ಭುಟ್ಟೊ ಬಗೆಗೆ ಇನ್ನಷ್ಟು
ಬೆನಜೀರ್ ಮೊದಲ ಬಾರಿ ಭಾರತೀಯ ಪತ್ರಕರ್ತರ ಕ್ಯಾಮರ ಕಣ್ಣಿಗೆ ಸಿಕ್ಕಿದ್ದು ,ಸೀಮ್ಲಾ ಒಪ್ಪಂದದ ಸಂದರ್ಭದಲ್ಲಿ . ಅಪ್ಪ ಜುಲ್ಫಿಕರ್ ಆಲಿ ಭುಟ್ಟೊ ಜತೆ ಆವತ್ತು ಆಗಮಿಸಿದ್ದ ಬೆನಜೀರ್ , ಹದಿನೆಂಟರ ತುಂಬು ಜವ್ವನೆ . ಚಿಗರಯಂತೆ ಚಿಮ್ಮುತ್ತಾ ,ಉತ್ಸಾಹದ ಚಿಲುಮೆಯಾಗಿದ್ದ ; ಅಷ್ಟೇ ಮುಗ್ಧವಾಗಿ ಎಲ್ಲರೊಂದಿಗೆ ನಗು ನಗುತ್ತಾ ಬೆರೆಯುತ್ತಿದ್ದ , ಈ ಬಾಲಕಿಯನ್ನು ಹೆಮ್ಮೆಯಿಂದ ಮತ್ತು ಆತ್ಮೀಯವಾಗಿ ನೋಡಿ ಸಂತಸಪಡುತ್ತಿದ್ದ ,ಇಂದಿರಾ ಅವರ ಚಿತ್ರಗಳು ಆ ಕಾಲದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು .
ಜುಲ್ಫಿಕರ್ ಆಲಿ ಭುಟ್ಟೊ ಅತ್ಯಂತ ವಿಚಿತ್ರವಾದ ಕಲಸುಮೇಲೋಗರದ ವ್ಯಕ್ತಿತ್ವದ ನಾಯಕ . ಭಾರತದೊಂದಿಗೆ ಸಾವಿರ ವರ್ಷದ ಯುದ್ದವನ್ನು ನಡೆಸಬಲ್ಲೆ ಎಂದು ಪಾಕಿಸ್ತಾನದ ತುಂಬಿದ ಸಭೆಗಳಲ್ಲಿ ಬಡಾಯಿ ಕೊಚ್ಚುತ್ತಾ ,ಜನರ ಕರ ತಾಡನಗಳನ್ನು ಗಿಟ್ಟಿಸಬಲ್ಲ ಗಿಮಿಕ್ ವ್ಯಕ್ತಿತ್ವ. ಆದರೆ ಅವರಿಗೆ ಭಾರತದೊಡನೆ ದ್ವೇಷ ಪಾಕಿಸ್ತಾನದ ಅವನತಿ ಎಂಬ ಪ್ರಜ್ಝೆ ಸಹ ಇತ್ತು . ಅದಕ್ಕಾಗಿ ಭಾರತದೊಂದಿಗೆ ಸ್ನೇಹಕ್ಕಾಗಿ ಪ್ರಯತ್ನಗಳನ್ನೂ ಮಾಡದೆ ಇರುತ್ತಿರಲಿಲ್ಲ. ಇದನ್ನು ಅವತ್ತಿನ ವಿಶ್ಲೇಷಕರು ಪ್ರೀತಿ ಮತ್ತು ದ್ವೇಷದ ರಾಜಕಾರಣ ಎನ್ನುತ್ತಿದ್ದರು .
ಭುಟ್ಟೊಗೆ ರಾಜಕೀಯ ಉಳಿವಿಗಾಗಿ , ಭಾರತವನ್ನು ದ್ವೇಷಿಸದೆ ಅನ್ಯ ಮಾರ್ಗವೇ ಇರಲಿಲ್ಲ . ಪಾಕಿಸ್ತಾನದ ಜನರನ್ನು , ಅಲ್ಲಿನ ನಾಯಕವರ್ಗ ತಯಾರು ಮಾಡಿದ್ದೇ ಹಾಗೆ ! ಜನರ ಸಾಮಾನ್ಯರ ದಿನನಿತ್ಯದ ಸಮಸ್ಯೆಗಳ ಉದ್ವಿಜ್ಝತೆಯನ್ನು ಬೇರೆಡೆಗೆ ತಿರುಗಿಸಲು , ಪಕ್ಕದ ಇಲ್ಲದ ಶತ್ರುವನ್ನು ದೊಡ್ಡದಾಗಿ ಬಿಂಬಿಸುವುದೇ ತಮ್ಮ ಕುರ್ಚಿಯ ಉಳಿವಿಗೆ ಆಧಾರವೆಂದು ಅವರು ಧೃಢವಾಗಿ ನಂಬಿದ್ದರು . ಆದರೆ ಅದೇ ಕಾಲಕ್ಕೆ ಭಾರತದ ಜನತೆಗೆ ಅವರವೇ ಆದ ಗೋಳುಗಳು ಸಾಕಷ್ಟಿದ್ದವು . ಪಾಕಿಸ್ತಾನದ ನಾಯಕರ ಈ ರೀತಿಯ ತಾತ್ಕಾಲಿಕ ಕ್ರಮಗಳು ಅಲ್ಲಿನ ಸಾಮಾನ್ಯ ಜನರ ಚಿಂತನಾಕ್ರಮವನ್ನೇ ಹಾಳುಮಾಡಿದವು .
ಸೀಮ್ಲಾ ಒಪ್ಪಂದದ ಸಮಯದಲ್ಲಿ , ಜುಲ್ಫಿಕರ್ ಆಲಿ ಭುಟ್ಟೊ ರ ಪ್ರತಿ ನಡೆ ,ಅವರು ಪಾಕಿಸ್ತಾನದಲ್ಲಿ ಮಾಡುತ್ತಿದ್ದ ಭಾಷಣಗಳಿಗೆ ತದ್ವಿರುದ್ದವಾಗಿದ್ದವು . ಆ ಸಮಯದಲ್ಲಿ ರಾಜಕಾರಣಿಯೂ ; ಧರ್ಮದ ಬಂದಿಯೂ ಆಗಿರದ ಸಹಜ ಮನುಷ್ಯನೊಬ್ಬ ಪ್ರಕಟವಾಗಿದ್ದ .ಇಂದಿರಾ ಮತ್ತು ಭುಟ್ಟೊ ಇಬ್ಬರೂ ನಾಯಕರೂ , ಮಾತುಕತೆಗೆ ಮೊದಲನೇ ಮಹಡಿಯಲ್ಲಿ ಆಯೋಜಿಸಿದ್ದ ಸಭೆಗೆ ತೆರಳಲು ಮೆಟ್ಟಲೇರುವ ಸಮಯದಲ್ಲಿ , ಭುಟ್ಟೊ ಇಂದಿರಾರನ್ನು " ನೀವು ಮೊದಲು ಹತ್ತಿ ,, ಎಂದರು,"ಏಕೆ ? ನೀವೆ ಮುಂದೆ ಬನ್ನಿ ,, ಎಂದ ಇಂದಿರಾರಿಗೆ " ಇಲ್ಲ ಮಹಿಳೆಯರಿಗೇ ಮೊದಲ ಪ್ರಾಶಸ್ತ್ಯವಲ್ಲವೇ ? ,, ಎಂದು ನಗುತ್ತಾ ಭುಟ್ಟೊ ಪ್ರತಿಕ್ರಿಯಿಸಿದ್ದೂ ಪತ್ರಿಕೆಗಳಲ್ಲಿ ವರದಿಯಾಗಿತ್ತು .
ದಿನಗಳು ಕಳೆದವು ವಿಚಾರಶೀಲ ವ್ಯಕ್ತಿತ್ವದ ಇಂದಿರಾ ಸಹ ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲಿ , ಒಂದು ದುರ್ಬಲ ಘಳಿಗೆಯಲ್ಲಿ ದೇಶದ ಮೇಲೆ ತುರ್ತು ಸ್ಥಿತಿಯನ್ನು ಹೇರಿ, ಕರಾಳ ಶಾಸನಗಳನ್ನು ಜಾರಿಗೆ ತಂದರು , ಪರಿಣಾಮವೆಂದರೆ, ಜನಪ್ರಿಯತೆಯ ಶಿಖರದಿಂದ ಜಾರಿ ಕೆಳಬಿದ್ದರು .
ಇಂದು ಸಾವಿರ ವರ್ಷಗಳ ಯುದ್ದದ ಸರದಾರ ಭುಟ್ಟೊ ಇಲ್ಲ ; ಅಧಿಕಾರ ಶಾಶ್ವತವೆಂದು ನಂಬಿದ ನಾಯಕಿ ಇಂದಿರಾ ಇಲ್ಲ ;ಆವತ್ತಿನ ಉದಯೋನ್ಮುಖ ನಾಯಕಿ ಬೆನಜೀರ್ ಕೂಡಾ ಇಲ್ಲ . ಇವರೆಲ್ಲ ಬಲಿಯಾದದ್ದು ಧರ್ಮ ಮತ್ತು ರಾಜಕೀಯದ ತಪ್ಪು ಆಲೋಚನೆಗಳಿಗೆ .ಆವತ್ತು ಇಂದಿರಾ ಮತ್ತು ಭುಟ್ಟೊರನ್ನು ಹತ್ಯೆಗೈದ ಪಾತಕಿಗಳು ಸಾಧಿಸಿದ್ದು, ಕಡಿದು ಕಟ್ಟೆಹಾಕಿದ್ದು, ಏನೂ ಇಲ್ಲ ;ಎಲ್ಲವೂ ಒಂದು ದೊಡ್ಡ ಮೂರ್ಖ ದುಃಸಾಹಸ ವಿನಃ ಇನ್ನೇನೂ ಅಲ್ಲ . ಕೊಂದವರೂ ಮಣ್ಣಲ್ಲಿ ಮಣ್ಣಾಗಿ ಹೋದರು ಮಾತ್ರ. ಮುಂದೆ ಬೆನಜೀರ್ ಹಂತಕರೂ ಸಾಧಿಸುವುದೂ ಒಂದು ದೊಡ್ಡ ಶೂನ್ಯವನ್ನು . ಅವರೂ ಸಹ ಮರಣದ ಕಡೆಗೇ ಪಯಣಿಸುತ್ತಿರುವ ಹತಾಶ ಮಾನವರು . ಈ ಎಲ್ಲ ಹತ್ಯೆಗಳು ನಡೆದದ್ದು ರಾಜಕೀಯ ಮತ್ತು ಧರ್ಮದ ಕಾರಣಗಳಿಗಾಗಿ . ಪ್ರತಿ ಕ್ಷಣ ಹೊಸ ತಿರುವು ಪಡೆಯುವ ಜಗತ್ತಿನಲ್ಲಿ ರಾಜಕಾರಣ ಒಂದು ಕೊಕ್ಕೊ ಆಟ, ಅದು ಮಿಂಚಿ ಮರಯಾಗುವ ಮಾಯಾಂಗನೆ . ಇನ್ನು ಈ ಮಹಾನ್ ಧರ್ಮೋದ್ದಾರಕರನ್ನು ಯಾವ ಸ್ವರ್ಗದ ವೈಭವದ ಮಹಲುಗಳೂ ಸಹ ಸ್ವಾಗತಿಸಲು ಕಾದಿರುವುದಿಲ್ಲ ; ಅದು ಕೇವಲ ಮನುಷ್ಯನ ಪೆದ್ದು ಕಲ್ಪನೆ . ಮನುಷ್ಯ ತಾನಿರುವಲ್ಲಿಯೇ ತನ್ನ ಪ್ರಯತ್ನದಿಂದ ಮಾತ್ರ ಶಾಂತಿಯ ಸ್ವರ್ಗವನ್ನು ನಿರ್ಮಿಸಿಕೊಳ್ಳಬಲ್ಲ ; ತಪ್ಪು ಆಲೋಚನೆಗಳು ನರಕವನ್ನು ಮಾತ್ರ ಸೃಷ್ಟಿಸಬಲ್ಲವು.
ಮನುಷ್ಯನ ದಡ್ಡತನದ ಮುಂದುವರಿದ ಭಾಗ ಪಾಕಿಸ್ತಾನದಲ್ಲಿ ಈಗಾಗಲೇ ಆರಂಭವಾಗಿದೆ . ಕೇವಲ ಮತ ಬ್ಯಾಂಕ್ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ,ಇನ್ನೂ ಜಗತ್ತನ್ನು ಅರಿಯಬೇಕಾದ , ತುಂಬಾ ಕಲಿಯಬೇಕಾದ ವಯಸ್ಸಿನ ಬಿಲಾವಲ್ ನನ್ನು ರಾಜಕೀಯದ ಬೆಂಕಿಯ ಬಲೆಗೆ ಅಭಿಮನ್ಯುವನ್ನು ದೂಡಿದಂತೆ ದೂಡಲಾಗುತ್ತಿದೆ .ಇದೆನ್ನೆಲ್ಲಾ ತಿಳಿದೂ ತಿದ್ದಿಕೊಳ್ಳಲು ಬಾರದ್ದೇ ಮನುಷ್ಯ ಕುಲದ ಕರ್ಮ ಅಥವಾ ಪ್ರಾರಾಬ್ಧ .

- csomsekraiah ರವರ ಬ್ಲಾಗ್
- Login or register to post comments
- 195 hits
- Email this blog





RSS: