ರಾಧೆಗೊಬ್ಬನಿದ್ದ ಕೃಷ್ಣ
ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು
ಒಡಲ ಬೇಗೆಗೆ ಇಂದು ಬೇಡ ಮೃಗತೃಷ್ಣ
ಹರಿವ ಯಮುನೆಗು ಇಲ್ಲಿ ನಿನ್ನ ವಿರಹದ ತಪನ
ಗೋಪ ನಂದನದಲ್ಲು ಇಲ್ಲ ಚಿಲಿಪಿಲಿ ರಣನ
ಹೂಗೆ ಧನ್ಯತೆಯಿಲ್ಲ ನೀ ಬರದೆ ರಂಗ
ಹಸಿರ ತೃಣಗಳಿಗಿಲ್ಲ ನಿನ್ನ ಪಾದಸ್ಪರ್ಶ
ಮೇವ ಗೋಗಳಿಗಿಲ್ಲ ನಿನ್ನ ಕೊಳಲಿನ ಕರ್ಷ
ಮಂಕು ಬಡಿದಂತಿಹವು ಜಿಂಕೆ ಸಾರಂಗ
ನನ್ನತನಕಿನ್ನೆಲ್ಲ ವಿಪ್ರಲಂಭದ ಲೇಪ
ಒಲವ ಛಾದನದೊಳಗೆ ನಿನ್ನ ಮಂಗಳರೂಪ
ಕಾಯ್ವ ಆಟವು ಸಾಕು ಬಾರೊ ನನ್ನಿನಿಯ
ನಿನ್ನ ಕೊರಳಿಗೆ ಎರಗಿ ನಿನ್ನ ಕೊಳಲಿಗೆ ಕರಗಿ
ನಿನ್ನ ಬೆರಳೆಡೆ ನಲಗಿ ನಿನ್ನ ನೆರಳಡಿ ಮಲಗಿ
ಶೃತಿಸಿ ಮೈಮರೆಸೆನಗೆ ನಿನ್ನ ಸವಿದನಿಯ
ರವಿಯ ಕಿರಣಕೆ ನಭವು ಕಾದು ಕುಳಿತಿದೆಯಂತೆ
ಮಳೆಯ ಚಿಮುಕಿಗೆ ಹಸಿರು ಇದಿರು ನೋಡ್ತಿದೆಯಂತೆ
ಕಾಯ್ವ ಪರಿಧಿಗಳೊಳಗೆ ಇಹರು ನನ್ನಂತೆ
ಒಡಲೊಳರಲುವ ನುಡಿಯು ದನಿಗೆ ಹಾತೊರೆವಂತೆ
ಸಡಿಲ ಮನಸಿನ ಕನಸು ರೂಪವಾಶಿಸುವಂತೆ
ಪುರುಷ ಪ್ರಕೃತಿಗೆ ಒಲಿವನದಕೆ ನಾ ನಿಂತೆ..
ಅವನ ಕಾಯುತ ನಿಂತೆ ..ಭೂಮಿಯಿರುವಂತೆ...

- ವಿನಾಯಕ ರವರ ಬ್ಲಾಗ್
- Login or register to post comments
- 140 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: