ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಚಾಮರಾಜ ಸವಡಿ
ಸತ್ಯದ ಹಸಿ ದರ್ಶನ
ಒಂದು ಕಲಿತವನಿಗೆ ಇನ್ನೊಂದು ಸುಲಭ
ಒಂದು ಭಾಷೆಯನ್ನು ಚೆನ್ನಾಗಿ ಕಲಿತವನಿಗೆ ಇನ್ನೊಂದು ಭಾಷೆ ಕಲಿಯುವುದು ಕಷ್ಟವಲ್ಲ ಬಿಡಿ.
ಅನುಮಾನ ಬಂದರೆ, ನಿಮ್ಮ ಭಾಷಾ ಕಲಿಕೆ ಸಾಮರ್ಥ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಹಾಲು ಎಂಬ ಶಬ್ದದ ಅರ್ಥ ಗೊತ್ತಿದ್ದವನಿಗೆ ಮಿಲ್ಕ್ ಎಂಬ ಇಂಗ್ಲಿಷ್ ಶಬ್ದದ ಅರ್ಥ ಸಹಜವಾಗಿ ಮನದಟ್ಟಾಗುತ್ತದೆ. ದೂದ್ ಎಂಬ ಹಿಂದಿ ಶಬ್ದ ಸಹ ಸಹಜವಾಗಿ ಮನವರಿಕೆಯಾಗುತ್ತದೆ. ಯಾವಾಗ ಮಿಲ್ಕ್ ಅಥವಾ ದೂದ್ ಎಂಬ ಶಬ್ದಗಳು ಬರುತ್ತವೋ ಆಗ ಹಾಲು ಎಂಬ ಕನ್ನಡ ಶಬ್ದ ಸಹಜವಾಗಿ ಮೆದುಳಿನಲ್ಲಿ ಮಿನುಗುತ್ತ ಹೊಸ ಶಬ್ದದ ವ್ಯಾಪ್ತಿಯನ್ನು ಮನದಟ್ಟು ಮಾಡುತ್ತ ಹೋಗುತ್ತದೆ. ಈ ಪ್ರಕ್ರಿಯೆ ಎಷ್ಟು ಸಹಜವಾಗುತ್ತದೆಂದರೆ, ಮಿಲ್ಕ್ ಅಥವಾ ದೂದ್ ಶಬ್ದಗಳು ಪರಕೀಯ ಅನಿಸುವುದಿಲ್ಲ.
ಹೊಸ ಹೊಸ ಶಬ್ದಗಳ ಕಲಿಕೆ ಸುಲಭವಾಗುತ್ತ ಹೋಗುವುದು ಹೀಗೆ.
ಹೀಗಾಗಿ ಇನ್ನೊಂದು ಭಾಷೆ ನಿಧಾನವಾಗಿ ಮನಸ್ಸಿನಲ್ಲಿ ಇಳಿಯುತ್ತ ಹೋಗುತ್ತದೆ. ಪ್ರತಿಯೊಂದು ಹೊಸ ಶಬ್ದಕ್ಕೂ ಪರ್ಯಾಯವಾಗಿ ಕನ್ನಡದ ಶಬ್ದ ಮನಸ್ಸಿನಲ್ಲಿ ನಿಲ್ಲುತ್ತದೆ. ಅದರ ಅರ್ಥವನ್ನು ಹೋಲಿಸಿ ನೋಡುತ್ತದೆ. ನಿಧಾನವಾಗಿ ಅದನ್ನು ಜೀರ್ಣಿಸಿಕೊಳ್ಳುತ್ತದೆ. ಒಂಚೂರು ಆಸಕ್ತಿ ತೋರಿಸಿದರೂ ಸಾಕು, ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಮಾತೃಭಾಷೆಗೂ ಇನ್ನೊಂದು ಭಾಷೆಗೂ ಇರುವ ಸಾಮ್ಯತೆ ಹಾಗೂ ಭಿನ್ನತೆಯನ್ನು ಗುರುತಿಸುವ ಮೂಲಕ ಅದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಎಷ್ಟು ಸಮರ್ಥವಾಗಿ ನಮ್ಮ ಮಾತೃಭಾಷೆಯನ್ನು ನಾವು ವ್ಯಕ್ತಪಡಿಸುತ್ತೇವೆಯೋ, ಅಷ್ಟೇ ಸುಲಭವಾಗಿ ಇನ್ನೊಂದು ಭಾಷೆಯಲ್ಲಿಯೂ ಅಭಿವ್ಯಕ್ತಿ ಸಾಧ್ಯವಾಗುತ್ತದೆ.
ಪ್ರತಿಯೊಂದು ಕಲಿಕೆಯೂ ಸುಲಭವಾಗುತ್ತ ಹೋಗುವುದು ಹೀಗೆ. ಒಂದು ಮಾದರಿಯ ಬೈಕ್ ಓಡಿಸಬಲ್ಲವನಿಗೆ ಇನ್ನೊಂದು ವಿನ್ಯಾಸದ ಬೈಕ್ ಕಲಿಯುವುದು ಕಷ್ಟವಾಗುವುದಿಲ್ಲ. ಮೊದಮೊದಲು ಒಂಚೂರು ಹಿಂಜರಿಕೆ ಇದ್ದರೂ, ಕೆಲವೇ ದಿನಗಳಲ್ಲಿ ಅದು ರೂಢಿಯಾಗುತ್ತದೆ. ಯಾವುದೇ ಒಂದು ಪರಿಸರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ವ್ಯಕ್ತಿ ಇನ್ನೊಂದು ಪರಿಸರವನ್ನು ಬಲುಬೇಗ ತನ್ನದಾಗಿಸಿಕೊಳ್ಳುತ್ತಾನೆ. ಒಂದು ವೃತ್ತಿಯ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡವನಿಗೆ ಇನ್ನೊಂದು ವೃತ್ತಿಯ ಸೂಕ್ಷ್ಮಗಳು ಬೇಗ ಗೊತ್ತಾಗುತ್ತವೆ. ಬಹುಶಃ ಉಪನಿಷತ್ತಿನಲ್ಲಿ ಹೇಳಿದ್ದು ಅನಿಸುತ್ತದೆ:’ಒಂದು ಹಿಡಿ ಮಣ್ಣನ್ನು ಚೆನ್ನಾಗಿ ಅರಿಯಬಲ್ಲೆಯಾದರೆ, ಇಡೀ ಭೂಮಿಯನ್ನೇ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು’. ಇದು ಎಲ್ಲ ರೀತಿಯ ಕಲಿಕೆಗಳಿಗೂ ಅನ್ವಯಿಸುತ್ತದೆ.
ಇಂಥ ಕಲಿಕೆ ಕೊಡುವ ಆತ್ಮವಿಶ್ವಾಸ ಅಪಾರ. ನಮ್ಮಲ್ಲಿ ಬಹುತೇಕ ಜನ ಓದಿದ್ದು ಕನ್ನಡದಲ್ಲಿ. ಅವರು ಯೋಚಿಸಲು ಪ್ರಾರಂಭಿಸಿದ್ದು, ಅಭಿವ್ಯಕ್ತಿ ತೋರಿದ್ದು ಕನ್ನಡದಲ್ಲಿ. ಇದ್ದಕ್ಕಿದ್ದಂತೆ ಇನ್ನೊಂದು ಭಾಷೆ ಕಲಿಯುವ, ಅದರಲ್ಲೇ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಅನಿವಾರ್ಯತೆ ಒದಗಿದಾಗ, ಹಿನ್ನೆಲೆಯಲ್ಲಿ ಕನ್ನಡ ಇದ್ದೇ ಇರುತ್ತದೆ. ಅವರ ಕನ್ನಡ ಎಷ್ಟು ಬಲವಾಗಿರುತ್ತದೋ, ಇನ್ನೊಂದು ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವುದು ಅಷ್ಟೇ ಸುಲಭವಾಗುತ್ತದೆ.
ಇದನ್ನು ಎಷ್ಟು ಬೇಕಾದರೂ ವಿಸ್ತರಿಸಬಹುದು. ಈ ಮಾದರಿಯನ್ನು ಜೀವನದ ಯಾವುದೇ ರಂಗಕ್ಕೂ ಅನ್ವಯಿಸಿ ನೋಡಬಹುದು. ಕಲಿಕಾ ಸಾಮರ್ಥ್ಯ ವಿಸ್ತಾರವಾಗಬೇಕೆಂದರೆ, ಯಾವುದೋ ಒಂದು ಮಾದರಿಯ ಬಗ್ಗೆ, ವಿಶೇಷತೆಯ ಬಗ್ಗೆ ಹೆಚ್ಚು ಗೊತ್ತಿದ್ದಷ್ಟೂ ಉತ್ತಮ. ನಮಗೆ ಕನ್ನಡ ಕಾವ್ಯದ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ, ಆಸಕ್ತಿ ಇದ್ದರೆ, ಇನ್ನೊಂದು ಭಾಷೆಯ ಕಾವ್ಯವೂ ಸುಲಭವಾಗಿ ಗೊತ್ತಾಗುತ್ತದೆ, ಅರ್ಥವಾಗುತ್ತದೆ. ಅದೇ ರೀತಿ ಕನ್ನಡ ರಂಗಭೂಮಿಯ ಬಗ್ಗೆ ಗೊತ್ತಿದ್ದರೆ, ಬೇರೆ ಭಾಷೆಯ ರಂಗಭೂಮಿಯ ವಿಶೇಷತೆಗಳು ಸುಲಭವಾಗಿ ಗೋಚರವಾಗುತ್ತವೆ. ಸರಳವಾಗಿ ಅರ್ಥವಾಗುತ್ತವೆ. ಸಂಗೀತ, ಚಿತ್ರಕಲೆ, ತಂತ್ರಜ್ಞಾನ, ಪತ್ರಿಕೆ, ಬರವಣಿಗೆ- ಹೀಗೆ ಬಹುತೇಕ ಕ್ಷೇತ್ರಗಳು ಸುಲಭವಾಗಿ ತಿಳಿಯುತ್ತ ಹೋಗುವುದು ಹೀಗೆ.
ಆದ್ದರಿಂದ ಕನ್ನಡವನ್ನಷ್ಟೇ ಓದಿದವರು ಖಂಡಿತ ಹಿಂಜರಿಯಬೇಕಾಗಿಲ್ಲ. ನಿಮಗೆ ಕನ್ನಡ ಚೆನ್ನಾಗಿ ಗೊತ್ತಿದ್ದರೆ, ಕೊಂಚ ಆಸಕ್ತಿ ಹಾಗೂ ಶ್ರಮ ಹಾಕುವ ಮೂಲಕ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಸುತ್ತಮುತ್ತ ಇರುವ ಬಹುತೇಕ ಜನ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿತಿದ್ದೇ ಹೀಗೆ.
ಹೀಗಾಗಿ, ಕೀಳರಿಮೆ ಬೇಡ. ಹಿಂಜರಿಯುವ ಅವಶ್ಯಕತೆಯಿಲ್ಲ. ನಡೆಯುವುದನ್ನು ಕಲಿತವ ಕರ್ನಾಟಕದಲ್ಲೂ ನಡೆದಾಡಬಲ್ಲ, ಇಂಗ್ಲಂಡ್ನಲ್ಲೂ ನಡೆಯಬಲ್ಲ. ಅದೇ ರೀತಿ ಒಂದು ನುಡಿಯನ್ನು ಚೆನ್ನಾಗಿ ಕಲಿತವ ಇನ್ನೊಂದು ಭಾಷೆಯನ್ನೂ ಅಷ್ಟೇ ಚೆನ್ನಾಗಿ ನುಡಿಯಬಲ್ಲ. ಒಂಚೂರು ಆಸಕ್ತಿ ಇದ್ದರೆ ಕಲಿಕೆ ಸುಲಭವಾಗುತ್ತ ಹೋಗುತ್ತದೆ.
ಅಂಥದೊಂದು ಮನಃಸ್ಥಿತಿ ನಮ್ಮಲ್ಲಿರಬೇಕಷ್ಟೇ.
- ಚಾಮರಾಜ ಸವಡಿ

- Chamaraj ರವರ ಬ್ಲಾಗ್
- Login or register to post comments
- 224 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
ಮಹನೀಯರು ಅನ್ಯಥಾ ಭಾವಿಸಬಾರದು....
ಇತಿಹಾಸ ಪರಿಣಿತನಿಗೆ ಭೌತಶಾಸ್ತ್ರ ಸುಲಭವೇ?
ಸಂಗೀತ ಕಲಿತವನಿಗೆ ನಾಟ್ಯ ಸುಲಭವೇ?
ಹಾಗೇ ಒಂದು ಭಾಷೆಗೂ ಇನ್ನೊಂದು ಭಾಷೆಗೂ ಅದರ ಒಳರಚನೆಯಲ್ಲಿ ಇತಿಹಾಸ ಮತ್ತು ಭೌತಶಾಸ್ತ್ರದಷ್ಟೇ ವ್ಯತ್ಯಾಸಗಳಿರುತ್ತವೆ.... ಬಹುಭಾಷಾಪಾಂಡಿತ್ಯಸುಲಭ್ಯಾಸಾಧ್ಯ..
ಅದರಲ್ಲೂ ಒಂದು ಭಾಷಾಕುಟುಂಬದ ಮಾತೃಭಾಷಿಕರು ಇನ್ನೊಂದು ಭಾಷಾಕುಟುಂಬದ ಭಾಷೆಗಳನ್ನು ತಮ್ಮ ಮಾತೃಭಾಷೆಯ ಮಟ್ಟದಲ್ಲಿ ಕಲಿತು ನಿಪುಣರಾಗುವುದು ಅಸಾಧ್ಯವೇ...
ಭಾಷೆಯೆಂದರೆ ಬರೀ ಪದಗಳಲ್ಲ.. ಹೇಳು ಎಂಬ ಶಬ್ದಕ್ಕೆ ಆಂಗ್ಲೀಯವಾಗಿ say,speak, tell, utter, ಹೀಗೆ ಹಲವು ಶಬ್ದಗಳಿದ್ದರೂ ಯಾ ಯಾ ಶಬ್ದಗಳ ಯಾ ಯಾ ಸಂದರ್ಭಾನುಸಾರ ಸನ್ನಿವೇಶಾನುಗುಣ ಉಪಯೋಗಸೂಕ್ತತೆಗಳನ್ನು ಕಾಣುವುದು ಸುಲಭವಲ್ಲ.
ಏಕವ್ಯಕ್ತಿಗೆ ಕಂನಡದ ಎಲ್ಲ ಶಬ್ದಗಳಿಗೆ ಪರ್ಯಾಯ ಆಂಗ್ಲೀಯ ಶಬ್ದಗಳು ತಿಳಿದ ಮಾತ್ರಕ್ಕೆ ಆತನಿಗೆ ಆಂಗ್ಲ ಸಂಭಾಷಣೆ ಸುಲಭವಲ್ಲ.. ಏಕೆಂದರೆ ಭಾಷೆಯಲ್ಲಿ ಪದಗಳಿಗಿಂತ ವಾಕ್ಯರಚನೆ, ವಾಕ್ಯರಚನೆಗೆ ಶಬ್ದಗಳು ಅನುಸರಣೆ ಮುಖ್ಯ..
who is he? = ಯಾರು ಅವನು? ಸರಿ.. ಹಾಗಾದರೆ ’is'ನ ಪಾತ್ರವೇನು ಎಂದು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ..
ಹಾಗೆ..
ಮಿಲ್ಕು ಕೊಡು ಎಂದ ತಕ್ಷಣ ಅದು ಆಂಗ್ಲವಲ್ಲ.. ಇದನ್ನು ಆಂಗ್ಲೀಯವಾಗಿಸಲು milk give ಎಂದರೆ ಅಪದ್ದವಾಗುವುದು.. 'give me the milk' ಎಂದು ಹೇಳಿದಾಗ me, the ಯಾಕೆ ಬೇಕು ಹಾಗಿ... ಪದಗಳು ಅನುಕ್ರಮ give ಆದ ಮೇಲೆ me ತರುವಾಯ the ತರುವಾಯ milk ಹೇಗೆ, ಯಾಕೆ ಬಂತು ಎಂದು ತಿಳಿದು ಕೊಂಡು ಇತರ ವಾಕ್ಯರಚನೆಯಲ್ಲಿ ತೊಡಗಲು ಶ್ರಮ ಮತ್ತು ಜಾಣ್ಮೆ ಬೇಕು....
ಶಂಕರಬಟ್ಟರ ’ಮಾತಿನ ಒಳಗುಟ್ಟು’ ಹೊತ್ತಗೆಯಲ್ಲಿ ಹೇಳಿರುವಂತೆ ನಮಗೆ ಮಾತೃಭಾಷಿಕ ಕನ್ನಡಿಗರಿಗೆ ಕನ್ನಡಭಾಷೆಯ ಕ್ಲಿಷ್ಟ ವ್ಯಾಕರಣಸೂತ್ರಗಳನ್ನು ಹೇಗೆ ಕಲಿತೆವೆಂದೇ ತಿಳಿಯದು.. ಆದರೂ ಕನ್ನಡದಂತಹ ಬಲು ಕ್ಲಿಷ್ಟವ್ಯಾಕರಣರಚನೆ ಹೊಂದಿರುವ ಭಾಷೆಯ ವ್ಯಾಕರಣಗಳ ತಿಳುವಳಿಕೆ ಮತ್ತು ಅದರ ಬಳಕೆ ನಮಗೆ ತಿಳಿಯದೇ ನಮ್ಮ ಮೆದುಳಲ್ಲಿ ಸಂಗ್ರಹವಾಗಿ ಕಾರ್ಯಪ್ರವೃತ್ತವಾಗಿದೆ...
ಈ ವ್ಯಾಕರಣಸೂತ್ರಗಳು ನಮ್ಮ ಮೆದುಳೊಗೆ ಹೇಗೆ ಹೋಯಿತು ಎಂದು ಇಂದಿಗೂ ವಿಜ್ಞಾನಿಗೆ ಹೇಳಲು ಕ್ಲಿಷ್ಟಕಷ್ಟವಾಗಿದೆಯಂತೆ... ಅದಕ್ಕೆ ಮಾತೃಭಾಷೆಯ ವ್ಯಾಕರಣನಿಯಮಗಳು ಹುಟ್ಟಿನಿಂದಲೇ ರಕ್ತಗತವಾಗಿ ಜೀನ್ಗಳಲ್ಲೇ ಬಂದಿರಬಹುದು ಎಂಬ ಊಹೆಗೆ ಪಾತ್ರವಾಗಿವೆ.
ಕನ್ನಡಿಗರು ಅದರಲ್ಲೂ ಹುಟ್ಟುನಿಂದ ಕನ್ನಡದನ್ನೇ ಆಡುನುಡಿಯಾಗಿಸಿಕೊಂಡವರಿಗೆ ಕನ್ನಡದ ಭಾಷಾಕುಟುಂಬಕ್ಕೆ ಸೇರಿದ ತಮಿಳು ಮುಂತಾದವುಗಳು ಭಾಷಾಒಳರಚನೆ ಕಲಿತರು ಅವನ್ನು ಉಲಿಯುವಲ್ಲಿ ತೊಡಕು ಇದ್ದೇ ಇರುತ್ತದೆ..
ಏಕೆಂದರೆ ಭಾಷಾಶಿಕ್ಷಣದಲ್ಲಿ ಉಲಿಕೆ/ಉಚ್ಚಾರಣೆ ಒಂದು ಮುಖ್ಯವಾದ ಅಂಶ.. ತಮಿೞು ಎಂದು ನಮಗೆ ಉಚ್ಚರಿಸಲೇ ಆಗದೇ ಇರಬಹುದು..
ಇನ್ನು ನಮ್ಮ ಕನ್ನಡದ ಭಾಷಾಕುಟುಂಬವಾದ ದ್ರಾವಿಡಕುಟುಂಬಕ್ಕೆ ಸೇರದ ಅನ್ಯಭಾಷಾಕುಟಂಬದ ಭಾಷೆಗಳ ಉಲಿಕೆ ಮತ್ತು ವಾಕ್ಯರಚನೆ ಇನ್ನೂ ಕ್ಲಿಷ್ಟ..
ಆಂಗ್ಲದ ಎರಡು ವಗಳನ್ನು, ಸಂಸ್ಕೃತ ಋ,ಷಗಳನ್ನು, ಅರಬ್ಬಿರ ಮೂರು ಹಗಳನ್ನು, ಮಳಯಾಳದ ಙಕಾರದಿಂದ ಮೊದಲಾಗುವ ಪದಗಳನ್ನು, ಉಲಿಯುವುದು ಅಸಾಧ್ಯದಷ್ಟ ಅಸುಲಭ. ಇನ್ನು ಅವುಗಳ ವಾಕ್ಯರಚನೆಯಂತೂ ಬಲು ಕಷ್ಟ.....
ಸಃ ಗಚ್ಛತಿ ಎಂಬ ಎರಡು ಪದದ ಸಂಸ್ಕೃತವಾಕ್ಯಕ್ಕೆ ಕನ್ನಡದಲ್ಲಿ ಸಮನಾಗಿ ’ಅವನು ಹೋಗುವನು’, ’ಅವಳು ಹೋಗುವಳು’, ’ಅದು ಹೋಗುವುದು’ ಎಂಬ ಆರುಪದಗಳು ಕೂಡಣೆಯಿಂದ ಮೂರು ವಾಕ್ಯಗಳನ್ನು ಹೇಳಬಹುದು.. ಈ ಮೂರಲ್ಲಿ ಯಾವ ವಾಕ್ಯವು ಸರಿಯಾದುದು ಎಂದು ನಿರ್ಧರಿಸಿಕೊಳ್ಳು ’ಸಃ ಗಚ್ಛತಿ’ಯ ಹಿಂದಿನ ವಾಕ್ಯ-ಸಂದರ್ಭವಸ್ತುಗಳ ಸರಿಯಾದ ಗ್ರಹಣ ಅವಶ್ಯ.
ಬೇರೆ ಭಾಷೆಯನ್ನು ಕಲಿಯುವುದರಲ್ಲಿ ನಮಗಿರುವ ಇಷ್ಟೊಂದು ತೊಡಕುಗಳನ್ನು ಗಮನಿಸಿ, ಬೇರೆ ಭಾಷೆಯನ್ನು ಕಲಿಯಲು ಸೂಚಿಸುವುದಕ್ಕಿಂತ ನಮ್ಮ ಭಾಷೆಯಲ್ಲಿ ಸರ್ವಜ್ಞಾನದ ಲಭ್ಯತೆಗೆ ಯೋಜಿಸುವುದು ಸುಲಭ ಮತ್ತು ಸೂಕ್ತ ಪರಿಹಾರ...
ಇದನ್ನೇ ನಮ್ಮ ನೆಲ ಹಲಪ್ರಾಜ್ಞರು ಮಾತೃಭಾಷಾಶಿಕ್ಷಣಕ್ಕೆ ಒತ್ತು ಎಂದು ಹೇಳಿಕೊಂಡು ಬಂದಿರುವುದು.
ನಮ್ಮ ಭಾಷೆಯಲ್ಲೇ ಜ್ಞಾನೋತ್ಪಾದನೆಗೆ ನಮ್ಮ ನೆಲದ ಬಹುಭಾಷಾಪಂಡಿತರು ಶ್ರಮಿಸಿ ಸಾಮಾನ್ಯ ಕನ್ನಡಿಗರಿಗೆ ಸುಲಭಗ್ರಾಹ್ಯವಾದ ಪುಸ್ತಕಗಳನ್ನು, ಆ ಪುಸ್ತಕಗಳನ್ನು ಸುಲಭವಾದ ಪದವಾಕ್ಯಬಳಕೆಗಳನ್ನು ಮಾಡಿಕೊಡಬೇಕು
ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
ಪ್ರೀತಿಯ ಮಹೇಶ್,
ಬರವಣಿಗೆ ದೃಷ್ಟಿಯಿಂದ ನೀವು ಹೇಳಿದ್ದು ಸತ್ಯ. ನಮ್ಮದಲ್ಲದ ಭಾಷೆಯಲ್ಲಿ ಬರವಣಿಗೆ ಕಷ್ಟ. ಅದನ್ನು ನಾನು ಪೂರ್ತಿಯಾಗಿ ಒಪ್ಪುತ್ತೇನೆ. ಅದು ನನ್ನ ಅನುಭವವೂ ಹೌದು.
ಆದರೆ, ಒಂಚೂರು ಆಸಕ್ತಿ ಇದ್ದರೆ ಇನ್ನೊಂದು ಭಾಷೆಯನ್ನು ಮೊದಲು ಅರ್ಥ ಮಾಡಿಕೊಳ್ಳುವುದನ್ನು ಹಾಗೂ ಕೊಂಚ ಪ್ರಯತ್ನಿಸಿದರೆ ಮಾತನಾಡುವುದನ್ನು ಕಲಿಯುವುದು ಸುಲಭ. ಬರವಣಿಗೆ ಹಂತಕ್ಕೆ ಏರಬೇಕೆಂದರೆ ಸಾಕಷ್ಟು ಸಾಧನೆ ಮಾಡಬೇಕಾಗುತ್ತದೆ.
ನನ್ನ ಲೇಖನದ ಮೂಲ ಆಶಯ ಈ ಎರಡು ಹಂತಗಳನ್ನು ಕುರಿತದ್ದಾಗಿತ್ತು.
ನೀವು ಹೇಳಿದಂತೆ, ಬರವಣಿಗೆ ಹಂತ ತಲುಪಲು ಸಾಕಷ್ಟು ಕೃಷಿ ಮಾಡಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
- ಚಾಮರಾಜ ಸವಡಿ
http://chamarajsavadi.blogspot.com
ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
ನಿಜ ಚಾಮರಾಜರೆ,
ಮತ್ತೊಂದು ಭಾಷೆಯನ್ನ ಕಲಿಯಲು "ಅನಿವಾರ್ಯತೆಗಿಂತ" ನಮ್ಮಲ್ಲಿ ಆಸಕ್ತಿ,ಅಭಿರುಚಿ,ಉತ್ಸುಕತೆಯಿರಬೇಕು, ಆ ಭಾಷೆಯ ಸೌಂದರ್ಯವನ್ನ ಕಂಡರಿಯುವ ಕೌತುಕವಿರಬೇಕು. ಮೊದಮೊದಲು ಕ್ಲಿಷ್ಟತೆಯ ಎಡರು ತೊಡರುಗಳು ಸಾಮಾನ್ಯ ಆದರೆ ಕಲಿಯುವ ಮನಃಸ್ಥಿತಿಯಿದ್ದು ಕ್ರಮಬದ್ಧವಾಗಿ ಕಲಿತರೆ ಕಾಲಕ್ರಮೇಣ ಯಾವುದೇ ಭಾಷೆ ಸರಳವೆನಿಸುತ್ತೆ.
ಒಂದೇ ದಿನದಲ್ಲಿ ಯಾರೂ ಪಂಡಿತರಾಗೋಲ್ಲ...ಕಲಿಯುವ ತೀವ್ರತೆ ಶ್ರಮವನ್ನನುಸರಿಸಿ ಭಾಷೆ ನಮಗೆ ಒಲಿಯುತ್ತಾ ಹೋಗತ್ತೆ. ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲೀಷ್ ಕಲಿತಿದ್ದ ಕಿಟ್ಟೆಲ್ ಗೆ ಕನ್ನಡ ಹೇಗೆ ಒಲಿಯಿತು ಅನ್ನೋದೇ ಅಚ್ಚರಿ ಅನಿಸುತ್ತೆ!!
ಬೇರೆ ಭಾಷೆ ಕಲಿಯುವಲ್ಲಿ ಮಾತೃಭಾಷೆ ಪ್ರಭಾವ ಬಹಳವಾಗೆ ಇರುತ್ತೆ. ಫ್ರೆಂಚ್ ಕಲಿವಾಗಂತೂ ಆಂಗ್ಲ ಪದಗಳ ಜಾಗದಲ್ಲಿ ನನಗೆ ಕನ್ನಡ ಪದಗಳೇ ಬೇಗ ಹೊಳೀತಿದ್ವು. ಹೊಸದೊಂದನ್ನ ಕಲಿಯಬೇಕಾದರೆ ಕೆಲವು ಸಲ ನಮ್ಮಲ್ಲಿರುವ ಅರೆಬರೆ ವಿಚಾರಗಳನ್ನ unlearn ಮಾಡಿಕೊಂಡು ಕಲಿಯಬೇಕಾಗುತ್ತೆ. ಬಿಂದಿಗೆ ಖಾಲಿಯಿದ್ದರೆ ತಾನೆ ನೀರನ್ನ ತುಂಬಿಕೊಳ್ಳಲು ಸಾಧ್ಯ...
ಧನ್ಯವಾದಗಳು
-ಸವಿತ
ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
ಸವಿತ ಅವರೇ,
ಈ ವಿಷಯದ ಬಗ್ಗೆ ಮಹೇಶ್ ವಿಭಿನ್ನ ನೋಟ ನೀಡಿದ್ದಾರೆ. ಕಿಟೆಲ್ ಮುಂತಾದವರು ಕನ್ನಡದಲ್ಲಿ ಬರವಣಿಗೆ ಮಾಡಲಿಲ್ಲ. ಅವರು ಮಾಡಿದ್ದು ತಾಂತ್ರಿಕ ಕೆಲಸವನ್ನು. ಬರವಣಿಗೆ ಸಿದ್ಧಿಸಬೇಕಾದರೆ ಸಾಕಷ್ಟು ಕೃಷಿ ಮಾಡಬೇಕಾಗುತ್ತದೆ. ಇನ್ನೊಂದು ಭಾಷೆಯ ನುಡಿಗಟ್ಟು ಅಷ್ಟು ಸುಲಭವಾಗಿ ಒದಗುವುದಿಲ್ಲ.
ಆದರೆ, ಕೊಂಚ ಆಸಕ್ತಿ ತೋರಿಸಿದರೆ ಇನ್ನೊಂದು ಭಾಷೆಯ ಶಬ್ದಾರ್ಥ ಬಳಕೆ, ಮಾತನಾಡುವುದು, ಅರ್ಥ ಮಾಡಿಕೊಳ್ಳುವುದು ಸುಲಭವಾಗಿ ದಕ್ಕಬಲ್ಲವು.
- ಚಾಮರಾಜ ಸವಡಿ
http://chamarajsavadi.blogspot.com