ಮಲ್ಲಿಗೆ ಮಗು.
ರೋಹಿಣಿ
ರತ್ನದಂತ ಹುಡುಗಿ ಇವಳು ರಾಮ ಕೋಟ್ಟ ಉಡುಗೊರೆ
ಕಪಟವರಿಯದ ಇವಳು ಕೃಷ್ಣ ಕೊಟ್ಟ ಉಡುಗೊರೆ
ಶಿವನ ಕೊಡುಗೆ ಶಿವಾನಿ
ಭಾಗ್ಯದಾತೆ ಭವಾನಿ
ಮೃದುವಾದ ವಾಕ್ ಸಿರಿಯು ವಾಣಿ ಕೊಟ್ಟ ಉಡುಗೊರೆ
ಬಡತನವ ಸರಿಸಿ ಹರಿಯ ಸಿರಿಯು ಕೊಟ್ಟ ಉಡುಗೊರೆ
ಮಧುರ ಸ್ವರದ ಇನಿದನಿ
ಮಾತಿನಲ್ಲಿ ಅರಗಿಣಿ
ಉಡುಗೆ ತೊಡುಗೆಯಲ್ಲಿ ಇವಳ ನೋಟವೇ ಉಡುಗೊರೆ
ಆಟಪಾಠದಲ್ಲಿ ಇವಳ ಮಾಟವೇ ಉಡುಗೊರೆ
ಮನೆಯ ಹಸಿರು ತೋರಣ
ಮನೆಗೆ ಬಂದ ಶ್ರಾವಣ
ಹೊಂಬೆಳಕಿನ ಮೈಬಣ್ಣ ರವಿಯು ಕೊಟ್ಟ ಉಡುಗೊರೆ
ಚಂದ್ರನಾ ಪಟ್ಟದರಸಿ ಹೆಸರು ಕೊಟ್ಟ ಉಡುಗೊರೆ
ನಮ್ಮೆಲ್ಲರ ಕಣ್ಮಣಿ
ಇವಳ ಹೆಸರು ರೋಹಿಣಿ.
ಅಹೋರಾತ್ರ.

- ahoratra ರವರ ಬ್ಲಾಗ್
- Login or register to post comments
- 1150 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮಲ್ಲಿಗೆ ಮಗು ?
ಅಹೋರಾತ್ರಿಯವರೆ (ನಿಮ್ಮ ದಿಟವಾದ ಹೆಸರು ತಿಳಿದುಕೊಳ್ಳಲಾಸೆ, ತಿಳಿಸಿ ),
ನಿಮ್ಮ ಕವನ ವಸ್ತುಗಳು ಹೆಚ್ಚು ಬಾರಿ ಬಹಳ ಚೆನ್ನಾಗಿರುತ್ತವೆ. ನಿಮ್ಮ ಕವನವಸ್ತುಗಳ ಬಗ್ಗೆ ನನ್ನ ಮೆಚ್ಚುಗೆ ಯಾವಾಗಲೂ ಇದೇ ಇದೆ.
ಆದರೆ ಮಲ್ಲಿಗೆ ಮಗುವೆನ್ನುವ, ಕವನದ ಹೆಸರೇಕಿಟ್ಟಿರೆಂದು ನನಗೆ ಹೊಳೆಯಲಿಲ್ಲ.
ಕೆಲವು ಸಂಗತಿಗಳನ್ನು, ಅಭಿಪ್ರಾಯಗಳನ್ನು ಹೇಳುವೆನು, ದಯವಿಟ್ಟು ತಪ್ಪರಿಯಬೇಡಿರಿ.
೧) ದಯವಿಟ್ಟು ಆರನೆ ವಿಭಕ್ತಿಗಳನ್ನು ಉದ್ದವಾಗೆಳೆರದಿರಿ( ದೀರ್ಘ ಸ್ವರ ).
ಕಾರಣ:
ಚಂದ್ರನಾ ಪಟ್ಟದರಸಿ: ಎಂದರೆ "ಚಂದ್ರನ ಆ ಪಟ್ಟದರಸಿ" ಎಂತಾಗುವುದು, ಇದು ಸರಿ. ಆದರೆ ಕಪಟವರಿಯದಾ ಇವಳು : "ಕಪಟವರಿಯದ ಆ ಇವಳು" ಇದು ಸರಿಯಾಗಿ ತೋರದು. ಹಾಗೆ
ಬಡತನವಾ ಸರಿಸಿ = "ಬಡತನವ ಆ ಸರಿಸಿ"
೨)ಇನಿಧನಿ(ಅಲ್ಲ) = ಇನಿದನಿ.( ದನಿ, ಧ್ವನಿಯ ತದ್ಭವ ).
ವಾಕ್ಸಿರಿ = ಇದೊಂದು ಒಳ್ಳೆಯ ಬಳಕೆ. ವಾಕ್ (ಸಂಸ್ಕೃತ ), ಸಿರಿ(ಕನ್ನಡ) . ಇದು ಅರಿಸಮಾಸಕ್ಕೊಂದು ಉದಾಹರಣೆ.
ಇದನ್ನೆ ಮಾತ್ಸಿರಿ ಎನ್ನಬಹುದೆ?(ಬೆನಕರು, ನೋಡಬೇಕು)
ನೊಂದರೆ ಮನ್ನಿಸಿ,
ಮಹೇಶ
ಗುರುವಂದನೆ
ಪ್ರಿಯ ಮಹೇಶರೆ,
ತಪ್ಪುಗಳನ್ನು ತಿದ್ದಿಕೊಂಡೆ ಮತ್ತು ತಿದ್ದಿದೆ ಕೂಡ.
ನಮ್ಮ ಮಗಳು ರೋಹಿಣಿಗಾಗಿ ಬರೆದ ಕಾರಣ ಮಲ್ಲಿಗೆ ಮಗು ಎಂದು ಹೆಸರಿಟ್ಟೆ.
ನನಗೆ ವಾಕ್ಸಿರಿ ಎನ್ನುವ ಪದ ಬದಲಾವಣೆ ಮಾಡಲಿಚ್ಚಿಸುವುದಿಲ್ಲ.
ಮಹೇಶ ಹೆಸರಿನ ಕನ್ನಡರೂಪ ತಿಳಿಸಿ.
ನನ್ನ ಮನಸ್ಸಿಗೆ ಯಾವುದೇ ನೋವಿಲ್ಲ,
ನಿಮ್ಮ ವಿಮರ್ಶೆ ಜಾರಿಯಿರಲಿ.
ನಲ್ಮೆಯೊಂದಿಗೆ
ಅಹೋರಾತ್ರ
ಧನ್ಯವಾದ
ವಾಕ್ಸಿರಿ ಒಳ್ಳೆಯ ಬಳಕೆ ಬದಲಿಸಬೇಡಿ.
ಮಹಾ + ಈಶ = ಮಹೇಶ. ಇಲ್ಲಿ ಒಂದು ಸಂಗತಿ ಹೇಳಲೇ ಬೇಕು ಮಹೇಶ ಎಂಬು ಅತ್ಯಂತ-ಸಮಾನ್ಯವಾದ ಹೆಸರು.
ಮಹಾ = ದೊಡ್ಡ / ಹಿರಿಯ /
ಈಶ = ಒಡೆಯ / ದೊರೆ / ಅರಸ / ಧಣಿ /
ಆದರೆ ಮಹೇಶ ಎಂದು ನನಗೆ ಹೆಸರಿಟ್ಟಿದ್ದು "ಶಿವ"/"ಮಹೇಶ್ವರ" ಎಂಬ ಅರ್ಥದಲ್ಲಿ.
-ನಲ್ಮೆ,
ಮಹೇಶ
ಶ್ರಾವಣ
ಮಹೇಶರೇ,
ವಾಕ್ಸಿರಿ ಒಳ್ಳೆಯ ಬಳಕೆ; ವಾಕ್ಕಿಗೆ ಕನ್ನಡ ಬಳಸಲೇ ಬೇಕಾದಲ್ಲಿ 'ಸಿರಿಮಾತು' ಎನ್ನಬಹುದು.
ಅಥವಾ ನಲ್ + ಮಾತು = ನಲ್ವಾತು ಆಗಬಹುದೇನೋ. ಈ ನಲ್ವಾತು, ಮೆಲ್ವಾತು ಅರಿತಿರುವ ಜನ ಬಹಳ ಕಡಿಮೆ.
ಕವಿಗಳೇ,
ಒಂದು ಸಣ್ಣ ಸಲಹೆ ನೀಡಬಹುದೇ? ಈ ಸಾಲನ್ನು ಗಮನಿಸಿ:
ಮನೆಯ ಹಸಿರು ತೋರಣ
ಮನೆಗೆ ಬಂದ ಶ್ರಾವಣ
ತುಂಬ ಒಳ್ಳೆಯ ಪ್ರಯೋಗ; ಆದರೆ ಕವನದ ಸಣ್ಣ ಪರಿಮಿತಿಯೊಳಗೆ ಒಂದೇ ಪದವನ್ನು(ಮನೆ) ಬಹಳ ಬಾರಿ ಉಪಯೋಗಿಸದಿರುವುದು ಉತ್ತಮ.
ಮೇಲಿನ ಸಾಲುಗಳನ್ನು ಹೀಗೆನ್ನಬಹುದೇ:
ಮನೆಯ ಹಸಿರು ತೋರಣ
ಮನಕೆ ಬಂದ ಶ್ರಾವಣ
ಅಥವಾ
ಮನೆಯ ಹಸಿರು ತೋರಣ
ಬುವಿಗೆ ಬಂದ ಶ್ರಾವಣ
ಏಕೆಂದರೆ, ಶ್ರಾವಣ ಕೇವಲ ಒಂದು ಮನೆಗೆ ಬರುವುದಿಲ್ಲ; ಅದು ಇಡೀ ಪರಿಸರಕ್ಕೆ ಸಂಬಂಧಿಸಿದ್ದು; ಅಲ್ಲವೇ? ಮನಕೆ ಬಂದ ಶ್ರಾವಣ ಎಂಬಲ್ಲಿ ಮನಸ್ಸಿಗೆ ಹೊಸ ಋತುವಿನ ಕಳೆಯನ್ನು ಕೊಡುತ್ತದೆ; ಹಾಗೆಯೇ ಬುವಿಯ ಹಬ್ಬದ ಮಾಸ.
ಇದು ಕೇವಲ ಸಲಹೆ; ನೋಯದಿರಿ!
ನಿಮ್ಮವ
ಬೆನಕ
ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು
ನನಗೆ ಗೊತ್ತಿತ್ತು ನೀವೊಳ್ಳೆಯ ಸಲಹೆಯನ್ನು ನೀಡುವುರೆಂದು.! ಸವಿಯೊದಗು.
ಸರಿಮಾತು, ನಲ್ಮಾತು, ಮೇಲ್ಮಾತು, ಮೆಲ್ಮಾತು, ಅಹಾ!! ಸಾಧು, ಸಾಧು!!
ಹಾಗೆ ಸಿರಿನುಡಿ, ಬಿರುನುಡಿ, ಹೊಗಳ್ಳುಡಿ, ತೆಗಳ್ಳುಡಿ ಮುಂತಾದ ಪದದಗಳನ್ನು ಮಾಡುತ್ತಾ ಹೋಗಬಹುದು.
ನರಸಿಂಹ ಸ್ವಾಮಿಯವರ ಒಂದು ಕವನಗಳಲ್ಲಿ ಅವರು ಸಿರಿಪದದ ಚೆಲುವಿನ ಬಳಕೆಗನ್ನು ಮಾಡಿದ್ದಾರೆ.
"ಸಿರಿಗೆರೆಯ ನೀರಿನಲಿ ಬಿರಿದದಾವರೆ"
"ಸಿರಿಗೌರಿಯಂತೆ ಹಸೆಮಣೆಗೆ"
"ಸಿರಿಗಣ್ಣು"..
ಈ ಬಳಕೆಗಳೆಷ್ಟು ಚೆಲುವಾಗಿದೆ.
ಈ ಸಿರಿಪದವು ನನಗೆ ಸಕ್ಕದ ಶ್ರೀ ಗಿಂತಲೂ ಇಂಪಾಗಿ ಕೇಳಿಸುತ್ತದೆ.
ನಿಮ್ಮ ಕವನದ ಬಗ್ಗಿನ ಸಲಹೆಯೂ ಅಷ್ಟೆ ಸೊಗಾಸಾಗಿದೆ. ಅದರಲ್ಲೂ
ಮನೆಯ ಹಸಿರು ತೋರಣ
ಮನಕೆ ಬಂದ ಶ್ರಾವಣ
ಇದು ಅತಿಯುತ್ತಮ.
ಸಿರಿಯೊಲುಮೆ
-ಮಹೇಶ
ನಾವೇನೋ ಹೀಗೆ ಹೇಳಬಹುದು..ಆದರೆ
ಈ ಸಿರಿಪದವು ನನಗೆ ಸಕ್ಕದ ಶ್ರೀ ಗಿಂತಲೂ ಇಂಪಾಗಿ ಕೇಳಿಸುತ್ತದೆ.
ನಾವು, ನೀವೇನೋ ಈ ರೀತಿ ಹೇಳಬಹುದು ಆದರೆ ನಮ್ಮ ಸರಕಾರ ಏನು ಹೇಳುತ್ತದೆ ಗೊತ್ತೆ. ಇತ್ತೀಚೆಗೆ(ಬಹುಶಃ ಜೂ.೩ರ ಶನಿವಾರದಂದು) ದಿನಪತ್ರಿಕೆಯ ಸುದ್ಧಿಯ ಶೀರ್ಷಿಕೆ ಮತ್ತು ಸಾರ ಈ ರೀತಿಯಿತ್ತು.
ಜಾನಪದ ಸಿರಿ ಇಂದ ಜಾನಪದ ಶ್ರೀ ವರೆಗೆ
ಜಾನಪದ ಶ್ರೀ ಎನ್ನುವುದು ಕರ್ನಾಟಕ ಸರ್ಕಾರ ಕೊಡುವ ಒಂದು ಬಿರುದು. ಇದನ್ನು ಈ ಬಾರಿ ಒಬ್ಬರು ಮಹನೀಯರು ಪಡೆದಿರುವರು. ಇಂಥಹವರಿಗೆ, ಅವರಲ್ಲಿರುವ ಜಾನಪದ ಕಲಾ ಸಿರಿಗೆ ಗೌರವ ಸೂಚಕವಾಗಿ ಅವರಿಗೆ "ಜಾನಪದ ಶ್ರೀ" ಪ್ರಶಸ್ತಿ ನೀಡಲಿದ್ದಾರೆ ನಮ್ಮ ಸರಕಾರ. ಅವರಿಗ "ಜಾನಪದ ಸಿರಿ" ಯನ್ನೇ ನೀಡಬಹುದಿತ್ತಲ್ಲವೇ...? ನೀವು ಏನು ಹೇಳುತ್ತಿೀರಿ.
ಪಾಪ ಪತ್ರಿಕೆಯವರೇನು ಮಾಡುತ್ತಾರೆ ಬಿಡಿ ಸರಕಾರವೇ ಶ್ರೀ ಪ್ರಶಸ್ತಿ ಎಂದು ಹೆಸರಿಟ್ಟಿರುವಾಗ.?
ಸರಕಾರ ಮತ್ತು ಅಚ್ಚಕನ್ನಡ
ಆ ಯೋಚನೆ ಮೊದಲೇ ಇದ್ದಿದ್ದರೆ, ಈಗಿನ ಎಷ್ಟೋ ಸಕ್ಕದ ಹೆಸರುಗಳ ಕನ್ನಡದಲ್ಲೆ ಇರುತ್ತಿತ್ತು.
ಗಾಳಿ ಹಡಗು ನಿಲ್ದಾದದಲ್ಲಿ "ಆಗಮನ" ಮತ್ತು "ನಿರ್ಗಮನ" ಎಂದು ಬರೆಯುವ ಬದಲು "ಬರುವಿಕೆ" ಹಾಗು "ಹೋಗುವಿಕೆ" ಎಂದಿದ್ದರೂ ಆ ಅರ್ಥವೇ ಬರುತ್ತಿತ್ತು. ಆದರೆ ಸರಕಾರದ ಪಂಡಿತರು ಸಂಸ್ಕೃತ ಪ್ರಿಯರು.
ಅವರಿಗೋಸ್ಕರ ನಾವು ಇರಬೇಕಾಗಿಲ್ಲ. ಕನ್ನಡವು ನಮ್ಮ ಸ್ವತ್ತು ಕೂಡ
.
ಸಿರಿಯಗಲು
-ಮಹೇಶ
'ನಮಸ್ಕಾರ' ಕನ್ನಡ ಪದವೇ?
ಮಹೇಶರೆ,
ತಾವು 'ನಮಸ್ಕಾರ'ಪದ ಬಳಸಿದ್ದು ನಮಗೆ ಅಚ್ಚರಿಯುಂಟು ಮಾಡಿದೆ, ದಯವಿಟ್ಟು 'ನಮಸ್ಕಾರ' ಯಾವ ಭಾಷೆಗೆ ಸೇರಿದ್ದೆಂದು ತಿಳಿಸಿ.
ತಪ್ಪಿದ್ದರೆ ಮನ್ನಿಸಿ,
ನಮನಗಳೊಂದಿಗೆ
ಅಹೋರಾತ್ರ
ನಮಸ್ಕಾರ ಸಂಸ್ಕೃತಪದ.
ಬೆನಕ ಬೆನಕ ಏಕದಂತ.... ಈ ಪದ್ಯವನ್ನು ನೆನೆಸಿಕೊಂಡು ಹಾಗೆ ಬರೆದೆನು.
ನಮಸ್ಕಾರ / ನಮನ / ನಮಸ್ತೆ / ಪ್ರಣಾಮ / ವಂದನೆ / ಅಭಿನಂದನೆ / ಅಭಿವಂದನೆ/ ಅಭಿವಾದನೆ / ಶುಭಾಶಯ/ಭಾಷೆ / ರಾತ್ರಿ / ಮಧ್ಯಾಹ್ನ/ ಮುಂತಾದವುಗಳೆಲ್ಲ ಸಕ್ಕದ(ಸಂಸ್ಕೃತ)ಪದಗಳೆ.
ಅಚ್ಚರಿಯೂ ಸಂಸ್ಕೃತದ ಆಶ್ಚರ್ಯದಿಂದ ಬಂದದ್ದೆ. ಕನ್ನಡದಲ್ಲೆ ಬೆರಗಾಗು, ಸೋಜಿಗ, ದಂಗಾಗು, ಬೆಕ್ಕಸಬೆರಗಾಗು, ಬೆಪ್ಪಳಿಸು, ತಬ್ಬಿಬ್ಬಾಗು ಮುಂತಾದ ಪದಗಳಿವೆ.
ಭಾಷೆಯೂ ಸಕ್ಕದದ ಪದವೆ. ಕನ್ನಡದಲ್ಲಿ "ನುಡಿ"ಯನ್ನಬಹುದೇನೋ.
ನಮಸ್ಕಾರಕ್ಕೆ ಕನ್ನಡದಲ್ಲೆ ಪದಮಾಡಬೇಕೆಂದು ಸುನಿಲರು ಮತ್ತು ನಾನು ಮಾಡಿದ ಜತುನಗಳೆಲ್ಲ ಹಣ್ಣಾಗಲಿಲ್ಲ.
ಅಲ್ಲಿ ಬಂದ ತಲೆಯಂತಹ(ಮುಖ್ಯವಾದ) ಪದ "ಕೈಮುಗಿತ". ನನಗೆ ಅದು ಸಾಕು, ಆದರೆ ಸುನಿಲರು ಅದನ್ನು ಮೆಚ್ಚಲಿಲ್ಲ.
ಬೇಕಾದವರು ನಮಸ್ಕಾರದ ಬದಲು "ಕೈಮುಗಿತ"ವೆನ್ನ ಬಹುದು, ಎನ್ನದೆಯೂ ಇರಬಹುದು. ನಮ್ಮಿಂದ ಯಾವ ಒತ್ತಾಯವಾಗಲಿ, ಅಡ್ಡಿಯಾಗಲಿ ದೇವಾರಾಣೆ(ಖಂಡಿತವಾಗಿ)ಯಿಲ್ಲ.
ನಲ್ಮೆ,
ಮಹೇಶ