ಕನ್ನಡಪುಟ
ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!
೭. ವೆಂಕಟನ ನಿರ್ಗಮನ.....?
"ಏನೋ ಇದು! ಎರಡೇ ದಿನ ನಾವಿಬ್ಬರೂ ಜೊತೆಯಲ್ಲಿದ್ದುದು!......" ನನಗೆ ಆಗಲೇ ಹಿಂದಿರುಗಿ ಹೋಗಬೇಕೆನಿಸಿಬಿಟ್ಟಿತ್ತು.
"ಯಾಕೋ, ಏನಾಯ್ತೋ!?" ಎಂದೆ.
"ಫೋ.ನಿನಲ್ಲಿ ಬೇಡ; ನೀನು ಬೇಗ ಬಾ, ನಾನು ಬಹುಶಃ ಮುಂದಿನ ಸೋಮವಾರ ಭಾರತಕ್ಕೆ ಹೊರಡುತ್ತೇನೆ" ಎಂದ!
೬೦೦ ಕಿ.ಮೀ. ದೂರದಿಂದ 'ಬಾ' ಎಂದುಬಿಟ್ಟರೆ ಬರುವುದು ಹೇಗೆ? ನನಗೆ ತಳಮಳ ಶುರುವಾಯಿತು. ಸಾಲದ್ದಕ್ಕೆ ಕ್ಯೂಶೂಗೆ ಬರುವಾಗ ವೆಂಕಟನ ಕೈಚೀಲವೊಂದನ್ನು ಬೇರೆ ತೆಗೆದುಕೊಂಡು ಬಂದಿದ್ದೆ; ಈಗವನು ಹಿಂದಿರುಗುವುದಾದರೆ ಅದನ್ನು ನಾನು ಹಿಂದಿರುಗಿಸಲೇಬೇಕಿತ್ತು! ವಾರಾಂತ್ಯವೇನೋ ಹೋಗಬಹುದಿತ್ತಾದರೂ ಅಸಾಮಿ ಹೊರಡುವ ಮಾತೇ ಎತ್ತಿರಲಿಲ್ಲ; ಹೋಗಿಬರುವುದಕ್ಕೆ ಕೊಡುವ ಪ್ರಯಾಣದರವನ್ನೂ, ಒಂದು ದಿನದ ಉಚಿತ ವಸತಿ ಸೌಲಭ್ಯವನ್ನೂ ಬಳಸಿದರೆ ಅಲ್ಲೇ ತಂಗಿರಬಹುದಿತ್ತು. ಅಲ್ಲದೆ ಎರಡು ದಿನಕ್ಕೆ ಅಷ್ಟುದೂರ ಹೋಗಿ ಬರುವುದೂ ಸ್ವಲ್ಪ ಶ್ರಮದಾಯಕವೇ ಆಗಿದ್ದರಿಂದ ಅವನ ತರ್ಕದಲ್ಲಿ ತಪ್ಪಿರಲಿಲ್ಲ. ಈ ಬಾರಿ ಹೋಗದೆ ಅಲ್ಲೇ ಉಳಿದೆವು; ಆದರೆ ಮುಂದಿನ ವಾರ ವೆಂಕಟನನ್ನು ಕಡೆಯ ಬಾರಿ ಭೇಟಿಯಾಗಲಾದರೂ ನಾನು ಹೋಗಲೇ ಬೇಕಿತ್ತು. ನನ್ನ ಪುಣ್ಯಕ್ಕೆ, ಅಸಾಮಿ ಕೂಡ ಬರುವ ಭಾನುವಾರ ಯಾವುದೋ ಪರೀಕ್ಷೆಗಾಗಿ ಓಸಾಕಾಗೆ ಹೋಗಬೇಕಿತ್ತು! ಜೊತೆಗೆ ನಾನೂ ಹೋಗಬಹುದೆಂದು ನಿಟ್ಟುಸಿರಿಟ್ಟೆ. ಆದರೆ ಕೆಲಸ ನಿಧಾನಗತಿಯಲ್ಲಿದೆಯೆಂದು ಆ ವಾರಾಂತ್ಯವೂ ಕೆಲಸಮಾಡಬೇಕಾಗುತ್ತದೆಂದು ನಮ್ಮೊಡನೆ ಬಂದ ಇತರರು ಹೇಳತೊಡಗಿದಾಗ ಅಸಾಮಿಯೆಂದ:
"ನಾನು ಭಾನುವಾರ ಪರೀಕ್ಷೆಗೆ ಹೋಗಲೇಬೇಕು; ಶನಿವಾರ ಓದಿಕೊಳ್ಳಬೇಕು......ಈ ವಾರಾಂತ್ಯ ನೀನು ಇಲ್ಲೇ ಇದ್ದು ಎಲ್ಲಾ ಸರಿಯಾಗಿ ನೋಡಿಕೋ; ನಾನು ಓಸಾಕಾಗೆ ಹೋಗಿ ಬರುತ್ತೇನೆ"
ನನಗೆ ಅಳುವೋ! ಕೋಪವೋ! ಹೆದರಿಕೆಯೋ! ಏನಾಗುತ್ತಿದೆಯೆಂದೇ ತಿಳಿಯಲಿಲ್ಲ! ಸಣ್ಣನೆ ಬೆನ್ನಹುರಿಯಲ್ಲಿ ತಣ್ಣನೆ ಏನೋ ಹರಿದಂತಾಯಿತು! ವೆಂಕಟನನ್ನು ಎರಡೇ ದಿನ ನಾನು ನೋಡಿದ್ದು; ಅಲ್ಲಿಗೇ ಮುಗಿಯಿತೇ ನಮ್ಮ ಸಹವಾಸ? ದೇವರೇ ಏನಪ್ಪಾ ನನ್ನ ಸ್ಥಿತಿ ಎಂದು ಕಳವಳಗೊಂಡೆ. ಸೋಮವಾರ, ಮಂಗಳವಾರ, ಬುಧವಾರ...ಊಹ್ಞೂಂ...ಬೇರಾವ ಸುದ್ದಿಯೂ ಇಲ್ಲ; ಕೆಲಸ ಜೋರಾಗಿ ಮುಂದುವರೆದಿತ್ತು. ಗುರುವಾರವೂ ಬಂತು, ಬಹುಶಃ ನಾನು ಶನಿವಾರವೂ ಕೆಲಸಕ್ಕೆ ಬರುವಂತಾಗುತ್ತದೆ ಎಂದೆನಿಸತೊಡಗಿತ್ತು. ಅದೇನು ಆಯಿತೋ ಕಾಣೆ, ಗುರುವಾರ ಮಧ್ಯಾಹ್ನ ಯಂತ್ರ ಕೆಟ್ಟು ಕುಳಿತಿತು! ಇನ್ನಿಲ್ಲದಂತೆ ಒದ್ದಾಡಿ ಸರಿಪಡಿಸಲು ಯತ್ನಿಸಿದರು ಆ ಮಂದಿ! ಊಹ್ಞೂಂ! ಯಂತ್ರ ಅಲ್ಲಾಡಲೇ ಇಲ್ಲ; ಶುಕ್ರವಾರವೂ ಬಂತು; ಯಂತ್ರ ನಿದ್ದೆ ಬಿಟ್ಟೇಳಲಿಲ್ಲ! ಸರಿ ಓಸಾಕಾದಿಂದಲೋ, ಕ್ಯೋತೋದಿಂದಲೋ ತಜ್ಞರನ್ನು ಕರೆಸುತ್ತೇವೆ ಎಂದರು! ಅಸಾಮಿಯೆಂದ
"ನೀನೂ ಗಂಟುಮೂಟೆ ಕಟ್ಟು; ಇನ್ನು ಸೋಮವಾರವೇ ಇದರ ರಿಪೇರಿ!"
ಕುಣಿದಾಡುವಂತಾಯಿತು! ಜಪಾನಿನಲ್ಲಿ ಶುಕ್ರವಾರ ರಾತ್ರಿಯಾದರೆ ಸಾಕು, ಊರಿಗೆ ಊರೇ - ಅಲ್ಲಲ್ಲ - ದೇಶವೇ ಮಲಗಿಬಿಡುತ್ತದೆ! ಇನ್ನೆರಡು ದಿನ ವಿಶ್ರಾಂತಿಯ ನಂತರವೇ ಉಳಿದ ಚಟುವಟಿಕೆ! ಶನಿ-ಭಾನುವಾರಗಳಂದು ರೈಲಿಗೂ ವಿಶೇಷ ವೇಳಾಪಟ್ಟಿ! ನಾವು ಹೊರಡುವುದಂತೂ ಆಯಿತು ಗಟ್ಟಿ!
ಶುಕ್ರವಾರ ರಾತ್ರಿ ಶಿನ್ಕಾನ್ಸೆನ್ ಹತ್ತಿ ಓಸಾಕಾಗೆ ಬಂದಿಳಿದೆವು; ವೆಂಕಟ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ; ನನ್ನನ್ನು ಕಂಡವನೇ,
"ಶಾಸ್ತ್ರಿಗಳೇ, ನಿಮ್ಮಿಂದ ಒಂದು ಸಹಾಯ ಬೇಕಾಗಿದೆ; ಬೇಗ ಬನ್ನಿ"
ಎನ್ನುತ್ತಾ ರೂಮಿಗೆ ಕರೆದೊಯ್ದ. ಊಟವಾಯಿತು; ಏನು ಸಮಾಚಾರವೆಂದು ವಿಚಾರಿಸಿದೆ. ಅಂಗೈ ಮುಂಚಾಚಿದವನೇ,
"ನಾನೇನು ಹೇಳಲಿ, ನೀನು ಹೇಳಯ್ಯಾ ನನ್ನ ಭವಿಷ್ಯ ಏನೂಂತ....."
"ಏ! ತಮಾಷೆ ಸಾಕು; ಏನಾಯ್ತು ಹೇಳೋ ಸರಿಯಾಗಿ" ಎಂದೆ.
ಅವನು ಕಛೇರಿಯಲ್ಲಿ ಅವನ ಹಾಗೂ ಮೇಲಧಿಕಾರಿಯ ನಡುವಿನ ಘರ್ಷಣೆಯ ಕತೆಯನ್ನೆಲ್ಲಾ ಹೇಳಿದ; ಒಟ್ಟಿನಲ್ಲಿ ಭಾರತದ ಮೂಲ ಕಛೇರಿಗೇ ಇವನನ್ನು ಸಾಗಹಾಕುವುದೆಂದು ತೀರ್ಮಾನವಾಗಿತ್ತು. ನಾಳಿದ್ದು ಬೆಳಿಗ್ಗೆಯೇ ಪ್ರಯಾಣವೆಂದ. ಇನ್ನೂ ಕಛೇರಿಯ ಹಿಂದು-ಮುಂದು ತಿಳಿಯದ ನಾನೇನೂ ಹೇಳದಾದೆ!
"ಅದಕ್ಕೇ ಕೇಳಿದ್ದು.. ಮುಂದೆ ನನ್ನ ಭವಿಷ್ಯ ಏನೆಂದು ಹೇಳಯ್ಯಾ...ಅಲ್ಲಿ ಇನ್ನೇನು ತರಲೆಗಳು ಕಾದಿದೆಯೋ.." ಕೈಚಾಚಿದ.
ನಾನು ಹಸ್ತಸಾಮುದ್ರಿಕದಿಂದ ಇಂತಹ ಪರಿಸ್ಥಿತಿಯಲ್ಲಿ ಅವನಿಗೆ ಪರಿಪೂರ್ಣ ಉತ್ತರ ನೀಡುವುದು ಕಷ್ಟವಾದರೂ ನೋಡಿದೆ - ಅಂತಹ ತರಲೆ ಗೆರೆಗಳಾವುದೂ ಕಾಣಲಿಲ್ಲ! ಅಷ್ಟರಲ್ಲಿ ಬಂತು ಪ್ರಶ್ನೆ -
"ನಾನು ಅಲ್ಲಿಗೆ ಹೋದರೂ, ಆಕೆಲಸ ಬಿಟ್ಟು ಬೇರೆ ಕಡೆ ಕೆಲಸ ಹುಡುಕೋಣವೆಂದಿದ್ದೇನೆ; ಏನೆನ್ನುತ್ತೀಯೆ?"
ಅವನ ಅಂಗೈಯಲ್ಲಿ ಅಂಥ ಯಾವ ಕುರುಹೂ ಕಾಣಲಿಲ್ಲ; ನನಗೆ ಉತ್ತರವೂ ಹೊಳೆಯಲಿಲ್ಲ! ನಾನು ಉತ್ತರಿಸಬೇಕಿದ್ದುದು ಒಬ್ಬನ ಭವಿಷ್ಯ ನಿರ್ಧರಿಸುವ ಪ್ರಶ್ನೆಯಾದ್ದರಿಂದ ತಮಾಷೆಗೆ ಕೇಳಿದ ಸ್ನೇಹಿತರಿಗೆ ಹೇಳುವಂತೆ ಹಾರಿಕೆಯ ಉತ್ತರ ಕೊಡಲಾರದಾದೆ. ಏನನ್ನೋ ಯೋಚಿಸಿದವನೇ, "ಒಂದು ನಿಮಿಷ ಇರು" ಎಂದು ಪೆಟ್ಟಿಗೆಯಿಂದ ಪಂಚಾಂಗ ಹೊರತೆಗೆದೆ! ಯಾರು ನಂಬುವರೋ ಬಿಡುವರೋ, ಇಲ್ಲಿಯವರೆಗೂ ನನಗೆ ಮಾರ್ಗದರ್ಶನ ಮಾಡಿಕೊಂಡು ಬಂದ ಜ್ಯೋತಿಷಶಾಸ್ತ್ರಕ್ಕೆ, ನವಗ್ರಹಗಳಿಗೆ, ನನ್ನ ಆರಾಧ್ಯ ದೈವ ಮಹಾಗಣಪತಿಗೆ ನಮಸ್ಕರಿಸಿ, ಏಕಾಗ್ರತೆಯಿಂದ ಕುಳಿತು ವೆಂಕಟನನ್ನು ನೋಡಿ,
"ಏನು ನಿನ್ನ ಪ್ರಶ್ನೆ?" ಎಂದೆ.
"ನಾನು ಈಗಿನ ಕೆಲಸ ಬಿಡಲೋ ಅಥವಾ ಮುಂದುವರೆಯಲೋ? ಭವಿಷ್ಯದಲ್ಲಿ ಯಾವುದು ಒಳ್ಳೆಯದು?"
ನಾನು ಪ್ರಶ್ನಕುಂಡಲಿ ಬರೆದು "ನಿನ್ನ ನಕ್ಷತ್ರವೇನು?" ಎಂದೆ.
"ಸ್ವಾತಿ"
ಕುಂಡಲಿ ಅಷ್ಟಮಶನಿಯನ್ನು ತೋರಿಸುತ್ತಿತ್ತು; ಇಂಥಹ ತರಲೆಗಳು ಈ ಸಮಯದಲ್ಲಿ ಸರ್ವೇ ಸಾಮಾನ್ಯ! ಸರಿ ಶನಿಯ ಸ್ಥಿತಿ ಉತ್ತಮವಾಗುವವರೆಗೂ ಕೆಲಸ ಬದಲಿಸದಿರುವುದೇ ಒಳ್ಳೆಯದು ಎಂದು ನಿರ್ಧರಿಸಿದೆ; ಇಲ್ಲದಿದ್ದರೆ ಕೆಲಸವೇ ಇಲ್ಲವಾಗುವ ಸಾಧ್ಯತೆಯೂ ತೋರಿತು.
"ಜುಲೈ ೮ ನೇ ತಾರೀಖಿನವರೆಗೂ ಸುಮ್ಮನಿರು; ಕಛೇರಿ ಬಿಡುವುದಿದ್ದರೆ, ಆಮೇಲೆ ಯೋಚಿಸಿನೋಡು" ಎಂದೆ.
"ಸರಿ, ಗುರುಗಳೇ!" ಎಂದ. ನಾನು ನಿಧಾನವಾಗಿ ಸಮಾಧಾನ ಹೇಳಿದೆ. ಬೇಗ ಬೇಗ ಗಂಟು ಮೂಟೆ ಕಟ್ಟಿದ; ಇಬ್ಬರೂ ಮಲಗಿದಾಗ ರಾತ್ರಿ ೨ ಗಂಟೆ!
ಬೆಳಿಗ್ಗೆ ವೆಂಕಟ ಎದ್ದು ಅಡುಗೆ ಮಾಡಿದ; ರೂಮಿನಲ್ಲಿದ್ದ ಅಡುಗೆ ಸಲಕರಣೆ, ಪಾತ್ರೆ, ಸಾಂಬಾರು ಪದಾರ್ಥಗಳನ್ನೆಲ್ಲಾ ನನಗೇ ಬಿಟ್ಟ! ಇದ್ದಕ್ಕಿದ್ದಂತೆ ಮೌನ ಆವರಿಸಿತು.
"ನಾನೊಬ್ಬ ಇಲ್ಲಿಂದ ವಾಪಸ್ ಹೋಗುವಂತಾಯ್ತಲ್ಲೋ!" ಎಂದ. ಪಾಪ! ಅವನಿಗೆ ಹೀಗೆ ಹಿಂದಿರುಗಲು ಇಷ್ಟವಿರಲಿಲ್ಲ!
ನಾನೆಂದೆ "ಲೋ! ಸಂತೋಷಪಡು! ಅಮ್ಮನ ಕೈಯಡುಗೆ, ಮಸಾಲೆದೋಸೆ, ನಿನ್ನ ಪ್ರಿಯಾಹಾರ ಗೋಬಿ ಮಂಚೂರಿಯನ್ ಎಲ್ಲ ತಿನ್ನಬಹುದು ಅಂತ ಖುಷಿಪಡೋ! ಇಲ್ಲೇನಿದೆ - ಸೆರೆಮನೆ!"
ನಕ್ಕ; ನಗುವಿರಲಿಲ್ಲ! ಸರಿ, ಭಾನುವಾರದವರೆಗೆ ಅವನೊಡನೆ ಕಾಲ ಕಳೆದೆ. ರಾತ್ರಿ ನಾನು ಕ್ಯೂಶೂದ್ವೀಪಕ್ಕೆ ಹೊರಡಬೇಕಿತ್ತು. ವೆಂಕಟ ಪಕ್ಕದ ರೂಮಿನ ಸಹೋದ್ಯೋಗಿಗೆ ಕೀಲಿಕೈ ಕೊಟ್ಟು ಹೋಗುತ್ತೇನೆಂದ. ಕಡೆಯ ಬಾರಿ ಧೈರ್ಯ ಹೇಳಿ, ಕೈಕುಲುಕಿದೆ.
"ನಾಳೆ ಬೆಳಿಗ್ಗೆ ವಿಮಾನ ಹತ್ತುತ್ತೇನೆ; ಮತ್ತೆ ಭಾರತದಲ್ಲೇ ಏನೋ ನಮ್ಮ ಭೇಟಿ!"
"ಆದರೆ, ನಮ್ಮ ಮನೆಗೆ ಹೋಗಿ ಬಾ"
ತಲೆಯಾಡಿಸಿದ. ಗೋವರ್ಧನ ಬಂದವನೇ ಅವನ ಬೆನ್ನುತಟ್ಟಿದ. ವೆಂಕಟನಿಗೆ ಕೈಬೀಸಿ ಭಾರಹೃದಯದಿಂದ ಬೀಳ್ಕೊಂಡೆ ಅಲ್ಲ ಬೀಳ್ಕೊಟ್ಟೆ! ನಾನು ಶಿನ್ಓಸಾಕಾ ಎಕಿ[=ನಿಲ್ದಾಣ] ತಲುಪಿದಾಗ ಅಸಾಮಿ ಸಿಕ್ಕಿದ. ಯಥಾಪ್ರಕಾರ 'ಹಿಕಾರಿ' ಹತ್ತಿ ಹೊರಟೆವು. ನನ್ನ ಮನದ ತುಂಬಾ ಭವಿಷ್ಯದ್ದೇ ಚಿಂತೆ ತುಂಬಿತ್ತು. ನನ್ನನ್ನೇನಾದರೂ ಹಿಂದಿರುಗಿ ಹೋಗೆಂದರೆ ಈಗಲೇ ಸಿದ್ಧ ಎಂದುಕೊಂಡೆ!
ಜೈಲಿನೊಳಗೆ ವೇಗದ ರೈಲು!
ರೈಲಿನೊಳಗೆ ಇವನೊಬ್ಬ ಐಲು!
ಜೈಲು-ರೈಲು-ಐಲು-ಜೀವನವೆಲ್ಲಾ ಫೇ.ಲು!
ಪೆದ್ದು ಪೆದ್ದಾಗಿ ನಾನೇ ಆಶುಕವಿತೆ ಬಡಬಡಿಸಿಕೊಂಡೆ. ಅಷ್ಟರಲ್ಲಿ ಅಸಾಮಿ
"ಫೇಲಾಗಬಹುದು!" ಎಂದ.ನಾನು ಗಾಬರಿಯಾದೆ! ಇವನಿಗೆ ಕನ್ನಡ ಬರುತ್ತದೆಯೇ ಎಂದುಕೊಳ್ಳುತ್ತಿರುವಂತೆಯೇ,
"ನಾನಿವತ್ತು ಬರೆದ ಪರೀಕ್ಷೆಯಲ್ಲಿ ಫೇ.ಲಾಗಬಹುದು" ಎಂದ.
ಸದ್ಯ, ಇಷ್ಟೇನೇ! ನಾನೆಲ್ಲೋ ಆಶುಕವಿತೆ ಇವನಿಗೆಲ್ಲಿ ಅರ್ಥವಾಯಿತೋ ಎಂದುಕೊಂಡಿದ್ದೆ!
"ಜಾ.ನ್ನೆನ್ ದೇಸ್ನೇ" [= ಅಯ್ಯೋ! ಹೌದೇ, ಪಾಪ!] ಎಂದು ಕಿತ್ತಲೆರಸಕ್ಕೆ ಕೈಹಾಕಿದೆ. ನನ್ನ ಮನದಾಳದ ಮೂಲೆಯಲ್ಲಿ ವೆಂಕಟನ ನಿರ್ಗಮನ ಅಚ್ಚೊತ್ತಿದ್ದರೂ, ಮತ್ತೊಮ್ಮೆ ಅವನು ಬರುವನೆಂದು ಏಕೋ ಎನಿಸತೊಡಗಿತ್ತು. ಎಂದಿರಬಹುದು......?
* * * * *
(ಮುಂದಿನ ಬಾರಿ: ಹಳೆಯ ರಾಜ್ಯ ಇನ್ನಿಲ್ಲ...)

- benaka ರವರ ಬ್ಲಾಗ್
- Login or register to post comments
- 1009 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ನನ್ನ ಜಪಾನ್ ಪ್ರವಾಸ : ೭. ವೆಂಕಟನ ನಿರ್ಗಮನ......?
ಗೆಳೆಯರೇ,
ನನ್ನ ಜಪಾನ್ ಪ್ರವಾಸ : ೭. ವೆಂಕಟನ ನಿರ್ಗಮನ......? ನಿಮ್ಮ ಮುಂದಿದೆ.
ಮುಂದಿನ ಭಾಗ - ಹಳೆಯ ರಾಜ್ಯ ಇನ್ನಿಲ್ಲ... ಇಷ್ಟರಲ್ಲೇ ಬಲೆಯೇರಲಿದೆ.
ಆಸಕ್ತರು ಈ ಕೆಳಗಿನ ನನ್ನ ಸಚಿತ್ರ ಬ್ಲಾಗಿನಲ್ಲೂ ಓದಬಹುದು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.