ಅನಿವಾಸಿ
*~*~*~*
ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಪ್ರಚಾರಕ್ಕೆ ಹಲವು ದಾರಿಗಳನ್ನು ಬಹುಪಾಲು ಎಲ್ಲ ಧರ್ಮಗಳೂ ಕಂಡುಕೊಂಡಿದೆ. ಇದು ಹರಡುತ್ತಿರುವ ಧರ್ಮಕ್ಕೆ ಮಾತ್ರವಲ್ಲ ಬೇರು ಬಿಟ್ಟ ಧರ್ಮಗಳಿಗೂ ಅನ್ವಯಿಸುವ ಮಾತು. ಏಕೆಂದರೆ ಧರ್ಮ ಪ್ರಚಾರ ಅನ್ನುವುದು ನಿರಂತರ ನಡೆಯಬೇಕಾದ ಕೆಲಸ. ಬಾಲ್ಯ, ಕೌಮಾರ್ಯ, ಯೌವ್ವನದಲ್ಲಿರುವವರಿಗೆ ಇದು ಸದಾ ನಡೆಯಬೇಕಾದ ಶಿಕ್ಷಣ. ಇಲ್ಲದಿದ್ದರೆ ಧರ್ಮ ಅದರ ಸುತ್ತಲಿನ ನಂಬಿಕೆ ಮತ್ತು ಸಂಸ್ಥೆಗಳ ಉಳಿವಿಗೆ ತೊಡರಾಗುತ್ತದೆ. ವಿಶ್ವಾಸದ ಮೇಲೆ ಹೆಚ್ಚು ಅವಲಂಬಿಸುವ ಹಾಗು ಸುಲಭದಲ್ಲಿ ಯಾವುದನ್ನೂ ನಂಬದ ಮನಸ್ಸಿಗೆ ನಂಬಿಕೆ ಕಲಿಸಬೇಕು. ಇದು ಮೊದಲು. ಕಲಿಸುವುದು ಕಷ್ಟವಾದರೆ ನಂಬುವಂತೆ ದಿಗಿಲು ಮೂಡಿಸಬೇಕು. ಅದೂ ನಡೆಯದಿದ್ದರೆ ನಂಬಿಕೆಯನ್ನು ನೈತಿಕ ಪ್ರಶ್ನೆ ಮಾಡಬೇಕು. ನೈತಿಕ ಪ್ರಶ್ನೆ ಮಾಡಿದಾಗ ಎಂತ ಬಲವಾದ ಮನಸ್ಸೂ ಕೂಡ ಬಗ್ಗುವುದರಲ್ಲಿ ಸಂಶಯವಿಲ್ಲ.
ಧರ್ಮಪ್ರಚಾರಕ್ಕೆ ಇರುವ ಹಲವು ಸಾಧನಗಳಲ್ಲಿ ಬಹುಶಃ ಅತಿ ಮುಖ್ಯವಾದ ಮತ್ತು ಯಶಸ್ವಿಯಾದ ಮಾರ್ಗ ಸಂಗೀತ ಕಲಾಮಾಧ್ಯಮ. ಧರ್ಮದ ಪ್ರಚಾರದಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಕಲಾ ಮಾಧ್ಯಮ ಸಂಗೀತವೇ. ಕಾವ್ಯ, ನಾಟಕ, ಚಲನಚಿತ್ರಗಳೂ ಬಳಕೆಯಾಗಿವೆ. ಆದರೆ ಸಂಗೀತ ತುಂಬಾ ಹಿಂದಿನಿಂದ ಇಂದಿನವರೆಗೂ ಸುಲಭದಲ್ಲಿ ದಕ್ಕುವ ಮಾಧ್ಯಮ. ಧರ್ಮ ಪ್ರಚಾರಕ್ಕೆ ಸಂಗೀತದ ಬಳಕೆಯಾದ್ದರಿಂದ ಸಂಗೀತ ಬೆಳೆಯಿತು ಎಂಬ ಮಾತೂ ಕೇಳಿರುತ್ತೇವೆ. ಆದರೆ ಸಂಗೀತ ಧರ್ಮಮಯವಾಗಿದ್ದು ಕೂಡ ಅದರ ಇನ್ನೊಂದು ಮುಖ ಎಂದು ಹೇಳುವವರೂ ಇದ್ದಾರೆ.
ಎರಡನೆಯದಾಗಿ, ದೇವಸ್ಥಾನವೆಂಬ ಸಂಸ್ಥೆ ಮನುಷ್ಯರಲ್ಲಿ ಧರ್ಮವನ್ನು ಪ್ರಚುರಪಡಿಸಲು, ನಂಬಿಕೆಯನ್ನು ಧೃಡೀಕರಿಸಲು ಬಹು ದೊಡ್ಡ ಸಾಮುದಾಯಿಕ ಕೆಲಸ ಮಾಡುತ್ತವೆ. ಹಿಂದೆ ದೇವಾಲಯಗಳು ಸಮುದಾಯದ ಅಂತರಂಗವನ್ನು ಹಿಡಿದಿಡಲು, ಅಲ್ಲಾಡಿಸಲು ಬಳಕೆಯಾಗುತ್ತಿತ್ತಂತೆ. ದೇವಾಲಯಗಳ ಹಾಳುಗೆಡಹಿದ ಚರಿತ್ರೆಯ ಪುಟಗಳಿಂದ ಇದನ್ನು ನೀವು ಅರಿಯಬಹುದು. ಹಾಗೆಯೇ ಇವತ್ತಿಗೂ ದೇವಾಲಯಗಳ ಆ ಕೆಲಸ ಅವಿರತವಾಗಿ, ಯಶಸ್ವಿಯಾಗಿ ನಡೆಯುತ್ತಲೇ ಬಂದಿದೆ.
ನಂಬಿಕೆ ಜಡ್ಡು ಹಿಡಿಯಕೂಡದು. ನಂಬಿದವರಿಗೆ ತಮ್ಮ ನಂಬಿಕೆಯ ಬಗ್ಗೆ ಸದಾ ಅರಿವಿರಬೇಕು. ಇಲ್ಲದಿದ್ದರೆ ಆ ನಂಬಿಕೆಯಿಂದ ಧರ್ಮಕ್ಕೆ ಹೆಚ್ಚೇನೂ ಲಾಭವಿಲ್ಲ. ಜಡ್ಡು ಹಿಡಿದ ನಂಬಿಕೆಯನ್ನು ಎಚ್ಚರಿಸಲು, ಶಾಕ್ ಟ್ರೀಟ್ಮೆಂಟಿನ ಹಾಗೆ ಪವಾಡಗಳ ಬಳಕೆ ತುಂಬಾ ಮುಖ್ಯ. ಪವಾಡಗಳ ಚಮತ್ಕಾರ ಮತ್ತು ನಾಟಕೀಯತೆ ಜಡ್ಡು ಹಿಡಿದ ಮನಸ್ಸಿನ ನಂಬಿಕೆಯನ್ನು ಎಚ್ಚರಿಸಿ ಚುರುಕಾಗಿಸುತ್ತದೆ ಹಾಗು ದೃಢೀಕರಿಸುತ್ತದೆ. ನವಯುಗದಲ್ಲಿ ಇದನ್ನು ತಮಾಷೆಯಾಗಿ ನೋಡಿದರೆ ಪ್ರಯೋಜನವಿಲ್ಲ. ಯಾಕೆಂದರೆ ಪವಾಡಗಳ ಚಮತ್ಕಾರಕ್ಕೆ ಮಾರುಹೋಗುವ ಮನಸ್ಸುಗಳನ್ನು ನೀವೂ ಭೇಟಿಮಾಡಿಯೇ ಇರುತ್ತೀರಿ. ಪವಾಡದ ಪ್ರಭಾವದ ಬಗ್ಗೆ ಸಂಶಯ ಬೇಡ.
ಇನ್ನು ಯಾತ್ರೆಯೆಂಬ ಸಾಮಾಜಿಕ ಚಟುವಟಿಕೆಯಿಂದ ಧರ್ಮಕ್ಕೆ ಹಲವು ಪ್ರಯೋಜನಗಳಿವೆ. ನಮ್ಮ ಮನೆಯಲ್ಲಿ ಮಾತ್ರವಲ್ಲ, ಊರಿನಲ್ಲಿ ಮಾತ್ರವಲ್ಲ ಬೇರೆ ಊರಗಳಲ್ಲೂ ನಮ್ಮ ನಂಬಿಕೆಗಳು ಪ್ರಚಲಿತದಲ್ಲಿರುವುದು ಖಾತ್ರಿಯಾಗುತ್ತದೆ. ಇದರಿಂದ ನಂಬಿಕೆ ಮತ್ತಷ್ಟು ಆಳಕ್ಕೆ ಬೇರೂರುವುದಲ್ಲದೆ ಹೆಚ್ಚು ಜನಪ್ರಿಯತೆ ಪಡೆಯಲು ಅನುಕೂಲವಾಗುತ್ತದೆ. ಈ ಅಂಗದಲ್ಲಿ ಈಗೀಗ ಚಲನಚಿತ್ರ ತಾರೆಯರು ತುಂಬಾ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಭಕ್ತಿಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ತಾವು ಯಾತ್ರೆಗಳನ್ನು ಕೈಗೊಂಡು, ಆ ಕ್ಷೇತ್ರವನ್ನೋ, ದೇವಾಲಯವನ್ನೋ ಹೆಚ್ಚು ಜನಪ್ರಿಯಗೊಳಿಸುತ್ತಾರೆ. ಇದು ಧರ್ಮ ಪ್ರಚಾರಕ್ಕೆ ತುಂಬಾ ನೆರವು ನೀಡುತ್ತವೆ.
ಇವಿಷ್ಟು ಸ್ಥೂಲವಾಗಿ ಧರ್ಮಪ್ರಚಾರದ ಕೆಲವು ಸಾಧನಗಳು ಮತ್ತು ಅವು ನೆರವಾಗುವ ಬಗೆಗಳು.
ಇದನ್ನು ಓದಿದವರಿಗೆಲ್ಲಾ ದೈವಾನುಗ್ರಹ ಪ್ರಾಪ್ತವಾಗಲಿ ಎಂದು ಆ ಪರಮಾತ್ಮನಲ್ಲಿ ಕೋರುತ್ತೇನೆ.

- anivaasi ರವರ ಬ್ಲಾಗ್
- Login or register to post comments
- 374 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಅನಿವಾಸಿಗಳು ಹೀಗೆಂದರು:
" ಧರ್ಮ ಪ್ರಚಾರಕ್ಕೆ ಸಂಗೀತದ ಬಳಕೆಯಾದ್ದರಿಂದ ಸಂಗೀತ ಬೆಳೆಯಿತು ಎಂಬ ಮಾತೂ ಕೇಳಿರುತ್ತೇವೆ. "
ಇದು ಅಷ್ಟೇನೂ ಸರಿಯಾದ ಮಾತಲ್ಲ ಅನ್ನಿಸುತ್ತೆ - ಸಂಗೀತ ಜನಕ್ಕೆ ಸುಲಭವಾಗಿ ಮುಟ್ಟುವುದರಿಂದ, ಹೇಳಬೇಕಾದುದನ್ನು ಪ್ರಚಾರಕರು ಸಂಗೀತಮಯವಾಗಿ ಹೇಳಿರಬಹುದು.
ಕರ್ನಾಟಕ ಸಂಗೀತದ ಉದಾಹರಣೆಯನ್ನು ತೆಗೆದುಕೊಂಡರೆ, ಹೆಚ್ಚಿನಂಶ ಕೇಳುಗರಿಗೆ ಹಾಡಿನ ಪೂರ್ತಿ ಅರ್ಥವೂ ತಿಳಿಯದೇ ಹೋಗಿರುತ್ತೆ (ಇದು ಸರಿಯೆಂದು ನನ್ನ ಅಭಿಪ್ರಾಯವಲ್ಲ!) - ಅವರು ಹೆಚ್ಚಾಗಿ ಅದರಲ್ಲಿರುವ ಸಂಗೀತಕ್ಕೋಸ್ಕರ ಅದನ್ನು ಕೇಳುತ್ತಾರೆ. ಇನ್ನು ವಾದ್ಯಸಂಗೀತದಲ್ಲಿ, ಸಾಹಿತ್ಯ ಕೇಳುವ ಪ್ರಶ್ನೆಯೇ ಇಲ್ಲವಲ್ಲ.
ಹಿಂದೂಸ್ತಾನಿ ಸಂಗೀತದಲ್ಲಂತೂ, ದೈವಪರವಾದ ರಚನೆಗಳು ಬಹಳ ಕಡಿಮೆಯೇ - ಕೊನೆಯಲ್ಲಿ ಹಾಡುವ ಭಜನ್ ಒಂದು ಬಿಟ್ಟು
-ಹಂಸಾನಂದಿ
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಹಂಸಾನಂದಿಯವರೆ,
ನಿಮ್ಮ ಮಾತು ನನಗೂ ಒಪ್ಪಿತ. ಅದಕ್ಕೇ ಸಂಗೀತವನ್ನು ಧರ್ಮ ಬಳಸಿಕೊಂಡಿತು ಎಂದು ಬಗೆಯುತ್ತೇನೆ. ಹಾಗಲ್ಲದಿದ್ದರೂ ಸಂಗೀತ ಹೇಗಾದರೂ ತನ್ನ ದಾರಿ ತುಳಿಯುತ್ತಿತ್ತು ಅಲ್ಲವೆ?
ಓದಿ ಅನಿಸಿಕೆ ಬರೆದದ್ದಕ್ಕೆ ಥ್ಯಾಂಕ್ಸ್.
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಶ್ರೀ ಅನಿವಾಸಿ,
ನೀವು ಪದೇ ಪದೇ 'ಒಪ್ಪಿತ' ಎನ್ನುತ್ತಿದ್ದೀರಿ. ನನಗೆ ಅನ್ನಿಸುವಂತೆ ಇದು ತಪ್ಪು, ಅದನ್ನು 'ನನಗೆ ಒಪ್ಪಿಗೆ' ಎನ್ನಬಹುದು. ನಿಮ್ಮಂಥವರು 'ಇದುವೇ ಕಾಣ್ರೀ ಕನ್ನಡ' ಎನ್ನುತ್ತಿರುವುದು ಸರಿಯೋ? ಕನ್ನಡದಲ್ಲಿ ಹಲವು ಹೊಸತುಗಳನ್ನು ಸಾಧಿಸಿದವರು ನೀವು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಬೊಳುಂಬುರವರೆ,
ನನ್ನ ಖುಷಿಗೆ ಒಂದಷ್ಟು ಪುಸ್ತಕವನ್ನು ಓದಿಕೊಂಡಿದ್ದೇನೆ. ಅದರ ಕಿರುಬೆಳಕಲ್ಲಿ ನನಗೆ ಅನಿಸಿದ್ದನ್ನ ಹೇಳ್ತೇನೆ ಅಷ್ಟೆ.
ಅವೆರಡೂ ಬಳಕೆಯಲ್ಲಿದೆಯಲ್ಲವೆ? ನಾನಂತೂ ಒಪ್ಪಿತ ಕೇಳಿದ್ದೇನೆ. ಕಾರ್ನಾಡರ ಹಯವದನ ನಾಟಕದ ಒಂದು ಪದ್ಯದ ಸಾಲು - "ನಮಗೆ ಒಪ್ಪಿತವಿಲ್ಲ, ಬುರುಡೆಯಲ್ಲಲ್ಲಾಡಿ..." ಅಂತ. ಅಂದ ಹಾಗೆ ನಾನು ಪದೇ ಪದೇ 'ಒಪ್ಪಿತ' ಎಂದಿದ್ದೇನೆಯೇ? ಈ ಬರಹದ ಧ್ವನಿಗೆ ಹೊಂದುತ್ತದೆ ಎಂದು 'ಒಪ್ಪಿಗೆ' ಬದಲು 'ಒಪ್ಪಿತ' ಎಂದು ಬರೆದೆ.
ಇನ್ನು 'ಇದುವೇ ಕಾಣ್ರೀ ಕನ್ನಡ' ಎಂದು ಹೇಳುವಂಥ ಪುಟ್ಟ ವಯಸ್ಸು ನನ್ನದಲ್ಲ
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಪುಟ್ಟ ವಯಸ್ಸು ನನ್ನದಲ್ಲ

ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಒನ್ದು ಸಲ ನಿಮ್ಮ ಬ್ಲಾಗ್ 'ನೀರು ತಬ್ಬುವ ಬಂಡೆ'ಯ ಪ್ರತಿಕ್ರಿಯೆಯೊನ್ದರಲ್ಲಿಿ ಹೇಳಿದಿರಿ, ಇನ್ನೊಂದು ಸಲ ಇಲ್ಲಿ.
'ಒಪ್ಪಿತ', 'ಮರ್ಪದಿತ' ಮುಂತಾದವುಗಳು ಬಳಕೆಯಲ್ಲಿವೆ ನಿಜ, ಆದರೆ ರೂಢಿಯಲ್ಲಿದೆ ಎಂಬ ಕಾರಣಕ್ಕಾಗಿ ಯಾವುದೋ ಒನ್ದನ್ನು ಬಳಸಬೇಕೇ? ಕಾರ್ನಾಡರೂ ಬಳಸಿದ್ದಾರೆ, ವಿ.ಸೀತಾರಾಮಯ್ಯನವರೂ ಬಳಸಿದ್ದಾರೆ. ನಾವು ಒಬ್ಬರನ್ನು ಗೊಉರವಿಸುವುದೆಂದರೆ ಅವರ ತಪ್ಪುಗಳನ್ನು ಒಪ್ಪಿಕೊಳ್ಳುವುದು ಎಂಬ ಅರ್ಥ ಕನ್ನಡಾದಲ್ಲಿದೆಯೆ?
ಕನ್ನಡದಲ್ಲಿ 'ತ' ಎಂಬ ಪ್ರತ್ಯಯವಿದೆ. ಕ್ರಿಯಾಪದಕ್ಕೆ ಪ್ರತ್ಯಯವನ್ನು ಸೇರಿಸಿಕೊಂಡು ನಾಮಪದವಾಗಿ ಬಳಸಬೇಕಾದಾಗ 'ತ' ಸೇರಿಸಲಾಗುತ್ತದೆ. ಉದಾ: ಕುಡಿತ, ಕುಣಿತ, ನೆಗೆತ, ಹೊಡೆತ, ಹಿಡಿತ. ಇಲ್ಲಿ ಗಮನಿಸಿ , ಕ್ರಿಯಾಪದದೊನ್ದಿಗೆ ಸೇರುವುದು 'ತ'ವೇ ಹೊರತು 'ಇತ' ಅಲ್ಲ.ಕ್ರಿಯಾಪದ ಮುರಿಯದೆ ಹಾಗೇ ಇರುತ್ತದೆ. 'ಇತ' ಎಂಬ ಪ್ರತ್ಯಯ ಸಮ್ಸ್ಕೃತದಿನ್ದ ಬನ್ದು ಕನ್ನಡವಾದದ್ದು. ಇಲ್ಲಿ ಕ್ರಿಯಾಪದ ಮುರಿಯುತ್ತದೆ. ಉದಾ: ಪೀಡ್ ಕೂಡೆ ಇತ ಸಮ ಪೀಡಿತ.
ಸದ್ಯಕ್ಕೆ 'ಇದುವೇ ಕಾಣ್ರೀ ಕನ್ನಡ' ಎನ್ನುತ್ತಿರುವವರು ಇಲ್ಲಿ ಯಾರೂ ಪುಟ್ಟ ವಯಸ್ಸಿನವರಲ್ಲ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಅದು 'ಮಾರ್ಪಾಡಿತ' ಆಗಬೇಕು
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಈ ವಿಚಾರ ತಿಳಿಸಿದ್ದಕ್ಕೆ ಥ್ಯಾಂಕ್ಸ್... ನನಗೆ ಇವೆಲ್ಲಾ ಗೊತ್ತಿರಲಿಲ್ಲ.
ಇರಲಿ, ನಿಮ್ಮ ವ್ಯಾಕರಣದಲ್ಲಿ 'ಸುಂದರ ತಪ್ಪುಗಳು' ಎಂಬ ಸೆಕ್ಷನ್ ಇದ್ದರೆ, 'ಒಪ್ಪಿತ'ವನ್ನು ಅದರಲ್ಲಿ ಸಹನೆಯಿಂದ ಸೇರಿಸಿಕೊಂಡುಬಿಡಿ. 'ಒಪ್ಪಿತ' ಪದ ತುಂಬಾ ಚಂದವಾಗಿದೆ.
ಬರಹದ ಬಗ್ಗೆ ಏನನಿಸಿತು ಅಂತಲೂ ಕೊಂಚ ಹೇಳಿ.
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ನನ್ನ ವ್ಯಾಕರಣದಲ್ಲಿ ಅಂಥದ್ದೊಂದು ಇರೈಲ್ಲ, ಇನ್ನು ಸೇರಿಸುತ್ತೇನೆ. ಯಾಋ ಕೇಳಿದರೂ ಸೇರಿಸುತ್ತೇನೆ ಎಂದುಕೊಳ್ಳಬೇಡಿ. ನಿಮಗಾಗಿ ತೋರಿಸುತ್ತಿರುವ ರಿಯಾಯಿತಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
"ವಿಶ್ವಾಸದ ಮೇಲೆ ಹೆಚ್ಚು ಅವಲಂಬಿಸುವ ಹಾಗು ಸುಲಭದಲ್ಲಿ ಯಾವುದನ್ನೂ ನಂಬದ ಮನಸ್ಸಿಗೆ ನಂಬಿಕೆ ಕಲಿಸಬೇಕು. ಇದು ಮೊದಲು. ಕಲಿಸುವುದು ಕಷ್ಟವಾದರೆ ನಂಬುವಂತೆ ದಿಗಿಲು ಮೂಡಿಸಬೇಕು."
ಇದನ್ನೇ ಕಾರಂತರು "ಭಯವೇ ಧರ್ಮದ ಮೂಲವಯ್ಯ" ಎಂಬುದಾಗಿ ವಿಡಂಬಿಸಿದ್ದಾರೆ.
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಬರಹದ ಬಗೆಗೆ:_
ಕಲೆ ಎನ್ನುವುದು ಭಾವಗಳ ಅಭಿವ್ಯಕ್ತಿ. ಈ ನಿಟ್ಟಿನಲ್ಲಿ ಸಂಗೀತವೂ ಒಂದು ಕಲೆ. ಕಲೆಯಲ್ಲಿ ಪರಿಪೂರ್ಣತೆ ಸಾಧಿಸುವುದು ಎಂದರೆ ತನ್ನಿಂದಾಗುವಷ್ಟು ಸಮರ್ಪಿಸುವುದು. ಇಲ್ಲಿ ಅರ್ಪಿಸುವುದು ಯಾರಿಗೆಂದರೆ ದೇವನಿಗೆ ಎಂಬ ಮಾತು ಬರುತ್ತದೆ. ಸಿನಿಮಾವೂ ಒಂದು ಕಲೆ, ಅಲ್ಲಿ ಅಭಿಮಾನಿ ದೇವರಾಗುತ್ತಾನೆ. ಅಂದರೆ ತನ್ನ ಶ್ರೋತೃಗಳೆ ಒಬ್ಬ ನಟನಿಗೆ ದೇವರು. ಸಂಗೀತದಲ್ಲಿ ಹಾಗಲ್ಲ, ಕೇಳುಗರನ್ನು ರಂಜಿಸುವುದಕ್ಕಿಂತ ಅರ್ಪಿಸಿಕೊಳ್ಳುವುದೇ ಮುಖ್ಯವಾಗುತ್ತದೆ. ಸಂಗೀತ ಧರ್ಮಪ್ರಚಾರಕ್ಕೆ ಸಹಕರಿಸುತ್ತದೆ ಎನ್ನುವುದಕ್ಕಿಂತ ಒಬ್ಬನ ವೈಯಕ್ತಿಕ ನಂಬಿಕೆಯ ಅಭಿವ್ಯಕ್ತಿಗೆ ಹೆಚ್ಚು ಸಹಕರಿಸುತ್ತದೆ ಎನ್ನಬಹುದು.
ಇನ್ನು ಯಾತ್ರೆ- ಇದು ತೀರ ವೈಯಕ್ತಿಕವಾದುದಲ್ಲವೇ? ಧರ್ಮಪ್ರಚಾರಕ್ಕೂ ಯಾತ್ರೆಗೂ ಏನು ನಂಟು? ಉಡುಪಿಗೋ ಗುರುವಾಯೂರಿಗೋ ತಿರುಪತಿಗೋ ಮಧುರೆಗೋ ಬೆತ್ಲಹೇಮಿಗೋ ಮಕ್ಕಕ್ಕೋ ನಾನು ಹೋಗುವುದಿದ್ದರೆ ಯಾವುದೇ ಬಗೆಯ ಪ್ರಚಾರ ಮಾಡದೆ ನನ್ನ ನಂಬಿಕೆಯನ್ನು ಉಳಿಸಿಕೊಂಡು ಬರಬಲ್ಲೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಯಾತ್ರೆಯ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ನನ್ನ ಪ್ರತಿಕ್ರಿಯೆ...
ಅನಿವಾಸಿಯವರು ಹೇಳಿದಂತೆಯೇ ಯಾತ್ರೆ ಮಾಡುವುದು ಕೂಡ ನಮ್ಮ ಧಾರ್ಮಿಕ ನಂಬುಗೆಗಳಿಗೆ ಒತ್ತಾಸೆ ಪಡೆಯುವುದಕ್ಕೆ. ಇಲ್ಲವಾದರೆ ಒಬ್ಬ ಹಿಂದುವಾದವನು ಮಕ್ಕಕ್ಕೆ, ಬೆತ್ಲಹೆಮ್ಗೆ, ವ್ಯಾಟಿಕನ್ಗೆ ತೀರ್ಥ ಯಾತ್ರೆಗೆ ಹೋಗುತ್ತಿದ್ದೇನೆ ಎಂಬ ಭಾವದಲ್ಲಿಯೇ ಹೋಗಲು ಸಾಧ್ಯವೇ? ಪ್ರವಾಸವೆಂದಾಗಿ ಹೋಗಿ ಬರಬಹುದು. ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
"...ಅನಿವಾಸಿಯವರು ಹೇಳಿದಂತೆಯೇ ಯಾತ್ರೆ ಮಾಡುವುದು ಕೂಡ ನಮ್ಮ ಧಾರ್ಮಿಕ ನಂಬುಗೆಗಳಿಗೆ ಒತ್ತಾಸೆ ಪಡೆಯುವುದಕ್ಕೆ.."
ಎಲ್ಲರೂ ಹಾಗೆ ಮಾಡುತ್ತಾರೆ ಅಂತ ಹೇಳಕ್ಕಾಗಲ್ಲ.. ನಾನು ಹೋಗುವುದು ಅಲ್ಲಿರುವ ಮರ,ಗಿಡ, ತೊರೆ, ದೇಗುಲದ ವಾಸ್ತು ಶಿಲ್ಪ, ಶಿಲ್ಪಿಯ ಕಯ್ ಚಳಕ ಹೇಗಿರುತ್ತದೆ ಅಂತ ನೋಡಲು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು