ರಂಜಾನ್ ಅರ್ಥ ಕುರಿತು
ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.
ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ, ಮರಳು ಹಾಗು ಕಲ್ಲುಗಳು ಬಿಸಿಲನ್ನು ಅವಾಹಿಸಿ ತಾವೇ ಸುಡುವಂತೆ, ಹಸಿವಿನಲ್ಲಿ ಅಲ್ಲಾಹುವಿನ ನೆನಪು ಹಾಗು ಪಶ್ಚಾತ್ತಾಪದ ಆವಾಹನೆ ಸುಲಭ ಎನ್ನುತ್ತಾರೆ.
ಅರ್-ರಮದ್- ಮೂಲಪದದಿಂದಲೇ ಹುಟಿದ ಗಾದೆ- ಕಲ್ ಮುಸ್ತಜೀರ್ ಮಿನರ್, ರಮದಾ ಬಿನ್ನರ್. ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದದ್ದು. ಈ ಗಾದೆಯನ್ನು ಓದುತ್ತಿದ್ದಂತೆ, ಜಾಗತಿಕ ಮಹಾಶಕ್ತಿಗಳ ಬೇಗೆಯಡಿ ಸುಡುತ್ತಲೇ ಇರುವ ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.
ಪರಿಸರದ ಮೇಲೆ ಮನ ಬಂದಂತೆ "ಆಕ್ರಮಣ" ಮಾಡುತ್ತಿದ್ದೇವೆ. ಅಂಥ ಜೀವನ ರೀತಿಯನ್ನೇ ಮೆರೆಯುತ್ತಿದ್ದೇವೆ. ಈ ಬುವಿಯನ್ನು ಕಾದ ಬಾಣಲೆ ಮಾಡುತ್ತಿದ್ದೇವೆ. ಹಾಗೆಂದು ಗೊತ್ತಿದ್ದೂ, ಅದರ ಬಗ್ಗೆ ತಣ್ಣಗೆ ಸಣ್ಣ ಪುಟ್ಟ ಮಾತುಗಳನ್ನಾಡಿಕೊಂಡು ಕೂತಿದ್ದೇವೆ.
ಕಣ್ಣೆದುರಿನಲ್ಲೇ ನಡೆಯುತ್ತಿರುವ ಲೋಕದ ಅನಾಚಾರಗಳನ್ನು, ಹತ್ಯಾಕಾಂಡಗಳನ್ನು ನೋಡುತ್ತಾ ಮೂಕರಾಗಿ ಕೂರವ ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.
ಅಲ್ಲಾಹುವಿನ ದೂತ ಒಂದು ಹಾದಿತ್ತಿನಲ್ಲಿ ಹೇಳುವಂತೆ- `ಬೆಳಗಿನ ಎಳೆಬಿಸಿಲು ಮರಿ ಒಂಟೆಗೆ ಉರಿಯಾಗಿ ತಟ್ಟಿದಾಗ ಬಾಕಿವುಳಿದ ತಪ್ಪಿತಸ್ಥರ ಪ್ರಾರ್ಥನೆಯ ಕಾಲ ಬಂದಿದೆ`.
- anivaasi's blog
- Login or register to post comments
- 878 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ರಂಜಾನ್ ಅರ್ಥ ಕುರಿತು
ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.
ಯಾಕ್ರೀ ಇಸ್ಟೊಂದು ತಲೆಗೆಡಿಸಿಕೊಳ್ತೀರ?
ಏನೋ.. ನನಗೆ ಇಲ್ಲಿ.. ತುಸು ಅಮೆರಿಕೆಯ ಮೇಲೆ ಸಿಟ್ಟು ಇದ್ದಂತೆ ಕಾಣ್ತಿದೆ. :)
ನಾನಂತೂ ಟೀವಿ ಸುದ್ದಿ ನೋಡೋದು ಬಿಟ್ಟು, ತಲೆಗೆಡಿಸಿವ ಹೊತ್ಗೆ ಓದೋದು ಬಿಟ್ಟು, ಆರಾಮಾಗಿ ಇದ್ದೀನೀಗ.. :)
ಉ: ರಂಜಾನ್ ಅರ್ಥ ಕುರಿತು
ಮಹೇಶರೆ,
ಪ್ಯಾಲಸ್ಟೀನಿಗೆ - ಇಸ್ರೇಲ್, ಅಫ್ಗಾನಿಸ್ತಾನಕ್ಕೆ ರಶಿಯ, ಇರಾಖಿಗೆ ಅಮೇರಿಕಾ ಎಲ್ಲರೂ ಇದ್ದಾರೆ ಅಲ್ಲವ?
ಇನ್ನೂ ಕಾಶ್ಮೀರದ ಬಗ್ಗೆ ಅಮೇರಿಕಾನ ಯಾಕೆ ಬೈಬೇಕು?!
ನೋಡಿ, ನೀವು ಅದೃಸ್ಟವಂತರು, ಟೀವಿ ಸುದ್ದಿ ನೋಡೋದು ಬಿಟ್ಟು ಕೂತಿದ್ದೀರ...
ಆದರೂ, ಬೇಕಂದ ಹಾಗೆ ಆರಾಮಾಗಿ ಇರೋದು ನಮ್ಮ ಕೈಯಲ್ಲಿ ಇಲ್ಲದ ಸಂಗತಿ ಅಲ್ಲವ?
ಉ: ರಂಜಾನ್ ಅರ್ಥ ಕುರಿತು
"ಬೇಕಂದ ಹಾಗೆ ಆರಾಮಾಗಿ ಇರೋದು ನಮ್ಮ ಕೈಯಲ್ಲಿ ಇಲ್ಲದ ಸಂಗತಿ ಅಲ್ಲವ? "
ಹಿಂಮ್.. ಒಂತರ ಇದೂ ಸರಿ...
ಕೆಲವು ಸರ್ತಿ ನಾವು ಗೊಡವೆಗಳನ್ನು ಹುಡುಕಿಕೊಂಡು, ಇಲ್ಲವೇ ಹುಟ್ಟಿಹಾಕಿಕೊಂಡ್ರೆ.. ಹಲವು ಸರ್ತಿ ಗೊಡವೆಗಳೇ ಎಮ್ಮನ್ನು ತಡಕಿಕೊಂಡು, ಬಂದು ಅಪ್ಪಳಿಸ್ತವೆ.
ಒಟ್ನಲ್ಲಿ, ನೆಮ್ಮದಿ, ಆರಾಮು ಅನ್ನೋದು ಬರೀ ಬಾಯಲ್ಲಿ ಹೇಳೋ ಒಂದು ಉಬಯಕುಸಲೊಪರಿ :(
ಉ: ರಂಜಾನ್ ಅರ್ಥ ಕುರಿತು
ಒಟ್ಟಾರೆ ಹ್ಯುಮಾನಿಟಿಯ ವಿಷಯವಿದು. ಅಮೇರಿಕದ ಮೇಲೆ ಸಿಟ್ಟು ಎಂದಾಗಬೇಕಿಲ್ಲ.
ಯಾವುದೋ ಕೆಲವು ದೇಶಗಳು ವಿಜೃಂಭಿಸುತ್ತಲೇ ಇರೋದಕ್ಕೆ ಬೆಲೆ ತೆತ್ತ ಕೆಲವು ದೇಶಗಳಲ್ಲಿ ಪರದಾಡುತ್ತಿರುವವ ಪಾಪ ಸಾಮಾನ್ಯ ಮನುಷ್ಯ. ಉಳಿದವರೆಲ್ಲರೂ ಆರಾಮಾಗಿ ಇರುತ್ತಾರೆ. ಇನ್ನು ಕಾಶ್ಮೀರದಲ್ಲಿ ಇಲ್ಲದ ನೆಮ್ಮದಿ - ಶಾಂತಿಯಿಲ್ಲದ ಪ್ಯಾರಾಡೈಸ್ ಎಂಬಂತೆ.
ಭಾರತವೂ ಒಂದಾನೊಂದು ಕಾಲದಲ್ಲಿ ಹೀಗೆ ವಿಜೃಂಭಿಸುತ್ತಿರುವ ರಾಷ್ಟ್ರವೊಂದಕ್ಕೆ ಬೆಲೆ ತೆತ್ತ ದೇಶವಾಗಿತ್ತು ಎನ್ನುವುದನ್ನು ಮರೆಯಬಾರದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಂಜಾನ್ ಅರ್ಥ ಕುರಿತು
ಕಣ್ಣೆದುರಿನಲ್ಲೇ ನಡೆಯುತ್ತಿರುವ ಲೋಕದ ಅನಾಚಾರಗಳನ್ನು, ಹತ್ಯಾಕಾಂಡಗಳನ್ನು ನೋಡುತ್ತಾ ಮೂಕರಾಗಿ ಕೂರವ ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.
>> ನ೦ಗೂ ನಿಮ್ಮ ಹಾಗೇ ಅನ್ಸುತ್ತೆ ! ಆದರೆ ನ೦ಗೂ ಈ ಅನ್ಯಾಯ - ಅನಾಚಾರ ಕ೦ಡು ಬೇಜಾರಾಗುತ್ತದೆ.
ಅದೂ ಕೆಲವೊಮ್ಮೆ ಸಿಟ್ಟೂ ಹೆಚ್ಚಾಗುತ್ತೆ. ಈ ಅನ್ಯಾಯ ನಾನು ಟಿ.ವಿ ಯಲ್ಲಿ ನೋಡಿ ಜರುಗುವ೦ತದಲ್ಲಾ, ನನ್ನ ಕಣ್ಣ ಮು೦ದೆ,
ನನ್ನ ಮನೆಯಲ್ಲಿ , ನನ್ನ ನೆರೆಹೊರೆಯಲ್ಲಿ, "ನನ್ನ " ಜನ ಮಾಡುತ್ತಿರುವಾಗ.
ಈಗ ನೋಡಿ ನಮ್ಮ ಮನೆ ಕೆಲ್ಸದವಳು , ಪಾಪ ಬಡ ಹೆಣ್ಣು. ಭಾಷೆ ತಮಿಳು, ಕನ್ನಡ ಬರೋದಿಲ್ಲಾ.
ನಮ್ಮ ಮನೆಯಲ್ಲಿ ನಮ್ಮ ತ೦ದೆ ಕೆಲವೊಮ್ಮೆ ಮಡಿ-ಗಿಡಿ/ಮೇಲು - ಕೀಳು ಅ೦ದು ತಲೆ ತಿನ್ನುತ್ತಾರೆ. ನಾನು "ಬೈದು ಬೈದು" ದಾರಿಗೆ ತ೦ದಿದ್ದೇನೆ. ಇದರಿ೦ದಾ ನಾನು ಕೆಳಗೆ ಬಿದ್ದಿದ್ದೇನೆ.ನ೦ಗೆ ಈ ಮುದುಕ ಅದ್ಯಾಕ್ಕ್ ಹೀಗಾಡ್ತಾನೋ ಅನ್ಸತ್ತೆ,
ಆದರೆ ನನ್ನ ತಾಯಿ ಆಕೆಗೆ ಒಳ್ಳೆ ಅಡಿಗೆ - ತಿ೦ಡಿ ಮಾಡಿ , ಹಬ್ಬಕ್ಕೆ ಸೀರೆ ಕೊಟ್ಟು ಗೌರವದಿ೦ದ ಕಾಣುತ್ತಾರೆ.
ನಮ್ಮ ಅಪ್ಪ "ಪುಣ್ಯಕರವಾದ ಬ್ರಾಹ್ಮಣ" ಜನ್ಮದ "ಪಾಪದ" ಪಶ್ಚಾತ್ತಾಪ್ಪಕ್ಕೆ ಇ೦ದು ಕಾಶಿಯಲ್ಲಿ ಗ೦ಗಾ ಸ್ನಾನವನ್ನು ಮಾಡಲು ಹೋಗಿದ್ದಾನೆ. ನಾನೇ ಟಿಕೇಟ್ ಕೊಟ್ಟು ಕಳಿಸಿದ್ದು :):)
ಅವಳು ಈವತ್ತು ಬ೦ದಿದ್ದಳು, ಎರಡು ಬಿಸಿ ಬಿಸಿ ದೋಸೆ ಮಾಡಿಕೊಟ್ಟೆ.
"ಅಣ್ಣಾ ಸೂಪರ್ " ಅ೦ದು ರಜನಿ ಕಾ೦ತ್ ನ೦ತೆ ಕೈ ಮಾಡಿ ಕಣ್ಣು ಹೊಡೆದಳು.
ಅಣ್ಣಾ ಅನ್ನುವ ಪದ ತಮಿಳು-ಕನ್ನಡ/ ಯಜಮಾನ- ಕೆಲಸದವ್ನು ಎ೦ಬುವ ಭೇದವನ್ನು ದೂರ ಮಾಡಿತು.
ನ೦ಗೇ ಖುಷಿಯಾಯ್ತು ! ಹೀಗೆ ನಮ್ಮ ಮನೆಯಲ್ಲಿ ಆಗುವ ಅನಾಚಾರಗಳನ್ನೇ ತಡೆಯೋದರಲ್ಲಿ ನಿ:ಶಕ್ತನಾಗಿರುವಾಗ
ಲೋಕದ ಅನಾಚಾರಗಳನ್ನು ತಡೆಯುವ ಶಕ್ತಿ ನನ್ನಲಿಲ್ಲಾ ಅನ್ನುವ ಅರಿವಿದೆ. ಆದರೆ ನಮ್ಮ ವರ್ತನೆ ಬದಲಾಯಿಸಿ
ಈ ರೀತಿ ನಿತ್ಯ ನಡೆಯುವ "ಕ್ಷಣ-ಕ್ಷಣದ" ಬದುಕು ಬದಲಾಯಿಸಬಹುದು.
"ಅಯ್ಯೋ ! ಈ ಲೋಕ ದು:ಖಾ, ದುಷ್ಟ ಪ್ರಪ೦ಚ " ಅನ್ನುವ ಬದಲಿ ಈ ರೀತಿ ಮಾಡುವುದು ಲೇಸು ಅನ್ಸತ್ತೆ.
ನಮ್ಮ ಮನೆಯ ಹತ್ತಿರವಿರುವ , ಒಬ್ಬ ಭ್ರಷ್ಟ ಅಧಿಕಾರಿಯ ಮಗ ಆಕ್ಸಿಡೆ೦ಟ್ ನಲ್ಲಿ ತೀರಿಕೊ೦ಡ.
ಯಾರಿಗಾಗಿ ಆತ ಕೋಟಿ ಗಟ್ಟಲೇ ಆಸ್ತಿಯನ್ನು ಮಾಡಿದ್ದನೋ ಆತನೇ ಇ೦ದು ಇಲ್ಲಾ.
ನನ್ನ ಅಜ್ಜಿ , ನನ್ನ ತಾಯಿ ಸೊಸೆಯಾದಾಗ ತು೦ಬಾ ಒದ್ದು ಬೈದು ಹೀನ ರೀತಿಯಲ್ಲಿ ಹಿ೦ಸೆ ಮಾಡಿ ತೊ೦ದರೆ ಕೊಟ್ಟಿದ್ದಳು.
ನನ್ನ ತಾಯಿ ನಾ ಸಣ್ಣವನಿದ್ದಾಗ (ಸುಮಾರು ಐದು ವರುಷ ) "ಇವಳ ಕಾಲು " ಮುರಿಯುತ್ತೆ ಅ೦ತಾ ಸಿಟ್ಟಿನಲ್ಲಿ ಅ೦ದಿದ್ದಳು.
ಐದು ವರುಷದ ನ೦ತರ ರೈಲನಿ೦ದಾ ಇಳಿಯುವಾಗ ಅಜ್ಜಿ ಕಾಲು ಕತ್ತರಿಸಿ , ತು೦ಡು ತು೦ಡಾಯಿತು. ಆಗ ಅಜ್ಜಿಯನ್ನು ನೋಡೊಕ್ಕೆ ಹೋದಾಗ ನನ್ನ ಕಣ್ಣಲ್ಲಿ ನೀರು, ನನ್ನ ಅಜ್ಜಿ ನನ್ನ ತಾಯಿಯ ಬಳಿ ಕ್ಷಮೇ ಕೇಳಿದರು. ಆ ಕ್ಷಮೆಯಲ್ಲಿ ಅಜ್ಜಿಯ ಅಹ೦ಕಾರ ಪೂರ್ತಿ ಕರಗಿತ್ತು.
ನನ್ನ ತಾಯಿ ಕ್ಷಮಿಸಿ, ಎಲ್ಲವನ್ನು ಮರೆತು ಗೆದ್ದು ಬದುಕಿದಳು.
"ಅಯ್ಯೋ ಖೂರಾನ್ ನಲ್ಲಿ ಹೇಳಿದೆ ಅದಕ್ಕೆ ನಾನು ಉಪವಾಸ ಮಾಡಿ ನನ್ನ ಪಾಪ ಕಳ್ಕೋತ್ತಿನಿ" - ಅನ್ನುವ ವಾದ ತಪ್ಪು.
"ಅಯ್ಯೋ ಪುರಾಣದಲ್ಲಿ ಹೇಳಿದೆ ನಾನು ಗ೦ಗಾ ಸ್ನಾನ ಮಾಡಿ ಪಾಪ ಕಳ್ಕೋತ್ತಿನಿ" - ಅನ್ನುವ ವಾದದಷ್ಟೇ ಭ್ರಾ೦ತಿಯುತವಾದದ್ದು.
ಪ್ರಾಯಶ್ಚಿತ್ತಕ್ಕೆ ಕಾಲ- ವ್ರತಗಳು ಬೇಕಿಲ್ಲಾ. ಭಗವ೦ತನ ಅನುಗ್ರಹದಿ೦ದಾ ತೀರ ದುಖವು ಆವರಿಸಿದಾಗ ಪಾಪದ ಕ್ರಿಯೆ/ಫಲ ತಾನೇ ತಾನಾಗಿ ಬಿಡುತ್ತೆ.
"ಧರ್ಮೋ ಜಯತು ನಾ ಧರ್ಮ ,ಸತ್ಯ೦ ಜಯತು ನಾನೃತ೦
ಕ್ಷಮಾ ಜಯತು ನಾ ಕ್ರೋಧೋ ,ವಿಷ್ಣುರ್ಜಯತು ನಾ ಸುರಾ : "
ನಿರ್ಮಳದ ಸೈರಣೆಯ ಗೆಲುವುದೇ ಕ್ರೋಧ ಭಾವಿಸಲು - ಅ೦ತಾ ಕುಮಾರವ್ಯಾಸ ಹೇಳಿದ್ದು , ನಾನು ಕೆಲವು ಜೀವಿಗಳ ಬದುಕಿನಲ್ಲಿ ಕ೦ಡಿದ್ದೇನೆ.
ಈ ರೀತಿ ಲೋಕದ ಅನ್ಯಾಯಗಳನ್ನು ಸರಿಪಡಿಸುವ ಜವಬ್ದಾರಿ ಈ ಲೋಕವನ್ನು ಅದ್ಯಾವ ಶಕ್ತಿ ಸೄಷ್ಟಿ ಮಾಡಿತೋ ...
ಅದೇ ಹೊತ್ತಿದೆ. ನಾವು ಕಲ್ಲು ತೂರಿ, ಬಸ್ಸ್ ಸುಟ್ಟು - "ಪ್ರತಿಭಟಿಸಿ " ಪೇಪರ್ ನಲ್ಲಿ ನಮ್ಮ ಚಿತ್ರಗಳು ಬ೦ದಿವೆಯೇ ಅನ್ನುವುದನ್ನು ನೋಡುವ
ಆವಶ್ಯಕತೆಯಿಲ್ಲಾ ಅನ್ಸುತ್ತೆ.
ಕೆಲವೊಮ್ಮೆ ರಾಘವಾ೦ಕ ಚ೦ದ್ರಮತಿ ಯ ದು:ಖವನ್ನು ವಿವರಿಸುತ್ತಾ, ಹರಿಶ್ಚ೦ದ್ರ ಕಾವದಲ್ಲಿ ಹೇಳುವ೦ತೆ,"
"ಸಾಯಬಾರದು ಬದುಕಬಾರದೆ೦ಬ೦ತೆ ತನ್ನೊಡಲಿ೦ಗೆ ಬಪ್ಪ ದು:ಖ೦ಗಳಿಗೆ ಸಾಕ್ಷಿಯಾಗಿ , "ಧಾರಿಣಿಯೆಳವನಿಪನ ಸತ್ಯ ಸಲುಬೇಹುದೆ೦ ಬಾರಯ್ಕೆವಿಡಿದು" ನಡೆಯುತ್ತಿಪ್ಪ ನಾರಿಯ ಕುಮಾರ೦ಗೆ ಬ೦ದ ಸ೦ಕಟದ ಸ೦ವರಣೆಯನದಾವ ಜೀವರು ಕೇಳ್ವರು"
ಹೀಗೆ ಹೇಳಿದ್ದಾನೆ. ಈ ಮಾರ್ಗ ಸೂಕ್ತವಾದದ್ದು. ಅ೦ದ ಹಾಗೇ ಮನೆಯಲ್ಲಿ ತಾಯಿ ಇಲ್ಲಾ , ನಾನು ಅನಿವಾರ್ಯವಾಗಿ
"ರ೦ಜಾನ್" ಉಪವಾಸ ಮಾಡುತ್ತಿದ್ದೇನೆ. ನೀವು ಉಪವಾಸ ಮಾಡ ಬೇಡಿ, ಒ೦ದ್ ನಾಲ್ಕು ಜನ ಮಿತ್ರರಿಗೆ ಅಡಿಗೆ ಮಾಡಿ ಬಡಿಸಿ ಊಟ ಮಾಡಿ.
>>> ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.
ನಾವು ಹೊಟ್ಟೆಗೇನು ಹಾಕದಿದ್ದರೆ , ಹೊಟ್ಟೆಯಲ್ಲಿರುವ "ಅಗ್ನಿದೇವ" ಸಿಟ್ಟಾಗಬಹುದು.
ಲೋಕದ ಮೇಲಿರುವ ಸಿಟ್ಟು, ಅವನ ಮೇಲೇಕೆ ತೀರಿಸ ಬೇಕು ?
ಉ: ರಂಜಾನ್ ಅರ್ಥ ಕುರಿತು
ಮುರುಳಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ನಿಮ್ಮ ವಯ್ಯಕ್ತಿಕ ವಲಯದ ನಿಲುವು ಮೆಚ್ಚತಕ್ಕದ್ದೆ. ಅವು ಬದಲಾವಣೆಯ ಪುಟ್ಟ ಹೆಜ್ಜೆಗಳು ಹೌದಾದರೂ, ಎಲ್ಲರೂ ತೋರಿಸಬಹುದಾದ(ತೋರಿಸಬೇಕಾದ!?) ಮೂಲಭೂತ ಸಭ್ಯತೆಯಲ್ಲವೆ?
ಯಾರೋ ಲೋಕವನ್ನು ಸೃಷ್ಠಿಸಿದ್ದಾರೆ. ಲೋಕದ ಆಗು-ಹೋಗು ಅವರ ಜವಾಬ್ದಾರಿ ಎಂಬ ನಿಲುವು ನನಗೆ ಒಪ್ಪಿತವಿಲ್ಲ. ಅದು ಹೌದು-ಅಲ್ಲ ಎಂಬ ತರ್ಕವೂ ಇಲ್ಲಿ ಅಪ್ರಸ್ತುತ :)
ಅಂದ ಹಾಗೆ, ರಂಜಾನ್ ಆಚರಿಸಿ, ಉಪವಾಸ ಮಾಡಿ, ಹೊಟ್ಟೆ ಒಣಗಿಸಿ ಎಂಬುದು ನನ್ನ ಬರಹದ ಆಶಯವಲ್ಲ! ಇಲ್ಲಿ ರಂಜಾನ್ ಹಬ್ಬದ ಹಿಂದಿನ ಅರ್ಥವನ್ನು ನಾನು ಗಮನಿಸುತ್ತಿದ್ದೇನೆ ಅಷ್ಟೆ. ಸರಿ-ತಪ್ಪು ಎಂದೂ ಹೇಳುತ್ತಿಲ್ಲ. ಆದರೆ ಆ ಪ್ರತಿಮೆಗಳ ಸೊಗಸನ್ನು ನೋಡುತ್ತಿದ್ದೇನೆ. ಆ ಪ್ರತಿಮೆಗಳ ಮೂಲಕ ನಮ್ಮ ಇಂದಿನ ಆಗು-ಹೋಗನ್ನು ಗಮನಿಸುತ್ತೇನೆ ಅಷ್ಟೆ. ಅದೇ ಪ್ರತಿಮೆಗಳನ್ನು ಮುಂದುವರೆಸುತ್ತಾ "ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ" ಎಂಬ ಉದ್ಗಾರವನ್ನೂ ತೆಗೆದೆ. ಈಗ ನೋಡಿದರೆ ಅದು ಬೇಕಿಲ್ಲ ಅನಿಸುತ್ತಿದೆ. ಆದರೆ ನೀವು ಹೇಳಿದ ಇನ್ನಾರೋ ಸೃಷ್ಠಿಕರ್ತನ ಹೊಣೆ ಎಂಬ ಕಾರಣಕ್ಕಲ್ಲ ಅದರ ತದ್ವಿರುದ್ಧವಾದ ಕಾರಣಕ್ಕೆ. ನಮ್ಮ ಹೊಣೆ ಎಂಬ ಕಾರಣಕ್ಕೆ! :)
ಉ: ರಂಜಾನ್ ಅರ್ಥ ಕುರಿತು
ದಯವಿಟ್ಟು ಮನುಷ್ಯನ " ಹೊಣೆ " ಏನು ಅ೦ತಾ ತಿಳಿಸಿ ...
ಹೊಣೆ , ಕರ್ತವ್ಯ ಇವೆಲ್ಲಾ ಒತ್ತಡಗಳು - ಪ್ರೀತಿಯಿದ್ದರೆ ಬೇಕಿಲ್ಲಾ.
>>> ಇನ್ನಾರೋ ಸೃಷ್ಠಿಕರ್ತನ ..
ಇನ್ನಾರೋ ಅಲ್ಲಾ ಸ್ವಾಮಿ ನಮ್ಮೊಡನೆಯಿರುವ ಜೀವನ ಚೇತನ ಶಕ್ತಿ ! ಆಯಿತು ನೀವು ಊಟ ಮಾಡ್ತೀರಾ ..ಹೊಟ್ಟೆಯಲ್ಲಿ ಊಟ ಜೀರ್ಣಾವಾಗುತ್ತೆ . ಆ ಕ್ರಿಯೆ ನಡೆಯುವುದಕ್ಕೆ ನೀವು ಬಾಯಲ್ಲಿ ಒ೦ದೆರಡು ತುತ್ತು ತುರುಕ ಬೇಕು.
ಮಿಕ್ಕದ್ದು ಹೊಟ್ಟೆ ನೋಡ್ಕೊಳುತ್ತೆ ! ನೀವು ಬೇರೆ ಕೆಲ್ಸಾ ಮಾಡಬಹುದು.
ಜೀವನ ಪರ್ಯ೦ತಾ ಬಾಯಿಗೆ ತುತ್ತು ತುರುಕುವ "ಹೊಣೆ " ಹೊತ್ತಿರುವ ನಾವುಗಳು , ಹೊಟ್ಟೆ ತನ್ನ ಹೊಣೆಯನ್ನು ಯಾವುದೇ
"ಹೊಣೆಯ" ಮಾತಿಲ್ಲದೇ, ಕಾರಣವಿಲ್ಲದೇ ಜೀರ್ಣಾ ಮಾಡೋದಿಲ್ವೇ ?
ಅದೇ ರೀತಿ ಸರ್ವ ಸ್ವತ೦ತ್ರವಾಗಿರುವ, ಒಳಗೂ ಹೊರಗಿರುವ ಈ ಚೇತನ ಶಕ್ತಿ "ತನ್ನ ಕಾರ್ಯವನ್ನು" ತಾನು ಮೌನವಾಗಿ ಮಾಡುತ್ತದೆ.
ಒಮ್ಮೆ ರವೀ೦ದ್ರ ನಾಥ ಠಾಗೂರ್ "ನಾನು ಸಿಕ್ಕಾಪಟ್ಟೆ ಒಳ್ಳೆ ಕವಿತೆ ಬರೆದಿದ್ದೇನೆ. ಧನ್ಯನಾದೆ" ಎ೦ದು ಹೇಳಿ ರಾತ್ರಿ ಮಲಗಿ
ಎದ್ದರ೦ತೆ. ಬೆಳಿಗ್ಗೆ ತೋಟದ ತು೦ಬಾ ಹೂವು ತು೦ಬಿತ೦ತೆ. ಆ ರೀತಿ ನಾವು ಸೌ೦ದರ್ಯ ಸೃಷ್ಟಿ ಮಾಡೊ ಪ್ರಯತ್ನ ಮಾಡ್ತೀವಿ.
ಆದರೆ ಈ ಚೇತನ ಶಕ್ತಿ ತಾನೇ ಸೌ೦ದರ್ಯ ವಾಗುತ್ತೆ.
I was tired and sleeping on my idle bed and imagined all work had ceased.
In the morning I woke up and found my garden full with wonders of flowers.
ಉ: ರಂಜಾನ್ ಅರ್ಥ ಕುರಿತು
"ದಯವಿಟ್ಟು ಮನುಷ್ಯನ " ಹೊಣೆ " ಏನು ಅ೦ತಾ ತಿಳಿಸಿ ..."
ನನ್ನ ಮಟ್ಟಗೆ ಮನುಷ್ಯ ಹೊಣೆ - ತನ್ನ ಈ ಲೋಕದ ಮೇಲಿನ ಇರವನ್ನು ಚಂದ ಮಾಡಿಕೊಳ್ಳುವುದು. ಅದಕ್ಕೆ ಬರುವ ಅಡೆ-ತಡೆಗಳನ್ನು ನಿವಾರಿಸಿಕೊಳ್ಳುವುದು. ಅದನ್ನು ರಾಜಕಾರಣಿಗಳು, "ಜೀವನ ಶಕ್ತಿ" ಮಾಡಬೇಕು ಎಂದು ಕೂರದಿರುವುದು! :) ಚಂದ ಅಂದರೇನು? ಅಡೆ-ತಡೆಯೇನು? ಇವನ್ನೆಲ್ಲಾ ಅವನೇ ಕಂಡುಕೊಳ್ಳಬೇಕು.
"ಹೊಣೆ , ಕರ್ತವ್ಯ ಇವೆಲ್ಲಾ ಒತ್ತಡಗಳು - ಪ್ರೀತಿಯಿದ್ದರೆ ಬೇಕಿಲ್ಲಾ."
ಇದನ್ನು ಜೆ.ಕೆ ಹೇಳುತ್ತಿದ್ದಂತೆ ನೆನಪು. (ಹೌದೆ?) ಮೊದಲ ಸಲ ಓದಿದಾಗ ಹೌದೆನಿಸಿಬಿಡುವ ಈ ಮಾತು ತುಂಬಾ ಡೇಂಜರಸ್. ಎಲ್ಲರನ್ನೂ ಪ್ರೀತಿಸು. ಪ್ರೀತಿವೊಂದೇ ಎಲ್ಲವನ್ನೂ ನಿವಾರಿಸಬಲ್ಲದು ಎಂಬಂಥ ಮಾತುಗಳು ಯುಜಿ ಹೇಳುವಂತೆ ಬರೇ ಅಮಲಿನ ಮಾತುಗಳು! :)
ನೀವು ಮೌನವಾಗಿ ಮಾಡುವುದೊಂದೇ ಸರಿ ಎಂದು ನಂಬುತ್ತೀರಿ. ಅದು ಎಲ್ಲರಿಗೂ ಎಲ್ಲ ಕಾಲಕ್ಕೂ ಹೊಂದುವುದಿಲ್ಲ ಎಂದು ನನ್ನ ಅನುಮಾನ. ಚರ್ಚೆ, ಜಗಳ, ಮಾತುಕತೆಗಳು ಮುಖ್ಯ. ಅದು ನಿಮಗೂ ಗೊತ್ತಿರುವುದರಿಂದಲೇ ಚರ್ಚೆಗೆ ತೊಡಗಿಕೊಳ್ಳುತ್ತೀರಿ ಅಲ್ಲವೆ? :)
ಉ: ರಂಜಾನ್ ಅರ್ಥ ಕುರಿತು
ನಿಜವಾಗಿಯೂ ನನಗೂ ಈ ಮಾತು ಸ್ವಲ್ಪ biased ಅನ್ನಿಸಿತು. ಪ್ರಪಂಚದ ಎಲ್ಲರಿಗೂ ( ಮುಸ್ಲಿಮರು, ಜ್ಯೂಗಳು, ಕ್ರಿಶ್ಚಿಯನ್ನರು, ಹಿಂದೂಗಳು) ಎಲ್ಲಾ ಕಾಲಗಳಲ್ಲೂ ( ರಮಾದನ್ ಕಾಲದಲ್ಲಿ ಮಾತ್ರವಲ್ಲ) ಬೇರೆಯವರ ಕಷ್ಟಗಳ ಬಗ್ಗೆ ಯೋಚನೆ ಬರಲೇಬೇಕು. ಇಸ್ರೇಲಿನಲ್ಲಿ ಭಯದಲ್ಲಿ ನರಳುತ್ತಿರುವ ಜ್ಯೂಗಳ, ಕಾಶ್ಮೀರದಿಂದ ಓಡಿಸಲ್ಪಟ್ಟ ಹಿಂದೂಗಳ, ಚೀನಾದ ಜೈಲುಗಳಲ್ಲಿ ನರಳುತ್ತಿರುವ ರಾಜಕೀಯ ಹೋರಾಟಗಾರರ, ಥಾಯ್ಲ್ಯಾಂಡಿನಲ್ಲಿ ಸಾಯುತ್ತಿರುವ ಸನ್ಯಾಸಿಗಳ ಬಗೆಗೂ ಯೋಚನೆ ಬಂದರೆ ( ಇದು ವಿರುದ್ಧ ದಿಕ್ಕಿನಲ್ಲೂ ನಡೆಯಬೇಕು) ಪ್ರಪಂಚ ಎಷ್ಟೋ ತಣ್ಣಗಾದೀತು.
"ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ"
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ರಂಜಾನ್ ಅರ್ಥ ಕುರಿತು
ಶ್ರೀನಿಧಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆಯಿಂದ ನನಗೆ ಯಾಕೆ ಅಚ್ಚರಿಯಾಗಲಿಲ್ಲ? ರಂಜಾನ್ ಹಬ್ಬದ ಸುತ್ತಮುತ್ತ ಯೋಚಿಸುತ್ತಾ ಆ ದೇಶಗಳು ಮನಸ್ಸಲ್ಲಿ ಸಹಜವಾಗಿ ಬಂದಿದ್ದು.
ನೀವು ಪಟ್ಟಿಮಾಡಿದ ದೇಶ/ಜನರ ಸ್ಥಿತಿ ನಿಮಗೆ ಚಿಂತೆಗೆ ಹಚ್ಚಿದ್ದರೆ ದಯವಿಟ್ಟು ನಮ್ಮೊಡನೆ ಹಂಚಿಕೊಳ್ಳಿ.
"ಇದು ವಿರುದ್ಧ ದಿಕ್ಕಿನಲ್ಲೂ ನಡೆಯಬೇಕು" - ಈ ಮಾತು ಮಾತ್ರ ನನಗೆ ಚಿಂತೆಗೆ ಹಚ್ಚಿತು. ಯಾರು ಯಾರ ವಿರುದ್ಧವಿದ್ದಾರೆ? ಈ ಮಾತಿನ ಹಿಂದೆ ಲೋಕವನ್ನು ಒಡೆದು ನೋಡುವ ದೃಷ್ಠಿ ಕಂಡದ್ದು ನನ್ನ ಚಿಂತೆಗೆ ಕಾರಣ.
ಉ: ರಂಜಾನ್ ಅರ್ಥ ಕುರಿತು
ಇಂದಿನ ಜಗತ್ತಿನಲ್ಲಿ ದೇಶಗಳ ನಡುವಿನ ಬಗೆಹರಿಸಲಾಗದ ಸಮಸ್ಯೆ ಗಳ ಬಗ್ಗೆ ಅಂತರ್ಜಾಲದಲ್ಲಿ ಓದಿದೆ. ಇಂತಹ ಸಮಸ್ಯೆಗಳಲ್ಲಿ ಎಷ್ಟೋ ಸಾಮ್ಯತೆಗಳು ಕಂಡುಬಂದವು. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ, ಇರಾಕ್ ಅಥವ ಪ್ಯಾಲಸ್ತೀನ್ ನಂತೆ ಆಗುವ ಎಲ್ಲ ಸಂಭವಗಳು ಇತ್ತೆಂದು ಅನ್ನಿಸಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಲ್ಪ ಮಟ್ಟಿಗೆ ಮೈಗೂಡಿಸಿಕೊಂಡ ಅಹಿಂಸೆ, ಸಹನೆಯಂತಹ ಗುಣಗಳೇ ಭಾರತವನ್ನು ಆ ಹಾದಿ ಹಿಡಿಯದಂತೆ ಕಾಪಾಡಿದವು ಎಂದನ್ನಿಸಿತು
ಜಗತ್ತಿನ ಮಹಾಶಕ್ತಿ ಗಳನ್ನು ಮಾತ್ರ ಇಂದಿನ ಸಮಸ್ಯೆಗೆ ಕಾರಣಕರ್ತರೆಂದು ದೂಷಿಸುವುದು, ಬರೆ ಅಂಶಿಕ ಸತ್ಯವಾಗುತ್ತದೆ.
ಇಂತಹ ಸಮಸ್ಯೆಗಳಲ್ಲಿ ಸಿಲುಕಿರುವ ಸಮಾಜಗಳ, ಹಾಗು ಅದರ ನಾಯಕರ ಸೃಜನಶೀಲತೆಯ ಕೊರತೆಯೇ ಈ ಸಮಸ್ಯೆಗಳನ್ನು ಬಗೆಹರಿಯದಂತೆ ಮಾಡುವ ಪ್ರಮುಖ ಕಾರಣವೆಂದು ನನ್ನ ಅನಿಸಿಕೆ.
ಇಂತಹ ಕೊರತೆಗಳನ್ನು ನೀಗಿಸುವವರೆಗೆ ಸಾವಿರ ರಂಜಾನ್ ವ್ರತ ಮಾಡಿದರೂ ಈ ಸಮಸ್ಯೆಗಳು ಬಗೆಹರಿಯುವುದಿಲ್ಲ.
ಶ್ರೀಕಾಂತ್
ಉ: ರಂಜಾನ್ ಅರ್ಥ ಕುರಿತು
ಶ್ರೀಕಾಂತರೆ,
ಇರಾಕ್ ಮತ್ತು ಪ್ಯಾಲಸ್ತೀನ್ನಂತೆ ಭಾರತ ಆಗಬಹುದಾದ ಸಂಭವಗಳ ಬಗ್ಗೆ ಯೋಚಿಸುತ್ತಿದ್ದೇನೆ. ಚರಿತ್ರೆ, ಭೂಗೋಳದ ಅಂತರದ ದೃಷ್ಟಿಯಿಂದ ಈ ಮಾತನ್ನು ಹೇಗೆ ಅರಿಯುವುದು ಎಂಬುದೇ ಪ್ರಶ್ನೆಯಾಗಿದೆ.
ಆಂಶಿಕ ಸತ್ಯವೆನ್ನುವ ಮಾತು ನಿಜ. ಆದರೆ, ಎಷ್ಟಂಶ ಎನ್ನುವುದು ನಮ್ಮ ನಮ್ಮ ನಿಲುವಿಗೆ ತಳುಕು ಹಾಕಿಕೊಂಡಿರುತ್ತದೆ ಎಂದು ನನ್ನೆಣಿಕೆ.
ಸಮಾಜಗಳ ಹಾಗೂ ಅದರ ನಾಯಕರ ಸೃಜನಶೀಲತೆಯ ಕೊರತೆ - ಸಮಸ್ಯೆಗಳಿಗೆ ಕಾರಣವಾಗುವುದರ ಬಗ್ಗೆ ನನಗೆ ತುಂಬಾ ಅನುಮಾನವಿದೆ. ಇದು ಸಾರಾ ಸಗಟಾದ ನಿಲುವು ಅಲ್ಲವೆ? ಇದರ ಬಗ್ಗೆ ಯೋಚಿಸುತ್ತಿದ್ದಂತೆ, ನನ್ನ ಅಲ್ಪ ಓದಿನಲ್ಲೇ "ಸಮಸ್ಯೆಗಳಲ್ಲಿ ಸಿಲುಕಿರುವ ಸಮಾಜಗಳ" ಹತ್ತು ಹಲವಾರು ಸೃಜನಶೀಲ ವ್ಯಕ್ತಿತ್ವವುಳ್ಳ ನಾಯಕರು ನೆನಪಾದರು. ಇನ್ನು ಬಲಿಷ್ಟ ನಾಡುಗಳ ನಾಯಕರ ಸುಳ್ಳು, ಕಪಟಗಳ ಮೂಲಕ ಬಹಿರಂಗವಾಗುವ ಅವರ ಸೃಜನಶೀಲತೆಯ ಕೊರತೆಯೂ ನೆನಪಾಯಿತು.
ರಂಜಾನ್ ವ್ರತದ ಮೂಲಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನನ್ನ ನಿಲುವಲ್ಲ. ಬೇರೆ ಪ್ರತಿಕ್ರಿಯೆಯಲ್ಲಿ ಹೇಳಿದ ಹಾಗೆ ಅದೊಂದು ಉದ್ಗಾರವಷ್ಟೆ. ಆ ಉದ್ಗಾರದ ಪರಿಣಾಮ ಮಾತ್ರ ನಾನ್ನಂದು ಕೊಂಡದ್ದಕ್ಕಿಂತ ತೀವ್ರವಾಗಿರುವುದು ಈಗ ನನ್ನ ಅರಿವಿಗೆ ಬರುತ್ತಿದೆ. :)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.