' ಕಾವ್ಯವೆಂದರೇನು? '

' ಕಾವ್ಯವೆಂದರೇನು? '

ಚಿತ್ರ

  ಇದೊಂದು ಮುಗಿಯದ ಜಿಜ್ಞಾಶೆ

ಭಾವನೆಯ ಅಭಿವ್ಯಕ್ತಿಯೆ ?

ಹೃದಯದ ಭಾಷೆಯೆ

ಇಲ್ಲ ಬರಿ ಬೌದ್ಧಿಕ ಕಸರತ್ತೆ?

ಅಕ್ಷರ ರೂಪ ಪಡೆವುದು

ಮಾತ್ರ ಕಾವ್ಯವೆ? ಚಿತ್ರ ಶಿಲ್ಪಕಲೆ

ಕ್ಷಣ ಕ್ಷಣಕೂ ಬದಲಾಗುವ ಪ್ರಕೃತಿ

ಇವು ಸುಂದರ

ಜೀವಂತ ಕಾವ್ಯ ಪ್ರತೀಕಗಳಲ್ಲವೆ?

 

ಜನ ಸಮುದಾಯ

ಹೃದಯವಂತರಾಗುತ್ತ ಇಲ್ಲವೆ

ಹೃದಯಶೂನ್ಯವಾಗುತ್ತ ಹೋದಂತೆ

ಪಡೆವ ಭಾವನೆಗಳ ಅಭಿವ್ಯಕ್ತಿ ಕ್ರಮ

ಬದುಕು ಬದಲಾಗುತ್ತ ಹೋದಂತೆ

ಮನದ ಭಾವ ಸೂಕ್ಷ್ಮವಾದಂತೆ

ಪಡೆವ ಸಂವೇದನೆಯ

ಅಭಿವ್ಯಕ್ತಿ ಕವಿತೆಯಲ್ಲವೆ? ನಿಜದಲಿ

ಅದುವೆ ಕವನ ಶಿಲ್ಪ

 

ಭಾಷೆ ಮೂಲತಃ ರೂಕ್ಷ

ಅದಕ್ಕೆ ಸೂಕ್ಷ್ಮತೆ ಬರುವುದು

ಭಾವಗಳ ಅಭಿವ್ಯಕ್ತಿ ಕ್ರಮದಿಂದ

ರೂಪಕತೆ ಪ್ರತಿಮಾತ್ಮಕತೆಗಳಿಂದ

ಭಾಷೆಯ ಸೊಗಸಷ್ಟೆ ಕಾವ್ಯವಲ್ಲ

ಪರಿಕಲ್ಪನೆಯ ಸೂಕ್ಷ್ಮ ಅಭಿವ್ಯಕ್ತಿ

ನಿಜ ಕಾವ್ಯ !

 

ಕಾವ್ಯ ವಾಚನ ಬಂಗಾರಕ್ಕೆ

ಕುಂದಣವಿಟ್ಟಂತಾಗುವುದು ಯಾವಾಗ?

ಅದಕೆ ವಾಚಿಸಿಕೊಳ್ಳುವ ಗುಣವಿದ್ದಾಗ

ಕಾವ್ಯ ರಸಿಕ ಹುಡುಕಿ ಬರುತ್ತಾನೆ ಕಾವ್ಯವೂ

ತನ್ನ ಓದುಗನ್ನು ತಾನೆ ಹುಡುಕಿಕೊಳ್ಳುತ್ತದೆ

ಇವು ಕಾವ್ಯ ಕಾವ್ಯಾರಾಧಕನ

ಅವಿನಾಭಾವ ಸಂಬಂಧಗಳು

 

ಕಾವ್ಯ ರಚನೆ ಅಂದು ಕೊಂಡಷ್ಟು

ಸುಲಭವಲ್ಲ ಆದರೆ ಅಷ್ಟು

ಕಷ್ಟಕರವೂ ಅಲ್ಲ! ಕವನದ ಮೂಲಕ

ಏನನ್ನೋ ಹೇಳ ಹೊರಟರೆ

ಅದು ನೀರಸ! ಅದುವೆ

ಏನನ್ನೋ ಹೇ:ಳುವಂತಾದರೆ ಅದೊಂದು

ಸುಂದರ ಲೋಕದ ಅನಾವರಣ

ರಾಮಾಯಣ ಮಹಾಭಾರತಗಳ ಮೂಲಕ

ವಾಲ್ಮಿಕಿ ವ್ಯಾಸರು ಹೇಳಿದ್ದು ಅದನ್ನೆ !

 

           *

ಚಿತ್ರ ಅಂತರ್ ಜಾಲದಿಂದ

 

Rating
No votes yet

Comments

Submitted by lpitnal Wed, 06/03/2015 - 09:11

ಹನುಮಂತ ಅನಂತ ಪಾಟೀಲ ಜಿ, ತುಂಬ ಸಶಕ್ತ ಕವನ. ಕಾವ್ಯ, ಅದರ ವ್ಯಾಪ್ತಿ, ಆಳ, ಹರಿವ ರೀತಿ, ಅರಳು ಚನ್ನಾಗಿ ನಿರೂಪಿವೆ. ಪ್ರಭುದ್ಧತೆ ಸೂಸಿವೆ. ವಂದನೆಗಳು ಸರ್

Submitted by nageshamysore Thu, 06/04/2015 - 01:29

In reply to by lpitnal

ಸೀಮಾತೀತ ಕಾವ್ಯಕ್ಕೊಂದು ಸೀಮೆಯ ಚೌಕಟ್ಟು ಹಾಕಿ ಅಲಂಕರಿಸುವ ನಿಮ್ಮ ಈ ಕವನ,  ಕಾವ್ಯದ ಹಿರಿಮೆಯ ಸೀಮೋಲ್ಲಂಘನ ಮಾಡಿಸಿದೆಯೆಂದೆ ಹೇಳಬೇಕು ಪಾಟೀಲರೆ. ಧನ್ಯವಾದಗಳು.

Submitted by kavinagaraj Thu, 06/04/2015 - 14:54

ಒಳ್ಳೆಯ ಪ್ರಶ್ನೆ, ಉತ್ತರವನ್ನೂ ನೀವೇ ಕೊಟ್ಟಿರುವಿರಿ. ಚೆನ್ನಾಗಿದೆ, ಪಾಟೀಲರೇ.

Submitted by H A Patil Wed, 06/10/2015 - 09:09

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿಇದೆ ಕಾವ್ಯವೆಂದರೇನು ಎಂದು ಪ್ರಶ್ನಿಸಿಕೊಳ್ಳುತ್ತ ಹೊರಟಂತೆ ಹೊಳೆದ ಹೊಳವುಗಳನ್ನು ದಾಖಲಿಸಿದ್ದೆನೆ ಧನ್ಯವಾದಗಳು.

Submitted by partha1059 Wed, 06/10/2015 - 13:30

ನಾಗರಾಜ‌ ಸಾರ್ ಹೇಳಿದಂತೆ ಪ್ರಶ್ನೆ ಕೇಳುತ್ತ‌ ಅದಕ್ಕೆ ಉತ್ತರವನ್ನು ಕೊಡುತ್ತ‌ ಹೋಗಿರುವಿರಿ
ಕಾವ್ಯ‌ / ಕವನ‌ / ಕವಿತೆ ಎನ್ನುವುದು ಮನಸಿನ‌ ಭಾವನೆ ಅಭಿವ್ಯಕ್ತ‌ ಗೊಳಿಸುವ‌ ಒಂದು ರೂಪ‌
ಬಾಷೆ ಅದಕ್ಕೆ ಅಡ್ಡಿಯಾಗಲಾರದು , ಬರೆಯಲಾರದವರು ತಮ್ಮ‌ ಭಾವನೆಗೆ ಕಾವ್ಯದ‌ ರೂಪ‌ ಕೊಡುವರೆಂಬುದಕ್ಕೆ ನಮ್ಮ‌ ಜನಪದ‌ ಹಾಡುಗಳೆ ಕಣ್ಣಮುಂದಿದೆ
ಭಾವನೆಯನ್ನು ಅಕ್ಷರರೂಪಕಿಳಿಸಿದರೆ
ಬಾಷೆ ನಮಗೆ ಅವನ‌ ಅಂತರಾಳ‌ ತಿಳಿಸಲು ಪ್ರಯತ್ನಿಸುತ್ತದೆ, ಬಾಷ‌ ಪ್ರೌಡಿಮೆ ಮಾತ್ರ‌ ಓದುವಿಕೆಯ‌ ಅಹಂಕಾರದ‌ ಪ್ರತೀಕದಂತೆ ಬಾಸವಾಗುತ್ತದೆ , ಆಗ‌ ಅದು ಸಾಮಾನ್ಯನನ್ನು ತಲುಪಲಾರದು,
ಹಾಗೆ ಭಾವನೆಯನ್ನು ರಾಗ‌ ಹಾಗು ಹಾಡಿನ‌ ದ್ವನಿಗಳ‌ ಮೂಲಕ‌ ವ್ಯಕ್ತಗೊಳಿಸಬಹುದು,
ಹಾಗಾಗಿ ರಾಗ‌/ತಾಳ‌ ದ್ವನಿಗಳ‌ ಸಂಯೋಜನೆಯ‌ ಹಾಡುಗಳು ಇತರೆ ಹಾಡುಗಳಿಗಿಂತ‌ ಹೆಚ್ಚು ಪ್ರಸಿದ್ಧಿಪಡೆಯುತ್ತವೆ
ಹಾಗೆ ಒಮ್ಮೆ ಇಟ್ನಾಳರು ಹೇಳಿದಂತೆ ನೆನಪು ಯಾವುದೇ ಹಾಡನ್ನು ಸುಶ್ರಾವ್ಯವಾಗಿ ಸಂಯೋಜಿಸಬಹುದು.
ಕುವೆಂಪು, ದಾರಾಬೇಂದ್ರೆಯವರ‌ ಸಾಹಿತ್ಯ‌ ಗೆಲ್ಲುತ್ತದೆ ಅಂದರೆ ಅದಕ್ಕೆ ಸಂಗೀತದ‌ ಅಳವಡಿಕೆ ಮಾಡಿದಾಗ‌ ಜನಮನ‌ ಮುಟ್ಟುತ್ತದೆ
ಈಗಿನ‌ ಸಾಹಿತ್ಯ‌ ಸೋಲಲು ಕಾರಣಕ್ಕೆ , ಸಾಹಿತ್ಯದ‌ ಅಭಿವ್ಯಕ್ತಿ ಸಂಗೀತದ‌ ಮೂಲಕ‌ ಸಾದ್ಯವಾಗದಿರುವುದು ಕಾರಣವಿರಬಹುದು
ಇದೆಲ್ಲ‌ ನನ್ನ‌ ಸ್ವಂತ‌ ಅಭಿಪ್ರಾಯವಷ್ಟೆ
ಈ ಎಲ್ಲ‌ ಯೋಚನೆಗೆ ಕಾರಣವಾದ‌ ತಮ್ಮ‌ ಕವನಕ್ಕೆ ಅಭಿನಂದನೆಗಳು
ಪಾರ್ಥಸಾರಥಿ

Submitted by H A Patil Fri, 06/12/2015 - 09:16

In reply to by partha1059

ಪಾರ್ಥ ಸಾರಥಿಯವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ ಕವನಕ್ಕಿಂತ ನಿಮ್ಮ ವಿಮರ್ಶೆಯೆ ಅದ್ಬುತವಾಗಿದೆ ನಿಮ್ಮ ಚಿಂತನಾ ಕ್ರಮ ಅದನ್ನು ಪಳಗಿಸಿ ಭಾಷೆಯ ರೂಪ ಕೊಡುವುದು ಮಾಗಿದ ಅಬಿವ್ಯಕ್ತಿಯ ದ್ಯೋತಕ ಧನ್ಯವಾದಗಳು..