July 8, 2012 - 8:52pm
ಹುಷಾರಿ ಹುಷಾರಿ ಶೆಟ್ಟರ
ಹುಷಾರಿ ಹುಷಾರಿ ಶೆಟ್ಟರ
ಏರುತಿದ್ದಿ ನೀ ಎತ್ತರ
ಸುತ್ತ ಮುತ್ತಲೂ ಬ್ರಷ್ಟರ
ಸೇರಿಸಬೇಡವೋ ಹತ್ತಿರ
ಹುಷಾರಿ ಹುಷಾರಿ ಶೆಟ್ಟರ
ನಿನ್ನನು ಹೊಗಳುವ ಮಂದಿ
ಮಾಡುತಾರೆ ನಿನ್ನ ಬಂಧಿ
ಮಠ ಮಂದಿರಗಳ ಋಣದಿ
ಬೀಳ ಬ್ಯಾಡ ನೀ ಹಗರಣದಿ
ಹುಷಾರಿ ಹುಷಾರಿ ಶೆಟ್ಟರ
ಇರುವುದು ಆರೆಂಟೇ ಮಾಸ
ಮಾಡದಿರೂ ನಾಡಿಗೆ ಮೋಸ
ಬೇಡದಿರೂ ಎಂಜಿಲ ಕಾಸ
ಕೆಡಿಸದೆ ನಾಯಕರ ಕೇಸ
ಹುಷಾರಿ ಹುಷಾರಿ ಶೆಟ್ಟರ
ಹೆಸರಿಗೆ ನೀನು ಜಗದೀಶ
ಸಿಕ್ಕಿದೆ ಒಳ್ಳೆಯ ಅವಕಾಶ
ಜನರನು ಮಾಡಲು ಕಾಲಕಸ
ಬೇಡುವೆ ತೊಡದಿರು ಹೊಸವೇಶ
ಹುಷಾರಿ ಹುಷಾರಿ ಶೆಟ್ಟರ
ನೀಚರಿಗೊದೆತವು ಬೀಳಲಿ
ಕೆಡುಕಿನ ನಾಯಕರಳಿಯಲಿ
ಹಾರೈಸುವೆ ಜಯವಾಗಲಿ
ನಾಡಿಗೆ ಶುಭ ಗೆಲುವಾಗಲಿ
ಹುಷಾರಿ ಹುಷಾರಿ ಶೆಟ್ಟರ
- ಸದಾನಂದ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಹುಷಾರಿ ಹುಷಾರಿ ಶೆಟ್ಟರ
ಇದನ್ನು ಜಗದೀಶ ಶೆಟ್ಟರ್ ಕಛೇರಿಯೊಳಗೆ ಅವರಿಗೆ ಕುಳಿತ ಕೂಡಲೇ ಎದುರು ಕಾಣುವ೦ತೆ ಹಾಕಲು ಹೇಳಬೇಕು!
ಚೆನ್ನಾಗಿದೆ ಹಿರಿಯರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಹುಷಾರಿ ಹುಷಾರಿ ಶೆಟ್ಟರ
ಕವನವೇನೊ ನೀವು ಹೇಳಿದಂತೆ ಚೆನ್ನಾಗಿಯೆ ಇದೆ ನಾವಡರೆ
ಆದರೆ ಸದಾನಂದರ ಆಶಯ ಈಡೇರುವುದು ಅನುಮಾನವೆ
ಜಗದೀಶ ಶೆಟ್ಟರು ಅಧಿಕಾರಕ್ಕೆ ಬಂದಿರುವ ಸಂದರ್ಬವೆ ಹಾಗಿದೆ
ಅವರು ಅಧಿಕಾರಕ್ಕೆ ಬರಲು ಬಳಸಿದ ಮಾರ್ಗವೆ ಹಾಗಿದೆ
ಹೆಚ್ಚಿನ ನಿರೀಕ್ಷೆಗಳೇನು ಬೇಡ.
ಅವರು ಮತ್ತೆ ಯಾರು ಅವರ ಕಾಲು ಎಳೆಯದಂತೆ ಎಚ್ಚರವಹಿಸಿದರೆ ಸಾಕು
ಕ್ರಿಕೇಟ್ ನಲ್ಲಿಯ 'ನೈಟ್ ವಾಚ್ ಮನ್ ' ರೀತಿಯಲ್ಲಿ
ಪಾರ್ಥಸಾರಥಿ
ಉ: ಹುಷಾರಿ ಹುಷಾರಿ ಶೆಟ್ಟರ
ಪಾರ್ಥಸಾರಥಿಗಳೇ ಜಗದೀಶ ಶೆಟ್ಟರು ತುಸು ಸಜ್ಜನನಂತೆ ಕಾಣುತ್ತಾರೆ. ಒಳ್ಳೆಯದನ್ನು ಅಲ್ಪ ಸ್ವಲ್ಪವಾದರೂ ನಿರೀಕ್ಷಿಸಬಹುದೇನೋ, ಅಪರೂಪಕ್ಕೆ ನೈಟ್ ವಾಚ್ ಮನ್ ಗಳು ಸೆಂಚುರಿ ಹೊಡೆದಿದ್ದು ಇದೆ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. - ಸದಾನಂದ
ಉ: ಹುಷಾರಿ ಹುಷಾರಿ ಶೆಟ್ಟರ
ನಾವುಡರೆ ಈ ಕವನವನ್ನು ಫೆಸ್ ಬುಕ್ ನಲ್ಲಿ ಜಗದೀಶ ಶೆಟ್ಟರ ಪುಟಕ್ಕೆ ಸೇರಿಸಿದ್ದೇನೆ. ಓದುತ್ತಾರೋ ನೋಡೋಣ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು - ಸದಾನಂದ
ಉ: ಹುಷಾರಿ ಹುಷಾರಿ ಶೆಟ್ಟರ
ಸದಾನಂದ ಸರ್,
ನಿಮ್ಮ ಕವನ ಓದಿದ ಮೇಲೆ ನನಗೆ ದಿನಕರ ದೇಸಾಯಿಗಳ ಚುಟುಕವೊಂದು ನೆನಿಪಿಗೆ ಬಂತು. ಅದು ಹೀಗಿದೆ: "ಶೆಟ್ಟಿ ಮಗನಿಗೆ ಹೇಳಿದ್ದು"
ಅಕ್ಕಿ ಬೇಳೆಯೊಳಗೆ ಹಾಕಿ ಮಾರಿದರೆ ಕಲ್ಲು,
ಆಗುವುದಿಲ್ಲವೋ ನಿನಗೆ ಗಲ್ಲು,
ಬಲಗೈಲಿ ಬಾಚಿಕೊಂಡು, ಸಿಕ್ಕಿಬಿದ್ದಾಗ ಎಡಗೈಲಿ ತೂರು.
ಇದನ್ನು ಶೆಟ್ಟರು ಅಳವಡಿಸಿಕೊಳ್ಳದಿದ್ದರೆ ಸಾಕು :((
ಉ: ಹುಷಾರಿ ಹುಷಾರಿ ಶೆಟ್ಟರ
ಶ್ರೀಧರ ಬಂಡ್ರಿಯವರೇ, ನೀವು ನೆನಪಿಸಿದ ದಿನಕರ ದೇಸಾಯಿಯವರ ಚುಟುಕ ತುಂಬಾ ಸೊಗಸಾಗಿದೆ. ಶೆಟ್ಟರು ಅಂತಹ ಶೆಟ್ಟಿಯಾಗದಿರಲೆಂದು ಹಾರೈಸುವಾ - ಸದಾನಂದ
ಉ: ಹುಷಾರಿ ಹುಷಾರಿ ಶೆಟ್ಟರ
ಆಶಯ ಚೆನ್ನಾಗಿದೆ ... ಆಸೆ ಹಯ'ವೇರಿ ಆಶಯ 'ಶಯ'ವೇರದಿದ್ದರೆ ಸಾಕು :(
ಉ: ಹುಷಾರಿ ಹುಷಾರಿ ಶೆಟ್ಟರ
ಶ್ರೀನಾಥ ಭಲ್ಲೆಯವರಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. - ಸದಾನಂದ