ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಒಂದು ಕಾದಂಬರಿ

ಇತ್ತೀಚೆಗೆ ಈ ಕಾದಂಬರಿ ಓದಿ ಮುಗಿಸಿದೆ. "ಬೇರೆಯವರು ಸತ್ಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದಾರೆ; ಬನ್ನಿ ನಾನು ಅದನ್ನು ತೆರೆದು ತೋರಿಸುತ್ತೇನೆ" ಎಂಬ ಅಹಂಕಾರದಿಂದ ನಡುಹಗಲಲ್ಲಿ ಕೈಯಲ್ಲೊಂದು ಆರುತ್ತಿರುವ ದೀಪ ಹಿಡಿದು ದಾಪುಗಾಲಿಟ್ಟು ನಡೆದಿರುವ ಕಾದಂಬರಿಕಾರ. ಯಾವುದೂ ಪೂರ್ಣಸತ್ಯವಲ್ಲದ ಕಾರಣ ಇಲ್ಲಿರುವ ಸಂದೇಶಗಳನ್ನು ಅರ್ಧಸತ್ಯ ಎಂದು ಕರೆದು ಒಳ್ಳೆಯತನ ತೋರಬಹುದಷ್ಟೆ. ಇನ್ನು ಇದರಲ್ಲಿನ ಸಂದೇಶಗಳು ಎಷ್ಟು ಬಾಲಿಶ ಮತ್ತು ಕುಟಿಲತೆಯಿಂದ ಕೂಡಿದೆಯೆಂದರೆ ಅದರ ಬಗ್ಗೆ ಯೋಚಿಸುವುದು, ಚರ್ಚಿಸುವುದು ಪಾಪದಂತೆ ಕಾಣುತ್ತದೆ.
ಪೂರ್ವನಿರ್ಧಾರಿತ ಸಂಘರ್ಷಗಳಲ್ಲಿ ತೊಡಗಿಕೊಂಡು ಎಡವುತ್ತಾ ಹಿಂದು ಹಿಂದಕ್ಕೆ ಸರಿಯುವ ಏಕಮುಖ ಪಾತ್ರಗಳು ಎಲ್ಲೂ ಸೋಜಿಗವನ್ನು ಉಂಟುಮಾಡದೇ ತೆವಳುತ್ತವೆ. ಯಾಕೋ ಇಲ್ಲಿಯ ಜೀವಹೀನ ಪಾತ್ರಗಳ ಬಗ್ಗೆ ಚಿಂತಿಸುವ ಬದಲು stereotype ಮತ್ತು archetype ಪಾತ್ರಗಳ ನಡುವಿನ ವ್ಯತ್ಯಾಸವೇನು ಎಂದು ಚಿಂತಿಸುವುದು ಒಳ್ಳೆಯದೆನಿಸಿತು. ಮೊದಲ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯಿಲ್ಲದೆ ಕಟ್ಟಿದ, ಒಂದು ಗುಂಪನ್ನು ಸುಲಭಮಾದರಿಯಾಗಿ ಪ್ರತಿನಿಧಿಸುವ, ನಾವಂದುಕೊಂಡಂತೆ ನಡೆದುಕೊಳ್ಳುವ ಸಾಮಾನ್ಯಗಳಾದರೆ, ಎರಡನೇ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯ ಬುನಾದಿಯ ಮೇಲೆ ನಿಂತಿದ್ದು, ತನ್ನ ಗುಂಪಿನ ಎಲ್ಲ ತವಕ, ತಲ್ಲಣ, ಓರೆಕೋರೆಗಳೊಡನೆ ಪ್ರಾತಿನಿಧಿಕವಾಗಿಯೂ ಅಪ್ಪಟ ಮನುಷ್ಯನಾಗಿ ಉಳಿದು ಸೋಜಿಗ ಹುಟ್ಟಿಸುವ ರೀತಿಯವು. ಕಾದಂಬರಿ ಓದಿದ ಮೇಲೆ ಯಾಕೋ ಮೇಲಿನ ಅಂತರ ನಿಚ್ಚಳವಾಗಿ ಕಣ್ಣಿಗೆ ಹೊಡೆದಂತೆ ಕಾಣತೊಡಗಿತು. ಚೋಮನದುಡಿಯ ಚೋಮ ಮತ್ತು ಶಿಕಾರಿಯ ನಾಗಪ್ಪ ಹೆಚ್ಚು ಪ್ರಖರವಾದರು, ಮುಖ್ಯವಾದರು.
ಪುಟಗಟ್ಟಲೆ ಪಾತ್ರಗಳ ಮೂಲಕ ಭಾಷಣ ಬಿಗಿಯುವ ಕಾದಂಬರಿಕಾರ ಓದುಗರನ್ನು ದಡ್ಡ ಮಂದೆಯಂತೆ ನಡೆಸಿಕೊಳ್ಳುವ ರೀತಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಓದುಗನ ಜಾಣತನವನ್ನು ಹೆಜ್ಜೆಹೆಜ್ಜೆಗೂ ಅನುಮಾನಿಸುವ ಈ ಕಾದಂಬರಿ ಯಾಕೆ ಸಮಯೋಚಿತ ಎಂದು ಚಿಂತಿಸುತ್ತಾ ಕಾದಂಬರಿಯ ಹೆಸರು ಕೂಡ ಹೇಳಬಾರದು ಎಂದು ನಿರ್ಧರಿಸಿದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: ಕಾದಂಬರಿ ಹೆಸರಿಗೆ "ಆವರಣ"?

ASHOKKUMAR's picture

ಕಾದಂಬರಿ ಹೆಸರನ್ನೇ ಕೊಡದೆ ವಿಮರ್ಶೆ ಬರೆಯುವ ನವ್ಯತೆ ಹಿಡಿಸಿತು. ಸಸ್ಪೆನ್ಸ್ ಕಾದಂಬರಿಯಲ್ಲಿಲ್ಲದೆ ವಿಮರ್ಶೆಯಲ್ಲಿದೆ!

ಓದುಗರು ದಡ್ಡ ಮಂದೆ

mahesha's picture

ಅಡ್ಡಬಿದ್ದೆ ಅನಿವಾಸಿಗಳೇ.... !!

ಏನ್ ಸಾರ್‍.. ಇದು ..!!!!
ಯಪ್ಪಾ ಯಪ್ಪಾ!!!!!!
ಸಕ್ಕತ್, ಬೊಂಬಾಟ್, mind blowing( brain blowing ಅಲ್ಲ :D ) !!!!!!!

"ಚಿಕ್ಕದಾರರು ಚೂರಿ, ಚೊಕ್ಕವಾಗಿ ಕತ್ತಿರಿಸುತ್ತೆ" .

ನಿಮ್ಮ ಬರೆವಣಿಗೆಯ ಹರಿತಕ್ಕೆ, ನಮ್ಮ ಮನಸ್ಸಿನ ದಿಟವಾದ "ಆವರಣ"ದ ಪೊರೆ ಕಡಿದು ಹೋಯಿತು :D

ಅನಿವಾಸಿಯಭಿನಿಯಾದೆನು!!!
======================================

Re: ಒಂದು ಕಾದಂಬರಿ

Yamini's picture

ನೀವು ಯಾವ ಕಾದಂಬರಿಯ ಬಗ್ಗೆ ಮಾತನಾಡುತ್ತಿದ್ದೀರೆಂದು ತಿಳಿಯಿತು. ಸಂದೇಶಗಳ ಬಾಲಿಶ ಗುಣ ಮತ್ತು ಕುಟಿಲತೆಗಳಿಗಿಂತ ಹೆಚ್ಚಾಗಿ ಇಂಥದ್ದೊಂದು ಸಂದೇಶವನ್ನು ನೀಡ ಹೊರಡುವ ಕೊಳಕು ಮನಸ್ಸಿನ ಬಗ್ಗೆ ನನಗೆ ಬೇಸರವಾಗುತ್ತಿದೆ. ಹೌದು ಕಾದಂಬರಿಯ ಹೆಸರು ಹೇಳಬಾರದು. ಸತ್ಯ ಹೇಳುತ್ತಿರುವುದಕ್ಕಾಗಿ ನಿಮಗೆ ಧನ್ಯವಾದಗಳು.

-ಯಾಮಿ 

Re: ಒಂದು ಕಾದಂಬರಿ

ವೈಭವ's picture

ನೀವು ಏನನ್ನು ಹೇಳದ ಎಲ್ಲ ಹೇಳಬೆಟ್ಟಿದ್ದೀರಾ? ಅದು ಯಾರಿಗೂ ನೋವಾಗ್ದೆ ಇರೊ ರೀತಿಯಲ್ಲಿ....ವಿಮರ್ಶೆ ಮಾಡೋದು ನಿಮ್ಮಿಂದ ಕಲೀಬೇಕು. :) ಸಕ್ಕತ್

ಉ: ಒಂದು ಕಾದಂಬರಿ

hpn's picture

ಯಾವುದೂ ಪೂರ್ಣಸತ್ಯವಲ್ಲದ ಕಾರಣ ಇಲ್ಲಿರುವ ಸಂದೇಶಗಳನ್ನು ಅರ್ಧಸತ್ಯ ಎಂದು ಕರೆದು ಒಳ್ಳೆಯತನ ತೋರಬಹುದಷ್ಟೆ.

ಭಾರತದಲ್ಲಿರುವ ಹಲವರಲ್ಲಿ ಈ ಗುಣವಿಲ್ಲ. ಪೇಪರಿನಲ್ಲಿ ಬಂದದ್ದೆಲ್ಲವೂ, ಪುಸ್ತಕದಲ್ಲಿ ಬರೆದದ್ದೆಲ್ಲವೂ, ಟಿ ವಿಯಲ್ಲಿ ತೋರಿಸಿದ ಸುದ್ದಿಯೆಲ್ಲವೂ ಪೂರ್ಣ ಸತ್ಯವೆಂದು ನಂಬಿಬಿಡುತ್ತಾರೆ. ಸಾಧ್ಯವಾದಷ್ಟು ಬೇಗ ಭಾರತೀಯರಲ್ಲಿ ಎದುರಿಗಿಟ್ಟ ಸುದ್ದಿಯನ್ನು ಪರಿಶೀಲಿಸಿ ನೋಡುವ ಬುದ್ಧಿ ಬರಲಿ.

Re: ಉ: ಒಂದು ಕಾದಂಬರಿ

ವೈಭವ's picture

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು. ಎನ್ನಬಹುದೆ?

ಉ: ಒಂದು ಕಾದಂಬರಿ

hpn's picture

ಇಲ್ಲ. ಪತ್ರಿಕೆಯಲ್ಲಿ ಬಂದದ್ದು ನಿಮಗೆ ಪ್ರತ್ಯಕ್ಷ ವರದಿಯಲ್ಲ. ಟಿ ವಿ ಯಲ್ಲಿ ಬರುವುದೂ ಅರೆ-ಪ್ರತ್ಯಕ್ಷ ವರದಿಯಾಗಬಹುದು. ಬರೆದದ್ದನ್ನು ನೀವು ಓದಿಕೊಂಡಾಗ ನಿಮ್ಮದೇ ಕಲ್ಪನಾಶಕ್ತಿ ಕೊಟ್ಟ ರೂಪು ರೇಶೆಯಂತೆ ಪ್ರತ್ಯಕ್ಷ ಕಲ್ಪಿಸಿಕೊಂಡಿರುತ್ತೀರಿ (visualize ಮಾಡಿಕೊಂಡಿರುತ್ತೀರಿ).

ಪತ್ರಿಕೆಯಲ್ಲಿ ಬರುವ ಮಾಹಿತಿಿ ತಪ್ಪೂ ಇರಬಹುದು (ಸಂಪೂರ್ಣ ಸರಿ ಇಲ್ಲದಿರಬಹುದು) ಎಂಬ ಪ್ರಜ್ಞೆ ಅದು - ಪ್ರಮಾಣಿಸಿ ನೋಡೋದಲ್ಲ.

Re: ಉ: ಒಂದು ಕಾದಂಬರಿ

anivaasi's picture

ಮಾಧ್ಯಮಗಳ ಸುದ್ದಿಗಳ ಬಗ್ಗೆ ನಾನು ನೋಡುವುದು ಹೀಗೆ: ಮೊದಲಿಗೆ ಅನುಮಾನ ಬಿಟ್ಟುಕೊಡಬಾರದು. ಹತ್ತಾರು ಸುದ್ದಿ ಮಾಧ್ಯಮಗಳು ಒಂದೇ ಸುದ್ದಿಯನ್ನು ಸತ್ಯವೆಂಬಂತೆ ಹೇಳುವ ಹುನ್ನಾರದಲ್ಲಿರುವಾಗ ಅನುಮಾನ ಎಂಬುದು ತುಂಬಾ ಬಲವಾಗಿ ಬೆಳೆಸಿಕೊಳ್ಳಬೇಕಾದ ಭಾವ(!?) ಏಕೆಂದರೆ, ಅನುಮಾನ ಮನುಷ್ಯ ಸಹಜವೇ ಆದ ವಿಚಾರ. ಮಾಧ್ಯಮಗಳ ಸತತ ಹೋರಾಟ ಅದರ ವಿರುದ್ಧವೇ. ನಿಮ್ಮನ್ನು ನಂಬಿಸಲು ಅವು ಯಾವಾಗಲೂ ತಿಪ್ಪರಲಾಗ ಹಾಕುತ್ತಿರುತ್ತವೆ.

ಎರಡನೆಯದಾಗಿ, ಎಂಥ ಸುದ್ದಿ ಸಾರವಾದರೂ ಅದನ್ನು ಮಾನವೀಯ ನೆಲೆಯಲ್ಲಿ ಪರಿಭಾವಿಸುವುದು. ಅಂದರೆ, ನಾವು ವಯ್ಯಕ್ತಿಕವಾಗಿ ಕಂಡು ಕೊಂಡ ಮಾನವೀಯ ಮೌಲ್ಯ.ಮಾಧ್ಯಮ ಸಾರುವ ಮಾನವೀಯತೆಯೇ ಆಗಬೇಕಾಗಿಲ್ಲ.

ಮೂರನೆಯದಾಗಿ, ಸುದ್ದಿಯನ್ನು ಕಮಾಡಿಟಿಯಾಗಿ ಸ್ವೀಕರಿಸದೇ ಇರುವುದು. ಇದು ಯಾಕೆ ಮುಖ್ಯವೆಂದರೆ ನೀವು ಕನ್ಸೂಮರ್‌ ಆಗಬೇಕೆಂದು ಮಾಧ್ಯಮಗಳ ತಹತಹ. ಆದರೆ, ಹಾಗಾದಾಗ ಸುದ್ದಿ ಸ್ವೀಕಾರ ತುಂಬಾ ಪ್ಯಾಸಿವ್‌ ಆಗುವ ಸಾಧ್ಯತೆಯೇ ಹೆಚ್ಚು. ಆದರೆ ಲೋಕವನ್ನು ಅರಿಯುವುದು ತುಂಬಾ ಆಕ್ಟೀವ್‌ ಆದ ಪ್ರಕ್ರಿಯೆ; ಕ್ರಿಯಾಶೀಲವಾದ ಸಂಗತಿ. ಅಂದರೆ ಸುದ್ದಿ ಎಷ್ಟೇ ಸ್ಪಷ್ಟ ಎಂದು ಅನ್ನಿಸುವಾಗಲೂ, ಅದರ ಬಗ್ಗೆ ಅನುಮಾನದಿಂದ ನಿಮ್ಮದೇ ಹುಡುಕಾಟ ಮಾಡಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ; ನಿಮ್ಮದೇ ಮಾನವೀಯ ನೆಲೆಯಲ್ಲಿ ತುಲನೆಮಾಡಿ ಸ್ವೀಕರಿಸಬೇಕಾಗುತ್ತದೆ

ಇದನ್ನು ಎಲ್ಲರೂ ಮಾಡಲು ಸಾಧ್ಯವೆ? ಎಷ್ಟು ಕೆಲಸವಲ್ಲವೆ? ಅನ್ನಿಸುವುದು ಸಹಜ. ಆದರೆ, ಅದು ಇಂದಿನ ಅಂತರ್ಜಾಲ ಯುಗದಲ್ಲಿ ಮುಂಚಿನಷ್ಟು ಕಷ್ಟವಲ್ಲ ಎಂದು ನನ್ನ ಅನಿಸಿಕೆ. ಆದರೆ, ಅದಕ್ಕಿಂತ ಮುಖ್ಯವಾಗಿ ಬೇರೆ ದಾರಿ ನನಗಿನ್ನೂ ಹೊಳೆದಿಲ್ಲವಾದ್ದರಿಂದ ನಾನು ಹಾಕಿಕೊಂಡ ಒಂದು ರೀತಿಯ ಫ್ರೇಮ್‌ವರ್ಕ್ ಅನ್ನಬಹುದು.

Re: ಒಂದು ಕಾದಂಬರಿ

anivaasi's picture

ಅಶೋಕ್‌ಕುಮಾರ್‌ರೆ- "ನವ್ಯತೆ" ಹೊಸತನ ಎಂಬ ಅರ್ಥದಲ್ಲಿ ಬಗೆದು ಖುಷಿ ಮತ್ತು ವಿನಯದಿಂದ ಹಲ್ಲು ಕಿರಿದೆ.

ಮಹೇಶರೆ-"ಚಿಕ್ಕದಾರರು ಚೂರಿ, ಚೊಕ್ಕವಾಗಿ ಕತ್ತಿರಿಸುತ್ತೆ"  ಎಂದಿದ್ದೀರಿ. ನಾನು ಅಹಿಂಸೆ ಪರಮ ಮೌಲ್ಯ ಎಂದು ಒಪ್ಪದ ಅಹಿಂಸಾವಾದಿ. ಇದರಲ್ಲಿ ವಿರೋಧಾಭಾಸ ಕಂಡರೆ, ಅದು ನಿಮ್ಮ ಸ್ವೀಕಾರದ್ದು ಎಂಬ ಗರ್ವಿಯೂ!
ಮೆಚ್ಚಿದವರಿಗೆಲ್ಲಾ ತಲೆ ಬಾಗುತ್ತೇನೆ.

ಅಕೆಡೆಮಿಕ್ ಆಗದ ಹಾಗೆ, ಭಾವತೀವ್ರತೆ ಬಿಟ್ಟುಕೊಡದೆ ಪ್ರತಿಕ್ರಯಿಸುವುದು ಹೇಗೆ ಎಂದು ನನ್ನ ಕುತೂಹಲ.

ಅಹಿಂಸೆ!

mahesha's picture

ಅನಿವಾಸಿ

ನಿಮ್ಮ ಬರಹದಲ್ಲಿ ಯಾವ ಅಡ್ಡಂದಿಡ್ಡಿಯನ್ನು ನಾನು ಕಂಡಿಲ್ಲ.

ಅದು ಬಹಳ ಚೊಕ್ಕವಾಗಿ ಚೆನ್ನಾಗಿದೆ.

ಚಿಕ್ಕ ಬರಹವಾದರೂ, ಸಂಗತಿಯನ್ನು ತಿಳಿಯಾಗಿ ಮುಂದಿಡುತ್ತದೆ....

ನನ್ನಿ!

"ಅಹಿಂಸೆ" ಬಗ್ಗೆ ನನಗೆ ಯಾವ ಅನಿಸಿಕೆಯಿಲ್ಲ.!
.
.
.
.

ಇಲ್ಲಿ ಒಂದು ಸಂಗತಿ ನನಗೆ ಹೊಳೆಯಿತು...( ಸುನಿಲ ನಿಂಗೆ, ಸ್ಪೆಶಲ್ಲಾಗಿ! )

"ಆನಂದಂ ಬ್ರಹ್ಮೇತಿ ಜ್ಞಾತವಾನ್| ಆನಂದೇನ ಜಾತಾನಿ ಜಾಯಂತೆ | ಆನಂದೇನ ಜಾತಾನಿ ಜೀವಂತಿ | ಆನಂದಂ ಅಭಿವಿಶಂತೀತಿ( ಇಲ್ಲಿ ಕೊಂಚ ತಿದ್ದಪ್ಪ, ಮರೆವು!)"
ಹೀಗೆ
"ಹಿಂಸಾ ಬ್ರಹ್ಮೇತಿ ಜ್ಞಾತವಾನ್| ಹಿಂಸಯಾ ಜಾತಾನಿ ಜಾಯಂತೆ | ಹಿಂಸಯಾ ಜಾತಾನಿ ಜೀವಂತಿ | ಹಿಂಸಾಂ ಅಭಿವಿಶಂತೀತಿ!!!"
ಅಂತ ಆಗುವುದಲ್ಲ.

ನಾವು ಹುಟ್ಟುವುದು ನೋವಿನಿಂದ( ನೋವಿನ ದೆಸೆಯಿಂದ ), ಬಾೞುವುದು ನೋವಿನಲ್ಲಿ, ಸಾವು ನೋವಿನಿಂದಲೇ ಕೂಡಿರುವುದು. ಹೀಗಾಗಿ ನೋವೇ ನಿತ್ಯ, ಸತ್ಯ, ಬ್ರಹ್ಮ!!

’ಪರ್ವ’ದ ಶುಕನ ಮಾತು ಒಂದು ತೆರ ಇದೇ ಅಲ್ವಾ??

======================================

Re: ಅಹಿಂಸೆ!

anivaasi's picture

ಬರಹವನ್ನು ಇಷ್ಟಪಟ್ಟದ್ದಕ್ಕೆ ಎದೆಮುಟ್ಟಿಕೊಂಡು ನಿಮಗೆ ತಲೆಬಾಗುತ್ತೇನೆ.

ಲೋಕದಲ್ಲಿ ನೋವು ಇದ್ದೇ ಇದೆ. ಅದನ್ನು ಕಡಿಮೆ ಮಾಡಿಕೊಳ್ಳುವುದು ಮನುಷ್ಯನ ಸಹಜವಾದ ಪ್ರತಿಕ್ರಿಯೆ. ಆದರೆ, ನನ್ನನ್ನು ಕಾಡುವುದು ಮನುಷ್ಯನ ಕ್ರಿಯೆಗಳಿಂದ ಹುಟ್ಟಿದ್ದ ಹಿಂಸೆ. ಅದನ್ನು ನಾನು ಬೆಂಬಲಿಸುತ್ತೇನೆಯೇ? ಯಾವ ಪರಿಸ್ಥಿಯಲ್ಲಿ ಬೆಂಬಲಿಸುತ್ತೇನೆ. ಬೆಂಬಲಿಸುವಾಗ ಅದರಿಂದ ಆಗುವ ಅನಾಹುತ/ಅನುಕೂಲಗಳು ಏನು? ಬೆಂಬಲಿಸದೇ ಹೋದಾಗ ಆಗುವ ಅನಾಹುತ/ಅನುಕೂಲಗಳೇನು? ಒಂದು ನಿರ್ದಿಷ್ಟ ದೃಷ್ಟಿಕೋನ ಎಲ್ಲ ಪರಿಸ್ಥಿತಿಗೂ ಅನ್ವಯಿಸಲು ಬರುತ್ತದೆಯೇ? ಈ ಒಂದೊಂದು ಪ್ರಶ್ನೆಗೂ ವಿರುದ್ಧವಾದರೂ ತಕ್ಕುದಾದ ಉತ್ತರಗಳೂ ಇರುತ್ತವೆ ಎಂಬುದು ಸೋಜಿಗವಲ್ಲವೆ?

ಹಿಂಸೆ ಅಹಿಂಸೆ! - ಚೆನ್ನುಡಿಗಳು

mahesha's picture

ನಿಮ್ಮ ಮಾತುಗಳು ತುಂಬ ಚೆನ್ನಾಗಿದೆ..

ನನ್ನಿ!
======================================

ಆನಂದ ಹೊರಳಿ ಅಹಿಂಸೆ

Sunil Jayaprakash's picture

@ಮಹೇಶ,

ಸುನಿಲ ನಿಂಗೆ, ಸ್ಪೆಶಲ್ಲಾಗಿ!, ...ಇಲ್ಲಿ ಕೊಂಚ ತಿದ್ದಪ್ಪ, ಮರೆವು

.......|ಆನಂದಂ ಬ್ರಹ್ಮೇತಿ ವ್ಯಜಾನಾತ್ | ಆನಂದಾದೇವ ಖಲ್ವಿಮಾನಿ ಭೂತಾನಿ ಜಾಯಂತೆ | ಆನಂದೇನ ಜಾತಾನಿ ಜೀವಂತಿ | ಆನಂದಂ ಪ್ರಯಂತ್ಯಭಿಸಂವಿಶಂತೀತಿ | ಸೈಷಾ ಭಾರ್ಗವೀ-ವಾರುಣೀ ವಿದ್ಯಾ| ಪರಮೇ ವ್ಯೋಮಂ ಪ್ರತಿಷ್ಠಿತಾ | ಸ ಏವಂ ವೇದ ಪ್ರತಿತಿಷ್ಠತಿ |.......

ಅಕೆಡೆಮಿಕ್ ಅಲ್ಲದ ಪ್ರತಿಕ್ರಿಯೆ

Sunil Jayaprakash's picture

ಅಕೆಡೆಮಿಕ್ ಆಗದ ಹಾಗೆ, ಭಾವತೀವ್ರತೆ ಬಿಟ್ಟುಕೊಡದೆ ಪ್ರತಿಕ್ರಯಿಸುವುದು ಹೇಗೆ ಎಂದು ನನ್ನ ಕುತೂಹಲ.

ಅನಿವಾಸಿಗಳೇ, ಈ ಮೇಲಿನ ನಿಮ್ಮ ಆಶಯ ನನಗೆ ತುಂಬಾ ಹಿಡಿಸಿತು. ಆಕೆಡೆಮಿಕ್ ಆಗದ, ಭಾವತೀವ್ರತೆ ಬಿಟ್ಟುಕೊಡದ ಪ್ರತಿಕ್ರಿಯೆ..ಚೆನ್ನಿದೆ ನಿಮ್ಮ ಕುತೂಹಲವನ್ನು ತಣಿಸಿಕೊಳ್ಳುವ ಪರಿ :ಚಪ್ಪಾಳೆ:. ಬಹುಶಃ "ಮುಂಗಾರು ಮಳೆ" ಸಿನಿಮಾದ ಡೈಲಾಗುಗಳನ್ನು ಜನರು ಗುನುಗುವಂತಾಗಿದ್ದಕ್ಕೆ ಇದೇ ಕಾರಣವಿರಬೇಕು.

Re: ಒಂದು ಕಾದಂಬರಿ

suresh_k's picture

ಕಾದಂಬರಿಕಾರನ ಕೈಯಲ್ಲಿರುವುದು ಆರುತ್ತಿರುವ ದೀಪ; ನಿಮ್ಮದು ಆರದ ದೀಪ- ಅದು `ಸತ್ಯ'.
ಅನಿವಾಸಿಯವರೇ, ನಿಮ್ಮ ಅನಾವರಣ ಚೆನ್ನಾಗಿದೆ.

ಉ: ಒಂದು ಕಾದಂಬರಿ

srimanmohan's picture

ಆವರಣಗೊಂಡಿದ್ದ ಕಹಿಸತ್ಯಗಳನ್ನು ಆನಾವರಣಗೊಳಿಸುವ ಲೇಖಕರ ಶೈಲಿ ಅನಿವಾಸಿಯವರಿಗೆ ಅಹಂಕಾರವಾಗಿ ಕಂಡುಬಂದರೆ ಅದರಲ್ಲಿ ಲೇಖಕರ ತಪ್ಪೇನು?
ಲೇಖಕರು ಎತ್ತಿರುವ ಪ್ರಶ್ನೆಗಳು, ಮಂಡಿಸಿರುವ ವಿಚಾರಗಳನ್ನು ಸಕಾರಣಗಳನ್ನು ನೀಡದೆ-"ಬಾಲಿಶ","ಕುಟಿಲ" -ಎಂದೆಲ್ಲ ನಿಂದಿಸುವ ಪರಿ ನೋಡಿದರೆ -" Hit and run" ರೀತಿಯ ಗೆರಿಲ್ಲಾ ಯುದ್ಢ ತಂತ್ರದ ನೆನಪು ಬರುತ್ತೆ.
ಸತ್ಯದ ಪ್ರತಿಪಾದನೆಯ ಭರದಲ್ಲಿ ಸೌಂದರ್ಯದೊಡನೆ ತುಸು ರಾಜಿ ಮಾದಿಕೊಂಡಿರುವ ಲೇಖಕರ ದಾಟಿಯನ್ನು(ಭಾಷಣ ?) ಟೀಕಿಸುವ ಭರದಲ್ಲಿ, ಲೇಖಕ "ಓದುಗರನ್ನು ದಡ್ಡ ಮಂದೆಯಂತೆ" ನಡೆಸಿಕೊಂಡಿದ್ದಾರೆ ಎಂಬ ಅರ್ಥಹೀನ ಆರೋಪ ಕೂದ ಮಾಡಿದ್ದು, ಅದಕ್ಕೆ ಸಮರ್ಥನೆ/ಪುರಾವೆ ನೀಡದೆ ಜಾಣ ಮರೆವನ್ನು ಪ್ರದರ್ಶಿಶಿದ್ದಾರೆ.

ಉ: ಒಂದು ಕಾದಂಬರಿ

mahesha's picture

ಸರಿಮನಮೋಹನರೇ..

ಇರಲಿ ಬಿಡಿ, ಜಾಸ್ತಿ tension ಬೇಡ.!!
- ಮಾಯ್ಸ :)

ಉ: ಒಂದು ಕಾದಂಬರಿ

hamsanandi's picture

tension ಬೇಡ ಎಂಬುದೇನೋ ಸರಿಯೇ! ಈ ಮಾತನ್ನು ನಾನು ಮೇಲಿನ ಟಿಪ್ಪಣಿಗಳಿಗೆ ನೇರ ಉತ್ತರವಾಗಿ ಬರೆಯುತ್ತಿಲ್ಲ;

ಆದರೆ, ಸಮಾಜದ ಕೆಲವೆಡೆ ನಡೆಯುವ (ಅಥವಾ ನಡೆಯುತ್ತಿದ್ದ) ಅನ್ಯಾಯಗಳನ್ನು ಬಯಲಿಗೆಳೆಯುವ ಲೇಖಕರಿಗೆ ಪ್ರಗತಿವಾದಿ ಎಂಬ ಕಿರೀಟ ಸಿಕ್ಕರೆ, ಮತ್ತೊಂದು ಕಡೆಯಲ್ಲಿರುವ ಹುಳುಕು, ಕೊಳಕನ್ನು ತೋರಿಸುವ ಬರಹಗಾರರಿಗೆ ಕೋಮುವಾದಿ, ಓದುಗರ ಬುದ್ಧಿಶಕ್ತಿಯನ್ನು ಕಡೆಗಾಣಿಸುವವನು ಎಂಬ ಹಣೆಪಟ್ಟಿ ಸಿಗುವುದೊಂದು ವಿಪರ್ಯಾಸ!

ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಮಾತಿಗೆ ಬೇರೆ ಉದಾಹರಣೆ ಬೇಕಿಲ್ಲ :(

-ಹಂಸಾನಂದಿ

ಉ: ಒಂದು ಕಾದಂಬರಿ

mahesha's picture

ಹಂಸಾನಂದಿ,

ಇರಲಿ ಬಿಡಿ tension ಬೇಡ :)

- ಮಾಯ್ಸ :)

ಉ: ಒಂದು ಕಾದಂಬರಿ

anivaasi's picture

ಶ್ರೀಮನೋಹರರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಲೇಖಕರು ನಿಮಗೆ ಈ ಹಿಂದೆ ತಿಳಿದಿರದ "ಕಹಿಸತ್ಯ"ಗಳನ್ನು ಹೊಸದಾಗಿ ತೋರಿದ್ದರೆ, ತೆರೆದಿಟ್ಟಿದ್ದರೆ ಒಳ್ಳೆಯದೇ. ಆದರೆ, ನಾನು ಚಿಕ್ಕಂದಿನಿಂದಲೂ ಆ ರೀತಿಯ ನಿಲುವನ್ನು ಕೇಳುತ್ತಾ ಬೆಳೆದವನು. ನಂತರ, ಎಲ್ಲರಂತೆ ಅದನ್ನು ಪ್ರಶ್ನಿಸಿ ಹಲವು ಕಡೆಯಿಂದ ಉತ್ತರ ಪಡೆದುಕೊಂಡಿದ್ದೇನೆ.
ಇದನ್ನು ಒಂದು ಕೃತಿಯ ವಿಮರ್ಶೆ ಎಂದು ನೀವು ಬಗೆದಂತೆ ಕಾಣುತ್ತದೆ. ವಿಮರ್ಶೆಗೆ ಹಲವು ತುಲಾನಾತ್ಮಕ ಕೆಲಸದ ಅಗತ್ಯವಿರುತ್ತದೆ. ನನಗೆ ಅಷ್ಟು ಓದು, ಹೊತ್ತು ಇಲ್ಲ. ಕಾದಂಬರಿಯನ್ನು ಓದಿದಾಗ ನನ್ನ ಅನಿಸಿಕೆಗಳನ್ನು, ಕಾದಂಬರಿಯಿಂದಾಗಿ ಪಾತ್ರಗಳ ಮಾದರಿಯ ಬಗ್ಗೆ ಕಂಡು ಕೊಂಡದನ್ನು ಇಲ್ಲಿ ಬ್ಲಾಗಿಸಿಕೊಂಡಿದ್ದೇನೆ. ಕೆಲವು ತೀವ್ರ ಪ್ರತಿಕ್ರಿಯೆಯನ್ನು ಸೃಜನಾತ್ಮಕವಾಗಿ ಹೇಗೆ ಮಂಡಿಸುವುದೆಂದು ಸದಾ ಹುಡುಕುತ್ತೇನೆ. ಹಾಗಾಗಿ ಕಾದಂಬರಿ ಹೆಸರು ಹೇಳಿಲ್ಲ. ಅದು ಮೂಲಭೂತವಾದಿ ಧೋರಣೆ ಎಂದು ನಿಮಗೆ ಯಾಕೆ ಅನ್ನಿಸಿತೋ!

ಹಂಸಾನಂದಿಯವರೇ,
ತುಂಬಾ ಸಾರ್ವತ್ರಿಕವಾದ ನಿಮ್ಮ ಹೇಳಿಕೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಆದರೂ ಪ್ರತಿಕ್ರಿಯೆಗೆ ವಂದನೆಗಳು.

ಉ: ಒಂದು ಕಾದಂಬರಿ

anivaasi's picture

ಶ್ರೀಮನಮೋಹನರೇ,
ನಿಮ್ಮ ಹೆಸರು ತಪ್ಪಾಗಿದಕ್ಕೆ ಕ್ಷಮೆ ಕೋರುತ್ತೇನೆ.

ಉ: ಒಂದು ಕಾದಂಬರಿ

srimanmohan's picture

ಅನಿವಾಸಿಯವರೆ,
ವಿಮರ್ಶೆ ಮತ್ತು ಅಬಿಪ್ರಾಯಗಳ ತಾಂತ್ರಿಕ ಅರ್ಥಭೇಧಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ!!
ಅವೆರಡೂ ನನ್ನ ಮಟ್ಟಿಗೆ ಒಂದೇ. ಅದು ಪೂರ್ವಾಗ್ರಹಕ್ಕೆ ಒಳಗಾಗಿರಬಾರದೆಂಬುವುದು ನನ್ನ ಅಭಿಮತ.
ಚರ್ಚೆಯ ಪಲಿತಾಂಶ ಸತ್ಯದೆಡೆಗೆ ನಮ್ಮ ನಡೆಯಾಗಬೇಕು.
ಸುಮ್ಮನೆ ಶಬ್ದಜಾಲದಲ್ಲಿ ಈಜಾಡುತ್ತ "ವಿಮರ್ಶೆ" ಮಾಡುವ proffessional ವಿಮರ್ಶಕರು ಹೇಗೆ ಹಾಸ್ಯಾಸ್ಪದವಗುತ್ತಾರೆ ಅನ್ನೋದಕ್ಕೆ ಇತ್ತೇಚೆಗೆ ಉಡುಪಿಯಲ್ಲಿ (MGM)ನಡೆದ ವಿಚಾರ ಸಂಕಿರಣದಲ್ಲಿ ಕೇಳಿಬಂದ ಮಾತೊಂದನ್ನು ಕೇಳಿ : " ಸತ್ಯ ಬೇರೆ....ವಾಸ್ತವ ಬೇರೆ.....ಇವೆರಡೂ ಓಂದೇ ಅಲ್ಲ.....ಇತ್ಯಾದಿ...ಎತ್ಯಾದಿ......"
ನನ್ನ ಮಿತ್ರರೋರ್ವರು ಇದಕ್ಕೆ ಪ್ರತಿಕ್ರಿಯಿಸಿದ್ದು ಇನ್ನೂ ಸ್ವಾರಸ್ಯವಾಗಿತ್ತು!
"ಅವರೇನನ್ನುತ್ತಿದ್ದಾರೆ ಎನ್ನೋದು ಅವ್ರಿಗೇ ಗೊತ್ತಿಲ್ಲ ಅನ್ನೋದು-"ಸತ್ಯ"!!...ಅವ್ರು ಹೇಳ್ತಿರೋದೆಲ್ಲ ಸುಳ್ಳೆಂದು ಕೇಳುಗರಿಗೆ ಅರ್ಥ ಆಗಿದೆ ಅನ್ನೋದು- "ವಾಸ್ತವ!!!" "

ಉ: ಒಂದು ಕಾದಂಬರಿ

anivaasi's picture

Quote:
ವಿಮರ್ಶೆ ಮತ್ತು ಅಬಿಪ್ರಾಯಗಳ ತಾಂತ್ರಿಕ ಅರ್ಥಭೇಧಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ!!
ಅವೆರಡೂ ನನ್ನ ಮಟ್ಟಿಗೆ ಒಂದೇ.

ನಿಮ್ಮಗೆ ಒಳ್ಳೆಯದಾಗಲಿ.
Quote:
ಚರ್ಚೆಯ ಪಲಿತಾಂಶ ಸತ್ಯದೆಡೆಗೆ ನಮ್ಮ ನಡೆಯಾಗಬೇಕು.

ಈ ಮಾತು ಅರ್ಥವಾಗಲಿಲ್ಲ. "ಸತ್ಯ" ಅನ್ನುವುದು ಗೊತ್ತಿದ್ದರೆ ಚರ್ಚೆಯ ಅಗತ್ಯ ಇರುವುದಿಲ್ಲ. ಗೊತ್ತಿಲ್ಲದಿದ್ದರೆ ಯಾರಾದರೂ "ಅದು ಸತ್ಯ" ಎಂದು ಹೇಳಿದ್ದನ್ನು ನಂಬಬೇಕಾಗುತ್ತದೆ. ಅವರು ಹೇಳಿದ ದಿಕ್ಕಿನಲ್ಲಿ ನಡೆದರೆ ಸತ್ಯ ಸಿಗುತ್ತದೆ ಎಂದು ನಂಬಬೇಕಾಗುತ್ತದೆ! ಅದೂ ಒಂದು ರೀತಿಯ ಪೂರ್ವಾಗ್ರಹವೇ ಆಗಿಬಿಡುತ್ತದೆ. ಯಾಕೋ ಸ್ವಲ್ಪ ಎಡವಟ್ಟು ವಾದ ಅನಿಸುತ್ತಿದೆ :) ಅದಕ್ಕೇ ಸತ್ಯದ ಗೊಡವೆಗೆ ಹೋಗದೆ ಕಂಡದ್ದನ್ನು, ಅನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳುವುದು ಹೆಚ್ಚು ಪ್ರಯೋಜನಕಾರಿ ಅನಿಸುತ್ತದೆ.

ಉ: ಒಂದು ಕಾದಂಬರಿ

srimanmohan's picture

ಇತಿಹಾಸದಂತ ವಿಚಾರಗಳಲ್ಲಿ ಚರ್ಚೆಗಳ ಪರಿಣಾಮವಾಗಿ ಸತ್ಯ ಹೊರಹೊಮ್ಮಲು ಸಾದ್ಯ ಅನಿಸುತ್ತದೆ.
ನಾನು ಈ ತನಕ ಸತ್ಯ ಎಂದು ಭಾವಿಸಿರುವ ಅಂಶಗಳನ್ನು ನೀವು ದಾಖಲೆ/ಪುರಾವೆಗಳೊಂದಿಗೆ ತಪ್ಪೆಂದು ಪ್ರಸ್ತುತ ಪಡಿಸಿದರೆ ನನಗೊಂದು ಹೊಸ ಬೆಳಕು ಸಿಕ್ಕಂತಲ್ಲವೆ? ಇದು ಸತ್ಯದೆಡೆಗೆ ನನ್ನ ಒಂದು ನಡೆಯಾಗಲಾರದೆ?
ಸತ್ಯ ನನ್ನಲ್ಲಿ ಮಾತ್ರ ಇದೆ. ಉಳಿದವರಲ್ಲಿ ಸತ್ಯ ಇರಲು ಸಾದ್ಯವಿಲ್ಲ. ಉಳಿದವರು ನನ್ನ ವಿಚಾರಗಳನ್ನು ಒಪ್ಪಿಕೊಳ್ಳುವುದೇ ಉಳಿದಿರುವ ದಾರಿ ಎನ್ನುವ ಹುಂಬರ ಮಾತು ಬೇರೆ. ಅಂತವರು ಯಾವಾಗಲೂ ಇತರರ ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶವನ್ನೆ ಕೊಡಲ್ಲ. ನಮ್ಮಲ್ಲಿನ ಕೆಲವು semetic ದಾರ್ಮಿಕ ಪಂಗಡಗಳನ್ನು ನೋಡಿ. ನನ್ನ ಪುಸ್ತಕ ಮಾತ್ರ ಸರಿ. ನನ್ನ ಪುಸ್ತಕದಲ್ಲಿ ಇರುವುದನ್ನು ಒಪ್ಪಿಕೊಳ್ಳದೆ ಇದ್ದಲ್ಲಿ ನಿನಗೆ ಬದುಕಲು ಹಕ್ಕಿಲ್ಲ ಎನ್ನುತ್ತಾರಲ್ಲ...ಹಾಗೆ!

ಉ: ಒಂದು ಕಾದಂಬರಿ

mahesha's picture

ಇತಿಹಾಸದಲ್ಲಿ ನಿಕ್ಕುವ ಮಾಹಿತಿಗಳಿಗಿಂತ ಊಹೆಗಳೇ ಜಾಸ್ತಿ....

"ಶ್ರಿಕೃಷ್ಣದೇವರಾಯ" ರಾಜಕುಮಾರ್‍ ಹಂಗೆ ಬೆಳ್ಳಗೆ ಇರಲಿಲ್ಲವಂತೆ. ಕುಳ್ಳಗೆ ಕರ್ರ‍ಗೆ ಇದ್ದನಂತೆ.!

"ಇತಿ ಹ ಆಸ" = "ಹೀಗೆ ಇತ್ತಂತೆ" ಅಷ್ಟೇ , "ಹೀಗೇಏಏಏ ಇತ್ತು" ಅಂತ ಅಲ್ಲ!
- ಮಾಯ್ಸ :)

ಉ: ಒಂದು ಕಾದಂಬರಿ

mahesha's picture

ಅನಿವಾಸಿ,

ನಿಮ್ಮ 'ಸತ್ಯ'ದ ಮೇಲಣ ಮಾತು ಒಪ್ಪವಾದುದು.

"ಸತ್ಯ ಮತ್ತು ಧರ್ಮ" ಇವೆರಡೂ ಹೀಗೆ ಎಂದು ಹೇಳಲಾಗದವು.
ದಿಟಕ್ಕೆ ನಂಬಿಕೆ ಅಡಿಪಾಯವಾದರೆ, ಧರ್ಮಕ್ಕೆ ಶ್ರದ್ಧೆ ಮತ್ತು ನಂಬಿಕೆ [ ಇಲ್ಲಿ ತಪ್ಪಿರಬಹುದು ]

ಒಂದು ಮಾತು 'ದಿಟ' ಎಂದು ಹೇಳುವಾಗ ನಾವು ಹೇಳುಗನ ಮೇಲಣ ನಂಬಿಕೆಯನ್ನೂ ಲೆಕ್ಕಕ್ಕೆ ತಗೆದುಕೊಂಡಿರುತ್ತೇವೆ. ಅಂದರೆ ದಿಟದ ಮೂಲದ ಮೇಲೆ ನಂಬಿಕೆಯಿದೆ ಎಂದು.

ಇಲ್ಲಿ ನಡೆದಿರುವ ಮಾತುಕತೆಗೂ ಈ"ಸತ್ಯ"ದ ಮೂಲದ ಮೇಲಿನ ಐಬೇ ಕಾರಣವೆಂದು ನನ್ನ ಒಳನಿಸಿಕೆ.

ಅದೂ ಅಲ್ಲದೇ ದಿಟವೂ ಹೊಸ ಹೊಸ ಅರಿವಿನೊಂದಿಗೆ ಬದಲಾಗುವುದು
ಮಾದರಿಗಳು
೧)ಬುವಿಯೇ ಜಗದ ನಡು.
೨)ನೇಸರ ಒಂದು ಗ್ರಹ
೩)ಶಿವಾಜಿಯ ಕನ್ನಡ ಮೂಲ
೫)ಆರ್ಯ,ದ್ರಾವಿಡ ತಳಿಗಳು( ಇದು ಇಂದು ಸುಳ್ಳೆಂದು ಸಬೀತಾಗಿದೆ. ಆದರೆ ಹಿಂದೆ ಇದು ದಿಟವೆಂದು ಏನೆಲ್ಲ ಅಬ್ಬರವಾಗಿತು )

ಅದರಲ್ಲೂ ಇತಿಹಾಸವಂತೂ ಎಡವಟ್ಟೇ.......

ಇತಿಹಾಸ ಅನ್ನೋದು ಅದನ್ನು ಹೇಳುಗನ ತಕ್ಕಂತೆ ಬಣ್ಣ ಬದಲಿಸಿಕೊಂಡಿರುತ್ತದೆ. ಒಬ್ಬ ಇತಿಹಾಸಕಾರ ಹೇಳಿದ್ದನ್ನೇ 'ಪೂರ ದಿಟ' ಅಂತ ಒಪ್ಪಿಕೊಂಡರೆ, ಕಡವಳ!!

ಹಿಂದೂ ಅರಸರ ಕ್ರೂರತನದ ಬಗ್ಗೆಯೂ ಬೇಕಾಷ್ಟು ಇವೆ....
-ಚೋಳರು ಹೋಗಿ ಸಿರಿಲಂಕೆಯ ಬುದ್ದವಿಹಾರಗಳನ್ನು ಹಾಳುಗೆಡವಿದ್ದು,
-ವೈದಿಕ ಮತದ ಪಂಡಿತರು, ನಾಡರಸರ ತಲೆಗೆಡಿಸಿ ಜಿನ ಮತ್ತು ಬೌದ್ದ ಪ್ರಜಾಜನರನ್ನು ಮತಾಂತರಗೊಳಿಸಿದ್ದು.
-ಹಿಂದುಗಳು ಲಂಪರು, ಅತಿಕಾಮಿಗಳು, ಅವರ ಕಜರಾಹೋ, ಮುಂತಾದ ಗುಡಿಗಳನ್ನು ನೋಡಿದರೇ ತಿಳಿಯುವುದು. ಆದರೆ ಒಂದು ಮಸೀದಿಯಲ್ಲೂ ಇಂತ ಬೇಟದ ಬೊಂಬೆಗಳಿಲ್ಲ.

ಇನ್ನು ಮುಂತಾದವು. ಹೀಗೆ 'ದಿಟ' ಅಮತ ಹೇಳಿದ ಇತಿಹಾಸಕಾರರೂ ಅವ್ರೆ.
ಆದರೆ ಅದನ್ನು ನಂಬೋರು ನಂಬ್ತಾ, ಬಿಡೋರು ಬಿಡ್ತಾರೆ ಅಷ್ಟೇ.
ಅದನ್ನು ಬಿಟ್ಟು ಇದೇ ಕಟ್ಟಕಡೆಯ ದಿಟ ಅಂತ ಪಟ್ಟು ಹಿಡಿದರೆ ಹೇಗೆ, ಶಿವಶಿವ!!

ಧರ್ಮವೂ ಕೂಡ ವಿಚಿತ್ರ. "ದನದ ಬಾಡು ತಿನ್ನೋದು ದರ್ಮವಲ್ಲ", ...ಇಷ್ಟೇ, ಇದು ಸರಿಯಲ್ಲ, ಇದು ದಿಟವಲ್ಲ.
"ದನದ ಬಾಡು ತಿನ್ನೋದು ದರ್ಮವಲ್ಲ ಹಿಂದೂ ದರ್ಮದಲ್ಲಿ ಶ್ರದ್ಧೆ, ನಂಬಿಕೆ ಇರುವರಿಗೆ" .. ಇದು ತುಸು ಹೆಚ್ಚು ಸರಿ. ಪೂತಿಯಲ್ಲ

- ಮಾಯ್ಸ :)

ಉ: ಒಂದು ಕಾದಂಬರಿ

mahesha's picture

ಲಂಪರು = ಲಂಪಟರು
- ಮಾಯ್ಸ :)