ಕರ್ನಾಟಕ ಅಥವಾ ಕನ್ನಡತನ (೨)
ಇಲ್ಲಿ ಆಕಸ್ಮಿಕವಾಗಿ ಸ್ವಲ್ಪ ರಾಜಕೀಯವಾಗಿ ಬೆಳೆಯಬಹುದಾಗಿದ್ದ ವರ್ಚಸ್ಸಿದೆ ಎಂದು ನಂಬಲಾಗಿದ್ದ ನಾಯಕ ನಟ ರಾಜಕುಮಾರ್ ; ತನ್ನ ನೆರೆಯಲ್ಲಿಯೇ , ತನ್ನ ಸಹೋದ್ಯೋಗಿಗಳೇ ಆಗಿದ್ದವರು, ಅಧಿಕಾರದ ಗದ್ದುಗೆ ಏರಿ ಕುಳಿತಿದ್ದರೂ; ಸ್ವತಃ ತನ್ನ ಮೇಲೆಯೇ ಬಗೆ ಬಗೆಯ ಒತ್ತಡಗಳೇ ಬಂದರೂ, ವಿಚಲಿತರಾಗದೇ ಅಧಿಕಾರದ ಆಮಿಷಗಳಿಂದ ದೂರವೇ ಉಳಿದರು . ಅದು ತನ್ನದಲ್ಲದ ಕ್ಷೇತ್ರವೆಂಬ ಅರಿವು ಅವರಿಗಿತ್ತೋ? ಅಥವಾ ಕನ್ನಡ ಮನಸ್ಸಿನ ಸರಿಯಾದ ಪರಿಚಯ ಅವರಿಗಿತ್ತೋ ಅವರು ಮಾತ್ರ ಬಲ್ಲರು.
ಕರ್ನಾಟಕದಲ್ಲಿ, ತೆಲುಗು, ತಮಿಳು, ಹಿಂದಿ ಯಾವ ಭಾಷೆಯ ನಟರೂ ಅಪರಿಚಿತರಲ್ಲ . ಆಂಧ್ರದಲ್ಲಿ ರಾಜಕುಮಾರ್ ಬಗ್ಗೆ ಕೇಳಿ ನೋಡಿ! ಕನ್ನಡದ ರಾಜಧಾನಿಯಿಂದ ಹಿಡಿದು, ಯಾವುದೇ ದೊಡ್ಡ ನಗರಗಳಲ್ಲಿ ಯಾವ ಭಾಷೆಯ ಒಳ್ಳೆಯ ಚಿತ್ರವಾದರೂ ನಡೆಯುತ್ತವೆ . ನೆರೆಯ ಆಂಧ್ರ , ತಮಿಳುನಾಡುಗಳಲ್ಲಿ ಶಾಸ್ತ್ರಕ್ಕಾದರೂ ಒಂದು ಕನ್ನಡ ಚಿತ್ರಗಳನ್ನು ಹುಡುಕಿ ಕೊಡಿ ನೋಡೋಣ .
ತಮಿಳರು ರಾಜಕೀಯದ ವಾಸನೆಯನ್ನು ಸರಿಯಾಗಿ ಗ್ರಹಿಸಿ, ತಮ್ಮ ಬೇಳೆ ಬೆಯ್ಯಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಹಾಗಾಗಿ ಅವರ ಭಾಷೆಯು ಶಾಸ್ತ್ರೀಯ ಭಾಷೆಯೂ ಆಗುತ್ತದೆ , ಅದರ ಸವಲತ್ತುಗಳನ್ನೂ ಪಡೆಯುತ್ತದೆ. ಕನ್ನಡಿಗರು ಕಣ್ಣು ಕಣ್ಣು ಬಿಡುತ್ತಿದ್ದರೂ, ಕಾವೇರಿಯ ನೀರೂ ಸಹ ಸಲೀಸಾಗಿ ಹರಿದುಹೋಗಿಬಿಡುತ್ತದೆ.ಇಂಥವಕ್ಕೆಲ್ಲಾ ನಮ್ಮ ಹೆಸರಾಂತ ಬುದ್ದಿ ಜೀವಿಗಳು ಹೃದಯವೈಶಾಲ್ಯದ ಬಗ್ಗೆ ಭಾಷಣ ಬಿಗಿಯುತ್ತಾರೆ ; ಕನ್ನಡಿಗರಲ್ಲಿ ಹೃದಯ ವೈಶಾಲ್ಯ, ಸಹಜವಾಗಿಯೇ ಬೇರೆಯವರಿಗೆ ಕಡ ಕೊಡುವಷ್ಟು ಇದೆ ಎಂಬುದನ್ನು ಮರೆತೇಬಿಡುತ್ತಾರೆ.
ಇದಿಷ್ಟನ್ನು ಆಧಾರವಾಗಿಟ್ಟುಕೊಂಡು ,ಕನ್ನಡ ಚೇತನವನ್ನು ಅಭಿಮಾನ ಶೂನ್ಯ, ಅಥವಾ ಜಡ ಎಂದುಬಿಡಬಹುದೇ?ಅದು ಸತ್ಯವೇ?<1--break-->
ಸರಿಯಾಗಿ ಆಲೋಚಿಸಿದರೆ , ಕರ್ನಾಟಕ ಅಥವಾ ಕನ್ನಡದ ಅಂತಃಸತ್ವ, ಎಷ್ಟೊಂದು ಬಲಯುತ, ಎಷ್ಟೊಂದು ವ್ಯಾಪಕ ಎಂಬುವುದು ತಿಳಿದು ಆಶ್ಚರ್ಯವಾಗುತ್ತದೆ ; ಅದರ ವಿಶ್ವರೂಪ ದಿಗ್ಭ್ರಮೆಗೊಳಿಸುತ್ತದೆ. ಅದು ಕಟ್ಟಿದ ಸಾಮ್ರಾಜ್ಯಗಳು, ಕರ್ನಾಟಕ ಮಾತ್ರವಲ್ಲ ಇಡೀ ಭಾರತ ವರ್ಷವನ್ನೇ ಪ್ರಭಾವಿತಗೊಳಿಸಿದ್ದವು .ಇಡೀ ಭರತ ಭೂಮಿಯಲ್ಲಿಯೇ ಉತ್ತರ ಮತ್ತು ದಕ್ಷಿಣ ಎರಡೂ ಸಂಗೀತ ಪದ್ದತಿಗಳನ್ನು ಪೋಷಿಸಿ ಬೆಳೆಸಿದುದು ಕರ್ನಾಟಕದ ಹಿರಿಮೆ. ಅದರ ಶಿಲ್ಪಕಲೆ, ಚಿತ್ರಕಲೆ ಪ್ರಪಂಚದ ಯಾವುದೇ ಭಾಗಕ್ಕೂ ಕಡಿಮೆಯಲ್ಲದುದು.ಇನ್ನು ಅದರ ಸಾಹಿತ್ಯ ಮುಟ್ಟಿದ ಮೇರೆಗಳು , ಜಗತ್ತಿನ ಎಷ್ಟೋ ಭಾಷೆಗಳು ಆಸೆಗಣ್ಣಿನಿಂದ ನೋಡುವಷ್ಟು ಪ್ರಭಾವಶಾಲಿ.ಕನ್ನಡ ನೆಲದಲ್ಲಿ ನಡೆದ ಚಳುವಳಿಗಳೂ , ಚಿಂತನೆಗಳೂ ತನ್ನ ಕಾಲಕ್ಕಿಂತ ಶತಮಾನಗಳ ಮುಂದಿರುತ್ತಿದ್ದವು.
ಇದೆಲ್ಲವನ್ನೂ ಗಮನಿಸಿದರೆ ಮಾತ್ರ ಕನ್ನಡ ಸಂಸ್ಕೃತಿಯ ಒಳ ನೋಟಗಳು ಕಾಣಸಿಗುತ್ತವೆ , ಅದರ ಜಾಯಮಾನ ಅರ್ಥವಾಗುತ್ತದೆ.ಇಲ್ಲಿ ಯಾರಿಗೂ ರಾಜಕುಮಾರ್ ರೀತಿಯ ನಟರನ್ನು ಅಭಿಮಾನಿಸಿ ಎಂದು ಹೇಳಿ ಕೊಡಬೇಕಾಗಿಲ್ಲ.ಅವರನ್ನು ರಾಜಕೀಯಗೊಳಿಸುವಷ್ಟು ಕುರುಡು ಅಭಿಮಾನ ಇಲ್ಲದಿರಬಹುದು, ಒಬ್ಬ ಸಾಂಸ್ಕೃತಿಕ ನಾಯಕನನ್ನಾಗಿ ; ಒಬ್ಬ ಶ್ರೇಷ್ಟ ಕಲಾವಿದನಾಗಿ ಅವರಿಗೆ ಕೊಡಬೇಕಾದ ಮನ್ನಣೆಯನ್ನು ಕೊಡಲು ಕನ್ನಡ ಜಗತ್ತಿಗೆ ಯಾರೂ ಕಲಿಸಿ ಕೊಡಬೇಕಾಗಿಲ್ಲ. ಪಂಪನನ್ನು, ಕುಮಾರವ್ಯಾಸನನ್ನು, ಕುವೆಂಪುರನ್ನು, ಕಾರಂತರನ್ನು ಗೌರವಿಸಿ ಎಂದು ಕನ್ನಡ ವಿದ್ವತ್ ಜಗತ್ತಿಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ .ಪೂರ್ಣಚಂದ್ರತೇಜಸ್ವಿ ಮರಣಿಸಿದಾಗ, ಕನ್ನಡದ ಸಾಂಸ್ಕೃತಿಕ ಬದುಕಿನಲ್ಲಿ ತೋರಿ ಬಂದ ತಲ್ಲಣಗಳು, ವಿಸ್ಮಯಭರಿತವಾಗಿದ್ದವು. ಮೂಡಿಗೆರೆಯಂತಹ ಕಾಡಿನ ಮಧ್ಯದ ಪ್ರದೇಶದಲ್ಲಿದ್ದುಕೊಂಡು , ಕೃಷಿಯನ್ನೂ , ಸಾಹಿತ್ಯಕೃಷಿಯನ್ನೂ ತಣ್ಣಗೆ ಮಾಡುತ್ತಲೇ ;ದಿನಕ್ಕೊಂದು ಪತ್ರಿಕಾ ಹೇಳಿಕೆ ಕೊಡದಲೆಯೇ;ದೊಡ್ಡಸ್ತಿಕೆಗಾಗಿಯೇ ವಿವಾದಗಳನ್ನು ಹುಟ್ಟಿ ಹಾಕದಲೆಯೇ, ಕನ್ನಡದ ಮನಸ್ಸುಗಳನ್ನು ಅವರು ಪ್ರವೇಶಿಸಿದ ಪರಿ ಇತ್ತಲ್ಲಾ ಅದುನಿಜಕ್ಕೂ ಬೆರಗು ಹುಟ್ಟಿಸುವಂಥದು .
ಇಲ್ಲಿ ಗತಿಸಿದ ಅನೇಕ ಶ್ರೇಷ್ಟ ರಾಜಕಾರಣಿಗಳು ಈಗಲೂ ಗೌರವಾರ್ಹರು (ಇಲ್ಲಿ ಅವರನ್ನು ಪಟ್ಟಿ ಮಾಡುವ ಅವಶ್ಯಕತೆ ಇಲ್ಲ) ಪ್ರಚಲಿತ ರಾಜಕಾರಣಿಗಳು ಗೌರವಕ್ಕೆ ಕಡಿಮೆ ಬಂದಿದೆ ಎಂದು ಭಾವಿಸಿದರೆ , ಅದಕ್ಕೆ ಕನ್ನಡ ಜನಪದವಂತೂ ಹೊಣೆಯಲ್ಲ . ಕನ್ನಡದ ಚಿಂತನೆ ಅರಸುವುದು ಉತ್ತುಂಗಗಳನ್ನು ,ಕನ್ನಡನಾಡಿನಲ್ಲಿ ಸೈ ಎನಿಸಿಕೊಂಡ ಚೇತನ ಉಳಿದ ಯಾವ ಸರ್ಟಿಫಿಕೇಟಿಗೂ ಕೈ ಒಡ್ಡಬೇಕಾಗಿಲ್ಲ , ಅದು ವಿಶ್ವಮಾನ್ಯ .

- csomsekraiah ರವರ ಬ್ಲಾಗ್
- Login or register to post comments
- 206 hits
- Email this blog





RSS: