ಜೇನು ರಾಣಿಯ ಉತ್ತರಾಧಿಕಾರದ ಸಮಸ್ಯೆ
ನಾನು ನನ್ನ ಮನೆಯ ಕಾಂಪೌಂಡಿನಲ್ಲಿ ಜೇನು ಪೆಟ್ಟಿಗೆಯನ್ನಿಡಲು ಯೋಚಿಸಿದೆ . ಯಥಾಪ್ರಕಾರ ನನ್ನ ಹುಚ್ಚು ಯೋಚನೆಗಳಿಗೆ ತಕ್ಷಣದ ಬೆಂಬಲ ದೊರೆಯುವುದು ನನ್ನ ಮೊಮ್ಮಕ್ಕಳಿಂದಲೇ , ಅವರು ತಾತ ಜೇನು ಪೆಟ್ಟಿಗೆ ತರುತ್ತೆ ,ನಮಗೆಲ್ಲಾ ತಿನ್ನಲು ಬೇಕಾದಷ್ಟು ಜೇನುತುಪ್ಪ .ಎಂದು ಚಪ್ಪಾಳೆ ತಟ್ಟಿ ಕುಣಿಯಲು ಆರಂಭಿಸಿಬಿಟ್ಟರು . " ಹೋ ಅದೊಂದು ಕಡಿಮೆ ಬಿದ್ದಿತ್ತು,, ಎಂಬ ನೀರಸ ಪ್ರತಿಕ್ರಿಯೆ ನಿರೀಕ್ಷಿಸಿದಂತೆಯೇ ಮನೆಯೊಡತಿಯಿಂದ ಬಂದೇ ಬಂದಿತು ." ನೋಡು ನೀನು ಹೀಗೆಲ್ಲಾ ಹಂಗಿಸಿದರೆ, ನಾಳೆ ಜೇನು ತುಪ್ಪದ ಒಂದು ಹನಿಯೂ ನಿನಗೆ ಸಿಕ್ಕುವುದಿಲ್ಲ,, ಎಂದು ಸಿಡುಕಿದೆ . "ಹೌದು ತಾತ, ಅಜ್ಜಿಗೆ ಜೇನುತುಪ್ಪ ತೋರಿಸಲೇಕೂಡದು ,, ಎಂದು ಮೊಮ್ಮಕ್ಕಳು ಠರಾವು ಪಾಸು ಮಾಡಿಬಿಟ್ಟರು .
ಜೇನು ಪೆಟ್ಟಿಗೆಯನ್ನಿಡಲು ನಿರ್ಧರಿಸಿದೆನಾದರೂ ಜೇನು ಸಾಕಣೆ ಬಗ್ಗೆ ನನಗೇನೂ ಗೊತ್ತಿರಲಿಲ್ಲ . ಅದಕ್ಕಾಗಿ ನಮ್ಮ ಹತ್ತಿರದ ಮೇಟಿಕುರ್ಕೆಯ ’ಮಧುವನ’ದ ಶಾಂತವೀರಯ್ಯನವರನ್ನು ಕಾಣಲು ಅವರ ಮನೆಗೆ ಹೋದೆ . ಅವರು ನಿವೃತ್ತ ತೋಟಗಾರಿಕೆ ಸಹಾಯಕ ನಿರ್ದೇಶಕರು ; ಜೇನು ಸಾಕಣೆ ತರಬೇತಿ ಕೇಂದ್ರವನ್ನು ನಡೆಸುತ್ತಿರುವವರು , ಸಾವಿರಾರು ಜೇನು ಗೂಡುಗಳನ್ನು ನಿಭಾಯಿಸುತ್ತಿರುವವರು . ಅವರ ತೋಟದಲ್ಲಿ ಎಲ್ಲೆಂದರಲ್ಲಿ ಜೇನು ಪೆಟ್ಟಿಗೆಗಳೇ ಪೆಟ್ಟಿಗೆಗಳು .
ಹಿಂದೆಲ್ಲಾ ವಿದ್ಯೆ ಕಲಿಯಲು ಋಷಿಗಳ ಹತ್ತಿರ ಸಮಿತ್ಪಾಣಿಗಳಾಗಿ ಶಿಷ್ಯರು ಹೋಗುತ್ತಿದ್ದರು ಎಂದು ನಮ್ಮ ಉಪನಿಷತ್ತುಗಳಲ್ಲಿ ಬರೆದಿಲ್ಲವೇ ? ಸಮಿತ್ತು ಗಿಮಿತ್ತು ಏನೂ ಇಲ್ಲದೆ ಖಾಲಿಪಾಣಿಯಾಗಿ ಚಿತ್ರದುರ್ಗದಿಂದ ಸುಮಾರು ಮುವ್ವತ್ತೈದು ಕಿಲೋಮೀಟರು ದೂರದ ಅವರ ತೋಟದ ಮನೆಗೆ ಬೆಳಗ್ಗೆ ಬೆಳಗ್ಗೆಯೇ ಹೋಗಿ ಪರಿಚಯ ಮಾಡಿಕೊಂಡು ನನ್ನ ಹಂಬಲವನ್ನು ಅರಿಕೆ ಮಾಡಿಕೊಂಡೆ .
ಅವರಿಗೆ ಎಲ್ಲಿಲ್ಲದ ಸಂತೋಷ , ಯಾರಾದರೂ ತಾವಾಗಿ ಮುಂದೆ ಬಂದು ಆಸಕ್ತಿ ವಹಿಸಿದರೆ , ಅಂತಹವರಿಗೆ ಕಲಿಸಲು ತುಂಬಾ ಸಂತೋಷಪಡುವ ವ್ಯಕ್ತಿ . ಅವರ ತೋಟವನ್ನೆಲ್ಲಾ ಸುತ್ತಿಸುತ್ತಾ ,ಇಡೀ ದಿನ ಜೇನಿನ ಜೀವನ ವಿಧಾನದ ಬಗ್ಗೆ , ಜೇನು ಕೃಷಿಯ ಬಗ್ಗೆ ತುಂಬಾ ಉಪಯುಕ್ತ ವಿಷಯಗಳನ್ನೆಲ್ಲಾ ತಿಳಿಸಿದರು .ನನ್ನ ಮನೆಯಲ್ಲಿ ಜೇನು ಪೆಟ್ಟಿಗೆಯನ್ನಿಡುವ ನನ್ನ ಆಸೆಗೆ " ಓಹೋ , ಹಾಗೇ ಮಾಡಿ , ಜೇನು ಗೂಡು , ಪೆಟ್ಟಿಗೆ ಎಲ್ಲವನ್ನೂ ಕೊಟ್ಟು ನಮ್ಮ ಕಂಠೇಶಿಯನ್ನು ಕಳುಹಿಸುತ್ತೇನೆ, ಗೂಡನ್ನು ಹೇಗೆ ನಿಭಾಯಿಸಬೇಕೆಂದು ಅವನು ತಿಳಿಸಿ ಕೊಡುತ್ತಾನೆ ,, ಎಂದರು
ನನಗೆ ಈ ಇರುವೆ, ಗೆದ್ದಲು, ಜೇನು, ಕೆಂಜಿಗ ಇವೆಲ್ಲಾ ತುಂಬಾ ಸೋಜಿಗದ ಕೀಟಗಳು .ಸಾವಿರಾರು ಸಂಖ್ಯೆಯ ಒಗ್ಗಟ್ಟಿನ ಇವುಗಳ ಸಮಾಜ ಜೀವನ ಪದ್ದತಿ ತುಂಬಾ ಕುತೂಹಲಕರ ವಿಷಯ . ಮನುಷ್ಯ ಈ ಭೂಮಿಯ ಮೇಲೆ ಅವತರಿಸುವುದಕ್ಕೆ ಕೋಟ್ಯಾಂತರ ವರ್ಷಗಳ ಮೊದಲಿನಿಂದಲೇ, ಇವುಗಳ ಸಾಮಾಜಿಕ ಜೀವನ ಹೀಗೆಯೇ ನಡೆಯುತ್ತಾ ಬಂದಿದೆ . ಅವುಗಳ ಬೌದ್ದಿಕ ಪ್ರಪಂಚ ಹೇಗೋ? ಅವುಗಳ ಭಾವ ವಲಯ ಹೇಗೋ? ಎಲ್ಲವೂ ವಿಸ್ಮಯಕಾರಕ . ಒಂದು ವೇಳೆ ಗಾತ್ರದಲ್ಲಿ ಅವುಗಳು ಮನುಷ್ಯನ ಸಮ ಇದ್ದಿದ್ದರೆ , ನಾಗರಿಕತೆಯನ್ನು ಕಟ್ಟುವ ಅವಕಾಶವನ್ನು ಮನುಷ್ಯನಿಗೆ ಬಿಟ್ಟುಕೊಡುತ್ತಲೇ ಇರಲಿಲ್ಲ . ಅವೇ ಎಲ್ಲವನ್ನೂ ಕಂಡು ಹಿಡಿದು ಬಿಡುತ್ತಿದ್ದವು . ಎಂದು ನನ್ನ ನಂಬಿಕೆ .
ಕಂಠೇಶಿ ಜೇನು ಪೆಟ್ಟಿಗೆ ತಂದು ಕಾಂಪೌಂಡಿನಲ್ಲಿ ಪ್ರತಿಷ್ಟಾಪಿಸಿದ . ಮೊಮ್ಮಕ್ಕಳು ಕುಣಿದಾಡುತ್ತಾ , ಆವಾಗಲೇ ಜೇನು ಕುಡಿದೊಷ್ಟು ಸಂತೋಷದಿಂದ ಸ್ವಾಗತಿಸಿದರು . ಕಂಠೇಶಿ ತುಂಬಾ ಓದಿದವನಲ್ಲವಾದರೂ ಜೇನು ಸಾಕಣೆ ವಿಷಯದಲ್ಲಿ ತುಂಬಾ ಬುದ್ದಿವಂತ ; ಜೇನು ಕೃಷಿಯ ಬಗ್ಗೆ ಅವನ ಪರಿಣಿತಿಗೆ ಕೊನೆಯೇ ಇಲ್ಲ .
"ಸಾಮಾನ್ಯ ಜೇನು ಹುಳುಗಳ ಆಯುಷ್ಯ ತುಂಬಾ ಕಡಿಮೆ , ಹೆಚ್ಚೆಂದರೆ ಎರಡು ಮೂರು ತಿಂಗಳು ; ಆದರೆ ರಾಣಿ ಜೇನು ಮಾತ್ರ ಹತ್ತಾರು ವರ್ಷ ನಿರಾಂತಂಕವಾಗಿ ಬದುಕುತ್ತದೆ . ,, "ಅದು ಹುಟ್ಟಿದ ಎರಡು ಮೂರು ವಾರಗಳಲ್ಲಿ ಒಂದೇ ಒಂದು ಸಾರಿ ಹೊರಬಂದು ವಾತಾವರಣದಲ್ಲಿ ಹಾರಾಡಿ ಗೂಡು ಸೇರಿಕೊಂಡರೆ ಮುಗಿಯಿತು , ಸ್ಥಳ ಬದಲಾವಣೆಯ ಹೊರತಾಗಿ ಹೊರಬರುವ ಪ್ರಶ್ನೆಯೇ ಇಲ್ಲ . ದಿನವೂ ಮೊಟ್ಟೆ ಇಡುತ್ತಾ ಗೂಡಿನಲ್ಲಿರುವುದು, ಗೂಡಿನ ಸ್ಠಿತಿ ಗತಿಗಳನ್ನು ನಿರಂತರ ಅವಲೋಕಿಸುತ್ತಾ ,ಅಲ್ಲಿನ ಜೀವನವನ್ನು ಸಕ್ರಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಅದರ ಕೆಲಸ ,, ಮುಂತಾದ ವಿಷಯಗಳನ್ನು ಕಂಠೇಶಿಯ ಬಾಯಲ್ಲಿ ಕೇಳುವುದೇ ಚಂದ .
" ಸರಿ ಈ ರಾಣಿಜೇನುಗಳು ಸೃಷ್ಟಿಯಾಗುವ ಬಗೆಯಾದರೂ ಹೇಗೆ ? ಅವುಗಳ ಧೀರ್ಘಾಯುಷ್ಯದ ಗುಟ್ಟಾದರೂ ಏನು ,,? ಎನ್ನುವ ನನ್ನ ಪ್ರಶ್ನೆಗೆ , "ರಾಣಿ ಜೇನುಗಳು ಎನ್ನುವ ಪ್ರಶ್ನೆಯೇ ಇಲ್ಲ , ಒಂದು ಗೂಡಿಗೆ ಒಂದೇ ರಾಣಿ ,ಇನ್ನೊಂದಕ್ಕೆ ಸ್ಥಳವಿಲ್ಲ ,, ಇರುವ ಒಬ್ಬಳು ರಾಣಿ ಅಕಸ್ಮಾತ್ತಾಗಿ ಸತ್ತು ಹೋದರೆ ಆಗ ಆ ಗೂಡಿನ ಗತಿ ಏನು,, ? ಎಂಬ ನನ್ನ ಪ್ರಶ್ನೆಗೆ , "ಇದಕ್ಕೆ ಉತ್ತರ ಮುಂದಿನ ವರ್ಷ ತಿಳಿಸುತ್ತೇನೆ ಅಲ್ಲಿಯ ವರೆಗೆ ಪ್ರಶ್ನೆ ಹಾಗೆಯೇ ಇರಲಿ,, ಎಂದ ಕಂಠೇಶಿ , ಎಲಾ ಇವನಾ , ಎಂತಹ ಕಿಲಾಡಿ ಇವನು, ಒಳ್ಳೇ ಬೇತಾಳ ವಿಂಶತಿ ಕತೆ ಮಾಡಿದನಲ್ಲಾ , ಎಂದುಕೊಂಡು ಸುಮ್ಮನಾದೆ .

- csomsekraiah ರವರ ಬ್ಲಾಗ್
- Login or register to post comments
- 341 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: