ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವುದರ ಜೊತೆಗೆ ಅದರ ಪಾರಂಪರಿಕ ಸೊಗಡು ಸಂಸ್ಕೃತಿಗಳೂ ಕ್ರಮೇಣ ಮಾಯವಾಗುತ್ತಿವೆ. ನಗರ ಸಾರಿಗೆ ಬಸ್ಸುಗಳ ಆಮೆವೇಗ, ಸಮಯಕ್ಕೆ ಸರಿಯಾಗಿ ಸಿಗದಿರುವಿಕೆ, ಸುತ್ತುಬಳಸಿನ ಹಾದಿ ಇತ್ಯಾದಿಗಳ ಅಸಮರ್ಪಕ ನಿರ್ವಹಣೆಯಿಂದ ರೋಸಿದ ಜನರು ಸಿಟಿ ಬಸ್ಸುಗಳಿಂದ ವಿಮುಖರಾಗಿ ತಮ್ಮದೇ ಸ್ವಂತ ವಾಹನಗಳ ಮರೆ ಹೊಕ್ಕಿದ್ದು ಇತಿಹಾಸ.
ಇತ್ತೀಚೆಗೆ ವಲಸಿಗೆ ಹೆಚ್ಚಳದಿಂದ ಬಸ್ಸುಗಳ ಸಂಖ್ಯೆ ಬೆಳೆದಿದ್ದರೂ ಸ್ವಂತ ವಾಹನಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅಲ್ಲದೆ ದ್ವಿಚಕ್ರ ವಾಹನಗಳ ಸಂಖ್ಯೆಯನ್ನೂ ಮೀರಿಸುವಂತೆ ಕಾರುಗಳ ಸಂಖ್ಯೆಯೂ ಏರುತ್ತಿದೆ. ಈ ಕಾರಣದಿಂದ ವಾಹನದಟ್ಟಣೆ ಇನ್ನೂ ಮಿತಿಮೀರುತ್ತಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪರಿಸರದ ಮೇಲೂ ಪ್ರತಿಕೂಲದ ಪರಿಣಾಮ ಉಂಟಾಗಿದೆ.
ಇನ್ನು ಆಂಬುಲೆನ್ಸ್ ಪಾಡಂತೂ ಹೇಳಲು ಸಾಧ್ಯವಿಲ್ಲ. ಕುಟುಕು ಜೀವ ಹೊತ್ತ ರೋಗಿಗಳು ರಸ್ತೆಯಲ್ಲೇ ಪ್ರಾಣ ನೀಗುವ ಅಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಅವುಗಳು ಚಿಮ್ಮಿಸುವ ನೀಲಿ ಕಾಂತಿ ಹಾಗೂ ಹೊಮ್ಮಿಸುವ ಸೈರನ್ ಶಬ್ದಕ್ಕೆ ಯಾವ ವಾಹನವೂ ಕ್ಯಾರೇ ಎನ್ನದೆ ತಟಸ್ಥರಾಗಿ ನಿಲ್ಲುತ್ತವೆಂದರೆ ಮಾನವೀಯ ಮೌಲ್ಯಗಳು ಎಷ್ಟು ಅಧೋಗತಿಗೆ ಇಳಿದಿದೆ ಎಂದು ಊಹಿಸಿ. ಕೆಂಪುದೀಪದ ಕಾರುಗಳಿಗೆ ಸಂಚಾರ ಸುಗುಮಗೊಳಿಸುವ ಪೊಲೀಸರು ನೀಲಿ ದೀಪದ ಆಂಬುಲೆನ್ಸ್ಗೆ ತಾತ್ಸಾರ ತೋರುತ್ತಾರೆ.
ಸಂಚಾರ ಸುಗಮಗೊಳಿಸುವ ಕಾರಣ ನೀಡಿ ಕೆಲವೆಡೆ ಬಸ್ಸುನಿಲ್ದಾಣಗಳನ್ನು ರದ್ದುಮಾಡಿರುವ ಪೊಲೀಸರು ವೃದ್ಧರಿಗೂ ಮಕ್ಕಳಿಗೂ ಇತರ ಅಸಹಾಯಕರಿಗೂ ಕೇಡು ಬಗೆದಿದ್ದಾರೆ. ಎಷ್ಟೋ ಕಡೆ ರಸ್ತೆ ದಾಟಲು ಸಾಧ್ಯವಾಗದ ಪರಿಸ್ಥಿತಿ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನಗಳ ಯೋಜನೆ ರೂಪಿಸುವಾಗ ಹೆದ್ದಾರಿಗಳಿಗೆ ಹಾಗೂ ಬಸ್ನಿಲ್ದಾಣಗಳಿಗೆ ಸ್ಥಳಾವಕಾಶ ನೀಡದೆ ಸೋತಿದೆ. ಕಿರಿದಾದ ಹಾಗೂ ಹದಗೆಟ್ಟ ರಸ್ತೆಗಳು ಇವುಗಳ ಜೊತೆಗೆ ಪರ್ಯಾಯ ಮಾರ್ಗವಿಲ್ಲದ ದುಃಸ್ಥಿತಿಗಳಿಂದ ಗಾಯದ ಮೇಲೆ ಬರೆಯಿಟ್ಟಂತಾಗಿದೆ. ಉದಾಹರಣೆಗೆ ಎಚ್ಎಎಎಲ್ ವಿಮಾನನಿಲ್ದಾಣ ರಸ್ತೆಗೆ ಸಮಾನಾಂತರದಲ್ಲಿ ಮತ್ತೊಂದು ರಸ್ತೆಯೇ ಇಲ್ಲ. ದಿನದ ಎಲ್ಲ ಸಮಯದಲ್ಲೂ ಈ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಭರ್ತಿಯಾಗಿರುತ್ತವಲ್ಲದೆ ಅಲ್ಪಸ್ವಲ್ಪ ಅಡೆತಡೆಯುಂಟಾದರೂ ಚಲನೆಯು ಗಂಟೆಗಟ್ಟಲೆ ಸ್ಥಗಿತವಾಗುತ್ತದೆ.
ಕಾಯಿದೆಗಳನ್ನು ರೂಪಿಸುವವರು ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡುವ ಕೃಪೆ ಮಾಡಬೇಕು.

- cmariejoseph ರವರ ಬ್ಲಾಗ್
- Login or register to post comments
- 433 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
ಅಂಬ್ಯುಲೆನ್ಸ್ಗಳು ಮತ್ತು ಅಗ್ನಿಶಾಮಕದಳದ ವಾಹನಗಳಿಗೆ ಆದ್ಯತೆ ನೀಡಬೇಕು. ವಿ ಐ ಪಿಗಳಿಗೆ ಅನಗತ್ಯ ಪ್ರಾಮುಖ್ಯ ನೀಡುವುದು ನಿಲ್ಲಲಿ.
*ಅಶೋಕ್
ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
ಬೆಂಗಳೂರೊಂದೇ ಈ ತೊಂದರೆಗಳಿಂದ ಬಳಲುತ್ತಿಲ್ಲ. ಮುಂಬಯಿ ಇದಕ್ಕಿಂತ ಹದಗೆಟ್ಟ ಪಟ್ಟಣವಂತೆ. ಅದಲ್ಲಿ ದಿನಾಲೂ ಲೋಕಲ್ ರೈಲಿಗೆ ಸಿಕ್ಕಿ ಸಾಯ್ತಾನೇ ಇರ್ತಾರಂತೆ.
ಒಟ್ಟಿನಲ್ಲಿ ನಮ್ಮ ದೇಶದೋರಿಗೆ, ಅಂದರೆ ನಮಗೆ ದೊಡ್ಡ ದೊಡ್ಡ ಪಟ್ಟಣ-ಹೊಳಲುಗಳನ್ನು ಕಟ್ಟಿ, ಅವನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ. ಇದು ನಮ್ಮ ದೇಶದ ಎಲ್ಲಾ ದೊಡ್ಡವೊಳಲುಗಳ ಪಾಡೇ.
ಪಾಡು ಹೀಗಿರುವಾಗ ಬರೀ ಬೆಂಗಳೂರೇ ಎಕ್ಕುಟ್ಟಿ ಹೋಗಿದೇ, ಅಂದು ನೊಂದುಕೊಳ್ಳೋದು ಬೇಡ.
ಬೆಂಗಳೂರು ನಮ್ಮ ದೇಶದ ಬೇರೆ ಹೊಳಲುಗಳಿಗಿಂತ ಹಲವು ಸಂಗತಿಗಳಲ್ಲಿ ಮೇಲು.
೧) ಕೊಳಚೆಗೇರಿಗಳು ಬಹಳ ಕಡಮೆ
೨) ಕೆಲಸದ ಅವಕಾಶ ಹೆಚ್ಚು, ಅದೂ white-collarಕೆಲಸಗಳು ಹೆಚ್ಚುತ್ತಾ ಇವೆ.
೩) ಕಾಲೇಜುಗಳು ಹೆಚ್ಚು
೪) ಆಸ್ಪತ್ರೆ, ಅದರಲ್ಲೂ speciality ಆಸ್ಪತ್ರೆಗಳೂ ಹೆಚ್ಚಾಗಿಯೇ ಇವೆ.
ಅದೆಲ್ಲಕ್ಕಿಂತ, ಬೆಂಗಳೂರನ್ನು ಯಾವಾಗಲೂ ತೆಗಳಿಕೊಂಡು ಇರುವವರಿಗೂ, ಈ ಊರನ್ನು ಬಿಟ್ಟು ಹೋಗುವ ಕೊಂಚ ಮನವು ಇಲ್ಲ. ಇಲ್ಲದಿದ್ದರೆ ಯಾಕೆ ಇಲ್ಲಿಗೆ ಹೀಗೆ ಮಂದಿ ಗುಳೆ ಬರುತ್ತಿದ್ದರು.
ನೀವು ಏನೇ ಹೇಳಿ ಸಾರ್ "ನಮ್ ಬೆಂಗಳೂರು ಅಂದ್ರೆ ನಮ್ ಬೆಂಗಳೂರೇ"!! ನಂಗಂತೂ ಇದು ಬಹಳ ಇಷ್ಟವಾದ ಊರು.
- ಮಾಯ್ಸ
ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
ನೀವು ಬೆಂಗಳೂರನ್ನೇ ಹೀಗನ್ನುವುದಾದರೆ ನಾವು ನಮ್ಮ ಊರು, ವಾರಾಣಸಿಯ ಬಗ್ಗೆ ಏನೆನ್ನಬೇಕು ಎಂದು ಯೋಚಿಸುತ್ತಿದ್ದೇನೆ.
೧. ಇಲ್ಲಿ ಸಿಟಿ ಬಸ್ಸುಗಳೇ ಇಲ್ಲ.
೨. ಸೈಕಲ್ ರಿಕ್ಷಾಗಳೇ ಇಲ್ಲಿನ ಸಿಟಿಬಸ್ಸುಗಳು. ಅವುಗಳ ವೇಗವನ್ನು ಹೋಲಿಸಲು ಯಾವ ಪ್ರಾಣಿ ಇದೆ?
(ಆಮೆಯನ್ನು ನೀವು ಬಸ್ಸಿಗೆ ಹೋಲಿಸಿಯಾಗಿದೆ!!)
೩. ಇಲ್ಲಿನ ಗಲ್ಲಿಗಳು ಜನಜಂಗುಳಿಯಿಂದ ತುಂಬಿ ತುಳುಕುವ ದೃಶ್ಯವನ್ನು , ಧೂಳಿನಿಂದ ತುಂಬಿದ ರಸ್ತೆಗಳನ್ನು ನೀವೊಮ್ಮೆ ನೋಡಲೇ ಬೇಕು.
೪. ಅಲ್ಲೊಂದು ಇಲ್ಲೊಂದು ಕಾಣುವ ಬಸ್ಸಿನ ಟಾಪ್ ಮೇಲೂ ಕುಳಿತು ಜನ ಪ್ರಯಾಣಿಸುವ ಪರಿಯ ನಾನೆಂತು ಪೇಳ್ವೆನು?
ಒಮ್ಮೆ ಕಾಶಿಗೆ ಬನ್ನಿ.