ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಅಲ್ಲಮನ ವಚನವನ್ನು ಬಿಡಿಸಿ
ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ
ವಚನವನ್ನು ವಿಚಾರ ಮಂಟಪದಿಂದ ಪಡೆದೆ :-
" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿ(ಚ್ಚು?)ಗ ವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ..ನಮ್ಮ ನಲ್ಲಂಗೆ!
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!"
ಇಷ್ಟೆ ಅರ್ಥ ಆಗಿದ್ದು ನನಗೆ:-
ನಿಚ್ಚ - ನಿಜ (?)
ಅಚ್ಚುಗ - ಮೋಹ
ಕಿಚ್ಚು - ಬೆಂಕಿ
ಬೆಂಕಿ ಹೊತ್ತುಕೊಂಡು ಅಚ್ಚನೆ(?) ಆಡಲು ಅಚ್ಚುಗ(ಮೋಹ) ಯಾಕೆ ಆಗುತ್ತೆ? ![]()
ಯಾಕೆ ನಿಶ್ಚಿಂತೆಯಾಯ್ತು ? ![]()

- ವೈಭವ ರವರ ಬ್ಲಾಗ್
- Login or register to post comments
- 615 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಅಲ್ಲಮನ ವಚನವನ್ನು ಬಿಡಿಸಿ
ಅಲ್ಲಮನ ವಚನವನ್ನು ಮತ್ತೆ ಚಿಂತಿಸಲು ಅವಕಾಶಮಾಡಿಕೊಟ್ಟದ್ದಕ್ಕೆ ನಿಮಗೆ ಕೃತಜ್ಞ.
ಸ್ವಾರ್ಥದ ಲಾಭದ ಕಾಮನೆಯೂ ಇಲ್ಲದೆ, ಭಯವೂ ಇಲ್ಲದೆ ಬದುಕುವ ರೀತಿಯ ಅಚ್ಚರಿಯನ್ನು ಈ ವಚನ ಹೇಳುತ್ತದೆ ಅನ್ನುವುದು ನನ್ನ ತಿಳಿವಳಿಕೆ. ಅದನ್ನು ಸ್ಪಷ್ಟಮಾಡುವುದಕ್ಕೆ ಗಂಡು ಹೆಣ್ಣಿನ ರೂಪಕದ ಬಳಕೆಯಾಗಿದೆ. ದೇವರು ಗಂಡು, ಭಕ್ತ ಹೆಣ್ಣು. ಒತ್ತೆ ಅನ್ನುವ ಮಾತು ವೇಶ್ಯೆಯೊಬ್ಬಳು ತಾನು ಸುಖ ನೀಡಿದ್ದಕ್ಕೆ ವಿಟನಿಂದ ಪಡೆಯುವ ಹಣ ಅನ್ನುವ ಅರ್ಥದಲ್ಲಿ ವಚನಕಾರರು ಅನೇಕ ಕಡೆಗಳಲ್ಲಿ ಬಳಸಿರುವುದುಂಟು. ದೇವರ ಆರಾಧನೆ ಹಾಗೆ ದುಡ್ಡಿನ ಲಾಭಕ್ಕೆ ಮಾಡುವಂಥ ಸಂಬಂಧವಾದರೆ ದೇವರಿಗೆ ಅಚ್ಚರಿಯಾದೀತು. ಎಲ್. ಬಸವಾರಜು ಅವರು ಮುಂದಿನ ಸಾಲುಗಳನ್ನು ತಲೆಯ ಮೇಲೆ ಬೆಂಕಿ ಹೊತ್ತು ಮಾಡುವಂಥ ಭಯಂಕರ ಪೂಜೆ ಎಂದು ವಿವರಿಸುತ್ತಾರೆ. ದೇವರನ್ನು ಅಂಜಿಸಿ ವರ ಪಡೆಯುವಂಥ ಪೂಜೆಯೂ ಸರಿಯಾದುದಲ್ಲ. ಗಳಿಹ ಎಂದರೆ ಸುಳ್ಳು, ವಂಚನೆ. ಮನಸ್ಸಿನಿಂದ ಸುಳ್ಳು ವಂಚನೆಗಳನ್ನು ಇಳಿಸಿಕೊಂಡಾಗ ನಿಶ್ಚಿಂತೆ ಆಗುತ್ತದೆ. ದೇವರನ್ನು ಬೇರೆಯಾವ ಅಪೇಕ್ಷೆಯೂ ಇಲ್ಲದೆ, ಭಯವೂ ಇಲ್ಲದೆ ನಿಶ್ಚಿಂತ ನಿರಾಳ ಮನಸ್ಸಿನಿಂದ ಬಯಸುವುದು ಸರಿಯಾದ ಆಶ್ಚರ್ಯಕರವೂ ಆದ ದಾರಿ.
ಇನ್ನು ಸುಮಾರು ಮುನ್ನೂರು ವರ್ಷಗಳ ಹಿಂದೆ ಇದ್ದ ಕಲ್ಲುಮಠದ ಪ್ರಭುದೇವರು ಕೊನೆಯ ಸಾಲುಗಳಲ್ಲಿ ಬರುವ ಬೆಂಕಿಯನ್ನು ಜ್ಞಾನಾಗ್ನಿ ಎಂದು ವಿವರಿಸಿರುವುದುಂಟು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿನ ಬೆಂಕಿಯನ್ನು ಮೈಮನಸ್ಸುಗಳಲ್ಲಿ ಹೊತ್ತು ಕೊಂಡೇ ದೇವರೊಡನೆ ಸಂಬಂಧ ಇಟ್ಟುಕೊಳ್ಳುವುದು ಅನ್ನುವುದು ಅವರ ವಿವರಣೆ. ಅರಿವು ಬೆಂಕಿಯಂತೆಯೇ ಅಲ್ಲವೇ!
ನಿಶ್ಚಿಂತ ಅನ್ನುವ ಮಾತು ನನಗೆ ಬಹಳ ಮುಖ್ಯವಾಗಿ ಕಾಣುತ್ತದೆ. ದೇವರು ಮನುಷ್ಯ ಬಿಡಿ, ನಮ್ಮ ಎಲ್ಲ ಸಂಬಂಧಗಳೂ ನಿಶ್ಚಿಂತ ಸಂಬಂಧಗಳೇ ಆದಾಗ ಅದರಂಥ ಆಶ್ಚರ್ಯ, ಅದರಂಥ ಸುಖ ಯಾವುದು ಇದ್ದೀತು!
Re: ಅಲ್ಲಮನ ವಚನವನ್ನು ಬಿಡಿಸಿ
ಒಎಲ್ ಎನ್ ಸ್ವಾಮಿಯವರೆ,
ಕಷ್ಟವಾದ ವಚನವನ್ನು ಬಿಡಿಸಿದ್ದೀರ...ತಮಗೆ ನನ್ನಿಗಳು. ನನ್ನನ್ನು ಈ ಪ್ರಶ್ನೆಗಳು ಕಾಡಿದ್ದುಂಟು. ನಾವು ದೇವರನ್ನು ಏಕೆ ಪೂಜಿಸಬೇಕು?.. ನಾವು ದೇವರಲ್ಲಿ ಏಕೆ ಬೇಡ್ಕೊಬೇಕು?...ನಾವು ದೇವರ ಜತೆ ಯಾವ ಸಂಬಂಧ ಇಟ್ಕೊಬೇಕು?...ಇವುಗಳಿಗೆಲ್ಲ ಉತ್ತರ ಸಿಕ್ಕಿತು...
ದಯವಿಟ್ಟು ಅರ್ಥೈಸುವಿಕೆ ಇರುವ ವಚನಗಳ ಪುಸ್ತಕಗಳು ಯಾವುದಾದರೂ ಇದ್ದರೆ ತಿಳಿಸಿ.
Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು
ವಚನಗಳನ್ನೇ ಗಮನಕೊಟ್ಟು ಮನಸ್ಸಿಗೆ ಇಳಿಯುವಂತೆ ಓದಿಕೊಳ್ಳುವುದೊಂದೇ ದಾರಿ. ನಮ್ಮ ಮನಸ್ಸಿಗೆ ವಚನಗಳ ಓದಿನಿಂದ ಆಗುವ ಅನುಭವವೇ ಮುಖ್ಯ. ಆದರೂ ನಿಮಗೆ ನೆರವಾಗುವಂಥ ಕೆಲವು ಪುಸ್ತಕಗಳು, ಅಲ್ಲಮನನ್ನು ಕುರಿತು, ತಕ್ಷಣಕ್ಕೆ ನೆನಪಿಗೆ ಬಂದವು ಇವು:
೧. ಪ್ರಭುದೇವರ ಷಟ್ಸ್ಥಲದ ವಚನಗಳು, (ಸಹಸ್ಪಂದನ ವ್ಯಾಖ್ಯಾನ ಸಹಿತ), ಡಾ. ಎಲ್. ಬಸವರಾಜು, ಪ್ರಕಟಣೆಯ ವರ್ಷ ೨೦೦೫, ಪ್ರಕಾಶಕರು, ಜೆ.ಎಸ್.ಎಸ್. ಗ್ರಂಥಮಾಲೆ, ಮೈಸೂರು.
೨. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅಲ್ಲಮನ ಬಗ್ಗೆ ಬಂದಿರುವ ಪ್ರಮುಖ ಲೇಖನಗಳ ಸಂಕಲನ ಹೊರತಂದಿದೆ. ಅದೂ ನೋಡಬಹುದು.
೩. ಇಂದಿನ ಹೆಜ್ಜೆ, ಅಕ್ಷರ ಪ್ರಕಾಶನ, ಇದರಲ್ಲಿ ಅಲ್ಲಮನ ವಿಚಾರಗಳ ಚಿಂತನೆ ಇದೆ.
೩. ವಚನ ಸಾವಿರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೨ನೆಯ ಶತಮಾನದ ೯೯ ವಚನಕಾರರ ೧೦೬೮ ವಚನಗಳು, ಮತ್ತು ತಕ್ಕಮಟ್ಟಿಗೆ ದೀರ್ಘವಾದ ಪ್ರಸ್ತಾವನೆ ಇದೆ.
Re: ಬೆಡಗಿನ ವಚನಗಳಿಗೊಂದು ಪುಸ್ತಕ