ಆವರಣದ ಬಗ್ಗೆ ಒಂದು ಅನೌಪಚಾರಿಕ ಪತ್ರ
ನನ್ನ ತಂದೆ ಜಿ.ಎನ್. ಅಶೋಕ ವರ್ಧನ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ಮಾಲಿಕ. ಭೈರಪ್ಪನವರ ಆವರಣ ಪುಸ್ತಕ ಬಿಡುಗಡೆಯಾಗಿ ಭಾರೀ ವ್ಯಾಪಾರ ನಡೆಸುತ್ತಿರುವ ಸಮಯದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಅವನ್ನು ಈ ಮೂಲಕ ನಿಮ್ಮೆಲ್ಲರ ಓದಿಗಾಗಿ ಸಂಪದಕ್ಕೆ ಸೇರಿಸುತ್ತಿದ್ದೇನೆ.
- ಅಭಯ ಸಿಂಹ.
ಪ್ರಿಯರೆ ನನಗೆ ಹೊಳೆದ ಕೆಲವು ಈಚಿನ ವಿಚಾರಗಳನ್ನು ಹೀಗೇ ಇನ್ನಷ್ಟು ಮಂದಿಯೊಂದಿಗೆ ಹಂಚಿಕೊಳ್ಳಬೇಕೆಂದು ತುಡಿತ ತೀವ್ರವಾದುದರಿಂದ ಎಂದಿನಂತೆ ಯಾವ ಔಪಚಾರಿಕ ಚೌಕಟ್ಟು, ಅಂತಿಮ ತೀರ್ಮಾನಗಳನ್ನು ಹೇರದೆ ನಿರೂಪಿಸುತ್ತೇನೆ. ಆದರೆ ಅವಶ್ಯ ನಿಮ್ಮ ಪ್ರತಿಕ್ರಿಯೆಗಳನ್ನು ಕಾದಿರುತ್ತೇನೆ. ಸಾಹಿತ್ಯಭಂಡಾರದಿಂದ ಆವರಣದ ಇಪ್ಪತ್ತೈದು ಪ್ರತಿ ಕೇಳಿದ್ದೆ. ಕನ್ನಡದಲ್ಲಿ ಎಂದೂ ಇಲ್ಲದ ಬಿಡುಗಡೆಯ ದಿನದ ಒತ್ತಡದಲ್ಲಿ ಐದನೇ ತಾರೀಕಿನಂದು ಬಂದ ಪ್ರತಿಗಳು ಮಾರಿಹೋಗುವುದನ್ನು ಕಂಡು ಆರರಂದು ಮತ್ತೆ ಐವತ್ತು ಪ್ರತಿಗಳಿಗೆ ಬೇಡಿಕೆ ಮಂಡಿಸಿದೆ. ಎಲ್ಲರಿಗೂ ತಿಳಿದಂತೆ `ಭಂಡಾರಿಗಳು' ಎರಡನೇ ಮುದ್ರಣವನ್ನು ಒಂಬತ್ತಕ್ಕೆ ಮುಗಿಸಿಕೊಟ್ಟರು.
ನನ್ನಲ್ಲಿ ಹಲವರು ಈರ್ಷ್ಯೆಯಿಂದಲೇ ಎಂಬಂತೆ ಹೇಳುವುದಿದೆ, "ನಿಮಗೇನಪ್ಪಾ ಬೇಕಾದ್ದು, ಧರ್ಮಕ್ಕೆ ಓದಬಹುದು." ಆದರೆ ನಾನು ವಾಸ್ತವವನ್ನು ತಮಾಷೆಯಲ್ಲೆ ನೀವೇದಿಸುವುದಿದೆ - ಇಲ್ಲಾ. ನಾನು ಓದುವುದು ಕ್ಯಾಟ್ಲಾಗು, ಬಿಲ್ಲು! ಬರೆಯುವುದೂ ಅಷ್ಟೇ ಆದೇಶಪತ್ರ, ಬಿಲ್ಲು ಮತ್ತೆ ತೀರಾ ಕ್ವಚಿತ್ತಾಗಿ ಜಗಳಗಂಟೀ ಪತ್ರ!! ಆದರೂ ಆವರಣದ ಜನಮನ್ನಣೆಯ ಮಹಾಪೂರದಲ್ಲಿ ವ್ಯಾಪಾರೀ ಸ್ಥಿತಪ್ರಜ್ಞೆಯನ್ನು (ಸೋಮಾರೀತನ?) ಕಳಚಿಕೊಂಡು ಎಲ್ಲ ವಹಿವಾಟುಗಳ ನಡುವೆ ಎರಡೇ ದಿನಗಳಲ್ಲಿ ಓದಿ ಮುಗಿಸಿದೆ. ಮತ್ತೆ ಹಿಡಿದಿಟ್ಟುಕೊಳ್ಳಲಾಗದೆ ಸೂಚ್ಯವಾಗಿ (ಪಾವತಿ ಚೆಕ್ಕಿನೊಡನೆ) ಭಂಡಾರಿಗಳಿಗೆ ನನ್ನ ಅಭಿಪ್ರಾಯದ ಎರಡು ಸಾಲು ಗೀಚಿದೆ. ಅದನ್ನೇ ಸ್ವಲ್ಪ ಪರಿಷ್ಕರಿಸಿ, ವಿಸ್ತರಿಸುವುದಾದರೇ ಮೊದಲು ಕಾಣುವುದು ಭೈರಪ್ಪನವರ ಅಗಾಧ ಓದು. ಮತ್ತದನ್ನು ತಮ್ಮ ವಾದಕ್ಕೆ ಬಳಸಿಕೊಳ್ಳುವ ಅಸಾಮಾನ್ಯ ತಾಕತ್ತು. ಮುಂದುವರಿದು ಅದನ್ನು ಕೃತಿರೂಪಕ್ಕೆ ಇಳಿಸುವ ಜಾಣ್ಮೆ. ಆದರೆ ಇವರ ಅದ್ವಿತೀಯ ಲೋಕಾನುಭವದ ಫಲವಾಗಿ ಕಾಣಬೇಕಿದ್ದ ಕಥಾ ಹಂದರ ಉದ್ದೇಶಪೂರ್ವಕವೋ ಎಂಬಂತೆ ತೀರಾ ಬಡಕಲಾಗಿದೆ. ಲಕ್ಷ್ಮಿ ಅಥವಾ ರಜಿಯಾ ಹೆಸರಿನಲ್ಲಿ ಇಸ್ಲಾಂ ಧರ್ಮದ ಕೊರತೆಗಳನ್ನು ಮತ್ತು ಭಾರತೀಯ ಇತಿಹಾಸದಲ್ಲಿ ಮುಸ್ಲಿಂ ಆಡಳಿತದಿಂದಾದ ಅನಾಚಾರಗಳನ್ನು ಸ್ವತಃ ಭೈರಪ್ಪನವರೇ ಬಲವಾದ ವಾದದ ರೂಪದಲ್ಲಿ ಹೆಣೆದಿದ್ದಾರೆ. ಸಹಜವಾಗಿ ಎಲ್ಲಾ ಪಾತ್ರಗಳು ಕೇವಲ ಅಣಕದ ಮಟ್ಟದಿಂದ ಮೇಲೆ ಬರುವುದೇ ಇಲ್ಲ. ಈ ಕೃತಿ ಮೊದಲಲ್ಲಿ ಇತಿಹಾಸದ ಓದುಗರಲ್ಲದವರನ್ನು ಅಂದರೆ ಕಾದಂಬರಿ ಓದುಗರ ವಿಶಾಲಪ್ರಪಂಚವನ್ನು ಆವರಿಸುತ್ತದೆ. ಅದಕ್ಕೂ ಅಪಾಯಕರವಾಗಿ ಮೂಲಭೂತವಾದಿಗಳನ್ನು ಆಕರ್ಷಿಸುತ್ತದೆ. ಕೆಲವರಿಗೆ ಇದೊಂದು ಅಸ್ತ್ರವಾದರೆ ಇನ್ನೊಂದು ಬಳಗಕ್ಕೆ ನಿವಾರಿಸಲೇಬೇಕಾದ ಹೊಲಸಾಗಿಯೂ ಕಾಣಿಸಿದರೆ ಆಶ್ಚರ್ಯವಿಲ್ಲ. ಒಟ್ಟಾರೆ ಇತಿಹಾಸದ ಅನಾಚಾರಗಳು ವರ್ತಮಾನದ ಜೀವನವನ್ನು ಕಲಕಲು ಇದು ಬಲು ದೊಡ್ಡ ಪ್ರೇರಣೆ ಕೊಟ್ಟೀತು ಎನ್ನುವುದು ನನ್ನ ಹೆದರಿಕೆ. ಇದು ಸರಿ ಎನ್ನುವುದಾದರೆ ಅನ್ವಯವನ್ನು ಕಾದಂಬರಿ ಸೂಚಿಸುವ ಬರಿಯ ಹಿಂದೂ-ಮುಸ್ಲಿಂ ಮತಕ್ಕೆ ಸಿಮಿತಗೊಳಿಸಿದರೆ ಸಾಕೇ? ಬೌದ್ಧ-ಹಿಂದೂ (ಕದ್ರಿಯ ಅವಲೋಕಿತೇಶ್ವರ- ಮಂಜುನಾಥೇಶ್ವರ ದೇವಸ್ಥಾನ), ಶೈವ-ವೈಷ್ಣವ (ಉಡುಪಿಯ ಅನಂತೇಶ್ವರ-ಕೃಷ್ಣ ಮಠ), ಶ್ರೀರಂಗದ ತೆಂಕಲೈ-ಬಡಗಲೈ ಅಥವಾ ಮುಸ್ಲಿಮರದೇ ಶಿಯಾ ಸುನ್ನಿ ಸಂಪ್ರದಾಯಗಳಿಗೂ (ಇತ್ಯಾದಿ) ವಿಸ್ತರಿಸುತ್ತಾ ಹೋದರೆ (ಅಶಾಂತಿ, ರಕ್ತಪಾತಕ್ಕೆ ಕೊನೆಯಿಲ್ಲ) ಎಲ್ಲಾ ಶಿಷ್ಟ ಆರಾಧನೆಗಳೂ ಮತಾಚಾರಗಳೂ ಜನಪದದಲ್ಲಿ ಕೊನೆಗೊಳ್ಳುವುದು ನಿಶ್ಚಯ; ಇದು ಸ್ವೀಕಾರಾರ್ಹವಾಗುವುದುಂಟೇ? ನನ್ನೀ ಅಭಿಪ್ರಾಯಗಳಿಗೆ ಪೂರಕವಾಗಿ ಮೊದಲ ಮುದ್ರಣದ ಪ್ರತಿಗಳ ಮಾರಾಟ ಭರಾಟೆಯಲ್ಲಿ `ಹಿಂದೂ ಪರಿವಾರದ' ಪಾತ್ರ ಸ್ಪಷ್ಟವಾಗಿದ್ದುದು ತಿಳಿದುಬಂತು. ಎರಡನೇ ಮುದ್ರಣ ಬರುವ ಕಾಲಕ್ಕೆ (ನಾಲ್ಕೇ ದಿನಗಳಲ್ಲಿ) ಮತ್ತೆ ಆ ಬಳಗದ್ದೇ ನಿಂದಾಸ್ತುತಿಯ ಆಶಯವೋ ಎಂಬಂತೆ `ಆವರಣ ಬ್ಯಾನ್ ಆಗುತ್ತೆ' ಎನ್ನುವ ಗುಸುಗುಸು ದಟ್ಟವಾಗಿ ಹರಡಿತು.
ಕ್ಷಮಿಸಿ, ಇಲ್ಲಿ ನನ್ನ ಆತ್ಮಕಥೆಯ ಕವಲು ದಾರಿಯಲ್ಲಿ ಸ್ವಲ್ಪ ಬನ್ನಿ. ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ಬಡ(ಕಲು) ಉಪಾಧ್ಯಾಯ ಮೂಲಿಕಾಪುರದಲ್ಲಿ ನೆಲೆಸಿದ್ದ. ಈತ ತನ್ನೊಂದು ಕೃತಿರತ್ನವನ್ನು ಅಚ್ಚಿಸಿ ಹೊರ ಊರಿನಲ್ಲೆಲ್ಲೋ ಲೋಕಾರ್ಪಣದ ಕೆಲಸ ನಡೆಸಿದ. ಸಣ್ಣ ಸುದ್ದಿಯಾಯ್ತು, ಜನ ಮರೆತರು. ಆದರದು ಸಾಲದನ್ನಿಸಿ, ಪೆಟ್ಟು ತಿಂದಾದರೂ ಪೇಪರಿನಲ್ಲಿ ಕಾಣಿಸಬೇಕೆನ್ನುವ ಹುಂಬನಂತೆ ಬಡ(ಕಲು) ಉಪಾಧ್ಯಾಯ ಮೂಲಿಕಾಪುರದಲ್ಲೇ ಇನ್ನೊಂದು ನಾಟಕ ವ್ಯವಸ್ಥೆ ಮಾಡಿಸಿದ. ಅಲ್ಲಿ ಸ್ವತಃ ಲೇಖಕನೇ ಕೃತಿಯ `ಅವಗುಣ'ವನ್ನು ಎತ್ತಿ ಹಾಡಿದ. ಸಹಜವಾಗಿ ಮತೀಯ ಭಾವನೆಯನ್ನು ಕೆರಳಿಸುತ್ತದೆಂಬ ಹೆಸರಿನಲ್ಲಿ ಸಣ್ಣ ಪ್ರತಿಭಟನೆಯೊಡನೆ ಪ್ರಚಾರವೇನೋ ದೊಡ್ಡದಾಗಿಯೇ ಗಿಟ್ಟಿತು. ಆದರೆ ಯಾರೋ ಬುದ್ದಿವಂತರು ನ್ಯಾಯಾಲಯದ ಕಟ್ಟೆಗೇ ಈ ಕೃತಿಯನ್ನೇರಿಸಿ ಎಲ್ಲಾ ಪ್ರತಿಗಳ ವಶೀಕರಣ ಆಜ್ಞೆಯನ್ನೂ ಪಡೆದದ್ದು ನನಗೆ ತಿಳಿಯುವಾಗ ತಡವಾಯ್ತು. ಆ ಒಂದು ದಿನ ನಾನು ಅಂಗಡಿ ಬಾಗಿಲು ತೆಗೆಯುವಾಗ ಎಂದಿನಂತಲ್ಲದೆ ಪೋಲೀಸು ಜೀಪೊಂದು ಕಾದು ನಿಂತಿತ್ತು. ಎರಡು ಪೇದೆಗಳೊಡನೆ ಬಂದ ಅಧಿಕಾರಿ ಮೃದುಮಾತಿನಲ್ಲೇ ತಾವು ಹಿಂದಿನ ರಾತ್ರಿಯೇ ನನ್ನ ಮನೆಯ ವಿಳಾಸ, ದೂರವಾಣಿ ಹುಡುಕಿ ವಿಫಲವಾದ್ದನ್ನು ಹೇಳಿಕೊಂಡರು. ಮತ್ತೆ ನ್ಯಾಯಾಲಯದ ಆದೇಶ ತೋರಿಸಿ ಬಡ(ಕಲು) ಉಪಾಧ್ಯಾಯನ ಪುಸ್ತಕದ ಪ್ರತಿಗಳನ್ನೆಲ್ಲಾ ತಮಗೆ ಒಪ್ಪಿಸುವಂತೆ ಕೇಳಿಕೊಂಡರು. ನಾನು ಕೊಂಡಿದ್ದ ಹತ್ತೋ ಹದಿನೈದೋ ಪ್ರತಿಗಳಲ್ಲಿ ಒಂದೆರಡು ಮಾರಿಹೋದ್ದನ್ನು ಬಿಟ್ಟು ಉಳಿದೆಲ್ಲವನ್ನೂ ಒಪ್ಪಿಸಿ ರಸೀದಿ ಪಡೆದೆ. [ಆ ಅಧಿಕಾರಿ ಕೊಡವ, ನನ್ನ ತಂದೆಯ ಹಳೆಯ ವಿದ್ಯಾರ್ಥಿಯಂತೆ. ತಂದೆ ಮಡಿಕೇರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಗೌರವ ಕಾರ್ಯದರ್ಶಿಯಾಗಿ ನಡೆಸಿದ ಸಹಕಾರಿ ಸಂಘದ ಕಥೆಯನ್ನು ಈ ಅಧಿಕಾರಿ ಜ್ಞಾಪಿಸಿಕೊಂಡರು. "ನಾನೊಂದು ನೋಟ್ ಬುಕ್ಕಿಗೆ ಹಣ ಕೊಟ್ಟರೆ ಮಾಸ್ಟ್ರು, ಪುಸ್ತಕ ಕೊಟ್ಟು ಮತ್ತೆ `ಬರೆಯಲು ಸುಂದರ ನಟರಾಜ ಪೆನ್ಸಿಲ್, ತಪ್ಪುಗಳನ್ನು ಅಳಿಸಲು ಉತ್ತಮ ರಬ್ಬರ್, ಬಾಯಿ ಸಿಹಿ ಮಾಡಲು ಆಹ್! ಪ್ಯಾರೀಸ್ ಸ್ವೀಟ್ಸ್' ಎಂದು ಎಲ್ಲಾ ಬಿಲ್ಲು ಮಾಡಿ ಚಿಲ್ಲರೆಯನ್ನೂ ಕೊಟ್ಟು ಕಳಿಸಿಬಿಡುತ್ತಿದ್ದರು. ಅಂಥಾ ಮಾಸ್ಟ್ರ ಮಗನಾಗಿ ನೀವು ಇಷ್ಟು ಸುದ್ದಿಯಲ್ಲಿರುವ ಈ ಪುಸ್ತಕವನ್ನು ಇಷ್ಟು ಕಮ್ಮಿ ಮಾರಿದ್ದಾ" ಎಂದು ತಮಾಷೆ ಮಾಡಿದ್ದನ್ನು ಹೇಳದಿರಲೆಂತು!] ಆ ವ್ಯಾಜ್ಯ ಬಗೆಹರಿದದ್ದು, ಪ್ರತಿಗಳು ಮರಳಿ ಬಂದದ್ದು ನಾನಂತೂ ಕಾಣಲಿಲ್ಲ. ಆದರೆ ವಶೀಕೃತ ಪ್ರತಿಗಳ ಲೆಕ್ಕದಲ್ಲಿ ನನಗೆ ನಷ್ಟವಾಗದಂತೆ ಆ ಕೃತಿಯ ಪ್ರಕಾಶಕರು ಹಣ ತುಂಬಿದರು.
ಈಗ ಇನ್ನೂ ಒಂದು ಸಾಧ್ಯತೆಗೆ ಕಿರುದಾರಿ ಬಿಟ್ಟು ಒಂದು ಅನಧಿಕೃತ ಗಲ್ಲಿಗೂ ಒಮ್ಮೆ ಕಾಲಾಡಿಸಲು ಹೀಗೆ ಬನ್ನಿ. ಅರುಣ್ ಶೌರಿ ಅಂಬೇಡ್ಕರ್ ಬಗ್ಗೆ (ವಿವಾದಾತ್ಮಕವಾದ) ಒಂದು ದೊಡ್ಡ ಪುಸ್ತಕ ಪ್ರಕಟಿಸಿದರು (ಬೆಲೆ ರೂ ಐದುನೂರರ ಮೇಲೆ). ಅದರ ಕುರಿತು ಅಲ್ಲಿ ಇಲ್ಲಿ ಅಪಸ್ವರಗಳು ಕೇಳುತ್ತಿದ್ದಂತೆ ಒಂದು ದಿನ ಬೆಂಗಳೂರಿನ ಖ್ಯಾತ ಪುಸ್ತಕ ಮಳಿಗೆ ಒಂದಕ್ಕೆ ಜನಸಮ್ಮರ್ದದ ನಡುವೆ ಒಬ್ಬ ಗಿರಾಕಿ ಇದನ್ನು ಕೇಳಿ ಬಂದ. ಒಂದು ಪ್ರತಿ ಕೊಟ್ಟರು. ಆತ ಹೆಚ್ಚು ಬೇಕೆಂದ. ಸರಿ, ಇವರು ಮಳಿಗೆಯ ಖ್ಯಾತಿಗೆ ತಕ್ಕಂತೆ ದಾಸ್ತಾನಿರಿಸಿದ್ದ ಹತ್ತಿಪ್ಪತ್ತು ಪ್ರತಿಗಳನ್ನು ಮುಂದೊಡ್ಡಿದರಂತೆ. ಒಮ್ಮೆಗೆ ಗಿರಾಕಿ ಶೌರಿ ವಿರುದ್ಧ ಬೊಬ್ಬೆ ಹಾಕುತ್ತಾ ಮಳಿಗೆಯ ಹೊರಗೆ ಹೊಂಚು ಹಾಕಿದ್ದ ತನ್ನ ತಂಡಕ್ಕೆ ಸೂಚನೆ ಕೊಟ್ಟ. ಕೂಡಲೇ ಆರೆಂಟು ಮಂದಿ ಒಳ ನುಗ್ಗಿ ಪ್ರಸ್ತುತ ಪುಸ್ತಕಕ್ಕೆ ಬೆಂಕಿ ಹಚ್ಚಲು ಮುಂದಾದರಂತೆ. ಮಳಿಗೆಯ ಯಜಮಾನ ಸಮಯಪ್ರಜ್ಞೆ ಪ್ರದರ್ಶಿಸಿ ಆ ಪುಸ್ತಕದ ಅಷ್ಟೂ ಪ್ರತಿಗಳನ್ನು ಹೊರಗೊಯ್ದು ಏನು ಬೇಕಾದರೂ ಮಾಡಿಕೊಳ್ಳಿ ಎಂದು ವಿನಂತಿಸಿ ಯಶಸ್ವಿಯಾದ. ಎದುರು ದಾರಿಯಲ್ಲೇ ಅವನ್ನು ಸುಟ್ಟು, ತಂಡ ಚದುರಿತಂತೆ.
ಈಗ ವಾಪಾಸು ಬನ್ನಿ, ಹಾಗೇ ಎಲ್ಲಾದರೂ ಆವರಣಕ್ಕೂ ನಿಷೇಧ ಬಂದರೆ ಐವತ್ತನ್ನೂ ಒಂದೇ ಗಂಟಿನಲ್ಲಿ ಕಳೆದುಕೊಳ್ಳುವಂತಾಗಬಾರದು ಎಂಬ ಎಚ್ಚರ ನನ್ನಲ್ಲಿ ಮೂಡಿತು! ಕೆಲವೇ ಪ್ರತಿಗಳನ್ನು ಅಂಗಡಿಯಲ್ಲಿ ಅದೂ ಸಹಜಸ್ಥಾನ ತಪ್ಪಿಸಿ ಉಳಿಸಿಕೊಂಡೆ. ದೊಡ್ಡ ಕಟ್ಟನ್ನು ಮನೆಗೆ ಸಾಗಿಸಿ ಅಲ್ಲೂ ಕಳ್ಳಹಣ ಮುಚ್ಚಿಡುವವನಂತೆ ದಾಸ್ತಾನಿಟ್ಟೆ. ಅಂಗಡಿಯದ್ದು ಮಾರಿಹೋದಂತೆಲ್ಲಾ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯೆಂದು ಆಚೀಚೆ ಓಡಾಡುವಾಗ ಪ್ರತಿಗಳನ್ನು ಸಾಗಿಸಿಕೊಂಡು ಸುಧಾರಿಸಿದೆ. ಇಲ್ಲಿ ನನ್ನನ್ನು ಕಾಡುವ ದ್ವಂದ್ವ ಇಷ್ಟೇ - ಅನಧಿಕೃತವಾಗಿ ನ್ಯಾಯವನ್ನು ಕೈಗೆತ್ತಿಕೊಳ್ಳುವವರನ್ನು ನಾನು ವಂಚಿಸಿ ಆವರಣ ಮಾರಬಹುದು. ಕಾನೂನು ಕ್ರಮವೇ ಬಂದರೆ ವಂಚಿಸುವುದು ಸರಿಯಾದೀತೇ? ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಸರಿತಪ್ಪುಗಳೇನೇ ಇರಲಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ (ಸಾಮಾನ್ಯರು ಬಿಡಿ) ಪ್ರಜಾಪ್ರತಿನಿಧಿಗಳು, ವಿಚಾರವಂತರನ್ನು ನೋಡಿದರೆ `ಆವರಣ ಬ್ಯಾನ್ ಆದರೂ (ನಿಜದಲ್ಲಿ ಆಗಿಲ್ಲ, ಆಗುವುದೂ ಬೇಡ) ಮಾರುವುದು ತಪ್ಪಲ್ಲ' ಎಂದನ್ನಿಸತೊಡಗಿದೆ!
ಜಿ.ಎನ್.ಅಶೋಕ ವರ್ಧನ, ಅತ್ರಿ ಬುಕ್ ಸೆಂಟರ್, ೪ ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು ೫೭೫೦೦೧

- Abhaya Simha ರವರ ಬ್ಲಾಗ್
- Login or register to post comments
- 897 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಆವರಣದ ಬಗ್ಗೆ
ಬೌದ್ಧ-ಹಿಂದೂ (ಕದ್ರಿಯ ಅವಲೋಕಿತೇಶ್ವರ- ಮಂಜುನಾಥೇಶ್ವರ ದೇವಸ್ಥಾನ), ಶೈವ-ವೈಷ್ಣವ (ಉಡುಪಿಯ ಅನಂತೇಶ್ವರ-ಕೃಷ್ಣ ಮಠ), ಶ್ರೀರಂಗದ ತೆಂಕಲೈ-ಬಡಗಲೈ ಅಥವಾ ಮುಸ್ಲಿಮರದೇ ಶಿಯಾ ಸುನ್ನಿ ಸಂಪ್ರದಾಯಗಳಿಗೂ (ಇತ್ಯಾದಿ) ವಿಸ್ತರಿಸುತ್ತಾ ಹೋದರೆ (ಅಶಾಂತಿ, ರಕ್ತಪಾತಕ್ಕೆ ಕೊನೆಯಿಲ್ಲ) ಎಲ್ಲಾ ಶಿಷ್ಟ ಆರಾಧನೆಗಳೂ ಮತಾಚಾರಗಳೂ ಜನಪದದಲ್ಲಿ ಕೊನೆಗೊಳ್ಳುವುದು ನಿಶ್ಚಯ;
ಸಾರ್,
ಹಿಂಗೆ ಅವರು ಮೊದಲು ಬರೆದುದಲ್ಲ!
’ದಾಟು’ ಕಾದಂಬರಿಯಲ್ಲೂ, "ಶಿವಲಿಂಗವನ್ನು ಕೀಳಿಸಿ, ವೆಂಕರರಮಣನನ್ನು ತಿರುಮಲಾಪುರದಲ್ಲಿ ನೆಟ್ಟರೆಂದು" ಅಲ್ಲಿ ಬರೆದಿದ್ದಾರೆ. ’ದಾಟು’ವಲ್ಲಿ ಒಂದು ಮಣ ಜಾತಿ ಜಾತಿ ಅಂತ ಬರೆದಿದ್ದಾರೆ.
ಆದರೆ ’ಆವರಣ’ ಅವರು ಹೇಳುವಂತೆ ಬೇರೆ ಬಗೆಯ ಕಾದಂಬರಿ. ಅದನ್ನು ಮೆಚ್ಚಲು ಅದಕ್ಕೆ ತಕ್ಕ ಮನವಿರಬೇಕು. ನಮ್ಮ ನಾಡಿನಲ್ಲಿ ಹಲವರಿಗೆ ಅಂತಹ ಮನವಿರುವಿದು, ಅದರ ಮಾರಾಟ ತೋರಿಸಿದೆ. ಕೆಲವಿರಿಗೆ ಅದು ಹಿಡಿಸದೇ ಹೋಗಬಹುದು.
"ಆ ಬಳಗದ್ದೇ ನಿಂದಾಸ್ತುತಿಯ ಆಶಯವೋ"
ಪ್ರೊಪಗ್ಯಾಂಡ ಮೆಟೀರಿಯಲ್
ಆವರಣ ನಿಜಕ್ಕೂ ಒಂದು ಕಾದಂಬರಿಯೇ?
ಒಂದು ಪ್ರೊಪಗ್ಯಾಂಡಾ ಮೆಟೀರಿಯಲ್ ಅನ್ನು ಕಾದಂಬರಿಯ ಹೆಸರಿನಲ್ಲಿ ಓದುಗರಿಗೆ ಕೊಟ್ಟು ಒಂದು ರೀತಿಯಲ್ಲಿ ವಂಚಿಸಿದ್ದಾರೆ. ಭೈರಪ್ಪನವರು ಉಲ್ಲೇಖಿಸುವ ಪುಸ್ತಕಗಳು, ಅವರು ಕಾದಂಬರಿಯಲ್ಲಿ ಮಂಡಿಸುವ ವಾದಗಳೆಲ್ಲಾ ಹಿಂದೆಲ್ಲೋ ಕೇಳಿದಂತೆ ಭಾಸವಾಗುತ್ತಿರುತ್ತದೆ. ಸಣ್ಣ ಮಟ್ಟಿಗಿನ ರೀಸರ್ಚ್ ಮಾಡಿದರೆ ಇದೇ ಬಗೆಯ ವಾದಗಳನ್ನೂ ಈ ಬಗೆಯ ಇತಿಹಾಸವನ್ನೂ ತುಂಬ ಅಗ್ರೆಸ್ಸಿವ್ ಆಗಿ ಪ್ರಚುರ ಪಡಿಸಲು ಪ್ರಯತ್ನಿಸುತ್ತಿದ್ದುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಸೋದರ ಸಂಘಟನೆಗಳು ಎಂಬುದು ಎಂಥವರಿಗೂ ತಿಳಿಯುತ್ತದೆ.
ಪಿಲ್ಟ್ ಡೌನ್ ಹಾರ್ಸ್ ಖ್ಯಾತಿಯ ಎನ್. ಎಸ್. ರಾಜಾರಾಂ ಎಂಬವರು ಆವರಣ ಕಾದಂಬರಿಯನ್ನು ಇಂಗ್ಲಿಷ್ ನ ಥ್ರಿಲ್ಲರ್ ಡಾ ವಿನ್ಸಿ ಕೋಡ್ ಗೆ ಹೋಲಿಸಿದ್ದಾರೆ. ಡಾ ವಿನ್ಸಿ ಕೋಡ್ ಕನಿಷ್ಠ ಪೇಜ್ ಟರ್ನರ್. ಆವರಣ ಅದೂ ಅಲ್ಲ. ಓದುವುದಕ್ಕೆ ತುಂಬಾ ಸಹನೆಯನ್ನು ಬೇಡುತ್ತದೆ.
-ಯಾಮಿ
Re: ಪ್ರೊಪಗ್ಯಾಂಡ ಮೆಟೀರಿಯಲ್
Yamini,
ಅವರಣ is not a literary masterpiece... ಪರ್ವ ನೋಡಿದವರು ಇದನ್ನು ನೋಡಿದ್ರೆ MTR ಕಾಫಿ ಕುಡಿದು ಕಾಕ ಒಟ್ಲು ಕಾಪಿ ಕುಡಿದಂಗ್ ಆಗುತ್ತೆ....ಭೈರಪ್ಪ ಕೂಡ ಇದನ್ನು ಒಪ್ಕೋತಾರೆ..... ಇತಿಹಾಸವನ್ನು ಸಿದ್ಧಾಂತಕ್ಕೋಸ್ಕರ ತಿದ್ದೋದರ ಮೇಲಿನ ಸಿಟ್ಟನ್ಣ ಹೀಗೆ ಹೊರ ಹಾಕಿದ್ದರೆ.. (ತಮ್ಮ ವಿರುಧ್ಧದ left lobby ಮೇಲಿನ ಸಿಟ್ಟೂ ಇದರೊಳಗೆ ಇರಬಹುದು)
ಆದರೆ ಈ ಪುಸ್ತಕದ ಉದ್ದೇಶ ಬೇರೆ ಅನ್ನಿಸುತ್ತೆ.... ತಮ್ಮ ಕುಸುರಿ ಕುಶಲತೆ ಬಿಟ್ಟು leftists ಜನಕ್ಕೆ ಬೀದಿಲ್ಲಿ ನಿಲ್ಸ್ಕೊಂಡ್ ಬೈದಿದ್ದಾರೆ.... ಈ ಪುಸ್ತಕದಲ್ಲಿ ಮತ್ತು follow up functions ಗಳಲ್ಲಿ ಇದು ಸ್ಪಷ್ಟವಾಗುತ್ತೆ. ಭೈರಪ್ಪ ಸಹಜವಾಗಿ ರೋಮಿಲಾ ತಪರ್, ಇರ್ಫಾನ್ ಹಬೀಬ್ ಅವರ ಇತಿಹಾಸವನ್ನು ಒಪ್ಪೋದಿಲ್ಲ.....ನಾನು ಕೂಡ left ಇತಿಹಾಸವನ್ನು ಗುಮಾನಿಯಿಂದ ನೋಡ್ತೀನಿ... (ನನಗೆ ಅಕಾಡೆಮಿಕಾಲಿ ಇದರ ಬಗ್ಗೆ ಅಧಿಕರಾಯುತವಾಗಿ ಮಾತಾಡೋ ಹಕ್ಕಿಲ್ಲ)
Propaganda ವಿಚಾರದಲ್ಲಿ ಭೈರಪ್ಪ ಯಾವ ಗುಂಪು , ಅಲೆ ಇವುಗಳಲ್ಲಿ ನಂಬಿಕೆ ಇಲ್ಲ ಅಂತ ಹೇಳ್ತಾರೆ... ಆದ್ರೆ ಒಟ್ಟಾರೆಯಾಗಿ (ಒಟ್ಟಾರೆ ಶೂರನಾಗಿ
) ನಾನು ಭೈರಪ್ಪನವರನ್ನ ನಾನ್-ಲೆಫ್ಟ್ ಅಂತ ಕರೀಬಹುದೇನೋ....
-ಸಂದೀಪ್ ಐತಾಳ
Re: ಪ್ರೊಪಗ್ಯಾಂಡ ಮೆಟೀರಿಯಲ್
ಪರ್ವವನ್ನು ಇರಾವತಿ ಕರ್ವೆಯವರ ಯುಗಾಂತದ ಜತೆಗೆ ಹೋಲಿಸಿ ನೋಡಿದರೆ ಪರ್ವದ ಸೋಲೆಲ್ಲಿದೆ ಎಂಬುದೂ ತಿಳಿಯುತ್ತದೆ. ಅಲ್ಲಿಯೂ ಭೈರಪ್ಪನವರ ಕ್ರಿಯೇಟಿವಿಟಿಗಿಂತ ಶಾಲಾ ಮಟ್ಟದ ಡಿಬೆಟಿಂಗೇ ವಿರಾಜಿಸಿರುವುದು. ರಾಮಾಯಣ ದರ್ಶನಂನಲ್ಲಿರುವಂಥ ಯಾವ ದಾರ್ಶನಿಕ ಹೊಳಹೂ ಇದರಲ್ಲಿ ಸಿಗುವುದಿಲ್ಲ. ಒಂದು ರೀತಿಯ ಚೀಪ್ ರಿಯಲಿಸಂ. ಹಿಸ್ಟಾರಿಕಲ್ ಥ್ರಿಲ್ಲರ್ ಗಳ ಹಾಗಿನ ಬರೆಹ. ಭೈರಪ್ಪನವರ ಕಾದಂಬರಿಗಳಲ್ಲಿ ಗೃಹಭಂಗವೇ ಹೆಚ್ಚು ಕ್ರಿಯೇಟಿವ್ ಆದ ಬರಹ ಅನ್ನಿಸುತ್ತೆ.
ಸಿದ್ಧಾಂತಕ್ಕೋಸ್ಕರ ಯಾರಾದರೂ ಇತಿಹಾಸ ತಿರುಚಿ ತಪ್ಪು ಮಾಡಿದ್ದರೆ ಭೈರಪ್ಪ ಕೂಡಾ ಅದೇ ತಪ್ಪು ಮಾಡುತ್ತಿದ್ದಾರಲ್ಲವೇ. ತಮ್ಮ ಸಿಟ್ಟು ತೀರಿಸಿಕೊಳ್ಳಲು ಕಾದಂಬರಿ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದುಕೊಳ್ಳಬೇಕಲ್ಲವೇ?
-ಯಾಮಿ
ಬೆಸ್ಟ್ ಸೆಲ್ಲರ್ ತಂತ್ರ
ಅಶೋಕವರ್ಧನರು ಬರೆದ ಹಾಗೆ ಭೈರಪ್ಪನವರ ಕಾದಂಬರಿಯನ್ನು ಬೆಸ್ಟ್ ಸೆಲ್ಲರ್ ಮಾಡುವುದಕ್ಕಾಗಿಯೇ ಒಂದು ಹುನ್ನಾರ ನಡೆದಿರುವಂತೆ ಕಾಣಿಸುತ್ತದೆ. ಈ ಬಗೆಯ ವಿವಾದಗಳ ಮೂಲಕ ಮಾರಾಟ ಹೆಚ್ಚಿಸಿಕೊಳ್ಳುವ ವಿಧಾನವೊಂದು ಆಂಗ್ಲ ಭಾಷಾ ಕಾಂದಬರಿಗಳ ಮಾರಾಟದಲ್ಲಿ ಬಹಳ ಹಿಂದಿನಿಂದಲೇ ಇದೆ. ಅಶೋಕವರ್ಧನರ ಪತ್ರ ನೋಡಿದ ಮೇಲೆ ಇಲ್ಲೂ ಅಂಥದ್ದೇ ವಾಸನೆ ಹೊಡೆಯುತ್ತಿದೆ. ಒಂದೆರಡು ವೆಬ್ ಸೈಟುಗಳಲ್ಲಿ ಭೈರಪ್ಪನವರ ಕಾದಂಬರಿ ಅಂಗಡಿ ತಲುಪುವ ಮೊದಲೇ ಅದು ಬ್ಯಾನ್ ಆಗುತ್ತಂತೆ ಎಂಬ ಗುಲ್ಲೆಬ್ಬಿಸಲಾಗಿತ್ತು. ಸ್ವತಃ ಭೈರಪ್ಪನವರಿಗೂ ಅದೇ ಮನಸ್ಸಿನಲ್ಲಿ ಇರುವಂತೆ ಇದೆ. ಅವರೇ ಕಾದಂಬರಿಯ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಕಾದಂಬರಿಯನ್ನು ಇಬ್ಬಿಬ್ಬರು ವಕೀಲರಿಗೆ ತೋರಿಸಿದ್ದಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಕ್ಲೈಮ್ಯಾಕ್ಸ್ ಗೆ ಬಿಲ್ಡಪ್ ಕೊಡುವಂತೆ ಭೈರಪ್ಪ ತಮ್ಮ ಕಾದಂಬರಿ ನಿಷೇಧಕ್ಕೆ ಕಾದಂಬರಿಯಲ್ಲೇ ಬಿಲ್ಡಪ್ ಕೊಟ್ಟಿದ್ದಾರೆ. ಅದ್ಯಾಕೋ ತೋಪು ಸಿನಿಮಾಗಳಂತಾಗಿಬಿಟ್ಟಿದೆ.
Re: ಬೆಸ್ಟ್ ಸೆಲ್ಲರ್ ತಂತ್ರ
"ನಿಂದಕರಿರಬೇಕು.. ಜಗದೊಳು ನಿಂದಕರಿರಬೇಕು,
ಹಂದಿ ಇದ್ದರೆ ಹ್ಯಾಂಗ ಕೇರಿ ಶುದ್ಧಿಯೋ ಹಾಂಗ.. ನಿಂದಕರಿರಬೇಕು"...
- ಪುರಂದರ ದಾಸರು...
ವಿಮರ್ಶೆ ಒಂದು ಹದ್ಧಿನಲ್ಲಿರಬೇಕು.. ಸಾಹಿತ್ಯದಲ್ಲಿ ವ್ಯೆಕ್ತಿಗತ ನಿಂದನೆ ವಿಮರ್ಶೆ ಎನಿಸುವುದಿಲ್ಲ ಅದು ಅಸಹ್ಯವೆನಿಸುವುದಲ್ಲದೆ, ಸಾಹಿತ್ಯದಲ್ಲಿ ನಿರಾಸಕ್ತಿಯನ್ನು ಹುಟ್ಟಿಸಿದಂತಾಗುತ್ತದೆ. ಅದರಲ್ಲೂ ಈ ರೀತಿ ಸಾರ್ವಜನಿಕವಾಗಿ ಒಬ್ಬ ವೆಕ್ತಿ (ಆತ ಸಾಹಿತ ಅಲ್ಲದೆಯೂ ಇರಬಹು) ಬಗ್ಗೆ ಬರೆದರೆ ಓದುಗನು ಎಲ್ಲ ಸಾಹಿತ್ಯದಲ್ಲೂ ಈ ರೀತಿಯ ದೃಷ್ಟಿಕೋನದಲ್ಲೇ ನೋಡುವ ಸಾಧ್ಯತೆಯೂ ಇರುವುದರಿಂದ ಇದು ಸಲ್ಲ.
ವಿಮರ್ಶೆ ಸಕಾರಾತ್ಮಕವಾಗಿರಲಿಲ್ಲದಿದ್ದರೂ, ನಕಾರಾತ್ಮಕವಾಗಿಯೂ ಇರಬಹುದು ಆದರೆ ಅದು ಸಾಹಿತ್ಯಿಕ ಸರಹದ್ದಿನಲ್ಲಿರಬೇಕು.
ನಿಮಗೆ ಹಾಗೆನಾದರೂ ವ್ಯಾಪಾರೀ ಹುನ್ನಾರ ಕಂಡುಬಂದರೆ, ಸಾಕಷ್ಟು ಪುಷ್ಟಿಯುತ ಪುರಾವೆಗಳೊಂದಿಗೆ ಬಯಲಿಗೆಳೆಯಬೇಕು. (ಕೇಂಬ್ರಿಜ್ ವಿಶ್ವ ವಿದ್ಯಾಲಯಗಳಲ್ಲಿ ಸಾಹಿತ್ಯಾಭ್ಯಾಸಕ್ತರಿಗೆ ಕೃತಿಚೌರ್ಯಮಾಡಿದ್ದನ್ನು ಸಾಬೀತು ಮಾಡ ಬೇಕಾದರೆ ಎಂಟೆದೆಯ ಧೈರ್ಯಬೇಕು ಎಂಬುದು ಗೊತ್ತೆ).
ಹಾಗೆಯೇ ಈ ತಾಣದಲ್ಲಿ ಸಾಹಿತ್ಯವನ್ನು ಬಹುದಿನಗಳಿಂದ ಬಲ್ಲ ಪಂಡಿತರೂ ಇದ್ದಾರೆ ಎಂಬುದನ್ನು ಮರೆಯಬೇಡಿ.
ಧನ್ಯವಾದಗಳೊಂದಿಗೆ,
ವಿನಾಯಕ.
Re: ಬೆಸ್ಟ್ ಸೆಲ್ಲರ್ ತಂತ್ರ
ಇಲ್ಲಿರುವ ಪತ್ರ ಪುಸ್ತಕ ವ್ಯಾಪಾರಿಯೊಬ್ಬರದ್ದಲ್ಲವೇ?
ಆವರಣದ ಮೇಲೆ ಕೃತಿ ಚೌರ್ಯದ ಆರೋಪವನ್ನು ಯಾರೂ ಹೊರಿಸಿದಂತೆ ಕಾಣಿಸಲಿಲ್ಲವಲ್ಲ!
ಸಾಹಿತ್ಯವನ್ನು ಬಹಳ ಓದಿಕೊಂಡವರಂತೆಯೇ ಸಾಹಿತ್ಯಾಸ್ವಾಧನೆ ಮಾಡುವ ಸಹೃದಯ ಸಾಮಾನ್ಯನಿಗೂ ವಿಮರ್ಶೆಯ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ. ಇನ್ನು ವೈಯಕ್ತಿಕ ನಿಂಧನೆಗೆ ಸಂಬಂಧಿಸಿದಂತೆ ನಿಮ್ಮ ಮಾತನ್ನು ಒಪ್ಪುತ್ತೇನೆ. ಆವರಣ ಕಾದಂಬರಿಯಲ್ಲಿ ಇರುವ ಪ್ರೊ.ಶಾಸ್ತ್ರಿ ಪಾತ್ರ ಕನ್ನಡದ ಪ್ರಮುಖ ಸಾಹಿತಿಯೊಬ್ಬರನ್ನು ಅಣಕ ಮಾಡಿದ್ದೆಂದು ಯಾರದೋ ಬ್ಲಾಗ್ ನಲ್ಲಿ ಓದಿದ ನೆನಪು (ಬಹುಶಃ ನೀಲಗ್ರೀವ).
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
ಅಂತೂ ಆವರಣವನ್ನು ಓದಿದ್ದಾಯಿತು!
ನಾಕು ದಿನಗಳ ಹಿಂದೆ, ಸಾಹಿತ್ಯಭಂಡಾರದವರು ಕಳಿಸಿದ ’ಆವರಣ’ ಬಂದು ಸೇರಿತು. ಆದಾಗಲೆಲ್ಲ ಓದಿ, ಮುಗಿಸಿದೆ. ನನಗೆ ಬಂದಿರುವುದು ಮೂರನೆಯ ಆವೃತ್ತಿ.
ಬ್ಯಾನ್ ಆಗುವ ಮಾತೆಲ್ಲ ಬಂದಿರುವುದು, ಕಥೆಯಲ್ಲಿ ಲಕ್ಷ್ಮಿ ಬರೆಯುವ ಕಾದಂಬರಿಯನ್ನು ಪೋಲೀಸರು ಮುಟ್ಟುಗೋಲು ಹಾಕಿಕೊಳ್ಳುವ ಸಂದರ್ಭ ಬಂದಿರುವುದರಿಂದ ಎನಿಸುತ್ತದೆ. ನಿಜ ಹೇಳಬೇಕೆಂದರೆ, ತೀರಾ ಏನನ್ನೂ ಓದದಿದ್ದವರಿಗೆ ಕಥೆ ಆಘಾತಕಾರಿ ಎನಿಸಬಹುದಾದರೂ, ಸ್ವಲ್ಪ ಚರಿತ್ರೆಯ ಬಗ್ಗೆ ಕಾಮಾಲೆ ಕಣ್ಣಿಲ್ಲದೇ ಓದಿಕೊಂಡಿದ್ದವರಿಗೆ ಆವರಣ ತುಂಬಾ ಹೊಸ ವಿಷಯಗಳನ್ನೇನೂ ಹೇಳುವುದಿಲ್ಲ. ಹೇಳುವುದೇನಿದ್ದರೂ, ನಮ್ಮಲ್ಲಿ ನಡೆಯುತ್ತಿರುವ ಆವರಣ ಕ್ರಿಯೆಯನ್ನಷ್ಟೆ. ಬ್ಯಾನ್ ಮಾಡಬೇಕೆಂದಿರುವವರು, ಕಥೆಯನ್ನು ಓದಿದರೆ, ಆ ಆಲೋಚನೆಯನ್ನು ಖಂಡಿತಾ ಬಿಡಬೇಕಾಗುತ್ತದೆ
Bibliography (ಪಠ್ಯ ಸೂಚಿ) ಯನ್ನು ಕಾದಂಬರಿಕಾರರು ಕಥೆಯ ಅಂಗವಾಗಿ ಜಾಣತನದಿಂದ ಹೆಣೆದಿದ್ದಾರೆ.
ಇದು ಬಿಟ್ಟರೆ, ಈ ಕಾದಂಬರಿ ನನಗೆ ಭೈರಪ್ಪನವರ ಸಾಮಾನ್ಯ ಕಾದಂಬರಿಗಳಲ್ಲಿ ಒಂದು ಎನಿಸುತ್ತದೆ. ವಂಶವೃಕ್ಷ, ಪರ್ವ, ಧರ್ಮಶ್ರೀ ಗೃಹಭಂಗ ಅಥವಾ ತಂತು, ಇಂತಹ ಕಾದಂಬರಿಗಳಲ್ಲಿ ಇರುವಂತಹ ಪಾತ್ರಪೋಷಣೆ ಆವರಣದಲ್ಲಿ ಕಾಣುತ್ತಿಲ್ಲ. ಎಲ್ಲೋ ಓದುತ್ತಿದ್ದಾಗ, ಮತ್ತೆ ಪುಟ ಹಿಂತಿರುಗಿಸಿ ಓದಬೇಕಾದಂತಹ ಒಂದು ಸಂದರ್ಭವೂ ನನಗೆ ಆಗಲಿಲ್ಲ. ಆ ಮಟ್ಟಿಗೆ, ಇದು ಇತರ ಕಾದಂಬರಿಗಳಿಗಿಂತ ಸರಳವಾಗಿದೆ ಎನ್ನಬಹುದು. ಆ ವಿಷಯದಲ್ಲಿ ಕಾದಂಬರಿಕಾರರ ಉದ್ದೇಶ ಸಫಲವಾಗಿದ್ದಾರಾದರೂ, (ಸತ್ಯ ಮತ್ತು ಸೌಂದರ್ಯದಲ್ಲಿ, ಸತ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ಸೌಂದರ್ಯವನ್ನು ಗೌಣವನ್ನಾಗಿ ಮಾಡಿರುವುದು) ಓದುಗರಿಗೆ ಅದು ಹತ್ತಿರವಾಗುವುದೆಂದು ಹೇಳಲಾರೆ.
ಒಮ್ಮೆ ಓದಿ ನೋಡಬೇಕಾದಂತಹ ಕಾದಂಬರಿ. ಆದರೆ, ಮೇಲೆ ನಾನು ಹೇಳಿದ ಕಾದಂಬರಿಗಳಂತೆ, ಆವರಣವನ್ನು ಮತ್ತೆ ಮತ್ತೆ ಓದಬೇಕೆಂದೆನಿಸದು.
-ಹಂಸಾನಂದಿ
Controversy ಅನ್ನು cash ಮಾಡುವ ಕಲೆ.
ಹೇಗೆ ಕೆಲವು ಸಿನಿಮಾಕಾರರು( water, fire ಮುಂತಾದವು ) controversy ಗಳನ್ನು ಸಿನಿಮಾ ಮಾಡಿ ದುಡ್ಡು ಮಾಡ್ತಾರೋ, ಇಲ್ಲ ಅವಾರ್ಡ್ ಗಿಟ್ಟಿಸ್ತಾರೋ, ಹಾಗೆ ಇಂದು ಬರೆಹಗಾರರು ಹೆಚ್ಚು controversy ಗಳನ್ನು ಹುಡುಕಿ, ಕೆದಕಿ ಅದಕ್ಕೆ ರೆಕ್ಕೆ ಪುಕ್ಕ ಇಕ್ಕಿ, ಇಂದು best-seller ಬರೀತಾರೆ. ಎಷ್ಟೋ ಒಳ್ಳೆ ಬುಕ್ಕುಗಳು ಓದಕ್ಕೆ ಮಂದಿ ಇಲ್ದೇ ಕೊಳೀತಾ ಇವೆ.
ಹೀಗೆ Controversy ಅನ್ನು cash ಮಾಡುವ ಕಲೆ, ಇಂಗಲೀಷ ಬರಹಗಾರರಲ್ಲಿ ಜಾಸ್ತಿ. ನಮ್ಮ ಕನ್ನಡದೋರು ಈಗ ಇದನ್ನು ಶುರು ಹಚ್ಚಿಕೊಂಡು ಇದ್ದಾರೆ..
ಇದೂ ಒಂದು ತೆರ western influence
, ಪಾಶ್ಚಾತ್ಯಾನುಕರಣೆ 
===================================================
===================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!
Re: ಪ್ರೊಪಗ್ಯಾಂಡ ಮೆಟೀರಿಯಲ್
@ yamini
[i] ತಮ್ಮ ವಿರುಧ್ಧದ left lobby ಮೇಲಿನ ಸಿಟ್ಟೂ ಇದರೊಳಗೆ ಇರಬಹುದು) [/i]..... ಇದು ನನ್ನ ತೆಳುವಾದ extrapolation..ಹಾಗಾಗಿ [i] ತಮ್ಮ ಸಿಟ್ಟು ತೀರಿಸಿಕೊಳ್ಳಲು ಕಾದಂಬರಿ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದುಕೊಳ್ಳಬೇಕಲ್ಲವೇ? [/i] ಇದು stretched ಆಯ್ತೇನೋ ಅನ್ಸುತ್ತೆ ....
@ bhat
ಭೈರಪ್ಪನವರ ಹಲವು ವಿಚಾರಗಳಿಗೆ ನನ್ನ ತಕರಾರು ಇದೆ..... ಆದರೆ ಗೌರಿ ಲಂಕೇಶ್ ತರಹದ ನಿಂದನೆ ಬ್ಯಾಡಾ ಅನ್ಸುತ್ತೆ..
@ [i] ....controversy ಗಳನ್ನು ಹುಡುಕಿ, ಕೆದಕಿ ಅದಕ್ಕೆ ರೆಕ್ಕೆ ಪುಕ್ಕ ಇಕ್ಕಿ, ಇಂದು best-seller ಬರೀತಾರೆ.....[/i]
ಕೆಲವು ಸಾರಿ ಎಡದ ಬದಿಯವರು ನವರು ಬಲಗಡೆ ಯವರ ಸಾಮರ್ಥ್ಯವನ್ನು over-estimate ಮಾಡ್ತಾ ಇದ್ದಾರೆ ಅಂತ ನನ್ನ ಅಭಿಪ್ರಾಯ.....
- ಸಂದೀಪ್ ಐತಾಳ