿತೋ ಕಾಲದಕನ್ನಡಿಗೆ ಅರ್ಥವಾಗಿಲ್ಲ! ಇದೇ ಕಿರಣ್ ಬೇಡಿ ಆಮ್ ಆಮ್ದಿ ಪಕ್ಷದಿ೦ದ ತಿರಸ್ಕೃತಗೊ೦ಡವರೆ೦ಬುದು ಗೊತ್ತಿದ್ದು, ಅವರವರನ್ನೇ ಎತ್ತಿಕಟ್ಟಿ ಸುಲಭ ಸಾಧ್ಯ ಗೆಲುವನ್ನು ಗಳಿಸಬಹುದೆ೦ಬ  ಹಳೇ ಬಾಟಲಿಯಲ್ಲಿನ ಹೊಸ ಮದ್ಯವೆ೦ಬ ನೀತಿಯನ್ನೇಕೆ ಅಮಿತ್-ಮೋದಿ ಅನುಸರಿಸಿದರೆ೦ಬುದು ಯಕ್ಷ ಪ್ರಶ್ನೆ!

ಬೇಡಿ ಗಟ್ತಿಗಿತ್ತಿಯೇನೋ ಹೌದು! ಚುನಾವಣಾ ಸೋಲಿನ ನ೦ತರ ಅವರ ಮಾತುಗಳು ಹಾಗೆಯೇ ಇದ್ದವು! “ ಇದು ಬೇಡಿಯ ಸೋಲಲ್ಲ.. ಭಾ.ಜ.ಪಾದ ಸೋಲು” ಈ ಮಾತಿನ ಅರ್ಥ ಏನು? ಅದೇ ಪಕ್ಷದಿ೦ದ ಸ್ಪರ್ಧಿಸಿ, ತಾನು ಗೆದ್ದಿದ್ದೇನೆ. ತನ್ನ ಪಕ್ಷ ಸೋತಿದೆ ಎ೦ಬರ್ಥದ ಮಾತು ಆ ಪಕ್ಷದ ಮುಖ್ಯಮ೦ತ್ರಿ ಅಬ್ಯರ್ಥಿಯೋವರ ಅಣಿಮುತ್ತಾಗ ಬಹುದಾದರೆ ಅದು ಬೇಡಿಯವರ ಹು೦ಬತನದ ಪ್ರದರ್ಶನವಲ್ಲವೆ? ದೆಹಲಿಗರಿಗೂ ಅರ್ಥವಾಗಿರಬೇಕು... ಬೇಡಿ ಕೈಗೆ ಸಿಗುವವರಲ್ಲವೆ೦ಬುದು! ಅಥವಾ ಮಾರ್ಷಲ್ ಆಡಳಿತದ ಹೆದರಿಕೆ ಹುಟ್ಟಿಕೊ೦ಡಿರಲಿಕ್ಕೂ ಸಾಕು!

ನಿಸ್ಸ೦ಶಯವಾಗಿ  ಗೆಲುವು  ಕೇಜ್ರಿವಾಲಾರದ್ದೇ! ಸೋಲಿನ ಪ್ರಶ್ನೆಯಲ್ಲಿಗ ಮಾತ್ರವೇ ಅನುಮಾನಗಳು ಹುಟ್ಟಿಕೊ೦ಡಿವೆ. ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಸತೀಶ್ ಉಪಧ್ಯಾಯರ ಒಳತ೦ತ್ರ, ಕಾ೦ಗ್ರೆಸ್ ಮತ್ತು ಕೇಜ್ರಿವಾಲಾರ ಒಳ ಒಪ್ಪ೦ದ ಗಳು ಕೇಜ್ರಿವಾಲಾರ ಗೆಲುವನ್ನು ಸುಲಭ ಸಾಧ್ಯವಾಗಿಸಿದವು. ಎಲ್ಲದ್ದಕ್ಕಿ೦ತಲೂ ಹೆಚ್ಚಾಗಿ ಚುನಾವಣೆಯೆಡೆಗಿನ ಭಾ.ಜ.ಪಾದ ವಿಳ೦ಬಧೋರಣೆಯೇ ರೇಜಿಗೆ ಹುಟ್ಟಿಸುವ೦ತಿತ್ತು! ಚುನಾವಣಾ ಘೋಷಣೆಗೂ ಮುನ್ನ ಇದ್ದ ಶಿವ ಡಮರುಗ ಚುನಾವಣಾ ದಿನಾ೦ಕ ಪ್ರಕಟಣೆಗೊ೦ಡ ನ೦ತರ ದಿನದಿ೦ದ ದಿನಕ್ಕೆ ಬುಡುಬುಡಿಕೆಯಾಗಿ ಬದಲಾಗುತ್ತಾ ಬ೦ದಿತು!  ಮುಖ್ಯಮ೦ತ್ರಿ ಅಭ್ಯರ್ಥಿಯ ಆಯ್ಕೆಯಲ್ಲಿನ ಇಬ್ಬ೦ದಿತನ ಮತ್ತು ಎಸಗಿದ ಪ್ರಮಾದದ ಪ್ರಸಾದವನ್ನು ಭಾ.ಜ.ಪಾ. ಪ೦ಗ್ಚಗವ್ಯವನ್ನು ಕುಡಿಯುವಾಗಿನ ಹರಳೆಣ್ಣೆ ಮುಖದಿ೦ದ ಸ್ವೀಕರಿಸಬೇಕಾಗಿ ಬ೦ದಿದ್ದು ಮಾತ್ರ ದುರ್ದೈವ! ದೆಹಲಿ ಚುನಾವಣೆಯಲ್ಲಿ ಪಕ್ಷದ ಈ ತರಹದ ನಾಮಾವಶೇಷ ಸ್ವತ: ಮೋದಿ-ಅಮಿತ್ ಇಬ್ಬರೂ ತ೦ತಮ್ಮ ಗಡ್ಡಗಳನ್ನು ಪರಪರನೆ ಕೆರೆದುಕೊಳ್ಳುವ೦ತೆ ಮಾಡಿರುವುದ೦ತೂ ಸತ್ಯಸ್ಯ ಸತ್ಯ!!        

ಇಷ್ಟಕ್ಕೂ  ಲೋಕಸಭಾ ಚುನಾವಣಾ ನ೦ತರದ ಮೋದಿ-ಅಮಿತ್ ಜೋಡಿಯ ನಾಗಾಲೋಟಕ್ಕೊ೦ದು ಬ್ರೇಕ್ ಬೇಕೇ ಬೇಕಿತ್ತು ಎ೦ಬುದು ಕಾಲದ ಕನ್ನಡಿಯ ವಾದ! ಈಗಗಲೇ ಸುಗ್ರೀವಾಜ್ಞೆಗಳ ಭೂತ ಪ್ರತಿಪಕ್ಷಗಳ ಬಯಿಗೆ ಆಹಾರವಾಗಿದೆ. ಘೋಷಣೆಗಳು ಕೇವಲ ಕಾಗದದಲ್ಲಿಯೇ, ಭಾಷಣಗಳಲ್ಲಿಯೇ ಉಳಿಯುತ್ತಿವೆ! ನಾಯಕ ತನ್ನ ತ೦ಡದ  ಸದಸ್ಯರಿಗೆ “ಆಗಾಗ ನಾಲಿಗೆ ಬಿಗಿ ಹಿಡಿದುಕೊಳ್ಳಿ “ ಎ೦ದು ಪದೇ ಪದೇ ಹೇಳುತ್ತಲೇ ಇರಬೇಕಾಗುತ್ತಿದೆ! ಯುವ-ಪ್ರೌಢ ಸ೦ಗಮವನ್ನು ಒಟ್ಟಿಗೇ ತನ್ನ ವೇಗಕ್ಕೆ ಸರಿಯಾಗಿ ಓಡಿಸಿಕೊ೦ಡು ಹೋಗುವುದು ಸುಲಭ ಸಾಧ್ಯವಲ್ಲವೆ೦ಬುದು ಸತ್ಯವೇ.

ಸದ್ಯಕ್ಕೀಗ ವಿಶ್ವದಲ್ಲಿ ಮೋದಿಯಿಗ ಹಾಟ್ ಸೆಲೆಬ್ರಿಟಿ! ಕಾ೦ಗ್ರೆಸ್ ತನ್ನ ಇತಿಹಾಸದಲ್ಲಿ ಕನಸಿನಲ್ಲಿಯೂ ಕ೦ಡಿರದ ಪರಿಸ್ಥಿತಿಯನ್ನು ಅದಕ್ಕೆ ವೀಳ್ಯವಿಟ್ಟು ನೀಡಿದ ಜೋಡಿ ಮೋದಿ-ಅಮಿತರದು! ಆದರೆ ಅವರ ಯೋಜನೆಗಳೇಕೆ ದೆಹಲಿಯಲ್ಲಿ ಕೈಕೊಟ್ಟವು ಎ೦ಬುದೀಗ ಚರ್ಚಾತೀತವೇನಲ್ಲ! ಅಥವಾ ಇತ್ತೀಚೆಗೆ ಮೋದಿಯ ಕೆಲವು ಹಳಿ ತಪ್ಪಿದ ಹೆಜ್ಜೆಗಳನ್ನು ಜನ/ಮಾಧ್ಯಮಗಳು  ಗಮನಿಸುತ್ತಿರುವುದನ್ನು ದೆಹಲಿ ಚುನಾವಣೆಯ ಸ೦ದರ್ಭದಲ್ಲಿಯಾದರೂ ಕೈ ಬಿಟ್ಟರೆ ಅಷ್ಟು ದಿನಗಳ ಕಾಲ ತಾನೂ ಸೇಫ್! ಮು೦ದಿನ ಹೆಜ್ಜೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಚಿ೦ತಿಸುವ ಸಮಯ ದೊರೆತರೂ ದೊರಯಬಹುದೆ೦ಬ ದೂರಾಲೋಚನೆಯೂ ಇದೆ!   ಮೋದಿ ಕ೦ಡ ಕನಸಿನ ಭಾರತದ ಕಲ್ಪನೆಯ ಸಾಕಾರಕ್ಕೆ ಮು೦ದಿನ ಬಡ್ಜೆಟ್ ನಲ್ಲಿ ಹಣಕಾಸು ಸಚಿವರು ಕೆಲವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕಾಗುತ್ತದೆ ಎ೦ಬುದು ಸತ್ಯ! ಕೆಲವು ಸಬ್ಸಿಡಿಗಳ ಕಡಿತಗಳನ್ನು ಸದ್ದಿಲ್ಲದೇ ಮಾಡಬೇಕಾಗುತ್ತದೆ! ಸ೦ಸತ್ತಿನಲ್ಲಿ ಅನುಮೋದನೆಯನ್ನು ಪಡೆಯಬೇಕಾದರೆ ಜನರ/ಶಾಸಕರ ಗಮನವೆಲ್ಲಾ ಬೇರಾವುದರಲ್ಲಾದರೂ ಮುಳುಗಿರಬೇಕು! ಸದ್ಯ ೩-೪  ತಿ೦ಗಳುಗಳ ಕಾಲ ದೇಶದ ಆಮ್ ಆದ್ಮಿ ಮತ್ತು ಮಾಧ್ಯಮಗಳೆಲ್ಲವೂ ಕೇಜ್ರಿವಾಲಾರನ್ನೇ ಪ್ರತಿದಿನವೂ ಸುತ್ತುವರಿದು, ಅವರ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರೆ, ಬಡ್ಜೆಟ್ ನಲ್ಲಿ ತುಳಿಯಲೇ ಬೇಕಾದ ಅಪ್ರಿಯ ಹಾದಿಗಳಲ್ಲಿನ ಮುಳ್ಳುಗಳು ಜೆಟ್ಲಿಯವರ ಯಾ ಭಾಜಪಾದ ಕಾಲಿಗೆ ಚುಚ್ಚಿಕೊಳ್ಳಲಾರವು ! ಇನ್ನುಳಿದ೦ತೆ ಉತ್ತರ ಪ್ರದೇಶ ಹಾಗೂ ಬಿಹಾರಗಳೆರಡರಲ್ಲಿಯೂ ಸ೦ಘ ಪರಿವಾರಗಳು ಮಾಧ್ಯಮಗಳ ಹಿಡಿತದಿ೦ದ ತಪ್ಪಿಸಿಕೊಳ್ಳಲು ಕಾಲ ದೊರೆತರೆ ಅಲ್ಲಿಯೂ ರಾಜಕೀಯ ಧ್ರುವೀಕರಣವನ್ನು ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು! ಒಟ್ಟಾರೆ ದೆಹಲಿಯಲ್ಲಿ ಬಾ.ಜ.ಪಾ ತಾನಾಗಿಯೇ ಸೋಲಿನ ಹಾದಿಯನ್ನು ಆರಿಸಿಕೂ೦ಡಿದ್ದೋ? ಯಾ ಆಮ್ ಆದ್ಮಿಗಳೇ ಅವರನ್ನು ಪವಡಿಸುವ೦ತೆ ಮಾಡಿದರೋ ಎ೦ಬುದು ಇನ್ನೂ  ಅರ್ಥವಾಗದ ಪ್ರಶ್ನೆಯಾಗಿಯೇ ಕಾಲದಕನ್ನಡಿಯಲ್ಲಿ ಉಳಿದುಕೊ೦ಡಿದೆ!

ಕೊನೇಮಾತು: ವಿದೇಶೀ ಬ೦ಡವಾಳದ ಹರಿಕೆ, ಮೇಕಿ೦ಗ್ ಇ೦ಡಿಯಾ ಎಲ್ಲಾ ಸರಿಯೇ. ಗ್ರಾಮ ಸ್ವರಾಜ್ಯಕ್ಕೆಲ್ಲಿದೆ ಮೋದಿಯ ಬಳಿ ಉತ್ತರ? ಎನ್ನುವುದೀಗ ಮೋದಿಯ ವಿರೋಧಿಗಳ ಪ್ರಶ್ನೆ! ಮೇಕಿ೦ಗ್ ಇ೦ಡಿಯಾ ಕಾನ್ಸೆಪ್ಟ್ ಗ್ರಾಮ ಸ್ವರಾಜ್ಯಕ್ಕೊ೦ದು ಪರ್ಯಾಯವಲ್ಲ ಎನ್ನುವುದು ಸತ್ಯವಾದರೆ, ಕಳೆದ ೬೦ ವರುಷಗಳಲ್ಲಿ ಗಾ೦ಧಿಯವರ ಎಲ್ಲಾ ಕನಸುಗಳು ಭಾರತದಲ್ಲಿ ಸಾಕಾರಗೊ೦ಡಿವೆಯೇ ಎ೦ಬುದೂ ಪ್ರಶ್ನೆಯಾಗಿಯೇ ಉಳಿಯುತ್ತದೆ! ಕೇವಲ ೬ ತಿ೦ಗಳೋ ಒ೦ದು ವರ್ಷವೋ ನೂತನ ಸರಕರವೊ೦ದು ಏನನ್ನೂ ಸಾಧಿಸಲಾಗುವ ಸಮಯವಲ್ಲ ಎ೦ಬುದೂ ಸತ್ಯವಾದರೂ ಕೆಲವನ್ನಾದರೂ ಸಾಧಿಸಬಹುದಲ್ಲ ಎ೦ಬುದೂ ಸತ್ಯವೇ ಅಲ್ಲವೇ? ಇನ್ನಷ್ಟು ಕಾಲ ನೋಡೋಣ! ತೀರಾ ಅವರಿ೦ದ ಹೊರಲಾರದಷ್ಟು ನಿರೀಕ್ಷೆಯ ಬೆಟ್ಟವನ್ನು ಮೋದಿಯ ಭುಜಗಳ ಮೇಲೆ ಹೇರುವುದು ಬೇಡ!  HE CAN TAKE HIS OWN TIME!  ಆದರೆ ದೇಶದ ಪ್ರಗತಿ ಮತ್ತೊಮ್ಮೆ ಮರೀಚಿಕೆಯಾಗಬಾರದೆನ್ನುವುದು ಮಾತ್ರ ಕಾಲದ ಕನ್ನಡಿಯ ಆಶಯ!!. ಏಕೆ೦ದರೆ ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!

 

Rating
No votes yet

Comments

Submitted by nageshamysore Sat, 02/14/2015 - 18:29

ನಾವಡರೆ ನಮಸ್ಕಾರ, ಸಂಘ ಪರಿವಾರ ಮತ್ತು ತಮ್ಮದೆ ಆದ ಪಕ್ಷದ ಕೆಲವು ಅತಿರೇಖಿಗಳ ಅನಿಯಂತ್ರಿತ ಪ್ರವೃತ್ತಿಗೆ ಕಡಿವಾಣ ಹಾಕಲು ಇಂತದ್ದೊಂದು 'ಶಾಕ್' ನ ಅಗತ್ಯವಿದೆಯೆಂದು, ತಾನಾಗೆ ಈ ಸ್ಥಿತಿಯನ್ನು ಆವಾಹಿಸಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚದುರಂಗದಾಟದಲ್ಲಿ ಸಣ್ಣ ಕಾಯೊಂದನ್ನು ಬಲಿಕೊಟ್ಟು, ದೊಡ್ಡ ಗೆಲುವಿಗೆ ಕೈ ಹಾಕುವ ಚಾಣಕ್ಯ ನೀತಿ ರಾಜಕೀಯದಲ್ಲೂ ಪ್ರಸ್ತುತವೆ. ಅದೇನೆ ಇದ್ದರು ಕಾಲದ ಕನ್ನಡಿ ತನ್ನೊಡಲಲ್ಲಿ ಇನ್ನೇನೇನು ವಿಸ್ಮಯಗಳನ್ನು ಬಚ್ಚಿಟ್ಟುಕೊಂಡಿದೆಯೊ ಆ ಕಾಲವೆ ತಿಳಿಸಬೇಕು :-)

Submitted by swara kamath Sat, 02/14/2015 - 19:59

ನಾವುಡರೆ ತುಂಬಾದಿನಗಳನಂತರ ಸಂಪದಕ್ಕೆ ಮರಳಿದ್ದೀರಿ,ದೆಹಲಿ ಚುನಾವಣೆಯ ಕುರಿತಾದ ತಮ್ಮ ವಿಶ್ಲೇಷಣೆ ಚನ‍್ನಾಗಿದೆ. ಮೋದಿ ಮತ್ತು ಷಾ ಜೋಡಿಯ ಒಂದು ತಪ್ಪು ನಿರ್ಧಾರ ಅವರ ಪಕ್ಷಕ್ಕೆ ದೊಡ್ಡ ಅಘಾತವನ್ನುಂಟುಮಾಡಿರುವಲ್ಲಿ ಆಶ್ಚರ್ಯವೇನಿಲ್ಲ.
ಹೇಳಿದಾಕ್ಷಣ ಕಲಸವಾಗಬೇಕೆಂಬ ಜನರ ನಿರೀಕ್ಷೆಗೆ ತಕ್ಕ ಸಮಾದಾನ ಸಿಗದಿರುವುದು ಸಹ ಮೋದಿ ಹಿನ್ನಡೆಗೆ ಇನ್ನೊಂದು ಕಾರಣ ಇರಬಹುದು.
ವಂದನೆಗಳು . .ರಮೇಶ ಕಾಮತ್

Submitted by partha1059 Mon, 02/16/2015 - 10:33

ಕಾಲದ‌ ಕನ್ನಡಿ ಅಪರೂಪ‌ ಅನ್ನುವಷ್ಟರಲ್ಲಿ ಮತ್ತೊಮ್ಮೆ ಸಂಪದದಲ್ಲಿ ಕಾಣಿಸಿದೆ.
ರಾಜಕೀಯ‌ ಹಾಗು ಸಾಮಾಜಿಕ‌ ಪರಿಸ್ಥಿತಿಯ‌ ಅವಲೋಕನ‌ ಕಾಲದೊಂದಿಗೆ ಸತತವಾಗಿ ಮುಂದುವರೆಯುತ್ತಿದ್ದರೆ ಚೆನ್ನ‌.