ಕರ್ನಾಟಕ ಅಥವಾ ಕನ್ನಡತನ (೧)
ಕನ್ನಡಿಗರು ಅಭಿಮಾನಶೂನ್ಯರು! ಎಂಬ ಆಪಾದನೆ ತುಂಬಾ ಹಳೆಯದು.ಆ ಹಳೆಯ ಆಪಾದನೆ ಈಗ ಪ್ರಸ್ತುತವಾಗಲು ಮುಖ್ಯಕಾರಣ , ಬಲು ದೊಡ್ಡ ರಾಜ ಕಾರಣಿಗಳೂ; ಬಲು ದೊಡ್ಡ ಸಾಹಿತಿಗಳೂ , ಕರ್ನಾಟಕದಲ್ಲಿ ಹುಟ್ಟಲೇಬಾರದಾಗಿತ್ತು , ಎಂಬ ರೀತಿಯಲ್ಲಿ ಅಲವತ್ತುಕೊಳ್ಳುತ್ತ್ತಿರುವುದು ; ತಮ್ಮ ಸಾಧನೆಗೆ ಬೇರೆಲ್ಲಾದರೂ ಆಗಿದ್ದರೆ ತುಂಬಾ ಬೆಲೆ ಬರುತ್ತಿತ್ತು,ಎಂಬುದು ಅವರ ಮಾತಿನ ಹಿಂದಿನ ಅಳಲಿರಬಹುದು.
ಇದಕ್ಕೆ ಉದಾಹರಣೆಗಳನ್ನು ಕೊಡಲು, ಅವರೇನೂ ಶ್ರಮ ವಹಿಸಬೇಕಾಗಿಲ್ಲ. ಹೆಜ್ಜೆ, ಹೆಜ್ಜೆಗೆ ಉದಾಹರಣೆಗಳನ್ನು ಕೊಡಬಹುದಾದ ಅಸಂಖ್ಯ ಪುರಾವೆಗಳನ್ನು , ಒದಗಿಸಬಹುದು .
ಕನ್ನಡ ನಾಡಿನ ಯಾವುದೇ ಬಸ್ ನಿಲ್ದಾಣಕ್ಕೆ ಹೋದರೂ , ಯಾವ ಕಡೆಗೆ ಯಾವ ಬಸ್ಸು ಹೋಗುತ್ತದೆ ?ಎಂದು ತಿಳಿಯಲು ಕನ್ನಡದ ಜೊತೆಗೆ,ಆಂಗ್ಲ, ಹಿಂದಿ, ಗಡಿಭಾಗಗಳಾದರೆ ನೆರೆ ರಾಜ್ಯದ ಭಾಷೆ ಸಹ ಸಿಕ್ಕಿಯೇ ಸಿಗುತ್ತದೆ.ಆದರೆ ತಮಿಳು ನಾಡಿನ , ಕರ್ನಾಟಕಕ್ಕೆ ಹತ್ತಿರದ ಊರುಗಳಾದ ; ಸ್ವಲ್ಪ ಕನ್ನಡವನ್ನೂ ಬಲ್ಲ,ಈರೋಡಿಗೋ, ಕೊಯಮತ್ತೂರಿಗೋ, ಸೇಲಂ ಗೋ ಹೋಗಿ ಬಸ್ ನಿಲ್ದಾಣದಲ್ಲಿ ಇಳಿಯಿರಿ. ತಮಿಳಲ್ಲದೆ ಇನ್ನೊಂದು ಬೋರ್ಡು ಕಣ್ಣಿಗೆ ಬಿದ್ದರೆ , ಆಕಾಶವೇ ಕಳಚಿ ಬಿದ್ದೀತು. ತಮಿಳು ಬರದವನು ಅಲ್ಲಿ ಶುದ್ದ ಅವಿದ್ಯಾವಂತ.
ಇನ್ನು ಆಂಧ್ರದ ಕತೆ , ಅಲ್ಲಿನ ಒಳನಾಡಿನ ದೊಡ್ಡ ನಗರಗಳಲ್ಲಿ ,ಕಾರ್ಯ ನಿಮಿತ್ತ ಅನೇಕ ಸಾರಿ ವಾರ, ಎರಡುವಾರಗಳ ಕಾಲ ಉಳಿಯಬೇಕಾದ ಅನಿವಾರ್ಯತೆ ಈ ಲೇಖಕನಿಗೆ ಒದಗಿದೆ.ಕನ್ನಡ ನಾಡಿನ ಯಾವುದೇ ಪೂರ್ವದ ಜಿಲ್ಲೆಗಳಲ್ಲಿ , ತೆಲುಗಿನ ಪರಿಚಯ ಸಹಜವಾಗೇ ಇರುತ್ತದೆ. ಕನ್ನಡನಾಡಿನ ತೀರಾ ಒಳನಾಡಿನಲ್ಲೂ ತೆಲುಗಿನ ಪರಿಚಯ ಉಂಟು.ಆದರೆ ಆಂಧ್ರದ ಗಡಿ ಪ್ರವೇಶಿಸಿದರೆ ತೀರಿತು, ಕನ್ನಡ ಮಂಗಳ ಮಾಯ.
ವಿಜಯವಾಡ, ಗುಂಟೂರುಗಳ ನಡುವೆ , ಒಂದು ವಿಶ್ವವಿದ್ಯಾಲದ ಕ್ಯಾಂಪಸ್ ಇದೆ,ಎರಡು ನಗರಗಳ ನಡುವೆ ಎಡೆಬಿಡದೆ ಬಸ್ ಸಂಚಾರವಿರುತ್ತದೆ.ಅಲ್ಲಿ ಅನೇಕ ಬಾರಿ ತಿರುಗಾಡಿರುವ ನನಗೆ ವಿಚಿತ್ರ ಅನುಭವಗಳಾಗಿವೆ.ನಾನು ಕನ್ನಡದ ’ಮಯೂರ’ ಮಾಸಪತ್ರಿಕೆಯನ್ನು ಕೈಯ್ಯಲ್ಲಿ ಹಿಡಿದಿದ್ದರೆ,ಕ್ಯಾಂಪಸ್ ಗೆ ಹೋಗುವ ವಿದ್ಯಾರ್ಥಿಗಳು" ಏ ಲಿಪಿ ಇದಿ, ತೆಲುಗುಲಾಂಟಿ ಉನ್ನದಿ,, ಎಂದು ನನಗೆ ದಿಗ್ಭ್ರಮೆ ಹಿಡಿಸಿದ್ದಾರೆ.ಕನ್ನಡ ನಾಡಿನ ಒಬ್ಬ ಅನಕ್ಷರಸ್ಥನ ಕೈಗೆ ಎರಡೂ ಭಾಷೆಯ ಪುಸ್ತಕಗಳನ್ನು ಕೊಟ್ಟರೆ ಇದು ಕನ್ನಡ ಲಿಪಿ , ಇದು ತೆಲುಗು ಲಿಪಿ ಎಂದು ಧಾರಾಳವಾಗಿ ಗುರುತಿಸುತ್ತಾನೆ . ಅಂಥದರಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಅವರಿಗೆ , ಪಕ್ಕದ ರಾಜ್ಯದ,ಎರಡು ಭಾಷೆಗಳಿಗೂ ಒಂದೇ ಮೂಲದಿಂದ ಉದಯಿಸಿದ ಲಿಪಿಯೊಂದು, ಕನ್ನಡದ್ದು ಎಂಬುದೂ ತಿಳಿಯಲಾರದಷ್ಟು ಅಜ್ಞತೆಯೇ?ಅಥವಾ ಅಸಡ್ಡೆಯೇ?ಈಗಲೂ ನನಗೆ ಅರ್ಥವಾಗಿಲ್ಲ.
ಕನ್ನಡ ನಾಡಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಕಟ್ಟಲು ನಡೆದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಯಾವುದೂ ಯಶಸ್ವಿಯಾಗಲಿಲ್ಲ.’ಕರ್ನಾಟಕ ಪಕ್ಷ’ ’ಕನ್ನಡ ಪಕ್ಷ’ ಉಹೂ, ಯಾವ ಹೆಸರೂ ಜನರನ್ನು ಮಂತ್ರಮುಗ್ಧಗೊಳಿಸಲಿಲ್ಲ.ನೆರೆಯ ತಮಿಳು ನಾಡು ಆಂಧ್ರಗಳಲ್ಲಿ ಸಿನಮಾಗಳ ಜನರೇ ಆರಾಧ್ಯ ದೈವಗಳಾದರು, ರಾಜಕೀಯ ಧುರೀಣರೂ ಆದರು, ಅಧಿಕಾರವನ್ನೂ ನಡೆಸಿದರು. ಆದರೆ ಕರ್ನಾಟಕ ಜಪ್ಪಯ್ಯಾ ಅಂದಿದ್ದರೆ ಕೇಳಿ. (ಮುಂದುವರಿಯುವುದು)

- csomsekraiah ರವರ ಬ್ಲಾಗ್
- Login or register to post comments
- 199 hits
- Email this blog





RSS: