ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಸಾಹಿತಿಗಳ ವೈಚಾರಿಕ ಜಗಳ
ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.
ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ ನಮ್ಮ ಕನ್ನಡವನ್ನು ಶ್ರೀಮಂತಗೊಳಿಸಿದವು ಎಂಬುದನ್ನು.
ಒಂದು ದಂತ ಕಥೆಯ ಪ್ರಕಾರ ಆಗಿನ ಕಾಲದ ವಿಜಯನಗರದ ಸಾಮಂತ(?)ದೊರೆ ಪ್ರೌಢದೇವರಾಯನು ಚಾಮರಸ ಮತ್ತು ಕುಮಾರವ್ಯಾಸನಿಗೆ 'ಮಹಾಭಾರತ'ವನ್ನು ಕನ್ನಡದಲ್ಲಿ ಬರೆಯಲು ಹೇಳಿದಾಗ, ಇಬ್ಬರು ತಮ್ಮದೇ ರೀತಿಯಲ್ಲಿ ಮಹಾಭಾರತದ ಕೆಲವು ಭಾಗಗಳನ್ನು ಕಾವ್ಯದಲ್ಲಿ ರಚಿಸುತ್ತಾರೆ. ಅದನ್ನು ಪಂಡಿತೋತ್ತಮರು ವಿಮರ್ಶಿಸಿ ಚಾಮರಸನ ಕಾವ್ಯ ರಸವತ್ತಾಗಿದೆಯೆಂದು ತೀರ್ಪು ಕೊಡುತ್ತಾರೆ. ಇದರಿಂದ ಕುಮಾರವ್ಯಾಸನಿಗೆ ಮುಖಭಂಗವಾದಂತಾಗಿ ಆತನು ತನ್ನ ಮಡದಿಯ(ಈಕೆ ಚಾಮರಸನ ತಂಗಿ) ಜೊತೆಗೆ ಹೇಳಿಕೊಂಡಾಗ ಅವಳು'ಪತಿಭಕ್ತಿ'ಯನ್ನು ಮೆರೆದು ತನ್ನ ಅಣ್ಣನ ಕೃತಿಯನ್ನೇ ಸುಟ್ಟು ಹಾಕುತ್ತಾಳೆ. ಇದರಿಂದ ವ್ಯಸನಗೊಂಡ ಚಾಮರಸ ಗದುಗನ್ನು ಬಿಟ್ಟು ವೀರಶೈವ ಧರ್ಮದ ದೀಕ್ಷೆ ಪಡೆದು ನಂತರ 'ಪ್ರಭುಲಿಂಗ ಲೀಲೆ'ಎಂಬ ವಿಭಿನ್ನ ಕಾವ್ಯವನ್ನು ರಚಿಸುತ್ತಾನೆ. ಇದರ ಉತ್ಕೃಷ್ಟತೆಯನ್ನು ಮನಗಂಡ ಇತರ ಭಾಷೆಗಳ ಕವಿಗಳು(ತೆಲುಗು, ಮರಾಠಿ) ತಮ್ಮ ಭಾಷೆಗಳಿಗೆ ಭಾಷಾಂತರಿಸಿಕೊಂಡಿದ್ದಾರೆ.
ಏನೇ ಆದರೂ ಇವರಿಬ್ಬರ ಆರೋಗ್ಯಕರ ಪೈಪೋಟಿಯಿಂದ ಕನ್ನಡಕ್ಕೆ ವಿಭಿನ್ನ ಕಾವ್ಯಸಿರಿಗಳು ಒದಗಿದವು.
ಆಸಕ್ತರು 'ಪ್ರಭುಲಿಂಗಲೀಲೆ' ಸಂಪಾದಿತ ಕೃತಿಗಳನ್ನು ೧, ೨ ಪಡೆಯಬಹುದು.
-ಜೈ ಕರ್ನಾಟಕ

- ವೈಭವ ರವರ ಬ್ಲಾಗ್
- Login or register to post comments
- 688 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಎಷ್ಟು ಕಾವ್ಯವಿದೆ ಕನ್ನಡದಲ್ಲಿ, ಎಲ್ಲವನ್ನೂ ಯಾವಾಗ ಓದುತ್ತೇವೆಯೋ ತಿಳಿಯದು. ಹೀಗೆ ನಿಮ್ಮ ಗಮನಕ್ಕೆ ಬರುವ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾ ಇರಿ. ನಮ್ಮ ಕನ್ನಡದ ಅರಿವು ಹೆಚ್ಚುವುದರೆ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುವುದು.
ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಮಾಹಿತಿ ಚೆನ್ನಾಗಿದೆ. ಸುನಿಲ್ ಹೇಳಿದಂತೆ, ಆಗಾಗ ಈ ರೀತಿಯ ವಿಚಾರಗಳು ಮೇಲಿಂದ ಮೇಲೆ ನಮ್ಮ ಅರಿವಿಗೆ/ಗಮನಕ್ಕೆ ಬರುತ್ತಿದ್ದರೆ, ಇಂದಲ್ಲ ನಾಳೆ, ಹೇಗಾದರೂ ಬಿಡುವು ಮಾಡಿಕೊಂಡು ಇವನ್ನೆಲ್ಲ ಓದಬಹುದು.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)
Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ವೈಭವ ಅವರೆ,
ಈ ದಂತಕಥೆಯ ಮೂಲ ಎಲ್ಲಿಂದ ಎಂಬುದು ನಿಮಗೇನಾದರೂ ಗೊತ್ತೆ?
ಪ್ರೌಢದೇವರಾಯ ವಿಜಯ ನಗರದ ಅರಸನೇ. ಸಾಮಂತನಲ್ಲ.
Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಆತ್ಮೀಯ ಹಂಸಾನಂದಿಯವರೆ,
ನಾನು ಈಗಾಗಲೆ ಕೊಟ್ಟಿರುವ ಕೊಂಡಿಗಳಲ್ಲಿರುವ(೧, ೨) ಪುಸ್ತಕಗಳಲ್ಲೆ ಈ ದಂತಕಥೆಗಳಿವೆ.
ಇನ್ನು ಪುಸ್ತಕ ೧ ರಲ್ಲಿ ಪ್ರೌಢದೇವರಾಯನು ವಿಜಯನಗರದ ದೊರೆ ಎನ್ನುತ್ತಾರೆ. ೨ ರಲ್ಲಿ ಅವನು ಗದುಗಿನ ದೊರೆ ಎನ್ನುತ್ತಾರೆ.
ಆದ್ದರಿಂದ ನಾನು ಗೊಂದಲಕ್ಕೊಳಗಾದೆ. ಆದ್ದರಿಂದ ಸಾಮಂತ ಪದದ ನಂತರ ಒಂದು ಪ್ರಶ್ನಾರ್ಥಕ ಚಿಹ್ನೆ ಕೂಡ ಹಾಕಿದ್ದೆ.
------
"ಕಾಡಿದ್ದರೆ ನಾಡು"
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಚಾಮರಸನ ’ಪ್ರಭುಲಿಂಗಲೀಲೆ’ ಕುಮಾರ ವ್ಯಾಸನ ’ ಕರ್ನಾಟ ಭಾರತ ಕಥಾ ಮಂಜರಿ’ ಎರಡನ್ನೂ ಓದಿದ ನಂತರ ,ಈ ದಂತ ಕಥೆಯನ್ನು ನಂಬುವುದು ಎಂದರೆ, ದಂತ ಕಥೆ ನಿರ್ಮಿಸಿದ ಮಹಾನುಭಾವನ ಬಗ್ಗೆ ಕನಿಕರ ಮಾತ್ರ ಮೂಡಬಲ್ಲದು .
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಅ೦ತಹ ಕತೆಯನ್ನು ಗಾಳಿಯಲ್ಲಿ ಹರಡುವರ ಮೇಲೆ ಕೂಡಾ ಸ್ವಲ್ಪ ಕನಿಕರ ತೋರಿಸಿ ಸಾರ್
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಅಯ್ಯೋ ಮುರುಳೀ..... ಹಾಗೆ ಅನುಕಂಪ ತೋರಿಸೋಕ್ಕೆ ಹೋಗ್ಬ್ಯಾಡಿ ಬುದ್ದೀ!
ಹಾಗೆ ಒಮ್ಮೆ ಶುರು ಮಾಡಿದ್ರೆ , ನಮ್ಮ "ದೊಡ್ಡ" ಸಂಸ್ಕೃತಿಯ ಗುತ್ತೆಗೆದಾರರೆಲ್ಲರಿಗೂ ಅನುಕಂಪ ತೋರಿಸಕ್ಕೆ ಶುರುಮಾಡಬೇಕಾಗುತ್ತೆ!
ಸವಿತೃ
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ದಂತಕತೆಯನ್ನು ನಂಬಕ್ಕಾಗಲ್ಲ. ಅದಕ್ಕೆ ಅದನ್ನು 'ದಂತಕತೆ'ಅನ್ನೋದು
ಚಾಮರಸ ಯಾಕೆ ಮತ ಬದಲಾಯಿಸಿದ,ಯಾಕೆ ಗದುಗನ್ನ ಬಿಟ್ಟ ಅನ್ನೋದು ಇನ್ನು ನಿಕ್ಕುವ ಓಸುಗರಗಳು ಸಿಕ್ಕಿಲ್ಲ.
ಆದರೂ ಗದುಗಿನ ನಾರಾಣಪ್ಪನಶ್ಟೆ ತಕ್ಕುಮೆಯುಳ್ಳವನಾಗಿದ್ದರೂ ಚಾಮರಸ ಯಾಕೆ ಅಶ್ಟು ಹೆಸರುವಾಸಿಯಾಗಿಲ್ಲ ಅನ್ನುವ ಅಯ್ಬು ಕಾಡುತ್ತಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಚರಿತ್ರೆಯನುಸಾರ ಆರಾಧ್ಯ ಬ್ರಾಹ್ಮಣನಾಗಿದ್ದ ಚಾಮರಸ ವೀರಶೈವನಾಗಿ ಮತಾಂತರ ಹೊಂದಿದನಂತೆ. ಬಹುಶಃ ನಿಮ್ಮ ಕಥೆಯೂ ಕಾರಣವಿರಬಹುದು ಅಥವಾ ಕುಮಾರವ್ಯಾಸ ಮತ್ತು ಅವನ ವೈಷ್ಣವ ಹಿಂಬಾಲಕರ ಕಾಟ ತಾಳಲಾರದೆಯೂ ಇರಬಹುದು.
ವೀರಶೈವನಾದೊಡನೆಯೇ ಚಾಮರಸನಿಗೆ ಅನೇಕ ಬೆಂಬಲಿಗರು ದೊರಕಿರಬಹುದು. ವಿಜಯನಗರದ ಎಲ್ಲ ರಾಜರ ಆಸ್ಥಾನಗಳಲ್ಲೂ ವೈಷ್ಣವ ಮತ್ತು ವೀರಶೈವ ಕವಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದದ್ದು ವರದಿಯಾಗಿದೆ.
(http://en.wikipedia.org/wiki/Kannada_literature_in_Vijayanagara_empire )
ಅವನ ಪ್ರಭುಲಿಂಗಲೀಲೆ ಸಂತ ಅಲ್ಲಮಪ್ರಭುವಿನ ಜೀವನ ವೃತ್ತಾಂತವಾದರೂ ಅವರನ್ನು ಗಣಪತಿಯ ಅವತಾರ ಎಂದು ಬಿಂಬಿಸಲಾಗಿತ್ತಂತೆ. ಪಾರ್ವತಿಯನ್ನು ರಾಜಕುಮಾರಿ ಬನವಾಸಿಯಾಗಿ ರೂಪಿಸಲಾಗಿತ್ತು ಅಂತ ವರ್ಣನೆ ಇದೆ.
ವೈಷ್ಣವರ ( ಅಥವಾ ಕುಮಾರವ್ಯಾಸನ) ಮೇಲೆ ಹಗೆ ತೀರಿಸಲು ಚಾಮರಸ “ಇದು ಬರಿ ಪಾಮರರ ಕಥೆಯಲ್ಲ" ಅಂತ ಮಹಾಭಾರತ ಮತ್ತು ರಾಮಾಯಣಗಳನ್ನು ಹೀಯಾಳಿಸಿದ್ದ ಎಂದು ಉಲ್ಲೇಖವಿದೆ.
ವಿಷಯ ಹೀಗಿರುವಾಗ, ಪೈಪೋಟಿ “ಆರೋಗ್ಯಕರ” ಅನ್ನೋದು ಎಷ್ಟರ ಮಟ್ಟಿಗೆ ಸಮರ್ಪಕ ವೈಭವ?
- ನವರತ್ನ ಸುಧೀರ್
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ನಾನು 'ಆರೋಗ್ಯಕರ' ಅಂತ ಹೇಳಿದ್ದು ಈ ಪಯ್ಪೋಟಿಯಿಂದ ಕನ್ನಡಕ್ಕೆ ಪ್ರಬುಲಿಂಗಲೀಲೆಯಂತ ಕ್ರುತಿ ಸಿಕ್ಕಿದೆಯಲ್ಲ ಅದಕ್ಕೆ.(ಇದರಲ್ಲಿ ಆ ಕಾಲದಲ್ಲೇ ಬಳಕೆಗೆ ತಪ್ಪಿದ ಕನ್ನಡದ್ದೆ ಆದ ಪದಗಳನ್ನು ಬಳಸಲಾಗಿದೆ).
ನನಗೆ ಚಾಮರಸನ ಬಗ್ಗೆ ಮೆಚ್ಚುಗೆಯಿದೆ ಏಕೆಂದರೆ ಅವನು ಅದೇ ಮಾಬಾರತವನ್ನೊ, ರಾಮಾಯಣವನ್ನೊ ಬರೆಯದೆ ತನ್ನ ಕಲ್ಪನಾ ಶಕುತಿಯನ್ನು ಬಳಸಿ ಆವರೆಗೂ ಯಾರೊ ಹೇಳಿರದ ಕತೆಯನ್ನು 'ಪ್ರಬುಲಿಂಗಲೀಲೆ'ಯಲ್ಲಿ ಅರುಹಿದ. ಇದರಿಂದಲೇ ಅವನು ಹೇಳಿರುವುದು ತಾನು ಬೇರೆಯವರ ಕತೆಯನ್ನು ಕನ್ನಡಯ್ಸಿಲ್ಲ. ಇದು ತನ್ನದೇ ಕತೆ ಅಂತ.
ನೀವು ಹೇಳಿರುವ ಹಾಗೆ ವಯ್ ಶ್ಣವ v/s ವೀರಶಯ್ವ ಪಯ್ಪೋಟಿಯ ಹಿನ್ನಲೆಯೂ ಇರಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು