ಅನಿವಾಸಿ
*~*~*~*
ಜಗದಗಲ
ಸಿಡ್ನಿಯಲ್ಲಿ ಹುಲ್ಲು
ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು
ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ
ಮೂಲೆಯಲ್ಲಿ
ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು
ಶಿಕಾಗೋದ ಏ.ಕೆ.ರಾಮಾನುಜಂ
"ಹಚ್ಚಗೆ" ನಗುತ್ತಾರಲ್ಲ!

- anivaasi ರವರ ಬ್ಲಾಗ್
- Login or register to post comments
- 317 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಜಗದಗಲ
ಚೆನ್ನಾಗಿದೆ ಅನಿವಾಸಿಗಳೇ...
ಸಿಡ್ನಿಯಲ್ಲಿ ನಿಮ್ಮನ್ನು ಕಾಡುವ ಈ ರಾಮಾನುಜರು ನನಗೆ ಬೆಂಗಳೂರಿನಲ್ಲಿ ಕಾಡುತ್ತಾರೆ. ಹೀಗೊಮ್ಮೆ ಕಾಡಿದಾಗ ಅವರ ಸಾಲುಗಳಿಗೆ ನನ್ನದೂ ಒಂದೆರಡು ಸಾಲುಗಳನ್ನು ಹಚ್ಚಿ ಸಂತೋಷಪಟ್ಟಿದ್ದೇನೆ. ಅದರ ಹಿನ್ನೆಲೆ ಹೀಗಿದೆ - ನಾವೊಮ್ಮೆ ಕೆಲವು ವಿದೇಶಿ ಮಿತ್ರರೊಂದಿಗೆ ಚಾರಣ ಹೋಗಿದ್ದೆವು. ಅಲ್ಲಿಂದ ಹಿಂದಿರುಗುವಾಗ ಹಳ್ಳಿಯ ಅಂಗಡಿಯೊಂದರಲ್ಲಿ ದಣಿವಾರಿಸಿಕೊಳ್ಳಲು ನಿಂತಿದ್ದೆವು. ನಮ್ಮಲ್ಲಿ ಕೆಲವರು ಗೋಲಿ ಸೋಡಾ ಕುಡಿಯುತ್ತ ತಮ್ಮ ಬಾಲ್ಯಕ್ಕೆ ಮರಳಿದರೆ ಇನ್ನಿತರರು ಕೋಕ್ ಕುಡಿಯುತ್ತಿದ್ದರು. ಆದರೆ ನಮ್ಮ ವಿದೇಶಿ ಮಿತ್ರನೊಬ್ಬ ಮಂಗಳೂರು ಗಣೇಶ ಬೀಡಿಯನ್ನು ಗುರುತುಹಚ್ಚಿ ಕೊಂಡು ಸೇದಿ ಸುಖಿಸುತ್ತಿದ್ದ. ಕೇಳಿದರೆ ಅವನ ದೇಶದಲ್ಲಿ ಈ ಬೀಡಿಗೆ ಭಾರೀ ಬೇಡಿಕೆಯಿದೆ ಎಂದ. ಇಲ್ಲಿ ಇದಕ್ಕೆ ಇಷ್ಟು ಕಡಿಮೆ ಬೆಲೆಯೆಂದು ಸಿಕ್ಕಾಪಟ್ಟೆ ಖುಷಿಯಾಗಿ ಒಂದು ದೊಡ್ಡ ಪೆಟ್ಟಿಗೆಯನ್ನೇ ಖರೀದಿಸಿದ ! ಆಗ ತುಂಬಾ ನೆನಪಾದ ರಾಮಾನುಜಂ ಪದ್ಯಕ್ಕೆ ನನ್ನದೂ ಎರಡು ಸಾಲು ಸೇರಿಸಿಬಿಟ್ಟೆ -
ಕಾಡುಮರಗಳ ಮಧ್ಯೆ ಮನೆ
ಸಿಮೆಂಟು ಬಿರುಕಿನ ನಡುವೆ ಹುಲ್ಲು
ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ
ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಜಿರೆಯಲ್ಲಿ ಕೋಕಾಕೋಲಾ
ಟೆಕ್ಸಾಸಿನಲ್ಲಿ ಗಣೇಶ ಬೀಡಿ ...
ರಾಮಾನುಜರ ನೆನಪಿಗೆ ಕಾರಣವಾದ ಸಿಡ್ನಿಗೂ ನಿಮಗೂ ನಮೋ ನಮಃ
ಉ: ಜಗದಗಲ
ರಾಮಾನುಜರ ಈ ಸಾಲುಗಳನ್ನು ಓದದವರಿಗೆ ಅನಿವಾಸಿಯವರು ಬರೆದದ್ದು ಅರ್ಥವಾಗಲಿಕ್ಕಿಲ್ಲ. ಹೀಗಾಗಿ ಅದನ್ನು ಅರ್ಥವಾಗುವಂತೆ ವಿವರಿಸಿದ ನಿಮಗೂ ನಮೋ ನಮಃ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಜಗದಗಲ
ಪ್ರಶಾಂತ್-
ಅವರೆಲ್ಲಾ ಅಮರರಾಗೋದು ಅಂದರೆ ಇಲ್ಲಿ ನಾನು ಬರಕೊಂಡ ಬಗೆಯಲ್ಲೇ ಅಲ್ವ?
ರಾಮಾನುಜಂ ಅಷ್ಟೆ ಯಾಕೆ ಸಿಡ್ನಿಯಲ್ಲಿ ನನಗೆ ಯಾರಾರೋ ಕಾಣ್ತಾರೆ, ಮಾತಾಡಿಸ್ತಾರೆ
ನನಗೆ ಸಿಮೆಂಟು, ಬಿರುಕು, ಹುಲ್ಲು, ಕೊತ್ತಂಬರಿ ಸೊಪ್ಪಿನ ಹಾಗೆ, ರಾಮಾನುಜಂ ಕೂಡ ಒಂದು ಪ್ರತಿಮೆ ಆಗ್ತಾರೆ. ಕನ್ನಡ ಮನಸ್ಸು ಜಗದಗಲ ಆಗೋದು ಹೀಗೆ ಅಂತ. ಭೌಗೋಲಿಕವಾಗಿ, ಆದರೆ ಬರೇ ಭೌಗೋಲಿಕವಾಗಿ ಅಲ್ಲ. ಶಿಕಾಗೋದ ಅಮೇರಿಕನ್ ಮಾರ್ಕೆಟ್, ಸಿಡ್ನಿಯ ಗಲ್ಲಿಗಳು, ಕನ್ನಡ ಮನಸ್ಸೊಳಗೆ ಹಿಂಬಾಗಿಲಿನಿಂದ ಸೇರಿಕೊಳ್ಳೋದು ಹೀಗೆ ಅಂತ.
ಕನ್ನಡ ಜನರಿಗೆ ಬೇಕೋ ಬೇಡವೋ, ಹೊರಗಿರುವ ನನ್ನಂಥವರು ಅನಿವಾರ್ಯವಾಗಿ ಇಂಥವನ್ನು ಮಾಡಬೇಕಾಗತ್ತೆ. ಅದಕ್ಕೇ ನಮ್ಮ ನಮ್ಮದೇ ಒತ್ತಡಗಳಿರ್ತಾವೆ...
ಅವೆಲ್ಲಾ ಇರಲಿ, ರಾಮಾನುಜಂ ಪದ್ಯ ಹಾಕಿದ್ದಕ್ಕೆ ಥ್ಯಾಂಕ್ಸ್ ರೀ.
ಹರಿ, ಅಂದ ಹಾಗೆ ನಾನು ಬೇಕಂತಲೇ ಪದ್ಯ ಹಾಕಲಿಲ್ಲ. ಯಾರಿದು "ಕೊತ್ತಂಬರಿ ಸೊಪ್ಪು ಹಿಡಿದು ನಿಂತ ಶಿಕಾಗೋದ ಏ.ಕೆ.ರಾಮಾನುಜಂ" ಅಂತ ಹುಡುಕೋಕೆ ಹೊರಟವರಿಗೆ ರಾಮನುಜಂರ ಬೇರೆ ಅಚ್ಚರಿಗಳು ಎದುರಾಗಬಹುದು ಅನ್ನೋ ಹುನ್ನಾರದಲ್ಲಿ!
ಉ: ಜಗದಗಲ
ಸೇರಿಸಿರುವ ಲಿಂಕುಗಳು ಹೆಚ್ಚು ಕಡಿಮೆಯಾಗಿವೆ. ಸರಿಯಾದ ಲಿಂಕುಗಳು ಹೀಗಿವೆ:
ಅವರೆಲ್ಲ ಅಮರರಾಗುವ ಬಗೆ - http://www.sampada.net/blog/anivaasi/16/08/2007/5421
ಸಿಡ್ನಿಯ ಗಲ್ಲಿಗಳು - http://www.sampada.net/blog/anivaasi/24/09/2007/5771
ರಿಲಯನ್ಸ್ ಕಂಪೆನಿಯವರ ಕೆಟ್ಟ ಇಂಟರ್ನೆಟ್ ಕನೆಕ್ಷನ್ ಕೊಂಡ ತಪ್ಪಿಗೆ ಡಯಲ್ ಅಪ್ ಮತ್ತೆ ಜೀವನದಲ್ಲಿ ಉಪಯೋಗಿಸುವುದಿಲ್ಲ ಎಂದುಕೊಂಡವನು ಸದ್ಯಕ್ಕೆ ಮತ್ತೆ ಡಯಲ್ ಅಪ್ ಆಶ್ರಯವನ್ನೇ ಪಡೆದು ಇಂಟರ್ನೆಟ್ ದರ್ಶನ ಪಡೆಯುತ್ತಿರುವೆ. ಕೆಲವು ದಿನಗಳ ನಂತರ ರಾಮಾನುಜಂ ಬಗ್ಗೆ ಸ್ವಲ್ಪ ಹುಡುಕಾಡಿ ಓದಿಕೊಳ್ಳುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa