ರಾಜಕಾರಣಿಗಳೂ ಕಾವೇರಿಯೂ
ವಿಧಾನ ಸಭೆ ಕಾವೇರಿ ತೀರ್ಪು ಬರುವಾಗ ಸರಿಯಾಗಿ ಪ್ರಾರಂಭ ವಾಯಿತು. ಆದರೆ ಇಲ್ಲಿಯವರೆಗೂ ವಿಧಾನ ಪರಿಷತ್ತು ಒಂದು ದಿನದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ರಾಜಕಾರಣಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಈ ಸನ್ನಿವೇಶ ದಲ್ಲಿ ಕನ್ನಡಿಗನಿಗೆ ಎಂಥಹ ಅನ್ಯಾಯ! ಇದಕ್ಕೆ ಮೊದಲನೆಯದಾಗಿ ಯಾವುದೇ ಕಾರಣಕ್ಕೆ ಕಲಾಪ ನಡೆಯದಿದ್ದರೆ ಆದಿನದ ಬೆತ್ತೆ ಅವರಿಗೆ ಸಿಗದಂತೆ ಕಾನೂನು ರಚಿಸುವದು ಅತ್ಯಾವಶ್ಯಕ. ಅಲ್ಲದೆ ಯಾವುದೇ ವರ್ಷ ಕನಿಷ್ಟ ೮೦% ರಷ್ಟು ದಿನ ಕಲಾಪ ನಡೆಯದೇ ಹೋದರೆ ಅಥವಾ ಯಾವನೇ ಎಮ್.ಎಲ್.ಏ ಅದರಲ್ಲಿ ಭಾಗವಹಿಸದೇ ಹೋದರೆ (ಅನಾರೋಗ್ಯ
ಹೊರತು ಪಡಿಸಿ) ಅವರ ಎಮ್.ಎಲ್.ಎ ಹುದ್ದೆ ರದ್ದಾಗಬೇಕು. ಆಗಮಾತ್ರ ಇವರು ಸ್ವಲ್ಪವದರೂ ಗಂಭೀರ ವಾಗಿ ಪ್ರಜೆಗಳ ಬಗ್ಗೆ ಚಿಂತಿಸಿಯಾರು. ಇಲ್ಲದಿದ್ದರೆ ಅಧ್ಯಕ್ಷರಬಗ್ಗೆ ಕಾಂಗ್ರೆಸ್ಸಿಗೆ ತಕರಾರು ಇದ್ದರೆ ಅದನ್ನು ಸಭೆಯಲ್ಲಿ ನಿಲುವಳಿ ಮಡಿಸಿ ಚರ್ಚಿಸಬಹುದಿತ್ತು. ಒಂದುವೇಳೆ ಅದು ಸಾಧ್ಯವಾಗದಿದ್ದರೆ ಇಂದಿನಪರಿಸ್ಥಿತಿಯಲ್ಲಿ ಕಾವೇರಿ ಬಗ್ಗೆ ಚರ್ಚೆ ಆದನಂತರ ಸದನದ ಹೊರಗೆ ಎಲ್ಲರೀತಿಯ ಚಳವಳಿ ನಡೆಸಬಹುದಿತ್ತು. ಆದರೆ ಅದಕ್ಕೆ ಹೆಚ್ಚಿನ ಶ್ರಮ ವಾಗುತ್ತದೆ. ಕಾರಣ ಒಳಗೆ ಸ್ವಲ್ಪಹೊತ್ತು ಗದ್ದಲ ವೆಬ್ಬಿಸಿ ಸದನ ಮುಂದೂಡುವಂತೆ ನೋಡಿಕೊಂಡು ನಂತರ ಸ್ವಂತ ಕೆಲಸ ಮಾಡಬಹುದು. ಸಂಬಳ ಎಲ್ಲವೂ ಸುಲಭವಾಗಿ ಸಿಗುತ್ತದೆ.
ಅದೇ ತಮಿಳು ರಾಜಕಾರಣಿಗಳು ಸರ್ವ ಪಕ್ಷ ಸಭೆಕರೆದು ಒಗ್ಗಟ್ಟಿನಿಂದ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಟೊಪ್ಪಿ ಹಾಕಲು ತಯಾರಿ ನಡೆಸಿದ್ದಾರೆ. ಉ.ಪ್ರ ಸರ್ಕಾರದ ವಿಚಾರದಲ್ಲಿ ವಿಭಿನ್ನ ನಿಲುವೆ ತಳೆದ ಡಿ.ಎಮ್.ಕೆ. ನಂತರ ಕಾಂಗ್ರೆಸ್ಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಹಕರಿಸಲು ಒಪ್ಪಿದೆ. ಇದರ ಅರ್ಥ ಸಧ್ಯದಲ್ಲೇ ನ್ಯಾಧಿಕರಣದ ತೀರ್ಪು ಗೆಜೆಟ್ ನಲ್ಲಿ ಪ್ರಕಟ ವಾಗುವದು ನಿಶ್ಚಿತ. ಆದ್ದರಿಂದ ಕರ್ನಾಟಕದ ಜನತೆ ಇಲ್ಲಿಯ ಎಲ್ಲಾ ರಾಜಕೀಯ ಪಕ್ಷಗಳನ್ನು ಕಾವೇರಿ ತೀರ್ಪಿನ ಚಳುವಳಿಯಿಂದ ಹೊರಗಿಡಬೇಕು. ಅವರು ನದೆಸುವ ಸೋಗಲಾಡಿ ಪ್ರತಿಭತನೆಗೆ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ ಪ್ರಕಟಿಸಬೇಕು.
ತಕ್ಷಣ ಕರ್ನಾಟಕದ ಎಲ್ಲ ಸಂಸದರೂ ಲೋಕಸಭೆಯೆದುರು ಉಪವಾಸ ಮುಷ್ಕರ ಆರಂಭಿಸದಿದ್ದರೆ (ಲೋಕಸಭೆಯೊಳಗೆ ಪ್ರತಿಭಟಿಸಿದನಂತರ) ಅವರೆಲ್ಲರ ರಾಜಕೀಯ ಜೀವನ ಇಲ್ಲೇ ಕೊನೆಗೊಳ್ಳುವಂತೆ ನೋಡಿಕೊಳ್ಳಬೇಕು.ಈ ವಿಚರವಾಗಿ ಮಾಧ್ಯಮದವರು ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ,ಒಂದು ಕಾಯಂ ಪುಟ ಇದಕ್ಕೆ ಮೀಸಲಿಟ್ಟು ಜನರನ್ನು ಜಾಗ್ರತ ಗೊಳಿಸಬೇಕು. ಇದರಿಂದಲೂ ತಮಿಳು ನಾಡಾಗಲೀ ಕೇಂದ್ರಸರಕಾರವಾಗಲೀ ಪಾಠ ಕಲಿಯದಿದ್ದರೆ ಕರ್ನಾಟಕದಿಂದ ಕಾಂಗ್ರೆಸ್ಸ್, ಬಿ,ಜೆ.ಪಿ, ಯಂತಹ ಈಗಿರುವ ರಾಜಕೀಯ ಪಕ್ಷಗಳು ಕರ್ನಾಟಕದಿಂದ ಮಾಯವಾಗಬೇಕು. ಇದು ನಿರಂತರ ಜನರನ್ನು ಜಾಗ್ರತ ಗೊಳಿಸುವದರಿಂದ ಮಾತ್ರ ಸಾಧ್ಯ.
ಅನಂತ ಪಂಡಿತ.

- anant pandit ರವರ ಬ್ಲಾಗ್
- Login or register to post comments
- 1415 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ
ಎರಡು ಮೂರು ದಿನದ ಹಿಂದಿನ ಪ್ರಜಾವಾಣಿಯ ವಾಚಕರವಾಣಿಯಲ್ಲೊಬ್ಬರು ಒಂದು ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ತಮಿಳುನಾಡಿನಂತೆ ಎರಡೇ ಪಕ್ಷಗಳಿರಲಿ , ಕನ್ನಡಪಕ್ಷ , ಕರ್ನಾಟಕಪಕ್ಷ ಎಂಬ ಹೆಸರಿನಲ್ಲಿ. ರಾಷ್ಟ್ರೀಯ ಪಕ್ಷಗಳನ್ನು ಒದ್ದೋಡಿಸಬೇಕು. ಸದ್ಯದ ರಾಜಕಾರಣಿಗಳು ಎರಡರಲ್ಲೊಂದು ಪಕ್ಷ ಸೇರಲಿ. ಯಾರಿಗೂ ಬಹುಮತ ಸಿಗದ ಲೋಕಸಭೆಯ ಸಂದರ್ಭಗಳಲ್ಲಿ ತಮಿಳ್ನಾಡಿನಂತೆ ಕನ್ನಡ ಹಿತ ಕಾಯಲಿ . ಕೇಂದ್ರದ ಮೇಲೆ ಒತ್ತಡ ತರಲಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ
ಕರ್ನಾಟಕ ಉಳಿಯಬೇಕಾದ್ರೆ ಒಂದು Regional ಪಾರ್ಟಿ ಬೇಕೇ ಬೇಕು. ಯಾವುದೇ ಪಾರ್ಟಿ ಕಟ್ಟಬೇಕಾದ್ರೆ ಕನಿಷ್ಟ ೧೦ ವರ್ಷಗಳಾದ್ರೂ ಬೇಕೇ ಬೇಕು. ಅದಕ್ಕೆ ಈಗಿನಿಂದಲೇ ಪ್ರಯತ್ನಿಸಬೇಕು. ಆದ್ರೆ ಕರ್ನಾಟಕದಲ್ಲಿ ಈ ತರ ಬರೋಕ್ಕೆ ತುಂಬಾನೇ ಕಷ್ಟ ಇದೆ
- ಹತ್ತು ವರ್ಷ ಲಾಭದ ನಿರೀಕ್ಷೆ ಇಲ್ಲದೇ ಕೆಲಸ ಮಾಡೋಕ್ಕೆ ಯಾರು ಬರ್ತಾರೆ ? ಎಲ್ರಿಗೂ ನಾಳೆನೇ ಎಲ್ಲಾ ಬೇಕು.
- ದುಡ್ಡಿಲ್ದೇ ಏನೂ ಆಗೊಲ್ಲ. ಅದಕ್ಕೆ ದುಡ್ಡು ಯಾರು ಕೊಡ್ತಾರೆ ? ಯಾರಾದ್ರೂ ಕೊಟ್ರೆ , ಆಡಳಿತದಲ್ಲಿರೋ ಸರ್ಕಾರ ಮೊದಲು Financiarsನ ಮಟ್ತ ಹಾಕತ್ತೆ.
- ಕರ್ನಾಟಕದಲ್ಲಿ ಜಾತಿ ತುಂಬಾ ಬೇರೂರಿದೆ. ಬೆಂಗಳೂರಲ್ಲಿ ನಾವು ಕನ್ನಡ ಕನ್ನಡ ಅಂತ ಮಾತಾಡ್ಬೋದು. ಉಳಿದ ಭಾಗದಲ್ಲಿ ಎಲ್ಲಾ ಕಡೆ ಬರೀ ಜಾತಿ ರಾಜಕೀಯ.
- ಕರ್ನಾಟಕದಲ್ಲಿ ಬಹಳಷ್ಟು Mixed Population ಇದೆ. ಮಾತ್ರು ಭಾಷೆ ಕನ್ನಡ ಇರುವ ಜನ ಕರ್ನಾಟಕದಲ್ಲಿ ೬೮% ಮಾತ್ರ.
- ಒಕ್ಕಲಿಗರೂ , ಲಿಂಗಾಯಿತರೂ ಮೊದಲು ಒಂದಾಗಬೇಕು. ಇದು ಆಗತ್ತಾ?
ರಾಜಕಾರಣ ಮತ್ತು ಜಾತಿ
ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? ಭಾಷಾವಾರು ಪ್ರಾಂತ್ಯ ವಿಂಗಡಣೆಯಾದ ದಿನದಿಂದಲೂ ಕರ್ನಾಟಕದ ಆಡಳಿತವನ್ನು ನಿಯಂತ್ರಿಸುತ್ತಾ ಬಂದಿರುವುದು ಈ ಎರಡು ಕೋಮುಗಳು ಮಾತ್ರ. ಕುತೂಹಲಕಾರಿ ವಿಷಯವೆಂದರೆ ಈ ಎರಡೂ ಕೋಮುಗಳಿಗೆ ಸೇರದವರು ಮುಖ್ಯಮಂತ್ರಿಗಳಾದಾಗ ಮಾತ್ರ ಸಾಮಾಜಿಕ ಅಭಿವೃದ್ಧಿಯ ಹಾದಿಯ ಮುಖ್ಯ ಹೆಜ್ಜೆಗಳನ್ನು ಇಡಲಾಗಿದೆ.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂಸುಧಾರಣೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯಂಥ ಪ್ರಮುಖ ನಿರ್ಧಾರಗಳು ಹೊರಬಿದ್ದವು. ಅವು ಬಹುದೊಡ್ಡ ಮಟ್ಟದಲ್ಲಿ ಸಾಮಾಜಿಕ ಬದಲಾವಣೆಗಳಿಗೂ ಕಾರಣವಾದವು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಪಂಚಾಯತ್ ರಾಜ್ ಪರಿಕಲ್ಪನೆ ಜಾರಿಗೆ ಬಂತು. ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಗೆ ದೊರೆತ ಮುಖ್ಯಮಂತ್ರಿಗಳ ಬೆಂಬಲದ ಪರಿಣಾಮವಾಗಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಮೀಸಲಾತಿಯನ್ನೂ ಜಾರಿಗೆ ತರಲಾಯಿತು. ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಗೆ ಅರ್ಥ ಬಂತು. ಗ್ರಾಮೀಣ ಪ್ರದೇಶಗಳಲ್ಲಿ ಸಂಖ್ಯೆಯಲ್ಲಿ ಪ್ರಬಲವಾಗಿರುವ ಕೋಮುಗಳು ಮಾತ್ರ ಅಧಿಕಾರಕ್ಕೇರುವುದನ್ನು ತಡೆಯುವುದಕ್ಕೆ ಇಲ್ಲಿಯೂ ಹಿಂದುಳಿದ ವರ್ಗಗಳಿಗೆ, ಹಿಂದುಳಿದ ವರ್ಗಗಳ ಮಹಿಳೆಯರಿಗೆ, ದಲಿತ ಮಹಿಳೆಯರಿಗೆ ವಿಶೇಷ ಮೀಸಲಾತಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಸಿಇಟಿ ವ್ಯವಸ್ಥೆ ಜಾರಿಗೆ ಬಂತು. ದಿನ ನಿತ್ಯ ಭಿನ್ನ ಮತ ಹೊಗೆಯಾಡುತ್ತಿದ್ದರೂ ಹೆದರದೆ ಕರ್ನಾಟಕದ ಎಲ್ಲಾ ಶಿಕ್ಷಣ ವ್ಯಾಪಾರಿಗಳನ್ನು ಎದುರು ಹಾಕಿಕೊಂಡು ಅದರಲ್ಲೂ ವಿಶೇಷವಾಗಿ ಪ್ರಬಲ ಕೋಮುಗಳ ಮಠಾಧೀಶರ ವೈರ ಕಟ್ಟಿಕೊಂಡು ಮೊಯಿಲಿ ಈ ನಿರ್ಧಾರವನ್ನು ಕಾರ್ಯಗತಗೊಳಿಸಿದರು.
ಈ ಮೂವರು ಮುಖ್ಯಮಂತ್ರಿಗಳೂ ಪ್ರಬಲ ಕೋಮುಗಳಿಗೆ ಸೇರಿದವರಾಗಿರಲಿಲ್ಲ. ಇವರಾರೂ ಜಾತಿಯನ್ನು ಆಧಾರವಾಗಿಟ್ಟುಕೊಂಡು ಚುನಾವಣೆಗಳನ್ನು ಗೆದ್ದಿರಲಿಲ್ಲ. ಕರ್ನಾಟಕದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲೂ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಸಂಖ್ಯೆಯ ಬ್ರಾಹ್ಮಣರಿಲ್ಲ, ಅರಸು ಸಮುದಾಯದವರಿಲ್ಲ, ದೇವಾಡಿಗ ಸಮುದಾಯದವರೂ ಇಲ್ಲ.
ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗುವುದರಿಂದ ಅಥವಾ ಬೇರೆಯೇ ಉಳಿಯುವುದರಿಂದ ದೊಡ್ಡ ಬದಲಾವಣೆಗಳೇನೂ ಆಗುವುದಿಲ್ಲ. ಇನ್ನು ರಾಜಕಾರಣದಲ್ಲಿ ಜಾತೀಯತೆಗೆ ಮುಖ್ಯ ಕಾರಣ ಸಂಖ್ಯೆಯಲ್ಲಿ ಹೆಚ್ಚಿರುವ ಒಕ್ಕಲಿಗರು ಮತ್ತು ಲಿಂಗಾಯತರೇ ಮುಖ್ಯ ಕಾರಣರು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮೈಸೂರು ಸಂಸ್ಥಾನವಿದ್ದ ದಿನಗಳಲ್ಲೇ ಈ ಧ್ರುವೀಕರಣ ಆರಂಭಗೊಂಡಿತ್ತು. ಕರ್ನಾಟಕ ಏಕೀಕರಣವಾದ ಈ ಧ್ರುವೀಕರಣಕ್ಕೆ ವೇಗೋತ್ಕರ್ಷದಂತೆ ಪರಿಣಮಿಸಿತು.
ಈಗ ಆಡಳಿತ ನಡೆಸುತ್ತಿರುವ ಕರ್ನಾಟಕ ಸರಕಾರವನ್ನು ನೋಡಿದರೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿ, ಲಿಂಗಾಯತ ಸಮುದಾಯಕ್ಕೆ ಸೇರಿದವರು ಉಪ ಮುಖ್ಯಮಂತ್ರಿ. ಮಂತ್ರಿ ಮಂಡಲದ ಹೊಂದಾಣಿಕೆಯೂ ಹೀಗೆಯೇ ಇದೆ.
ಕರ್ನಾಟಕದಲ್ಲಿ ಜಾತೀಯತೆ ಬಹಳ ಇದೆ ಎಂದು ಹೇಳುವಾಗ ಜಾತೀ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡಬೇಕಾಗುತ್ತದೆ. ಮಗಳಿಗೆ ಗಂಡು ಹುಡುಕುವಾಗ ಜಾತಿಯನ್ನು ಅದರಲ್ಲೂ ತಮ್ಮದೇ ಉಪಜಾತಿಯ ಹುಡುಗ ಬೇಕು ಎನ್ನುವುದನ್ನು ನಾವು ಸಹಜ ಎಂದು ಪರಿಗಣಿಸುತ್ತೇವೆ. ಆದರೆ ರಾಜಕಾರಣದಲ್ಲಿ ಜಾತಿವಾರು ಪ್ರಾತಿನಿಧ್ಯ ಬೇಕು ಎಂದಾಗ ಮಾತ್ರ ಅದು 'ಜಾತೀಯತೆ' ಆಗುವುಗು ಹೇಗೆ?
-ಯಾಮಿ
Re: ರಾಜಕಾರಣ ಮತ್ತು ಜಾತಿ
ಹಾಗೆಯೆ ನಾವು ಕಂಡ ಅತ್ಯಂತ ಕನ್ನಡ ವಿರೋಧಿ ಸರ್ಕಾರವೂ ಆಗಿನ ಮುಖ್ಯಮಂತ್ರಿಯಾಗಿದ್ದ ಗುಂಡುರಾಯರ ಸರ್ಕಾರವಿದ್ದ ಕಾಲದಲ್ಲಿ ಎಂಬುದನ್ನು ನಾವು ಮರೆಯಬಾರದು. ಅದಕ್ಕಾಗಿ ರಾಜಕುಮಾರ್ ಆದಿಯಾಗಿ ನಮ್ಮ ಹಿರಿಯರು ಕ್ರಾಂತಿಕಾರಿ 'ಗೋಕಾಕ' ಚಳುವಳಿಯನ್ನೇ ಮಾಡಬೇಕಾಯಿತು. ಇಲ್ಲವಾದರೆ ಕನ್ನಡದ ಸ್ಥಿತಿ ಏನಾಗುತ್ತಿತ್ತೊ ಗೊತ್ತಿಲ್ಲ.
ಇನ್ನು ಅರಸು ಮನೆತನಕ್ಕೆ ಸೇರಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರು ಮೈಸೂರಿನಿಂದ ಹಲವಾರು ಸಲ ಲೋಕಸಭೆಗೆ ಆಯ್ಕೆಯಾದರೊ ಮೈಸೂರಿನವನೆ ಆದ ನನಗೆ ಗೊತ್ತಿರುವಂತೆ ಮೈಸೂರಿಗೆ ಅವರು ಸಲ್ಲಿಸಿರುವ ಸೇವೆ ದೊಡ್ಡ "ಸೊನ್ನೆ".
ಸಾರಂಶ : ಒಟ್ಟಾಗಿ ನಮ್ಮ ರಾಜ್ಯದ ಎಲ್ಲ ಜಾತಿಯ ರಾಜಕಾರಣಿಗಳು ಕನ್ನಡಿಗರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿಲ್ಲ. ಎಲ್ಲ ರಾಜಕಾರಣಿಗಳು ಜನರಿಗೆ ದ್ರೋಹ ಬಗೆದಿದ್ದಾರೆ ಏಕೆಂದರೆ ಭ್ಹ್ರಷ್ಟಾಚಾರ ...ಮೊದಲು ಇದು ತೊಲಗಿದರೆ ಎಲ್ಲ ಸರಿಯಾಗುತ್ತದೆ.
ಅಂದಹಾಗೆ ಶೃಂಗೇರಿ ಮತ್ತು ಉಡುಪಿಯ ಮಠಗಳಲ್ಲಿ ಕಾಣುವ ಭೀಕರ ಜಾತೀಯತೆ ನಾನು ಇನ್ನೆಲ್ಲೊ ಕಂಡಿಲ್ಲ.
-ಜೈ ಕರ್ನಾಟಕ
Re: ರಾಜಕಾರಣ ಮತ್ತು ಜಾತಿ
ಇಂದು ಜಾತೀಯತೆ ಕರ್ನಾಟಕದಲ್ಲಿ ಆಳವಾಗಿ ಬೇರೂರಿದೆ. ಇದಕ್ಕೆ ಕಾರಣ ನಮ್ಮ ಬ್ರಷ್ಟರಾಜಕಾರಣಿಗಳು ಕ್ಷೇತ್ರ ವಿಂಗಡನೆಯ ಸಮಯ ಪ್ರಭಲ ಕೋಮಿನ ದು ನಿರ್ಣಾಯಕ ವಾಗುವಂತೆ ಮಾಡಿರುವದು. ಇದರಿಂದ ಇಂದು ಚುನಾವಣೆ ಎಂದಕೂಡಲೆ ಜಾತಿ ಲೆಕ್ಕಾಚಾರ ಶುರು ವಾಗುತ್ತದೆ. ಇದು ಹೆಚ್ಚಾಗಿ ದೇವರಾಜ ಅರಸರ ಕಾಲದಲ್ಲಿ ಜಾರಿಗೆ ಬಂತು. ಈಗಲೂ ಸಹ ಕ್ಷೇತ್ರ ಮರುವಿಂಗದನೆ ಮಾಡುವಾಗ ಮತ್ತು ಮೀಸಲಿಡುವಾಗ ಆಕ್ಷೇತ್ರದಲ್ಲಿರುವ ಪ್ರಭಲ ಕೋಮು ಸಹ ಬೇರೆಯವರನ್ನು ಓಲೈಸಬೇಕಾದ ಪರಿಸ್ಥಿತಿ ತಂದೊಡ್ಡಿದರೆ ಈ ಜಾತಿ ಲೆಕ್ಕಾಚಾರ ಕಡಿಮೆ ಯಾಗುತ್ತದೆ . ಅಲ್ಲದೆ ಚುನಾವಣಾ ವೆಚ್ಚಕ್ಕೆ ಸೂಕ್ತವಾಗಿ ಕಥಿಣ ಕಡಿವಾಣ ಹಾಕಿದರೆ (ಇಂದಿನ ತಾಂತ್ರಿಕ ಸವಲತ್ತುಗಳನ್ನು ಉಪಯೋಗಿಸಿಕೊಂಡು ) ಮತ್ತು ಅಕ್ರಮ ಸಾಬೀತಾದರೆ ಕನಿಷ್ಟ ೬ವರ್ಷ ಜೈಲು ಶಿಕ್ಷೆ ಯಂತಹ ನಿಯಮವಾದರೆ ಆಗ ಬ್ರಷ್ಟಾಚಾರ ಕಡಿಮೆ ಆಗುತ್ತದೆ. ಇಂದು ಕೋಟ್ಯಂತರ ಹಣವಿಲ್ಲದವರು ಚುನಾವಣೆ ಕನಸು ಕಾಣುವಂತಿಲ್ಲ. ಆದ್ದರಿಂದ ಇಂದು ಕಾಳಸಂತೆ ಖದೀಮರು ಬೂಗತಪಾತಕಿಗಳು ಹೆಚ್ಚಾಗಿ ಆರಿಸಿಬರುತ್ತಿದ್ದಾರೆ. ಇನ್ನು ಬ್ರಷ್ಟಾಚಾರ ಎಲ್ಲಿ ನಿಲ್ಲುತ್ತದೆ.
ಹೀಗೆ ಇವು ಒಂದಕ್ಕೊಂದು ತಳಕು ಹಾಕಿಕೊಂಡು ಜನಸಾಮಾನ್ಯ ಅಸಹಾಯಕ ನಾಗುತ್ತಿದ್ದಾನೆ. ಅವನ ಅಸಹನೆಯ ಕಟ್ಟೆ ಯಾವಾಗ ಒಡೆಯುವದೋ ಆಗಲೇ ಇದಕ್ಕೊಂದು ಮುಕ್ತಿ ಸಿಗಲು ಸಾಧ್ಯ.
ಅನಂತ ಪಂಡಿತ
Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ?
---
ಒಳ್ಳೆ ಪ್ರಶ್ನೆ ಯಾಮಿನಿಯವರೇ,
ಹೌದು, ಮದುವೆ ಆಗೋಕೆ ಜಾತಿ ಕುಲ ನೋಡಲಿ, ಅದು ಸಾವಿರಾರು ವರ್ಷಗಳಿಂದ ಬೇರು ಬಿಟ್ಟಿರುವ ಪದ್ದತಿ, ಆದರೆ ಯದುನಂದನ್ ಅವರ ಕಳಕಳಿ, ಕರ್ನಾಟಕದಲ್ಲಿ ಒಂದು ಪ್ರಬಲ ಲೋಕಲ್ ಪಾರ್ಟಿ ಇಲ್ಲದಿರುವದು, ಇಡೀ ರಾಜ್ಯವನ್ನು ಹೊರರಾಜ್ಯಗಳ ಮುಂದೆ ದೀನವಾಗುವಂತೆ ಮಾಡಿದೆ. ಈ ಕಾಂಗ್ರೆಸ್ಸು, ಬಿ.ಜೆ.ಪಿ ಎರಡೂ ಕೇಂದ್ರದ ಪಾರ್ಟಿಗಳು, ಅಕಸ್ಮಾತ್ ಕರ್ನಾಟಕದಿಂದ ಪೂರ್ಣ ಪ್ರಮಾಣದ ಮತಗಳ ಬಲದಿಂದ ಆಯ್ಕೆಯಾದ ಪಾರ್ಟಿಯದೇ ಆಡಳಿತ ಇದ್ದಲ್ಲಿ, ಕೇಂದ್ರದಲ್ಲಿ ಅಂತ ಪಕ್ಷದ ಪ್ರಾಬಲ್ಯ ಇರುತ್ತಿತ್ತು. ಈಗ ನೋಡಿ ಕೇಂದ್ರದಲ್ಲಿ ಕಾಂಗ್ರೆಸ್ ಇರುವದರಿಂದ ಅದು ಕಾವೇರಿ ತೀರ್ಪು ಕರ್ನಾಟಕದ ವಿರುದ್ಧವಾಗಿರುವಂತೆ ನೋಡಿಕೊಂಡಿದೆ, ಇಂತದು ನಡೆಯುತ್ತಿರಲಿಲ್ಲ.
ರಾಜಕೀಯದ ವಿಷಯದಲ್ಲಿ ಈ ಎರಡೂ ಕೋಮುಗಳು ಒಂದಾದರೆ, ಕರ್ನಾಟಕದಲ್ಲಿ ಪೂರ್ಣ ಮತಗಳ ಬಲದಿಂದ ಲೋಕಲ್ ಪಾರ್ಟಿಯೊಂದು ಆಡಳಿತಕ್ಕೆ ಬರಲು ಸಾಧ್ಯ.
Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ?
ಕನ್ನಡ ಪಕ್ಷ ಅಧಿಕಾರಕ್ಕೆ ಬಂದರೆ ಒಳ್ಳೆಯದು. ಆದರೆ ಈಗಿನ ಪರಿಸ್ಥಿಯಲ್ಲೂ ಸಹ ಕನ್ನಡಪರ ಕೆಲಸ ಮಾಡಬಹುದು. ಮೊನ್ನೆ ಪ್ರಜಾವಾಣಿ ಯಲ್ಲಿ ಬರಗೂರು ರಾಮಚಂದ್ರಪ್ಪ ಕನ್ನಡ ಸಾಮಾನ್ಯ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ. ಇದು ಬಹಳ ಒಳ್ಳೆಯ ಯೋಚನ ಲಹರಿ. ಇದನ್ನು ನಾವು ಕಾರ್ಯರೂಪಕ್ಕೆ ತಂದರೆ ಬಹಳಷ್ಟು ಕನ್ನಡ ಕೆಲಸ ಕಾರ್ಯಸಾಧನವಾಗುತ್ತದೆ. ನಮಗೆಲ್ಲಾ ಇದಕ್ಕಾಗಿ ಮನೋಸ್ಥೈರ್ಯ ಬೇಕು.
ಕನ್ನಡದ ಕನ್ನಡಿಯಲ್ಲಿ ನಮ್ಮೆಲ್ಲ ಸಮಸ್ಯೆಗೆ ಪರಿಹಾರ ಹುಡುಕಬೇಕು. ಪ್ರಾಂತೀಯ ಪಕ್ಷದ ವಿಚಾರ ಒಳ್ಳೆಯದು. ಆದರೆ ಇದಕ್ಕಾಗಿ ಬಹಳ ಸಮಯ ಮತ್ತು ಶ್ರಮ ಬೇಕು. ಇದಕ್ಕಾಗಿ ನಾವು ತಯಾರಾಗಿದ್ದೀವ ? ನಮ್ಮಂತೆ ಕೇಂದ್ರ ಸರ್ಕಾರದ ಆವಾಗಣನೆಗೆ ತುತ್ತಾಗಿರುವ ಇತರ ರಾಜ್ಯಗಳ ಪಕ್ಷಗಳ ಜೊತೆ ಸಹ ವಿಚಾರ ವಿನಿಮಯ ಮಾಡಬೇಕು.
Re: ಹೀಗಾದರೆ ಹೇಗೆ?
ಈಗಾಗಲೆ ವಿಜಯ ಸಂಕೇಶ್ವರರವ್ರು "ಕನ್ನಡ ನಾಡು" ಎಂಬ ಪ್ರಾದೇಶಿಕ ಪಕ್ಷ ಕಟ್ತಿದ್ದಾರೆ. ಆದರೆ ಅದು ಯಶಸ್ಸನ್ನು ಸಾಧಿಸಿದೆಯೆ? ಇಲ್ಲ.
ಒಂದು ಪ್ರಾದೇಶಿಕ ಪಕ್ಷವನ್ನು ತಳದಿಂದ( from scratch) ಕಟ್ಟುವುದು ಕಷ್ಟ ಆದ್ದರಿಂದ
* ಈಗಿರುವ ಆಡಳಿತ ಪಕ್ಷಗಳೆಲ್ಲಾ ಸೇರಿ ಒಂದು ಸಾಮಾನ್ಯ ಕಾರ್ಯಕ್ರಮದ(ಕನ್ನಡ/ಕನ್ನಡಿಗ/ಕರ್ನಾಟಕದ ಹಿತದೃಷ್ತಿ) ಆಧಾರದ ಮೇಲೆ ಕನ್ನಡ/ಕರ್ನಾಟಕ ಪಕ್ಷವನ್ನು ಕಟ್ಟಲಿ. ಇನ್ನುಳಿದ ವಿರೋಧ ಪಕ್ಷಗಳವರೆಲ್ಲ ಸೇರಿ ಇನ್ನೊಂದು ಕನ್ನಡ/ಕರ್ನಾಟಕ ಪಕ್ಷವನ್ನು ಕಟ್ಟಲಿ.
* ಈ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವಾಗ ನಾಡಿನ ಎಲ್ಲ ಹಿರಿಯರು, ಸಾಹಿತಿಗಳು, ತಂತ್ರಙ್ನರು, ಕಲಾವಿದರು ...ಇತ್ಯಾದಿ ಎಲ್ಲರನ್ನು ಒಗ್ಗೊಡಿಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿ ಅದಕ್ಕೆ ಒಂದು ರೂಪ ಕೊಡಲಿ.
* ಇದರಿಂದ ರಾಜಕಾರಣಿಗಳಿಗೆ ಹೈಕಮಾಂಡ್ ನವರ ಕಪಿಮುಷ್ತಿಯಿಂದ ಮುಕ್ತಿ ದೊರೆಯುತ್ತದೆ... ಯಾವುದೆ ಪಕ್ಷ ಅಧಿಕಾರಕ್ಕೆ ಬಂದರೂ ಸ್ಪರ್ಧಾತ್ಮಕ ರೀತಿಯಲ್ಲಿ ಅವರು ಕನ್ನಡ/ಕರ್ನಾಟಕ್ಕಾಗಿ ಕೆಲಸ ಮಾಡುತ್ತಾರೆ.
ಕನ್ನಡವಾಗಲಿ ನಮ್ಮ ಜಾತಿ, ಧರ್ಮ, ಉಸಿರು.
-ಜೈ ಕರ್ನಾಟಕ.
Re: ಹೀಗಾದರೆ ಹೇಗೆ?
ವಿಜಯ ಸಂಕೇಶ್ವರರು ಕನ್ನಡನಾಡು ಪಕ್ಷವನ್ನು ಜೆಡಿಎಸ್ ಒಂದಿಗೆ ವಿಲೀನ ಮಾಡಿದ ನೆನಪು!
Re: ರಾಜಕಾರಣ ಮತ್ತು ಜಾತಿ
ಮತ್ತೆ ಮತ್ತೆ ಅದೇ ತಪ್ಪು ಮಾಡ್ತಾಯಿದ್ದೀರಾ. ವ್ಯಕ್ತಿ ಯನ್ನು ಆತನ ಜಾತಿಯ ಮೂಲಕವೇ ನೋಡ್ತಿದ್ದೀರಾ . ಆದರಿ೦ದ ನೀವು ವ್ಯಕ್ತಿಯ ಕ್ರಿಯೆ ಮತ್ತು ಚಿ೦ತನೆ ಜಾತಿಯಿ೦ದ ಎನ್ನುವ ಸಿದ್ಧಾ೦ತವನ್ನು ಒಪ್ಪುವ ಹಾಗಿದೆ.ವ್ಯಕ್ತಿಗೂ ಜಾತಿಗೂ ಇರುವ ಸ೦ಬ೦ಧ ಆಧುನಿಕ ಯುಗದಲ್ಲಿ ಕೇವಲ ಆರ್ಥಿಕ ಅಥವಾ ನೀವೇ ಹೇಳಿದ ಹಾಗೆ ಮದುವೆ ವಿಷಯದಲ್ಲಿ ಒಟ್ಟಿನಲ್ಲಿ ಲಾಭಕ್ಕಾಗಿ ಮತ್ತು ತನ್ನ ರಕ್ಷಣೆಗಾಗಿ.ಎಲ್ಲರೂ "ಕೊಳ್ಳೇ ಬಾಕ "ಸ೦ಸ್ಕೃತಿಯ ವಾರಸುದಾರರಾಗುತ್ತಿರುವಾಗ ಜಾತಿಯ ಅರ್ಥವಾದರೇನು ??
ಜಾತಿಯ ನೆರಳು ತನ್ನ ಕ್ರಿಯೆ ಮತ್ತು ಚಿ೦ತನೆಯ ಮೇಲೆ ಅಷ್ಟಾಗಿ ಪರಿಣಾಮ ಬೀಳುವ ಮಟ್ಟಿಗ೦ತೂ ಇ೦ದು ಇಲ್ಲವೇ ಇಲ್ಲ.ವ್ಯಕ್ತಿಯನ್ನು ಆತನ ಜೀವನದ ಅನುಭವ ಮತ್ತು ಕ್ರಿಯೆಯಿ೦ದ ಅರ್ಥ ಮಾಡ್ಕೋಬಹುದೇ ಹೊರತು ಮತ್ತ್ಯಾವ ಲೇಬಲ್ ಹಚ್ಚಿ "ಓಹೋ ಈ ಮನುಷ್ಯ XYZ ಜಾತಿ
ಅದರಿ೦ದ ಹೀಗಾಯ್ತು ಅನ್ನುವುದರಲ್ಲಿ" ವ್ಯಕ್ತಿಯನ್ನು ಪೂರ್ತಿ ತಳ್ಳಿ ಆತನ ಲೇಬಲ್ಗೆ ಬೆಲೆ ಕೊಟ್ಟು ಒ೦ದು ನಿರ್ಧಾರಕ್ಕೆ ಬರುತ್ತಿರುವುದು ಸರಿಯೇ ??
ಅ೦ದ ಹಾಗೆ ಈಗ ಸೃಷ್ಟಿ ಆಗುತ್ತಿರುವ ಜಾತಿ ಬೇರೆ ರೀತಿಯದು,ಅದು "ಕಾರ್ಮಿಕ ವರ್ಗದ" ಜಾತಿ. IT ಜಾತಿ, ಮಠಾಧೀಶರ ಜಾತಿ (ಆದಿಚು೦ಚನಗಿರಿ ಸ್ವಾಮಿಗೂ, ದೇಶಿಕೇ೦ದ್ರ್ಸ್ ಸ್ವಾಮಿಗೂ ಯಾವುದೇ ವ್ಯತಾಸವಿಲ್ಲಾ.ನಮ್ಮ ನಿಮ್ಮ ಕಣ್ಣಿಗೆ ಅವರಿಬ್ಬರು ಒಕ್ಕಲಿಗರೂ ಲಿ೦ಗಾಯಿತರೂ ಆಗಿರಬಹುದು.ಇಬ್ಬರೂ ಒ೦ದು ಮೆಡಿಕಲ್, ಒ೦ದು ಇ೦ಜಿನಿಯರಿ೦ಗ್ ಕಾಲೇಜು , ನೂರಾರು
ಶಾಲಾ ಸ೦ಸ್ಥೆಗಳಿಗೆ ಒಡೆಯರು. ),BPO ಕಾಲ್ ಸೆ೦ಟರುಗಳಲ್ಲಿ ಕೆಲಸ ಮಾಡುವವರದೊ೦ದು ಜಾತಿ.ಹೀಗೆ ಒಟ್ಟಿನಲ್ಲಿ ಯಾವುದೇ ಜಾತಿಯಾಗಲಿ ಒಟ್ಟಾಗ ಬೇಕಾದರೆ ತಮ್ಮ ಜಾತಿಯೇ
ಅವರನ್ನು ಒಗ್ಗೂಡಿಸುತ್ತೆ.ಒಟ್ಟಾಗಿ ತಮ್ಮ ತಮ್ಮ ಹಿತ ವನ್ನು ಕಾಪಾಡಿಕೊಳ್ಳುತ್ತಾರೆ.
ಆದರೆ ಮನುಷ್ಯನನ್ನು ಯಾರು ನೇರವಾಗಿ ನೋಡಿ ಅವನ ಸ೦ಕಟವನ್ನು ಯಾರು ಅರ್ಥ ಮಾಡ್ಕೋತ್ತಿಲ್ಲಾ.
ನಿಜವಾಗಿಯೂ ಲೋಕದಲ್ಲಿ ಇರುವುದೆರಡು ಜಾತಿ..ಗ೦ಡು ಹೆಣ್ಣೂ...
..ಅದಕ್ಕೆ ಇಲ್ಲಿ Post ಮಾಡ್ತಾಯಿದ್ದೇವಿ.
ಗ೦ಡಿನೊಳಗೆ ಹೆಣ್ಣೂ ಹೆಣ್ಣಿನೊಳಗೆ ಗ೦ಡು ಸೇರಿ ನಾವೆಲ್ಲಾ ಹೊಸ ಜಗತ್ತನ್ನು
ಸೃಷ್ಟಿ ಮಾಡುತ್ತಿರುವಾಗ ...ರಾಜಕಾರಣಿಗಳು ಬ೦ದು ಎರಡು ಜಾತಿ ಸೃಷ್ಟಿ ಮಾಡಿದ್ದಾರೆ... "ಆಳುವವರು".. ಮತ್ತು "ಅಳುವವರು"..
ನಾವೆಲ್ಲಾ ಎರಡನೇ ಜಾತಿಗೆ ಸೇರಿರುವವರು
Re: ರಾಜಕಾರಣ ಮತ್ತು ಜಾತಿ
ಭಾರತದಲ್ಲಿ ಜಾತಿ ಒಂದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಾಸ್ತವ ಎಂಬುದನ್ನು ಮರೆಯುವುದು ಹೇಗೆ ಎಂದು ವಿವರಿಸಿದ್ದರೆ ಒಳ್ಳೆಯದಿತ್ತು.
ಭಾರತದ ಸಂದರ್ಭದಲ್ಲಿ ಜಾತಿ ಎಂಬುದು ಒಂದು Social capital ಎಂಬುದನ್ನು ಮರೆತು ಯೋಚಿಸುವುದು ಹೇಗೆ ಎಂದೇ ನನಗೆ ಅರ್ಥವಾಗುವುದಿಲ್ಲ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ್ದಕ್ಕಾಗಿಯೇ ನಮಗೆ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳಿರುತ್ತವೆ. ಇವುಗಳನ್ನು ನಿರಾಕರಿಸುವುದು ಹೇಗೆ?
ನಾನು ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿರುವುದರಿಂದ ಈ ವಿಷಯಗಳನ್ನು ಅನಗತ್ಯವಾಗಿ ಗಂಭೀರವಾಗಿ ಪರಿಗಣಿಸುತ್ತಿದ್ದೇನೆಯೇ?
-ಯಾಮಿ
Re: ರಾಜಕಾರಣ ಮತ್ತು ಜಾತಿ
ನನ್ನ ಹಿಂದಿನ ಕಾಮೆಂಟ್ ಅನ್ನು ಬರೆದಾಗ ಇದನ್ನು ಓದಿರಲಿಲ್ಲ. ಆದರಿಂದ ಈ ಎರಡನೆಯ ಕಂತು. ನೀವು ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿರುವುದರಿಂದಲೇ ನಿಮ್ಮ ಬರವಣಿಗೆಗೆ, ಅಗತ್ಯವಾದ ಗಾಂಭೀರ್ಯ ಬರುತ್ತಿದೆ. ನಾವು ಜಾತಿಯನ್ನು ಬಿಡುತ್ತೇವೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ನಾವೆಲ್ಲರೂ ಅದರಿಂದ ಪಡೆದಿರುವ ಸವಲತ್ತುಗಳನ್ನು ಬಿಡಲಾಗುವುದಿಲ್ಲ. ನಮ್ಮಲ್ಲಿ ಅನೇಕರಿಗೆ ಜಾತಿಯ ಅಕ್ಕಿಯೂ ಬೇಕು. ಪ್ರಗತಿಪರತೆಯ ನಂಟರೂ ಬೇಕು. ಆಸ್ತಿಯಿಂದ ಪಡೆದುಕೊಳ್ಳೂವ ಸವಲತ್ತುಗಳೂ ಜಾತಿಯಷ್ಟೇ ಅನ್ಯಾಯ. ಇವುಗಳನ್ನು ಕಡಿಮೆಮಾಡುತ್ತಲೇ ಜಾತಿಯ ಹೆಸರಿನಲ್ಲಿ ಈವರಗೆ ಲಾಭ ಪಡೆದವರಿಗೆ ಮೂಡಿರುವ ಕೋಡುಗಳನ್ನು ತೆಗೆಯಬೇಕಾಗಿದೆ. ಮೆರಿಟ್ ಎನ್ನುವ ಮಾಯಾಂಗನೆಯು ಇದೆಲ್ಲ ಆಗುವಾಗ ಎಲ್ಲಿಯೂ ಓಡಿಹೋಗುವುದಿಲ್ಲ.
H.S.Raghavendra Rao
Re: ರಾಜಕಾರಣ ಮತ್ತು ಜಾತಿ
ನಿಮ್ಮ ಪ್ರತಿಯೊಂದು ಬರವಣಿಗೆಯೂ ಒಳನೋಟಗಳು ಮತ್ತು ಪ್ರಬುದ್ಧತೆಗಳಿಂದ ನಿಬಿಡವಾಗಿರುತ್ತದೆ. ಒಕ್ಕಲಿಗರು ಮತ್ತು ಲಿಂಗಾಯತರು ಎಂಬ "ಅನಿಲಾನಿಲ ಸಂಯೋಗವಾದರೆ" ಕರ್ನಾಟಕವೆಂಬ ಧರೆಯು ಉರಿದುಹೋಗದೆ ಇರುವುದಿಲ್ಲ. ಬ್ರಾಹ್ಮಣರಾದರೂ ಎಲ್ಲೋ ಹೇಗೋ ಬದುಕಿಕೊಳ್ಳಬಹುದು. ಆದರೆ ಈಗ ತಾನೇ ಕಣ್ಣುಬಿಡುತ್ತಿರುವ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಹೇಳಹೆಸರಿಲ್ಲದಂತೆ ಆಗುತ್ತಾರೆ.
ರಾಜಕಾರಣದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡಿದರೂ ಅದು ಬಹುಸಂಖ್ಯಾತರ ಪ್ರಭುತ್ವವೇ ಆಗುತ್ತದೆ. ಉಳಿದೆಲ್ಲ ಸಮುದಾಯಗಳೂ ಒಟ್ಟಾಗುವುದೊಂದೇ ದಾರಿ. ಆಅರೆ ಅವರು ತಕ್ಕಡಿ ಹತ್ತಬೇಕಾಗಿರುವ ಕಪ್ಪೆಗಳಾಗಿರುವುದೇ ದೊಡ್ಡ ದುರಂತ.
H.S.Raghavendra Rao
ಧನ್ಯವಾದಗಳು
ಸರ್ ನಿಮ್ಮ ಹೊಗಳಿಕೆಗೆ ಹೇಗೆ ಧನ್ಯವಾದ ಹೇಳುವುದೆಂದೇ ತಿಳಿಯುತ್ತಿಲ್ಲ...
ನಿಮ್ಮಂಥ ಹಿರಿಯರಿಂದ ಒಳ್ಳೆಯ ಮಾತನ್ನು ಕೇಳುವಷ್ಟು ಚೆನ್ನಾಗಿ ನಾನು ಬರೆದಿದ್ದೇನಾ? ಆಲೋಚಿಸುತ್ತಿದ್ದೇನಾ?
ಸಂಪದದಲ್ಲಿ ಕಮೆಂಟ್ ಹೊಡೆಯುವ ಮೊದಲು ಹತ್ತುಬಾರಿ ಯೋಚಿಸುವಂತೆ ಮಾಡಿದ್ದೀರಿ.
-ಯಾಮಿ
Re: ರಾಜಕಾರಣ ಮತ್ತು ಜಾತಿ
.....ಬ್ರಾಹ್ಮಣರಾದರೂ ಎಲ್ಲೋ ಹೇಗೋ ಬದುಕಿಕೊಳ್ಳಬಹುದು.....
ಹೀಗಂದರೆ ಏನು ಅರ್ಥ ಸಾರ್??... ಬ್ರಾಹ್ಮಣರಿಗೆ ಯಾವ ಜವಾಬ್ದಾರಿಯು ಇಲ್ಲವೆ? ಅಥವ ಬ್ರಾಹ್ಮಣರು ಎಲ್ಲ ರಂಗದಲ್ಲೂ ಮುಂದುವರೆದಿದ್ದಾರೆಯೆ? ನನಗೇನೊ ಹಾಗನ್ನಿಸುವುದಿಲ್ಲ.
ಇಂದಿಗೂ ಅಸಮಾನತೆ/ಕಂದಾಚರವಿರುವುದು ಬ್ರಾಹ್ಮಣರಲ್ಲಿ....ಅದಕ್ಕೆ ಒಂದು ಸಣ್ಣ ಉದಾ: ಗಂಡಿಗೆ ಜನಿವಾರ, ಮುಂಜಿ ಇವೆಲ್ಲ...ಅದರೆ ಹೆಣ್ಣಿಗೇಕೆ ಇವೆಲ್ಲ ಇಲ್ಲ...ಇದನ್ನು ಯಾರು ಪ್ರಶ್ನಿಸುವುದೇ ಇಲ್ಲ ?!!
-ಜೈ ಕರ್ನಾಟಕ
Re: ರಾಜಕಾರಣ ಮತ್ತು ಜಾತಿ
ನಿಮ್ಮ ಪ್ರತಿಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಬ್ರಾಹ್ಮಣರಲ್ಲಿಯೂ ಸಾಕಷ್ಟು ಅಸಮಾನತೆ ಮತ್ತು ಕಂದಾಚಾರಗಳಿರುವುದು ಖಂಡಿತವಾಗಿಯೂ ನಿಜ. ಆದರೆ ಅವರು ಮೊದಲಿನಿಂದಲೂ ವ್ಯಾವಹಾರಿಕ ಜಾಣತನ ಮತ್ತು ಧಾರ್ಮಿಕ ನಂಬಿಕೆಗಳ ನಡುವೆ ಹೊಂದಾಣಿಕೆಯೊಂದನ್ನು ರೂಪಿಸಿಕೊಂಡಿದ್ದಾರೆ. ಬ್ರಿಟಿಷ್ ಆಳರಸರಿಗೂ ಪ್ರಿಯವಾಗಿ, ಧಾರ್ಮಿಕವಾಗಿಯೂ ಮುಂಚೂಣಿಯಲ್ಲಿರಲು ಅವರಿಗೆ ಸಾಧ್ಯವಾಗಿದ್ದು ಹೀಗೆಯೇ. ಈಚೆಗಿನ ಮೂಲಭೂತವಾದವು ಅದಕ್ಕೆ ಮತ್ತೊಂದು ಬಗೆಯಲ್ಲಿ ನೀರೆರಿದಿದೆ. ಉಳಿದ ಸಮುದಾಯಗಳಲ್ಲಿಯೂ ಈ ನಿಲುವುಗಳು ನಿಧಾನವಾಗಿ ರೂಪಿತವಾಗಿವೆ. ಎಲ್ಲ ಜಾತಿಗಳಲ್ಲಿಯೂ ಹೆಣ್ಣುಮಕ್ಕಳು ಶೋಷಿತರೇ ಆಗಿದ್ದಾರೆ.
ಅವರು "ಎಲ್ಲೋ ಹೇಗೋ ಬದುಕಿಕೊಳ್ಳುತ್ತಾರೆ" ಎಂದರೆ, ಅದು ಅವರ ನೆಟ್ ವರ್ಕ್ ಮತ್ತು ಸ್ಥಿತಿಸ್ಥಾಪಕ ಗುಣಗಳ ಬಗೆಗಿನ ಮಾತೇ ವಿನಾ ಅವರಿಗೆ ಜವಾಬ್ದಾರಿಗಳು ಇಲ್ಲವೆಂದಾಗಲೀ ಇರಬಾರದೆಂದಾಗಲೀ ಅರ್ಥವಲ್ಲ. ಅವರು ಎಲ್ಲ ರಂಗಗಳಲ್ಲಿಯೂ ಮುಂದುವರೆದಿಲ್ಲವೆಂದರೂ ಅವರ ಸಂಖ್ಯೆಗೆ ಹೋಲಿಸಿದರೆ, ಹಲವು ಬಗೆಯ ಸಂಪನ್ಮೂಲಗಳ ಮೇಲಿನ ಅವರ ಒಡೆತನ ಸಾಕಷ್ಟು ಜಾಸ್ತಿಯಾಗಿದೆಯೆಂದು ಅರ್ಥವಷ್ಟೆ.
ನಾನು ಹೇಳಿರುವ ಈ ಎಲ್ಲ ಮಾತುಗಳು ಆ ಒಂದು ಜಾತಿಯ ಎಲ್ಲರಿಗೂ ಅನ್ವಯಿಸುವುದಿಲ್ಲವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಂಥ ಸಾರಾಸಗಟಾದ ತೀರ್ಮಾನಗಳನ್ನು ಕೊಡಲು ನಾನು ಸಿದ್ಧನಿಲ್ಲ. ಆದರೆ ಇತಿಹಾಸದ ಮತ್ತು ಸಮಕಾಲೀನ ಸನ್ನಿವೇಶದ ಹೊರೆ/ಹೊಣೆಗಳನ್ನು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
H.S.Raghavendra Rao
Re: ರಾಜಕಾರಣಿಗಳೂ ಕಾವೇರಿಯೂ
ವರ್ಗ/ಜಾತಿ/ಭಾಷೆಯ ವಿಭಿನ್ನತೆ ಸದ್ಯಕ್ಕಂತೂ ನಮ್ಮ ಸಮುದಾಯದ ಸತ್ಯಗಳು. ಅದನ್ನು ಯಾಮಿನಿಯವರು ಹೇಳಿದ ಸೊಷಿಯಲ್ ಕ್ಯಾಪಿಟಲ್ ಆಗಿ ಅನುಭೋಗಿಸುವವರು(ಭಾಷೆಯನ್ನೂ ಕೂಡ), ವಿರೋಧಿಸುತ್ತಾ ತೊಡೆದು ಹಾಕಲು ಹವಣಿಸುವವರು, ರಾಘವೇಂದ್ರರಾಯರು ಹೇಳಿದ ಹಾಗೆ ಅಕ್ಕಿ-ನೆಂಟ ಸಂಬಂಧದಲ್ಲಿ ತೊಡಗಿಕೊಂಡವರೂ ಕೂಡ ನಮ್ಮ ಸಮುದಾಯದ ಸದ್ಯದ ಸತ್ಯಗಳು. ನಾವು ನೋಡಿರುವ ಹಾಗೆ ವರ್ಗ/ಜಾತಿ/ಭಾಷೆಯ ಹೆಸರಲ್ಲಿ ಸಮುದಾಯವನ್ನು ದೋಚುವ ಕೆಲಸ ನಿರಂತರವಾಗಿ ನಡೆದಿದೆ. ಇವುಗಳನ್ನು ಮನಗಂಡು ಆಲೋಚಿಸುವುದು ತುಂಬಾ ಮುಖ್ಯ. ನನಗೆ ಇತ್ತೀಚೆಗೆ ಅನ್ನಿಸುತ್ತಿರುವುದು ಹೀಗೆ. ಬಹುಶಃ ಪ್ರಜಾತಂತ್ರವೇ ಹೊಸ ರೂಪ ಪಡಕೊಳ್ಳಬೇಕಾದ ಅಗತ್ಯವಿದೆ. ಅಂದರೆ, ಪ್ರಜಾತಂತ್ರ ಕೆಲಸ ಮಾಡುವ ಮೆಕ್ಯಾನಿಸಂಸ್ ಅದನ್ನು ಭ್ರಷ್ಟಗೊಳ್ಳಿಸುವುದನ್ನು ತಡೆಗಟ್ಟುವ ಶಕ್ತಿಯನ್ನು ಹೊಂದುವುದು. ಇದು ಹೇಗೆಂದು ನನಗಿನ್ನೂ ಗೊತ್ತಾಗುತ್ತಿಲ್ಲ. ಆದರೆ ಯಾವುದೋ ಅಮೂರ್ತವಾದ್ದು ಮಿಸಿಂಗ್ ಎಂದಂತೂ ಭಾಸವಾಗುತ್ತಿದೆ. ಮತ್ತು ಇದು ಬರೇ ರಾಜಕೀಯ ಪ್ರಕ್ರಿಯೆ ಮಾತ್ರವಲ್ಲ ಅಂತಲೂ ಗೊತ್ತಾಗುತ್ತಿದೆ. ಹಾಗಂತ ರಾಜಕೀಯವಾಗಿಯೇ ಅದನ್ನು ಸಂಧಿಸುವ ಕೆಲಸದ ಅನಿವಾರ್ಯತೆಯೂ ಕಾಣುತ್ತಿದೆ. ಭಾರತದಂತ ಪಾರಂಪರಿಕ ಸಮುದಾಯದಲ್ಲಂತೂ ಇದು ದ್ವಿಗುಣಗೊಳ್ಳುವ ಸವಾಲು. ಅಂದ ಹಾಗೆ, ಮೇಲೆ ಹೇಳಿದ ಪ್ರಜಾತಂತ್ರದ ಹೊಸ ರೂಪ ಸಮುದಾಯಗಳು ಸದ್ಯದ ತೊಂದರೆಗಳಿಗೆ ತೋರಿಸುವ ಪ್ರತಿಕ್ರಿಯಗಳಲ್ಲಿ ಅಡಗಿರಬಹುದ? ಹಾಗಾಗಿಯೇ ನನಗೆ ಯಾವತ್ತೂ ಚಿಕ್ಕ ಘಟನೆಯನ್ನು ತಳ್ಳಿಹಾಕದೆ ಸೂಕ್ಷ್ಮವಾಗಿ ನೋಡುವ ಅಗತ್ಯ ಕಾಣುತ್ತದೆ. ನನ್ನ ಯೋಚನಾಲಹರಿಯೇ ತುಂಬಾ ಅಮೂರ್ತವಾಯಿತೇನೋ
Re: ರಾಜಕಾರಣಿಗಳೂ ಕಾವೇರಿಯೂ
ಉ: ಬದಲಾಗಬೇಕಿರುವ ಪ್ರಜಾತಂತ್ರ
ಬಹಳ ಒಳ್ಳೆಯ ಕಾಮೆಂಟು ನಿಮ್ಮದು. ಕಾಮೆಂಟು ಓದಿದ ತಕ್ಷಣ ನನಗೆ ಸ್ವಲ್ಪ ಶಾಕ್ ಆಯ್ತು. ನೀವೇನಾದರೂ ಅಕ್ಕಪಕ್ಕದಲ್ಲಿ ಕುಳಿತು ನಾನು ಆಲೋಚಿಸುತ್ತಿರುವುದನ್ನ ಮಾಯದಿಂದ ಕೇಳಿಸಿಕೊಂಡರೋ ಹೇಗೆ ಎಂದು.
ಪ್ರಜಾತಂತ್ರದ ಬಗೆಗಿನ ನಿಮ್ಮ ಈ ಆಲೋಚನೆಯೇ ನನ್ನ ತಲೆಯಲ್ಲೂ ಹಲವು ದಿನಗಳಿಂದ ಮನೆಮಾಡಿದೆ. ಚೆಸ್ ಪಾನುಗಳನ್ನು ಮುಂದಾಲೋಚಿಸಿ ತಲೆಯಲ್ಲೇ ಇಟ್ಟು ಲೆಕ್ಕ ಹಾಕುವಂತೆ ಹಲವು ಹೊಸ ಸಾಧ್ಯತೆಗಳನ್ನು ಆಲೋಚಿಸಿ ಇದು ಆ ಹೊಸ ಶಕ್ತಿಯನ್ನು ದೊರೆಯುವಂತೆ ಮಾಡುವುದೋ? ಆ ಮಿಸಿಂಗ್ ಲಿಂಕ್ ಜೋಡಿಸುವುದೋ? ಎಂದೆಲ್ಲ ಎಣಿಸಿ ಹಾಕುವಷ್ಟೊತ್ತಿಗೆ ಮಡುವಾಗುವ ತಲೆಯಿಂದ ಹೊರಹಾಕಲ್ಪಡುತ್ತಿದೆ ಅಷ್ಟೆ. ಮುಂದೊಮ್ಮೆ ಯಾವಾಗಲಾದರೂ ಚಿಂತನೆ ಚುರುಕುಗೊಂಡರೆ ಪ್ರಜಾತಂತ್ರದ ಹೊಸ ಅಯಾಮದ ಆವಿಷ್ಕಾರಕ್ಕೆ ನಾಂದಿಯಾದರೂ ಆಗಬಹುದು, ಚಿಂತನೆ ಅಮೂರ್ತವಾಗಬೇಕಿಲ್ಲ
ಲಿಂಕುಗಳಿಗೆ ಧನ್ಯವಾದ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಬದಲಾಗಬೇಕಿರುವ ಪ್ರಜಾತಂತ್ರ
"ಇವನಾರವ, ಇವನಾರವ, ಇವನಾರವ ಎಂದೆಣಿಸದಿರಯ್ಯ,
ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ"
- ಬಸವಣ್ಣ
ಪ್ರತಿಯೊಬ್ಬ ಮಾನವಜೀವಿಯೂ ಪಾಲಿಸಲೇಬೇಕಾದಂತಹ ಸರ್ವಕಾಲಿಕವಾದ ಈ ವಚನವನ್ನು ನುಡಿದಿದ್ದು 12ನೇ ಶತಮಾನದ ವೀರಶೈವ (ಲಿಂಗಾಯತರು) ಶಿವಶರಣೆಯರು.
ಮೇಲು ಕೀಳು ಎಂಬುದನ್ನು ಸಮಾಜದಿಂದ ಬೇರು ಸಹಿತ ಕಿತ್ತುಹಾಕಿ ಸಮಾನತೆಯನ್ನು ಸಾಧಿಸಬೇಕು ಎಂದು 800 ವರುಷಗಳ ಹಿಂದೆಯೇ ಮಹಾ ಕ್ರಾಂತಿಕಾರಿ ಚಳುವಳಿಯನ್ನು ಮಾಡಿದವರು ಅವರು. ಇದರ ಪರಿಣಾಮವನ್ನು ನೀವು ಈಗಲೂ ನೋಡಬೇಕೆಂದರೆ ಉತ್ತರ ಕರ್ನಾಟಕಕ್ಕೆ ಬನ್ನಿ. ಇಲ್ಲಿ ಲಿಂಗಾಯತರೇ ಬಹುಸಂಖ್ಯಾತರು. ಪ್ರತಿಯೊಂದು ನಗರದಲ್ಲೂ ಹೇಗೆ ಸಹಬಾಳ್ವೆಯಿಂದ ಬದುಕಬೇಕು ಎನ್ನುವದನ್ನು ಇವರು ತೋರಿಸುತ್ತಿದ್ದಾರೆ. (ಈಗಿನ ರಾಜಕಾರಣಿಗಳಿಂದಾಗಿ ಅಲ್ಲಲ್ಲಿ ಅದರಲ್ಲೂ ಪಟ್ಟಣಗಳಲ್ಲಿ ಸ್ವಲ್ಪ ಭಿನಾಭಿಪ್ರಾಯಗಳನ್ನು ಕಾಣಬಹುದೇ ವಿನಃ, ಉಳಿದೆಡೆಯಲ್ಲ ಇನ್ನೂ ಹಾಗೆಯೇ ಇದೆ).
ಉತ್ತರಕರ್ನಾಟಕ ಲಿಂಗಾಯತರು ಎಷ್ಟೊಂದು ಸಾಮರಸ್ಯದಿಂದ ಹಾಗೂ ಮಾದರಿಯಾಗಿ ಬಾಳ್ವೆ ನಡೆಸಿದ್ದಾರೆಂದರೆ, ಎರಡು ಉದಾಹರಣೆಯನ್ನೆ ಕೊಡುತ್ತೇನೆ, ಮೂಲತಃ ಇವರುಗಳು ಮಾಂಸಾಹಾರಿಗಳಲ್ಲ (ಉತ್ತರ್ ಕರ್ನಾಟಕದ ಲಿಂಗಾಯತರು ಮಾತ್ರ), ಆದರೆ ಇವರುಗಳ ಜೊತೆ ಬೆರೆತು ಬಾಳ್ವೆ ನಡೆಸುವ ಪ್ರತಿಯೊಬ್ಬ ಅನ್ಯಜಾತೀಯನು (ಅದರಲ್ಲೂ ಕೆಲವು ಮುಸ್ಲಿಮರು ಕೂಡ) ಮಾಂಸವನ್ನು ತ್ಯೆಜಿಸಿ ಬದುಕುತ್ತಿರುವುದ್ದನ್ನ ಕಾಣಬಹುದು. (ಈಗೀಗ ಅಲ್ಲಿ ಮಾಂಸಾಹಾರವು ಬರುತ್ತಿರುವುದು ಬೇರೆಯ ಮಾತು).
ಇನ್ನೊಂದು ಉದಾಹರಣೆಯಂದರೆ ನೀವು ದಕ್ಷಿಣದಲ್ಲಿ ಯಾರಾದರೂ ಅಪರಿಚಿತರ ಮನೆಗೆ ಹೋದರೆ, ಮನೆಯವರು ಬಾಗಿಲಿನಿಂದ ಹೊರಗೆಯೇ ಮಾತನಾಡಿಸಿ ಹಾಗೇಯೇ ಕಳಿಸಿ ಬಿಡುತಾರೆ. ಆದರೆ ಉತ್ತರಕರ್ನಾಟಕದಲ್ಲಿ ಹಾಗಾಗುವುದಿಲ್ಲ. ನೀವು ಹೋದ ಮೇಲೆ (ಕದ ತಟ್ಟುವ ಅವಷ್ಯಕತೆಯೂ ಬೇಕಾಗಿಲ್ಲ, ಏಕೆಂದರೆ ಅಲ್ಲಿ ಸಾಮಾನ್ಯವಾಗಿ ಬಾಗಿಲು ಮುಚ್ಚಿ ಬದುಕುವುದೇ ಇಲ್ಲ) ನಿಮ್ಮನ್ನು ಮೊದಲು ಒಳಗೆ ಕರೆದು ಕೂರಿಸಿ, ವಿಶ್ರಮಿಸಲು ಹೇಳಿ, ಆಮೇಲೆ ಪಾನೀಯಗಳನ್ನು ಕೊಟ್ಟು ನಂತರ ನೀವು ಯಾರು ಹಾಗು ಬಂದ ವಿಷಯವೇನೆಂದು ಕೇಳುತ್ತಾರೆ. ಇದು ಕೇವಲ ಲಿಂಗಾಯತರಲ್ಲಿ ಮಾತ್ರವಲ್ಲ ಬೇರೆ ಜಾತಿಯವರಲ್ಲಿಯೂ ಕಾಣಬಹುದು. ಇದನ್ನು ಏಕೆ ಹೇಳಿದೆನೆಂದರೆ ಅಲಿಯ ಪ್ರತಿಯೊಬ್ಬರೂ ಪಾಲಿಸಿವುದು ಹೆಚ್ಚುಕಡಿಮೆ ವಚನಗಳಲ್ಲಿ ಹೇಳಿದಂತೆಯೆ. ಶ್ರೀ ರಾಘವೇಂದ್ರರಾಯರು ಸಂಪದದ ಮೊತ್ತೊಂದು ಪ್ರತಿಕ್ರಿಯೆಯಲ್ಲಿ ವಿವರವಾಗಿ ಒಂದು ವಚನವನ್ನು ಬರೆದಿದ್ದೀರಿ.
'ಏನಿ ಬಂದಿರಿ, ಹದುಳವಿದ್ದಿರೆ?' ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದ?
'ಕುಳ್ಳಿರೆಂ'ದರೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು ?"
-ಬಸವಣ್ಣ
ಅದೂ ಅಲ್ಲದೆ.. ಅಲ್ಲಿನ ಪ್ರಮುಖ ದೇಗುಲಗಳಲ್ಲಿ "ದಾಸೋಹ" ಪದ್ದತಿಯನ್ನು ಕೂಡ ಕಾಣಬಹುದು. ಇಲ್ಲಿ ಅವರು ಎಲ್ಲ ಜಾತಿಯವರೂ ಬಂದು ಭಕ್ತಿ ಪ್ರಸಾದವನ್ನು ಸ್ವೀಕರಿಸಬಹುದು.
ಆದರೆ ಇದು ದಕ್ಷಿಣಕನ್ನಡದ ಲಿಂಗಾಯತರಲ್ಲಿ (ಅಷ್ತೇ ಎಕೆ, ಅನ್ಯರಲ್ಲೂ ಕೂಡ) ಕಾಣಲಾರಿರಿ. ಏಕೆಂದರೆ, ನನಗನ್ನಿಸ್ಸುವ ಮಟ್ಟ್ತಿಗೆ ದಕ್ಷಿಣದಲ್ಲಿ ಬಸವಾದಿ ಶರಣರ ಪ್ರಭಾವ ಅಷ್ಟೊಂದು ಇಲ್ಲ. ಆದ್ದರಿಂದಲೇ ಅಲ್ಲಿಯ ಲಿಂಗಾಯತರು ಮಾಂಸಾಹಾರಿಗಳಾಗಿದ್ದುದು ಅಲ್ಲದೆ, ಉತ್ತರ ಕರ್ನಾಟಕದವರಂತೆ ಸಾಮರಸ್ಯವಾಗಿ ಬೇರೆಜಾತಿಯವರೊಂದಿಗೆ ಬೆರೆತಿಲ್ಲ. ಅಲ್ಲದೆ ಮೇಳು ಕೀಳು ಹಾಗು ತನ್ನದು ಎಂಬುದು ಅಲ್ಲಿ ಇನ್ನೂ ಇದೆ. ಇದನ್ನ ನೋಡಿ ಎಲ್ಲ ಲಿಂಗಾಯತರೂ ಹೀಗೆ ಸ್ವಾರ್ಥಿಗಳು ಎನ್ನುವುದು ತಪ್ಪು.
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.
RBIN/ECD1
Mailto:Vinayak.Khavasi@in.bosch.com
or Khavasi.Vinayak@boschrexroth.de
“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು,
ಕನ್ನಡಕ್ಕಾಗಿ ಧ್ವನಿ ಎತ್ತು, ಅಲ್ಲಿ ಪಾಂಚಜನ್ಯ ಮೊಳಗುವುದು.“ – ಕುವೆಂಪು.
Re: ರಾಜಕಾರಣಿಗಳೂ ಕಾವೇರಿಯೂ
ನಿಮ್ಮ ಚಿಂತನೆ ಸರಿ. ಪ್ರಜಾತಂತ್ರ ಬದಲಾಗಬೇಕು. ಆದರೆ ಹೇಗೆ? ಮೊದಲು ಬೃಷ್ಟಾಚಾರ ನಿರ್ಮೂಲನ ಆಗಬೇಕು. ಅದಾಗಲು ಸಾತ್ವಿಕರು ಅಧಿಕಾರದ ಗದ್ದುಗೆ ಹಿಡಿಯಬೇಕು. ಅದಾಗಲು ಚುನಾವಣೆ ಸ್ವರೂಪ ಬದಲಾಗಬೇಕು. ಅದಾಗಲು ಈಗಿರುವ ಬೃಷ್ಟರಾಜಕಾರಣಿಗಳು ಮನಸ್ಸು ಮಾಡಬೇಕು. ಹೀಗೆ ಒಂದಕ್ಕೊಂದು ತಳಕು ಹಾಕುತ್ತಾ ಇದು ಅಸಾಧ್ಯ ವೆನಿಸಿ ಬಿಡುತ್ತದೆ. ಈ ಬೃಷ್ಟತೆಯಿಂದಲೇ ಇಂದು ಸಮಾಜದಲ್ಲಿ ನೈತಿಕ ಅಧಃಪತನವಾಗಿದೆ ಮತ್ತು ಆಗುತ್ತಾಇದೆ. ಆದರೆ ಯಾವುದಕ್ಕೂ ಒಂದು ಕೊನೆ ಇರಲೇ ಬೇಕಲ್ಲವೆ? ಎಲ್ಲಿಂದಲೋ ಒಂದು ಆಂಧೋಲನ ವೈಚಾರಿಕ ಹರಿವು ಪ್ರಾರಂಭ ವಾಗಬೇಕು. ವ್ಯಕ್ತಿಗಳನ್ನು ಅವರ ಹಣ,ಆಸ್ತಿ, ಅಂತಸ್ತು, ಗಳಿಂದ ಗುರುತಿಸುವ ಬದಲು ಅವರ ಸಮಾಜಿಕ ನಡುವಳಿಕೆ, ಹಣ , ಆಸ್ತಿ ಗಳಿಸಿದ ರೀತಿ, ಮತ್ತು ಅದನ್ನು ಉಪಯೋಗಿಸುವ ರೀತಿ ಇವುಗಳಿಂದ ಗೌರವ ಸಿಗುವಂತಾದರೆ ಆಗ ಬದಲಾವಣೆ ತಾನೆ ಬರಲು ತೊಡಗುತ್ತದೆ. ಆ ಮಾನದಂಡದಲ್ಲಿ ನಮ್ಮ ಕಲಾವಿದರಲ್ಲಿ ಹೆಚ್ಚಿನವರು, ಕ್ರಿಕೆಟ್ಟ ತಾರೆಗಳು ಬುದ್ಧಿಜೀವಿಗಳೆನಿಸಿಕೊಂಡ ಹಲವರು, ಎಲ್ಲಾ ಸಾಮಾಜಿಕ ಗೌರವದ ಪಟ್ಟಿಯಿಂದ ಮಾಯವಾಗುತ್ತಾರೆ. ಮಾಯವಾಗಬೇಕು. ಎಲ್ಲರೂ ಹೋರಾಡುವದು ಮೂಲತಃ ಇದಕ್ಕೇ ಆಗಿರುವದರಿಂದ ಬದಲಾವಣೆ ಸಾಧ್ಯವಾಗೇ ಆಗುತ್ತದೆ. ಕ್ರಮಿಸಬೇಕಾದ ದಾರಿ ಬಹುದೂರ. ಮೊದಲು ಸಾಮಾಜಿಕ ಕಾರ್ಯಕ್ರಮಗಳು ಯಾರೊಬ್ಬರ ಹಂಗಿಲ್ಲದೆ ನಡೆಯುವಂತಾದರೆ ಅದು ಅಲ್ಲಿಂದ ಪ್ರಾರಂಭ ಆಗುತ್ತದೆ.
ಅನಂತ ಪಂಡಿತ.