ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅಲ್ಲಾ ಗುರು,
ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "ಸಂಪೂರ್ಣ ಸತ್ಯ" ಎಂದು ನಂಬುವುದೇಕೆ?

ಇತಿಹಾಸ, ಸಮಾಜಶಾಸ್ತ್ರಗಳನ್ನು ವೈಜ್ಞಾನಿಕ ವಿಷಯಗಳು ಎಂಬುದು ಸ್ವಲ್ಪವಾದರೂ ಸರಿಯಾದರೆ ಈ ಎರಡು ಲೇಖಕರಲ್ಲಿ ಇತಿಹಾಸ ಮತ್ತು ಅಂದಿನ ಸಮಾಜದ ಬಗ್ಗೆ ಬರೆಯಲು ಪಾಂಡಿತ್ಯವಿದೆಯೇ? ’ಸತ್ಯ’ದ ಸಂಶೋಧನೆಯ ದೃಷ್ಟಿಯಿಂದ ಯಾವ ಕೃತಿಗೆ credibility ಹೆಚ್ಚು? ಹೋಗಲಿ, ಇವರು ಬರೆದದ್ದೇ ಸರಿ ಇನ್ನೊಬ್ಬರು ಬರೆದಿದ್ದು ತಪ್ಪು ಎಂದು ಹೇಳಿ ವಾದ ಮಾಡಬಲ್ಲ ಪಾಂಡಿತ್ಯ ಎಷ್ಟು ಜನ ಓದುಗರಿಗೆ/ವಿಮರ್ಶೆಕಾರರಿಗಿದೆ? ಇಂತಹ ಜನ ಮಾಡುವ ವಾದ (ಮತ್ತು ದೊಂಬಿ) ದೊಡ್ಡದೇ ಅಥವ ವಾದದ ಸತ್ವ ದೊಡ್ಡದೇ? ಹೋಗಲಿ, ವಿಮರ್ಶೆ ಮಾಡಲೇ ಬೇಕೆಂದರೆ ತಮ್ಮ ಪಾಂಡಿತ್ಯದ ಪರಿಧಿಯಲ್ಲಿ ಬರುವ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವ ಮರ್ಯಾದೆ ಇದ್ದದ್ದು ನನ್ನನಿಕೆಯಲ್ಲಿ ಒಬ್ಬರೇ ವಿಮರ್ಶಕನಿಗೆ. ಅವರನ್ನು ಇವರೆಲ್ಲ ಸೇರಿ ಎಳಸುತನದಿಂದ ಬಾಯಿಗೆ ಬಂದಂತೆ ಬಯ್ದಾಯಿತು .

ಇವೆಲ್ಲ ಹಾಳಾಗಿ ಹೋಗಲಿ, ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಪುಸ್ತಕದಲ್ಲೇ ಹೇಳಿದ್ದರೂ ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲಿಲ್ಲ. ಈಗ, ಸಂಶೋಧನೆಯ ಕೃತಿಯೊಂದನ್ನು ಮುಟ್ಟುಗೋಲು ಹಾಕಿದ್ದು ವಿಪರ್ಯಾಸ. ಹಾಗೆ ನೋಡಿದರೆ ಕಾದಂಬರಿಗಳು, ಮತ್ತು ಸಂಶೋಧನಾ ಕೃತಿಗಳು ಎಷ್ಟರ ಮಟ್ಟಿಗೆ ಓದಲ್ಪಡುತ್ತವೆ, ಎಷ್ಟರ ಮಟ್ಟಿಗೆ ಜನ ಆ ವಿಚಾರಗಳನ್ನು ಅರಗಿಸಿಕೊಳ್ಳುತ್ತಾರೆ, ಎಷ್ಟು ಜನ ಇದಕ್ಕೆ ಶಾಂತಿಗೆ ಭಂಗ ಬರುವಂತೆ ವರ್ತಿಸುತ್ತಾರೆ, ಈಗ ಗಲಭೆಗೆ ನಿಂತಿರುವವರೆಲ್ಲ ಕೃತಿಗಳನ್ನು ಓದಿಯೇ ನಿಂತಿರುವರೇ, ಇದರಲ್ಲಿ ಯಾರ ಯಾರ ರಾಜಕೀಯ ಕೈವಾಡ ಎಷ್ಟೆಷ್ಟಿದೆ, ನಾಕು ಜನ ಘೋಷಣೆ ಕೂಗಿದರೆ ಸಮಾಜದ ಶಾಂತಿಗೆ ಧಕ್ಕೆಯುಂಟಾಗುತ್ತದೆಯೇ ಎಂಬುದರ ದಿವ್ಯ ಜ್ಞಾನ ನಮಗಿದೆಯೇ?

ಭೂಮಿ ದುಂಡಗಿದೆ, ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಹೇಳಿದಾಗಲೂ ಹೀಗೇ ಆಗಿತ್ತು ಎಂಬುದನ್ನು ನಾವು ಮರೆಯದಿರುವುದು ವಾಸಿ. (ಅಂದ ಮಾತ್ರಕ್ಕೆ ಬಂಜಗೆರೆಯವರು ಹೇಳಿದ್ದು ಖಡಾಖಂಡಿತ ಸತ್ಯ ಅಂತೇನೂ ಅಲ್ಲ) ಕನ್ನಡದಲ್ಲಿ ಸಂಶೋಧನೆ ನಡೆಸಿ ಅದನ್ನು ಕನ್ನಡದ ಸಂಶೋಧನಾತ್ಮಕ ಲೇಖನಗಳನ್ನಾಗಿ ಪ್ರಕಟಿಸುವ ವಾಡಿಕೆಯೇ ಕಡಿಮೆ. ಕನ್ನಡದಲ್ಲೇ ಸಂಶೋಧನೆ ನಡೆಸುವುದಕ್ಕೆ ಇದು ಒಂದು ದೊಡ್ಡ ಕೊರತೆ ಎನ್ನುವುದನ್ನು ಕನ್ನಡ ಕನ್ನಡ ಎಂದು ಹೊಡೆದುಕೊಳ್ಳುವ, ಇಂಗ್ಲೀಷ್ ಮಾಧ್ಯಮದಲ್ಲಿಯೇ ಜೀವನಪೂರ್ತಿ ಓದಿರುವ ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು (ಹಾಗು ಕನ್ನಡದಲ್ಲಿ ಸಂಶೋಧನೆಯನ್ನು ಮಾಡಲು ಹೊರಟಾಗಾದ ನನ್ನ ವೈಯುಕ್ತಿಕ ಅನುಭವ ಕೂಡ) .

ಸಮಾಜದ ಶಾಂತಿಯೇ ನಮ್ಮ ಗುರಿ, ಮನುಷ್ಯ ಸ್ವಭಾವದ, ಸಮಾಜದ ಸಂಶೋಧನೆಯಲ್ಲ, ಮಾನಸಿಕ ಪ್ರಗತಿಯಲ್ಲ ಎನ್ನುವುದು ನಿಜವಾದರೆ ಭೈರಪ್ಪನವರ ಕೃತಿಯಿಂದ ಹಿಡಿದು ಜಾತಿಪದ್ಧತಿಯನ್ನು ಕೆಡುವಿದ್ದೂ, ರೈತಕ್ರಾಂತಿ, ಭೂಸುಧಾರಣಾ ಕಾಯ್ದೆ, ಪಂಚಾಯತ್ ಕಾಯ್ದೆ, RSS VHP ವಿಚಾರಧಾರೆ, ರಾಮಮಂದಿರದ ನಿರ್ಮಾಣ ಇವೆಲ್ಲವೂ ಬ್ಯಾನ್ ಆಗಬೇಕಾದಂತಹ ವಿಚಾರಗಳೇ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಾವೆಂಥಾ ಜನ!

ಶ್ರೀನಿಧಿ's picture

ಹೌದು ಸಿಸ್ಯಾ :P

ನಮ್ಮಲ್ಲಿ ಬರೆದದ್ದನ್ನೆಲ್ಲಾ ನಂಬುವ ಮೂರ್ಖತನ ಹೆಚ್ಚು. ಬರೀ ಬರೆದದ್ದೇ ಅಲ್ಲ. ಇನ್ಯಾರೋ ಈ ಪುಸ್ತಕದಲ್ಲಿ ಹೀಗೆ ಇದೆ ಎಂದರೆ ಸಾಕು - ವಿಧಾನಸೌಧಕ್ಕೆ ಒಂದು ಮೆರವಣಿಗೆ ಹೊರಡುತ್ತದೆ. ಇದು ಎರಡು ಪುಸ್ತಕಗಳ ವಿರುದ್ಧವೂ ನಡೆದಿದೆ.

ಆವರಣದ ವಿಷಯದಲ್ಲಿ ಅದನ್ನು ಜನ ಮೆಚ್ಚಿದ್ದು ಅನೇಕರಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತಷ್ಟೇ. ಆದರೆ ಅದರಲ್ಲಿರುವ ಆಕರ ಗ್ರಂಥಗಳ ಬಗೆಗೆ ನಾನು ಮಾತು ಕೇಳಿದ್ದು ಕಡಿಮೆ. ಅಲ್ಲದೇ ಮಾರ್ಕ್ಸಿಸ್ಟ್ ಇತಿಹಾಸವೊಂದೇ ನಿಜ, ಭೈರಪ್ಪ ಬರೆದದ್ದು RSSವಾದಿ ಎಂದು ಹೀಯಾಳಿಸೋ ಬದಲು ಅದರ ಆಧಾರಗಳನ್ನು ಏಕೆ ಗಮನಿಸಲಿಲ್ಲ? (ಆ ಆಕರ ಪುಸ್ತಕಗಳಲ್ಲಿ ನೋಬೆಲ್ ಪ್ರಶಸ್ತಿ ಪಡೆದ ನೈಪಾಲ್ ಅವರ ಪುಸ್ತಕದ ಹೆಸರೂ ಇದೆ ಎಂದು ಎಷ್ಟು ಜನ ಗಮನಿಸಿದ್ದಾರೆ? ). ಇದೇ ರೀತಿಯ ವಾದ ಬಂಜಗೆರೆ ಅವರ ಪುಸ್ತಕದ ಬಗೆಗೂ ಇದೆ. ಖಂಡಿಸುವ ಎಷ್ಟು ಜನ ಆ ಪುಸ್ತಕ ಓದಿದ್ದಾರೋ ನಾಕಾಣೆ. ಮುಟ್ಟುಗೋಲು ಹಾಕಿದರೆ ಅಕಸ್ಮಾತ್ ಪುಸ್ತಕದಲ್ಲಿರುವ ತಪ್ಪುಗಳೂ ಮುಚ್ಚಿ ಹೋಗುತ್ತದೆ , ಬರೀ ದ್ವೇಷ ಉಳಿಯುತ್ತದೆ ಎಂದೇಕೆ ಜನರಿಗೆ ಅರ್ಥ ಆಗುವುದಿಲ್ಲವೋ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಉ: ನಾವೆಂಥಾ ಜನ!

hamsanandi's picture

ಈ ಮುಟ್ಟುಗೋಲು ಮಣ್ಣ್ಂಗಟ್ಟಿ ಎಲ್ಲ ಅರ್ಥವಿಲ್ಲದ ಮಾತುಗಳು ; ಹಿಂದೆ ಹೀಗೇ, ಮಾಸ್ತಿಯವರ ಪುಸ್ತಕಗಳೂ ಕೂಡ (ಚೆನ್ನಬಸವನಾಯಕ, ಚಿಕವೀರರಾಜೇಂದ್ರ) ಬಹಳವೇ ವಿವಾದಕ್ಕೊಳಗಾಗಿ, ಮುಟ್ಟುಗೋಲು ಹಾಕಬೇಕು ಅನ್ನುವ ಮಟ್ಟಿಗೆ ಹೋಗಿತ್ತಂತೆ. ಚಿಕವೀರರಾಜೇಂದ್ರನಿಗೆ ಜ್ಞಾನಪೀಠ ಬಂದಾಗಲೂ ಅದೇ ಗಲಾಟೆ ಸ್ವಲ್ಪ ಮುಂದುವರೆದಿತ್ತು.

ಮರೆಯುವ ಮೊದಲು: ಓದಿಲ್ಲದಿದ್ದವರು ಇವೆರಡು ಕಾದಂಬರಿಗಳನ್ನು ದಯವಿಟ್ಟು ಓದಿ. ಅದರಲ್ಲೂ, ಚೆನ್ನಬಸವನಾಯಕ ಓದಲೇಬೇಕಾದ ರಚನೆ.

-ಹಂಸಾನಂದಿ

ಉ: ನಾವೆಂಥಾ ಜನ!

ವೈಭವ's picture

"....ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "ಸಂಪೂರ್ಣ ಸತ್ಯ" ಎಂದು ನಂಬುವುದೇಕೆ........"

ಸವಿಯೊದಗು. ಸರಿಯಾಗಿ ಹೇಳಿದ್ದೀರ.

ಉ: ನಾವೆಂಥಾ ಜನ!

jaiguruji's picture

ಮುಟ್ಟುಗೋಲು, ಬ್ಯಾನ್ ಇತ್ಯಾದಿಗಳ ಬಗ್ಗೆ ವಿರೋಧಿಸುವ ನಿಮ್ಮ ತಾತ್ವಿಕ ನಿಲುವು ಸರಿಯೆ. ಆದರೆ ಅದನ್ನ ಸಮರ್ಥಿಸಲು ಪದೇ ಪದೇ ಭೈರಪ್ಪ ಮತ್ತು ಅವರ ಕೃತಿಯನ್ನ ಗುರಿ ಮಾಡುವದು ಮತ್ತು ಹೋಲಿಕೆಯಾಗಿ ಉಪಯೋಗಿಸುವದು ವಿರೋದಾಭಾಸವೆನಿಸುತ್ತದೆ. ನಿಮ್ಮ ಪ್ರಕಾರ ’ಆನು..’ ಗೆ ವಿರೋಧಿಸಿದಂತೆ ’ಆವರಣ’ ಕೂಡಾ ಮುಟ್ಟುಗೋಲು ಹಾಕಿಕೊಳ್ಳಬೇಕೆ? ಹಾಗಾದಾಗ ’ನಾವೆಂಥ ಜನ’ಗಳು ’ಎಷ್ಟೊಳ್ಳೆಯ ಜನ’ಗಳು ಆಗಬಹುದೇ?

ಮುಗಿಸುವ ಮುನ್ನ : ನಿಮ್ಮ ಮಾತು : "ವಿಮರ್ಶೆ ಮಾಡಲೇ ಬೇಕೆಂದರೆ ತಮ್ಮ ಪಾಂಡಿತ್ಯದ ಪರಿಧಿಯಲ್ಲಿ ಬರುವ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವ ಮರ್ಯಾದೆ ಇದ್ದದ್ದು ನನ್ನನಿಕೆಯಲ್ಲಿ ಒಬ್ಬರೇ ವಿಮರ್ಶಕನಿಗೆ. ಅವರನ್ನು ಇವರೆಲ್ಲ ಸೇರಿ ಎಳಸುತನದಿಂದ ಬಾಯಿಗೆ ಬಂದಂತೆ ಬಯ್ದಾಯಿತು ."

ಯಾರು ಸ್ವಾಮಿ ಆ ವಿಮರ್ಶಕರು? ಹೆಸರು ಉಚ್ಚರಿಸಲು ಏಕೆ ಹಿಂಜರಿಕೆ? :-)

ಉ: ನಾವೆಂಥಾ ಜನ!

ಶ್ಯಾಮ ಕಶ್ಯಪ's picture

ಸ್ವಾಮಿ, ಇಲ್ಲಿ ಆವರಣವನ್ನು ಹೋಲಿಕೆಗೆ, ಉದಾಹರಣೆಗೆ ತೆಗೆದುಕೊಂಡಿಲ್ಲ. ಈ ಲೇಖನಕ್ಕೆ 'ಆನುದೇವ ಹೊರಗಿನವನು' ಎಷ್ಟು ಮುಖ್ಯವೋ 'ಆವರಣ'ವೂ ಅಷ್ಟೇ ಮುಖ್ಯ. ಅದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಂತ ಅನ್ಕೊಂಡಿದ್ದೆ. ಇರಲಿ. ಇದರ ಅವಶ್ಯಕತೆ ಇರುವುದು holistic ದೃಷ್ಟಿಕೋನಕ್ಕೆ.

ಹಿಂಜರಿಕೆ ಏನಿಲ್ಲ. ಮತ್ತೆ ಆ ವ್ಯಕ್ತಿಯನ್ನು, ಅವರ ವ್ಯಕ್ತಿತ್ವವನ್ನು ಹಿಡಿದು ವಿಷಯವನ್ನು ಬದಲಾಯಿಸುವುದು ಸೂಕ್ತವಲ್ಲ ಅಂತ ಹೆಸರು ಹಾಕಿಲ್ಲ. ಜೊತೆಗೆ ಅದು ಯಾರು ಎಂದು ತಿಳಿಯಲು ಅಷ್ಟೇನು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಅಲ್ಲವೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ಉ: ನಾವೆಂಥಾ ಜನ!

jaiguruji's picture

ಆ ವ್ಯಕ್ತಿ ಯಾರು ಅಂತ ನನಗೂ ಚೆನ್ನಾಗಿ ಗೊತ್ತು ! ಆದರೂ ಪ್ರಶ್ನಿಸುವ ಉದ್ದೇಶವೆಂದರೆ.. ;-)

ಇವತ್ತು ನಮ್ಮಲ್ಲಿ ವ್ಯಕ್ತಿಯ ಸಾಧನೆಗಿಂತ, ವ್ಯಕ್ತಿಪೂಜೆ ಮಹತ್ವ ಪಡೆದುಕೊಂಡು ಆ ವ್ಯಕ್ತಿಯನ್ನ ವೈಭವಿಕರಿಸುವದನ್ನೆ ಅನೇಕ ಅನುಯಾಯಿಗಳು / ಅಭಿಮಾನಿಗಳು ಕಸಬು ಮಾಡಿಕೊಂಡಿದ್ದಾರೆ. ನಾನು ಭೈರಪ್ಪನವರ ಕಾದಂಬರಿಗಳ ಓದುಗ ಮತ್ತು ಅಭಿಮಾನಿ ಕೂಡ - ಕೆಲವನ್ನ ನಾನು ಮೆಚ್ಚಿಕೊಂಡಿದ್ದೇನೆ. ಆದರೆ ಹಾಗಂತ ನಾನು ಭೈರಪ್ಪನವರಿಗೆ ಇಂದ್ರ, ಚಂದ್ರ ಅಂಥ ಹೊಗಳುವದಾಗಲಿ ಅಥವಾ "ಭೈರಪ್ಪ ’ಮಾತ್ರ’ ಕವಿ ಕಂಠೀರವ, ಕಾದಂಬರಿ ಸಾರ್ವಭೌಮ, ವಿಮರ್ಶಾ ರತ್ನಾಕರ, ಅಪ್ರತಿಮ ತತ್ವಶಾಸ್ತ್ರಜ್ಞ" ಇತ್ಯಾದಿ ಬಿರುದು ಬಾವಲಿಯಿಂದ ಇಲ್ಲದ ಶ್ರೇಷ್ಟತೆಯನ್ನ ಆರೋಪಿಸುವದು - ನಾನು ಭೈರಪ್ಪನವರಿಗೆ ಮಾಡುವ ಶುದ್ಧ ಅಪಚಾರವೆಂದು ಭಾವಿಸುವೆ. ನಾನು ಆ ರೀತಿ ಮಾಡಿದರೆ ಜನ ಭೈರಪ್ಪನವರ ಕಾದಂಬರಿಗಳನ್ನು ಕೂಡ ಸಂಶಯ ದೃಷ್ಟಿಯಿಂದ ನೋಡಲು ಪ್ರಾರಂಭಿಸಬಹುದು. ಅದು ಒಬ್ಬ ಉತ್ತಮ(ಸಾರ್ವಭೌಮ ಅಲ್ಲ ಮತ್ತೆ!) ಕಾದಂಬರಿಕಾರನಿಗೆ ನಾನು ಅವಮಾನ ಮಾಡಿದಂತೆ !

ಅದೇ ರೀತಿ ನೀವು ಹೇಳುತ್ತಿರುವ ’ಆ ವ್ಯಕ್ತಿ’ ಕೂಡ ಉತ್ತಮ ಕಥೆಗಳನ್ನ ಬರೆದಿದ್ದಾರೆ ಮತ್ತು ಕವನಗಳನ್ನ ಕೂಡಾ. ಹಾಗಂತ ಏಕಮಾತ್ರ ಮಹಾನ್ ಸೂಕ್ಷಪ್ರಜ್ಞೆಯ ವಿಮರ್ಶಕರು ಅವರು ಎಂದು ಇಲ್ಲದ ಶೇಷ್ಟತೆಯನ್ನ ಆರೋಪಿಸುವದು/ಬಿಂಬಿಸುವದು ಮೊದಲು ’ಆ ವ್ಯಕ್ತಿ’ಗೆ ತಾವು ಮಾಡುವ ಅಪಚಾರ, ಜೊತೆಗೆ ಇನ್ನುಳಿದ ಸಹೃದಯ ವಿಮರ್ಶಕರನ್ನ ಅವಗಣನೆ ಮಾಡಿದಂತೆ! :-(

ಉ: ನಾವೆಂಥಾ ಜನ!

roshan_netla's picture

ಉ: ನಾವೆಂಥಾ ಜನ!

santoshgs's picture

ನೀವು 'ಆನು..' ಓದೀದೀರಾ?. ನಾನೂ ಕೂಡ ಓದಿಲ್ಲ .ಅವರೇ ಹೇಳಿದ ಹಾಗೆ ಅವರ ಹತ್ರ ಸಾಕಷ್ಟು ಆಧಾರಗಲಿಲ್ಲ ಅಂತ. ಹಾಗಾಗೀಯೆ ಅದನ್ನ ಹಿಂತೆಗೆದು ಕೊಂಡಿದ್ದಾರೆ. but ಆವರಣ ಓದೀದೀನಿ. ಭೈರಪ್ಪನವರು ತುಂಬಾ research ಮಾಡಿ ಬರೆದಿದ್ದಾರೆ.

ಉ: ನಾವೆಂಥಾ ಜನ!

prapancha's picture

ಬ೦ಜಗೆರೆಯವರ ಹತ್ತಿರ ತಮ್ಮ ಬರಹವನ್ನು ಪುಷ್ಟೀಕರಿಸುವ ಆಕರ ಗ್ರ೦ಥಗಳಿದ್ದರೆ ಪರಿಷ್ಕರಣೆಗಾಗಿ 'ಆನು...'ವನ್ನು ಹಿ೦ಪಡೆದಿದ್ದೇಕೆ?

ಆದರೆ ಬೈರಪ್ಪನವರು 'ಆವರಣ'ದಲ್ಲಿ ಅಸತ್ಯವಿದ್ದರೆ ಬಹಿರ೦ಗ ಚರ್ಚೆಗೆ ಬನ್ನಿ ಎ೦ದು ಕರೆದರೆ ಯಾರೂ ಮು೦ದೆ ಬರಲಿಲ್ಲವಲ್ಲ!.

ಉ: ನಾವೆಂಥಾ ಜನ!

gc's picture

".. ಸಂಶೋಧನೆಯ ಕೃತಿಯೊಂದನ್ನು ಮುಟ್ಟುಗೋಲು ಹಾಕಿದ್ದು ವಿಪರ್ಯಾಸ.." ಬಂಜಗೆರೆಯವರು ಸಂಶೋಧಕರೇ? ಹಾಗಿದ್ರೆ ನಾನು Einstein :-)

ಉ: ನಾವೆಂಥಾ ಜನ!

jaiguruji's picture

gc ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ಈ ಸಂದರ್ಭ ನೆನಪಾಯಿತು !

ವೀರಪ್ಪನ್ ಸೆರೆಯೊಂದ ಡಾ.ರಾಜ್ ರನ್ನ ಬಿಡಿಸಲು ತಮಿಳ ಪತ್ರಿಕೆಯ ಸಂಪಾದಕನ ಜೊತೆಗೆ ಇನ್ನಿಬ್ಬರು/ಮೂವರು ಕಾಡಿಗೆ ಹೋಗಿದ್ದರು. ಆಗ ಅವರೊಲ್ಲಬ್ಬರನ್ನ ಕಂಡಾಗ ಡಾ.ರಾಜ್ ಗೆ ಸರ್ವಪಲ್ಲಿ ರಾಧಾಕೃಷ್ಣನ್ ರನ್ನ ಕಂಡಂತಾಯಿತಂತೆ! ಅದನ್ನ ಪ್ರಸ್ತಾಪಿಸಿ ಆಮೇಲೆ ಜಿ ಕೆ ಗೋವಿಂದರಾಯರು "ಆ ವ್ಯಕ್ತಿ ಏನಾದರೂ ಸರ್ವಪಲ್ಲಿ ರಾಧಾಕೃಷ್ಣನ್ ಆದರೆ ನಾನು ಮಹಾತ್ಮಾ ಗಾಂಧಿ" ಎಂಬರ್ಥದ(ಶಬ್ದಶಃ ನೆನಪಿಲ್ಲ-ಗೊತ್ತಿದ್ದವರು ಬರೆಯಿರಿ) ಉತ್ತಮ ವಿಚಾರ ಪ್ರಚೋದಕ ಹೇಳಿಕೆ ನೀಡಿದ್ದರು ! ನಿಜಕ್ಕೂ ತುಂಬಾ ನಕ್ಕಿದ್ದೆ, ನಾನದನ್ನ ಓದಿದಾಗ, ಈಗ ಪುನಃ ಅದು ನೆನಪಾಯಿತು.

gc ಅಂತೂ ನೀವು Einstein ಅಗುತ್ತಿರೋ ಇಲ್ಲವೋ ಗೊತ್ತಿಲ್ಲ ಆದರೆ ನಿಮ್ಮ ಕಾಮೆಂಟ್ ನೋಡಿದರೆ ವಿಚಾರವಾದಿಯಾಗುವ ಲಕ್ಷಣವಂತೂ ಕಾಣುತ್ತಿದೆ ! ;-)

ಉ: ನಾವೆಂಥಾ ಜನ!

gc's picture

ಶಿವಾ ಶಿವಾ!! ನಾನು ವಿಚಾರವಾದಿಯಾಗೋದು ಖಂಡಿತ ಬೇಡ!! ಪ್ರತಿದಿನ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ, ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ/ಭಾಷಣ, ಪುಸ್ತಕ ಓದದಿದ್ದರೂ ಸರಿ ಮುನ್ನುಡಿ/ವಿಮರ್ಶೆ, ದಿನನಿತ್ಯ ಪ್ರಶಸ್ತಿ ಸ್ವೀಕಾರ/ಪ್ರದಾನ ಸಮಾರಂಭಗಳು, ಇತ್ಯಾದಿ ನನ್ನಿಂದ ಆಗದು. ಜೊತೆಗೆ ಮುಖ್ಯವಾಹಿನಿ ಬಿಟ್ಟು ತೀರಾ ಎಡ ಪಂಥಕ್ಕೊ ಅಥವಾ ಬಲ ಪಂಥಕ್ಕೊ ಸೇರಿ ಚಪ್ಪಟೆ ಜಗತ್ತಿನ ತುದಿಯಿಂದ ಬೀಳ್ತಿನೇನೋ ಎನ್ನುವ ಭಯ :-)

ಉ: ನಾವೆಂಥಾ ಜನ!

muralihr's picture

ಒಟ್ಟಿನಲ್ಲಿ ಜಗತ್ತಿನಲ್ಲಿ ಒಬ್ಬ ಮನುಷ್ಯ ಚೆನ್ನಾಗಿರೊದು ಯಾರಿಗೂ ಇಷ್ಟವಿಲ್ಲಾ..

ಉ: ನಾವೆಂಥಾ ಜನ!

ಶ್ಯಾಮ ಕಶ್ಯಪ's picture

ಬಹಳ ಒಳ್ಳೆಯದು.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ಉ: ನಾವೆಂಥಾ ಜನ!

kpbolumbu's picture

http://www.youtube.c...
ನನ್ನ ಅಭಿಪ್ರಾಯವಲ್ಲ, ಮಾತನಾಡುತ್ತಿರುವವರು ಡಾ.ಪೃಥ್ವಿ ದತ್ತ ಚಂದ್ರ ಶೋಭಿ.ಇವರು ಸಾನ್‍ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.೧೫ ವರ್ಷಗಳ ಕಾಲ ವಚನಸಾಹಿತ್ಯದ ಬಗ್ಗೆ ಅಧ್ಯಯನವನ್ನು ಕೈಗೊಂಡವರು.
ಈ ಎಲ್ಲವುಗಳೊಂದಿಗೆ ಇನ್ನೂ ಹೆಚ್ಚು ವಿವರಗಳು ಪತ್ರಕರ್ತ ಕೃಷ್ಣ ಪ್ರಸಾದರ http://churumuri.wor... ತಾಣದಲ್ಲಿ ದೊರೆಯುತ್ತವೆ.
_________________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು