ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

Chamaraj ರವರ ಬ್ಲಾಗ್

ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...

ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗಳು ಸಮೃದ್ಧವಾಗಿದ್ದವು. ಅವನ್ನು ಹೊರಹಾಕಲು ಪತ್ರಗಳಿದ್ದವು. ಮಿತ್ರರಿದ್ದರು ಹಾಗೂ ದಿನಚರಿ ಎಂಬ ಅದ್ಭುತ ಸಂಗಾತಿಯಿತ್ತು. ಎಲ್ಲಕ್ಕಿಂತ ಮುಖ್ಯ, ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ, ಇಂಥ ಭಾವನೆಗಳಿಗೆ ಸೂಕ್ತ ಹರಿವು ಕೊಡುವ ಆಟೊಗ್ರಾಫ್‌ಗಳಿದ್ದವು. ಒಂದಲ್ಲ ಒಂದು ಮನಸ್ಸಿಗೆ ಮುದ ನೀಡುತ್ತಿತ್ತು. ಹೊಸ ಕನಸಿಗೆ ಪ್ರೇರಣೆ ಒದಗಿಸುತ್ತಿತ್ತು.  ಮುಂದೆ ಓದಿ »

ಸಂ‘ಸಾರ’

ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!

ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆ
ಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆ
ಇಬ್ಬರನ್ನೂ- ಅಲ್ಲಲ್ಲ ಮೂವರನ್ನೂ
ಸಂಭಾಳಿಸುವುದರಲ್ಲಿ ಕಣ್ಣು ಒದ್ದೆ

ಮಕ್ಕಳಿಗೆ ನಾನು ತಂದೆ
ಕವಿತೆಗೆ- ತಾಯಿ
ಮೂವರೂ ಸೇರಿ
ನಾನು

ತಂದೆ-ತಾಯಿ!

- ಚಾಮರಾಜ ಸವಡಿ

ವಿಷದ ಗಿಡ

ಗೆಳೆಯನ ಮೇಲೆ ಏಕೋ ಮುನಿಸಾಯ್ತು
ಅವನೆದುರು ಹೇಳಿಕೊಂಡೆ, ಮುನಿಸು ಕರಗಿತು
ಶತ್ರವಿನ ಮೇಲೇಕೋ ಮುನಿಸಾಯ್ತು
ಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತು

ಅವನ ಮೇಲಿನ ಭಯದ ನೀರುಣಿಸಿದೆ
ಹಗಲು-ರಾತ್ರಿ ಕಣ್ಣೀರು ಹನಿಸಿದೆ
ಹುಸಿ ನಗೆ ಹಾಗೂ ಕುತಂತ್ರಗಳ
ಬಿಸಿಲುಣಿಸಿ ಮುನಿಸು ಬೆಳೆಸಿದೆ

ದ್ವೇಷದ ಗಿಡ ಹಗಲು-ರಾತ್ರಿ ಬೆಳೆಯಿತು
ಕೊನೆಗೆ ಸುಂದರ ವಿಷ ಫಲ ಬಿಟ್ಟಿತು
ಅದು ಬೆಳಗುವುದನ್ನು ನನ್ನ ಶತ್ರು ನೋಡಿದ್ದ
ಆ ಫಲ ನನ್ನದೆನ್ನುವುದನ್ನು ಅವ ಅರಿತಿದ್ದ

ಕತ್ತಲಾವರಿಸಿದಾಗ, ಏನೂ ಕಾಣದಾದಾಗ
ಸದ್ದಿಲ್ಲದೇ ಬಂದ, ವಿಷ ಫಲವ ಕದ್ದು ಮೆದ್ದ
ಬೆಳಗಾದಾಗ ನನ್ನ ಹೃದಯ ಪುಟಿಯಿತು
ಮರದಡಿ ಅವ ಸತ್ತಿದ್ದ ಕಂಡು ನಲಿಯಿತು

ಮೂಲ: ವಿಲಿಯಂ ಬ್ಲೇಕ್‌
ಭಾವಾನುವಾದ: ಚಾಮರಾಜ ಸವಡಿ

ಕನಸು ಕಾಣಬಾರದು ಅಂದುಕೊಳ್ಳುತ್ತ...

ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ.

ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ ನೇಯ್ಗೆ ಬಂದೀತು ಅಂದುಕೊಳ್ಳುತ್ತೇನೆ. ಅಷ್ಟೊತ್ತಿಗೆ ಮತ್ತೇನೋ ನೆನಪಾಗುತ್ತದೆ. ಎಳೆ ಅಲ್ಲೇ ಒಣಗಿ ಹೋಗುತ್ತದೆ.

ಏಕೆ ಹೀಗಾಗುತ್ತದೆ?

ಮನಸ್ಸಿನ ಯೋಚನೆಯ ಒಂದು ಎಳೆ ಎಂತೆಂಥ ಕನಸುಗಳನ್ನು ತಂದಿಡುತ್ತದೆ ಎಂಬುದನ್ನು ಖುದ್ದು ಅನುಭವಿಸಿದವ ನಾನು. ಎಳೆ ಎಂಬುದು ಮಗುವಿನಂತೆ. ಅದರ ಸಾಧ್ಯತೆಗಳು ಅಪಾರ. ಅದನ್ನು ಬೆಳೆಸಬೇಕಾದ ಜವಾಬ್ದಾರಿಯೂ ಅಷ್ಟೇ ದೊಡ್ಡದು. ಮೊಳಕೆಯೊಡೆದ ಪ್ರತಿಯೊಂದು ಬೀಜಕ್ಕೂ ಪೂರ್ತಿ ಮರವಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

ಆದರೆ, ಎಲ್ಲ ಮೊಳಕೆಗಳೂ ಮರವಾಗುವುದಿಲ್ಲ. ಬಹಳಷ್ಟು ಮೊಳಕೆಗಳು ಮುರುಟಿಹೋಗುತ್ತವೆ. ನಮ್ಮ ಬಾಲ್ಯದ ಕನಸುಗಳಂತೆ.
 ಮುಂದೆ ಓದಿ »

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ನೆನಪಿನ ಮತ್ತೊಂದು ಕೊಂಡಿ ಕಳಚಿತು.

ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು. ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಪ್ರತಿಭೆಗೆ ಮಾರು ಹೋಗಿದ್ದೆವು. ಅವರು ಮುಖ್ಯ ವ್ಯಕ್ತಿಯಾಗಿ ಚರ್ಚೆಯಾಗುತ್ತಿರಲಿಲ್ಲ. ತುಂಬಿದ ಮನೆಯಲ್ಲಿ ತನ್ನ ಪಾಡಿಗೆ ತಾನು ಒಂದೆಡೆ ಕೂತ ಹಿರಿಯನಂತೆ, ನೆನಪಿನ ಅವಿಭಾಜ್ಯ ಅಂಗವಾಗಿದ್ದರು. ಈಗ ಆ ಸ್ಥಳ ಖಾಲಿ ಖಾಲಿ. ಒಂದು ಬನಿಯನ್‌, ಒಂದು ಲುಂಗಿ ಹಾಕಿಕೊಂಡ ನಮ್ರ ಮುಖದ, ವಿನಂತಿಸುವ ಕಂಗಳ ಅಶ್ವತ್ಥ ಈಗಿಲ್ಲ.

ಸುಮ್ಮನೇ ಕೂತು ನೆನಪಿಸಿಕೊಂಡರೂ ವಿವಿಧ ಪಾತ್ರಗಳ ಅಶ್ವತ್ಥ ಮುಖ ಕಣ್ಮುಂದೆ ಬರುತ್ತದೆ. ನಾನು ತುಂಬ ಇಷ್ಟಪಟ್ಟ ಸಿನಿಮಾಗಳಲ್ಲಿ ಕೆ. ಬಾಲಚಂದರ್‌ ನಿರ್ದೇಶನದ ಎರಡು ರೇಖೆಗಳು ಚಿತ್ರವೂ ಒಂದು. ಅದರಲ್ಲಿ ಅಸಹಾಯಕ ಮೇಷ್ಟ್ರ ಪಾತ್ರದಿಂದ, ನಿಷ್ಠುರ-ನಿಷ್ಕರುಣಿ ತಂದೆಯಾಗಿ ಅಶ್ವತ್ಥ ಅಭಿನಯ ಇವತ್ತಿಗೂ ಅಚ್ಚಳಿಯದಂತಿದೆ. ತನ್ನ ಮಗಳಿಗೆ ವಂಚಿಸಿ, ಅವಳ ಮಡಿಲಿಗೊಂದು ಮಗು ಕರುಣಿಸಿ, ಹೇಳದೇ ಕೇಳದೇ ಹೋಗಿ ಇನ್ನೊಂದು ಮದುವೆಯಾದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಪಾತ್ರವಾಗಿ ಅಶ್ವತ್ಥ ಅಭಿನಯ ಅದ್ಭುತ. ಕುವೆಂಪು ಅವರನ್ನು ಆರಾಧಿಸುವ ಮೇಷ್ಟ್ರು ಪೈಪ್‌ ಸೇದುವ ಕುಲೀನ ವರ್ಗದ ವ್ಯಕ್ತಿಯಾಗಿ ಬದಲಾಗುತ್ತಾರೆ. ವಿನಯದ ಜಾಗದಲ್ಲಿ ನಿಷ್ಠುರತೆ, ನಮ್ರತೆಯ ಸ್ಥಾನದಲ್ಲಿ ಅಂತಸ್ತಿನ ಹಮ್ಮು ಸೇರಿಕೊಳ್ಳುವ ಪರಿಯೇ ಅದ್ಭುತ.  ಮುಂದೆ ಓದಿ »

Syndicate content