ಕನ್ನಡಪುಟ
ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!
೧೨. ನಾ ತಿಂದ 'ನಾನು'!
ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!
-------------------------------
"ಲೋ! ನೀನೇನಾದ್ರೂ ಹೀಗೇ ಲೆಕ್ಕ ಹಾಕುತ್ತಿದ್ದರೇ . . ಅಷ್ಟೇ ನೀನೇನೂ ಎಂಜಾಯ್ ಮಾಡಕ್ಕಾಗಲ್ಲವೋ" ಎಂದು ಗೋವರ್ಧನ್ ಗದರಿಕೊಂಡ.
ನಾನು "ಹಾಗಂತೀಯಾ. . ಸರಿ ಒಪ್ಪಿದೆ ; ನಡಿ ಹೋಗೋಣ" ಎಂದೆ.
ಈ ಮಾತು ಶುರುವಾಗಿದ್ದು ಭಾರತೀಯ ಉಪಾಹಾರಗೃಹಕ್ಕೆ ಹೋಗೋಣ ಎಂದವನು ರಾಗ ತೆಗೆದಾಗ!! ನನಗೇನೋ ಒಪ್ಪಿಗೆಯೇ. . ಆದರೆ ಒಪ್ಪೊತ್ತಿನ ಊಟಕ್ಕೇ ೧೦೦೦ದಿಂದ ೨೦೦೦ ಯೆನ್ ಖರ್ಚಾಗುತ್ತದೆ ಎಂದಾಗ ಹೌಹಾರಿ ಬೇಡಪ್ಪಾ ಎಂದೆ!
"ಲೋ ಭಟ್ಟಾ! ನಡಿಯೋ ಸ್ವಲ್ಪ ಒಳ್ಳೇ ಊಟ ಮಾಡೋಣ" ಎಂದು ಎಳೆದುಕೊಂಡು ಹೋದ!! ಜೊತೆಗೆ ವರ್ಣೇಕರನೂ ಬಂದ . ನಾವೆಲ್ಲರೂ ನುಗ್ಗಿದ್ದು ಓಸಾಕಾದ ದೋತೊಂಬೊರಿ( ಕೊತ್ತಂಬರಿ ಅಲ್ಲಾರೀ. . .) ಯಲ್ಲಿದ್ದ ಒರಿಸ್ಸಾ ಮೂಲದ ಖಾನಾವಳಿ ಸಂತಾನಕ್ಕೆ. ಇದ್ಯಾವ ಸಂತಾನವೋ ಕಾಣೆ ಎಂದುಕೊಂಡು ಒಳನಡೆದೆ. ಮೆನು ಬಂತು; ನಾನು ನೋಡಿದೆ - ಇದ್ದುದರಲ್ಲಿಯೇ ಅತಿಕಡಿಮೆ ಬೆಲೆಯ ಬೆಳಗಿನ ಊಟ ೧೨೫೦ ಯೆನ್. ವಿಧಿಯಿಲ್ಲದೆ ಅದನ್ನೇ ತರಿಸಿದೆವು. ಉತ್ತರ ಭಾರತದ 'ಥಾಲಿ' ಊಟ - ೨ ವಿಧದ 'ಕರಿ', ಗರಿಗರಿ ಪಕೋಡ, ಪುದೀನ ಚಟ್ನಿ, ಒಂದು ಬಟ್ಟಲು ಬಟಾಣಿ-ತರಕಾರಿಯ ಚಿತ್ರಾನ್ನ, ಸ-ಮೋಸ ಮತ್ತೊಂದು ನಾನು!
"ನಾ ನಾನೆಂದರೆ ನಾನಲ್ಲ! ಈ ಮಾನವ ಜನ್ಮವು ನಾನಲ್ಲ!".....ಶಿಶುನಾಳ ಶರೀಫರ ನೆನಪಾಯಿತೇ? ಅಂಥ ಗಹನಾರ್ಥವೇನಿಲ್ಲ ಬಿಡಿ; ಆ ನಾನು ಈ ನಾನಲ್ಲ; ಇದು ತಿನ್ನುವ 'ನಾನು'. ಅಂದರೆ 'ನಾನ್' ರೊಟ್ಟಿ! ತಿಂಗಳಿನಿಂದ ಸರಿಯಾಗಿ ಊಟ ಮಾಡಿರಲಿಲ್ಲ ನೋಡಿ-ಸರಿಯಾಗಿ ಜಡಿದೆ! ಆಮೇಲೆ ಖಾನಾವಳಿಯ ಯಜಮಾನನಿಂದ ಮಸಾಲೆ ಚಹಾ ಬೇರೆ ಬಂತು! ಭಲಾ ಎಂದುಕೊಂಡೆ. ಅಲ್ಲಿದ್ದವರಿಗೆ ವರ್ಣೇಕರ ಬಹಳ ಪರಿಚಿತನೋ ಏನೋ,ಬಹಳ ಮಾತನಾಡುತ್ತಿದ್ದ! ಕೊನೆಗೆ ನನ್ನ ಪರಿಚಯ ಅಡುಗೆ ಭಟ್ಟರಿಗೆ! ಅವರಿಗಾಗಲೇ 'ಕುಮಾರ್' ಎಂಬ ಹೆಸರು ಕೇಳಿ ಕೇಳಿ ಸಾಕಾಗಿತ್ತೇನೋ,
"ಇವರೂ ಕುಮಾರ್ ಅಲ್ಲ ತಾನೇ?" ಎಂದರು.
ಗೋವರ್ಧನನೆಂದ "ನಾವೆಲ್ಲರೂ ಶಾಸ್ತ್ರೀ ಎನ್ನುತ್ತೇವೆ".
ಈಗ ಅವರಿಗೆ ಸಮಾಧಾನ - ಕರೆಯಲು ಬೇರೆ ಹೆಸರಿದೆಯಲ್ಲಾ ಎಂದು. ಅದುವರೆಗೂ ತಿಂಡಿ ತಿನಿಸು ತಂದಿಟ್ಟು ಜಪಾನೀ ಭಾಷೆಯಲ್ಲಿ ಪಟಪಟನೆ ಮಾತನಾಡುತ್ತಿದ್ದ ಮತ್ತೊಬ್ಬ ಭಾರತೀಯ ಅಲ್ಲಿದ್ದ! ಅವನೇ ಕುನ್ನ - ಕುನ್ನ ದಾಸ್ - ಒರಿಸ್ಸಾದವನು; ಅಂಗಡಿಯ ಮಾಲೀಕ!
"ನಿಮ್ಮ ಜಪಾನೀ ಭಾಷೆ ಸಿಕ್ಕಾಪಟ್ಟೆ ವೇಗವಾಗಿದೆ" ಎಂದೆ!
"ಅದೇನಿಲ್ಲ, ೧೦ ವರ್ಷದಿಂದ ಇಲ್ಲಿದ್ದೇನೆ ಅದಕ್ಕೇ ಹೀಗೆ; ನೀವೂ ಇದ್ದರೆ ನೀವೂ ಹಾಗೇ" ಎಂದ.
ಗೋವರ್ಧನ ಕನ್ನಡದಲ್ಲಿ ಕಿವಿಯೊಳಗೂದಿದ "ಅವನ ಹೆಂಡತಿ ಜಪಾನೀ ಕಣಯ್ಯಾ - ಅವನೇನು ಮಜವಾಗಿದ್ದಾನೆ!!" ನಾನು ಅಚ್ಚರಿಗೊಂಡೆ! ಗೋವರ್ಧನ ಕುನ್ನನಿಗೆ ನನ್ನ ಪೂರ್ವಾಪರಗಳನ್ನೆಲ್ಲ ಅಚ್ಚುಕಟ್ಟಾಗಿ ಹೇಳಿದ.
ಕುನ್ನನಿಗೆ ಖುಷಿ - "ಶಾಸ್ತ್ರೀಜಿ, ಆಪ್ ಆತೇ ರಹಿಯೇ. . ಆಪ್ಕೀ ಶಾಸ್ತ್ರ್ಸೇ ಬಹುತ್ ಕುಛ್ ಹೋತಾ ಹೈ" ಎಂದ. ಆಗಲೆಂದೆ.
ಅಷ್ಟರಲ್ಲಿ ಅಡುಗೆ ಮನೆಯಿಂದ ಬಂದ 'ಪರಮಾನಂದ' ಕೈ ಮುಂಚಾಚಿ "ಪಂಡಿತ್ಜೀ, ಬೋಲಿಯೇ ಹಮಾರಾ ಭವಿಷ್ಯ್ ಮೇ ಕ್ಯಾ ಹೈ?" ಎಂದ.
ಕುನ್ನನೂ ಬಂದ, ಮತ್ತೊಬ್ಬನೂ ಬಂದ! ಎಲ್ಲ, ಬಹುಕಾಲದ ಮಿತ್ರರಂತೆ ಮಾತನಾಡಿದೆವು. ಎಲ್ಲ ಖುಷಿಯಾದರು. "ಪಂಚಾಂಗ ಹೊರತೆಗೆವ ಕಾಲ ಬಂದಿದೆ" ಎಂದುಕೊಂಡೆ.
ಕುನ್ನನೆಂದ- "ನೀವು ಜಪಾನೀ ಭಾಷೆಯಲ್ಲಿ ಹೇಳುವಿರಾದರೆ ಇಲ್ಲಿ ಬಹಳವಾಗಿ ಮಿತ್ರರಾಗುವವರಿದ್ದಾರೆ; ನೀವು ಬನ್ನಿ ಪರಿಚಯಿಸುತ್ತೇನೆ".
ಸಾಲದ್ದಕ್ಕೆ "ಮತ್ತೆ ಭಾರತಕ್ಕೆ ಹೋಗಬೇಕಾದಲ್ಲಿ ಹೇಳಿ, ರಿಯಾಯ್ತಿ ದರದಲ್ಲಿ ಟಿಕೆಟ್ ಕೊಡಿಸುತ್ತೇನೆ" ಎಂದ.
ಭಲಾ ಎಂದುಕೊಂಡೆ! ವಂದನೆ ಹೇಳಿ ೧೨೫೦ ಯೆನ್ ಕೊಟ್ಟು ಹೊರಬಿದ್ದೆವು. ನಾನು ತೆರಿಗೆ ತೆಗೆದುಕೊಳ್ಳುವುದಿಲ್ಲ" ಎಂದ ಕುನ್ನ. ಜಪಾನಿನಲ್ಲಿ ಎಲ್ಲಿ ಏನು ಕೊಂಡರೂ ೫% ಗ್ರಾಹಕ ತೆರಿಗೆ ಕೊಡಲೇಬೇಕು!! ಇವನು ಬೇಡವೆಂದ!'ಏನೋ ಐತ್ರೀ ಸಮಾಚಾರ' ಎಂದುಕೊಂಡು ಸುಮ್ಮನಾದೆ; ಹೊರಬಿದ್ದ ಮೇಲೆ ಕೇಳಿದರೆ ಗೋವರ್ಧನನೆಂದ-
" ಅವನು ಒಳ್ಳೆಯವ; ಯಾವಾಗಲೂ ಹಾಗೆಯೇ ಏನಾದರೊಂದು 'ಬಿಟ್ಟಿ' ಇದ್ದೇ ಇರುತ್ತದೆ; ಕಳೆದ ಬಾರಿ ಮಾವಿನ ಲಸ್ಸಿ ಸಾಬಿಸು[=ಸರ್ವಿಸ್; ಉಚಿತ]" ಎಂದ.
"ಪರವಾಗಿಲ್ಲವೇ, ಅಷ್ಟು ಒಳ್ಳೇ ಬುದ್ಧಿಯೇ?" ಎಂದೆ.
"ಭಾರತೀಯರಿಗೆ ಮಾತ್ರ ಕಣಯ್ಯಾ ಶಾಸ್ತ್ರೀ" ಎಂದ ವರ್ಣೇಕರ್.
ಅಷ್ಟರಲ್ಲಿ ಬಂತು ತೇಗು!! ನಾ ತಿಂದ 'ನಾನು' ಕೆಲಸ ಶುರು ಮಾಡಿತ್ತು! ಜೊತೆಗೆ ಒಳ್ಳೆಯ ವಿಚಾರವೊಂದು ನನ್ನ ತಲೆಯೊಳಗೇ ಮಥಿಸತೊಡಗಿತ್ತು!! ಮೆಟ್ಟಿಲಿಳಿದು ಬರುತ್ತಾ ತಿರುಗಿ ನೋಡಿ. . "ಸಂತಾನ. . ಹ್ಂ. . ಒಳ್ಳೆಯ ಜಾಗ ನನ್ನ ವಿಚಾರ ವಿನಿಮಯಕ್ಕೆ " ಎಂದುಕೊಂಡೆ.
ಅಂದಿನಿಂದ ಶುರುವಾಯಿತು ನನ್ನ 'ಸಂತಾನ'ದ ಸಂಬಂಧ!! ಪ್ರತಿ ಶನಿವಾರ ನಾನು ಹಾಜರ್. ನನಗಾಗಿ ಜಪಾನೀ ಮಿತ್ರರೂ ಹಾಜರ್. ಮಧ್ಯೆ ನಿಂತವ ಕುನ್ನ! ನಿಜವಾಗಿ ನನಗೆ ಬೇಕಾಗಿದ್ದುದು, ಜಪಾನೀ ಭಾಷೆಯಲ್ಲಿ ಸಂಭಾಷಣೆ. ಜಪಾನಿನ ವಿವಿಧ ಕೋನಗಳ ವಿಶ್ಲೇಷಣೆ! ಅದಕ್ಕಾಗಿ ಜಪಾನೀ ಮಿತ್ರರ ಅನ್ವೇಷಣೆ! ನನಗೆ ಬೇಕಿದ್ದುದು ನಾ ಹೇಳಿದ್ದಕ್ಕೆ ತಲೆಯಾಡಿಸುವ, ಹೆದರುವ ಕಕ್ಷಿದಾರರಲ್ಲ!! ನಾ ಹೇಳಿದ ಭವಿಷ್ಯಕ್ಕೆ ಬೆಕ್ಕಸ ಬೆರಗಾಗುವವರೂ ಅಲ್ಲ! ನಿಜವಾಗಿ 'ಸತ್ತುಹೋದ' ಜಪಾನೀಯತೆಯ ಬೇರನ್ನು ಮತ್ತೆ ಚಿಗುರಿಸಬಲ್ಲವರು!! ಅದಕ್ಕೆ ಅವರಿಗರ್ಥವಾಗುವಂತೆ ಮಾಡಲು ನಾ ಬಳಸಿಕೊಂಡ ಅದ್ಭುತ ಅಸ್ತ್ರ ಜ್ಯೋತಿಷಶಾಸ್ತ್ರ! ಇರಲಿ ನಾನೇನೂ ಸುಳ್ಳು ಹೇಳುವುದಿಲ್ಲ ಬಿಡಿ; ಅದು ನನ್ನ ಧರ್ಮಕ್ಕೆ ವಿರುದ್ಧ! ಅವರನ್ನು 'ಅತಿ ಅಮೆರಿಕೀಕರಣ' ದಿಂದ ಜಪಾನೀಯತೆಗೆ ಹಿಂದೆಳೆಯಲು ಒಂದು ಯಕ್ಷಿಣಿಯಂತಹ ವಿದ್ಯೆ ಅವಶ್ಯವೆಂದು ನಾ ಬಲ್ಲೆ! ನನಗೆ ಗೊತ್ತಿದ್ದ ವಿದ್ಯೆಯನ್ನು ಅವರೆಲ್ಲರ ಸಂತೋಷಕ್ಕೆ ಬಳಸಿದೆ!
ನಾ ಎಡವಲಿಲ್ಲ! ಕಾದಿತ್ತು ಅತ್ಯದ್ಭುತ ಯಶಸ್ಸು! ಜಪಾನೀಯತೆಯ ಚಿಗುರಿಗೆ ಭಾರತದ ನೀರೆರೆದೆ! ಆಗಲೂ, ಈಗಲೂ ಮನಸ್ಸಿನಲ್ಲಿ ಒಂದೇ - "ನೀನೊಲಿದರೆ ಕೊರಡು ಕೊನರುವುದಯ್ಯಾ . . . !"
(ಮುಂದಿನ ಬಾರಿ: ೧೩. ಸಂತೆಯಲ್ಲಿ ನಾ ಸಂತ!)

- benaka ರವರ ಬ್ಲಾಗ್
- Login or register to post comments
- 1357 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!
ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!
ನಿಮ್ಮ ಮುಂದಿದೆ. ಸದ್ಯದಲ್ಲೇ ಮುಂದಿನ ಭಾಗ
೧೩. ಸಂತೆಯಲ್ಲಿ ನಾ ಸಂತ!
ಬಲೆಯೇರಲಿದೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಸಂತಾನದ ಸೌಭಾಗ್ಯ
ಬೆನಕರವರೇ, ನಿಮ್ಮ ಲೇಖನದ ಧಾಟಿ ಸಖತ್ತಾಗಿದೆ. ಸಂತಾನದ ವಿವರವನ್ನು ಓದುವಾಗಂತೂ ತುಂಬಾ ತುಂಬಾ ನಗು ಬಂತು. ನಿಜಕ್ಕೂ ಅದು ಸಂತಾನವೇ ? ಅಥವಾ ಸನಾತನದ ಅಪಭ್ರಂಶವೇ ? ಸುಮ್ಮನೆ ಹೀಗೆ, ನನಗೆ ನಗು ತರಿಸಿದ ಕೆಲವು ನಿಮ್ಮ ವಾಕ್ಯಗಳನ್ನು ಪಟ್ಟಿ ಮಾಡಿರುವೆ.
ಎಲ್ಲರೂ ತಮ್ಮ ಅನಿಸಿಕೆ, ಕೋಪ ತಾಪಗಳನ್ನು ಬಡಪಾಯಿ ಸಂತಾನದ ಮೇಲೆ ತಾನೇ ಹೇರುವದು
. ಮತ್ತೆ ಎಲ್ಲದಕ್ಕಿಂತ ಮಿಗಿಲಾಗಿ,
Re: ಸಂತಾನದ ಸೌಭಾಗ್ಯ
ಸುನಿಲರೇ,
ನಿಮ್ಮ ನಗೆ ಬುಗ್ಗೆಗಳಿಗೆ ಧನ್ಯವಾದಗಳು. 'ಸಂತಾನ'ದ ಬಗ್ಗೆ ಇನ್ನಷ್ಟು ಮಾಹಿತಿ:
ಸಂಸ್ಕೃತದ 'ಶಾಂತಿ'ಯನ್ನು ಒರಿಯಾ ಭಾಷೆಯಲ್ಲಿ 'ಸಂತನ' ಎನ್ನುತ್ತಾರಂತೆ. ಅದೇ ಮುಂದೆ 'ಸಂತಾನ'ವಾಗಿ ಆಹಾರದ 'ಸಣ್ಣ ತಾಣ'ವಾಯಿತೆಂದು ತೋರುತ್ತದೆ. ಇದರ ಮಾಲೀಕನ ಬಗ್ಗೆ, ಇದರ ಸತ್ಸಂತಾನಗಳ ಬಗ್ಗೆ ಮುಂದೆ ಇನ್ನಷ್ಟು ಬರೆಯುತ್ತೇನೆ.
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
Re: ನಾನು!
"ನಾ ತಿಂದ ನಾನು" ಶೀರ್ಷಿಕೆ ಕುತೂಹಲಕಾರಿಯಾಗಿದೆ. ಮುಂದಿನ ಕಂತುಗಳಿಗೆ ಕಾಯುತ್ತಿದ್ದೇವೆ ಶಾಸ್ತ್ರಿಗಳೇ..
ಉ: ೧೨. ನಾ ತಿಂದ 'ನಾನು'!
ಬೆನಕರೇ,ನಿಮ್ಮ "ನಾ ತಿ೦ದ ನಾನು" ಅದ್ಭುತವಾಗಿದೆ..
ನಿಮ್ಮ ಪದಗಳ ಜೋಡಣೆಯೇ ಒ೦ದು ವಿಧದಲ್ಲಿ ನನ್ನನ್ನು ಆಕರ್ಷಿಸಿದೆ.. ಮು೦ದಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ.
...ನಿಮ್ಮ ಭರದ್ವಾಜ