ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ
ಪಾಕಿಸ್ತಾನದ ಜನ ನಾಯಕಿ ಹತ್ಯೆಗೀಡಾಗಿದ್ದಾರೆ . ಇದು ಧರ್ಮಾಂಧರ ಕೃತ್ಯವೋ? ರಾಜಕೀಯ ಹತ್ಯೆಯೋ? ಗೊಂದಲಗಳು , ಸಂಶಯಗಳು ಹುತ್ತಗಟ್ಟುತ್ತಿವೆ. ಕಾರಣ ಆ ರಾಷ್ಟ್ರದಲ್ಲಿ ಧರ್ಮ, ಸೈನ್ಯ, ರಾಜಕೀಯ ಎಲ್ಲವೂ ಅಪವಿತ್ರವಾಗಿ ಬೆರಕೆಯಾಗಿರುವುದು . ಇದು ಆ ರಾಷ್ಟ್ರದಂತೆಯೇ ಆಧುನಿಕ ಜಗತ್ತಿನ ಭಯಾನಕ ಪಿಡುಗೂ ಹೌದು .
ಮನುಷ್ಯನ ವಿಚಾರಶೀಲತೆಯನ್ನು ; ಜಾಗೃತಿಯನ್ನು ,ವ್ಯಕ್ತಿಗಳ ಕೊಲೆಗಳಿಂದ ಹತ್ತಿಕ್ಕಬಹುದೆಂಬ ಬುದ್ದಿಗೇಡಿ, ಅವಿವೇಕಿಗಳ ಕೃತ್ಯಕ್ಕೆ ಇನ್ನೊಂದು ಬಲಿ ನಡೆದು ಹೋಗಿದೆ .ಇದು ಇಂದು ನಿನ್ನೆಯದಲ್ಲ , ಮಾನವ ಕುಲ ನಿರಂತರವಾಗಿ ಎದುರಿಸುತ್ತಲೇ ಬಂದಿರುವ ದುರಂತ. ತಮ್ಮ ವಿಚಾರಗಳಿಗಾಗಿ ಪ್ರಾಣ ತೆತ್ತವರು ಎಷ್ಟೊಂದು ಜನ ! ಕೊಂದ ಕೊಲೆಪಾತಕಿಗಳಿಗೆ , ಕಿಂಚಿತ್ತು ವಿಚಾರದ ಬೆಳಕು ಅವರ ಹೃದಯಗಳಲ್ಲಿದ್ದರೆ ;ತಮ್ಮ ಪಾತಕಮಯ ಹಸ್ತಗಳನ್ನು ಒಮ್ಮೆ ನೋಡಿಕೊಳ್ಳಲಿ , ಅಲ್ಲಿ ಅಂಟಿರುವ ಘೋರ ಪಾಪಮಯ ಕಾಲುಷ್ಯ; ಮಾನವತೆಗೆ ಅವರು ಮಾಡಿರುವ ಪರಮ ಅಪಚಾರ ಅಂತಹವರ ಅರಿವಿಗೆ ಬಂದೀತು .
ಒಂದು ಜೀವದ ಬಲಿಯಲ್ಲಿ ಆ ಜೀವದ ವಿಚಾರಗಳ ಅಂತ್ಯವಾಗುವುದಿಲ್ಲ ;ಇನ್ನೂ ಅತ್ಯಂತ ಪ್ರಜ್ವಲವಾಗಿ ಬೆಳಗುತ್ತವೆ . ಈ ವಿಷಯ ಅಂಧಕಾಸುರರಿಗೆ ಅರ್ಥವಾಗುವುದು ಕಷ್ಟ .
ಬೆನಜೀರ್ ಪ್ರಧಾನ ಮಂತ್ರಿಯಾಗಿದ್ದಾಗ ,ನೆರೆದೇಶಗಳೊಡನೆ ಬಾಂಧ್ಯವ್ಯಗಳನ್ನು ಇನ್ನೂ ಘಟ್ಟಿಗೊಳಿಸಬಹುದಾಗಿತ್ತು . ಕಾಶ್ಮೀರದ ಭಯೋತ್ಪಾದಕರ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿತ್ತು , ಅವರ ಮಿತಿಗಳಲ್ಲಿ ಇವೆಲ್ಲ ಸಾಧ್ಯವಾಗಲಿಲ್ಲ . ಆದರೆ ಇತ್ತೀಚೆಗಿನ ಬೆನಜೀರ್ ತುಂಬಾ ಮಾಗಿದ ವ್ಯಕ್ತಿತ್ವದವರಾಗಿದ್ದರು . ಪ್ರಖರ ಆಲೋಚನೆಗಳಿಂದ, ವೈಚಾರಿಕವಾಗಿ ಪ್ರಬುದ್ದರಾಗಿದ್ದರು .ರಾಜಕಾರಣದಲ್ಲಿ ಸೈನ್ಯ ಮತ್ತು ಧರ್ಮಗಳ ಹಸ್ತಕ್ಷೇಪಗಳನ್ನು ನಿರ್ದಾಕ್ಷಿಣ್ಯವಾಗಿ ಕಟು ಮಾತುಗಳಿಂದ ವಿರೋಧಿಸುತ್ತಿದ್ದರು. ಪ್ರಜಾಪ್ರಭುತ್ವ ಮಾತ್ರ ಒಂದು ರಾಷ್ಟ್ರವನ್ನು ; ಒಂದು ಜನಜೀವನವನ್ನು ಉನ್ನತಗೊಳಿಸಬಲ್ಲುದು ಎಂಬ ನಂಬಿಕೆಯನ್ನು ಧೃಢವಾಗಿ ಪ್ರತಿಪಾದಿಸುತ್ತಿದ್ದರು . ಅವರ ಇಂತಹ ನಡೆಯಿಂದ ತಮ್ಮ ರಾಷ್ಟ್ರದಲ್ಲಿ ತಮ್ಮ ಜೀವಕ್ಕೆ ಅಪಾಯವಿರುವುದು ಅವರಿಗೆ ತಿಳಿದೇ ಇತ್ತು .ಅದಕ್ಕೆ ಎದೆಯೊಡ್ಡಿಯೇ ಅವರು ಪಾಕಿಸ್ತಾನಕ್ಕೆ ಮರಳಿದ್ದರು .
ಜನ ಜೀವನದಲ್ಲಿ ಸೈನ್ಯ ಬ್ಯಾರಕ್ಕಿನಲ್ಲಿ , ಧರ್ಮ ತನ್ನ ಜಾಗದಲ್ಲಿ ಇದ್ದಾಗ ಮಾತ್ರ ಯಾವುದೇ ರಾಷ್ಟ್ರ ಸ್ವಾಭಿಮಾನದಿಂದ ತಲೆಯೆತ್ತಿ ಉನ್ನತಿಯನ್ನು ಸಾಧಿಸಬಲ್ಲದು , ಇಲ್ಲದೆ ಹೋದರೆ ಅಂತಹ ರಾಷ್ಟ್ರಗಳು ತಲುಪಬಹುದಾದ ಗತಿಗೆ ಪಾಕಿಸ್ತಾನ ಒಂದು ಜ್ವಲಂತ ಉದಾಹರಣೆ .ಇದು ಭಾರತಕ್ಕೂ ಪಾಠ .
ಬೆನೆಜೀರ್ ಹುತಾತ್ಮರಾಗಿರುವುದು, ಮನುಷ್ಯ ಕುಲ ತನ್ನ ರೀತಿ ನೀತಿಗಳನ್ನು ಪುನರ್ವಿಮರ್ಶಿಸಿಕೊಳುವ; ಆತ್ಮಾವಲೋಕನ ಮಾಡಿಕೊಳುವ ; ತನ್ನ ಕರುಣೆಯ ದಾರಿಯನ್ನು ಖಚಿತಪಡಿಸಿಕೊಳ್ಳುವ ಸಮಯ. ಆ ಜೀವದ ತ್ಯಾಗ ವ್ಯರ್ಥವಾಗದಿರಲಿ ಮನುಷ್ಯನ ಮನಸ್ಸಿನ ಅಂಧಕಾರಕ್ಕೆ ಬೆಳಕಾಗಲಿ .

- csomsekraiah ರವರ ಬ್ಲಾಗ್
- Login or register to post comments
- 284 hits
- Email this blog





RSS:
ಪ್ರತಿಕ್ರಿಯೆಗಳು
ಉ: ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ
ಸೋಮಣ್ಣನವರೆ,
ಸೈನ್ಯ ಬ್ಯಾರಕ್ಕಿನಲ್ಲಿ,ಧರ್ಮ ತನ್ನ ಜಾಗದಲ್ಲಿ ಇದ್ದಾಗ...ಇದು ಭಾರತಕ್ಕೂ ಪಾಠ. ಬೆನಜಿರ್ ಹತ್ಯೆಗೆ ಸಂತಾಪ ಸೂಚಿಸುವ ಜತೆಗೆ ಭಾರತೀಯರಿಗೂ ಎಚ್ಚರಿಸಿದ್ದೀರಿ.
ಸೈನ್ಯವನ್ನು,ಮತಾಂಧರನ್ನು,ಸ್ವಲ್ಪ ಮಟ್ಟಿಗೆ ಅಮೆರಿಕಾವನ್ನೂ ತನ್ನ ಹಿಡಿತದಲ್ಲಿಟ್ಟಿರುವ ಮುಷರಫ್ ಕೆಳಗಿಳಿಯದೇ ಪಾಕ್ ಉದ್ಧಾರವಾಗದು.ಆದರೆ ಮುಷರಫ್ರನ್ನು ಕೆಳಗಿಳಿಸುವವ ಅವ್ರಿಗಿಂತಲೂ ಘೋರ ಮತಾಂಧನಾದರೆ?
ಕರ್ನಾಟಕದ ಮಹಾನ್ ರಾಜಕಾರಣಿಗಳಾಗುತ್ತಿದ್ದರೆ, ಮುಷರಫ್ ಸರಕಾರವನ್ನು ೧ ವಾರದಲ್ಲೇ ಉರುಳಿಸುತ್ತಿದ್ದರು.
ಉ: ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ
ಪ್ರೀತಿಯ ಗಣೇಶರಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು . ಜನರನ್ನು ಒಂದು ಸಾರಿ ಪಪ್ಪು ದಾರಿಯಲ್ಲಿ ನಡೆಯಲು ಪ್ರೇರೇಪಿಸಿದರೆ ,ಪುನಃ ಅವರನ್ನು ತಿದ್ದುವುದು ಬಲು ಕಷ್ಟದ ಕೆಲಸ , ಪಾಕಿಸ್ತಾನಕ್ಕೆ ಆಗಿರುವುದು ಇದೇ. ನಮ್ಮ ಭಾರತೀಯ ನಾಯಕರುಗಳು ಸಹ , ಸದ್ಯದ ಲಾಭಕ್ಕಾಗಿ ದೇಶದ ಹಿತವನ್ನು ಕಡೆಗಣಿಸುತ್ತಿರುವುದ ಪರಿಣಾಮವನ್ನು ಭವಿಷ್ಯದ ಜನ ಅನುಭವಿಸಬೇಕಾಗುತ್ತದೇನೋ ಎನ್ನುವುದೇ ಚಿಂತೆ .ಕುದಿಯುವ ಕಡಾಯಿಯಂತಹ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ನೀವೆಲ್ಲಾ , ಸಾಹಿತ್ಯ , ಒಳ್ಳೆಯ ಚಿಂತಕರ ಸಹವಾಸ ,ಸಂಪದದಂತಹ ವೇದಿಕೆ ಇವುಗಳಿಂದ ಸ್ವಲ್ಪವಾದರೂ ಸಮಾಧಾನವಾಗಿ ಬದುಕಬಹುದು ಎಂಬುದೇ ಸಮಾಧಾನದ ವಿಷಯ .