ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ, ನಾವಿಬ್ಬರೂ ಆಗಲೇ ನೋಡಿಯಾಗಿದೆ. ಮುಂದೆ ಹೋಗೋಣ" ಅಂದ ಜಯಂತ.(ದೇವಸ್ಥಾನ ಸುತ್ತು ಹಾಕುವ ಆತುರದಲ್ಲಿದ್ದಾನೆ ಕಾಣುತ್ತದೆ :( .)
ಮಂತ್ರಿಮಾಲ್ನಿಂದಾಗಿ ಮಲ್ಲೇಶ್ವರದ ಟ್ರಾಫಿಕ್ಗೆ ಆಗಿರುವ ತೊಂದರೆ ಬಗ್ಗೆ ಮಾತನಾಡುತ್ತಾ, ಮುಂದೆ ಬರುತ್ತಿರುವಾಗ, ೩ನೇ ಕ್ರಾಸ್ನ ಬಲಕ್ಕಿರುವ "ಹಳ್ಳಿಮನೆ" ಹೋಟಲ್ ಕಂಡಿತು. ಆಗಲೇ ೧೦೮+೧೦೮+೧೦೮ ಸುತ್ತು ಹೊಡೆದುದನ್ನು ನೋಡಿ ಬಳಲಿರುವ ನನ್ನ ಹೊಟ್ಟೆ ತಾಳಹಾಕುತ್ತಿತ್ತು. ಒಳಹೋಗಿ ತಾಳಕ್ಕೆ ತಕ್ಕ ಹಾಗೆ mealಅ ಮುಗಿಸಿ ಹೊರಬಂದೆವು.
ನಮ್ಮ ಪಯಣ ಅದೇ ಸಂಪಿಗೆ ರಸ್ತೆಯಲ್ಲಿ ಮುಂದುವರಿಯಿತು." ಇದೇ ನೋಡಿ ಮಲ್ಲೇಶ್ವರ ೫ನೇ ಕ್ರಾಸ್. ಮಲ್ಲೇಶ್ವರ ಸರ್ಕಲ್ ಅಂದೂ ಕರೆಯುತ್ತಾರೆ. ಇಲ್ಲೇ ಎಡಬದಿಯಲ್ಲಿ ಮುಂದಕ್ಕೆ ಪೋಲೀಸ್ ಸ್ಟೇಶನ್, ಪಕ್ಕದಲ್ಲಿ ಇಲ್ಲಿನ ಹೆಸರುವಾಸಿ KCG ಆಸ್ಪತ್ರೆ, ಎದುರಿಗೆ ಆಟದ ಮೈದಾನವಿದೆ.ಈ ಓವರ್ ಬ್ರಿಡ್ಜ್, ಇಲ್ಲಿನ ಕಟ್ಟಡಗಳನ್ನು ನೋಡುವಾಗ, ಕೇವಲ ಕೆಲವೇ ವರ್ಷಗಳ ಹಿಂದೆ ಸ್ಟೇಶನ್ ಎದುರು ರಸ್ತೆಯ ಬಲಬದಿಯಲ್ಲಿ ಟಾಂಗಾ ನಿಲ್ದಾಣವಿತ್ತು ಎಂದು ನಂಬಲೂ ಆಗುವುದಿಲ್ಲ. ಇಲ್ಲ.. ಇಲ್ಲ.. ನಾವು ಅಲ್ಲಿಗೆ ಹೋಗಲಿಕ್ಕಿಲ್ಲ. ನಾವು ಇದೇ ರಸ್ತೆಯಲ್ಲಿ ಮುಂದೆ ಹೋಗೋಣ." ಸಿನೆಮಾಗಳಲ್ಲಿ ಆಗುವಂತೆ ಇಲ್ಲೂ ಇದ್ದಕ್ಕಿದ್ದಂತೆ ಮೋಡ ಕವಿದು, ಮಳೆ ಬರಲು ಶುರುವಾಯಿತು. "ಮಳೆ ನಿಲ್ಲುವವರೆಗೆ ಪುನಃ ಹಳ್ಳಿಮನೆಗೆ ಹೋಗೋಣವಾ" ಎಂದು ಹೇಳಿದಾಗ ಗಾಬರಿಯಿಂದ ನನ್ನ ಹೊಟ್ಟೆ ನೋಡುತ್ತಾ ಚೇತನ "ಬೇಡ, ಬೇಡ. ನಾನು ಮಳೆನಾಡಿನವ, ಈ ಮಳೆ ಯಾವ ಲೆಕ್ಕ?" ಅಂದರೆ ಜಯಂತನೂ " ನಾನು ಮಡಿಯವ. ಮಳೆಬಿದ್ದರೆ ಇನ್ನೂ ಚೆನ್ನ. ನಮ್ಮ ಪಯಣ ಮುಂದುವರಿಸೋಣ"ಅಂದ.
ಮೆಜಾರಿಟಿ ಮಾತಿಗೆ ಬೆಲೆ ಕೊಟ್ಟು ಎರಡು ಹೆಜ್ಜೆ ಮುಂದೆ ಇಟ್ಟಿದ್ದೇನೋ ಇಲ್ಲವೋ, ಒಂದು ಕಾರು ಹಿಂದಿನಿಂದ ಬಂದು ನನಗೆ ಗುದ್ದಿತು.. ಗುದ್ದಿದ ರಭಸಕ್ಕೆ ಕಾರಿನ ಬಾನೆಟ್ ತೆರೆದು, ಕಾರು "ಆ" ಎಂದು ಬಾಯಿ ತೆರೆದು ಆಶ್ಚರ್ಯದಿಂದ ಇರುವಂತೆ ಕಾಣಿಸಿತು! ನನಗೆ ಏಟು ಏನೂ ಆಗಿಲ್ಲ ಎಂದು ಖಾತ್ರಿ ಮಾಡಿಕೊಂಡ ಜಯಂತ್ ಮತ್ತು ಚೇತನ ಕಾರಿನವನ ಮೇಲೆ ಜಗಳಕ್ಕೆ ಹೊರಟರು. ನಾನೇ ತಡೆದು "ಈ ಜನ ಈದಿನವೂ, ಕನ್ನಡಕ ಇಲ್ಲದೇ ಮಳೆಯಲ್ಲಿ ಕಾರು ಡ್ರೈವ್ ಮಾಡಿಕೊಂಡು ಬಂದರು. ರಾಮಮೋಹನ್ ಇರಬೇಕು ನೋಡಿ"ಎಂದೆ. "ಹೌದ್ರೀ, ನಿಮಗೆ ಹೇಗೆ ಗೊತ್ತಾಯಿತು?" "ಹ್ಹ ಹ್ಹ..ಅದೇ ಒಂದು ಸಿನೆಮಾ ಕತೆ..ಕಾರನ್ನು ಸೈಡ್ಗೆ ಪಾರ್ಕ್ ಮಾಡಿಸಿ ರಾಮ್ ಮೋಹನರನ್ನು ಕರಕೊಂಡು ಬನ್ನಿ"
ಸ್ವಲ್ಪ ಹೊತ್ತಿಗೆ ರಾಮ್ ಮೋಹನರು ಬಂದು "ಗೊತ್ತಿಲ್ಲದೇ ನಿಮ್ಮ ಕಾರಿಗೆ ಡ್ಯಾಶ್ ಹೊಡೆದೆ.."
"ಕಾರಿಗಲ್ರೀ ನನಗೇ ಗುದ್ದಿದ್ದು. ಪರವಾಗಿಲ್ಲ, ಮುಂದೆ ಹೋಗೋಣ್ವಾ? "ಅಂದೆ
"ಇಲ್ರೀ..ನೀವು ಮುಂದುವರೆಸಿ. ನನ್ನ ಕಾರಿನ ಬಾನೆಟ್ ಮುಚ್ಚಲಾಗುತ್ತಿಲ್ಲ. ಯಾರಾದರೂ ಮ್ಯಕಾನಿಕ್ನ ಕರಕೊಂಡು ಬಂದು ರಿಪೇರಿ ಮಾಡಿಸಬೇಕು."
"ತಡೀರಿ. ಅಲ್ಪ ಸ್ವಲ್ಪ ಮೆಕಾನಿಕ್ ಕೆಲಸ ನನಗೂ ಬರುತ್ತದೆ. ನೋಡುತ್ತಾ ಇರಿ. ಎರಡೇ ನಿಮಿಷ.." ಅಂದು ಕಾರಿನ ಬಳಿ ಹೋಗಿ, ಕಿಟಕಿ ಇಳಿಸಿ," ಬಾಯಿಮುಚ್ಚಿದರೆ ಸರಿ. ಇಲ್ಲದಿದ್ದರೆ ಕಾರಿನ ಒಳಗೆ ಬಂದು ಕುಳಿತುಕೊಳ್ಳುವೆ" ಅಂದೆ. ಕಾರು ಓರೆಗಣ್ಣಲ್ಲಿ ನನ್ನನ್ನು ನೋಡಿದ್ದೇ, ಟಪ್ ಅಂತ ಬಾನೆಟ್ ಮುಚ್ಚಿಕೊಂಡಿತು. ಚೇತನ್ ಮತ್ತು ಜಯಂತ್ ಕಿಟಕಿಯ ಬಳಿ ಯಾವ ಸ್ವಿಚ್ ಇದೆಯೆಂದು ಹುಡುಕುತ್ತಾ ಇದ್ದರು.
ಬೇಗ ಬನ್ನಿ ಹೀಗೇ ನಿದಾನವಾದರೆ ನಾವು ಚಲೋ ಮಲ್ಲೇಶ್ವರ ಮುಗಿಸುವುದು ಯಾವಾಗಾ?
-ಗಣೇಶ.
ಚಲೋ ಮಲ್ಲೇಶ್ವರ ೫- (ಬಿಡುಗಡೆಗೆ ಸಿದ್ಧವಾಗಿದೆ)
ಮಲ್ಲೇಶ್ವರ ಚಲೋ..ಇತ್ತು- ಪ್ರಭು ಅವರ ಲೇಖನ- http://sampada.net/blog/%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%9A%E0%B2%B2%E0%B3%8B-%E0%B2%87%E0%B2%A4%E0%B3%8D%E0%B2%A4%E0%B3%81/28/08/2011/33120#comment-148336









ಪ್ರತಿಕ್ರಿಯೆಗಳು
ಉ: ಚಲೋ ಮಲ್ಲೇಶ್ವರ ೬
ಸಕತ್ ...ಚಲೋ ಮಲ್ಲೇಶ್ವರ ೫ ಬೇಗನೆ ಬರಲಿ .....
:-)))))))))))
ಉ: ಚಲೋ ಮಲ್ಲೇಶ್ವರ ೬
ಗೋಪಾಲ್ಜಿ,
ಚಲೋ ಮಲ್ಲೇಶ್ವರ ೫- ಮಂಜಣ್ಣನವರಿಗೆ ಬಿಟ್ಟಿದ್ದೆ. ಆದರೆ ಅವರು ಅಣ್ಣಾ ಚಳವಳಿ ಕಡೆ ಹೋದದ್ದರಿಂದ, ಕನ್ನಡ ಸಿನೆಮಾದಂತೆ ಬಿಡುಗಡೆ ಆಗುತ್ತೋ ಇಲ್ಲವೋ ಹೇಳಲಾಗುವುದಿಲ್ಲ.
-ಗಣೇಶ.
ಉ: ಚಲೋ ಮಲ್ಲೇಶ್ವರ ೬
ಚಲೋ ಮಲ್ಲೇಶ್ವರ ಸೀರಿಯಲ್ ಚನ್ನಾಗಿ ಮೂಡಿ ಬರ್ತಾಇದೆ ಹಾಗೆ ರಾಮಮೋಹನರ ಪ್ರವೇಶ ಚನ್ನಾಗಿದೆ, ಒಂದು ಅನುಮಾನ ಇವರಿಗೆ ಡ್ರೈವಿಂಗ್ ಲೈಸೆನ್ಸ್ ಹೇಗೆ ಸಿಕ್ಕಿತು ಅನ್ನೋದು
ಉ: ಚಲೋ ಮಲ್ಲೇಶ್ವರ ೬
ಸತೀಶ್,
ಡಿ.ಎಲ್ ಬಗ್ಗೆ ನನಗೂ ಅನುಮಾನನೇ..ಎರಡು ಕಡೆ ಗುದ್ದಿ ತಪ್ಪಿಸಿಕೊಂಡಿರುವುದನ್ನು ನೋಡುವಾಗ ಜಿ.ಎಲ್. (ಗುದ್ದುವ ಲೈಸೆನ್ಸ್) ಮಾಡಿಸಿಕೊಂಡಿರಬಹುದು. :)
-ಗಣೇಶ.
ಉ: ಚಲೋ ಮಲ್ಲೇಶ್ವರ ೬
<<ಬಾಯಿಮುಚ್ಚಿದರೆ ಸರಿ. ಇಲ್ಲದಿದ್ದರೆ ಕಾರಿನ ಒಳಗೆ ಬಂದು ಕುಳಿತುಕೊಳ್ಳುವೆ" ಅಂದೆ>> ಬಡಪಾಯಿ ಕಾರಿಗೆ ಹೋಗಿ ಈ ರೀತಿ ಹೆದರಿಸಿದ್ದೀರಲ್ಲಾ ಗನೇ’ಸಣ್ಣ’! ಇದು ನ್ಯಾಯಾನಾ? ೫ನೆ ಭಾಗ ನೀವೇ ಹಾಕಿ, ಮು೦ದಿನ ಯಾವುದಾದರೂ ಇನ್ನೊ೦ದು ಭಾಗ ನಾನು ನೋಡ್ತೀನಿ!! :-)
ಉ: ಚಲೋ ಮಲ್ಲೇಶ್ವರ ೬
>>ಬಡಪಾಯಿ ಕಾರಿಗೆ ಹೋಗಿ ಈ ರೀತಿ ಹೆದರಿಸಿದ್ದೀರಲ್ಲಾ ...
ಅವರ ಕಾರು- ಕಿಚ್ ಕಿಚ್ ಕಿಚ್...ಕಿಚಕ್. ಕಿಚಕ್....ಅಂದು ಸ್ಟಾರ್ಟೇ ಆಗುತ್ತಿಲ್ಲಾ..ಒಮ್ಮೆ ಬಂದು ಹೆದರಿಸಿ ಎಂದು ರಾಮಮೋಹನರೇ ಕೇಳುತ್ತಿದ್ದಾರೆ.. ಕಾರನ್ನು ಬಡಪಾಯಿ ಅಂತೀರಿ.
ರಾಮಮೋಹನರ ಕಷ್ಟ ನಿಮಗೆ ಕಾಣಿಸುತ್ತಿಲ್ಲಾ.. ನೋಟ್ ದಿಸ್ ಪಾಯ್೦ಟ್ ರಾಮ್ ಮೋಹನರೆ.
-ಗಣೇಶ.
ಉ: ಚಲೋ ಮಲ್ಲೇಶ್ವರ ೬
ನೋಟೆಡ್ ಯುವರ್ ಆನರ್, ಆದ್ರೆ ಈಗ ಮಂಜು ಸಾರ್ ನ ಎದುರು ಹಾಕಿಕೊಳ್ಳೊಹಾಗಿಲ್ಲ, ಯಾಕೆ ಗೊತ್ತಾ?
ಅಲ್ಲಿ ಲಾಕ್ ಮಾಡಿ ನಿಲ್ಲಿಸಿ ಬಂದಿದ್ದ ಕಾರ್ ಮಾಯವಾಗಿದೆ. ಅಲ್ಲೆ ಇದ್ದ ಫ಼ುಟ್ಪಾತ್ ವ್ಯಾಪಾರಿ ಹೇಳಿದ್ದು-` ನೋ ಪಾರ್ಕಿಂಗ್ನಲ್ಲಿ
ಪಾರ್ಕ್ ಆಗಿದೆ ಅಂತ ಮೀಸೆ ಓಂಕಾರಪ್ಪ್ನೋರು ಎತ್ತಾಕಂಡು ಹೋಗಿದಾರಂತೆ ಟೈಗರ್ ನಲ್ಲಿ`
ಈಗ ಏನ್ಮಾಡೋದು ಗಣೇಶ್ ಜಿ
-ರಾಮಮೋಹನ
ಉ: ಚಲೋ ಮಲ್ಲೇಶ್ವರ ೬
ನಡ್ಕಂಡು ಹೋಗೋರು ರಸ್ತೆ ಪಕ್ಕದಲ್ಲಿ ನಡ್ಯೋದು ಬಿಟ್ಟು ರಸ್ತೆನಲ್ಲಿ ನಡೆದ್ರೆ ನಮ್ಮಂತೋರು ಗಾಡಿ ಎಲ್ಲಿ ಓಡಿಸ್ಬೇಕು ಹೇಳಿ?
ಜೊತೆಗೆ ಅವತ್ತು ನಾನು ನನ್ನ ಸ್ನೇಹಿತರ ಮನೆ ಕಾರ್ಯಕ್ರಮಕ್ಕೆ ಹೊರ್ಟಿದ್ದೋನು ಎಲ್ಲೊ ಏನೊ ಎಡವಟ್ಟಾಗಿದೆ ಅನ್ಕೊಂಡು
ಅಂದಾಜಿನಲ್ಲೆ ಕಾರು ಓಡಿಸ್ತಿದ್ದೆ, ನಿಮ್ಮ ಕಾರಿಗೆ ಅಲ್ಲ ಅಲ್ಲ ನಿಮಗೆ ಗುದ್ದಿ ನಿಂತಮೇಲೆ ಗೊತ್ತಾಗಿದ್ದು, ನಾನು ಆರ್ ಟಿ ನಗರಕ್ಕೆ
ಹೋಗೋದು ಬಿಟ್ಟು `ಗಣೇಶ(ಶಿ)` ಓಡಾಡ್ತಿರೊ ಮಲ್ಲೇಶ್ವರಕ್ಕೆ ಬಂದಿರೋದು ಅಂತ.
ಚೆನ್ನಾಗಿ ಮೂಡಿ ಬರ್ತಿದೆ ಮುಂದುವರೆಸಿ ಪ್ಲೀಸ್.
-ರಾಮಮೋಹನ
ಉ: ಚಲೋ ಮಲ್ಲೇಶ್ವರ ೬
ರಾಮಮೋಹನರೆ,
>>ನಾನು ಆರ್ ಟಿ ನಗರಕ್ಕೆಹೋಗೋದು ಬಿಟ್ಟು `ಗಣೇಶ(ಶಿ)`....
-ಗಣೇಶ ಚತುರ್ಥಿಯ ಪ್ರಯುಕ್ತ ಈ ದಿನ ಪೇಪರ್ ಇರಲಿಲ್ಲ. ಪೇಪರ್ ಇಲ್ಲದಿದ್ದರೆ ನಮಗೆ ದಿನನೇ ಸ್ಟಾರ್ಟ್ ಆಗುವುದಿಲ್ಲ. ಹಾಗೇ ಪೇಪರ್ ಅಂಗಡಿಗೆ ಹೋಗಿ ಹುಡುಕಾಡಿ ಶುಕ್ರವಾರದ ವಿಜಯ next ಪತ್ರಿಕೆ ತಂದೆ. ಅದರಲ್ಲಿ ಸ್ತ್ರೀ ಗಣೇಶ ಇರುವ ವಿಶಯ ಇತ್ತು-ಗಣೇಶಾನಿ. ನನಗೆ ಇದುವರೆಗೂ ಗೊತ್ತಿರಲಿಲ್ಲ. ನೆಟ್ನಲ್ಲಿ ಹುಡುಕಿದಾಗ ನಮ್ಮ ಅಲೆಮಾರಿಯವರ ಒಳಗೂ ಹೊರಗೂ ಬ್ಲಾಗ್ನಲ್ಲಿ ಇದರ ಬಗ್ಗೆ ವಿವರಗಳೂ ಇದ್ದವು- http://olagoo-horago...
-next time 'ಗಣೇಶ(ಶಿ)’ ಬರೆಯುವ ಬದಲು ಗಣೇಶ/ಗಣೇಶಾನಿ ಅಂತ ಬರೆಯಿರಿ. :)
-ಗಣೇಶ.
ಉ: ಚಲೋ ಮಲ್ಲೇಶ್ವರ ೬
ಹ್ಯಾಟ್ಸ್ ಆಫ಼್ ಟು ಯು ಸಾರ್, ಪ್ರಶ್ನೆಗೊಂದು ಉತ್ತರ ಇಟ್ಟಿರುತ್ತೀರ
-ಮರಕ್ಕಿಂತ ಮರ ದೊಡ್ಡದಲ್ಲವೆ?` ಉತ್ತಮ ಮಾಹಿತಿ ಗಣೇಶ್ ಜಿ
-ರಾಮಮೋಹನ
ಉ: ಚಲೋ ಮಲ್ಲೇಶ್ವರ ೬
:) :)
ನಾವು ಸ್ಲೋ ಇಲ್ಲ ಗಣೇಶಣ್ಣ ನಿಮ್ಮ ಜೊತೆಗೆ ಹೆಜ್ಜೆ ಹಾಕ್ತಿದೀವಿ. ನಡೀರಿ ಬೇಗ
ಉ: ಚಲೋ ಮಲ್ಲೇಶ್ವರ ೬
ಚೇತನ್,
ಚೌತಿಯಿಂದಾಗಿ ತಡವಾಯಿತು. ನೀವು ಜತೆ ಇದ್ದರೆ ೯ರ ಕಂತು ಶೀಘ್ರದಲ್ಲೇ..
-ಗಣೇಶ.
ಉ: ಚಲೋ ಮಲ್ಲೇಶ್ವರ ೬
೯ ಬಂತು ಗಣೇಶಣ್ಣ, ನೋಡೋಣ ಮುಂದೆ ಏನಾಗತ್ತೆ ಅಂತ