ನಮಸ್ಕಾರ ಸ್ವಾಮಿ
ಕೆಲವು ಅನಿಸಿಕೆಗಳು, ಬರಹಗಳು, ವಿಚಾರಗಳು.
ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
----------------------------------------
ಪುಟ್ಟದೊಂದು ಸರ್ಜರಿಯ ಕಾರಣಕ್ಕೆ, 'ಗೃಹಬಂಧನ'ದಲ್ಲಿರುವ ಈ ಅವಧಿಯಲ್ಲಿ
ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ್ ಹೇಗಪ್ಪಾ ಎಂಬ ಸಮಸ್ಯೆ
ನನಗೆ ಮೊದಲಿನಿಂದಲೂ ಇಲ್ಲ. ನಾನು ಓದಲೇಬೇಕಾಗಿರುವ ಪುಸ್ತಕಗಳು, ಕೇಳಲೇಬೇಕಾಗಿರುವ
ಸಂಗೀತ, ನೋಡಲೇಬೇಕಾಗಿರುವ ಕ್ಲಾಸಿಕ್ ಸಿನೆಮಾಗಳು ಧಂಡಿಯಾಗಿರುವಾಗ, ಉಳಿದಿರುವ
ಜೀವನಪರ್ವವೇ ಸಾಲದೇನೋ ಎನ್ನುವಾಗ, ಎಷ್ಟು ಸಮಯವಿದ್ದರೂ ಸಾಲದು. ಒಂದಿಷ್ಟು ಟಿವಿ
ಹಾಕಿಕೊಂಡೆ.
ಈ ಕಿರುತೆರೆಯ ಪೆಟ್ಟಿಗೆಯಲ್ಲಿ ೭೦ - ೮೦ ವಾಹಿನಿಗಳಿವೆ. ಆದರೂ ಕೆಲವೊಮ್ಮೆ, ಈ
ವಾಹಿನಿಗಳ ಲೋಕದಲ್ಲಿ ಅದೆಷ್ಟೆಷ್ಟು ಸುತ್ತಾಡಿದರೂ, ಚಂದದ ಕಾರ್ಯಕ್ರಮವೊಂದೂ
ಸಿಕ್ಕುವುದಿಲ್ಲ. ಹಿಮೇಶ್ ರೇಶಮ್ಮಯ್ಯ - ಎ.ಆರ್.ರೆಹಮಾನ್ ಅಂತಹವರು ಹಾಡುವಾಗ, ಇವರ
ಪ್ರತಿಭೆಗಿಂತ, ಇವರಿಗೆ ಸಿಕ್ಕ - ಸಿಕ್ಕುತ್ತಿರುವ ಅವಕಾಶಗಳೇ ಜಾಸ್ತಿ
ಅನ್ನಿಸುತ್ತದೆ. ಅದಕ್ಕಿಂತ ಈ ಹಾಡುಗಳ ಅತಿಯಾದ ಪುನಃಪ್ರಸಾರ ತಲೆ ಚಿಟ್ಟು
ಹಿಡಿಸುತ್ತದೆ.
ಹಿಂದೀ ಚಿತ್ರರಂಗದ ಅದೃಷ್ಟವೋ - ಸೌಭಾಗ್ಯವೋ, ಹಿಂದೊಮ್ಮೆ ಮಹಾನ್ ಪ್ರತಿಭೆಗಳೆಲ್ಲಾ
ಒಟ್ಟುಗೂಡಿ ಮರೆಯಲಾಗದ ಮಹಾನ್ ಗೀತೆಗಳ - ಮಹಾನ್ ಸಂಗೀತದ ಸೃಷ್ಟಿಗೆ ಕಾರಣರಾದರು.
ಐವತ್ತರ - ಅರವತ್ತರ ದಶಕಗಳ ಚಿತ್ರಸಾಹಿತಿಗಳಾಗಲೀ, ಸಂಗೀತ ನಿರ್ದೇಶಕರಾಗಲೀ, ಈ
ಸೃಷ್ಟಿಯ ಉಪಕರಣಗಳಾದರು. ಮುಖೇಶ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಹೇಮಂತ್
ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆ ಅವರೆಲ್ಲರ ಗಾಯನ ಪ್ರತಿಭೆಗೆ ಸಚಿನ್ದೇವ್
ಬರ್ಮನ್, ಶಂಕರ್-ಜೈಕಿಷನ್, ಮದನ್ ಮೋಹನ್, ನೌಶಾದ್, ವಸಂತ್ ದೇಸಾಯಿ, ಓ.ಪಿ.ನಯ್ಯಾರ್
ಅಂತಹ ಸಂಗೀತ ನಿರ್ದೇಶಕರಿಗೆ ದೊರೆತ ಚಿತ್ರಸಾಹಿತಿಗಳೂ ಅಂತಹ ಘಟಾನುಘಟಿಗಳೇ.
ಶೈಲೇಂದ್ರ, ಹಸರತ್ ಜೈಪುರಿ, ಭರತ್ ವ್ಯಾಸ್, ಶಕೀಲ್ ಬದಾಯುನಿ, ಮಜ್ರೂಹ್
ಸುಲ್ತಾನ್ಪುರಿ, ಒಬ್ಬೊಬ್ಬರ ಕೊಡುಗೆಯೂ ಅಪೂರ್ವವೇ. ಇಲ್ಲಿ ಶಾಂತಾರಾಮ್,
ರಾಜ್ಕಪೂರ್ ಅಂತಹ ಚಿತ್ರನಿರ್ಮಾತೃಗಳ ಕೊಡುಗೆಯೂ ಕಡಿಮೆಯದಲ್ಲ.
ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರು ಹಾಡಿದ "ಸುನ್ ಮೇರೇ ಬಂಧೂರೇ, ಸುನ್ ಮೇರೇ
ಮಿತುವಾ", ಮತ್ತೆ ಮತ್ತೆ ಕಿವಿಗಳಲ್ಲಿ ಅನುರಣಿಸುತ್ತದೆ. ಚಿತ್ರಸಾಹಿತಿ ಆನಂದ್
ಭಕ್ಷಿ ಅನೇಕ ನೂರು ಜನಪ್ರಿಯ ಚಿತ್ರಗೀತೆ ಬರೆದಿದ್ದಾರೆ. ಅವರು "ಮೋಮ್ಕೀ ಗುಡಿಯಾ"
ಚಿತ್ರಕ್ಕಾಗಿ ಬರೆದು - ಹಾಡಿದ "ಬಾಗ್ಞೋ ಮೇ ಬಹಾರ್ ಆಯೀ ಹೋಟ್ಞೋಸೆ ಪುಕಾರ್ ಆಯೀ ಅಜಾ
ಆಜಾ" ಅದ್ಭುತವಾಗಿತ್ತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ, ಅವರ ಸರಿಸಮನಾಗಿ
ಯುಗಳಗೀತೆ ಹಾಡಿದ್ದರು. ಸಂಗೀತ ನಿರ್ದೇಶಕ ಮದನ್ ಮೋಹನ್ ಅತ್ಯುತ್ತಮ ಸಂಗೀತ
ನೀಡಿದ್ದಾರೆ. "ದಸ್ತಕ್" ಚಿತ್ರಕ್ಕಾಗಿ ಅವರೇ ಹಾಡಿ-ನಿರ್ದೇಶಿಸಿದ "ಓ ಮಾಯಿರೇ, ಮೈ
ಕ್ಞಾ ಸೆ ಕಹ್ಞೂ ಅಪನೇ ಪಿಯಾಕೀ" ಹಾಡಂತೂ ಆ ಸಿನೆಮಾದಲ್ಲಿ ಇಲ್ಲದಿದ್ದರೂ
ಜನಪ್ರಿಯವಾಗಿತ್ತು. ರೇಡಿಯೋದಲ್ಲಿ ಅದು ಪ್ರಸಾರವಾಗುವುದನ್ನು ನಾವು ಕಾದು ಕೂತು
ಕೇಳುತ್ತಿದ್ದೆವು.
ಅರವತ್ತು - ಎಪ್ಪತ್ತರ ದಶಕದಲ್ಲಿ ನಮ್ಮಲ್ಲೂ ಹೀಗೆಯೇ ಕೆಲವು ಸಂಗೀತ ನಿರ್ದೇಶಕರು,
ಹಾಗೂ ಒಂದಿಷ್ಟು ಜನ ನಟರು - ಹಾಡಿದಾಗ, ನಾವೆಲ್ಲ ತುಂಬ ಸಂಭ್ರಮ ಪಟ್ಟಿದ್ದಿದೆ.
ಜಿ.ಕೆ.ವೆಂಕಟೇಶ್ ಅವರು ಹಾಡಿದ
"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ, ಸೂತ್ರವ ಹರಿದಾ ಗೊಂಬೆಯ ಮುರಿದ"
"ವಿರಸವೆಂಬ ವಿಷಕೆ ಬಲಿಯಾದೆಯೇತಕೆ",
ಅಂತೆಯೇ, (ರಾಜನ್ - ನಾಗೇಂದ್ರ ಖ್ಯಾತಿಯ) ನಾಗೇಂದ್ರ ಹಾಡಿದಾಗಲೂ ವಿಶೇಷ
ಎನ್ನಿಸಿತ್ತು. ರವಿ (ಕೆ.ಎಸ್.ಎಲ್.ಸ್ವಾಮಿ) ಹಾಡಿದ
"ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು, ನಗತಾದ ಭೂತಾಯಿ ಮನಸು"
ಅಂತೂ ದಾಖಲೆಯನ್ನೇ ನಿರ್ಮಿಸಿತು. ನಟ ಆರ್.ಎನ್.ಸುದರ್ಶನ್ ಅವರು ಹಾಡಿದ "ಹೂವೊಂದು
ಬಳಿ ಬಂದು ತಾಕಿತು ಎನ್ನೆದೆಯಾ" ಇತ್ಯಾದಿ ಹಾಡುಗಳು ಗಾಯನಶೈಲಿಯ ಮೃದುತ್ವದ ವಿಶಿಷ್ಟ
ಅಭಿವ್ಯಕ್ತಿ ಎಂದೆನಿಸಿದ್ದುಂಟು. ಪುಟ್ಟಣ್ಣ ಕಣಗಾಲ್ ಅಂಥ ನಿರ್ದೇಶಕರು, ಅವರ
ಪ್ರಯೋಗಶೀಲತೆ, ಅವರು ಹೊಸ ಕಲಾವಿದರನ್ನು ಪರಿಚಯಿಸುತ್ತಿದ್ದುದು ನೆನಪಾಗುತ್ತಿದೆ.
ಅಂದಿನ ಲೋಕದ ಬಗೆಯೇ ಬೇರೆ. ಆಫ್-ಸ್ಕ್ರೀನ್ ಕಲಾವಿದರ - ಸಂಗೀತ ನಿರ್ದೇಶಕರ - ಆ
ಸಂಗೀತ ಸಾಧನಗಳ, ಮುಖ ಪರಿಚಯವೇ ಇರಲಿಲ್ಲ. ನಮ್ಮ ಕಿವಿಗಳ ಮೂಲಕವೇ ಅವರೆಲ್ಲರ
ಪರಿಚಯ. ಅಂದಿನದು ಬರಿಯ ಶ್ರವ್ಯ-ಪ್ರಪಂಚ.
ಹಾಗೆಂದೇ, ಈಗಲೂ ಹಿಮಾಲಯದ ಯಾವುದೋ ಉತ್ತುಂಗದಲ್ಲಿ, ಮಲೆನಾಡಿನ ಕಾಡಿನ
ಮೂಲೆಯೊಂದರಲ್ಲಿ, ಕಣ್ಣು ಮುಚ್ಚಿದರೆ ಸಾಕು, ಕಿವಿಯಲ್ಲಿ ರಾಗಸುಧೆ ಹರಿಯುತ್ತದೆ.
ಧ್ಯಾನ - ಮೆಡಿಟೇಶನ್ ಎಂದು ಕುಳಿತರೂ ಅದೇ ಸ್ವಪ್ನಲೋಕದ ಧಿಮಿಧಿಮಿ. ಸಂಗೀತ
ನಿರ್ದೇಶಕ ಹೇಮಂತ್ ಕುಮಾರ್ ಹಾಡಿದ "ತುಮ್ಹೇ ಯಾದ್ ಹೋಗಾ ಕಭೀ ಹಂ ಮಿಲೇಥೆ,
ಮೊಹಬ್ಬತ್ ಕೀ ರಾಹ್ಞೋ ಮೇ ಮಿಲ್ ಕೇ ಚಲೇಥೇ", "ನ ತುಮ್ ಹಮೇ ಜಾನೋ, ನ ಹಂ ತುಮ್ಹೆ
ಜಾನೇ", ಅಂತೆಯೇ ಎಸ್.ಡಿ.ಬರ್ಮನ್ ಹಾಡಿದ "ವಹ್ಞಾ ಕೌನ್ ಹೈ ತೇರಾ ಮುಸಾಫಿರ್ ಜಾಯೆಗಾ
ಕಹ್ಞಾ", "ಮೇಘ್ದೇ, ಪಾನಿದೇ" ನೆನಪಾದರೆ ಅಚ್ಚರಿಯಿಲ್ಲ. ಆ ಹಾಡುಗಳೇ ಹಾಗೆ. ಸ್ವತಃ
ಆ ಸಂಗೀತ ನಿರ್ದೇಶಕರಿಗೆ ತಾವೇ ಹಾಡಿಬಿಡೋಣ ಎನಿಸಿದಂಥವು ಅವು.
ಕೆಲವು ಸಂಗೀತ ನಿರ್ದೇಶಕರ - ಕಲಾವಿದರ ಗಾಯನ ಪ್ರತಿಭೆಯನ್ನು, ನಮ್ಮ ಸಿನೆಮಾ ಪ್ರಪಂಚ
ಇನ್ನಷ್ಟು ಬಳಸಿಕೊಳ್ಳಬಹುದಿತ್ತು, ಎಂದೆನಿಸುವಾಗ ವಿಸ್ಮಯದ ಭಾವ.
ಮಂಜುನಾಥ ಅಜ್ಜಂಪುರ.

- anmanjunath ರವರ ಬ್ಲಾಗ್
- Login or register to post comments
- 215 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: