ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಕಂಠೇಶಿ ಸುಮ್ಮನೇ ಏನೂ ಹೇಳಿರಲಿಲ್ಲ , ಮೂರು ನಾಲ್ಕು ತಿಂಗಳಿಗೊಮ್ಮೆ ಬಂದು ಜೇನು ತೆಗೆದು ಕೊಡುವುದೂ ಮುಂತಾದುವನ್ನೆಲ್ಲಾ ಮಾಡುತ್ತಲೇ ಇದ್ದ . ವರ್ಷದ ನಂತರ ಒಂದು ದಿನ ಅವನು ಒಂದು ಖಾಲಿ ಜೇನು ಪೆಟ್ಟಿಗೆ ತಂದು " ನೋಡಿ ಈಗ ಗೂಡನ್ನು ವಿಭಾಗ ಮಾಡುತ್ತೇನೆ , ರಾಣಿ ಜೇನಿನ ಸಮೇತ ಅರ್ಧ ಹುಳುಗಳನ್ನು ಹೊಸ ಗೂಡಿಗೆ ವರ್ಗಾಯಿಸುತ್ತೇನೆ , ರಾಣಿ ಇಲ್ಲದ ಉಳಿದರ್ಧ ಹುಳುಗಳು ಹಳೆಯ ಗೂಡಿನಲ್ಲಿಯೇ ಇರುತ್ತವೆ,, ಎಂದ " ಮತ್ತೆ ರಾಣಿಯೇ ಇಲ್ಲದ ಈ ಗೂಡು, ಇದರ ಗತಿ,, ಎಂದೆ " ಇನ್ನೇನು ರಾಣಿಯೇ ಇಲ್ಲದ ಮೇಲೆ ಹೊಸ ಮರಿಗಳು ಹುಟ್ಟುವುದಿಲ್ಲ . ಇರುವ ಹುಳುಗಳೆಲ್ಲಾ ಮೂರು ನಾಲ್ಕು ತಿಂಗಳಲ್ಲಿ ಸತ್ತೇ ಹೋಗುತ್ತವೆ , ಅಲ್ಲಿಗೆ ಗೂಡಿನ ಕತೆ ಮುಗಿಯಿತು ಎಂದ .
" ಅಯ್ಯೋ, ಮಾರಾಯಾ ಹಾಗಾದರೆ ಹೇಗೆ ? ,, ಎಂದೆ ನಾನು . ಅವನು ನಗುತ್ತಾ " ಹಾಗೇನೂ ಆಗುವುದಿಲ್ಲ, ರಾಣಿ ಇಲ್ಲ ಎಂದು ಹುಳುಗಳಿಗೆ ತಕ್ಷಣ ಗೊತ್ತಾಗುತ್ತದೆ , ಅವು ತಕ್ಷಣ ಕಾರ್ಯ ಪ್ರವೃತ್ತವಾಗಿ ಗೂಡಿನಲ್ಲಿರುವ ಒಂದು ಅಥವಾ ಎರಡು ದಿನಗಳ ನಾಲ್ಕೈದು ಪ್ಯೂಪಗಳನ್ನಾರಿಸಿ ಅವಕ್ಕೆ ವಿಶೇಷ ರಾಯಲ್ ಜಲ್ಲಿಯನ್ನು ಉಣಿಸಲು ಆರಂಭಿಸುತ್ತವೆ ,ಅದು ಅಮೃತ ಸಮಾನವಾದುದು . ಅದನ್ನು ಕುಡಿದು ಬೆಳೆಯುವ ಆ ನಾಲ್ಕಾರು ಹುಳುಗಳೇ ಭಾವಿ ರಾಣಿಯರು . ಇಲ್ಲಿನ ವಿಶೇಷವೆಂದರೆ ಪ್ಯೂಪ ಕಡ್ಡಾಯವಾಗಿ ಒಂದು ಅಥವಾ ಎರಡು ದಿನದ್ದು ಮಾತ್ರ ಆಗಿರಬೇಕು , ಅಂತಹ ಪ್ಯೂಪಗಳು( ರಾಣಿ ದಿನವೂ ಮೊಟ್ಟೆ ಇಡುತ್ತಲೇ ಇರುವುದರಿಂದ ) ಗೂಡಿನಲ್ಲಿ ಇದ್ದೇ ಇರುತ್ತವೆ . ಗ್ರಹಚಾರವಶಾತ್ ಇರದಿದ್ದರೆ ಅಲ್ಲಿಗೆ ಆ ಗೂಡಿನ ಕತೆ ಮುಗಿದಂತೆಯೇ ,, "
"ರಾಣಿ ಮರಿಗಳು ಆಯ್ಕೆಯಾದ ಹದಿನಾರು ದಿನಗಳಲ್ಲಿ ಅವು ಅವುಗಳ ಕೋಶದಿಂದ ಹೊರಬರುತ್ತವೆ . ಆ ಮರಿಗಳಲ್ಲಿ ಮೊತ್ತ ಮೊದಲು ಹೊರ ಬಂದವಳೇ ನಿಜವಾದ ರಾಣಿ , ಹೊರ ಬಂದ ತಕ್ಷಣ ಅವಳು ಮಾಡುವ ಕೆಲಸವೆಂದರೆ ಕ್ರೂರ ಮತ್ತು ನಿಷ್ಟುರ, ರಾಣಿಯರಾಗಲು ಸಿದ್ದತೆ ನಡೆಸಿರುವ ಉಳಿದ ಕೋಶಗಳನ್ನು ಹುಡುಕಿ ಅವುಗಳನ್ನು ಒಡೆದು ನಾಶ ಮಾಡುವುದು . ಈ ರೀತಿಯ ಕ್ರೌರ್ಯದ ಮೂಲಕವೇ ತನ್ನ ರಾಜ್ಯವನ್ನು ನಿಷ್ಕಂಟಕ ಮಾಡಿಕೊಳ್ಳುವ ಈ ವಿಧಾನವನ್ನೇ ಮುಂದೆ ಮಾನವ ಸಮಾಜ ಅನುಸರಿಸಿರಬಹುದು,,
ಹೀಗೆ ಗೂಡನ್ನು ವಿಭಾಗ ಮಾಡಿದ ಹತ್ತು ದಿವಸಕ್ಕೆ ಕಂಠೇಶಿ ಬಂದ, ರಾಣಿ ಇಲ್ಲದ ಹಳೆಯ ಗೂಡನ್ನು ತೆರೆದು ನನಗೆ ತೋರಿಸಿದ , ಅಲ್ಲಿದ್ದ ಅಸಂಖ್ಯ ಕೋಶಗಳಲ್ಲಿ ಕೇವಲ ನಾಲ್ಕೈದು ಕೋಶಗಳು ಮಾತ್ರ ಉಳಿದ ಕೋಶಗಳಿಗಿಂತ ಎರಡರೊಷ್ಟು ಉದ್ದವಾಗಿ ಬೆಳೆದಿದ್ದವು , " ನೋಡಿ ಇವೇ ರಾಣಿ ಹುಳುಗಳು ತಯಾರಾಗುತ್ತಿರುವ ಕೋಶಗಳು, ಇನ್ನು ಐದಾರು ದಿನಗಳಲ್ಲಿ ಯಾವ ಕೋಶದಿಂದ ಹುಳು ಮೊದಲು ಹೊರ ಬೀಳುತ್ತದೆಯೋ ಅದೇ ರಾಣಿ ಉಳಿದ ರಾಣಿಕೋಶಗಳನ್ನು ತನ್ನ ಮುಳ್ಳಿನಿಂದ ಕುಟುಕಿ ನಾಶ ಮಾಡಿ ಬಿಡುತ್ತದೆ ,, ಎಂದ ನನಗೆ ಆಶ್ಚರ್ಯವಾಯಿತು .
ಅವನು ಹೇಳಿದಂತೆಯೇ ಮತ್ತೆ ಎಂಟು ಹತ್ತು ದಿನ ಕಳೆಯಿತು, ನನ್ನ ಹಿರಿಯ ಮೊಮ್ಮಗ ಓಡುತ್ತಾ ಒಳ ಬಂದವನೇ ಒಂದೇ ಉಸಿರಿಗೆ " ತಾತ ಜೇನು ಹುಳುಗಳೆಲ್ಲಾ ಪೆಟ್ಟಿಗೆಯಿಂದ ಹೊರ ಬರುತ್ತಿವೆ,, ಎಂದ ಹೋಗಿ ನೋಡಲು, ಹುಳುಗಳು ರಾಸಿ ರಾಸಿ ಪೆಟ್ಟಿಗೆಯಿಂದ ಹೊರ ಬಂದು ಝೇಂಕರಿಸುತ್ತಾ ಹಾರಾಡೂತ್ತಿದ್ದವು . ನೋಡ ನೋಡುತ್ತಲೇ,ಹಾರಾಡುತ್ತಿದ್ದವೆಲ್ಲಾ ಹತ್ತಿರದಲ್ಲಿದ್ದ ಚಪ್ಪರದವರೆ ಬಳ್ಳಿಯಲ್ಲಿ ಕುಳಿತು, ಹೊಸದೊಂದು ಜೇನು ಗೂಡು ನೇತಾಡತೊಡಗಿತು .ಇಷ್ಟಾದರೂ ಹಳೆಯ ಪೆಟ್ಟಿಗೆಯಲ್ಲೂ ಸಾಕಷ್ಟು ಹುಳುಗಳು ಉಳಿದೇ ಇದ್ದವು .
ತಕ್ಷಣ ಕಂಠೇಶಿಗೆ ಫೋನ್ ಮಾಡಿದೆ , ಅವನು ಬಂದ , ಅವರೆಯ ಬಳ್ಳೀಯಲ್ಲಿ ನೇತಾಡೂತ್ತಿದ್ದ ಹೊಸ ಗೂಡನ್ನು ನೋಡಿದ " ವಾಹ್ , ಇದು ಅಪರೂಪದ ವಿದ್ಯಮಾನ,, ಎಂದ ಆಗಿದ್ದು ಇಷ್ಟೇ , ರಾಣಿಯಾಗಲು ಅರ್ಹತೆ ಇರುವ ಎರಡು ಮರಿಗಳು ಏಕಕಾಲದಲ್ಲಿಯೇ ಹೊರ ಬಂದಿವೆ ,ಉಳಿದ ರಾಣೀ ಕೋಶಗಳನ್ನು ಹೊರ ಬಂದ ರಾಣಿಯರು ಹುಡುಕಿ ನಾಶ ಮಾಡಿದರೂ ,ಏಕ ಕಾಲಕ್ಕೆ ಹೊರ ಬಂದ ರಾಣಿಯರಲ್ಲಿ ಯಾರು ರಾಣಿ ?ಎಂಬುವ ಸಮಸ್ಯೆಗೆ ಪರಿಷ್ಕಾರಕ್ಕಾಗಿ ಗೂಡೇ ವಿಭಾಗವಾಗಿದೆ . ಅರ್ಧ ಹುಳುಗಳು ಒಬ್ಬಳು ರಾಣಿಯ ಜೊತೆಯಲ್ಲಿ ಗೂಡಿನಲ್ಲಿ ಉಳಿದರೆ , ಉಳಿದರ್ಧ ಹುಳುಗಳು ಇನ್ನೊಬ್ಬ ರಾಣಿಯ ನೇತೃತ್ವದಲ್ಲಿ ಹೊಸ ನೆಲೆಯನ್ನು ಹುಡುಕಿ ಹೊರಟುಬಿಟ್ಟಿವೆ .
ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು , ಜೇನು ಗೂಡಿನಲ್ಲಿರುವ ಎಲ್ಲ ಹುಳುಗಳನ್ನು ನಿಯಂತ್ರಿಸಿ, ಒಂದು ಕಾರ್ಯಭಾರಕ್ಕೆ ಸಜ್ಜುಗೊಳಿಸುವ ,ಇಡೀ ಗೂಡು ಒಂದೇ ವ್ಯಕ್ತಿತ್ವದಂತೆ ತೀರ್ಮಾನಕ್ಕೆ ಬರುವ ವಿದ್ಯಮಾನ ನಮ್ಮ ಅರಿವಿಗೆ ನಿಲುಕದುದು.ವರ್ಷಗಟ್ಟಲೆ ಇದ್ದ ರಾಣಿ ಇದ್ದಕ್ಕಿದ್ದಂತೆಯೇ ಇಲ್ಲವಾಗಿರುವುದನ್ನು ಗುರುತಿಸಿ, ತಕ್ಷಣ ಕೇವಲ ಒಂದೆರಡು ದಿನಗಳ ಪ್ಯೂಪಗಳನ್ನು ಆರಿಸಿ ,ಅವುಗಳಿಗೆ ವಿಶೇಷ ಜಲ್ಲಿಯನ್ನು ಉಣಬಡಿಸಿ , ರಾಣಿಯರನ್ನು ತಯಾರಿಸುವ ಯೋಜನಾಬದ್ದ ಕೆಲಸ, ಬುದ್ದಿ ಇಲ್ಲದೆ ನಡೆಯುವಂತಹುದು ಎನಿಸುವುದೇ ಇಲ್ಲ.ಹುಟ್ಟಿದ ತಕ್ಷಣ ರಾಣಿ ಹುಳುವಿಗೆ, ತನ್ನ ಸ್ಪರ್ಧಿ ಕೋಶಗಳನ್ನು ಹುಡುಕಿ ಕೊಲ್ಲುವ ಪರಿಣಿತಿಯನ್ನು ನೀಡಿದ ಪ್ರಕೃತಿಯ ಶಕ್ತಿಗೆ , ಏನು ಹೇಳಬೇಕು ? ನಮ್ಮ ಮನೆಯ ಗೂಡಿನಲ್ಲಾದಂತೆ ಆಕಸ್ಮಿಕವಾಗಿ ಎರಡು ರಾಣಿಗಳೂ ಉಳಿದುಕೊಂಡುಬಿಟ್ಟರೆ , ಗೂಡು ವಿಭಾಗವಾಗಿ ಹೊರ ಹೋಗುವ ಹುಳುಗಳು, ಒಳಗೆ ಉಳಿಯುವ ಹುಳುಗಳು ಯಾವುವು ಎಂಬ ತೀರ್ಮಾನ ತೆಗೆದುಕೊಳ್ಳುವವರು ಯಾರು ?
ಇದು ನನ್ನ ಅರಿವಿಗೆ ಬಂದ ಒಂದು ಚಿಕ್ಕ ವಿದ್ಯಮಾನ ,ಕೀಟ ಶಾಸ್ತ್ರಜ್ಝರು ಇಂತಹ ಅಸಂಖ್ಯ ವಿದ್ಯಮಾನಗಳನ್ನು ದಾಖಲಿಸಿದ್ದಾರೆ .ಆದರೆ ಮನುಷ್ಯನ ಬುದ್ದಿ ಶಕ್ತಿಯ ಪರಿಧಿಗೇ ನಿಲುಕದ ಅದೆಷ್ಟು ವಿಸ್ಮಯ ಅವುಗಳ ಬದುಕಿನಲ್ಲಿ ಅಡಗಿದೆಯೋ ಬಲ್ಲವರಾರು ? ಯಾವ ರೀತಿಯ ಪ್ರಜ್ಝೆ ಇಂಥ ಕ್ಷೇತ್ರಗಳಲ್ಲಿ ತನ್ನ ಜಾಲವನ್ನು ಹರಡಿದೆಯೋ ಕಂಡವರಾರು ?

- csomsekraiah ರವರ ಬ್ಲಾಗ್
- Login or register to post comments
- 442 hits
- Email this blog





RSS:
ಪ್ರತಿಕ್ರಿಯೆಗಳು
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
:ಚಪ್ಪಾಳೆ: :ಚಪ್ಪಾಳೆ: :ಚಪ್ಪಾಳೆ:
ಸೋಮಶೇಖರಯ್ಯನವರೇ, ಜೇನುಗೂಡಿನ ಬಗ್ಗೆ ಇಷ್ಟು ಸರಳವಾಗಿ ಓದಬಹುದೆಂದುಕೊಂಡಿರಲಿಲ್ಲ. ನಿಮ್ಮ ಬರಹ ತುಂಬಾ ಇಷ್ಟವಾಯಿತು. ಹೀಗೆಯೇ ಹೆಚ್ಚು ಹೆಚ್ಚು ಬರಿಯುತ್ತಾ ಇರಿ. ಇದು ನನ್ನ ಕೋರಿಕೆ.
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಸುನಿಲ್ ಜಯಪ್ರಕಾಶ್ ಅವರಿಗೆ ಇದನ್ನು ಸೇರಿಸಲೇ ಬೇಡವೇ ಎಂದುಕೊಂಡಿದ್ದೆ , ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ ಸೇರಿಸಿದ್ದು ಸರಿ ಎನ್ನಿಸಿತು . ವಂದನೆಗಳು. ಸಂಪದಕ್ಕೆ ಬಂದು, ಸಂಪದದ ಬಳಗದ ಪರಿಚಯವಾಗುತ್ತಿರುವುದು , ನನಗಂತೂ ತುಂಬಾ ಸಂತೋಷದ ವಿಷಯ .
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಜೇನುಸಾಕಾಣಿಕೆ ಬಗ್ಗೆ ಅತಿ ಸರಳವಾಗಿ ಬರೆದಿರುವ ಸವಿಜೇನಿನಂಥಹ ಬರಹ! ತುಂಬಾ ಚೆನ್ನಾಗಿದೆ.
ಜೀನುಗೂಡಿನಲ್ಲಿ ಇಷ್ಟೆಲ್ಲಾ ರಾಜಕೀಯ ನಡೆಯುತ್ತದೆಯೇ? ಗೂಡಿನಿಂದ ಹೊರಗೆ ಹೋದವರನ್ನು ಭಿನ್ನಮತೀಯರು ಎನ್ನಬಹುದೇನೋ
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಸ೦ಪದವೆ೦ಬ ಹಾಲಿನಲ್ಲಿ ನಿಮ್ಮ ಬರವಣಿಗೆ ಜೀನಾಗಿ ಸಿಹಿ ಹ೦ಚಿದೆ.
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ವಾವ್! ಅದ್ಭುತ ಜೇನು ಜಗತ್ತು! ತೇಜಸ್ವಿಯವರ "ಕರ್ವಾಲೋ" ಜ್ಞಾಪಕ ಬಂತು. ಜೊತೆಗೆ ಮೊನ್ನೆ ನೋಡಿದ "ಬೀ" ಆಂಗ್ಲ ಚಲನಚಿತ್ರ ಸಹ
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲೂ ೨ ಜೇನುಗೂಡು ಇಟ್ಟು ಜೇನು ಸಾಕಣೆ ಮಾಡಿದ್ದೆವು.ನಮ್ಮ ಸ್ಕೂಲ್ ನ ಗುರುಗಳೊಬ್ಬರು ನಮಗೆ ಗೈಡ್.ಅವರು ಆರಾಮ ಪೆಟ್ಟಿಗೆ ತೆಗೆದು,ಜೇನು ಎಷ್ಟು ಸಂಗ್ರಹವಾಗಿದೆ ಎಂದು ತೋರಿಸಿ,ಮರಿಗಳು,ಗಂಡುಹುಳದ ಬಗ್ಗೆ ವಿವರಿಸುತ್ತಿದ್ದರು.ನಮ್ಮ ಕೈಗೂ ಬಾಕ್ಸ್ ಗಳನ್ನು ಹಿಡಕೊಳ್ಳಲು ಕೊಡುತ್ತಿದ್ದರು.ನಮ್ಮ ಮೈಮೇಲೆಲ್ಲಾ ಜೇನುಹುಳುಗಳು ಓಡಾಡುವಾಗ ಭಯದಲ್ಲೂ ಖುಶಿಯಾಗುತ್ತಿತ್ತು.ಆ ಜೇನಿನ ಸವಿ ಈಗ ಪೇಟೆಯಲ್ಲಿ ಸಿಗುವ ಯಾವ ಜೇನಿಗೂ ಇಲ್ಲ.
ನಿಮ್ಮ ಜೇನಿನ ಸವಿಯ ಲೇಖನದಿಂದಾಗಿ ಇವೆಲ್ಲಾ ನೆನಪಿಗೆ ಬಂದವು.
-ಗುಂಪೊಡೆಯ(ಗಣೇಶ).
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಜೇನುಗೂಡು ನಮ್ಮಲ್ಲೂ ಇತ್ತು.ಮನೆಯಲ್ಲೇ ಜೇನು ತಯಾರಿಸುತಿದ್ದೆವು.ಆದರೆ ಜೇನುಗಳ ಬಗ್ಗೆ ಇಷ್ಟೊಂದು ಗೊತ್ತಿರಲಿಲ್ಲ..
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಈ ವಿವರಗಳನ್ನೆಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು. ಬಹಳ ಸರಳವಾಗಿ ಹೇಳಿದ್ದೀರ!
-ಹಂಸಾನಂದಿ
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಎಲ್ಲ ಪ್ರತಿಕ್ತಿಯೆಗಳಿಗೆ ಧನ್ಯವಾದಗಳು ; ಸಂಪದದ ನನ್ನ ಬಂಧುಗಳನ್ನು ಇಷ್ಟು ಹತ್ತಿರಕ್ಕೆ ತಂದ ಆ ಜೇನು ಕುಟುಂಬಕ್ಕೆ ನಾನು ಕೃತಜ್ಝ .
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ಬಹಳ ಒಳ್ಳೆಯ ಲೇಖನ. ಎಲ್ಲಾ ವಿವರಗಳನ್ನೂ ಸರಳವಾಗಿ ತಿಳಿಸುವ ಶೈಲಿ, ಧನ್ಯವಾದಗಳು.