ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ (ಭಾಗ-1)

ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ (ಭಾಗ-1)

 

                                          

 

            ಸರಿ ಸುಮಾರು 1965 ರಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಮತ್ತು ಯೂ.ಆರ್ .ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳು ಪ್ರಕಟಗೊಂಡು ಐವತ್ತು ವರ್ಷಗಳು ಕಳೆದಿದ್ದು ಅವು ಈಗ ಸುವರ್ಣ ಸಂಭ್ರಮದಲ್ಲಿವೆ. ಅನಂತಮೂರ್ತಿಯವರು ನಮ್ಮನ್ನಗಲಿ ಹೋಗಿದ್ದರೆ ಭೈರಪ್ಪ ಇನ್ನೂ ನಮ್ಮ ನಡುವೆ ಇದ್ದು ಬರವಣಿಗೆಯಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟು ಕಾಲ ಸಂದರೂ ಈ ಕಾದಂಬರಿಗಳು ಇನ್ನೂ ಜನಪ್ರಿಯತೆಯನ್ನು ಗಳಿಸಿವೆ. ಅನೇಕ ಬಾರಿ ಪುನರ್ಮುದ್ರಣ ಕಂಡಿವೆ ಅಲ್ಲದೆ ಬೇರೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಅಲ್ಲದೆ ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿವೆ. ಈ ಸುಸಂಧರ್ಭದಲ್ಲಿ ಅವು ಸಾಗಿ ಬಂದ ದಾರಿಯ ಅವಲೋಕನದ ಜೊತೆಗೆ ಅವುಗಳ ಸಾಹಿತ್ಯಾತ್ಮಕ ಪುನರ್ಮನನದ ಅಗತ್ಯವಿದೆ. 1965 ರಲ್ಲಿ ಈ ಎರಡೂ ಕೃತಿಗಳು ಪ್ರಕಟಗೊಂಡುದು ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳಾದ ಮನೋಹರ ಗ್ರಂಥಮಾಲೆ ಮತ್ತು ಸಾಹಿತ್ಯ ಭಂಡಾರಗಳಿಂದ. ಇನ್ನೂ ಇವುಗಳ ಜನಪ್ರಿಯತೆ ಕುಂದಿಲ್ಲ ಹೊಸ ಪೀಳಿಗೆಯನ್ನು ಸಹ ಇವು ಇಂದಿಗೂ ಆಕರ್ಷಿಸುತ್ತಿರುವುದು ಇವುಗಳ ಮಹತಿಗೆ ಸಾಕ್ಷಿ ಎನ್ನಬಹುದು. 

     ಆ ಕಾಲಘಟ್ಟದಲ್ಲಿ ಅನಂತಮೂರ್ತಿಯವರು ಕಥಾ ರಚನೆಗಳಲ್ಲಿ ತೊಡಗಿ ನವ್ಯದ ಹೊಸ ಶೈಲಿಯ ಹುಡುಕಾಟ ದಲ್ಲಿದ್ದರೆ ಭೈರಪ್ಪ ‘ಧರ್ಮಶ್ರೀ’ ಕಾದಂಬರಿಯನ್ನು ಬರೆದು ಜನಪ್ರಿಯರಾಗಿದ್ದರು. ಪ್ರಮುಖ ನವ್ಯ ಕವಿಗಳಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಅವರ ಭಿನ್ನ ಚಿಂತನಾ ಕ್ರಮ ಹಾಗೂ ನಿರರ್ಗಳ ವಾಕÐರಿಯ ಮೂಲಕ ವಿಶಿಷ್ಟ ಪ್ರಭಾವಳಿಯನ್ನು ಹೊಂದಿದ್ದರು. ನವ್ಯದ ಪ್ರಾಥಮಿಕ ಕಾಲಘಟ್ಟದಲ್ಲಿ ಸಾಹಿತಿಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಕಾದಂಬರಿಕಾರರನ್ನು ಕಾಡಿದ್ದು ಹುಟ್ಟಿನ ಪ್ರಶ್ನೆ. ಈ ಕುರಿತು ಕೆಲ ಉದಾಹರಣೆಗಳನ್ನು ಕೊಡುವು ದಾದರೆ ಯಶವಂತ ಚಿತ್ತಾಲರು ಬರೆದ ‘ಪುರುಷೋತ್ತಮ’ ಮತ್ತು ‘ಶಿಕಾರಿ’, ಕೇಶವ ಮಳಗಿಯವರ ‘ಕುಂಕುಮಭಾಗ್ಯ’. ಇವರ ಸಾಲಿಗೆ ‘ವಂಶವೃಕ್ಷ’ ಬರೆದ ಎಸ್.ಎಲ್.ಭೈರಪ್ಪ ಮತ್ತು ‘ಸಂಸ್ಕಾರ’ ಕಾದಂಬರಿ ಬರೆದ ಅನಂತಮೂರ್ತಿಗಳು ಸಹ ಸೇರುತ್ತಾರೆ. ಸಂಸ್ಕಾರವನ್ನ ಬರೆಯುಯವಾಗ ಅನಂತಮೂರ್ತಿಯವರು ಇಂಗ್ಲಂಡ್ ದೇಶದ ಬರ್ಮಿಂಗ್ ಹ್ಯಾಮ್‍ನಲ್ಲಿದ್ದರೆ ‘ವಂಶವೃಕ್ಷ’ ಕೃತಿ ಬರೆದ ಭೈರಪ್ಪ ದೂರದ ಗುಜರಾತನಲ್ಲಿದ್ದರು. 

     ‘ವಂಶವೃಕ್ಷ’ ಭೈರಪ್ಪನವರು ಬೃಹತ್ ಕ್ಯಾನವಾಸಿನಲ್ಲಿ ಚಿತ್ರಿಸಿದ ಸಾಹಿತ್ಯ ಕೃತಿ. ಈ ಇಬ್ಬರೂ ಕಾದಂಬರಿಕಾರರು ತಮ್ಮ ಈ ಕೃತಿಗಳನ್ನು ಬರೆಯುವಾಗ ತಮ್ಮ ಸೃಜನಶೀಲತೆಯನ್ನು ಒಗ್ಗೂಡಿಸಿಕೊಂಡು ಬರೆದಿದ್ದಾರೆ. ಇವು ಓದುಗ ವಲಯವನ್ನು ತಲುಪಿವೆ ಎನ್ನುವುದಕ್ಕೆ ಇವುಗಳು ಅನೇಕ ಬಾರಿ ಪುನರ್ಮುದ್ರಣ ಕಂಡಿರುವುದೆ ಸಾಕ್ಷಿ. 1970-80 ಸಾಂಸ್ಕøತಿಕ ಚಳುವಳಿಯ ಕಾಲ ಈ ಸಮಯದಲ್ಲಿ ಇವರ ಈ ಕೃತಿಗಳು ಅಂದಿನಿಂದ ಇಂದಿಗೂ ಗಂಭೀರ ಚರ್ಚೆಗೆ ಗ್ರಾಸವಾದ ರಚನೆಗಳು. ಇವರಿಬ್ಬರೂ ಪರಸ್ಪರ ವೈಚಾರಿಕ ವಿರುದ್ಧ ಬಿಂದುಗಳಲ್ಲಿ ನಿಂತಿದ್ದಾರೆ. ಆಸಕ್ತಕರ ಚರ್ಚೆಗಳ ಮೂಲಕ ಇವು ಕಾಲದಿಂದ ಕಾಲಕ್ಕೆ ಜನಪ್ರಿಯತೆಯನ್ನು ಪಡೆಯುತ್ತ ಸಾಗಿ ಬಂದಿವೆ. ಚರ್ಚೆ ಮಾಡುವವರು ದಣಿದಿಲ್ಲ ಚರ್ಚೆಗಳು ನಿಂತಿಲ್ಲ.   

       ಸಾಂಪ್ರದಾಯಿಕ ಮೌಲ್ಯಗಳು ಕೇಂದ್ರಿತವಾಗಿರುವುದು ಮತ್ತು ನಿಂತಿರುವುದು ವಂಶದ ಹಾಗೂ ಕುಟುಂಬದ ಕಲ್ಪನೆಯ ಮೇಲೆ ಇದರ ಆಧಾರದ ಮೇಲೆ ‘ವಂಶವೃಕ್ಷ’ವನ್ನು ನೋಡುವುದಾದರೆ ಅದು ಒಂದು ಆಳವಾದ ಚಿಂತÀನಾ ಕ್ರಮದಲ್ಲಿ ರಚನೆಯಾದ ಕೃತಿ. ಶ್ರೀನಿವಾಸ ಶ್ರೋತ್ರಿಯರು ಈ ಕಾದಂಬರಿಯ ಕೇಂದ್ರ ಬಿಂದು. ಕೃತಿಕಾರ ತಮ್ಮವೇ ಆದ ಕೆಲವು ಮೌಲ್ಯಗಳನ್ನು ಅನುಭವದ ಒರೆಗಲ್ಲಿಗೆ ಹಚ್ಚಿದ್ದಾರೆ. ಹೀಗಾಗಿ ಕೆಲವರು ಅನ್ನುವಂತೆ ಅವರು ಶುಷ್ಕ ಪರಂಪರೆಯ ಪ್ರತಿನಿಧಿ ಯಾಗುವುದಿಲ್ಲ. ಯಾವುದನ್ನೆ ಆಗಲಿ ನಿಷ್ಕರ್ಷ ಮಾಡುವ ಅಧಿಕಾರ ಮನುಷ್ಯ ಜೀವಿಗೆ ಇದೆ ಎಂದು ಬಲವಾಗಿ ಪ್ರತಿಪಾದಿ ಸಿದ್ದಾರೆ. ಕಾದಂಬರಿಕಾರರು ಶ್ರೀನಿವಾಸ ಶ್ರೋತ್ರಿಗಳ ಪಾತ್ರಕ್ಕೆ ಒಂದು ಪ್ರಭಾವಳಿಯನ್ನು ನಿರ್ಮಿಸಿದ್ದಾರೆ. ಇದ್ರಕ್ಕೆ ಸಮಾನಾಂತರವಾಗಿ ಇನ್ನೊಂದು ಕುಟುಂಬದ ಕಥೆಯೂ ಅಲ್ಲಲ್ಲಿ ಬಂದು ಹೋಗುತ್ತದೆ. ಆ ಕುಟುಂಬದ ಮುಖ್ಯಸ್ಥ ಸದಾಶಿವ ರಾಯ ಅತ ಇತಿಹಾಸ ತಜ್ಞಜೊತೆಗೆ ಸಂಶೋಧಕ ಆತ ಭಾರತೀಯ ಮೌಲ್ಯಗಳ ಹುಡುಕಾಟದಲ್ಲಿದ್ದಾರೆ. ಆತನ ತಮ್ಮ ರಾಜಾರಾವ್ ಸೃಜನಶೀಲ ಮನಸ್ಸಿನ ತರುಣ ಆತ ಪಾಶ್ಚ್ಯಾತ್ಯ ಸಾಹಿತ್ಯವನ್ನು ಓದಿದವನು ಜೊತೆಗೆ ಇಂಗ್ಲೀಷ್ ಪ್ರಾಧ್ಯಾಪಕ. ಇದು ಒಂದು ರೀತಿಯ ಮೌಲ್ಯಗಳ ತಾಕಲಾಟದ ಮನೋಜ್ಞ ಕಾದಂಬರಿ. 

     ಶ್ರೋತ್ರಿಯರ ಅಭಿಪ್ರಾಯದಲ್ಲಿ ವಂಶದ ಮುಂದುವರಿಕೆಯೆ ಜೀವಿಯ ಮತ್ತು ಅದರ ಜೀವನದ ಸಾತತ್ಯ, ಈ ಪರಿಮಿತಿಯೊಳಗೆ ಸಂಬಂಧಗಳು ಏರ್ಪಡುತ್ತವೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎನ್ನುವ ಪ್ರಬಲ ನಂಬಿಕೆ ಅವರದು. ಒಟ್ಟು ವಂಶದ ಪರಿಕಲ್ಪನೆಯಲ್ಲಿ ವ್ಯಕ್ತಿಯ ಅಭಿಪ್ರಾಯ ಗೌಣ. ವಂಶದ ಚೌಕಟ್ಟಿನಲ್ಲಿ ಮದುವೆ ಮತ್ತು ಸಂಬಂಧಗಳಿಗೆ ಒಂದು ತಾತ್ವಿಕ ಧಾರ್ಮಿಕ ಅರ್ಥವಿದೆ ಅವರು ಇದನ್ನು ಪರೀಕ್ಷೆಗೆ ಒಡ್ಡಿ ನಿಷ್ಕರ್ಷೆ ಮಾಡಿಯೆ ಒಪ್ಪಿಕೊಂಡಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಕಾತ್ಯಾಯನಿ ಮತ್ತು ರಾಜಾರಾವ್ ಹೊಸ ತಲೆಮಾರಿನವರು. ಕಪಿಲಾ ನದಿಯ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯುವ ಈ ಕಥಾನಕ ಪಯಣದ ಮೂಲಕ ತೆರೆದು ಕೊಳ್ಳುತ್ತ ಹೋಗುವಂತಹುದು. ಇಲ್ಲಿ ಆಧುನಿಕತೆ ಒಂದು ಬರಡು ಸತ್ಯವಾಗಿ ಪರಿಣಮಿಸುತ್ತದೆ. ಈ ಕಾದಂಬರಿಯ ಇನ್ನೊಂದು ಪ್ರಮುಖ ಪಾತ್ರ ಸದಾಶಿವರಾವ್ ಪಾತ್ರ ಸಹ ಒಂದು ಸತ್ಯವನ್ನು ಅರಸಿ ಹೊರಟಿದ್ದಾರೆ. ಅವರಿಗೆ ನಾಗುವಿನೊಂದಿಗೆ ಈ ಮೊದಲೆ ಮದುವೆಯಾಗಿದೆ, ಅವರ ದಾಂಪತ್ಯಕ್ಕೆ ಪೃಥ್ವಿ ಎಂಬ ಏಕೈಕ ಗಂಡು ಸಂತಾನವಿದೆ. ಪತಿಯೆ ಪರದೈವ ಎಂದು ನಂಬಿದ ಪರಂಪರಾಗತ ಮೌಲ್ಯಗಳ ಬಂದಿ. ಈ ನಾಗುವಿಗೆ ತನ್ನ ಗಂಡ ಮಗ ಮತ್ತು ಮೈದುನ ರಾಜಾರಾವ್‍ರೊಂದಿಗಿನ ಸಂಬಂಧ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಆಕೆ ಜಡ್ಡುಗಟ್ಟಿದ ಮೌಲ್ಯಗಳ ಮುಂದುವರಿಕೆಯಾಗಿ ಕಂಡು ಬರುತ್ತಾಳೆ. ಆದರೆ ಗಂಡ ಸದಾಶಿವರಾಯನ ಆದ್ಯತೆಗಳೆ ಬೇರೆ ಇವೆ. ಆತ ಜ್ಞಾನವನ್ನು ಕೃಷಿ ಮಾಡಬೇಕು ಎನ್ನುವವರು ಇತಿಹಾಸ ಸಂಶೋಧನೆ ಅವರನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಟ್ಟಿದೆ. ಈ ಮಾರ್ಗ ಕ್ರಮಣೆಯಲ್ಲಿ ಪತ್ನಿ ನಾಗುವಿನ ಸಾಹಚರ್ಯ ಅವರಿಗಿಲ್ಲ ಆಕೆಯೆ ಜೀವನಕ್ರಮ ಮತ್ತು ಮೌಲ್ಯಗಳು ಬೆರೆಯೆ ಇವೆ. ಅವರಿಗೊಬ್ಬ ಸಂಶೋಧನಾ ಸಹಾಯಕಿ ಇದ್ದಾಳೆ ಅವಳೆ ಕರುಣ, ಅವರು ಅಪ್ಪಿಕೊಂಡ ಸಂಶೋಧನಾ ಮಾರ್ಗದಲ್ಲಿ ಆಕೆ ಜೊತೆ ಜೊತೆಗೆ ಸಾಗಬಲ್ಲಳು ಮತ್ತು ಸಹಕಾರಿಯಾಗಬಲ್ಲಳು. ಆಕೆಯ ಸಾಹಚರ್ಯದ ಅನಿವಾರ್ಯತೆ ಸದಾಶಿವರಾಯರಿಗೆ ಇದೆ. ಈ ಉದ್ದೇಶ ಈಡೇರಿಕೆಗಾಗಿ ಅವರು ಆಕೆಯನ್ನು ಮದುವೆಯಾಗುತ್ತಾರೆ. ಇದೊಂದು ರೀತಿಯ ಬೌದ್ಧಿಕ ಸಾಹಚರ್ಯ, ಇಲ್ಲಿ ಲೇಖಕನಿಗೆ ತನ್ನವೆ ಆದ ಸ್ಪಷ್ಟ ನಿಲುವುಗಳಿವೆ. 

    ಇದಕ್ಕೆ ಸಮಾನಾಂತರವಾಗಿ ಶ್ರೀನಿವಾಸ ಶ್ರೋತ್ರಿಗಳ ಕುಟುಂಬದಲ್ಲಿ ಹೆಂಡತಿ ಭಾಗಿರಥಿ ಮಗ ನಂಜುಂಡ ಶ್ರೋತ್ರಿ ಸೊಸೆ ಕಾತ್ಯಾಯನಿ ಮತ್ತು ಮೊಮ್ಮಗ ಚೀನಿ ಇದ್ದಾರೆ. ಇಲ್ಲಿ ಶ್ರೀನಿವಾಸ ಶ್ರೋತ್ರಿಗಳ ಹೆಂಡತಿ ಪರಂಪರಾಗತ ಮೌಲ್ಯಗಳ ಮುಂದುವರಿಕೆಯ ಪ್ರತಿನಿಧಿಯಾದರೆ ಸೊಸೆ ಆ ಪರಂಪರಾಗತ ಮೌಲ್ಯಗಳ ಪೊಳ್ಳುತನಕ್ಕೆ ಬಲಿಯಾಗದ ಭಿನ್ನ ಅಭಿಪ್ರಾಯದ ಸ್ವಕೇಂದ್ರಿತ ಪಾತ್ರ. ಕುಟುಂಬದ ಎರಡು ಚರಮ ಬಿಂದುಗಳ ಮಧ್ಯೆ ನವ ಪೀಳಿಗೆಯ ಪ್ರತಿನಿಧಿ ಚೀನಿ ಇದ್ದಾನೆ. ಅತ್ತ ಹೋಗಲಾಗದ ಇತ್ತ ಬಿಡಲಾಗದ ಹೊಯ್ದಾಟದ ಸ್ಥಿತಿಯಲ್ಲಿ ಅವನಿದ್ದಾನೆ. ಬಿ.ಎ.ಪದವಿಗೆ ಓದುತ್ತಿದ್ದ ನಂಜುಂಡ ಶ್ರೋತ್ರಿ ಹಾವು ಕಚ್ಚಿ ಮೃತ ಪಟ್ಟಿದ್ದಾನೆ ವ ಇಧವೆ ಸೊಸೆಯನ್ನು ತಲೆ ಬೋಳಿಸಿ ಆಕೆಯ ಕುಂಕುಮ ಅಳಿಸಿ ಬಳೆ ಒಡೆದು ಸಂಪ್ರದಾಯದ ಹಾದಿಯಲ್ಲಿ ಸಾಗುವ ಇಂಗಿತ ಶ್ರೋತ್ರಿಗಳ ಹೆಂಡತಿಯದು. ಸೊಸೆ ಕಾತ್ಯಾಯನಿ ಸಣ್ಣ ವಯಸ್ಸಿನವಳು ಅವಳು ಮನಃಪೂರ್ವಕವಾಗಿ ಒಪ್ಪಿದರೆ ಸರಿ ಇಲ್ಲವಾದರೆ ಆಕೆಯನ್ನು ಬಲವಂತದಿಂದ ಮಡಿ ಮಾಡಿಸುವುದು ಶ್ರೀನಿವಾಸ ಶ್ರೋತ್ರಿಯರಿಗೆ ಒಪ್ಪಿಗೆಯಾಗದ ಸಂಗತಿ. ಕಾತ್ಯಾಯನಿ ವೈಧವ್ಯದ ನೋವು ಮರೆಯಲು ಕಾಲೇಜು ಓದು ಮುಂದುವರೆಸಿ ಬಿ.ಎ.ಪದವಿ ಪೂರೈಸಿ ತನ್ನ ಗಂಡನ ಪದವಿಯ ಆಶೆಯನ್ನು ಪೂರೈಸುವುದು. ಸಂಪ್ರದಾಯದ ಕಟ್ಟು ಪಾಡುಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಯೋಚಿಸಿದ ಶ್ರೀನಿವಾಸ ಶ್ರೋತ್ರಿಗಳು ತಮ್ಮ ಹೆಂಡತಿಯ ಪ್ರಲ ವಿರೋಧದ ಮಧ್ಯೆಯೂ ಸೊಸೆ ಕಾತ್ಯಾಯನಿಯ ಓದು ಮುಂದುವರಿಸುವಿಕೆಗೆ ಅಸ್ತು ಎಂದಿದ್ದಾರೆ. 

     ಕಾತ್ಯಾಯನಿ ತಾನೋದುವ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ರಾಜಾರಾವ್‍ನ ವಿದ್ವತ್ತು ಬುದ್ಧಮತ್ತೆ ಸುಸಂಕೃತ ನಡುವಳಿಕೆಗೆ ಮಾರು ಹೋದ ಆಕೆ ಆತನಲ್ಲಿ ಅನುರಕ್ತಳಾಗಿದ್ದಾಳೆ. ಪರಸ್ಪರ ಆಕರ್ಷಿತರಾದ ಅವರಿಬ್ಬರೂ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ರಾಜಾರಾವ್ ಮನೆಯಲ್ಲಿ ಯಾವುದೆ ತಕರಾರು ಇಲ್ಲ ಆತನ ಅತ್ತಿಗೆ ಒಪ್ಪಿಗೆ ನೀಡಿದ್ದಾಳೆ. ತೊಡಕು ಇರುವುದು ಕಾತ್ಯಾಯನಿಯ ಮನೆಯಲ್ಲಿ. ಅತ್ತೆ ಜಡ್ಡುಗಟ್ಟಿದ ಮೌಲ್ಯಗಳ ಪ್ರತಿನಿಧಿ ಮಾವ ವಿಚಾರವಂತರಾದರೂ ಅವರೆದುರು ತನ್ನ ಮದುವೆ ಕುರಿತು ಮಾತನಾಡÀಲು ಒಂದು ರೀತಿಯ ಅಂಜಿಕೆ. ಅವಳಿಗೆ ತಾನು ವಿಧವೆ ಮರು ಮದುವೆಯಾಗುವುದು ಸಂಪ್ರದಾಯದ ವಿರೋಧಿ ಎಂಬ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಹೀಗಾಗಿ ಅವಳು ಒಂದು ಪತ್ರ ಬರೆದು ತನ್ನ  ಮದುವೆಗೆ ಅನುಮತಿ ಕೋರಿದ್ದಾಳೆ ಅವರು ಅದನ್ನು ಓದಿದ್ದಾರೆ ಕೂಡ. ಶ್ರೋತ್ರಿಗಳ ಪ್ರಕಾರ ಮದುವೆ ಎನ್ನುವುದು ಸಂತಾನದ ಅಭಿವೃದ್ಧಿಗಾಗಿ ಇದು ಧರ್ಮ ಮತ್ತು ಸಮಾಜ ಒಪ್ಪಿದ ರೀತಿ. ಇಲ್ಲಿ ತನ್ನ ಸೊಸೆಗೆ ಒಂದು ಮಗುವಿದೆ ಹೀಗಾಗಿ ಆಕೆಯ ಮರು ಮದುವೆಯ ಇಚ್ಛೆ ಅಕ್ರಮ ಮತ್ತು ಸಂಪ್ರದಾಯ ವಿರೋದಿ ನಡೆ ಎಂದು ತೋರಿ ಬರುತ್ತದೆ. ಇಲ್ಲಿ ಲೇಖಕರು ಚಿತ್ರಿಸಿದ ಕಾತ್ಯಾಯನಿಯ ಪಾತ್ರ ಜೀವನಾನುಭೋಗ ಜೀವಂತಿಕೆ ಮತ್ತು ಆರೋಗ್ಯವಂತಿಕೆಯಿಂದ ಕೂಡಿರುವುದಾಗಿದೆ ಎನಿಸುತ್ತದೆÉ. ಪ್ರಕೃತಿಗೆ ನೈತಿಕತೆಯ ಯಾವುದೆ ನಿರ್ಭಂಧಗಳಿಲ್ಲ ನಾವು ರೂಪಿಸಿದ ನೀತಿ ನಿಯಮಗಳಿಗೆ ಅದು ಬದ್ಧವಲ್ಲ ಎನ್ನುವುದು ಕಾತ್ಯಾಯನಿಯ ನಿಲುವಾದರೆ, ನಮ್ಮ ಜೀವನದಲ್ಲಿ ಒಂದು ಹಂತ ದಾಟಿದ ಮೇಲೆ ಮತ್ತೆ ಅದಕ್ಕೆ ಮರಳುವುದು ಸಮಂಜಸವಲ್ಲ ಶ್ರೀನಿವಾಸ ಶ್ರೋತ್ರಿಯರ ನಿಲುವು. ಒಂದು ಹಂತದಲ್ಲಿ ಸಾಯಲು ನಿರ್ಧರಿಸುವ ಕಾತ್ಯಾಯನಿಗೆ ಆಕೆಯ ಅಂತರ್ದನಿ ಆ ದಾರಿಗೆ ಹೋಗದಂತೆ ಆಕೆಯನ್ನು ತಡೆಯುತ್ತದೆ. 

     ಈ ಕಥಾನಕ ನಡೆಯುವ ಕಾಲಘಟ್ಟ ಸಾಂಪ್ರದಾಯಿಕ ಮೌಲ್ಯಗಳ ಮತ್ತು ವ್ಯಕ್ತಿಗಳ ಮಾನಸಿಕ ಹೊಯ್ದಾಟ ಮತ್ತು ತಾಕಲಾಟಗಳನ್ನು ನಿರೂಪಿಸುವಂತಹುದು. ಶ್ರೀನಿವಾಸ ಶ್ರೋತ್ರಿ ಪರಂಪರಾಗತ ಮೌಲ್ಯಗಳನ್ನು ಪ್ರತಿನಿಧಿಸುವ ಒಂದು ಉನ್ನತ ಶಿಖರ ಅದನ್ನು ಏರಿ ನಿಲ್ಲುವುದು ಕಾತ್ಯಾಯನಿಗೆ ಸಾಧ್ಯವಾಗುವುದಿಲ್ಲ. ಕಡೆಗೂ ಪರಂಪರೆಯ ಮೌಲ್ಯಗಳ ಅಕ್ಟೊಪಸ್ ಹಿಡಿತದಿಂದ ಹೊರ ಬರುವುದು ಆಕೆಗೆ ಆಗದೆ ಇರುವುದು ಆಕೆಯು ಆಯ್ದುಕೊಂಡ ಬದುಕಿನ ದುರಂತ. ಇಲ್ಲಿ ರಾಜಾರಾವ್ ಎಲ್ಲ ವೈಚಾರಿಕ ಚಿಂತನೆಗಳ ಮಧ್ಯೆಯೂ ಪುರುಷ ಸಂಕೇತವಾಗಿದ್ದಾನೆ. ಈ ಪರಂಪರೆಯ ತಾಕಲಾಟಗಳಲ್ಲಿ ನಿಜಕ್ಕೂ ತಬ್ಬಲಿಗಳಾಗುವವರು ಸದಾಶಿವರಾವ್ ಮತ್ತು ನಾಗೂ ದಂಪತಿಗಳ ಮಗ ಪೃಥ್ವಿ ಮತ್ತು ಶ್ರೀನಿವಾಸ ಶ್ರೊತ್ರಿಗಳ ಮೊಮ್ಮಗ ಚೀನಿ. ಅವರಿಬ್ಬರೂ ಆಯಾ ವಂಶಗಳ ಮೂರನೆ ತಲೆಮಾರಿನ ಪ್ರತಿನಿಧಿಗಳಾಗಿ ಗೋಚರಿಸುತ್ತಾರೆ. ಒಂದು ರೀತಿಯ ಮುಜುಗರ ಮತ್ತು ಅನಾಥ ಪ್ರಜ್ಞೆ ಅವರನ್ನು ಕಾಡುತ್ತ ಬಂದಂತೆ ಕಾಣುತ್ತದೆ. ಈ ಕೃತಿಗೆ ತನ್ನದೆ ಆದ ಹರಿಯುವಿಕೆಯ ಓಘವಿದೆ ಮತ್ತು ಯಾವುದು ಸಂಪ್ರದಾಯ ಎನ್ನುವುದು ತೀವ್ರವಾಗಿ ಕಾದಂಬರಿಯುದ್ದಕ್ಕೂ ಓದುಗನನ್ನು ಕಾಡುತ್ತದೆ. ಕಾದಂಬರಿಕಾರರು ಶ್ರೀನಿವಾಸ ಶ್ರೋತ್ರಿಯರ ವ್ಯಕ್ತಿತ್ವಕ್ಕೆ ಒಂದು ವಿಶೇಷ ಪ್ರಭಾವಳಿಯನ್ನು ಅಗತ್ಯತೆ ಮೀರಿ ನಿರ್ಮಿಸಿದ್ದಾರೆ ಎನಿಸುತ್ತದೆ. ಅಷ್ಟೆಲ್ಲ ವೇದ ಪುರಾಣ ಅರಣ್ಯಕ ಮತ್ತು ಧರ್ಮ ಗ್ರಂಥಗಳನ್ನು ಓದಿದ ಶ್ರೀನಿವಾಸ ಶ್ರೋತ್ರಿ ತಾನು ಈ ವಂಶಕ್ಕೆ ಸೇರಿದ ವ್ಯಕ್ತಿಯಲ್ಲ ಎನ್ನುವ ಸತ್ಯ ಗೊತ್ತಾದಾಗ ಅದನ್ನು ಮೀರಿ ನಿಲ್ಲದೆ ಚೀನಿಯನ್ನು ಒಬ್ಬಂಟಿಯಾಗಿ ಬಿಟ್ಟು ಯಾಕೆ ತೆರಳುತ್ತಾರೆ ಅವರು ಪಲಾಯನವಾದಿಯಾಗಿ ಕಂಡು ಬರುತ್ತಾರೆ. ಈ ಶ್ರೋತ್ರಿಗಳ ಪಾತ್ರ ಮಾತ್ರ ಗೊಮ್ಮಟನ ಹಾಗೆ ಬೆಳೆದು ಉಳಿದ ಪಾತ್ರಗಳು ಕುಬ್ಜವಾಗಿವೆ ಎನಿಸುತ್ತದೆ. ಈ ರಚನೆಯಲ್ಲಿ ತಮ್ಮ ಹುಟ್ಟಿನ ಸತ್ಯ ತಿಳಿದ ಶ್ರೀನಿವಾಸ ಶ್ರೋತ್ರಿ ವೈರಾಗ್ಯದ ಹಾದಿ ಹಿಡಿದರೆ ಸಂಸ್ಕಾರದ ಪ್ರಾಣೇಶಾಚಾರ ಜೀವನಕ್ಕೆ ಮರಳುವ ಸ್ಥಿತಿಗೆ ತಲುಪುತ್ತಾರೆ. ವಂಶವೃಕ್ಷದ ಶ್ರೋತ್ರಿಯರು ತಮ್ಮ ಜೀವನಕ್ಕೆ ವಿಮುಖರಾಗುತ್ತಾರೆ.

                                                       

                                                                                                 (ಮುಂದುವರಿದುದು)

                                                                                    *

 

Rating
No votes yet

Comments

Submitted by lpitnal Sat, 09/26/2015 - 23:36

ಹಿರಿಯರಾದ ಹನುಮಂತ ಪಾಟೀಲ್ ಸರ್, ತಮ್ಮ ಈ ಸುವರ್ಣಮಹೋತ್ಸವದ ವಿಶೇಷ ಲೇಖನ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಎರಡೂ ಕೂಡ ಕನ್ನಡದ ಅತ್ಯುತ್ತಮ ಕೃತಿಗಳು. ಇವುಗಳನ್ನು ಟಚ್ ಮಾಡಿ ದೊಡ್ಡ ಧೈರ್ಯ ಮಾಡಿದ್ದೀರಿ ಸರ್. ಅಮೋಘವಾಗಿ ಮೂಡಿಬರುತ್ತಿದೆ, ತಮ್ಮ ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದೆ, ಹಳೆಯ ನೆನಪುಗಳೆಲ್ಲ ಕೆದಕಿ ಕೆದಕಿ ಕಾಡುತ್ತಿವೆ, ಕಾಲನ ವಿಪ್ರಲಂಭ ಸ್ಥಿತಿಯಲ್ಲಿ ಎಷ್ಟೊಂದು ಬದಲಾವಣೆಗಳಾಗಿಬಿಟ್ಟಿವೆಯಲ್ಲಾ ಈ ನೆಲದ ಮಣ್ಣಿನ ಆದರ್ಶಗಳಲ್ಲಿ. ಅಸಂಖ್ಯ ಶಬ್ದಸೌಷ್ಟವಗಳನ್ನು ಮೈಗೂಡಿಸಿಕೊಂಡ ಕನ್ನಡ ಸಾಹಿತ್ಯ ಜಗತ್ತು, ಈಗ ತನ್ನತನವನ್ನು ಕಳೆದುಕೊಂಡಂತೆ ಕಾಣುತ್ತದೆ, ಈಗಿನ ಸಾಹಿತ್ಯವನ್ನು ಅವಲೋಕಿಸಿದಾಗ. ಅದೊಂದು ಯುಗದಲ್ಲಿ ಸಂಸ್ಕೃತಿ ಸಂಸ್ಕಾರಗಳ, ಸುತ್ತ, ಮುರಿಯವುದಾದರೂ ಮಾತು ಕತೆ, ಕಥಾನಕಗಳು ಅದರ ಸುತ್ತಲೇ ಇರುತ್ತಿದ್ದವು, ಒಂದು ರೀತಿಯಲ್ಲಿ ಸಮಾಜವನ್ನು ಪುಟವಿಟ್ಟು ಶುದ್ಧಗೊಳಿಸುತ್ತಿದ್ದವು. ಈಗ, ಈ ವಿಷಯಸೂಚಿಯೇ ಇರುವುದಿಲ್ಲ. ಕೇವಲ ಧರ್ಮ , ಸಂಪ್ರದಾಯಗಳ ದಮನವೇ ಕೆಲವರ ಒನ್ ಪಾಯಿಂಟ್ ಪ್ರೋಗ್ರಾಮ್ ಆಗಿ ಬಿಟ್ಟಿದೆ. ಎಲ್ಲಿಯೋ ತಪ್ಪಿದ್ದೇವೆ ಅನಿಸುತ್ತದೆ. ಇರಲಿ, ತಮ್ಮ ಮುಂದಿನ ಭಾಗಕ್ಕೆ ಕಾಯುವೆ ಸರ್. ವಂದನೆಗಳು

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಈ ಎರಡೂ ನನ್ನನ್ನು ಬಹಳವಾಗಿ ಕಾಡಿದ ಕೃತಿಗಳು ಅವೆರಡನ್ನೂ ಮತ್ತೊಮ್ಮೆ ಓದ ಬೇಕು ಎನಿಸಿತು ಜೊತೆಗೆ ಅವುಗಳ ಕುರಿತು ಸಂಪದಿಗರ ಜೊತೆ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಎನಿಸಿತು ಆಗ ರೂಪ ಪಡೆದ ಕಿರು ಲೇಖನವಿದು ತಮ್ಮ ಪ್ರತಿಕ್ರಿಯೆ ಲೇಖನದ ಮೌಲ್ಯವನ್ನು ಹೆಚ್ಚಿಸಿದೆ ಧನ್ಯವಾದಗಳು.

Submitted by nageshamysore Sun, 09/27/2015 - 07:13

ಪಾಟೀಲರೆ ನಮಸ್ಕಾರ. ತಮ್ಮ ವಿವರವಾದ ವಿಮರ್ಶಾತ್ಮಕ ಮತ್ತು ಮಾಹಿತಿಭರಿತ ಸುಧೀರ್ಘ ಲೇಖನ ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದೆ. ಈ ಉತ್ಕೃಷ್ಟ ಕೃತಿಗಳನ್ನು ಹೊಸ ಪೀಳಿಗೆಗೆ ಇಷ್ಟು ಸವಿವರವಾಗಿ ಪರಿಚಯಿಸುವ ಕೆಲಸ ನಿಮ್ಮಿಂದಾಗುತ್ತಿರುವುದು ಶ್ಲಾಘನೀಯ. ಜತೆಗೆ ಅದನ್ನು ಕಂಡುಂಡು ಬೆಳೆದ ಸಮಕಾಲೀನರಿಗೆ ಮತ್ತದರ ಅಸುಪಾಸಿನವರಿಗೆ, ಅದನ್ನೆಲ್ಲ ಮತ್ತೊಮ್ಮೆ ಅಸ್ವಾದಿಸಿ ಮೆಲುಕು ಹಾಕುವ ಅವಕಾಶ. ಇನ್ನೂ ಓದಿರದವರಿಗೆ, ಅದರತ್ತ ಗಮನ ಹರಿಸಲು ಒಂದು ಸಣ್ಣ ಪ್ರೇರಣೆ. ಇವೆಲ್ಲವನ್ನು ಸಮೀಕರಿಸಿದ ತಮ್ಮ ಈ ಬರಹದ ಆಲೋಚನೆಗೆ ಹೃತ್ಪೂರ್ವಕ ನಮನಗಳು ಮತ್ತು ಅಭಿನಂದನೆಗಳು.

ನಾಗೇಶ ಮೈಸೂರುರವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ವಿಮರ್ಶಾತ್ಮಕ ಪ್ರತಿಕ್ರಿಯೆ ಲೇಖನಕ್ಕೆ ಒಂದು ವಿಶಿಷ್ಟ ಮೆರುಗನ್ನು ನೀಡಿದೆ ಮೆಚ್ಚುಗೆಗೆ ಧನ್ಯವಾದಗಳು.