ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?
ಪತ್ರಕರ್ತರು ಹಾಗೂ ಚಿತ್ರನಟಿ ರಮ್ಯಾ ನಡುವಿನ ಅಹಂ ವಿಷಯ ಹೊಸ ಜಗಳಕ್ಕೆ ಕಾರಣವಾಗಿದೆ.
ಘಟನೆ ನಡೆದಿದ್ದು ಭಾನುವಾರ. ಅದು ’ಜೊತೆಗಾರ’ ಚಿತ್ರದ ಸುದ್ದಿಗೋಷ್ಠಿ. ನಿರ್ಮಾಪಕ ಅಶ್ವಿನಿ ರಾಂ ಪ್ರಸಾದ್ ಚಿತ್ರದ ವಿವರಗಳನ್ನು ಹಂಚಿಕೊಳ್ಳಲು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ’ಜೋಗಿ’ಯಂತಹ ಸೂಪರ್ಹಿಟ್ ಚಿತ್ರ ನೀಡಿದ ನಿರ್ಮಾಪಕ ಅವರು. ಹೀಗಾಗಿ, ಪತ್ರಕರ್ತರಲ್ಲಿ ಕುತೂಹಲವಿತ್ತು. ಇತ್ತೀಚೆಗೆ ಯಶಸ್ಸು ಕಾಣದೇ ಮಂಕಾಗಿರುವ ನಟ ಪ್ರೇಮ್ ಹಾಗೂ ಯಶಸ್ಸಿನಿಂದ ಕಂಗೊಳಿಸುತ್ತಿರುವ ನಟಿ ರಮ್ಯಾ ಜೋಡಿ ಇದ್ದ ಚಿತ್ರವಾಗಿದ್ದರಿಂದ, ಕುತೂಹಲ ಜೋರಾಗೇ ಇತ್ತು.
ಅದೇಕೋ ಗೊತ್ತಿಲ್ಲ, ’ಜೊತೆಗಾರ’ ಚಿತ್ರದ ಪ್ರಾರಂಭದಿಂದ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್ಗೆ ಸಮಸ್ಯೆಗಳ ಸರಮಾಲೆಯೇ. ಚಿತ್ರದಲ್ಲಿ ಪ್ರೇಮ್ ಕೇವಲ ಸಹನಟ ಎಂದು ರಾಂಪ್ರಸಾದ್ ಹೇಳಿದರು ಎಂದು ಪ್ರೇಮ್ ಕೆಂಡಾಮಂಡಲವಾಗಿದ್ದರು. ಚಿತ್ರದ ಯಾವುದೇ ಪ್ರೋಮೋಷನ್ಗೂ ಬರುವುದಿಲ್ಲ ಎಂದು ಮುನಿಸಿಕೊಂಡಿದ್ದರು. ಹೀಗಾಗಿ, ಪ್ರೇಮ್ ಹಾಗೂ ನಾಯಕಿ ರಮ್ಯಾ ಅನುಪಸ್ಥಿತಿಯಲ್ಲಿ ಒಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ರಾಮಪ್ರಸಾದ್, ಜೊತೆಗಾರ ಚಿತ್ರದ ಹೀರೋ ಮತ್ತು ಹೀರೋಯಿನ್ ರಮ್ಯಾ ಮಾತ್ರ ಎಂದು ಹೇಳುವ ಮೂಲಕ ಪ್ರೇಮ್ರನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಮೇ ಹದಿನೈದರಂದು ತೆರೆ ಕಾಣಬೇಕಿದ್ದ ’ಜೊತೆಗಾರ’ ಚಿತ್ರ ಒಂದು ವಾರ ಮುಂದೆ ಹೋಗಿ ಮೇ.೨೨ ರಂದು ತೆರೆಗೆ ಬರುವುದಾಗಿ ಭಾವಿಸಲಾಗಿತ್ತು.
ಆದರೆ, ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲದ ಕಾರಣ ಬಿಡುಗಡೆ ಮತ್ತೆ ಮುಂದಕ್ಕೆ ಹೋಯಿತು. ಕೊನೆಗೂ ರಮ್ಯಾ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದು ಇದೇ ಮೊದಲ ಬಾರಿ ನಿರ್ಮಾಪಕ ರಾಮಪ್ರಸಾದ್, ನಟ ಪ್ರೇಮ್ ಹಾಗೂ ರಮ್ಯಾ ಇಂದಿನ ಸುದ್ದಿಗೋಷ್ಠಿಗೆ ಆಗಮಿಸಬೇಕಿತ್ತು. ತಾನು ಬರುವುದು ಒಂದು ಗಂಟೆ ತಡವಾಗುತ್ತದೆ ಎಂದು ಸುದ್ದಿಗೋಷ್ಠಿಗೂ ಮುಂಚೆಯೇ ನಿರ್ಮಾಪಕ ರಾಮಪ್ರಸಾದ್ಗೆ ರಮ್ಯಾ ಹೇಳಿದ್ದರು. ಆದರೆ, ಈ ವಿಷಯ ತಿಳಿಸದ ರಾಮಪ್ರಸಾದ್ ರಮ್ಯಾ ಬರುವವರೆಗೆ ಸುದ್ದಿಗೋಷ್ಠಿ ಆರಂಭಿಸಲೇ ಇಲ್ಲ. ಅವರು ತಡವಾಗಿ ಬರ್ತಾರೆ ಎಂಬುದನ್ನೂ ತಿಳಿಸಲಿಲ್ಲ.
ಕಾಯುತ್ತ ಕೂತ ಪತ್ರಕರ್ತರ ಸಹನೆ ಮುಗಿದಿತ್ತು. ರಮ್ಯಾ ಬರುತ್ತಲೇ, ಕ್ಷಮೆ ಕೇಳಿ ಅಂತ ಮುಗಿಬಿದ್ದರು. ತಡವಾಗಿ ಬರುತ್ತೇನೆ ಎಂದು ಮುಂಚೆಯೇ ಹೇಳಿದ್ದೆ. ನೀವೆಲ್ಲ ಊಟ ಮಾಡುತ್ತಿರುತ್ತೀರಿ ಅಂತ ಭಾವಿಸಿದ್ದೆ. ತಪ್ಪೇ ಮಾಡದ ನಾನು ಕ್ಷಮೆ ಯಾಕೆ ಕೇಳಬೇಕು? ಎಂಬುದು ರಮ್ಯಾ ವಾದ.
ಆದರೆ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡ್ ಸಹನೆ ಪೂರ್ತಿಯಾಗಿ ಕಳೆದುಕೊಂಡಿದ್ದರು. ಕ್ಷಮೆ ಕೇಳಲಿಲ್ಲ ಎಂಬುದು ಅವರನ್ನು ಕೆರಳಿಸಿತು. ರಮ್ಯಾಗೆ ಅವಳು, ಇವಳು ಎಂದೆಲ್ಲ ಕೂಗಾಡಲಾರಂಭಿಸಿದಾಗ, ರಮ್ಯಾ ಕೂಡ ಸಹನೆ ಕಳೆದುಕೊಂಡಳು. ಮೊದಲು ನೀವು ಸರಿಯಾಗಿ ಮಾತನಾಡಿ ಎಂದಳು. ಬಹುತೇಕ ಪತ್ರಕರ್ತರು ಸುಮ್ಮನೇ ಕೂತಿದ್ದರೂ, ಗಣೇಶ ಕಾಸರಗೋಡ್ ಮಾತ್ರ ವಾಗ್ದಾಳಿ ಮುಂದುವರಿಸಿದರು. ಕೆರಳಿದ ರಮ್ಯಾ, ನಿಮ್ಮನ್ನು ಬಾ ಅಂತ ಕರೆದಿದ್ದಿಲ್ಲ, ಹೋಗಬೇಕೆನ್ನಿಸಿದರೆ ಎದ್ದು ಹೋಗಿ ಎಂದು ಹೇಳಿಬಿಟ್ಟರು.
ಇಡೀ ವಿವಾದ ತೀವ್ರಗೊಂಡಿದ್ದು ಇಲ್ಲಿಂದ.
ಪತ್ರಕರ್ತರು ಸುದ್ದಿಗೋಷ್ಠಿ ಬಹಿಷ್ಕರಿಸಿದರು. ನಾನಿರೋದೆ ಹಾಗೆ, ಕ್ಷಮೆ ಕೇಳಲ್ಲ ಎಂದು ರಮ್ಯಾ ಕೂಡ ಹೊರನಡೆದರು.
ಇಡೀ ಘಟನೆಯನ್ನು ವಿಷ್ಲೇಶಿಸಿದರೆ, ಇದು ವೈಯಕ್ತಿಕ ಅಹಂನಿಂದ ಬೆಳೆದ ಘಟನೆ. ಗಣೇಶ್ ಕಾಸರಗೋಡ್ ಇಡೀ ಘಟನೆಯನ್ನು ತೀರಾ ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಂಡರು ಎಂದು ಅನಿಸುತ್ತದೆ. ಹಿಂದೆ ರಮ್ಯಾ ಜನ್ಮ ವೃತ್ತಾಂತ ಕೆಲ ಪತ್ರಿಕೆಗಳಲ್ಲಿ ಬರಲು ಗಣೇಶ ಕಾಸರಗೋಡ್ ಕಾರಣ ಎಂಬುದು ರಮ್ಯಾ ದೂರು. ಹೀಗಾಗಿ, ಕ್ಷಮೆ ಯಾಚಿಸಬೇಕೆಂಬ ಗಣೇಶ್ ಕಾಸರಗೋಡ್ ಅವರ ಬೇಡಿಕೆಗೆ ಅವರು ಒಪ್ಪಿಲ್ಲ. ಇದು ನಟಿಯ ಪೊಗರು ಎಂಬಂತೆ ಗಣೇಶ್ ಕೆರಳಿದ್ದಾರೆ. ವೈಯಕ್ತಿಕ ಮಟ್ಟದ ಈ ಜಗಳ ಸಾರ್ವತ್ರಿಕವಾಗಲು ಕಾರಣ ಇದು.
ಇದೊಂದೇ ಘಟನೆಯಲ್ಲ, ಇಂಥ ಹಲವಾರು ಸಂದರ್ಭಗಳಲ್ಲಿ ಪತ್ರಕರ್ತರು ಸುದ್ದಿಗೋಷ್ಠಿ ಬಹಿಷ್ಕರಿಸಿದ್ದಾರೆ. ವಿಶ್ಲೇಷಿಸಿ ನೋಡಿದರೆ, ವೈಯಕ್ತಿಕ ಅಹಂ ಇದಕ್ಕೆ ಕಾರಣ ಎಂಬುದು ಬಹುತೇಕ ಘಟನೆಗಳಲ್ಲಿ ಸ್ಪಷ್ಟ.
ಹಿರಿಯರಾದ ಗಣೇಶ ಕಾಸರಗೋಡ್ ತಾಳ್ಮೆ ಕಳೆದುಕೊಳ್ಳಬಾರದಿತ್ತು. ಇಡೀ ಘಟನೆಗೆ ಮುಖ್ಯ ಕಾರಣಕರ್ತ ಎಂದರೆ, ’ಜೊತೆಗಾರ’ ಸಿನಿಮಾ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್. ಕ್ಷಮೆ ಕೇಳಬೇಕಿದ್ದು ಅವರು. ಆದರೆ, ಸುಮ್ಮನೇ ಕೂಡುವ ಮೂಲಕ ರಮ್ಯಾ ಹಾಗೂ ಪತ್ರಕರ್ತರ ನಡುವೆ ವೈಮನಸ್ಯ ಬೆಳೆಯಲು ಅವರು ಕಾರಣರಾದರು.
ಪ್ರತಿಭಾವಂತರನ್ನು ಅಹಂ ಹಾಳು ಮಾಡೋದು ಹೀಗೆ.
- ಚಾಮರಾಜ ಸವಡಿ
- Chamaraj's blog
- Login or register to post comments
- 514 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಉ: ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?
ಚಾಮರಾಜ್
ಹೌದು, ನಾನು ನೋಡಿದೆ, ನೆನ್ನೆ ಕೋಲಾರ "ನೀರ ನಿಶ್ಚಿಂತೆ" ಕಾರ್ಯಕ್ರಮ ಮುಗಿಸಿ ಬರುವಾಗ ತಡರಾತ್ರಿ ೧೦.೩೦ ಆಗಿತ್ತು. ಜೋರು ಮಳೆ, ಮನೆಗೆ ಬರುವಷ್ಟರಲ್ಲಿ ಮಳೆಯ ಆರ್ಭಟಕ್ಕೆ ಇಡೀ ಬೆಂಗಳೂರು ಬೆಚ್ಚಗೆ ಕೂತಿತ್ತು. ಇಂತಹ ಸಮಯದಲ್ಲಿ ರಮ್ಯಾಳ ಹಾಟ್ ಹಾಟ್ ಜಗಳಗಳು ನೋಡಿದೆ. ವ್ಯೆಯುಕ್ತಿಕ ನಿಂದನೆಗಳು ಸಿನಿಮಾ ಪ್ರಪಂಚದಲ್ಲಿ ಈಗ ಸಾಮಾನ್ಯ,
"ಎಲ್ಲಾರು ಮಾಡುವುದು ಹೊಟ್ಟೆಗಾಗಿ ......................."
ಅರವಿಂದ್
ಉ: ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?
ಚಾಮರಾಜ್ ರವರೆ,
ನಿಮ್ಮ ಮಾತು ಸತ್ಯ ಆದ್ರೆ ಇತ್ತ ನಮ್ಮ ಮಾದ್ಯದ ಮಿತ್ರರು ಸ್ವಲ್ಪ ಆಲೋಚನೆ ಮಾಡಬೇಕು. ಮಾಡದೇ, ಅವರಿಗೆ ಏನೋ ಒಂದು ದೊಡ್ದ ಕಿರೀಟ ಇದ್ದ ಹಾಗೆ ಮಾತನಾಡುತ್ತಾರೆ. ಅನ್ನೋದು ನನ್ನ ಅನಿಸಿಕೆ.
ಇನ್ನೋಂದು ವಿಚಾರ ಪತ್ರಕರ್ತರು ಯಾವತ್ತೇ ಆಗಲಿ ತಾಳ್ಮೆಯನ್ನು ಕಳೆದುಕೊಳ್ಳಬಾರದು......
ನಾಗರಾಜ್
ಉ: ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?
ಗಣೇಶ್ ಕಾಸರಗೋಡ್ ರ ಹೆಸರು ಕೇಳಿದ್ರೆ ನನಗೆ ಒಂದು ಘಟನೆ ನೆನಪಾಗ್ತಾ ಇದೆ.. ಹೀಗೆ ಒಂದು ವರ್ಷ್ದ ಹಿಂದೆ ಸಿನಿಮಾದ ಕಲಾನಿರ್ದೇಶಕರ ಕುರಿತಾದ ಒಂದು ಲೇಖನಕ್ಕೆ ವಿವರಗಳನ್ನು ಸಂಗ್ರಹಿಸಲು ನನ್ನ ಸ್ನೆಹಿತರೊಬ್ಬರು ಈ ಗಣೇಶರವರನ್ನು ಸಂಪರ್ಕಿಸಲು ಹೇಳಿದರು.ನನ್ನ ಸ್ನೇಹಿತರು ಮೊಬೈಲ್ನಲ್ಲಿ ಮಾತಾಡುತ್ತಿದ್ದಾಗಲೇ ಅವರ ನಂಬರ್ ಕೊಟ್ಟಿದ್ದರಿಂದ ನಾನು ಮೊಬೈಲ್ನಲ್ಲಿ ಡೈರೆಕ್ಟ್ ಸೇವ್ ಮಾಡ್ಕೊಳ್ಲೋದಿಕ್ಕೆ ಹೋಗಿ ಡಯಲ್ ಆಯ್ತು . ನನ್ನ ಸ್ನೇಹಿತನ ಜೊತೆಗಿನ ಸಂಭಾಷಣೆ ಕಟ್ ಮಾಡೋದಿಕ್ಕೆ ಹೋಗಿ ಎರೆಡೂ ಕರೆಗಳನ್ನು ಕಟ್ ಮಾಡಿ.. ಆನಂತರ ಗಣೇಶ್ ರವರಿಗೆ ಕರೆ ಮಾಡಿದೆ.ಅದಾಗಲೆ ಅವರಿಗೆ ಮಿಸ್ ಕಾಲ್ ಹೋಗಿತ್ತು. ಅದಕ್ಕೆ ನಾನ್ ಕಾಲ್ ಮಾಡಿದ ತಕ್ಷಣ ಸಕ್ಕತ್ ರೇಗಾಡಿದ. ನಾನು ಸಮಾದಾನವಾಗಿ ಅದು ತಪ್ಪಿನಿಂದಾದದ್ದು ಅಂತ ಎಷ್ಟು ಹೇಳಿದರೂ ಮ್ಯಾನರ್ಸ್ ಇಲ್ವಾ ಹಾಗೇ ಹೀಗೆ ಎಂದೆಲ್ಲಾ ರೇಗಾಡಿದ. ಅಷ್ಟೆಲ್ಲಾ ರೇಗಾಡಿದ ಮೇಲೆ ನಾನು ಕೇಳಬೇಕೆನಿರುವ ವಿಶಯದ ಬಗ್ಗೆ ಹೇಳಿದಾಗ ತೀರ ಅಸಡ್ಡೆಯಿಂದ ಅದರ ಬಗ್ಗೆ ನನಗೇನೂ ಗೊತ್ತಿಲ್ಲಾ ನೀನೆ ಹುಡುಕ್ಕೊ ಅಂತೇಳಿ ಕಟ್ ಮಾಡಿದ. ಅಂತಹ ಗ್ರೇಟ್ ..? ಪತ್ರಕರ್ತ.