ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?
ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.
ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.
ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ.
ಮುಂದೆ ಇಂಥ ಹಲವಾರು ಆಸೆಗಳು ಹುಟ್ಟಿಕೊಂಡವು. ನಮ್ಮೂರಿನಲ್ಲಿದ್ದ ಟೆಂಟ್ ಸಿನಿಮಾ ಥೇಟರ್ನ ಗೇಟ್ಕೀಪರ್ ಆಗಬೇಕೆಂಬುದು ಅಂಥ ಕನಸುಗಳಲ್ಲಿ ಒಂದು. ಆಗ ದಿನಾ ಸಿನಿಮಾ ನೋಡಬಹುದು. ಅದಕ್ಕಾಗಿ ಕಾಸು ಕೊಡಬೇಕಿಲ್ಲ. ಅಷ್ಟೇ ಅಲ್ಲ, ಸಿನಿಮಾ ಯಾವಾಗ ಬದಲಾಗುತ್ತದೆ, ಹೊಸ ಸಿನಿಮಾ ಯಾವುದೆಂಬುದು ತಕ್ಷಣ ಗೊತ್ತಾಗುತ್ತದೆ ಎಂಬ ರೋಮಾಂಚನ. ಗೇಟ್ಕೀಪರ್ಗಳು ನನಗೆ ಗಂಧರ್ವ ಲೋಕದ ದ್ವಾರಪಾಲಕರಂತೆ ಕಾಣುತ್ತಿದ್ದರು. ಅವರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕೆಂದು ಎಷ್ಟೋ ಸಾರಿ ಆಸೆ ಪಟ್ಟಿದ್ದೆ. ಆದರೆ, ನನ್ನಂಥ ಚಿಕ್ಕಹುಡುಗರೊಂದಿಗೆ ಅವರು ಯಾವತ್ತೂ ಸಲಿಗೆಯಿಂದ ಇರುತ್ತಿರಲಿಲ್ಲ ಎಂಬುದೇ ಆಗ ನನಗೆ ವಿಷಾದದ ಹಾಗೂ ದಿನಗಟ್ಟಲೇ ಕಾಡಿದ ಚಿಂತೆಯ ವಿಷಯವಾಗಿತ್ತು.
ಒಂದೊಂದು ಕಾಲಘಟ್ಟದಲ್ಲೂ ನನ್ನ ಆಸೆಯ ರೀತಿಗಳು ಬದಲಾಗುತ್ತ ಹೋಗಿವೆ. ಕಾಲೇಜು ಪ್ರವೇಶಿಸಿದಾಗ, ಇಡೀ ತರಗತಿಯಲ್ಲಷ್ಟೇ ಏಕೆ, ಇಡೀ ಕಾಲೇಜಿನಲ್ಲಿ ನಾನೊಬ್ಬನೇ ಕುಳ್ಳ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿ ಹುಡುಗಿಯರೆಲ್ಲ ನನಗಿಂತ ಸಾಕಷ್ಟು ಎತ್ತರವಿದ್ದವರೇ. ಅವರು ಯಾವತ್ತೂ ನನ್ನನ್ನು ಸಹಪಾಠಿಯಂತೆ ಕಾಣಲಿಲ್ಲ. ತಮ್ಮ ಓಣಿಯ ಯಾರದೋ ಮನೆಯ ಪುಟ್ಟ ಹುಡುಗನಂತೆ ನನ್ನೊಂದಿಗೆ ವರ್ತಿಸುತ್ತಿದ್ದರು. ಆಗೆಲ್ಲ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನೂ ಎತ್ತರ ಬೆಳೆಯಬೇಕು ಎಂದು ಪದೆ ಪದೆ ಕನಸು ಕಾಣುತ್ತಿದ್ದೆ. ಬೆಳ್ಳಂಬೆಳಿಗ್ಗೆ ಎದ್ದು, ಕಾಲೇಜು ಮೈದಾನ ಹಾಗೂ ಸುತ್ತಮುತ್ತಲಿನ ಮರಗಿಡಗಳ ಕೈಗೆಟಕುವ ಕೊಂಬೆಗಳಿಗೆ ಜೋತು ಬೀಳುತ್ತಿದ್ದೆ. ಹಾಗೆ ಜೋತುಬೀಳುತ್ತಿದ್ದರೆ ಎತ್ತರವಾಗುತ್ತಾರೆ ಎಂದು ನನ್ನ ಗೆಳೆಯರು ಹೇಳಿದ್ದನ್ನು ನಂಬಿದ್ದೆ. ಅದರಿಂದ ಎತ್ತರವೇನೂ ಹೆಚ್ಚಾಗಲಿಲ್ಲ. ಆದರೆ, ಆರೋಗ್ಯಪ್ರಜ್ಞೆ ಚೆನ್ನಾಗಿ ಬೆಳೆಯಿತು. ಮುಂದೆ ನಾನು ಯೋಗಾಸನ ಕಲಿಯಲು ಈ ಪ್ರಯತ್ನ ತುಂಬ ನೆರವಾಯ್ತು.
ಯೋಗಾಸನ ಕಲಿತಿದ್ದು, ಹಿಪ್ನಾಟಿಸಂ ಕಲಿತಿದ್ದು, ಮುಂದೆ ಏರ್ಫೋರ್ಸ್ ಸೇರಲು ಬಾಲ್ಯ ಮತ್ತು ಕಾಲೇಜಿನ ದಿನಗಳ ಕನಸುಗಳ ಇಂಥ ಪ್ರೇರಣೆಗಳು ಅಪಾರ. ನಿತ್ಯದ ಊಟಕ್ಕೆ ಪರದಾಡಬೇಕಿದ್ದ ಕಾಲೇಜಿನ ದಿನಗಳು ನನ್ನಲ್ಲಿ ಅದೆಷ್ಟು ಅಸಹನೆ ಮೂಡಿಸಿದ್ದವೆಂದರೆ, ಮೊದಲ ಅವಕಾಶಕ್ಕೆ ಏರ್ಮನ್ ಕೆಲಸ ಸಿಕ್ಕಾಗ, ಎರಡನೇ ವಿಚಾರ ಕೂಡ ಮಾಡದೇ ಮಿಲಿಟರಿ ಸೇರಿಕೊಂಡಿದ್ದೆ. ಆದರೆ, ದುರದೃಷ್ಟ ಅಲ್ಲಿಯೂ ಒಕ್ಕರಿಸಿತ್ತು. ಇಡೀ ತಂಡದಲ್ಲಿ ನಾನೊಬ್ಬನೇ ಕುಳ್ಳ. ದೈಹಿಕ ಪರೀಕ್ಷೆಯಲ್ಲಿ ನನ್ನ ಎತ್ತರವನ್ನು ಮೂರು ಸಲ ಪರೀಕ್ಷಿಸಿದ್ದಾಯ್ತು. ಕೊನೆಗೂ ಕನಿಷ್ಟ ಮಟ್ಟಕ್ಕಿಂತ ಕೇವಲ ಎರಡು ಸೆಂ.ಮೀ. ಎತ್ತರವಿದ್ದುದನ್ನು ದೃಢಪಡಿಸಿಕೊಂಡ ನಂತರವೇ ನನ್ನ ನೇಮಕಾತಿ ಖಚಿತವಾಯ್ತು.
ಸಾಕಷ್ಟು ಎತ್ತರ ಬೆಳೆಯಲಿಲ್ಲ ಎಂಬ ಕೀಳರಿಮೆ ನನ್ನನ್ನು ಕಾಲು ಶತಮಾನ ಕಾಡಿದೆ. ಅದೇ ರೀತಿ ಒಂಚೂರು ದಪ್ಪವಾಗಬೇಕೆಂಬ ಬಯಕೆ ದಶಕಗಳ ಕಾಲ ಜೊತೆಗಿತ್ತು. ತಂತ್ರಜ್ಞಾನ ಕಲಿಯಬೇಕೆಂಬ ಹಂಬಲ, ಇಂಗ್ಲಿಷ್ ಓದಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿದ್ದೇ ಹೀಗೆ. ನಾನು ಪತ್ರಿಕೋದ್ಯಮ ಪ್ರವೇಶಿಸಿದ್ದೂ ಇಂಥದೇ ಒಂದು ಬೆಂಬಿಡದ ಬಯಕೆಯಿಂದಾಗಿ.
ಬರೆಯುತ್ತ ಹೋದರೆ, ಒಂದೊಂದು ಪ್ರಯೋಗದ ಬಗ್ಗೆಯೇ ಪುಟಗಟ್ಟಲೇ ಬರೆಯಬಹುದು. ಮುಂದೆಂದಾದರೂ ಅದನ್ನು ಬರೆದೇನು. ಮುಂದೆಂದೋ ನಕ್ಕುಬಿಡಬಹುದಾದಂಥ ಆಸೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೇ ಕಾಡಿರಬಹುದು ಅಂತ ಅನಿಸುತ್ತದೆ. ಅವತ್ತಿನ ನನ್ನನ್ನು ಇವತ್ತಿನ ದಿನಕ್ಕೆ ಹೋಲಿಸಿದಾಗ, ಇತರರಿಗಿರಲಿ, ನನಗೇ ಸಾಕಷ್ಟು ಅಚ್ಚರಿ ಉಂಟಾಗುತ್ತದೆ. ಎಷ್ಟೊಂದು ದೂರವನ್ನು ಕ್ರಮಿಸಿ ಬಂದೆನೆಲ್ಲ ಎಂದು ಒಮ್ಮೊಮ್ಮೆ ದಿಗಿಲೂ ಆಗುತ್ತದೆ.
ಒಂದೇ ಎರಡೇ, ಇಂಥ ನೂರಾರು ಪ್ರಯೋಗಗಳನ್ನು ಮಾಡಿದ್ದೇನೆ. ಸಾಕಷ್ಟು ಸಾರಿ ದುಬಾರಿ ಬೆಲೆಯನ್ನೂ ಕೊಟ್ಟಿದ್ದೇನೆ. ವರ್ಷಕ್ಕೊಂದರಂತೆ ನೌಕರಿಗಳನ್ನು ಬದಲಿಸಿದ್ದೇನೆ. ಮನೆಗಳನ್ನು ಬದಲಿಸಿದ್ದೇನೆ. ಎಲ್ಲವೂ ಬದಲಾಯ್ತು ಎಂದು ಅನಿಸಿ, ಒಬ್ಬನೇ ಕೂತು ಯೋಚಿಸಿ ನೋಡಿದಾಗ, ನಾನು ಏನೇನೂ ಬದಲಾಗಿಲ್ಲ ಎಂದು ಮತ್ತೆ ಮತ್ತೆ ಅನ್ನಿಸಿದೆ.
ಏಕೆಂದರೆ, ಮಾಡಿದ ತಪ್ಪುಗಳು ಪ್ರಯೋಗನಿರತನಾದಾಗ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ. ಮಾಡಿದ ಪ್ರತಿಯೊಂದು ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಕಲಿಯಲು ಯತ್ನಿಸುತ್ತಿದ್ದೇನೆ. ಇವತ್ತು ಏನಾದರೂ ಒಂಚೂರು ವಿವೇಚನೆ, ಅನುಭವ, ಜೀವನಪ್ರೀತಿ ನನ್ನಲ್ಲಿ ಕಂಡು ಬಂದರೆ, ಅವತ್ತಿನ ’ಸಿಲ್ಲಿ’ ಕನಸುಗಳೇ ಅದಕ್ಕೆ ಕಾರಣ ಅಂತ ಮಾತ್ರ ಹೇಳಬಲ್ಲೆ.
ಹೀಗಾಗಿ, ಹೊಸ ತಪ್ಪುಗಳನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ಅವನ್ನು ಎಂದಿನ ಉತ್ಸಾಹದಿಂದ ಮಾಡುತ್ತಲೇ ಇದ್ದೇನೆ.
- ಚಾಮರಾಜ ಸವಡಿ
- Chamaraj's blog
- Login or register to post comments
- 701 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಚಾಮರಾಜರೆ, ಬಹುಶ: ಎಲ್ಲರ ಜೀವನದಲ್ಲೂ ಈ ರೀತಿಯ ಸಾಮ್ಯತೆಗಳಿರಬಹುದು ಅನ್ನಿಸುತ್ತದೆ. ಅದರಲ್ಲೂ ಮಧ್ಯಮ ವರ್ಗದವರಲ್ಲಿಯೇ ಇದು ಹೆಚ್ಚು. ನನ್ನ ವಿಷಯಕ್ಕೆ ಬಂದರೆ ನಿಮ್ಮ ಜೋಳದ ಜಾಗದಲ್ಲಿ ರಾಗಿ ಎಂದು ಸೇರಿಸಿದರೆ ಸಾಕು, ಇನ್ನೆಲ್ಲಾ ಹಾಗೆಯೇ ನಡೆದಿದೆ, ಈಗಲೂ ನಡೆಯುತ್ತಿದೆ, ತಪ್ಪುಗಳು ಬುದ್ಧಿ ಕಲಿಸಿವೆ, ಈಗಲೂ ತಪ್ಪುಗಳಾಗುತ್ತಿವೆ, ಬುದ್ಧಿ ಕಲಿಸುತ್ತಿವೆ, ಆದರೂ ಕಲಿಯುವುದು ಇನ್ನೂ ಸಾಕಷ್ಟಿದೆ. ಅದಕ್ಕೆ ಇನ್ನೆಷ್ಟು ತಪ್ಪುಗಳನ್ನು ಮಾಡಬೇಕೋ!!
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ನಿಜ ಮಂಜುನಾಥ್ ಅವರೇ, ಎಲ್ಲರ ಜೀವನ ಹೆಣೆದಿರುವ ಎಳೆ ಒಂದೇ. ಹೀಗಾಗಿ, ಇನ್ನೊಬ್ಬರ ಅನುಭವಗಳನ್ನು ಓದಿದಾಗ, ಅವು ನಮ್ಮವೂ ಹೌದು ಅಂತ ಅನಿಸುವುದು. ಪ್ರತಿಯೊಂದು ಅನುಭವದ ಹಿಂದೆ ಸಾಕಷ್ಟು ತಪ್ಪುಗಳಿರುತ್ತವೆ. ಅವು ಪ್ರಯೋಗಶೀಲರಾಗಿದ್ದಾಗ ಎಸಗಿದಂಥವು. ಹೀಗಾಗಿ, ಅವುಗಳ ಬಗ್ಗೆ ಸಂಕೋಚಪಟ್ಟುಕೊಳ್ಳಬೇಕಿಲ್ಲ. ಅಲ್ವೆ? ಹೊಸ ತಪ್ಪುಗಳನ್ನು ಮಾಡಿದಷ್ಟೂ ಮನುಷ್ಯ ಪ್ರಬುದ್ಧನಾಗುತ್ತಾನೆ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಚಾಮರಾಜ್,
ನಾನೆಂದೋ ಪೀಠಿಕೆಹಾಕಿ, ಅರ್ಧಂಬರ್ಧ ಬರೆದು ನಿಲ್ಲಿಸಿ, ಮತ್ತೆ ಕೈಗೆತ್ತಿಕೊಳ್ಳಲಾಗದೇ ಉಳಿದು ಹೋದ ವಿಷಯ ಇದು.
ನಿಮ್ಮ ಈ ಅನಿಸಿಕೆಗಳು ಬಹುಷಃ ಪ್ರತಿಯೊಬ್ಬ ವ್ಯಕ್ತಿಯ ಅನುಭವದ ಮಾತೂ ಆಗಿದೆ...
ನೀವು ಬರೆದು ಹೊರಹಾಕ್ತೀರಿ. ಹೆಚ್ಚಿನವರು ಓದಿ, ತಮ್ಮನ್ನೇ ಅಲ್ಲಿ ಕಂಡುಕೊಂಡು, ಆನಂದಿಸ್ತಾರೆ.
-ಆತ್ರಾಡಿ ಸುರೇಶ ಹೆಗ್ಡೆ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ನಿಜ ಹೆಗ್ಡೆಯವರೇ, ಬರೆದಿದುಕ್ಕಿಂತ ಬರೆಯದೇ ಉಳಿದ ವಿಷಯಗಳ ಸೊಗಸೇ ಹೆಚ್ಚು. ನೀವಂದಂತೆ, ಇವೆಲ್ಲ ಪ್ರತಿಯೊಬ್ಬರ ಮನಸ್ಸಿನ ಭಾವನೆಗಳು. ಎಷ್ಟೋ ಬರಹಗಳನ್ನು ಓದಿದಾಗ, ಇವು ನಮ್ಮ ಅನುಭವಗಳೂ ಹೌದು ಅಂತ ಅನಿಸುತ್ತದೆ. ಅದು ಬರಹದ ಸೊಗಸೂ ಹೌದು.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಹೌದು ತಪ್ಪು ಮಾಡಿದರೆ ತಾನೇ ಏನಾದರು ಕಲಿಯೋಕೆ ಆಗೋದು. ಆದರು ಎಲ್ಲ ತಪ್ಪು ಮಾಡೋಕೆ ಸಮಯವಾದ್ರು ಯಾರತ್ರ ಇದೆ? ಬೇರೆಯವರ ತಪ್ಪಿನಿಂದ ಕಲಿಯೋದು ಇಲ್ಲೇ ಐಡಿಯಾ ಅಲ್ವ?
ಹೊಸ ತರಹದ ತಪ್ಪು ಮಾಡೋ ಹಾಗಿದ್ರೆ ಓಕೆ :)
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ತಪ್ಪುಗಳನ್ನು ಮಾಡೋಕೆ ಸಮಯ ಬೇಕೆಂತೇನಿಲ್ಲ ತೇಜೇಶ್. ಬೇರೆಯವರ ತಪ್ಪಿನಿಂದ ಎಲ್ರೂ ಪಾಠ ಕಲಿಯುವಂತಿದ್ದರೆ, ಜಗತ್ತು ಎರಡು ಸಾವಿರ ವರ್ಷಗಳ ಹಿಂದೆಯೇ ಪೂರ್ತಿಯಾಗಿ ನಾಗರಿಕವಾಗಿರೋದು. ತನ್ನ ಹೊಟ್ಟೆಗೆ ಹೇಗೆ ತಾನೇ ತಿನ್ನಬೇಕಾಗುತ್ತದೋ, ಹಾಗೆ ತನ್ನ ಜೀವನಾನುಭವವೂ ತನ್ನ ತಪ್ಪಿನಿಂದಲೇ ಬರಬೇಕಾಗುತ್ತದೆ. ಇತರರ ಅನುಭವ ಏನೇ ಹೇಳಲಿ, ಬಹುತೇಕ ಜನ ತಮ್ಮ ತಪ್ಪಿನಿಂದ ಮಾತ್ರ ಕಲಿಯಬಲ್ಲರು.
ಕುಳ್ಳನೆಂಬ ಸಮಸ್ಯೆ
ಗೆಳೆಯ,
ಈ ಕುಳ್ಳತನದ ಬಗ್ಗೆ ನನಗೂ ಸಮಸ್ಯೆಯಿತ್ತು. ಈಗಿಲ್ಲ.
ಇದನ್ನು ನೆಪೋಲಿಯನ್ ಸಿಂಡ್ರೋಮ್ ಎನ್ನುತ್ತಾರಂತೆ
http://en.wikipedia....
ಸಂದೀಪ
ಉ: ಕುಳ್ಳನೆಂಬ ಸಮಸ್ಯೆ
ಸಮಸ್ಯೆಗೆ ಯಾವ ಹೆಸರಿಟ್ಟರೇನು ಸಂದೀಪ್, ಅದು ಸಮಸ್ಯೆಯೇ ತಾನೆ? ಅದನ್ನು ಹೇಗೆ ಗೆದ್ದೆವೆಂಬುದು ಮುಖ್ಯ. ಈಗಂತೂ ಪ್ರತಿ ದಿನವೂ ಒಂದೊಂದು ಕಾರಣಕ್ಕೆ ವಿಶೇಷವೇ. ಅಪ್ಪನಿಗೊಂದಿನ, ಅಮ್ಮನಿಗೊಂದು ದಿನ, ಪ್ರೀತಿಗೊಂದು ದಿನ, ಭೀತಿಗೊಂದು ದಿನ. ಮುಂದೊಮ್ಮೆ ಕೋತಿಗೊಂದು ದಿನವೂ ಬರಬಹುದು. ಪ್ರತಿಯೊಂದು ಭಾವನೆ, ದೌರ್ಬಲ್ಯಕ್ಕೂ ಒಂದೊಂದು ಸಿಂಡ್ರೊಮ್ ಹೆಸರಿಡುವುದು ವೈಜ್ಞಾನಿಕ ಕಾರಣಕ್ಕೆ ಅವಶ್ಯವಿರಬಹುದು. ಆದರೆ, ನಿತ್ಯದ ಬದುಕಿಗೆ ಅದು ಬೇಕಾ?
ಉ: ಕುಳ್ಳನೆಂಬ ಸಮಸ್ಯೆ
ಹೌದು.
ನಮಗರ್ಥವಾಗಿ, ನಾವು ಗೆದ್ದ ಸಮಸ್ಯೆ ಇತರರಿಗೆ ತಿಳಿಸುವ ರೀತಿ ಇದಲ್ಲವೆ ಚಾಮಣ್ಣ. ಎಲ್ಲರಿಗೂ ಸ್ವಸಾಮರ್ಥ್ಯದಿಂದ ಸಮಸ್ಯೆಯನ್ನು ಅರಿಯುವ ಮತ್ತು ಅದನ್ನು ಗೆಲ್ಲುವ ಶಕ್ತಿ ಇಲ್ಲ ಅಂಥವರಿಗಾಗಿ ಹೀಗಿದೆ.
ಸಮಸ್ಯೆಯ ಅರಿವು ಎಲ್ಲರಿಗೂ ತಿಳಿಯುವುದಿಲ್ಲ ಅಲ್ಲವೆ?
ನನಗರ್ಥವಾದಗ ನನಗೆ ೨೩ ವರ್ಷ ತುಂಬಿತ್ತು. ಹೊರಬಂದಾಗ ಪ್ರಾಯ ೨೫ ಆಗಿತ್ತು. ಇದಕ್ಕಿಂತ ಮುಂಚೆ ಯಾರಾದರು ತಿಳಿಹೇಳಿದರೂ ತಿಳಿಯುತ್ತಿತ್ತೆ ಅನ್ನುವುದು ಸಂಶಯ :)
ಅರಿವೆ ಗುರು
ಸಂದೀಪ
ಉ: ಕುಳ್ಳನೆಂಬ ಸಮಸ್ಯೆ
ಇನ್ನೊಬ್ಬರ ಅನುಭವದಿಂದ ಎಲ್ಲರೂ ಜಾಣರಾಗುವಂತಿದ್ದರೆ ಜಗತ್ತು ಬೇರೆಯೇ ಆಗಿರುತ್ತಿತ್ತು ಸಂದೀಪ್. ನಾವೆಲ್ಲ ನಮ್ಮ ನಮ್ಮ ಅನುಭವದಿಂದಲೇ ಪಾಠ ಕಲಿಯೋದು. ಹಾಗಂತ ಇತರರ ಅನುಭವ ಅನುಪಯುಕ್ತ ಎಂದು ಹೇಳುತ್ತಿಲ್ಲ. ಆದರೆ, ಅದನ್ನು ಒಪ್ಪಿಕೊಳ್ಳಲು ಕೂಡ ಪೆಟ್ಟು ತಿಂದು ಕಲಿತ ಸಂಸ್ಕಾರ ಬೇಕಾಗುತ್ತದೆ. ಈಗ ನಿಮಗಿಂತ ನನಗೆ ಹೆಚ್ಚು ವಯಸ್ಸಾಗಿದೆ. ಹಾಗಂತ, ನನ್ನ ಅನುಭವಕ್ಕೆ ದಕ್ಕಿದ ವಿಷಯಗಳನ್ನು ನೀವು ಒಪ್ಪಿಕೊಂಡೀರಾ? ಖಂಡಿತ ಇಲ್ಲ. ಹಾಗೆ ಒಪ್ಪಿಕೊಂಡು ಬದಲಾದ ವ್ಯಕ್ತಿಯನ್ನು ಇವತ್ತಿಗೂ ನಾನು ನೋಡಿಲ್ಲ. ನೀವು ನೋಡಿದ್ದರೆ ತಿಳಿಸಿ, ಬಹುಶಃ ತುಂಬ ಜನರಿಗೆ ಉಪಯೋಗವಾದೀತು. :)
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಚಾಮರಾಜ್ ಸರ್,
ನಿಮ್ಮ ಲೇಖನವನ್ನು ಓದಿದಾಗ ನಾನು ಚಿಕ್ಕವಳಿದ್ದಾಗ ನಮ್ಮ ಸಂಬಂಧಿಕರದೇ ಒಂದು ಸಿನಿಮಾ ಥೇಟರ್ ಇದ್ದರೇ....! ಎಷ್ಟು ಚೆನ್ನಾಗಿರುತಿತ್ತು ಅಂತ ಪರಿತಪಿಸುತಿದ್ದುದು ನೆನಪಾಯಿತು. ಬಹುಶಃ ನೀವು ಕಂಡತಹ ಸಣ್ಣ ಸಣ್ಣ ಕನಸುಗಳೇ ಪ್ರತಿಯೋಬ್ಬರಿಗೂ ಜೀವನದಲ್ಲಿ ಮುಂದೆ ಸಾಧಿಸಲು ನೆರವಾಗಬಲ್ಲ ಟಾಣಿಕುಗಳು.......
ನಿಮ್ಮಂತೆಯೇ ನಾನು ಕೂಡಾ ಕುಳ್ಳಿಯೇ, ಅದರ ಪರಿಣಾಮವನ್ನು ಚಿಕ್ಕವಳಿದ್ದಾಗ ನಾನೂ ಕೂಡಾ ಹಲವಾರು ಬಾರಿ ಅನುಭವಿಸಿದ್ದೇನೆ. ಏಕೆಂದರೆ ನಾನು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಓದುತಿದ್ದಾಗ ನನಗಿದ್ದವರು ಎಲ್ಲಾ ಎತ್ತರವಿರುವ ಗೆಳತಿಯರೇ...........! ನನಗೋ ನನ್ನ ಗೆಳತಿಯರೊಂದಿಗೆ ಹಿಂದಿನ ಬೆಂಚಿನಲ್ಲಿ ಕೂಡುವ ತವಕ ಆದರೆ ನನ್ನನ್ನು ಮುಂದಿನ ಬೆಂಚಿನಲ್ಲಿ ಕೂಡಿಸುತಿದ್ದರು.
ಇಂಥಹ ಹಲವಾರು ನಮ್ಮ ಬಾಲ್ಯದ ಘಟನೆಗಳನ್ನು ಇನ್ನೊಮ್ಮೆ ಮೆಲುಕು ಹಾಕುವಂತೆ ಮಾಡಿದಕ್ಕೆ ನಿಮಗೆ ಮತ್ತು ನಿಮ್ಮ ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳಿಗೆ ನನ್ನದೊಂದು ಸಲಾಮ್...................
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಥ್ಯಾಂಕ್ಸ್ ನೇತ್ರಾ. ನಾನೂ ಮುಂದಿನ ಬೆಂಚಿನ ವಿದ್ಯಾರ್ಥಿಯೇ. :)
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಸಧ್ಯ, ನನಗೀ ಸಮಸ್ಯೆ ಎಂದಿಗೂ ಕಾಡಲಿಲ್ಲ! ನಮ್ಮ ತರಗತಿಯಲ್ಲಿ ನಾನು ಎಲ್ಲರಿಗಿಂತ ಎತ್ತರವಾಗಿದ್ದೆ! ಈಗಲೂ ನಮ್ಮ ಕೆಂಪುಮೂತಿಯ ಕೆನಡಾದಿಂದ ಬಂದಿರುವ ಎಂಡಿಯವರಿಗಿಂತ ನನ್ನ ಎತ್ತರವೇ ಹೆಚ್ಚಿದೆ. ಆ ಮನುಷ್ಯ ನನ್ನ ಜೊತ ಮಾತಾಡುವಾಗ ಈಗಲೂ ಆದಷ್ಟು ದೂರ ನಿಂತೇ ಮಾತಾಡುತ್ತಾರೆ. ನಾನು ಐದಡಿ ಒಂಭತ್ತಿಂಚಿದ್ದರೆ ಅವರು ನಾಲ್ಕಿಂಚು ಕಡಿಮೆ!
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ನನಗೊಂದಾಸೆ ಇತ್ತು. "ಗಡ್ದ ಬಿಡಬೇಕು, ಎಲ್ಲರ ನಡುವೆ ನಾನು ಭಿನ್ನವಾಗಿ ಕಾಣಬೇಕು,ನನ್ನನ್ನು ನನ್ನ ಗಡ್ದದಿಂದಲೇ ಜನ ಗುರುತಿಸಬೇಕು". ಗಡ್ದ ಬಿಟ್ಟೆ. ಆರು ತಿಂಗಳಲ್ಲಿ ಬೇಜಾರಾಗಿ ಹೋಯ್ತು.ಈಗ ನೆನಸಿಕೊಂಡರೆ ನಗು ಬರುತ್ತೆ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ನೀವು ಒಂದ್ವೇಳೆ ಗಡ್ಡ ಬಿಟ್ಟಿದ್ದರೆ, ಗಡ್ಡದ ಶ್ರೀಧರ್ ಎಂದು ಜನ ಗುರುತಿಸುತ್ತಿದ್ದಿರೇನೋ !
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಬರಹ ನಮ್ಮದೇ ಕಥೆಯಂತಿದೆ :) ಏರ್ ಫೋರ್ಸ್ ಸೇರಿ ಮುಂದೇನಾಯ್ತು ಎನ್ನೋ ಕುತೂಹಲ, ಪತ್ರಿಕೋದ್ಯಮಕ್ಕೆ ಯಾಕೆ ಬಂದ್ರಿ ಅನ್ನೋ ಕುತೂಹಲ ತಣಿಯಲೇ ಇಲ್ಲ.. ನಿಮ್ಮ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳೋ ಕುತೂಹಲ, ಹಾಗೆನೇ ನಿಮ್ಮ ಏರ್ ಫೋರ್ಸ್ ಅನುಭವದ ಬಗ್ಗೇನೂ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಖಂಡಿತ ಪಾಲಚಂದ್ರ. ಮುಂದೆ, ಅವಕಾಶವಾದಾಗೊಮ್ಮೆ ಹೇಳ್ತಾ ಹೋಗ್ತೇನೆ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಎಂದಿನಂತೆ ಸೊಗಸಾದ ಲೇಖನ...
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಥ್ಯಾಂಕ್ಸ್ ಸುಜಾತಾ, ಎಂದಿನಂತೆ :)
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಲೇಖನ ಚನ್ನಾಗಿದೆ.ಸರ್.ನನ್ನಗೂ ಬಾಲ್ಯದ ದಿನಗಳು ನೇನಪಾಗುತ್ತವೆ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಥ್ಯಾಂಕ್ಸ್ ಮಹಾಲಕ್ಷ್ಮೀಯವರೇ. ಹರ್ಷ ಹರ್ಷಿತರಾಗಿದ್ದಾರಾ? :) ಎರಡು ವರ್ಷಗಳ ಮೇಲಾಯ್ತು ಅವರನ್ನು ಭೇಟಿಯಾಗಿ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಚೆನ್ನಾಗಿತ್ತು ಚಾಮರಾಜ್ ಅವರೆ,
ಸಿಲ್ಲಿಕನಸುಗಳು ಎಲ್ಲರ ಜೀವನದಲ್ಲಿ ಅನಿವಾರ್ಯ ಅಂಗವಾಗಿದೆ ಅಲ್ವಾ. ಕನಸುಗಳು ವಿವಿಧವಾಗಿರುತ್ತೆ ಅಷ್ಟೇ (ಬೇರೆ ಬೇರೆ).
ಅಂದಹಾಗೆ ನಿಮ್ಮ ಗೌರಿ ಹೇಗಿದ್ದಾಳೆ? ನನಗೆ ನಿಮ್ಮ ಈ-ವಿಳಾಸ ಕೊಡಿ ಸಾಧ್ಯವಾದರೆ,
~ಮೀನ
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಥ್ಯಾಂಕ್ಸ್ ಮೀನಾ ಮೇಡಂ. ಸಿಲ್ಲಿ ಕನಸುಗಳಿಂದಲೇ ಬದುಕು ಬೆಳೆಯೋದು, ಅಲ್ವೆ?
ಗೌರಿ ಚೆನ್ನಾಗಿದ್ದಾಳೆ. ನನ್ನ ಈಮೇಲ್ ವಿಳಾಸ: chamarajs AT gmail DOT com
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಸರ್,
ಹರ್ಷಿತರಾಗಿದ್ದಾರೆ. ಅವರು ಗೌರಿ, ರೇಖಾ ವೈನಿ ಬಗ್ಗೆ ಬಹಳಷ್ಟು ಹೇಳಿದ್ದಾರೆ. ನಾನು ಅವರನ್ನು ಭೇಟಿ ಮಾಡಬೇಕು. ಸದ್ಯ ನಿಮ್ಮ ಲೇಖನಗಳನ್ನು ಓದುವುದೇ ನನ್ನ ಪಾಠ ಅಂತ ನಮ್ಮ ಮನೆಯವರು ಹೇಳಿದ್ದಾರೆ. ಏಕೆಂದರೆ ಅವರು ನಿಮ್ಮಿಂದ ಬಹಳ ಕಲಿತಿದ್ದಾರಂತೆ.
ನಿಮ್ಮಿಂದಾಗಿಯೇ ಸಂಪದಕ್ಕೆ ಅವರು ಬರೆಯುವಂತಾಗಿದ್ದು, ಈಗ ನಾನು ಸಹ, ಹಾಗೆಯೇ ಹರಿ ಅಣ್ಣ, ವಸಂತ ಅಣ್ಣ, ಮುರಳಿ ಅಣ್ಣ ಅವರ ಪರಿಚಯವಾದದ್ದು ಎಲ್ಲ ಕ್ರೆಡಿಟ್ ನಿಮಗೆ ಸರ್. ಈ ಬಾರಿ ಧಾರವಾಡಕ್ಕೆ ಬಂದಾಗ ಮನೆಗೆ ಬನ್ನಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಾನೂ ಕೂಡ ಒಂದು ಲೇಖನ ‘ನಾವಳ ಕಣ’ ಅಮ್ಮನ ಬಗ್ಗೆ ಸಂಪದದಲ್ಲಿ ಬರೆದಿದ್ದೇನೆ. ಹರಿ ಅಣ್ಣ ಮುಖ ಪುಟದಲ್ಲಿ ಹಾಕಿದ್ದಾರೆ. ನನಗಾದ ಖುಷಿ ಅಷ್ಟಿಷ್ಟಲ್ಲ. ದಯವಿಟ್ಟು ಓದಿ ಪ್ರತಿಕ್ರಿಯಿಸಿ. ಇದು ನನ್ನ ಮೊದಲ ಲೇಖನ.
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಹರ್ಷ ಸಿಕ್ಕಾಪಟ್ಟೆ ಹೊಗಳುತ್ತಾರೆ. ಏನು ಮಾಡುವುದು ಹೇಳಿ!
ನಿಮ್ಮ ಪಾಡಿಗೆ ನೀವು ಬರೆಯುತ್ತೀರಿ. ಬರೆಯುವುದನ್ನು ಆಸ್ವಾದಿಸಿದರೆ ಸಾಕು, ಹೊಗಳಿಕೆ, ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.