ಮೂರು ಕೋತಿಗಳ ಬಾಲ ಹಿಡಿದು
ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ.
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.
ಈಗ ನನ್ನ ಕಥೆ ಕೇಳಿ. ನಾನು ವಿದೇಶಕ್ಕೆ ಹೊರಟಿರುವುದರಿಂದ ಸಂಪೂರ್ಣವಾಗಿ ದೈಹಿಕ ಪರೀಕ್ಷೆ ಮಾಡಿಸ ಬೇಕೆಂದು ನಿರ್ಧರಿಸಿದೆ. ಇತರ ಪರೀಕ್ಷೆಗಳೆಲ್ಲ ಆದಮೇಲೆ ನನ್ನ ಗಮನ ಕಣ್ಣು ಕಿವಿ ಬಾಯಿಗಳ ಮೇಲೆ ಹರಿಯಿತು.
ಸರಿ, ನನ್ನ ಜೀವನದಲ್ಲಿ ಪ್ರಥಮಬಾರಿಗೆ ದಂತವೈದ್ಯರೊಬ್ಬರ ಬಳಿ ಹೋಗಿ ಹಲ್ಲುಗಿಂಜಿದೆ. ಅವರು ತಮ್ಮ ಬಾಯಿಗೊಂದು ಅಡ್ದಬಟ್ಟೆ ಕಟ್ಟಿಕೊಂಡು ನನ್ನ ದಂತಪಂಕ್ತಿಯನ್ನು ಪರೀಕ್ಷಿಸಿದರು. ಮೊದಲು ನಿಮ್ಮ ಹಲ್ಲಿನ ಕಲೆಗಳೆಲ್ಲವನ್ನು ತೆಗೆಯೋಣವೆಂದರು. ವೈದ್ಯರ ಅಣತಿಯಂತೆ ಲಲನಾಮಣಿಯೊಬ್ಬಳು ಆಯುಧಪಾಣಿಯಾಗಿ ನನ್ನ ಹಲ್ಲುಗಳನ್ನು ಸಾಣೆಹಿಡಿಯತೊಡಗಿದಳು. ಪ್ರಥಮ ಚುಂಬನೆ ದಂತಭಗ್ನಂ ಎಂದರೆ ಇದೇ ಇರಬೇಕು ಎಂದುಕೊಂಡೆ. ನಂತರ ವೈದ್ಯರು ಬಂದು ನನ್ನು ಹಲ್ಲಿನ ಹುಳುಕುಗಳನ್ನೆಲ್ಲ ಸಿಮೆಂಟಿನಿಂದ (ಸೀಮೆ ಅಂಟು?) ಮುಚ್ಚಿಹಾಕಿದರು. ನನಗೋ ಒಳಗೊಳಗೆ ನಗು. ಕಾರಣ ಮಿ.ಬೀನ್ ಸೀರಿಯಲ್ ನಲ್ಲಿ ದಂತವೈದ್ಯರ ಕಾಲಿಗೆ ಬೀನ್ ಅನಸ್ತೇಶಿಯಾ ಚುಚ್ಚಿಬಿಡುವ ನೆನಪು ಬಂದುಬಿಟ್ಟಿತ್ತು. ಸರಿ ಹಾಗೂ ಹೀಗೂ ಹೊರಗೆ ಬಂದಾಗ ಗೊತ್ತಾಯಿತು, ದಂತವೈದ್ಯರು ಕೀಳುವುದು ಹಲ್ಲಲ್ಲಾ, ಹಣ ಎಂದು ! ಧನ್-ತಾ ವೈದ್ಯರು !
ನನ್ನ ಮುಂದಿನ ಬೇಟಿ ಕಿವಿಯ ವೈದ್ಯರ ಬಳಿ. ನನ್ನ ಎರಡೂ ಕಿವಿಗಳಲ್ಲೂ ಮೇಣ ತುಂಬಿಕೊಂಡ ಕಾರಣ ಬಹಳ ನವೆಯಾಗಿ ರಣವಾಗಿತ್ತು. ಅವರು ಅದಕ್ಕೊಂದು ಕರ್ಣಾಮೃತ ಕೊಟ್ಟು ಮೂರುದಿನಗಳು ಹಾಕಿಕೊಂಡು ನಂತರ ಬರಲು ಹೇಳಿದರು. ತಿರುಗಿ ಹೋದಾಗ ಪಿಚಕಾರಿಯಿಂದ ನೀರುಬಿಟ್ಟು ಮೇಣತೆಗೆದು ನನ್ನನ್ನು ಸುಕರ್ಣನನ್ನಾಗಿಸಿದರು.
ನಂತರ ನಾನು ಹೋಗಿದ್ದು ಕಣ್ಣಿನ ವೈದ್ಯರಬಳಿ. ಸಧ್ಯಕ್ಕೆ ನನ್ನ ಕಣ್ಣಿನ ಶಕ್ತಿಯಲ್ಲಿ, ಅಲ್ಲಾ, ನನ್ನ ಕಣ್ಣಿನ ನಿಶ್ಯಕ್ತಿಯಲ್ಲಿ ಹೆಚ್ಚಿನ ಬದಲಾವಣೆ ಏನೂ ಇರಲಿಲ್ಲ. ಆದರೆ ನನ್ನ ಕನ್ನಡಕದ ಮೇಲಾಗಿದ್ದ ಗೀಚುಗಳು (ಶುದ್ಧ ಕನ್ನಡದ ಸ್ಕ್ರ್ಯಾಚುಗಳು) ನನ್ನ ದೃಷ್ಟಿಯನ್ನೇ ಮಂದಮಾಡಿದ್ದವು. ಹೊಸ ಸುಲೋಚನ ಧರಿಸಿದೊಡನೆಯೇ ಮತ್ತೆ ತಿಳಿಯಾದ ಪ್ರಪಂಚ ಕಾಣಿಸತೊಡಗಿತು.
ಹೀಗಿತ್ತು ನನ್ನ ಒಳ್ಳೆಯದನ್ನು ಕೇಳುವ, ಒಳ್ಳೆಯದನ್ನು ಕಾಣುವ, ಒಳ್ಳೆಯದನ್ನು ಆಡುವ-ಅಗೆಯುವ ಹಾಗೆಯೇ ಕೆಟ್ಟದ್ದನ್ನು ಬಿಸಾಡುವ (use & throw ?) ಅನುಭವ.
- ಸುಚರ
----------------------
ಬ್ಲಾಗುವ ನಾಯಿ ಕಚ್ಚುವುದಿಲ್ಲ

- suchara ರವರ ಬ್ಲಾಗ್
- Printer-friendly version
- Login or register to post comments
- 1157 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ದಂತಭಗ್ನಂ
ಸುಚರರೆ,
ಲೇಖನ ಚೆನ್ನಾಗಿದೆ; ಹೀಗೆಯೇ ಬ್ಲಾಗುತ್ತಿರಿ!
ನಿಮ್ಮ ಸುನೇತ್ರ - ಸುಕರ್ಣ - ಸುದಂತಗಳು ವಿದೇಶದಲ್ಲೂ ಸುಸ್ಥಿತಿಯಲ್ಲಿರಲೆಂದು ಆಶಿಸುತ್ತೇನೆ.
ಅದಿರಲಿ, ಪ್ರಥಮ ಚುಂಬನೇ ದಂತಭಗ್ನಂ ಎಂದಿರಲ್ಲಾ, ಲಲನಾಮಣಿಯೊಂದಿಗೇನು ಮಾಡಿದಿರಿ ಸ್ವಾಮೀ?!
ನಿಮ್ಮವ
ಬೆನಕ
ಉ:ದಂತಭಗ್ನಂ
ಸ್ವಾಮಿ ಏಕದಂತರೆ,
ದಂತಭಗ್ನವಾಗಿದ್ದರಿಂದ ನಿಮಗೆ ಸದಾ ಚುಂಬನದಚಿಂತೆಯೇ ?
ಕೆಟ್ಟದ್ದನ್ನು ಹೇಳಬೇಡಿ - ಯೋಚಿಸಬೇಡಿ.
ಜೊತೆಗೆ ಇನ್ನೊಂದು ಹೇಳಲು ಮರೆತಿದ್ದೆ. ಪಕ್ಕದಲ್ಲೆ ನನ್ನ ಅರ್ಧಾಂಗಿಯೂ ಇದ್ದಳು. ಅವಳ ಹಲ್ಲುಗಳನ್ನೂ ಕೀಳುಸುತ್ತಿದ್ದೆ !
-ಸುಚರ
ಮುಕ್ಕೋತಿ
ನೀವೇನೋ ಕೋತಿ ಬಾಲ ಹಿಡಿದು ಅಂತ ತಪ್ಪಿಸಿಕೊಂಡ್ರಿ ಸ್ವಾಮಿ. ಆದರೆ ಗಾಂಧಿಯವರ ಕೋತಿಗಳು ಬರೀ ಸಾಂಕೇತಿಕ ಎನ್ನುತ್ತಾ ಮುಸುಕಿನ ಗುದ್ದು ಕೊಡಲು ನೋಡುತ್ತಿದ್ದೀರೋ ಹೇಗೆ??
ಆ ಮೂರು ಕೋತಿಗಳು ಯಾರಿರಬಹುದು? ನಿಮಗಿಂತ ಮುಂದೆ ಪರದೇಶಿಗಳಾದ ನಿಮ್ಮ ಗೆಳೆಯರೋ ಅಥವಾ ನಿಮ್ಮ ವೈದ್ಯರನ್ನೇ ವಾನರ ಜಾತಿಗೆ ಸೇರಿರುತ್ತಿದ್ದೀರಾ??
ವೈದ್ಯೋ ನಾರಯಣೊ ಹರಿಃ - ಹರಿ ಎಂದರೆ ವಾನರ ಎಂದೂ ಆಗುತ್ತದೆ ಎಂಬ ದುರಾಲೋಚನೆಯೋ??
ಏನೇ ಆದರೂ ಸುಕರ್ಣರಾಗಿದ್ದುದು ನಿಮಗೆ ಸ್ವಲ್ಪ ತೊಂದರೆ. ವಿಮಾನದಲ್ಲಿ ನಿಮ್ಮ ಕಿವಿ ತುಂಬುವವರು ಬಹಳ ಸಿಗುತ್ತಾರೆ. ವಿಕರ್ಣರಾಗಿದ್ದರೆ "ಜಾಣ ಕಿವುಡು" ಅಭಿನಯಿಸುವುದು ಸುಲಭ ಅಲ್ಲವೇ??
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ:ಮುಕ್ಕೋತಿ
ನಿಮ್ಮ ಕಲ್ಪನೆಗಳಿಗೆ ನೀವೇ ಜವಾಬ್ದಾರರು
-ಸುಚರ
ಮೂರು ಕೋತಿಗಳು
ನಿಮ್ಮ ಬರಹ ಚೆನ್ನಾಗಿದೆ ; ಮತ್ತೆ , ಮತ್ತೆ ( ಅಂದರೆ ಎರಡು ಬಾರಿ ) ಓದಿದೆ . ನಿಮ್ಮ ಶೈಲಿಯೂ ಚೆನ್ನಾಗಿದೆ. ನಿಮ್ಮಿಂದ ಇನ್ನಷ್ಟು ಬರಹ ಎದುರು ನೋಡುವೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
'ಏಕದಂತ ಕ್ಲಿನಿಕ್'
ಸುಚರರೇ,
ಓಹೋ! ದಂ-ಪತಿ ದಂತ ಭಂಗ ಕಾರ್ಯಕ್ರಮವೋ! ಒಳ್ಳೆಯದು.
ಈ ಹಲ್ಮುರುಕ ಬೆನಕನ ಮೇಲೆ ಕೋಪಿಸಿಕೊಳ್ಳಬೇಡಿ ಸ್ವಾಮೀ; ಇವನಿಗೆ ಚುಂಬನವಿಲ್ಲದೇ ದಂತಭಗ್ನಂ ಆಗಿಬಿಟ್ಟಿದೆ!
ಇವನ ಹೆಸರಿನಲ್ಲಿ ಚಿಕಿತ್ಸಾಲಯದ ಫಲಕ ಹಾಕಲು ವೈದ್ಯರೇ ಹೆದರುತ್ತಾರೆ. 'ಏಕದಂತ ಕ್ಲಿನಿಕ್' ಎಂಬ ಹೆಸರು ನೋಡಿಯೇ ಜನ ಹೆದರಿ ಓಡುತ್ತಾರೆ!
ನೋಡಿ, ಹಲ್ಲಿನ ವೈದ್ಯರಿಗೂ ಸಾಹಿತ್ಯಾಸಕ್ತಿ: 'ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ....' ಕೊರೆವುದೇ ಜೀವನ; ಏನಂತೀರಿ?
ನಿಮ್ಮ
ಬೆನಕ