ಕವಿತೆ ಗರ್ಭಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ
ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ
ಕವಿ ನನಸಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ,
ಭಗ್ನ ಪ್ರೇಮಿಯೋ ಎಂದರಿತ ನಂತರವೇ ಹೊರ ಬರುವುದಲ್ಲ
ಪ್ರೀತಿಯನ್ನು ಹುಡುಕುತ್ತಿದ್ದಾನೋ, ಇಲ್ಲ ಪ್ರೀತಿಯ ಮುಂಗಾರಿನಲ್ಲಿ
ಕವಿ ತೊಯ್ದಿರುತ್ತಾನೋ ಎಂದು ತಿಳಿದು ಕವಿತೆ ಹೊರ ಬರುವುದಿಲ್ಲ
ಕವಿಯ ಆಂತರಿಕ ಹೊಯ್ದಾಟಗಳು ಪದಗಳ ರೂಪ ತಳೆವಾಗಲೆಲ್ಲಾ
ಬಾಹ್ಯದ ಆಗುಹೋಗುಗಳಿಗೆ ಕವಿ ಭಾವ ಸ್ಪಂದನ ಆಗುವಾಗಲೆಲ್ಲಾ
ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗತ್ತಿಗೆ
ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ
ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ
ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ
ಕವಿತೆ ಮನವ ಮುಟ್ಟಲು ಮನ ಮುದಗೊಂಡರೆ ಆನಂದದನುಭಾವ
ಭಾವನೆಗಳನ್ನರಿಯಲು ಓದುಗನಿಗಿರಬೇಕು ವಿಶಾಲ ಮನೋಭಾವ
ಕವಿತೆ ಓದುವಾಗ ಕವಿ ಯಾರೆಂಬುದು ಯಾವಾಗಲೂ ಅಲ್ಲಿ ಗೌಣ
ಯಾವುದೇ ಕವಿತೆಗಾದರೂ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
-ಆಸು ಹೆಗ್ಡೆ, ಬೆಂಗಳೂರು









ಪ್ರತಿಕ್ರಿಯೆಗಳು
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಇಷ್ಟು ಚೆ೦ದದ ಕವಿತೆಗೆ ೨೧೨ ಹಿಟ್ಸುಗಳಾದರೂ ಒ೦ದೂ ಪ್ರತಿಕ್ರಿಯೆ ಬಾರದಿರುವುದು ಆಶ್ಚರ್ಯ ತ೦ದಿದೆ..!!
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಕಾರಣವಿದೆ !
ಆಗ ನಾನಿನ್ನು ಸಂಪದ ಸೇರಿರಲಿಲ್ಲವೆ !
:-))))))))))))))))))))
-ಪಾರ್ಥಸಾರಥಿ
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಹತ್ತಿಪ್ಪತ್ತು ಪ್ರತಿಕ್ರಿಯೆಗಳ ಜೊತೆಗೆ
ಮೂರು-ನಾಲ್ಕುನೂರು ಪೆಟ್ಟು ತಿಂದ
ಬರಹಗಳಿಗಿಂತ ಪ್ರತಿಕ್ರಿಯೆಗಳಿಲ್ಲದೆಯೇ
ನೂರಾರು ಪೆಟ್ಟುಗಳ ತಿಂದ ಬರಹವೇ
ಬಹು ಪಾಲು ಲೇಸೆಂದ ಈ ಅಲ್ಪಜ್ಞ!!!
(“ಪೆಟ್ಟು ತಿಂದ” ಅನ್ನುವ ಪದಗಳನ್ನು “hits ಪಡೆದ” ಅನ್ನುವ ಪದಗಳಿಗೆ ಪರ್ಯಾಯವಾಗಿ ಬಳಸಿದ್ದೇನೆ )
:)
-ಆಸು ಹೆಗ್ಡೆ
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಆಸು ಸಾರ್
ಬಿಡಿ ಹಾಗಿದ್ದಲ್ಲಿ ಪ್ರತಿಕ್ರಿಯೆಯಿಲ್ಲದ ಪೆಟ್ಟುತಿಂದ ! ಲೇಸಿನ ಅಲ್ಪಜ್ಞರ ಗುಂಪಿನಲ್ಲಿ ನಾನು ಇರುವೆ ಅನ್ನುವುದೆ ಸಂತಸ
(ನಿಮ್ಮ ಹೆಸರು ಹೇಳಿ ನಿಮ್ಮ ಗುಂಪಿನಲ್ಲಿ ಸೇರಿ ನನ್ನ ಬೆನ್ನು ತಟ್ಟಿಕೊಂಡ ಕ್ರಿಯೆಗೆ ತಮ್ಮ ಸಮ್ಮತಿಯನ್ನು ಉಹಿಸಿ ಬರೆದಿರುವೆ)
-ಪಾರ್ಥಸಾರಥಿ
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಅರ್ಥಪೂರ್ಣ ಕವಿತೆ. ಆದರೆ ಇಷ್ಟು ಕಾಲ ಕಣ್ಣಿಗೆ ಬೀಳದೆ ಮರೆಯಾಗಿತ್ತೇಕೆ? ಬಹುಶಃ ಎಲ್ಲ ಮಾಣಿಕ್ಯಗಳೂ ಹೀಗೇ ಮರೆಯಲ್ಲಿಯೇ ಇರುತ್ತವೆಯಲ್ಲವೇ?? :-)
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಆಸು ಹೆಗ್ಡೆ ಅವ್ರೆ-
ಈ ನಡುವೆ ನನ್ನ ಉತ್ಖನನದಲಿ ಹಲ ಅರ್ಥಾವತಾದ-
ಒಳ್ಳೋಲೆ ಬರಹಗಳೂ ಮತ್ತ್ತೆ ಹೊರ ಬರುತ್ತಿವೆ...
ಇದರಲ್ಲಿ ಈ ನಿಮ್ಮ ಬರಹವೂ ಒಂದು,
ಅದೊಮ್ಮೆ ಮಧ್ಯರಾತ್ರಿ ನಾ ಕವಿತೆಗೆ ಕಾರಣ ಹುಡುಕುತ್ತಾ ಏನೋ ತೋಚಿದ್ದು ಬರ್ದಿದ್ದೆ,
ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) | ಸಂಪದ - Sampada
http://sampada.net/%...
ಈಗ ನಿಮ್ಮ ಈ ಕವನ ಓದಿ, ನನ್ ಕೆಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು...
ಪ್ರತಿಕ್ರಿಯೆಗಳು ಮುದ ನೀಡಿದವು..
ಅದರಲ್ಲೂ ಗುರುಗಳದು(ಪಾರ್ಥ ಸಾರಥಿ) ......
ಕವನ ನಂಗೆ ಬಹು ಹಿಡಿಸಿತು..
ಅದರ ಅರ್ಥ ವ್ಯಾಪ್ತಿಯಿಂದಾಗಿ...
ಉ: ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಉತ್ತಮವಾಗಿದೆ. ಮತ್ತೆ ಮತ್ತೆ ಓದಿದೆ.