25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತೀರ್ಥರೂಪರ ಸ್ಮರಣೆಯಲ್ಲಿ!!

March 28, 2009 - 12:52pm
asuhegde

 

 
ಡಾ. ಯು. ಚಂದ್ರಶೇಖರ್
ಪಯಣ: ಶುಕ್ರವಾರ, ೧೧ ಮಾರ್ಚ್ ೧೯೨೭ ರಿಂದ
ಶುಕ್ರವಾರ, ೨೮ ಮಾರ್ಚ್ ೨೦೦೩ರವರೆಗೆ.
ನೀವು ನಮ್ಮನ್ನಗಲಿ ಆರು ವರುಷಗಳು ಕಳೆದರೂ ಎಲ್ಲವೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ. ನಿಮ್ಮ ಅಂದಿನ ನುಡಿಗಳೇ ಇಂದಿಗೂ ಹೆಜ್ಜೆ ಹೆಜ್ಜೆಗೂ ನನಗೆ ಮಾರ್ಗದರ್ಶನ ನೀಡುತ್ತಿವೆ.
ನೀವು ನಮ್ಮನ್ನಗಲಿದ  ಮೂರು ದಿನದ ನಂತರ ನಾನು ಬರೆದ ಕವನ ಇಲ್ಲಿದೆ.
ಓದ ಬಲ್ಲಿರಾ ಅಲ್ಲಿಂದಲೇ? ಓದಿ ನನ್ನಿಚ್ಛೆಯನ್ನು ನಡೆಸಿಕೊಡಬಲ್ಲಿರಾ?
ನಿಮ್ಮ ಮೊಮ್ಮಗ ಕೃಷ್ಣರಾಜ ಬರೆಯಲೆತ್ನಿಸಿದ ನಿಮ್ಮ ಚಿತ್ರವೂ ಇಲ್ಲಿದೆ.
 
 

 
 
 
 
 
 
 
 
 
 
 
 
 
 
 
 
 
 
ಬನ್ನಿ ಅಪ್ಪಯ್ಯ, ನನ್ನಲೊಂದಾಗಿ!
 
ಅಪ್ಪಯ್ಯಾ,
ಹಿಂದೆ ಎಲ್ಲಿಗೆ ಹೊರಡುವಾಗಲೂ ನೀವು,
ನಮ್ಮನ್ನೆಲ್ಲಾ ಕರೆದು, ನೀವಿಲ್ಲದಾಗ ನಾವು,
ಇಲ್ಲಿ ಮನೆಯಲ್ಲಿ ಹೇಗಿರಬೇಕೆಂದು ತಿಳಿಸಿ
ಬಸ್ಸು ಹತ್ತುತ್ತಿದ್ದವರು ನಮ್ಮೆಲ್ಲರ ಹರಸಿ;
 
ಇಂದು ಕಿವಿಗೊಟ್ಟು ನಿಲ್ಲದೇ ನಮ್ಮ ಕೂಗಿಗೆ,
ಇನ್ನೆಂದಿಗೂ ಮರಳಿ ಬಾರದ ದೂರದೂರಿಗೆ;
ಹೊರಟೇ ಹೋದಿರಲ್ಲಾ ಅಪ್ಪಯ್ಯಾ ನೀವು,
ಎಂತಿರಬೇಕು ನಿಮನ್ನಗಲಿ ಇಲ್ಲಿ ನಾವು?
 
ಕಾಣ ಸಿಕ್ಕಿರಬಹುದು ನಿಮಗಲ್ಲಿ ನಿಮ್ಮಮ್ಮ-ಅಪ್ಪ,
ನಮ್ಮ ಮುದ್ರಾಡಿಯಜ್ಜ, ಮತ್ತೆ 'ಗುಡ್‌ಗುಡ್' ದೊಡ್ಡಪ್ಪ;
ಸಿಕ್ಕಿರಬಹುದು ನಿಮಗೆ ನಿಮ್ಮ ಮೆಚ್ಚಿನ ಕವಿ ಕುವೆಂಪು,
ಕೇಳಿ ಬಂದಿರಬಹುದು ಬೇಂದ್ರೆಯವರ ಹಾಡಿನ ಇಂಪು;
 
ಬರಿನೆಲದಿ ಮುಸುಕೆಳೆದು ಮಲಗಿದ್ದ ನಿಮ್ಮತ್ತ, 
ನೋಡಲೆನಗೆ ಧೈರ್ಯ ಸಾಲಲಿಲ್ಲ, ಇದು ಸತ್ಯ;
ಮತ್ತೆ ಅಂದುಕೊಂಡೆ, ನಿಮ್ಮ ಮಗನಲ್ಲವೇ ನಾನು,
ಹೇಡಿಯಾದರೆ, ಅದು, ನಿಮಗೇ ಕಡಿಮೆಯಲ್ಲವೇನು?
 
ನಾನಳುವುದ ಕಂಡು ನೀವು ಒಳಗೊಳಗೆ ನಕ್ಕಂತೆ,
ಅನ್ನಿಸಿತ್ತು ನನಗೆ ನೀವೆನ್ನ ಗದರಿಸುತಿರುವಂತೆ;
'ಸತ್ತಮೇಲೆ ನಮ್ಮ ತಲೆ ಎತ್ತಾದರೇನಂತೆ',
ನಂಬಿದ್ದೆ ಇದುವರೆಗೆ ನಾನೂ ನಿಮ್ಮಂತೆ;
 
ನನ್ನ ಮಾತಿಗಿನ್ನು ಇಲ್ಲಿ ಕಿವಿಗೊಡುವವರಾರು?
ಸಂಪ್ರದಾಯಗಳ ಮೀರಲೆನ್ನ ಬಿಡುವವರಾರು?
ಹೌದು ಅಪ್ಪಯ್ಯಾ, ಅರಿವಾಗುತಿದೆ ನನಗಿಂದು,
ನೀವಿಲ್ಲದೆ ನಾನೊಂದು ಯಃಕಶ್ಚಿತ್ ಬಿಂದು;
 
ಆಡನ್ನು ಹಿಂಬಾಲಿಸಿ ನಡೆವ ಕುರಿಯಂತೆ,
ನಾನೂ ಆಡಿದೆ ಜನರಿಂದು ಆಡಿಸಿದಂತೆ;
ಜೀವ ಪಕ್ಷಿಯೇ ಇಲ್ಲದ ನಿರ್ಜೀವ ಗೂಡಿಗೆ,
ಶೃಂಗಾರ ಮಾಡಿ ನಡೆಸಿದೆವು ಮೆರವಣಿಗೆ;
 
ನನ್ನ ಹೊಡೆದರೂ ತಾನೇ ನೊಂದು ನನಗಿಂತ ಹೆಚ್ಚು,
ಮರುಗುತ್ತಿದ್ದ ಜೀವಕ್ಕೆ ನಾನೇ ಇಟ್ಟೆ ಇಂದು ಕಿಚ್ಚು;
ನಾಲ್ಕು ದಶಕಗಳ ನಮ್ಮ ಸಂಬಂಧದ ಕೊಂಡಿ, 
ಕಳಚಿಕೊಂಡು ಗಳಿಗೆಯಲಿ ಭಸ್ಮವಾಯಿತು ನೋಡಿ;
 
ನೀವಿದ್ದಾಗ ಇಣುಕಿ ನೋಡಿ ಕೇಳದೇ ಸುಖ ಕಷ್ಟ,
ಇಂದು ಆಡುತ್ತಿದ್ದರು ತಮಗಾದಂತೆ ಭಾರೀ ನಷ್ಟ;
ನಾನು ಕಂಡಂತೆ ಅವರ, ಗೊತ್ತು, ಕಂಡಿದ್ದೀರಿ ನೀವೂ,
ಇವರ ಡಂಬಾಚಾರಕ್ಕೆ ಬರಿದೆ ನಗಬೇಕಲ್ಲವೇ ನಾವು?
 
ಆತ್ಮಸಾಕ್ಷಿಯೇ ಇಲ್ಲದೇ ನಾಟಕವಾಡುವವರು,
ಇಲ್ಲಿ ನಿಂತು ನಿಮ್ಮಾತ್ಮಕ್ಕೆ ಶಾಂತಿ ಕೋರುವವರು;
ಅವರ ಬಡಿದು ನಗ್ನರನ್ನಾಗಿಸಬೇಕೆಂಬ ಆಸೆ ಇತ್ತಲ್ಲಿ,
ಆದರೆ ಬೆನ್ನು ತಟ್ಟಿ 'ಭೇಷ್' ಎನ್ನಲು ಇರಲಿಲ್ಲ ನೀವಲ್ಲಿ;
 
ಏನ ಮಾಡಿ ಯಾರ ಮೆಚ್ಚಿಸಬೇಕಾಗಿದೆ ನಾನಿನ್ನು?
ನೀವಲ್ಲದೆ ಯಾರಾದರೂ ನನ್ನ ಏಕೆ ಮೆಚ್ಚಬೇಕಿನ್ನು?
ಚಿಕ್ಕಂದಿನಿಂದಲೂ ನಿಜದಿ ಇತ್ತೆನಗೆ ನಿಮ್ಮ ಮೆಚ್ಚಿಸುವಾಸೆ,
ಆದರೆ ತೃಪ್ತರಾಗದೇ, ನಿಮಗೆ, ನನ್ನನ್ನಿನ್ನೂ ಬೆಳೆಸುವಾಸೆ;
 
ನಿಮ್ಮ ಅತೃಪ್ತಿಗೂ ನನ್ನ ಛಲಕ್ಕೂ ಸತತ ಪೈಪೋಟಿ,
ಹಾಗಾಗಿ ಅಪ್ಪಯ್ಯಾ ಇಂದು ನಿಜದಿ ನನಗಾರಿಹರು ಸಾಟಿ?
ನಡೆ ನುಡಿಗಳಲಿಂದು ಅಪ್ಪನಂತಹ ಮಗನೆನಿಸಿಕೊಂಡೆ,
ನಿಮ್ಮ ಮಗನಾದುದಕೆ ನಾನಿಂದು ಧನ್ಯನೆನಿಸಿಕೊಂಡೆ;
 
ಇನ್ನು ನನ್ನ ತಪ್ಪುಗಳ ಹುಡುಕಿ ಹೇಳುವವರಾರು?
ಹತ್ತಿರ ಕರೆದು ನನ್ನ ಗದರಿಸಿ ಬೆದರಿಸುವವರಾರು?
ನನ್ನ ಮೊಂಡುತನಕ್ಕೆ ಸವಾಲೆಸೆಯುವವರಾರು?
ಹಾಗಲ್ಲ ಮಗಾ ಹೀಗೆಂದು ನನ್ನ ತಿದ್ದುವವರಾರು?
 
ನಿಮ್ಮ ಕನಸುಗಳ ನನಸಾಗಿಸಬೇಕೆಂಬ ಬಲವಾದ ಇಚ್ಚೆ
ನನ್ನಲ್ಲಿ ಇರುವಾಗ ಬರುವ ಕಷ್ಟಗಳು ನನಗೆ ಹೆಚ್ಚೆ?
ಯಾರು ಏನೆಂದರೇನು, ಇರಲೆನಗೆ ನಿಮ್ಮ ಶ್ರೀರಕ್ಷೆ,
ನಿಮ್ಮ ಹಾದಿಯಲೇ ನಡೆಯಲಿಂದು ತೊಡುತ್ತೇನೆ ದೀಕ್ಷೆ;
 
ಬನ್ನಿ ಅಪ್ಪಯ್ಯ ನನ್ನಲೊಂದಾಗಿ, ನಾನೇ ನೀವಾಗಿ,
ಜೀವನ ಪಥದಲ್ಲಿ ನನ್ನ ಮನೋರಥಕ್ಕೆ ಸಾರಥಿ ಆಗಿ;
ನಿಮ್ಮ ಅಪೂರ್ಣ ಕಾರ್ಯಗಳ ಮುಗಿಸೋಣ ಬನ್ನಿ,
ನಿಮ್ಮೆಲ್ಲ ಶಕ್ತಿಯನೂ ನನಗಿಂದು ಧಾರೆಯೆರೆದು ತನ್ನಿ!
*-*-*-*-*-*-*-*-*-*-*-*-*--*-*-*-*
೩೧ ಮಾರ್ಚ್ ೨೦೦೩, ಸೋಮವಾರ, ೭.೦೦ ಘಂಟೆ, ಸಾಯಂಕಾಲ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Khavi on
ನಿಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ. .. ಪ್ರೀತಿ ಪಾತ್ರರಾದವರನ್ನು ಕಳೆದುಕೊಳ್ಳುವುದು ಬಲು ನೋವಿನ ಸಂಗತಿ.. ಅವರ ನೆನಪುಗಳು ಬಂದಾಗಲೆಲ್ಲ ಅವರು ಇನ್ನಷ್ಟುದಿನ ನಮ್ಮ ಜೊತೆಗಿದ್ದರೆ ಚೆನ್ನ ಅನಿಸುವುದು ಸಹಜ... ಅಲ್ಲವೆ.. ಆದರೆ ಆ ವಿಧಿಯ ಮುಂದೆ ನಾವೆಲ್ಲ ಶೂನ್ಯ..ಅದರ ಆಟಕ್ಕೆ ನಾವೆಲ್ಲ ತಲೆಬಾಗಲೇಬೇಕು.. ಡಿ.ವಿ.ಜಿಯವರ ಈ ಸಾಲುಗಳು ಅದೆಂತಹ ಮಾರ್ಮಿಕ.. "ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಕುದುರೇ ನೀನ್, ಅವನು ಪೇಳ್ದಂತೆ ಪಯಣಿಗರು..."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on
ಹೆಗಡೆಯವರಿಗೆ ನಮಸ್ಕಾರ ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ. ಮನ ಕರಗಿಸುತ್ತದೆ. ಅದು ನೀವು ನಿಮ್ಮ ತಂದೆಯವರಿಗಾಗಿ ಬರೆದಿದ್ದಾದರೂ ಓದಿದ ನನಗೆ ೧೫ ವರ್ಷಗಳ ಹಿಂದೆ ನನ್ನನ್ನಗಲಿದ ನನ್ನ ತಂದೆಯ ನೆನಪು ಕಾಡುವಂತೆ ಮಾಡಿತು. ಓದಿ ಮುಗಿಸುವ ಹೊತ್ತಿಗೆ ನನ್ನ ಕಣ್ಣಂಚಿನಲ್ಲಿ ನೀರಾಡಿತ್ತು. ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naasomeswara on
ಕಣ್ಣು-ಹೃದಯ ಎರಡೂ ತೇವವಾದವು. ನಾನು ಹುಟ್ಟಿದ ಮೊದಲ ವರ್ಷದಲ್ಲಿಯೇ ನನ್ನ ತಂದೆ ತೀರಿಕೊಂಡರು. ಅವರ ನೆನಪೂ ನನಗಿಲ್ಲ. ಆದರೆ ತಾಯಿ ನನ್ನನ್ನು ಬೆಳೆಸಿ ಈ ಮಟ್ಟಕ್ಕೆ ತಂದರು. ಇನ್ನೇನು, ದುಡಿದು ಸುಖಿಸುವ ಕಾಲ ಬಂದಿತು ಎನ್ನುವಷ್ಟರಲ್ಲಿಯೇ ತಾಯಿಯೂ ನನ್ನಿಂದ ದೂರವಾದರು. ಹಾಗಾಗಿ ನಿಮ್ಮ ಈ ಕವನ ನನಗೆ ಇಮ್ಮಡಿ ದುಃಖವನ್ನು ತಂದಿದೆ. -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಕವನ ಮನ ಕಲಕುತ್ತಿದೆ. >> ಸಂಪ್ರದಾಯಗಳ ಮೀರಲೆನ್ನ ಬಿಡುವವರಾರು? ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಈ ಕವನ ಓದಿದರೆ ಮನ ಕಲಕಿ ವಿಹ್ವಲಗೊಳ್ಳುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunathams on
ಬಹಳ ದಿನಗಳನಂತರ ಒಂದು ಒಳ್ಳೆಯ ಕವನ ಓದಿದ ತೃಪ್ತಿ ಸಿಕ್ಕಿತು,ನನಗೆ ತಿಳಿದ ಮಟ್ಟಿಗೆ ಕನ್ನಡ ಕಾವ್ಯ ಚರಿತ್ರೆಯಲ್ಲಿ ತಾಯಿಯ ಬಗ್ಗೆ ಬಂದಷ್ಟು ಕವನಗಳು ತಂದೆಯ ಬಗ್ಗೆ ವಿರಳವೆನ್ನುವಷ್ಟು ಕಡಿಮೆ. ತಿಳಿದವರು ದಯವಿಟ್ಟು ನನ್ನ ಅನಿಸಿಕೆಯನ್ನ ಪರಿಶೀಲಿಸಲೆಂದು ಕೋರುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಹೌದು ಮಂಜುನಾಥ್, ನೀವು ಹೇಳಿದ್ದು ಸರಿ . ಆಸು ಅವರ ಕವನ ಓದಿದಾಗ ನನಗೂ ಹಾಗೇ ಅನ್ನಿಸಿತು. ಅವ್ವನ ಬಗ್ಗೆ ಸಾಕಷ್ಟು ಜನ ಕವನ ಬರೆದಿರುವುದನ್ನು ನೋಡಿದ್ದೇನೆ. ನಾನೂ ಬರೆದಿದ್ದೇನೆ. ಆದರೆ ಅಪ್ಪ ಸಾಮಾನ್ಯವಾಗಿ ಬಹುತೇಕರ ಮನೆಗಳಲ್ಲಿ ಸಿಟ್ಟಿನ ಅಪರಾವತಾರವೇ. ಅಪ್ಪನೊಂದಿಗಿನ ಸಲುಗೆ ಭಾವನೆಗಳು ಅವ್ವನಿಗೆ ಹೋಲಿಸಿದರೆ ಕಡಿಮೆ ಎಂದೇ ಹೇಳಬೇಕು... ಕಣ್ಣಾಲಿ ತೇವವಾಯಿತು... ಧನ್ಯವಾದ ಆಸು ಅವರೇ ಒಳ್ಳೆಯ ಕವನ ಕೊಟ್ಟಿದ್ದಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ಖ.ವಿ., ಶ್ಯಾಮಲಾ ಜನರ್ಧನನ್, ಡಾ. ನಾ. ಸೋಮೇಶ್ವರ, ಗುರು ಬಾಳಿಗಾ, ಅನಂತ ಕೃಷ್ಣ, ಮಂಜುನಾಥ್, ಭವಾನಿ ಮತ್ತು ಸಂತೋಷ್, ನಿಮಗೆಲ್ಲರಿಗೂ - ನಿಮ್ಮ ಪ್ರತಿಕ್ರಿಯೆಗಳಿಗಾಗಿ, ನನ್ನೊಂದಿಗೆ ನಿಮ್ಮ ಹೃದಯದ ಮಿಡಿತವನ್ನು ಹಂಚಿಕೊಂಡಿದ್ದಕ್ಕಾಗಿ ಹಾಗೂ ನಮ್ಮ ಅಪ್ಪಯ್ಯನವರ ಆತ್ಮಕ್ಕೆ ಶಾಂತಿಯನ್ನು ಬೇಡಿದುದಕ್ಕಾಗಿ- ನನ್ನ ತುಂಬು ಹೃದಯದ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
ಅಸು ಹೆಗಡೆಯವರೇ, ನಮ್ಮ ತಂದೆಯವರನ್ನು ನೆನೆದು ನನಗೂ ಕಣ್ಣು ತೇವ ಆಯ್ತು. ನಿಮ್ಮ ಕವನ ಒಮ್ಮೆ ಓದಿದಾಗ, ಇಲ್ಲಿ ಹೆಚ್ಚು ಹೊತ್ತು ಕಳೆದರೆ ಅದನ್ನು ಮತ್ತೆ ಮತ್ತೆ ಓದುವ ಹಾಗಾಗತ್ತೆ, ಇನ್ನು ಹೆಚ್ಚು ನೋವು, ತಳಮಳ ಆಗತ್ತೆ ಅಂತ ಪ್ರತಿಕಿಯೇನೋ ಬರೀದೆ ಹೋದೆ. ಇದು ಹೇಳಲಾಗದ, ಹೇಳದೆ ಇರಲಾಗದ ವೇದನೆ. ಕಳೆದುಕೊಂಡವರಿಗೇ ಗೊತ್ತು. ಇದೇ ಮಾತನ್ನ ಶ್ಯಾಮಲಾ ಅವರಿಗೂ ಹೇಳಿದೆ ಸಮದುಃಖಿ, ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
. (ಮಾತಿಲ್ಲ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಮೌನವೇ ಮಾತಾಡುತ್ತದೆ ಇಲ್ಲಿ ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ನಾನು ಓದಿರ್ಲಿಲ್ಲ ಇದ್ನ ಮೊದ್ಲು.. ಕೊಂಡಿ ನೀಡಿದ್ದಕ್ಕೆ ಧನ್ಯವಾದ.. ನಿಮ್ಮ ಕವನ ಊರಲ್ಲಿರೋ ನನ್ನ ಅಪ್ಪಯ್ಯನ ನೆನೆಯುವಂತೆ ಮಾಡಿತು.. ಥ್ಯಾಂಕ್ಸ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಹೆಗಡೆಯವರೇ, ಕವನ ಓದಿದ ನ೦ತರ ನನ್ನ ಹಾಗೆ ತ೦ದೆಯವರನ್ನು ಕಳೆದು ರೋದಿಸಿದ ಸಮಾನ ದು:ಖಿಯೊಬ್ಬರ ಬಗ್ಗೆ ಅರಿತ ಹಾಗೆ ಆಯ್ತು.ಮನಕಲಕುವ ಕವನ. ನನ್ನ ಅಪ್ಪಯ್ಯನ ನೆನಪಾಯಿತು. ಇನ್ನು ಏನೂ ಪ್ರತಿಕ್ರಿಯೆಯನ್ನು ನೀಡಿದರೂ ಅದೊ೦ದು ಶಬ್ಧಗಳ ಗುಚ್ಛವಾಗಬಹುದು ಅಷ್ಟೇ.
ಹ್ಯಾಟ್ಸಾಫ್ ಟು ಯೂ ಮಿ|| ಹೆಗಡೆಯವರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.